Monday, August 20, 2012

ಪಾಠದಷ್ಟೆ ಆಟ ಮುಖ್ಯ


ಮ್ಮ ಶಾಲೆಯಲ್ಲಿ ಆಟಗಾರರಿಗೆ ವಿಶೇಷ ಸ್ಥಾನ ಇತ್ತು. ಅವರಿಗೂ ತಾವು ಶಾಲೆಯ ಹಿರಿಮೆಗೆ ಕಾರಣ ಎಂಬ ಹೆಮ್ಮೆ. ನಮ್ಮಲ್ಲಿ ಆರೆಂಟು ಉತ್ತಮ ಕ್ರೀಡಾಪಟುಗಳಿದ್ದರು. ಮಹಾವೀರ ಅವರಲ್ಲಿ ಹೆಸರುವಾಸಿ. ಅವನು ಹೆಸರಿಗೆ ತಕ್ಕಂತೆ ಮಹಾವೀರನೆ ಆಟೋಟಗಳಲ್ಲಿ ಫುಟ್‌ ಬಾಲ್ ಕಬ್ಬಡಿಯಲ್ಲಂತೂ ಎತ್ತಿದ ಕೈ. ಕಟ್ಟುಮಸ್ತಾದ ಆಳು. ಎಲ್ಲ ಕ್ರೀಡಾಕೂಟಗಳಲ್ಲಿ ಜನರ ಕಣ್ಮಣಿ. ಪ್ರತಿ ತರಗತಿಯಲ್ಲೂ ಯಾವುದೆ ಧಾವಂತ ಇಲ್ಲದೆ ಓದಿದವನು. ಯಾವುದೆ ತರಗತಿಯಲ್ಲೂ ಒಂದೆ ವರ್ಷಕ್ಕೆ ಪಾಸಾದಂತೆ ಕಾಣುತ್ತಿರಲಿಲ್ಲ. ಆದರೆ ಅವನಿಗೆ ಅದಾವುದು ಲೆಕ್ಕಕ್ಕೆ ಇದ್ದಂತೆ ಕಾಣದು ಎಸ್‌ ಎಸ್‌ ಎಲ್‌ಸಿ ಪ್ರವೇಶ ಪರೀಕ್ಷೆಯಲ್ಲಿ ಫೇಲಾದರೂ ಮನ ನೊಂದುಕೊಳ್ಳದೆ ಮತ್ತೆ ಮರು ಪ್ರವೇಶ ಪಡೆಯುತಿದ್ದ. ತರಗತಿಯಲ್ಲಿ ಇರುವುದಕ್ಕಿಂತ ಆಟದ ಮೈದಾನದಲ್ಲೆ ಮಿಂಚುತಿದ್ದ. ಅವನ ಪ್ರತಾಪ ಬೆಳಗ್ಗೆ ಆರು ಗಂಟೆಯಿಂದ ಎಂಟರವರೆಗೆ ಮತ್ತು ಸಂಜೆ ನಾಲಕ್ಕು ಗಂಟೆಯ ಮೇಲೆ. ಚೆಂಡು ಕಾಣುವರೆಗೆ ಆಟ ಆಡಿದ್ದೆ ಆಡಿದ್ದು. ದಣಿವು ಎಂಬುದೆ ಇರಲಿಲ್ಲ. ಈ ವಿಷಯದಲ್ಲಿ ಆತ ಏಕಾಕಿ ಅಲ್ಲ. ಅವನ ಜತೆ ನಾಲಕ್ಕಾರು ಈ ರೀತಿಯ ಹುಡುಗರ ಗುಂಪೆ ಇತ್ತು.
