Monday, August 20, 2012

ದನವೇ ಧನ

ಳ್ಳಿಯಲ್ಲಿ ಒಬ್ಬ ರೈತನ ಹಿರಿಮೆಯನ್ನು ಅರಿಯಲು ಅವನಲ್ಲಿನ ರಾಸುಗಳ ಸಂಖ್ಯೆಯನ್ನು ಅಳತೆಗೋಲಾಗಿ ಪರಿಗಣಿಸುವ ಕಾಲ ಅದಾಗಿತ್ತು. ಪಶು ಸಂಪತ್ತು ಹೆಚ್ಚಿದಷ್ಟೂ ಅವನ ಅಂತಸ್ತು ಜಾಸ್ತಿ. ಎಂಟೆತ್ತಿನ ಕಮತ ಇಟ್ಟವನೆಂದರೆ ದೊಡ್ಡ ಕುಳ ಎಂದೇ ಲೆಕ್ಕ. ದನ ಧಾನ್ಯ ಸಮೃದ್ಧಿಯಿರುವ ಮನೆ ಧನ್ಯ. ಆ ಸಂಖ್ಯೆ ಹೆಚ್ಚಿದರೆ ದೇಶಕ್ಕೆ ಸುಖ ಎಂಬ ಮಾತಿನಲ್ಲಿ ನಂಬಿಕೆ.
ಹಸು ಎಂದರೆ ಗೋಸಂಪತ್ತು. ಆಕಳು ಹೆಣ್ಣು ಕರು ಹಾಕಲಿ ಅಥವಾ ಹೋರಿ ಕರ ಹಾಕಲಿ ಎರಡು ಒಂದೇ. ಆದರೆ  ಎಮ್ಮೆ ಹೆಣ್ಣುಗರು ಹಾಕಿದರೆ ಖುಷಿ. ಕೋಣಗರ ಈದರೆ ಅಸಮಾಧಾನ. "ನೆಚ್ಚಿದ ಎಮ್ಮೆ ಕೋಣ ಈಯಿತು" ಎಂಬ ಗಾದೆಯೆ ಆ ಮನೋಭಾವದ ಪ್ರತೀಕ. ಸಾಧಾರಣವಾಗಿ ಕೋಣಗರುಗಳು ಹೆಚ್ಚು ಕಾಲ ಬಾಳುತ್ತಿರಲಿಲ್ಲ. ಕಾರಣ ಬಹುಶಃ ಅವನ್ನು ನಿರ್ಲಕ್ಷ್ಯ ಮಾಡುವದರಿಂದಲೆ ಇರಬೇಕು. ಅವಕ್ಕೆ ತಾಯಿಯ ಹಾಲನ್ನೂ ಕುಡಿಯಲು ಬಿಡುತ್ತಿರಲಿಲ್ಲ.  ಎಮ್ಮೆ ಅಷ್ಟು ಸೂಕ್ಷ್ಮದ ಪ್ರಾಣಿಯಲ್ಲ. ಕರು ಇರಲಿ ಬಿಡಲಿ ಹತ್ತಿ ಕಾಳು, ಹಿಂಡಿ ರುಬ್ಬಿ, ತಿನ್ನಲು ಅದರ ಮುಂದೆ ಇಟ್ಟರೆ ಯಾವುದೇ ತೊಂದರೆ ಇಲ್ಲದೆ ಹಾಲು ಕರೆಯುವುದು. ಅದರ ಈ ದಪ್ಪ ಚರ್ಮವೇ, ಮನುಷ್ಯರ ಮನಸ್ಸನ್ನೂ ದಪ್ಪ ಮಾಡಿ, ಕ್ರೂರಿಗಳನ್ನಾಗಿಸಿರಬೇಕು.
ಆದರೆ ಆಕಳುಗಳು ಹಾಗಲ್ಲ. ಬಹು ತುಂಟಾಟ ಸ್ವಭಾವದವು. ಕರು ಕಾಣದಿದ್ದರೆ ಹಾಲು ಏರಿಸಿಕೊಳ್ಳುವವು. ಕೆಚ್ಚಲನ್ನು ಎಷ್ಟೇ ಹಿಂಡಿದರೂ ತೊಟ್ಟು ಹಾಲೂ ಸಿಗದು. ಅದರ ಮೇಲೆ ಕಾಲು ಝಾಡಿಸಿ ಒದೆಯುವ ದಢಾಸಿತನ ಬೇರೆ. ನಮ್ಮ ಮನೆಯಲ್ಲಿ ಸದಾ ಹೈನು. ಅದೂ ಒಂದು ಹಸುವಾದರೂ ಇದ್ದೆ ಇರುತ್ತಿತ್ತು. ಹಾಲು ಕೊಡುವುದರಲ್ಲಿ ಎಮ್ಮೆಯನ್ನು ಹೋಲಿಸಿದರೆ ಕಡಿಮೆಯಾದರೂ ಅದೇ ಬೇಕು. ಕಾರಣ ಗೋಮಾತೆ ಸೇವೆಯಿಂದ ಪುಣ್ಯ ಬರುವುದು ಎಂಬ ನಂಬಿಕೆ.
