Saturday, November 29, 2014

ಹಸ್ತ ಪ್ರತಿ ಅಭಿಯಾನ



ಹಸ್ತಪ್ರತಿ ಸಂರಕ್ಷಣ ಕಾರ್ಯಾಗಾರ

ಹಸ್ತಪ್ರತಿ ನಮ್ಮ ಪ್ರಾಚೀನ ಜ್ಞಾನ ಸಂಪತ್ತಿನ ಭಂಡಾರ ಎಂಬ ಬಗ್ಗೆ ಎರಡು ಮಾತಿಲ್ಲ. ಅದಕ್ಕಾಗಿಯೇ ಹಲವು ಕಡೆ ಕನ್ನಡ ಸ್ನಾತಕೋತ್ತರ ಪಠ್ಯ ಕ್ರಮದಲ್ಲಿ ಆಕರ ಶಾಸ್ತ್ರ ಎಂಬ ಒಂದು ಪತ್ರಿಕೆಯನ್ನೂ ,ಎಂಫಿಲ್ ಪಠ್ಯ ಕ್ರಮದಲ್ಲೂ  ಹಸ್ತಪ್ರತಿಸಂರಕ್ಷಣೆ , ಡಿಜಲೀಕರಣ ಕುರಿತು ಅಧ್ಯಯನ ಮಾಡಬೇಕಿದೆ..ಗ್ರಂಥ ಸಂಪಾದನೆಯಲ್ಲೂ ಹಸ್ತಪ್ರತಿಗಳೇ ಮೂಲಆಕರ. ಇದೆಲ್ಲ ಗೊತ್ತಿದ್ದರೂ ಹಸ್ತಪ್ರತಿಗಳ ಕುರಿತು ಬಹಳ ಕಡೆ ದಿವ್ಯ ನಿರ್ಲಕ್ಷ್ಯ. ಹಸ್ತಪ್ರತಿಗಳ ಸಂರಕ್ಷಣೆ ಮಾಡುವದು ಹಾಗಿರಲಿ ತಾಳೆಯ ಗರಿಯ ವೀಕ್ಣೆಣೆಯನ್ನೂ ಮಾಡದೇಅಂಕಗಳಿಸುವ ಕಲೆ ಕರಗತವಾಗಿದೆ. ಬಹುತೇಕರಿಗೆ. ಇದಕ್ಕೆ ಕಾರಣಗಳು ಹಲವಾರು. ವ್ಯವಸ್ಥೆಯೇ ಹಾಗಿರುವಾಗ ವಿದ್ಯಾಥಿಗಳತ್ತ , ಬೊಟ್ಟು ಮಾಡುವುದು ಸೂಕ್ತವಲ್ಲ.  ಈ ದಿಶೆಯಲ್ಲಿ  ಬಿ. ಎಂ ಶ್ರೀ ಪ್ರತಿಷ್ಠಾನದ ಹಸ್ತಪ್ರತಿವಿಭಾಗವು ಬೆಕ್ಕಿಗೆ ಗಂಟೆ ಕಟ್ಟುವ ಮನ ಮಾಡಿದೆ.. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಸ್ತ ಪ್ರತಿಗಳ ಸಂರಕ್ಷಣೆಯಲ್ಲಿ ಕೈ ಮುಟ್ಟಿ ಕೆಲಸ ಮಾಡುವ ಅವಕಾಶ ಒದಗಿಸುವ ಕಾರ್ಯಾಗಾರ ಹಮ್ಮಿ ಕೊಂಡಿದೆ.
ಈಗಾಗ ಲೇ ಎಂ,.ಇ. ಎಸ್‌ ಮತ್ತು ಎಂ. ಎಲ್‌ ಎ ಕಾಲೇಜಿನ   ಎಂ.ಎ. ವಿದ್ಯಾರ್ಥಿಗಳಿಗೆ ಒಂದುವಾರದ ಪೂರ್ಣಾವಧಿಯ ತರಬೆತಿ ನೀಡಿದ ಹಿನ್ನೆಲೆಯಲ್ಲಿ ಈ ಸಲ ಬಸವನಗುಡಿಯ ನ್ಯಾಷನಲ್‌  ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಲು ನಿರ್ಧರಿಸಲಾಯಿತು. ಗಣೇಶನ ಮದುವೆಗೆ ನೂರೆಂಟು ವಿಘ್ನ. ಮೊದಲನೆಯದಾಗಿ ಈಗ ಸೆಮಿಸ್ಟರ್‌ ಪದ್ದತಿಇರುವುದರಿಂದ ನಿಗದಿತ ಅವಧಿಯಲ್ಲಿ ಪಠ್ಯ ಕ್ರಮ ಪೂರೈಸುವ ತರಾತುರಿ. ಎರಡನೆಯದಾಗಿ ಮಿತವಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಜೊತೆಗೆ  ನೆಟ್‌ ಪರೀಕ್ಷೆ, ಕಿರು ಪರೀಕ್ಷೆ. .ಈ ಎಲ್ಲ ತೊಡಕುಗಳಿಗೆ ಪರಿಹಾರ ನೀಡಿದರೆ ಕಾರ್ಯಾಗಾರದ ಕೆಲಸ ಮೊದಲಾಗುವ ಸಾಧ್ಯತೆ ಇದ್ದಿತು.ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಆಸಕ್ತಿ. ಮೂಡಿಸಬೇಕಿತ್ತು.
ಈ ವಿಬಾಗದ ಮುಖ್ಯಸ್ಥರು ಮತ್ತು ಕಾಲೇಜಿನನಿವೃತ್ತ ಪ್ರಾಂಶುಪಾಲರು ಆಸಕ್ತಿ ತೋರಿದರೂ ಅಡೆ ತಡೆಗಳತ್ತ ಕೈ ತೋರಿದರು.
ಮೊಟ್ಟ ಮೊದಲನೆಯದಾಗಿ ವಿದ್ಯಾರ್ಥಿಗಳನ್ನು ಕೇಳಿದಾಗ ಅವರಿಗೆ ಆಸಕ್ತಿ ಇದೆ ಆದರೆ ಅವಕಾಶವಿಲ್ಲ.ನಿತ್ಯದ ಪಾಠಪ್ರವಚನಗಳ ಒತ್ತಡ. ಇದಕ್ಕೆ ಪರಿಹಾರ ಅವರಿಗೆ ಬಿಡುವಾಗಿದ್ದಾಗ ತರಬೇತಿ ನಡೆಸುವುದು.ಅಂದರೆ ಮದ್ಯಾಹ್ನ   ೨  ಗಂಟೆಯವರೆಗೆ ಅವರ ಕಾಲೇಜಿನ ಪಾಠ ಪ್ರವಚನಗಳು. ನಂತ ೨.೩೦ ಯಿಂದ ೫.೩೦ ವರೆಗೆ ಕಾರ್ಯಾಗಾರ. ಅದೃಷ್ಟಕ್ಕೆ ಕಾಲೇಜಿಗೂ ಮತ್ತು ತರಬೇತಿ ನೀಡುವ ಸ್ಥಳಕ್ಕೂ ಕೇವಲ ಹದಿನೈದು ನಿಮಿಷದ ಹಾದಿ ಆದ್ದರಿಂದ  ಮಧ್ಯಾಹ್ನ ೨.೩೦ ರಿಂದ  ತರಬೇತಿ ನಡೆಸಲು ನಿರ್ಧಾಆರ ಮಾಡಲಾಯಿತು
ಮೊದಲ ದಿನವೇ ಸಮಯ ತುಸು ಏರು ಪೇರಾಯಿತು. ಕಾಲಲೇಜಿನ ತರಗತಿಗಳು ಮುಗಿದ ನಂತರ ಊಟ ಮಾಡಿಕೊಂಡು ಬಿಸಿಲಲ್ಲಿ ಬರುವುದಕ್ಕೆ ಅರ್ದ ಗಂಟೆಗಿಂತ ಅಧಿಕ ಸಮಯದ ಅಗತ್ಯ..ಅದಕ್ಕಾಗಿ ಕಾಲೇಜಿನವರನ್ನು ತರಗತಿಯನ್ನು ೧೫ ನಿಮಿಷ ಮುಂಚಿತವಾಗಿ ಮುಗಿಸಲು ಕೇಳಿಕೊಳ್ಳಲಾಯಿತು  ಹಾಗೂ ಕಾರ್ಯಾಗಾರದ  ಪ್ರಾರಂಭವನ್ನು ೧೫ ನಿಮಷ ಮುಂದೂಡಲಾಯಿತು,
ನಂತರ  ತರಬೇತಿ ಶುಲ್ಕ ೨೫೦/-ರೂಪಾಯ ಕುರಿತು  ಗೊಣಗಾಟ ಕಂಡುಬಂದಿತು. ಅದಕ್ಕೆ ಪರಿಹಾರವಾಗಿ ಶುಲ್ಕವನ್ನು ತರಬೇತಿಯ ಅವಧಿಯಲ್ಲಿ ಯಾವಾಗ ಬೇಕಾದರೂ ಕೊಡಬಹದು ಮತ್ತು ಅದು ಹೊರೆ ಎನಿಸಿದರೆ ಸಂಸ್ಥೆಗ ನಿಗದಿ ಪಡಿಸಿದ ಶುಲ್ಕಕ್ಕೆ ರಸೀತಿ ಹಾಕಲಾಗುವುದು ಆದರೆ  ಮನವಿಯ ಮೇರೆಗೆ ಅನಾನುಕೂಲವಿದ್ದವರ ಶುಲ್ಕದ ಆಂಶಿಕ ಭಾಗವನ್ನು ನಿರ್ದೇಶಕರೇ ನೀಡುವುದಾಗಿ ತಿಳಿಸಿದರು. ಹಣದ ಕೊರತೆಯ ಕಾರಣದಿಂದ ಯಾವ ವಿದ್ಯಾಥಿಯೂ ವಂಚಿತನಾಗಬಾರದು ಎಂಬ ನಿಲವು ತೆಗೆದುಕೊಳ್ಳಲಾಯಿತು. ಮೊದಲ ದಿನ ೨೧ ಜನ ವಿದ್ಯಾರ್ಥಿಗಳು ಭಾಗವಹಿಸಿದರು.