ಜಿಗಿತದ ಸ್ಪರ್ಧೆಗಳಲ್ಲಿ ಎಲ್ಲರೂ ಉದ್ದ ಕಾಲಿನ ಹುಡುಗರೆ. ಅವರು ದಾಪುಗಾಲು ಹಾಕುತ್ತಾ ಓಡಿ ಬಂದು ಜಿಗಿಯುವಾಗ ನೋಡುವುದೆ ಒಂದು ಚೆಂದ. ವಿನಾಯತಿ ಎಂದರೆ ಜೋಸೆಫ್ ಎಂಬ ಐದು ಅಡಿ ಎರಡು ಅಂಗುಲದ ಆಸಾಮಿ.. ಆದರೆ ಅವನು ಹೈಜಂಪ್‌ ಮಾಡುವಾಗ ಹಕ್ಕಿಯಂತೆ ಹಾರಿ ತನ್ನ ಎತ್ತರಕಿಂತ ಮೇಲಿರುವ ಬಾರಿನ ಮೇಲೆ ಸಮಾಂತರವಾಗಿ ಸುಲಭವಾಗಿ ಜಿಗಿದು ಬಿಡುವುದು ಸೋಜಿಗವಾಗಿತ್ತು.. ಕ್ರಿಕೆಟ್‌ ಬಾಲ್‌ ಎಸೆಯುವುದರಲ್ಲಿ ಶಿವನಗೌಡ ಮೊದಲು. ಕಾರಣ ಅವನು ಹಳ್ಳಿಯ ಹುಡುಗ. ಮಾವಿನ ಕಾಯಿ, ಹುಣಿಸೆಕಾಯಿ, ಬಾರಿಹಣ್ಣಿನ ಮರಕ್ಕೆ ಕಲ್ಲು ಹೊಡೆದ ಅಭ್ಯಾಸ ಇಲ್ಲಿ ಉಪಯೋಗವಾಗುತಿತ್ತು. ಓಟ ಮತ್ತು ನಡಗೆಯ ಸ್ಪರ್ಧೆಗಳಲ್ಲಿ ಹಳ್ಳಿಯ ಹುಡುಗರದೆ ಸದಾ ಮೇಲುಗೈ.
ಆದರೆ ಹಾಕಿ ಫುಟ್‌ಬಾಲ್‌, ಕ್ರಿಕೆಟ್‌, ವಾಲಿಬಾಲ್‌, ಬಾಸ್ಕೆಟ್‌ಬಾಲ್‌ಗಳಲ್ಲಿ ಪೇಟೆಯವರದೆ ಪಾರುಪತ್ಯ. ಕಾರಣ ಅವರಿಗೆ ಶಾಲಾ ಸಮಯದ ನಂತರ ಅಭ್ಯಾಸ ಮಾಡಲು ಅವಕಾವಿತ್ತು. ಅವರ ಒತ್ತಾಸೆಗೆ ದೈಹಿಕ ಶಿಕ್ಷಕರು ತುದಿಗಾಲಲ್ಲಿ ನಿಂತಿರುತಿದ್ದರು. ಜಿಲ್ಲಾ ಕ್ರೀಡಾಕೂಟದ ಸಮಯದಲ್ಲಿ ಬೇರೆ ಶಾಲೆಯವರಿಗೆ ಸದಾ ಅವರ ಮೇಲೆ ಕಣ್ಣು. ವಿದ್ಯಾರ್ಥಿಗಳಲ್ಲದವರನ್ನು ಕರೆದು ತಂದು ಆಟ ಆಡಿಸುತ್ತಿದ್ದಾರೆ ಎಂಬ ಶಂಕೆ. ಅದಕ್ಕೆಂದೆ ಅವರ ಗುರುತಿನ ಚೀಟಿಯನ್ನು ಪದೇ ಪದೇ ಪರಿಶೀಲಿಸಲು ಒತ್ತಾಯ ಮಾಡುತ್ತಿದ್ದರು. ನಮ್ಮ ಶಿಕ್ಷಕರಾದರೂ ಗುರುತಿನ ಚೀಟಿಯನ್ನು ತಪ್ಪದೆ ಒಯ್ಯುತಿದ್ದರು. ಅನೇಕ ವರ್ಷಗಳಿಂದಲೂ ಬರುತ್ತಲೇ ಇದ್ದಾರೆ ಎಂದು ಅನುಮಾನಗೊಂಡ ಶಾಲೆಯವರೊಬ್ಬರು ದೂರು ನೀಡಿದಾಗ ಖುದ್ದು ಪರಿಶೀಲನೆಯಾಯಿತು. ಅಧಿಕಾರಿಗಳ ಜತೆ ಆಕ್ಷೇಪಿಸಿದವರೂ ಬಂದು ಪರೀಕ್ಷಿಸಿದಾಗ ಚಿಳ್ಳೆ ಪಿಳ್ಳೆಗಳೊಂದಿಗೆ ಆಜಾನುಬಾಹುಗಳಾದ ಇವರು ಸಹಾ ತರಗತಿಯ ಹಿಂದಿನ ಬೆಂಚಿನ ಮೇಲೆ ಕುಳಿತಿರುವುದನ್ನು ನೋಡಿದರು. ಹಾಜರಾತಿ ಹಾಗೂ ಇತರ ದಾಖಲೆ ಪರಿಶೀಲಿಸಿದರು. ಎಲ್ಲ ಸರಿ ಇರಲು ಹೀಗೂ ಉಂಟೆ ಎಂದು ಮೂಗಿನ ಮೇಲೆ ಬೆರಳಿಟ್ಟು ಕೊಂಡು ವಾಪಸ್ಸು ಹೋದರು. ಇವರಿಗೆ ಮಾತ್ರ ಯಾವುದೆ ಸಂಕೋಚವಿಲ್ಲ. ಶಾಲೆಗೆ ಹೊಸದಾಗಿ ಬರುವವರಿಗೆ ಅಣ್ಣ, ಪಾಸಾಗಿ ಹೋಗುವವರಿಗೆ ತಮ್ಮನಾಗಿ ನೆಮ್ಮದಿಯಿಂದ ಇರುತಿದ್ದರು
ಪಾಠಗಳಿಗಿಂತ ಆಟದಲ್ಲೇ ಮಕ್ಕಳಿಗೆ ಆಸಕ್ತಿ ಹೆಚ್ಚಾಗಿತ್ತು. ಆಗಿನ ಶಿಕ್ಷಣದಲ್ಲಿ ಎಳೆಯ ಮಕ್ಕಳಿಂದ ಹಿಡಿದು ಮೀಸೆ ಮೂಡಿದ ಬಲಿತ ಬಾಲಕರವರೆಗ ಹಿಂಜರಿಕೆ ಇಲ್ಲದೇ ಭಾಗವಹಿಸಲು ಮುಕ್ತ ಅವಕಾಶವಿತ್ತು. ಆಟಗಾರರಲ್ಲಿ ನಾಲಕ್ಕು ವಿಭಾಗಗಳಿದ್ದವು. ಸೀನಿಯರ್‌, ಜೂನಿಯರ್‌, ಸಬ್‌ ಜೂನಿಯರ್ ಮತ್ತು ಪಿಗ್ಮಿ ಎಂದು ಎತ್ತರ ಮತ್ತು ತೂಕದ ಆಧಾರದ ಮೇಲೆ ವರ್ಗೀಕರಣ ಮಾಡುತ್ತಿದ್ದರು. ಬಲ ಭೀಮನಿಗೆ ಇರುವಷ್ಟೇ ಅವಕಾಶ ಕಡ್ಡಿ ಪೈಲವಾನನಿಗೂ ಪಂದ್ಯಾಟಗಳಲ್ಲಿ ಭಾಗವಹಿಸಿ, ತಮ್ಮ ವಿಭಾಗದಲ್ಲಿ ಪ್ರಶಸ್ತಿ ಪಡೆವ ಅವಕಾಶ ಇರುತಿತ್ತು. ಹೀಗಾಗಿ ನನಗೂ ಜಿಲ್ಲಾ ಮಟ್ಟದ ಪಂದ್ಯಾಟಗಳಲ್ಲಿ ಹಲವು ಪ್ರಶಸ್ತಿಗಳನ್ನು ಗೆಲ್ಲಲು ಅವಕಾಶ ಸಿಕ್ಕಿತು. ತೆಳ್ಳನೆಯ ಕುಳ್ಳ ಆಕೃತಿಯ ನಾನು ಆಟೋಟಗಳ ಸ್ಪರ್ಧೆಯಲ್ಲಿ ಪಿಗ್ಮಿಯಿಂದ ಪ್ರಾರಂಭ ಮಾಡಿ, ಸಬ್‌ ಜೂನಿಯರ್‌ ಆಗಿ ಪ್ರಶಸ್ತಿಗಳನ್ನು ಬಾಚಿದ್ದೆ. ಎಸ್‌ ಎಸ್‌ ಎಲ್‌ ಸಿ ಬರುವ ಹೊತ್ತಿಗೆ ಜೂನಿಯರ್‌ ಹಂತ ತಲುಪಿದೆ. ವಾಲಿಬಾಲ್‌ ಆಡಲು ಹೋಗಿ ಬೆರಳು ಉಳುಕಿತು. ಅದನ್ನು ಕೈ ಬಿಟ್ಟೆ. ಬಾಸ್ಕೆಟ್‌ ಬಾಲಂತೂ ನನ್ನ ಅಳವಿಗೆ ಮೀರಿದ್ದಾಗಿತ್ತು. ಹತ್ತು ಅಡಿಗೂ ಹೆಚ್ಚು ಎತ್ತರದಲ್ಲಿದ್ದ ಬುಟ್ಟಿಗೆ ಚೆಂಡು ಹಾಕ ಬೇಕಿತ್ತು. ಅದರ ಆಟಗಾರರು ಎಲ್ಲರೂ ಲಂಬೂಗಳೇ. ನಾನು ಅವರ ಭುಜಕ್ಕೂ ಬರಲಾರೆ ಹಾಗಾಗಿ ಅತ್ತ ತಪ್ಪಿಯೂ ಸುಳಿಯುವಂತಿರಲಿಲ್ಲ. ಅವೆರಡನ್ನು ಬಿಟ್ಟು ಬೇರೆ ಎಲ್ಲ ಆಟಗಳಲ್ಲಿ ಭಾಗಹಿಸಿದೆ. ಕೋ ಕೋ, ಕಬಡಿ, ಫುಟ್‌ ಬಾಲ್, ಹಾಕಿ ಪಂದ್ಯಾಟಗಳಲ್ಲಿ ನನಗೆ ಅವಕಾಶ ಸಿಕ್ಕಿತು.