ಅನೇಕ ಸಾಧು ಸಜ್ಜನರನ್ನು ಬಣ್ಣಿಸುವಾಗ, "ಆತ ಬಿಡಪ್ಪ, ಹಸುವಿನಂಥ ಮನುಷ್ಯ" ಎಂದು ಹೇಳುವವರನ್ನು ಕಂಡರೆ ನನಗೆ ನಗು ತಡೆಯಲಾಗುವುದಿಲ್ಲ. ಆಕಳುಗಳ ತರಲೆ, ಅವುಗಳನ್ನು ಪಳಗಿಸುವ ತಂತ್ರಗಳು ಕಂಡುಂಡ ನನಗೆ, ಹಸುವಿನ ಹೋಲಿಕೆ, ದ್ವಂದ್ವಾರ್ಥದಿಂದ ಕೂಡಿದ್ದಿರಬಹುದೇ ಎಂಬ ಸಂಶಯ ಇದ್ದೇ ಇದೆ. ಅಂದಹಾಗೆ, ಪುಣ್ಯಕೋಟಿ ಎಂಬ ಹಸುವಿನ ಹಾಡುಗಬ್ಬ ಹೃದಯ ತಟ್ಟದ ಕ್ಷಣವಿರಲಿಲ್ಲ. ಆಹಾರ ಸರಪಳಿ, ಜೈವಿಕ ನಿಯಮ ಎಂಬಿತ್ಯಾದಿ ಹಲವು ವಿಷಯ ವೈವಿಧ್ಯಗಳು ತಲೆ ತಟ್ಟಿದ ಮೇಲೂ, ಆ ಹಾಡಿನ ಸಮ್ಮೋಹಕತೆ ಮಾಸಿಲ್ಲ.
ಎಪ್ಪತ್ತರ ದಶಕದಿಂದೀಚೆಗೆ, ಸಿಂಧಿ ಹಸುಗಳು ಬಂದ ಮೇಲೆ, ಹಸುವಿಗೂ ಎಮ್ಮೆಗೂ ಅಂಥ ವ್ಯತ್ಯಾಸವೇನೂ ಇಲ್ಲ. ಜವಾರಿ ತಳಿಗಳ ಚುರುಕು, ಚಲಾಕಿತನ ಇವಕ್ಕಿಲ್ಲ. ಈ ಸಿಂಧಿ ಹಸು ನಮ್ಮ ಪುಣ್ಯಕೋಟಿಯಲ್ಲ ಎಂಬುದು ಖಾತ್ರಿ. ನನ್ನ ಮಟ್ಟಿಗೆ, ಇದೂ ಒಂದು ಹಾಲು ಹೊರಸೂಸುವ ಯಂತ್ರ. ಜವಾರಿ ಹಸುವಿನ ಹಾಲಿಗಿಂತಲೂ ಹೆಚ್ಚು ಗಟ್ಟಿಯಾಗಿದ್ದರೂ, ಆ ಹಾಲೇ ದಿವಿನ.
ನಮ್ಮಲ್ಲಿ ಒಂದು ಆಕಳು ಇತ್ತು. ಕಾಳಿ ಎಂಬ ಅಪರೂಪದ ಹೆಸರು ಅದಕ್ಕೆ. ಹಸುವಿಗೆ ಯಾವಾಗಲೂ ಗಂಗೆ, ಗೌರಿ, ತುಂಗೆ ಎಂದೇ ಕರೆಯಲಾಗುತ್ತದೆ. ಲಕ್ಷ್ಮಿ ಎಂಬ ಹೆಸರೂ ತೀರಾ ಕಡಮೆ. ಎಲ್ಲ ಶಿವನ ವಾಹನದ ವಂಶದವರು ಎಂದು ಹಾಗಿರಬೇಕು. ಕಾಳಿಯ ಹಾಲನ್ನು ಒಬ್ಬರೇ ಹಿಂಡಬೇಕು. ಅದೂ ಅಮ್ಮನೇ ಆಗಬೇಕು. ಬೇರೆಯವರು ಬಂದರೆ ಮುಗಿಯಿತು. ಅಕಸ್ಮಾತ್ತಾಗಿ ಅಮ್ಮ ಊರಿಗೆ ಹೋದರೆ ಹಾಲು ಕರೆಯಲು ಆಗುವುದೇ ಇಲ್ಲ. ಕೆಲವು ಸಲ ಬೇರೆಯವರನ್ನು ಕರೆಯಲು ಕೇಳಿಕೊಂಡಾಗ ಅಕಸ್ಮಾತ್ತಾಗಿ ಅವರೇನಾದರೂ ಮಾತನಾಡಿದರೆ ಸಾಕು, ಹಾಲು ತುಂಬಿದ ತಂಬಿಗೆ ಮಾರು ದೂರ ಹೋಗಿ ಬೀಳುವುದು. ಸಗಣಿಯ ಸಾರಣೆ ಇವರಿಗೂ.