ತರಬೇತಿ ಉದ್ಘಾಟನೆಗೆ ಸಂಸ್ಥೆಯ ಅಧ್ಯಕ್ಷರಾದ  ಡಾ. ಪಿ.ವಿ. ನಾರಾಯಣ , ಕಾಲೇಜಿನ ವಿಭಾಗದ ಮುಖ್ಯಸ್ಥರಾದ ಪ್ರೊ. ಲೀಲಾವತಿ,ಗಣಿತ ವಿಭಾಗದ ಪ್ರಾಧ್ಯಾಪಕಿ ಮತ್ತು ಕನ್ನಡ ವಿಭಾಗದ ಪ್ರಧ್ಯಾಪಕಿಯರಾದ  ಭಾಗವಹಿಸಿದರು. ವಿಶೇಷವೆಂದರೆ ವಿಜಯಾಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ರಾಮಮೂರ್ತಿ ಹಸ್ತಪ್ರತಿ ಕುರಿತ ಆಸಕ್ತಿಯಿಂದ ತಾವೂ ಶಿಬಿರಾರ್ಥಿಯಾಗಿ ಸಂರಕ್ಷಣಾ ಕೆಲಸ ಕಲಿತು ಹಸ್ತಪ್ರತಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ,ಮುಂದೆ ಬಂದರು..
ತರಬೇತಿಯ ಭಾಗವಾಗಿ ಸಾಧ್ಯವಾದರೆ ಎರಡು ದಿನಕೊಮ್ಮೆ ಸಂಜೆ ಅರ್ಧಗಂಟೆ  ಹಸ್ತಪ್ರತಿ ತಜ್ಞರ ವಿಶೇಷ ಉಪನ್ಯಾಸ ನಡೆಸಲು ಯೋಜನೆ ಹಾಕಿಕೊಳ್ಳಲಾಯಿತು ಮುಖ್ಯವಾಗಿ ವಿದ್ಯಾರ್ಥಿನಿಯರು ದೂರದಿಂದ ಮತ್ತು ಹೊರ ಊರಿನಿಂದ ಬರುವುದರಿಂದ ಅವರ ಅನುಕೂಲ ಗಮನಿಸಿಲು ನಿರ್ಧಾರಿಸಲಾಯಿತು. ನಿರ್ದೇಶಕರಾದ ಎಚ್‌.ಶೇಷಗಿರಿರಾಯರು ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಅಧ್ಯಯನದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾ ಆಧುನಿಕತಂತ್ರಜ್ಞಾನದ ಅಳವಡಿಕೆಯಿಂದ ಡಿಜಿಟಲ್‌ ರೂಪದಲ್ಲಿ ಹಸ್ತಪ್ರತಿಗಳ ಗರಿಗಳನ್ನು ಆಸಕ್ತರು ಇದ್ದಲ್ಲಿಗೆ ಕಳುಹಿಸುವ ಸಾಧ್ಯತೆಯಿಂದ ಈ ರಂಗದಲ್ಲಿ ಆಶಾದಾಯಕ ಬೆಳವಣಿಗೆ ಯಾಗುವುದೆಂದು ತಿಳಿಸಿದರು. ಮುಖ್ಯ ಅತಿಥಿಯಾದ ಪ್ರೊ. ಲೀಲಾವತಿಯವರು ವಿದ್ಯಾಥಿಗಳ ಜ್ಞಾನಪರಿಧಿ ವಿಸ್ತಾರಗೊಳಿಸುವ ಮುಂದೆ ಸಂಶೋಧನೆಗೆ ಪೂರಕವಾದ ಹಸ್ತಪ್ರತಿಗಳ ಪರಿಚಯವಾಗುವುದು ತುಂಬ ಉತ್ತಮ ಎಂದರು,  ಅಧ್ಯಕ್ಷ ಭಾಷಣದಲ್ಲಿ ಡಾ. ನಾರಾಯಣರು ಕನ್ನಡ ಸಾಹಿತ್ಯದ ಪ್ರಾಚೀನತೆ ಮತ್ತು ಸಾಹಿತ್ಯ ಸಂಪತ್ತು ಕುರಿತು ತಿಳಿಸುತ್ತಾ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ ಹಸ್ತಪ್ರತಿಗಳ ಅಧ್ಯಯನ ಅತಿ ಮಹತ್ವದ ಪಾತ್ರ ನಿರ್ವಹಿಸುವುದನ್ನು ವಿವರಿಸಿದರು ಹಸ್ತಪ್ರತಿ ವಿಭಾಗದ ಶ್ರೀ ಗುರುಪ್ರಸಾದ, ಶ್ರೀಮತಿ ವೀಣಾ ಮತ್ತು ಶ್ತಿಮತಿ ಮಧುರಾ ಅವರು ಅಚ್ಚುಕಟ್ಟಾಗಿ ಕಾರ್ಯಾಗಾರ ನಡೆಯಲು ಅಗತ್ಯವಾದ ವ್ಯವಸ್ಥೆ ಮಾಡಿದ್ದರು. ಮಕ್ಕಳೂ ಅಷ್ಟೇ ಆಸಕ್ತಿಯಿಂದ ಮೊದಲ ಹಂತವಾದ ಗರಿಗಳ ವಿಂಗಡಣೆ ಮತ್ತು ಶುಷ್ಕ ಶುದ್ಧೀಕರಣದ ಕೆಲಸಗಳನ್ನು ಖುಷಿಖುಷಿಯಿಂದ ಕೈಗೆತ್ತಿಕೊಂಡರು.
  