ಖೋಖೋ ಅಭ್ಯಾಸ ಮಾಡುವಾಗಿನ ಒಂದು ಪ್ರಸಂಗ ಈಗಲೂ ನೆನಪಿದೆ. ಅತಿ ಕಿರಿಯ ವಿಭಾಗದ ಹುಡುಗರು ಸಾಧಾರಣವಾಗಿ ಖೊಖೋ ಆಟದಲ್ಲಿ ಚುರುಕು. ಅದಕ್ಕೆ ನಮ್ಮ ಆಟದ ಮಾಷ್ಟ್ರು ಅತಿ ಕಿರಿಯ ಹುಡುಗರು ಮತ್ತು ಹಿರಿಯ ಹುಡುಗಿಯರಿಗೆ ಖೊಖೋ ಪಂದ್ಯಗಳನ್ನು ಅಡಿಸುವರು. ಇಬ್ಬರಿಗೂ ತರಬೇತಿ ಯಾಗಲಿ ಎಂದು ಅವರ ಉದ್ದೇಶ. ಆ ಪಂದ್ಯವನ್ನು ನೋಡಲು ನೂಕುನುಗ್ಗಲು. ಕೆಲವು ಹಿರಿಯ ಹುಡುಗರು ಬಂದು ನನಗೆ ನೀನು ಅವರನ್ನು ಬೆನ್ನಟ್ಟಿ ಔಟು ಮಾಡುವುದು ಕಷ್ಟ. ನೀನು ಕುಳಿತಿರುವ ಬಾಕ್ಸನ ಗೆರೆಗಳ ಎದುರಲ್ಲಿ ಇರುವವರನ್ನು ನೇರವಾಗಿ ಹೋಗಿ ಮುಟ್ಟು ಅಂದರೆ ಅವರಿಗೆ ಓಡುವ ಅವಕಾಶವಿರದು ಎಂದು ಹೇಳಿ ಕೊಟ್ಟರು. ನಾನು ಅದರಂತೆ ಬಾಕ್ಸನ ಗೆರೆಯ ಅತ್ತಿತ್ತ  ನೋಡದೆ ನೇರವಾಗಿ ಎದುರಿನವರ ಮೇಲೆ ದಾಳಿ ಮಾಡುತಿದ್ದೆ. ಅವರಿಗೆ ಬೆನ್ನುತೋರಿಸಿ ಓಡುವ ಅವಕಾಶ ಸಿಗುತ್ತಿರಲಿಲ್ಲ. ಆಗ ಸಾಮಾನ್ಯವಾಗಿ ಕೈ ಅವರ ದೇಹದ ಮುಂಭಾಗದಲ್ಲಿ ತಗುಲುವುದು. ಆಗ ಸುತ್ತ ನಿಂತವರ ಕೇಕೆ ಮುಗಿಲು ಮುಟ್ಟುತಿತ್ತು. ಒಂದೆರಡು ಸಲ ಹೀಗಾದ ಮೇಲೆ ನನಗೆ ಅವರ ಸಲಹೆಯ ಹಿಂದಿನ ಕುಚೇಷ್ಟೆ ಅರ್ಥವಾಯಿತು.