ಹಾಲು ಹಿಂಡುವ ಕಷ್ಟ ಹಾಲು ಕುಡಿಯುವವರಿಗೆ ಗೊತ್ತಿರಲಿಕ್ಕಿಲ್ಲ. ಕೆಲವೊಮ್ಮೆಯಂತೂ, ತುಂಟ ಆಕಳುಗಳಿಗೆ ಹಾಲು  ಕರೆಯಲು ಇಬ್ಬರು ಬೇಕೇ ಬೇಕು. ನಾವು ಅದರ ಹಿಂಗಾಲುಗಳಿಗೆ ಹಗ್ಗ ಕಟ್ಟಿ ಹಿಡಿದಾಗ, ಇನ್ನೊಬ್ಬರು ಹಾಲು ಹಿಂಡುವರು. ಇನ್ನು ಒಂದು ಆಕಳು ಬಹು ಚಾಲಾಕಿ. ಅದನ್ನು ಮೇಯಲು ಬಿಟ್ಟಾಗ ಗೋಣು ಬಗ್ಗಿಸಿ ತಮ್ಮ ಕೆಚ್ಚಲಿಗೆ ತಾವೇ ಬಾಯಿ ಹಾಕಿ ಹಾಲನ್ನು ಚಪ್ಪರಿಸಿ ಬಿಡುತ್ತಿತ್ತು. ಸಂಜೆ ಮನೆಗೆ ಬಂದಾಗ ಹಾಲು ಹಿಂಡಲು ನೋಡಿದಾಗ ಕೆಚ್ಚಲು ಬರಿದಾಗಿರುತಿತ್ತು. ಅದಕ್ಕೆ ಅದನ್ನು ಹೊರಗೆ ಬಿಡುವಾಗ ಅದರ ಪಕ್ಕೆಗೆ ಚೂಪಾದ ಕೋಲುಗಳನ್ನು ಮುಂಬದಿಯಲ್ಲಿ ಬರುವಂತೆ ಹೊಟ್ಟೆಗೆ ಕಟ್ಟಿ ಬಿಡುತಿದ್ದೆವು. ಹಾಲು ಕುಡಿಯಲು ತಲೆ ಹಿಂದೆ ತಿರುಗಿಸಿದರೆ ಸಾಕು ಚೂಪಾದ ಕೋಲು ಅದರ ಮುಖಕ್ಕೆ ಚುಚ್ಚುವದು. ಅನಿವಾರ್ಯವಾಗಿ ಅದು ತನ್ನ ಅಭ್ಯಾಸವನ್ನು ನಿಲ್ಲಿಸಿತು.
ಇನ್ನು ಒಂದು ಆಕಳು ಬಹು ಸಾಧು. ಚಿಕ್ಕ ಮಕ್ಕಳು ಕೆಚ್ಚಲಿಗೆ ಬಾಯಿಹಾಕಿದರೂ ಸುಮ್ಮನಿರುತಿತ್ತು. ಯಾರಾದರೂ ಬರಲಿ ತುಸು ತವಡು (ಹೊಟ್ಟು) ಇಟ್ಟರೆ ಸಾಕು ಹಾಲು ಕರೆದರೆ ಸುಮ್ಮನೆ ಇರುವವು. ಕೆಲವು ಆಕಳುಗಳು ಬಹು ತುಂಟಲ ಮಾರಿಗಳು ಊರ ದನದೊಂದಿಗೆ ಮೆಯಲು ಬಿಟ್ಟಾಗ ಗುಂಪು ತೊರೆದು ಹಸಿರು ಕಂಡ ಕಡೆ ನುಗ್ಗುವವು. ಅವನ್ನು ಹತೋಟಿಯಲ್ಲಿಡುವುದು ಬಹು ಕಷ್ಟ. ಅದಕ್ಕೆ ಹೊರಗೆ ಬಿಡುವಾಗ ಭಾರವಾದ ಮರದ ಕೊರಡನ್ನು ಅವುಗಳ ಕೊರಳಿಗೆ ಗುದ್ದಿಕತ್ತಿ ಬಿಡುತ್ತಿದ್ದೆವು. ಆಗ ಅವುಗಳ ಹಾರಾಟ ತುಸು ಕಡಿಮೆಯಾಗುವುದು. ಇನ್ನೂ ಮೊಂಡದನಗಳಾದರೆ ಅವುಗಳ ಕೊಂಬು ಮತ್ತು ಒಂದು ಮುಂಗಾಲನ್ನು ಹಗ್ಗದಿಂದ ಕಟ್ಟಲಾಗುವುದು. ಆಗ ಅದು ತಲೆ ತಗ್ಗಿಸಿಯೇ ನಡೆಯಬೇಕು. ಓಡುವ ಮಾತೇ ಇಲ್ಲ. ಮೇಲಾಗಿ ಯಾರನ್ನಾದರೂ ಇರಿವ ಭಯವಿಲ್ಲ.
ಸಾಧಾರಣವಾಗಿ ಊರ ದನಗಳನ್ನೆಲ್ಲ ಕಾಯಲು ಒಬ್ಬರು ಇರುತ್ತಿದ್ದರು. ನಿಗದಿತ ಸಮಯಕ್ಕೆ ಸರಿಯಾಗಿ ಅವುಗಳನ್ನು ಗುಂಪುಗೂಡಿಸಿಕೊಂಡು ಊರ ಹೊರಗೆ ಮೇಯಿಸಲು ಹೋಗುವರು. ಸಾಧಾರಣವಾಗಿ ಒಂದು ದನಕ್ಕೆ ಇಷ್ಟು ಎಂದು ಅವರಿಗೆ ದುಡ್ಡುಕೊಡುವ ವಾಡಿಕೆ. 
ನನಗಂತೂ ಕೊನೆಯವರೆಗೆ  ಈಡೇರದ  ಆಶೆ ಎಂದರೆ ಎಮ್ಮೆಯ ಸವಾರಿ. ರೊಟ್ಟಿ ಬುತ್ತಿ ಕಟ್ಟಿಕೊಂಡು ಎಮ್ಮೆಯ  ಮೇಲೆ ಕುಳಿತು ಸಾಗುವ ದನ ಕಾಯುವ ಹುಡುಗರ ಗತ್ತು ಗಮ್ಮತ್ತು ನನಗೆ ಬರಲೇ ಇಲ್ಲ. `ಸಂಪತ್ತಿಗೆ ಸವಾಲ್' ಚಿತ್ರದಲ್ಲಿ ವರನಟ ರಾಜಕುಮಾರ್ ಎಮ್ಮೆ ಮೇಲೆ ಕುಳಿತು `ಯಾರೇ ಕೂಗಾಡಲಿ...' ಎಂದು ಹಾಡಿದಾಗ ನನಗೆ ಅಲ್ಲಿ ನಾನೇ ಕುಳಿತಂತೆ ಅನಿಸಿತ್ತು.