ಎಚ್.ಶೇಷಗಿರಿರಾವ್

Thursday, November 20, 2014

ದಕ್ಷಿಣ ಜೈನ ಕಾಶಿ ಮೂಡುಬಿದ್ರೆ



ಎಚ್‌.ಶೇಷಗಿರಿರಾವ್‌









                                                 ಸಾವಿರ ಕಂಬದ ಬಸದಿ



                                                   






ಮೂಡು ಬಿದ್ರೆಯು ಜೈನಕ್ಷೇತ್ರಗಳಲ್ಲಿ ಜೈನ ಕಾಶಿ ಎಂದೇ ಪ್ರಖ್ಯಾತ. ಅದಕ್ಕೆ ಕಾರಣ ಅಲ್ಲಿರುವ ಹದಿನೆಂಟು ಜೈನ ಬಸದಿಗಳು. ಅವಕ್ಕೆಲ್ಲ ಮುಕುಟ ಪ್ರಾಯ ಸಾವಿರ ಕಂಬದ ಬಸದಿ.ಮೂಡುಬಿದಿರೆ ಒಂದು ಕಾಲಕ್ಕೆ ದಟ್ಟ ಬಿದಿರು ಪೊದೆಗಳ ಪ್ರದೇಶವಾಗಿದ್ದರಿಂದ ಅದಕ್ಕೆ ಮೂಡುಬಿದ್ರೆಅಂದರೆ ಪೂರ್ವದ ಬಿದಿರೆ  ಎಂಬ ಹೆಸರು ಬಂದಿತು ಎಂಬ ಪ್ರತೀತಿ. ಇಲ್ಲಿ ಪಡುಬಿದಿರೆಯೂ ಇರುವುದು. ಮೂಡುಬಿದಿರೆ ಪ್ರಸಿದ್ಧವಾಗಿರುವುದು ಅಲ್ಲಿನ ಹದಿನೆಂಟು ಬಸದಿಗಳಿಂದ ಇಲ್ಲಿ ಹದಿನೆಂಟು ಸಂಖ್ಯೆಗೂ ಮೂಡುಬಿದಿರೆಗೂ ಏನೋ ನಂಟು ಇದಂತಿದೆ.. ಇಲ್ಲಿ ಸುತ್ತಲಿನ ಹಳ್ಳಿಗಳನ್ನು ಸಂಪರ್ಕಿಸಲು  ಹದಿನೆಂಟು ರಸ್ತೆಗಳು, ಹದಿನೆಂಟು ಜಲಾಶ್ರಯಗಳು ಇವೆ. ಇಲ್ಲಿನ ಹದಿನೆಂಟು ಬಸದಿಗಳಲ್ಲಿ ಅತಿ ಪ್ರಸಿದ್ದವಾದುದು ಸಾವಿರ ಕಂಬದ ಬಸದಿ . ಅದಕ್ಕೆ ತ್ರಿಭುವನ ತಿಲಕ ಚೂಡಾಮಣಿ ಎಂಬ ಹೆಸರೂ ಇದೆ.ಅಂದರೆ ಮೂರು ಲೋಕದಲ್ಲೂ ಮುಕುಟದ ಮಣಿ ಎಂಬ ಹೆಗ್ಗಳಿಕೆ ಇದರದು.ಇದನ್ನು ಅಲ್ಲಿರುವ ಎಂಟು ಅಡಿ ಎತ್ತರದ ಚಂದ್ರನಾಧ ತೀರ್ಥಂಕರರ  ಹೆಸರಿನಲ್ಲಿ ಚಂದ್ರನಾಥ ಬಸದಿ ಎಂದೂ ಕರೆಯುವರು. ಇದರ ನಿರ್ಮಾಣ 1430 ರಲ್ಲಿ ತುಂಡರಸು ದೇವರಾಯ ಒಡೆಯರ ಕಾಲದಲ್ಲಿ ಆಯಿತು.  ಬಸದಿಯ ಎದುರಿನ  ೬೦ ಅಡಿ ಎತ್ತರದ ಭವ್ಯ ಮಾನಸ ಶಿಲಾಸ್ಥಂಬವು ರಾಣಿ ನಾಗಲಾದೇವಿಯ ಕಾಲದಲ್ಲಿ ನಿರ್ಮಾಣವಾಯಿತು ನಂತರ 1962 ನವೀಕರಣವಾಯಿತು. ಸುಮಾರು ಮೂರುದಶಕಗಳ ಪ್ರಯತ್ನದ ನಂತರ ಕೋಟ್ಯಂತರ ಹಣ ವೆಚ್ಚದ ನಂತರ ಇಂದಿನ ಸುಸ್ಥಿತಿಗೆ ಬಂದಿದೆ.