ಈಗಿನಂತೆ ಆಗ ಪ್ರೌಢ ಶಾಲೆಗಳ ಸಂಖ್ಯೆ ಹೆಚ್ಚಿರಲಿಲ್ಲ. ಜಿಲ್ಲೆಯಲ್ಲಿ  ಇಪ್ಪತ್ತರೊಳಗೆ. ಎಲ್ಲ ಶಾಲೆಗಳು ಎಲ್ಲ ಆಟದಲ್ಲಿ ಭಾಗವಹಿಸುತ್ತಿರಲಿಲ್ಲ. ಹಾಕಿ, ಫುಟ್‌ ಬಾಲ್‌ ವಾಲಿಬಾಲ್‌ ಬಾಸ್ಕೆಟ್‌ ಬಾಲ್‌ ಗಳಿಗೆ ಆರೆಂಟು ತಂಡಗಳಿದ್ದರೆ ಹೆಚ್ಚು. ಇನ್ನು ಹುಡುಗಿಯರ ಸಂಖ್ಯೆಯಂತೂ ಬಹು ಮಿತವಾಗಿತ್ತು. ಈಗ ಹಾಗಿಲ್ಲ. ಮೊದಲು ವಲಯ ಮಟ್ಟದಲ್ಲಿ, ನಂತರ ತಾಲೂಕು ಮಟ್ಟದಲ್ಲಿ ಕ್ರೀಡಾಕೂಟ ನಡೆಸಿ ನಂತರ ತಾಲೂಕಿನಲ್ಲಿ ಪ್ರಥಮ ಎರಡು ಸ್ಥಾನ ಪಡೆದವರು ಮಾತ್ರ ಜಿಲ್ಲಾ ಮಟ್ಟಕ್ಕೆ ಹೋಗುವರು. ತಂಡ ಪಂದ್ಯಾಟಗಳಲ್ಲಂತೂ ಒಂದೆ ಶಾಲೆಯ ತಂಡ ಇರುವುದಿಲ್ಲ. ಸೋತಿರಲಿ, ಗೆದ್ದಿರಲಿ ಚೆನ್ನಾಗಿ ಆಡುವ ತಾಲೂಕಿನಲ್ಲಿರುವ ಎಲ್ಲ ತಂಡಗಳನ್ನು ಗಮನಿಸಿ ಆಯ್ಕೆ ಮಾಡುತ್ತಾರೆ. ಸ್ವಾಭಾವಿಕವಾಗಿ ಗೆದ್ದ ತಂಡದವರು ಹೆಚ್ಚು ಇರುವರು. ಕಬಡಿ, ಖೋಖೋ. ಫುಟ್‌ ಬಾಲ್‌ ಆಟೋಟಗಳಲ್ಲಿ ನಾನು ಗೆದ್ದ  ಪಾರಿತೋಷಕಗಳನ್ನು ನನ್ನ ಹೆಂಡತಿ ಮೊನ್ನೆ ಮೊನ್ನೆಯವರಿಗೆ ಜತನವಾಗಿ ಇಟ್ಟಿದ್ದಳು. ಅವು ಬೆಳ್ಳಿ ಲೇಪನದ ಹಿತ್ತಾಳೆಯವು ಎಂದು ಕಾಣುತ್ತದೆ. ಬಹಳ ವರ್ಷಗಳ ಮೇಲೆ ಹಿತ್ತಾಳೆ ತೇಲಿತು. ಆದರೂ ನನ್ನವಳಿಗೆ ಅವನ್ನು ಕಂಡರೆ ಅದೇನೋ ಅಭಿಮಾನ. ಮಕ್ಕಳು ಬಹುಮಾನಗಳನ್ನು ಬಾಚಿ ತರುವುದನ್ನು ಮೊದಲುಮಾಡಿದ ಮೇಲೆ. ಅವುಗಳನ್ನು ಮರೆತಳು. ಹೊಸ ನೀರು ಬಂದಾಗ ಹಳೆಯ ನೀರು ಕೊಚ್ಚಿ ಹೋಗುವುದು ನಿಸರ್ಗದ ನಿಯಮ.