ನಮ್ಮ ಊರಲ್ಲಿ ಒಂದು ಮನೆತನದವರಿಗೆ ಎಮ್ಮೆಕಾಯುವವರು ಎಂದೇ ಹೆಸರಿದೆ. ವಿಚಿತ್ರ  ಎಂದರೆ ಎಮ್ಮೆಗೆ ಒಂದು ರುಪಾಯಿ ಕಾಯುವ ಕೂಲಿಯಾದರೆ  ಹಸುವಿಗೆ ಎರಡು ರುಪಾಯಿ. ಹೋಗುವಾಗ ಮನೆಯಿಂದ  ಬಿಡಿಬಿಡಿಯಾಗಿ ಹೋಗಿ ಊರ ಹೊರಗೆ ಗುಂಪಾಗಿ ಮೇಯಲು ಹೊರಡುವವು. ಬರುವಾಗ ಗುಂಪಾಗಿ ಬರುವುದರಿಂದ ಅವುಗಳ ಗೊರಸಿನಿಂದ ಹೊರಡುವ ಧೂಳಿನಿಂದ ಆಕಾಶದಲ್ಲಿ ಅಷ್ಟೆತ್ತರದ ವರೆಗೆ ಕೆಂಪು ಹರಡುವುದು. ಅವು ನಿತ್ಯ ಸೂರ್ಯಾಸ್ತಕ್ಕೆ ಮುಂಚೆ ನಿಗದಿತ ಸಮಯದಲ್ಲೆ ಬರುವವು. ಆ ಸಮಯವೆ ಗೋಧೂಳಿ ಮುಹೂರ್ತ ಬಲು ಶ್ರೇಷ್ಠ ಎಂಬ ನಂಬಿಕೆಯುಂಟು. ಅವು ಬೆಳಗ್ಗೆ ೯ಕ್ಕೆ ಹೊರಟರೆ ಸಂಜೆ ಐದಕ್ಕೆ ಮನೆಗೆ ಬರುವವು. ಮಕ್ಕಳನ್ನು ಸಾಲಿಗೆ ಕಳುಹಿಸುವಂತೆ ಅವನ್ನು ಕಳುಹಿಸಬೇಕು. ಸಾಧಾರಣವಾಗಿ ಎಲ್ಲ ದನಗಳು ಮೇಯಲು ಗುಂಪಿನೊಡನೆ ಹೋಗಿ ಹೊಟ್ಟೆತುಂಬ ಮೇವು ತಿಂದು, ನೀರು ಕುಡಿದು ಆರಾಮಾಗಿ ಕಾಲಾಡಿಸಿಕೊಂಡು ಸಂಜೆ ಸಲೀಸಾಗಿ ಹೋಗಿ ಮನೆಗೆ ಬರುವವು. ಆದರೆ ತುಡುಗು ದನಗಳು ಮಾತ್ರ ದನ ಕಾಯುವವರ ಕಣ್ಣು ತಪ್ಪಿಸಿ ಕಂಡವರ ಹೊಲಕ್ಕೆ ನುಗ್ಗುವವು. ಆಗ ಸಮಸ್ಯೆಯ ಆರಂಭ. ಸಾಧಾರಣವಾಗಿ ಯಾರೂ ಆಕಳುಗಳಿಗೆ ಹೊಡೆಯುವುದಿಲ್ಲ. ಆದರೆ ಬೆಳೆ ಹಾಳಾಗುವುದನ್ನು ಸಹಿಸಲು ಸಾಧ್ಯವೇ. ಅದಕ್ಕಾಗಿಯೇ ಊರಲ್ಲಿ ಬನ್ನಿ ದೊಡ್ಡಿ ಎಂಬ ವ್ಯವಸ್ಥೆಯುಂಟು. ಅದಕ್ಕೆ ಕೊಂಡವಾಡ ಎಂತಲೂ ಹೆಸರು. ತುಡುಗು ಮಾಡಿ ಬೆಳೆ ತಿನ್ನುವ ದನಗಳನ್ನು ಬನ್ನಿ ದೊಡ್ಡಿಗೆ ಹಾಕುವರು.