ಏಷಿಯಾದಲ್ಲಿಯೇ ಇದು ಅತ್ಯಂತ ಭವ್ಯ ಬಸದಿ ಎನ್ನಲಾಗಿದೆ  ದೇಗುಲದ ಸಂಕೀರ್ಣವು ಮೂರು ಅಂತಸ್ತುಗಳನ್ನು ಹೊಂದಿದೆ.ಮೇಲಿನ ಅಂತಸ್ತಿಗೆ ಸಾಮಾನ್ಯವಾಗಿ ಪ್ರವಾಸಿಗಳಿಗೆ ಪ್ರವೇಶ ವಿಲ್ಲ. ವರ್ಷಕ್ಕೊಂದು ಬಾರಿ ಮಾತ್ರ ಅವಕಾಶವಿದೆ ಎನ್ನಲಾಗಿದೆ.

.
                                                        
ಸಾವಿರ ಕಂಬದ ಬಸದಿ ಎಂದು ಹೆಸರಾಗಲೂ ಕಾರಣ ಅಲ್ಲಿರುವ ಭವಯ ಶಿಲಾಕಂಬಗಳು ಬಸದಿಯ ಹೊರ ಆವರಣದಲ್ಲೇ ಸುಮಾರು ಇನ್ನೂರು  ಭವ್ಯ ಸುಭದ್ರ ೨೦ ಅಡಿ ಎತ್ತರದ ಎರಡು ಸಾಲಿನ ಗ್ರಾನೈಟ್‌ ಕಂಬಗಳಿಂದ ಆವೃತವಾಗಿದೆ.ನಂತರ  ಒಂದೊಕ್ಕೊಂದು ಪೂರಕವಾಗಿರುವ ಹಲವಾರು ಮಂಟಪಗಳಿವೆ.  ಅಲ್ಲಿರುವ  ಕಂಬಗಳು ಬಹು ಕಲಾತ್ಮಕ. , ಕಂಬಗಳಲ್ಲಿಯೇ ಕಡೆದ ಕಿರು ಕಂಬಗಳೂ ಸೇರಿಸಿದರೆ ಸಾವಿರ ಕಂಬಗಳಾಗಬಹುದು. ಒಂದಂತೂ ನಿಜ ಎಣಿಕೆ ಮಾಡಲು ಹೋದರೆ ಲೆಕ್ಕ ತಪ್ಪುವುದು ಖಂಡಿತ.

                                                
   

ಮೊದಲ ಪ್ರಕಾರದಲ್ಲಿಅಂದರೆ ಗರ್ಭ ಗುಡಿಯಲ್ಲಿ ಎಂಟು ಅಡಿ ಎತ್ತರದ ಚಂದ್ರನಾಥ ಸ್ವಾಮಿಯ ಸುಂದರ ವಿಗ್ರಹವಿದೆ.ಎರಡನೆದಾಗಿ ದೊಡ್ಡ್ದಾದ ಮಂಟಪವು ಕಲಾಕೃತಿಗಳಿಂದ ಅಲಂಕೃತವಾಗಿವೆ.ಇಲ್ಲಿರುವ ಹಲವಾರು ಮಂಟಪಗಳು ಕಲ್ಲಿನ ಕಂಬಗಳಿಂದ ಕೂಡಿದ್ದು ಮಧ್ಯ ಮಂಟಪದಲ್ಲಿ ಕುಸರೀ ಕಲೆಯಿಂದ ಕೂಡಿದ ಸ್ಥಂಬಗಳಿವೆ.
                         

                          

                                                                 
ಮಧ್ಯ ರಂಗದಲ್ಲಿ ಮೇಲ್ಛಾವಣಿಯಂತೂ ಅದ್ಭುತ . ಶಿಲಾ ಚಾಂಡಲಿಯರ್‌ಗಳು ಗುರುತ್ವಾಕರ್ಷನ ಶಕ್ತಿಗೆ ಸವಾಲೆಸೆಯುವಂತಿವೆ.
.ಇಲ್ಲಿನ ಶಿಲ್ಪಕಲೆಯನ್ನು ವರ್ಗಿಕರಿಸುವುದು ಸುಲಭದ ಮಾತಲ್ಲ. ದಕ್ಷಿಣ ಬಾರತದ ಇತರ ಯಾವುದೇ ದೇಗುಲಗಳನ್ನು ಇದು ಹೋಲುವುದಿಲ್ಲ. ತುಸು ಮಟ್ಟಿಗೆ ನೇಪಾಳದ ದೇಗುಲಗಳ ರಚನೆಯನ್ನು ನೆನಪಿಸಿದರೂ ಪೂರ್ಣವಾಗಿ ಅನುಕರಿಸಿಲ್ಲ. ಇಲ್ಲಿನ ಬಹು ಮಳೆಯ ಕಾರಣದಿಂದ ಇಳಿಜಾರಾದ ಮಾಡನ್ನು ತಾಮ್ರ, ಕಟ್ಟಿಗೆ ಮತ್ತು ಶಿಲೆಗಳ ನ್ನು ಬಳಸಿ ನಿರ್ಮಾಣ ವಾಗಿಲ್ಲಿ ಇಲ್ಲಿ ಬಿರಿ ಮಳೆ ಮತ್ತು ಸುಡು ಬಿಸಿಲಿನ ಪರಿಣಾಮವಾಗಿ ವಾಸ್ತು ಶೈಲಿಯು ಬದಲಾಗಿದೆ. ಹೊರ ವರಣದಲ್ಲಿ ಸ್ಥಂಬಗಳು ಗಟ್ಟಿ ಮುಟ್ಟಾಗಿ ಆಧಾರ ನೀಡಿದರೆ ಮಧ್ಯ ಮಂಟಪದಲ್ಲಿ ಕಲಾ ಸೌಂದರ್ಯ ಅರಳಿನಿಂತಿದೆ.ಜಗಲಿಯ ಕೆಳ ಭಾಗದ ಪಟ್ಟಿಗೆಗಳಲ್ಲಿ ಜನ ಜೀವನದ ವಿವಿಧ ಚಟುವಟಿಕೆ ರೂಪಿಸುವ ಉಬ್ಬು ಶಿಲ್ಪಗಳಿವೆ. ಕುಸ್ತಿ ಪಟುಗಳು, ಯೋಗ ನಿರತರು, ಪಶು , ಪಕ್ಷಿ ಗಳೂ ಅದರಲ್ಲಿ ವಿದೇಶಿ ಪ್ರಾಣಿಗಳ ಶಿಲ್ಪಗಳೂ ಇವೆ.ಲ್ಲಿನ ವಿಶೇಷತೆ ಎಂದರೆ ಜೈನ ಮಂದಿರವಾದರೂ ವೈದಿಕ ಪುರಾಣಗಳ ದೇವತೆಗಳ ಶಿಲ್ಪಗಳೂ ಇವೆ. ಒಂದು ರೀತಿಯಲ್ಲಿ ಧರ್ಮಸಾಮರಸ್ಯದ ಸಂಕೇತ ಈ ಬಸದಿ ಎನ್ನ ಬಹುದು
                                                           