ಶನಿವಾರದ ಮುಂಜಾನೆಯ ಎರಡು ಅವಧಿಗಳು ಮಾತ್ರ ಮಕ್ಕಳಿಗೆ ಅತ್ಯಾಕರ್ಷಕವಾಗಿರುತಿದ್ದವು. ಆಗ ಪಾಠ ಪ್ರವಚನ ಇಲ್ಲ. ಪ್ರಾರ್ಥನೆಯಾದ ಮೇಲೆ ಎಲ್ಲರೂ ಮೈದಾನದಲ್ಲಿ ತರಗತಿವಾರು ನಿಲ್ಲಬೇಕು. ಆಗ ಇನ್ನೂ ಸಮವಸ್ತ್ರದ ಕಾಟ ಇರಲಿಲ್ಲ. ಹರಿದಿಲ್ಲದ ಹೊಲಸಾಗಿರದ ಬಟ್ಟೆಇದ್ದರೆ ಸಾಕಿತ್ತು. ಎಷ್ಟೊ ಹುಡುಗರ ಚೊಣ್ಣದ ಗುಂಡಿ ಇಲ್ಲದೆ ಪೋಸ್ಟ ಆಪೀಸ್‌ ಅಂದು ಹಾಸ್ಯಕ್ಕೆ ಗುರಿಯಾಗುತಿದ್ದರು. ಅಂಗಿಗೂ ಅಷ್ಟೆ. ಗುಂಡಿ ಹೋದಮೇಲೆ ಪಿನ್ನು ಹಾಕಿಕೊಂಡು ಬಂದರೆ ದೊಡ್ಡದು. ಆದ್ದರಿಂದ ಸಾಮೂಹಿಕ ಕವಾಯತು ಅಕ್ಷರಶಃ ವರ್ಣ ಮಯವಾಗಿರುತಿತ್ತು. ಮಕ್ಕಳ ಮೇಲುಸ್ತುವಾರಿ ತರಗತಿಯ ಶಿಕ್ಷಕರದು. ನಂತರ ಸಾಮೂಹಿಕ ವ್ಯಾಯಾಮ. ಸಹಸ್ರಾರು ಜನರು ಡ್ರಮ್ಮಿನ ಲಯಬದ್ಧ ಹೊಡತಕ್ಕೆ ಅನುಗುಣವಾಗಿ ನಿಂತು, ಕುಳಿತು ಮಾಡುತಿದ್ದ ವ್ಯಾಯಾಮ ಎಲ್ಲರ ಮನ ಮತ್ತು ಗಮನ ಸೆಳೆಯುತಿತ್ತು. ನೂರಾರು ಹಾದಿ ಹೋಕರೂ ನಿಂತು ನೋಡುತಿದ್ದರು. ಮಳೆ ಬಂದರೆ ಮತ್ತು ಪರೀಕ್ಷೆ ಹತ್ತಿರವಾದಾಗ ವಿನಾಯತಿ ಇರುತಿತ್ತು.
ಎಲ್ಲರಿಗೂ ಸಂಭ್ರಮದ ದಿನವೆಂದರೆ ಆಗಷ್ಟ ೧೫ ಮತ್ತು ಜನವರಿ ೨೬ ರ ಸಮಾರಂಭಗಳು. ಅವನ್ನು ಬಹಳ ಸಡಗರದಿಂದ ಆಚರಿಸುತಿದ್ದೆವು. ಬೆಳ್ಳಂ ಬೆಳಗ್ಗೆ ಶಾಲಾ ಅವರಣದಲ್ಲಿ ಸೇರಿ ಪ್ರಭಾತ್ ಫೇರಿ ಹೊರಡುತಿದ್ದೆವು ಶಾಲಾ ಬ್ಯಾಂಡು, ಲೇಝಿಂ ತಂಡಗಳು ಶಾಲೆಯ ಹೆಸರಿನ ಬಟ್ಟೆಯ ಬ್ಯಾನರ್‌, ಜತೆಗೆ ರಾಷ್ಟ್ರಧ್ವಜ ಹಿಡಿದು ಸಾಗುವವರ ಹಿಂದೆ ಆಕರ್ಷಕ ಪ್ರದರ್ಶನ ನೀಡುತ್ತಾ ಹೋಗುತಿದ್ದರು. ಅವರ ಹಿಂದೆ ಮೂರು ಜನರ ಸಾಲಿನಲ್ಲಿ ಸಾವಿರಾರು ವಿದ್ಯಾರ್ಥಿಗಳು. ೨೦ ಮಕ್ಕಳ ಗುಂಪಿಗೆ ಒಬ್ಬ ಘೋಷಣೆ ಕೂಗುವ ಮುಂದಾಳು, ಬಹುತೇಕರ ಕೈನಲ್ಲಿ  ಚಿಕ್ಕಚಿಕ್ಕ ಧ್ವಜಗಳು. ಮಾಳಿಗೆಯ ಮೇಲೆ ನಿಂತು ನೋಡುವವರಿಗೆ ರಸ್ತೆಯಲ್ಲಿ ಮೂರುಬಣ್ಣದ ಅಲೆ ಸಾಗುತ್ತಿರುವಂತೆ ಕಾಣುತಿತ್ತು. ಅವನು `ಭಾರತಮಾತಾ ಕಿ, ಮಹಾತ್ಮ ಗಾಂಧಿ ಕಿ, ಜವಹರಲಾಲ್ ನೆಹರೂ ಕಿ, ಸುಭಾಷ್‌ ಚಂದ್ರ ಬೋಸ್‌ ಕಿ' ಎಂದರೆ ಉಳಿದವರೆಲ್ಲ ಜೈ ಎನ್ನುವರು. ಆಗ ನನಗೆ ಹೆಸರುಗಳ ವಿಶೇಷ ತಿಳಿದಿತ್ತು. ಆದರೆ  'ಕೀ' ಅಂದರೇನು ಎಂದು ಅರ್ಥವೆ ಆಗಿಲಿಲ್ಲ. ಸಾಬರ ಗೆಳೆಯರು ಉರ್ದುವಿನಲ್ಲಿ ಬೈಯುವಾಗ ತೆರಿ......ಕಿ ಎಂದು ಬಳಸುವುದು ಗೊತ್ತಿತ್ತು. ಆದರೂ `ಕೀ' ಎಂದಾಗಲೆಲ್ಲ ಜೋರಾಗಿ ಜೈ ಎನ್ನುತ್ತಿದ್ದೆವು
ಇನ್ನೊಂದು ಜನಪ್ರಿಯ 'ಘೋಷಣೆ ಒಂದೆಮಾತರಂ' ಲೀಡರು `ಒಂದೆ' ಎಂದರೆ ಸಾಮೂಹಿಕವಾಗಿ ನಾವೆಲ್ಲ `ಮಾತರಂ' ಎಂದು ಕೂಗುವುದು ಬಹು ಖುಷಿಯ ವಿಷಯ. ಇನ್ನು ಒಂದೆ ಮಾತರಂ ಎಂದಾಗ, ಕೆಲವರ ಎರಡೆ ಮಾತರಂ, ಮೂರೆ ಮಾತರಂ ಯಾಕೆ ಅಲ್ಲ ಎಂಬ ಪ್ರಶ್ನೆಗೆ ನಮಗೆ ಉತ್ತರ ಗೊತ್ತಿರಲಿಲ್ಲ ನಂತರ ಗೊತ್ತಾಯಿತು ಅದು ಬಂಗಾಲಿ ಭಾಷೆ. ಒಂದೆ ಎಂದರೆ ನಮಿಸುವೆ ಮತ್ತು ಮಾತರಂ ಎಂದರೆ ತಾಯಿ ಎಂದು. ಅರ್ಥ ಗೊತ್ತಿಲ್ಲದಿದ್ದರೂ ಆರ್ಭಟಕ್ಕೆ ಕೊರತೆ ಇರಲಿಲ್ಲ. ಮೆರವಣಿಗೆ ಹೋಗುತ್ತಿರುವಾಗ ನಮ್ಮ ಮನೆಯವರು ನಿಂತು ನೋಡುವುದು ಕಂಡರೆ ಉತ್ಸಾಹ ಉಕ್ಕೇರುತಿತ್ತು ಆಗ ಗಂಟಲು ಹರಿವ ತನಕ ಕೂಗಿದ್ದೆ ಕೂಗಿದ್ದು. ಅದನ್ನು ಕೇಳಿ ಅಮ್ಮ, ಅಪ್ಪ, ಅಕ್ಕಂದಿರ ಖುಷಿ ಹೇಳತೀರದು. ಜತೆಗೆ ದೇಶ ಭಕ್ತಿಗೀತೆಗಳ ಸಾಮೂಹಿಕ ಗಾಯನ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸುತ್ತಿ ಎಲ್ಲರೂ ನಮ್ಮ ಮೈದಾನದಲ್ಲಿ ಸೇರಿ ಸಾಮೂಹಿಕ ಧ್ವಜಾಆರೋಹಣವಾಗುತಿತ್ತು. ಕೊನೆಯಲ್ಲಿ ಎಲ್ಲರಿಗೂ ವರ್ತಕ ಸಂಘದವರು ಲಾಡು ಹಂಚುತಿದ್ದರೂ. ಅದೂ ಎರಡೆರಡು. ಜತೆಗೆ ಶಾಲೆಯವರು ಹಂಚುವ ಪೆಪ್ಪರಮೆಂಟು ಬೇರೆ. ಆಗ ಬರಿ ಶಾಲೆ ಮಕ್ಕಳು ಮಕ್ಕಳು