ಅದರ ಬೀಗದ ಕೈ ಊರ ಗೌಡನ ಹತ್ತಿರ ಇರುವುದು. ಅದು ಸಾಧಾರಣವಾಗಿ ಎಂಟು ಹತ್ತು ದನ ಹಿಡಿಯಬಹುದಾದ ಮಾಳಿಗೆ ಇಲ್ಲದ ಕಟ್ಟಡ. ಅದಕ್ಕೆ ಕಬ್ಬಿಣದ ಸರಳಿರುವ ಬಾಗಿಲು. ಯಾರು ಬೇಕಾದರು ಬಂದು ಒಳಗೆ ಏನಿದೆ ಎಂದು ನೋಡಬಹುದು. ಅದರಲ್ಲಿ ದನವನ್ನು ಕೂಡಿ ಹಾಕಿದರೆ ಸಂಬಂಧಿಸಿದವರು ಬಂದು ಗೌಡನಿಗೆ ದಂಡದ ದುಡ್ಡು ಕಟ್ಟಿ ಬಿಡಿಸಿಕೊಂಡು ಹೋಗಬೇಕು. ಅಕಸ್ಮಾತ್‌ ಯಾರೂ ತಿಂಗಳುಗಟ್ಟಲೆ ಬಾರದಿದ್ದರೆ ಅದನ್ನು ಹರಾಜು ಹಾಕುವರು. ಅಲ್ಲಿಯತನಕ ಅವಕ್ಕೆ ಒಳಗೆ ಮೇವು ನೀರಿನ ವ್ಯವಸ್ಥೆ ಮಾಡಲಾಗುತ್ತಿತ್ತು. ಅದರ ಮಾಲೀಕನು ತಡಮಾಡಿದಂತೆ ದಂಡ ಹೆಚ್ಚಾಗುವುದು. ದಿನಕ್ಕೆ ಇಷ್ಟು ಎಂದು ನಿಗದಿಯಾಗಿರುವುದು. ಅದು ಊರ ಗೌಡನ ಅಧಿಕಾರಕ್ಕೆ ಒಳಪಟ್ಟಿದ್ದು. ಸಾಮಾನ್ಯವಾಗಿ ದನಗಳು ಕಳೆದರೆ ಅದರ ಯಜಮಾನ ಮಾಡುವ ಮೊದಲ ಕೆಲಸ ಎಂದರೆ ಆಸು ಪಾಸಿನ ಊರುಗಳಲ್ಲಿನ ದೊಡ್ಡಿಯನ್ನು ನೋಡುವುದು. ಅಲ್ಲಿ ಇಲ್ಲದಿದ್ದರೆ ಕಿರುಬನ ಬಾಯಿಗೆ ಬಲಿಯಾಗಿದೆ ಎಂದೆ ಅರ್ಥ. ಆಗಿನ ಕಾಲದಲ್ಲಿ ದನಗಳ್ಳರು ಬಹು ಕಡಿಮೆ. ಮಾಂಸಕ್ಕಾಗಿ ಮಾರಾಟ ಮಾಡುವುದಂತೂ ಯೋಚಿಸಲೂ ಸಾಧ್ಯವಿರಲಿಲ್ಲ. ದೊಡ್ಡಿಯ ಹಣ ಸರ್ಕಾರಕ್ಕೆ ಕಟ್ಟಬೇಕು ನಿಜ. ಆದರೆ ಊರ ಗೌಡನು ಅಷ್ಟೋ ಇಷ್ಟೋ ಕಟ್ಟುವನು. ಅದು ಅವನ ಆದಾಯದ ಬಾಬ್ತು. ಬೆಳೆ ಹಸಿರಾಗಿದ್ದಾಗಲಂತೂ ದೈನಂದಿನ ಆದಾಯ ಖಾತ್ರಿ. ತಳವಾರನಿಗೆ ತುಸು ಹಣ ನೀಡಿ ಅವುಗಳ ಮೇವು ನೀರಿನ ವ್ಯವಸ್ಥೆ ಮಾಡಲಾಗುತಿತ್ತು.
ಕರು ಸತ್ತ ಆಕಳಿನ ಹಾಲು ಕರೆಯುವುದು ತುಸು ಕಷ್ಟದಾಯಕ. ಆದರೆ ಮಾನವನೂ ಬುದ್ದಿ ಇರುವ ಪ್ರಾಣಿ. ಹಾಗೆ ಸತ್ತ ಕರುವಿನ ಚರ್ಮ ಸುಲಿಸಿ ಅದರೊಳಗೆ ಹುಲ್ಲು ತುಂಬಿ ಹಾಲು ಕರೆಯುವಾಗ ಆಕಳ ಮುಂದೆ ಇಟ್ಟರೆ ಅದು ಆಪ್ಯಾಯತೆಯಿಂದ ಅದನ್ನು ನೆಕ್ಕಲು ಮೊದಲು ಮಾಡಿದಾಗ ಹಾಲು ತನ್ನಿಂದ ತಾನೇ ಕೆಚ್ಚಲಲ್ಲಿ ತೊರೆ ಬಿಡುವುದು.  ಸರಬರನೆ ಹಾಲು ಕರೆಯುವರು.