ಉತ್ತರಭಾರತದಲ್ಲಿ ಕಿರುಕುಳಕ್ಕೆ ಒಳಗಾದ ಜೈನರು ದಕ್ಷಿಣಕ್ಕೆ ವಲಸೆಬಂದು ತಮ್ಮ ವ್ಯಾಪಾರ ಮತ್ತು ವಾಣಿಜ್ಯದಿಂದ ಅಭಿವೃದ್ಧಿ ಹೊಂದಿದರು. ಕಾಲಕಾಲಕ್ಕೆ ಆಳ್ವಿಕೆ ನಡೆಸಿದ  ಅನೇಕ ರಾಜವಂಶಗಳಿಂದಲೂ ರಕ್ಷಣೆ ಮತ್ತು ಉತ್ತೇಜನ ದೊರೆಯಿತು.ಪರಿಣಾಮ  ಇಲ್ಲಿನ ಜೈನ ವ್ಯಾಪಾರಿಗಳು ಅಭಿವೃದ್ಧಿ ಹೊಂದಿದರು.. ಮತ್ತು ತಮ್ಮ ಕೃತಜ್ಞತೆಯನ್ನು ಜಿನಾಲಯಗಳನ್ನು ನಿರ್ಮಿಸುವ ಮೂಲಕ ವ್ಯಕ್ತಪಡಿಸಿದರು. ಬಸದಿಯಲ್ಲಿ ಕೆತ್ತ ಲಾಗಿರುವ ಉಬ್ಬುಶಿಲ್ಪಗಳು ಇಲ್ಲಿನ ವರಿಗೆ  ಇದ್ದ ವಿದೇಶಿ ವ್ಯಾಪಾರ ಸಂಬಂಧವನ್ನು ಸೂಚಿಸುತ್ತವೆ. ಚೀನಾದ ಡ್ರಾಗನ್, ಒಂಟೆಯನ್ನು ಬಳಸಿ ಉಳುಮೆ ಮಾಡುತ್ತಿರುವುದು , ಆಫ್ರಿಕಾದ ಜಿರಾಫೆ  ಸಹಜವಾಗಿ ಇಲ್ಲಿನವರ ಆಫ್ರಿಕಾ, ಅರೇಬಿಯಾ ಮತ್ತು ಏಷಿಯಾದ  ಪರಿಚಯದ ಸಾಕ್ಷಿಯಾಗಿವೆ
ನವನಾರೀ ಕುಂಜರ
ಸಪ್ತನಾರಿ ತುರಗ
                                                                                                                                         
 ಆದ್ದರಿಂದಲೇ ಇಲ್ಲಿನ ಹಲವಾರು ಬಸದಿಗಳು ವ್ಯಾಪಾರಿಗಳಾದ ಶೆಟ್ಟರ  ಹೆಸರಿನಲ್ಲಿಯೇ ಇವೆ. ವಿಕ್ರಮ ಶೆಟ್ಟಿ ಬಸದಿ, ಚೋಲ ಶೆಟ್ಟಿ ಬಸದಿ, ಕೋಟಿ ಸೆಟ್ಟಿ ಬಸದಿ ಮೊದಲಾದವು ಶಿಲ್ಪಕಲಾ ಸೌಂದರ್ಯದಿಂದ ಮನ ಸೆಳೆಯುತ್ತವೆ. ಅದರಲ್ಲೂ ವಿಶೇಷವಾಗಿ ಗುರು ಬಸದಿಯು ಅತ್ಯಂತ ಪುರಾತನ ಮತ್ತು ಪವಿತ್ರ ಬಸದಿಎಂದು ಪರಿಗಣಿಸಲ್ಪಟ್ಟಿದೆ. ಅಲ್ಲಿನ ೫೨ ಅಮೂಲ್ಯ ವಿಗ್ರಹಗಳು ಮತ್ತು ಪಾರ್ಶ್ವನಾಥನ ಮೂರ್ತಿ ಮನಸೆಳೆಯುತ್ತವೆ

                                       

ಜೈನ ದಂðದ ಪವಿತ್ರ ಸಾಹಿತ್ಯವನ್ನು ಕಾಪಿಡಲು ಇದು ಸುರಕ್ಷಿತ ಸ್ಥಳವೆನಿಸಿದ್ದರಿಂದ  ೧೮ನೆಯ ಶತಮಾನದಲ್ಲಿ ಮೊಘಲರ ದಾಳಿಯ ಭಯ ಹೆಚ್ಚಿದ್ದರಿಂದ ಶ್ರವಣಬೆಳಗೊಳದಿಂದ ಪ್ರಾಕೃತ ಮತ್ತು ಕನ್ನಡದಲ್ಲಿನ ತಾಳೆಯೋಲೆಗಳನ್ನು ಇಲ್ಲಿಗೆ ಸಾಗಿಸಲಾಯಿತು ಎಂಬ ಐತಿಹ್ಯವಿದೆ. ಈಗಲೂ ಸುಮಾರು ಎಂಟು ಸಾವಿರ ಹಸ್ತಪ್ರತಿಗಳು ಇಲ್ಲಿನ ಜೈನ ಮಠದಲ್ಲಿವೆ. ಅದರಲ್ಲೂ ಜೈನರ ಧವಳ ಮತ್ತು ಜಯಧವಳ ಎಂಬ ಗ್ರಂಥಗಳು ವರ್ಣಮಯ ಚಿತ್ರಗಳಿಂದ ಕೂಡಿದ್ದು ಅತ್ಯಮೂಲ್ಯವಾಗಿವೆ. ಶತಮಾನಗಳಿಗಿಂತಲೂ ಪುರಾತನವಾದ ಈ ಕೃತಿಗಳು ಜೈನ ಧರ್ಮದ ಮೇಲೆ  ಅಂದಿನ ಭಾರತದ ಮೇಲೆ   ಬೆಳಕು ಚೆಲ್ಲುತ್ತವೆ.