ಮಾತ್ರವಲ್ಲ ಸಾರ್ವಜನಿಕರೂ ಉತ್ಸಾಹದಿಂದ ಭಾಗವಹಿಸುತಿದ್ದರು. ಮೂರು ನಾಲಕ್ಕು ಮೈಲು ಸುತ್ತಿದರೂ ಆಯಾಸ, ಬೇಸರದ ಸುಳಿವೆ ಇರುತ್ತಿರಲಿಲ್ಲ.. ನಗರದಲ್ಲಿ ಸುತ್ತುವಾಗ ಮಕ್ಕಳನ್ನುನೋಡಲು ಅವರ ಮನೆಯವರು ಸಾಲುಗಟ್ಟಿ ನಿಲ್ಲವರು. ಪ್ರತಿಯೊಬ್ಬರೂ ಚಿಕ್ಕ ಚಿಕ್ಕ ಧ್ವಜ ಬೀಸುತ್ತಾ ಸಾಗುತಿದ್ದರೆ ಮಾಳಿಗೆಯ ಮೇಲೆ ನಿಂತು ನೊಡುವರಿಗೆ ಮೂರು ರಂಗಿನ ಅಲೆ ರಸ್ತೆಯಲ್ಲಿ ಚಲಿಸುವಂತೆ ಕಾಣವುದು. ಮನೆ ಹತ್ತಿರ ಬಂದಾಗ, ಮನೆಯವರನ್ನು ನೋಡಿದಾಗ ಘೋಷಣೆ ಕೂಗುವವರ ಹುಮ್ಮಸ್ಸು ಹೆಚ್ಚುತಿತ್ತು. ಜೈಕಾರ ಮುಗಿಲು ಮುಟ್ಟುತಿತ್ತು.
ಈಗ ರಾಷ್ಟ್ರೀಯ ಹಬ್ಬಗಳು ಕಾಟಾಚಾರದ ಸರ್ಕಾರಿ ಆಚರಣೆಯಾಗಿವೆ. ಎಲ್ಲ ಕಡೆ ಧ್ವಜಾರೋಹಣ ಇಲಾಖೆಯ ಆದೇಶದ ಪ್ರಕಾರ ಕಡ್ಡಾಯ. ಪರಿಣಾಮವಾಗಿ. ಹರಿದ ಧ್ವಜ ಹಾರಿಸುವುದು, ತಲೆಕೆಳಗಾಗಿ ಹಾರಿಸುವುದು, ರಾತ್ರಿಯಾದರೂ ಧ್ವಜ ಇಳಿಸದಿರುವುದು, ಧ್ವಜಾರೋಹಣದಲ್ಲೂ ರಾಜಕೀಯ ಮಾಡುವುದು ಕಂಡು ಬರುತ್ತಿದೆ ಕಾರಣ. ದುಡಿಯದೆ ದೊರೆತುದರ ಬೆಲೆ ಅರಿಯುವುದಾದರೂ ಹೇಗೆ ಸಾಧ್ಯ? ಈಗ ಆಚರಣೆಯ ಆಡಂಬರ ಹೆಚ್ಚಿದೆ. ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದು.. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಆಕರ್ಷಕ ಸ್ತಬ್ಧ ಚಿತ್ರಗಳೂ ಇರುವವು. ಆದರೆ ಜನರ ಆಸಕ್ತಿ ಕಡಿಮೆಯಾಗಿದೆ. ಮಕ್ಕಳಿಗೆ ಮೊದಲಿನ ಉತ್ಸಾಹ ಇಲ್ಲ. ಸಾರ್ವಜನಿಕರಂತೂ ಸರೆ ಸರಿ. ಬಹುತೇಕರು ರಜೆ ಎಂದು ಸಿನೆಮಾ, ಪಿಕ್‌ನಿಕ್‌ ಪಾರ್ಟಿ ಮಾಡಲು ಯೋಜನೆ ಹಾಕುವರು.. ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರ ನೆನಪು ಮಾಸುತ್ತಿದೆ. ಕಾಲನ ಕಾಲ್ತುಳಿತಕ್ಕೆ ಕರುಣೆ ಇರದು.


No comments:

Post a Comment