ನಮ್ಮ ಕಡೆ ಕೋಣ ಸಾಕುವವರು ಬಹುವಿರಳ. ವಂಶಾಭಿವೃದ್ಧಿಗಂತೂ ಊರಮ್ಮನಿಗೆ ಬಿಟ್ಟ ಕೋಣ ಇದ್ದೇ ಇರುತಿತ್ತು. ಎಲ್ಲೋ ಒಂದೆರಡು ಕೋಣಗಳು ಒಡ್ಡರ ಬಂಡಿಗೆ ಹೂಡಲು ಬಳಕೆಯಾಗುತಿದ್ದವು. ಕಡಲ ತೀರದಲ್ಲಿ ಬಹುಪ್ರೀತಿಯ ಹವ್ಯಾಸವಾದ ಕಂಬಳ ನಮ್ಮಲ್ಲಿ ಇಲ್ಲ. ಹಾಗಾಗಿ ಕೋಣಗಳಿಗೆ ಪ್ರಾಧಾನ್ಯ ಅಷ್ಟಕ್ಕಷ್ಟೇ. ಊರಿಗೆ ಒಂದೋ ಎರಡೋ ಹೋರಿಗಳು ಇರಿಯುತ್ತಿದ್ದವು. ಆಕಳು ಬೆದಗೆ ಬಂದಾಗ ಆ ಹೋರಿ ಇದ್ದವರಲ್ಲಿಗೆ ಹೋಗಿ ಅವರಿಗೆ ಹಣ ನೀಡಿ ಹಾಯಿಸುತಿದ್ದರು. ಅದೂ ಹಣ ಕೊಟ್ಟರೂ ಏನೋ ಉಪಕಾರ ಮಾಡಿದವರಂತೆ ಆಡುತಿದ್ದರು. ಆದರೆ ಕೃತಕ ಗರ್ಭಧಾರಣೆ ವಿಧಾನವು ಪಶುಸಂಗೋಪನಾ ಇಲಾಖೆಯಿಂದ ವ್ಯಾಪಕವಾಗಿ ಪ್ರಚಾರಕ್ಕೆ ಬಳಕೆ ಬಂದುದರಿಂದ, ಇದುವರೆಗಿನ ಆ ಒಂದು ಹೆಮ್ಮೆಯ ಕೋಡೂ ಮುರಿಯಿತು. ಇಂದಿನ ಸಮಾನತೆಯ ಯುಗದಲ್ಲಿ ದನಗಳಲ್ಲಿ  ಆದದ್ದು ಜನಗಳಲ್ಲಿ ಆಗುವದೂ ವಿಕಾಸ. ಮುಂದಿನ ಹಂತವೇನೋ ಎಂಬ ಆತಂಕ ಸಹಜವಾಗಿ ಮೂಡಿದೆ. ಈಗ ಭುವನ ಸುಂದರಿ ಐಶ್ವರ್ಯ ರೈ ಬಗೆಗೂ ಇಂಥದೇ ಆರೋಪಗಳು ಬಂದಿವೆ.
ದನಗಳ ಮಾರಾಟಕ್ಕಾಗಿಯೇ ವಾರಕ್ಕೊಮ್ಮೆ ಸಂತೆ ನಡೆಯುವುದು. ದನದ ಸಂತೆ ಎಂದು ಕರೆದರೂ, ಅಲ್ಲಿ ಕೋಳಿ, ಕುರಿ, ಮೇಕೆ ಸಹ ವ್ಯಾಪಾರಕ್ಕೆ ಇರುವವು. ಅಲ್ಲಿ ಹೆಚ್ಚಾಗಿ ಹೈನಿನ ರಾಸುಗಳದೆ ವ್ಯಾಪಾರ. ಒಳ್ಳೆಯ ಎತ್ತುಗಳನ್ನು ದನದ ಜಾತ್ರೆಯಲ್ಲಿಯೇ ಖರೀದಿಸುವರು. ಅದರಲ್ಲೂ ಘಾಟಿ ಸುಬ್ರಮಣ್ಯ, ಚುಂಚನಗಿರಿ ಮತ್ತು ಮುಡುಕುತೊರೆ ದನದ ಜಾತ್ರೆಗಳು ಬಹು ಪ್ರಸಿದ್ಧವಾದವು. ಅಲ್ಲಿ ಸಾವಿರಾರು ರಾಸುಗಳು ಕೈಬದಲಾಗುತ್ತವೆ. ಕೋಟಿಗಟ್ಟಲೆ ವ್ಯವಹಾರ. ಜನ ಅಷ್ಟು ದೂರವಾದರೂ ಹೋಗಿತರುವರು. ಜಾತ್ರೆಯಲ್ಲಿ ದನದ ವ್ಯಾಪಾರವೇ ಒಂದು ವಿಭಿನ್ನ ಕಸರತ್ತು.
ಮಾರುವವರು, ಕೊಳ್ಳುವವರು ರುಮಾಲಿನ ಒಳಗೆ ಕೈ ಇಟ್ಟುಕೊಂಡು ವ್ಯವಹಾರ ಕುದುರಿಸುವರು. ಅಲ್ಲಿ ಬೆರಳುಗಳಿಂದಲೇ ಬೆಲೆ ನಿಗದಿ. ಅದು ಹೇಗೆ ಎಂಬುದು ನನಗೆ ಅಂದು ತಿಳಿದಿರಲಿಲ್ಲ. ಇಂದಿಗೂ ಅರ್ಥವಾಗಿಲ್ಲ. ದನದ ಬೆಲೆಯು ಅದರ ಜಾತಿ, ಬಣ್ಣ, ಹಲ್ಲುಗಳ ಸಂಖ್ಯೆ, ಅದರ ಸುಳಿಗಳು, ಅದರ ಸ್ವಭಾವ ಮತ್ತು ಕೊಂಬುಗಳ ವಿನ್ಯಾಸದ  ಮೇಲೆ ನಿಗದಿಯಾಗುತ್ತಿತ್ತು. ಮನೆಯಲ್ಲಿ ಹುಟ್ಟಿ ಬೆಳೆದ ದನಗಳನ್ನು ಮಾರುವಾಗ ಅನೇಕರು ಕಣ್ಣೀರು ಹಾಕುವ ಸಂದರ್ಭಗಳೂ ಸಾಕಷ್ಟಿದ್ದವು. ವಿಶೇಷವಾಗಿ ಆಕಳುಗಳನ್ನು ಮಾರಿದಾಗ ಅವೂ ಕೊಂಡವರ ಜತೆ ಹೋಗದೆ ಮೊಂಡಾಟ ಮಾಡುವವು. ಕೆಲ ದನಗಳಂತೂ, ಮಾರಾಟವಾದ ಮೇಲೂ, ತಮ್ಮ ಹಳೇ ಮಾಲೀಕರ ಮನೆಯನ್ನು ಹುಡುಕಿಕೊಂಡು ಹರದಾರಿ ದೂರ ನಡೆದಿದ್ದೂ ಉಂಟು.