 ಈ ಎಲ್ಲ ಬಸದಿಗಳ ಮೇಲುಸ್ತುವಾರಿಯನ್ನು ಚಾರು ಕೀರ್ತಿ ಭಟ್ಟಾರಕರು ನೋಡಿ ಕೊಳ್ಳುತಿದ್ದಾರೆ. ಯುವಕರು , ಜ್ಞಾನಿಗಳು, ಆದುನಿಕ ತಂತ್ರಜ್ಞಾನದ ಪರಿಚಯುಳ್ಳ ಉತ್ಸಹಾಹಿಗಳಾದ  ಅವರು , ದೇಶ ವಿದೇಶ ಪರ್ಯಟನೆ ಮಾಡಿರುವರು. ಸ್ವಾಮೀಜಿಯವರು ಮೂಡುಬಿದ್ರೆಯು ಧರ್ಮಸಾಮರಸ್ಯಕ್ಕೆ ಹೇಗೆ ಪೂರಕವಾಗಿದೆ, ಸಿದ್ಧಾಂತಗಳು ಬೇರೆಯಾದರೂ ಆಚರಣೆಯಲ್ಲಿ ಏಕತೆಯನ್ನು ಕುರಿತು ಮಾತನಾಡುತ್ತಾ ಶ್ರೀ ಕ್ಷೇತ್ರದ ಅಬಿವೃದ್ಧಿಗೆ ಇತರ ಧರ್ಮದವರ ಸಹಕಾರವನನ್ನೂ ನೆನೆದರು..
  
ಇಲ್ಲಿನ ಕರಾವಲಿಯ ವಿಶೇಷಕಲೆಯಾದ ಯಕ್ಷಗಾನಕ್ಕೂ ಇಲ್ಲಿ ಉತ್ತೇಜನವಿದೆ.. ಇದಲ್ಲದೆ ಕಂಬಳ. ಹುಲಿವೇಷ, ನಾಗಾರಾಧನೆ,ಭೂತ ಕೋಲಗಳು ಜಾನಪದ ಕಲೆಯ ಸೊಗಡು ಬೀರಿದರೆ ಉರುಸು, ಸಂತ ಮೇರಿ ಉತ್ಸವಗಳು. ಏಳನೆಯ ಶತಮಾನದ ಹಿಂದೂ ದೇವಾಲಯಗಳು ಇಂದೂ ಜನಾಕರ್ಷಕವಾಗಿ ಪ್ರವಾಸಿಗರ ಕಣ್ಮನ ತಣಿಸುತ್ತವೆ.
ಚೌಟ ಅರಸರ ಅರಮೆನ ಹೆಬ್ಬಾಗಿಲು
 ಆನೆ ಬಾಗಿಲು
                                                              
           
 ಐತಿಹಾಸಿಕವಾಗಿಯೂ ಇದು ಪ್ರಮುಖ ರಾಜಮನತನಗಳ ತಾಣವಾಗಿತ್ತು. ಚೌಟರಸರ ಅರಮನೆ ಮತ್ತು ಆನೆಯೂ ಹೋಗ ಬಹುದಾಂಥಹ ಹೆಬ್ಬಾಗಿಲು  ಇಂದಿಗೂ ಸುಸ್ಥಿತಿಯಲ್ಲಿದೆ.
 ಒಂದು ಕಾಲದಲ್ಲಿ ಸಾವಿರಾರು ಜನರಿಗೆ ಅನ್ನದಾನ ಮಾಡುತಿದ್ದುದರ ಕುರುಹಾಗಿ ಸಾವಿರ ಜನರಿಗೆ ಅನ್ನ ಬೇಯಿಸುವ ತಾಮ್ರದ ಪಾತ್ರೆ ಇಲ್ಲಿದೆ






ಸಾವಿರ ಜನರಿಗೆ ಅನ್ನಬೇಯಿಸುವ ಪಾತ್ರೆ
                               
.ಈಗಂತೂ ಆಳ್ವ ಸಮೂಹದ ಶಿಕ್ಷಣ ಸಂಸ್ಥೆಗಳು ವಿದ್ಯಾಕ್ಷೇತ್ರದಲ್ಲಿ ಕ್ರಾಂತಿ ತಂದಿವೆ. ಈಗ ಹತ್ತು ವರ್ಷದಿಂದ ನಡೆಸುತ್ತಿರುವ ಆಳ್ವಾ ನುಡಿ ಸಿರಿ ಮತ್ತು ವಿರಾಸತ್‌ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕ ದೊಡ್ಡ ಕಾಣಿಕೆ ಸಲ್ಲಿಸುತ್ತವೆ. ಒಟ್ಟಿನಲ್ಲಿ ಮೂಡುಬಿದ್ರೆ ಪರಾಂಪರಿಕ ಮತ್ತು ಆಧುನಿಕತೆಯ ಸಂಗಮವಾಗಿ ಕಂಗೊಳಿಸುತ್ತಿದೆ




.