ದನದ ಜಾತ್ರೆಗಳು ಎರಡುವಾರಗಳ ವರೆಗೆ ನಡೆಯುವವು. ಲಕ್ಷಗಟ್ಟಲೆ ಬೆಲೆಬಾಳುವ ಎತ್ತುಗಳೂ ಉಂಟು. ಅನೇಕರ ಮನೆಯಲ್ಲಿ ಮೂರುತಲೆಮಾರಿನ ಆಕಳುಗಳು ಇರುವದು ಸಾಮಾನ್ಯ.
ಅಲ್ಲದೇ ಹೆಣ್ಣು ಮಕ್ಕಳಿಗೆ ಮೊದಲ ಹೆರಿಗೆಯಾದಾಗ ತೌರು ಮನೆಯವರು ಕರೆಯುವ ಆಕಳನ್ನು ಕೊಡುಗೆಯಾಗಿ ನೀಡುವ ಪದ್ಧತಿಯು ಇದೆ. ಕೆಲವರಂತೂ ಕರೆಯುವ ರಾಸನ್ನು ಮಗಳಿಗೆ ನೀಡಿ ಮತ್ತೆ ಅದು ಗಬ್ಬವಾದಾಗ ವಾಪಸ್ಸು ಪಡೆದು ಪುನಹ ಕರು ಹಾಕಿದ ಮೇಲೆ ಕಳುಹಿಸುವರು. ನಮ್ಮ ಮನೆಯಲ್ಲಿ ಒಂದು ಆಕಳು ಬಲು ಹುಷಾರಿ. ಬೆಲೆ ಇದ್ದಾಗ ಎಲ್ಲ ಹಸಿರುಮಯ. ಬೆಳಗ್ಗೆ ಜಂಗಳ ದನಗಳ  ಜತೆ ಮೇಯಲು ಹೋದದ್ದು ಸಂಜೆ ಬರುತ್ತಲೇ ಇರಲಿಲ್ಲ. ಅರ್ಧರಾತ್ರಿಯ  ಮೇಲೆ ಮನೆ ಮುಂದೆ ಮುಚ್ಚಿದ ಬಾಗಿಲ ಎದುರು ನಿಂತು ಅಂಬಾ ಎನ್ನುತಿತ್ತು. ಸರಿರಾತ್ರಿಯವರೆಗೆ ಹೊಲದಲ್ಲಿ ಹೊಟ್ಟೆ ಬಿರಿಯುವಂತೆ ತಿಂದು ಬರುವುದು. ಹೊಲದ ಮಾಲಕರು ಬೆಳಗ್ಗೆ  ಬಂದು ನೋಡಿದಾಗ ಬೆಳೆ ಎಲ್ಲ ಹಾಳು.
ಈಗಲೂ ಹಾಲು ಹೈನು ಸಮೃದ್ಧಿಯಾಗಿದೆ. ಹಾಲಿನ ಹೊಳೆ ಹರಿಯುವುದು ಎಂಬ ಮಾತು ಒಂದು ಅರ್ಥದಲ್ಲಿ ನಿಜವಾಗಿದೆ. ಕೇಳಿದ್ದೆಲ್ಲಾ ಕೊಡುವ ದೇವಧೇನುವಿನ ಕತೆ, ದಿಟವೋ ಸಟೆಯೋ ಗೊತ್ತಿಲ್ಲ. ಆದರೆ, ಆಕೆಯ ಮಗಳ ಹೆಸರು ಈಗ ನಂದಿನಿ ಬ್ರಾಂಡಾಗಿದೆ. ಸೊಪ್ಪು ಹಾಕದೇ ಹಾಲು, ಹೆಪ್ಪು ಹಾಕದೇ ಮೊಸರು, ಮೊಸರೇ ಇಲ್ಲದ ಬೆಣ್ಣೆ, ಜಿಡ್ಡಿಲ್ಲದ ತುಪ್ಪ ಎಲ್ಲ ಬಂದಿದೆ. ತಿಂಗಳುಗಟ್ಟಳೇ ಕಾಪಿಡುವ ಹಾಲು ಹಾಗೂ ಅದರ ಉತ್ಪನ್ನಗಳು ಬಂದಿವೆ.
ಆದರೆ ಕಾಣೆಯಾಗಿರುವುದು ಜನ-ದನಗಳ ನಡುವಿರುವ ಮಧುರ ಬಾಂಧವ್ಯ. ಗ್ರಾಮೀಣ ಸಮಾಜದಲ್ಲಿ ಜನ ದನಗಳ ಬಾಳು ಸಮರಸದಿಂದ ನಡೆವ ಕಾಲ ಅದಾಗಿತ್ತು. ಆಕಳು ಎಂದರೆ ಅನೇಕರಿಗೆ ಪೂಜ್ಯ ಭಾವನೆ. ಅದು ಎಷ್ಟರಮಟ್ಟಿಗೆ ಎಂದರೆ, ಹಾಲು ಮತ್ತಿತ್ತರ ಉತ್ಪನ್ನಗಳನ್ನು ಪಂಚಾಮೃತ ಪಂಚಗವ್ಯ ಹಾಗೂ ಕೀಟನಾಶಕವಾಗಿಯೂ ಅದರ ಗಂಜಲವನ್ನೂ ಬಳಸುವ ವೈಶಿಷ್ಟ್ಯಅಥವಾ ವಿಪರ್ಯಾಸ ನಮ್ಮ ಸಂಸ್ಕೃತಿಯದ್ದು.
ಆಕಳು ಪವಿತ್ರ ಎಂಬ ನಂಬಿಕೆ ಎಷ್ಟು ಆಳವಾಗಿ ನೆಲೆಯೂರಿದೆ ಎಂದರೆ, ಏನೆಲ್ಲ ವೈಜ್ಞಾನಿಕ ಪ್ರಗತಿ, ಅಗಾಧ ಸಂಪತ್ತು ಗಳಿಸಿದ್ದರೂ, ನೂತನ ಗೃಹಪ್ರವೇಶಕ್ಕೆ ಕರುಸಹಿತ ಹಸು ಬೇಕೇ ಬೇಕು. ಈಗ ಅವುಗಳನ್ನು ಕೆಲ ಕಾಲಕ್ಕೆ ಬಾಡಿಗೆ ನೀಡುವುದೇ ನಗರದಲ್ಲಿ ಒಂದು ದೊಡ್ಡ ದಂಧೆ. ಮೊನ್ನೆ ನನ್ನ ಶಿಷ್ಯನೊಬ್ಬ ಕರುವಿನ ಸಮೇತ ಹಸುವನ್ನು ಹೊಸ ಮನೆಗೆ ಕರೆಸಿದ್ದೆ. ಅದು ಗಂಜಳ ಹಾಕಿತು... ಎಂಥ ಶುಭ ಶಕುನ ಎಂದು ಅಭಿಮಾನದಿಂದ ಹೇಳಿಕೊಂಡ. ಈ ಹೈಟೆಕ್ ಸಿಟಿಯಲ್ಲಿ ಅದೆಲ್ಲಿಂದ ತಂದ್ಯೋ ಮಾರಾಯ ಎಂದರೆ, ಆತ ಅದಕ್ಕಾಗಿ ಸಾವಿರಾರು ರುಪಾಯಿ ತೆತ್ತಿದ್ದು ಗೊತ್ತಾಯಿತು.  "ಅಲ್ಲ ಕಣಯ್ಯ... ಇನ್ನೊಂದಿಷ್ಟು ದುಡ್ಡು ಎಣಿಸಿದ್ದರೆ, ದನವೊಂದನ್ನೇ ಕಟ್ಟಬಹುದಾಗಿತ್ತಲ್ಲಯ್ಯ. ಹಾಲಿಗೆ ಹಾಲೂ ಆಯಿತು, ಅದರ ಆರೈಕೆ ಮಾಡ್ತ ಏಕ್ಸರ್ ಸೈಜೂ ಆಗ್ತಿತ್ತು. ಅಲ್ಲದೇ, ಸಾಕಷ್ಟು ಗಂಜಲ ಫ್ರೀ... ಮತ್ತೂ ಅದಕ್ಕೇನೋ ಥರಾವಾರಿ ಕಾಯಿಲೆಗೆ ಮದ್ದೂ ಹೌದಂತೆ" ಎಂದೆ. ಆತ "ಹೆ.. ಹೇ..." ಎಂದು ಹುಳ್ಳಗೆ ನಕ್ಕ.
ಪ್ಲಾಸ್ಟಿಕ್ಕು ಕವರುಗಳೊಳಗೆ, ಕಾಮಧೇನುವಿನ ಮಗಳು ನಂದಿನಿ ಅವತರಿಸುವುದಕ್ಕೂ ಮುಂಚಿನ ದಿನಗಳಲ್ಲಿ, ಗೋದಾನ ಜಾರಿಯಲ್ಲಿತ್ತು. ಆದರೀಗ, ನಂದಿನಿಯ ಅವತಾರವಾಗಿದೆ ಸ್ವಾಮಿ, ಹಾಗಾಗಿ, ಯಾರೂ ಹಸುವಿನ ದಾನ ಪಡೆಯಲ್ಲ. ಬದಲಿಗೆ ಶಕ್ತ್ಯಾನುಸಾರ ಬಂಗಾರ ಅಥವಾ ಬೆಳ್ಳಿಯ ತಗಡಲ್ಲಿ ಹಸುವಿನ ಚಿತ್ರ ಬರೆದೋ ಅಥವಾ ಡಾಲರ್ ಲೆಕ್ಕದಲ್ಲಿ ದುಡಿಮೆಯಿದ್ದರೆ ಪುಟ್ಟದೊಂದು ವಿಗ್ರಹ ಮಾಡಿಸಿಯೋ ಕೊಡಿ ಎಂಬ ಸಲಹೆ ಬರುತ್ತದೆ. ಕಾರಣ ಕೆದಕಿದಾಗ ಗುರುಗಳು ಹೇಳಿದ ಲೌಕಿಕ ಸತ್ಯ ಹೀಗಿತ್ತು: ``ಹಾಲು ಬೇಕಂದರ ಕೊಂಡು ಕುಡಿ. ಮನ್ಯಾಗ ಆಕಳು ಕಟ್ಟಿದರೆ, ಹೆಂಡಿ (ಸಗಣಿ) ಹೊಡಿಯೋದ ಬದಕಾಗ್ತದ...


No comments:

Post a Comment