Monday, August 20, 2012

ನಾಗಮಣಿ ಸಿಕ್ಕಿದ ಪ್ರಸಂಗ


ಬೆ
ಳಗ್ಗೆ ಎದ್ದೊಡನೆ ಶಾಲೆಗೆ ಹೋಗಲು ಅವಸರ ಮಾಡಿದೆ. ಗಬಗಬ ಊಟಮಾಡಿ ಹೆಗಲಿಗೆ ಚೀಲ ಏರಿಸಿ ಹೊರಟೆ. ಗಿರಿಯೂ ಬಂದು ಜತೆಗೂಡಿದ. ನಾವು ಬೇರೆ ಯಾರಿಗೂ ಕಾಯಲಿಲ್ಲ. ಕೆಮ್ಮಣ್ಣು ಕುಣಿಯ ಹತ್ತಿರ ಬಂದಾಗ ಆತುರದಿಂದ ಕಳ್ಳಿಸಾಲಿನ ಹತ್ತಿರ ಹೋದೆವು. ಅಲ್ಲಿ ಏನೂ ಕಾಣಲಿಲ್ಲ. ರಾತ್ರಿ ನೋಡಿದ್ದು ನಿಜವೆ, ಎಂಬ ಅನುಮಾನ ಮೂಡಿತು. ಏನೆ ಆಗಲಿ ಇಂದು ಖಚಿತ ಪಡಿಸಿಕೊಳ್ಳೋಣ ಎಂದು ಮಾತನಾಡಿ ಕೊಂಡೆವು. ಅಂದು ಶಾಲೆ ಹೊತ್ತಿಗೆ ಸರಿಯಾಗಿಬಿಟ್ಟಿತು. ನಮ್ಮ ಊರಿನ ಹುಡುಗರೆಲ್ಲ ಹೊರಟರು. ನಾವು ಬೇಕೆಂದೆ ಹಿಂದೆ ಉಳಿದೆವು. ಮೈದಾನದಲ್ಲಿ ನಡೆಯತಿದ್ದ ಫುಟ್‌ ಬಾಲ್ ಆಟ ನೋಡುತ್ತಾ ನಿಂತೆವು. ಕತ್ತಲಾಯಿತು ಆಗ ಹೊರಟೆವು. ಯಥಾರೀತಿ ಕೆಮ್ಮಣ್ಣು ಕುಣಿಯ ಹತ್ತಿರ ಬಂದು ಆತುರದಿಂದ ಕಣ್ಣು ಹಾಯಿಸಿದರೆ ಮಣಿ ಅಲ್ಲೆ ಹೊಳೆಯುತ್ತಾ ಇತ್ತು. ಆದರೆ ಜಾಗ ತುಸು ಬದಲಾಯಿಸಿತ್ತು. ನಮಗಂತೂ ಖಚಿತವಾಯಿತು ಅದು ನಾಗರತ್ನ ಎಂದು. ಒಂದು ಕ್ಷಣ ಏನೂ ತೋಚಲಿಲ್ಲ. ಎರಡು ನಿಮಿಷ ನಿಂತು ನೋಡಿ ಮನೆಗೆ ಹೊರಟೆವು.
ರಾತ್ರಿ ಎಲ್ಲ ಅದೆ ಕನಸು. ಬೆಳಗಾಗುವುದೆ ತಡ ಗಿರಿಯ ಮನೆಗೆ ಓಡಿದೆ. ಎಲ್ಲಿ ಹೋಗುತ್ತಿರುವೆ? ಎಂಬ ಅಮ್ಮನ ಮಾತಿಗೆ ಇಲ್ಲೆ ಗಿರಿಯ ಹತ್ತಿರ ಪುಸ್ತಕ ಬೇಕಿದೆ ಈಗ ಬರುತ್ತೇನೆ, ಎನ್ನುತ್ತಾ ಓಡಿದೆ. ಅವನೂ ಆಗಲೆ ಎದ್ದು ಕೂತಿದ್ದ. ನನ್ನನ್ನು ನೋಡಿದ ಅವನು ಹಾರಗ್ಗಾಲಲ್ಲಿ ನನ್ನತ್ತ ಓಡಿ ಬಂದ. ಇಬ್ಬರೂ ಸೇರಿ ಮರೆಗೆ ಹೋಗಿ ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಅನರ್ಘ್ಯ ರತ್ನ ನಮ್ಮಿಬ್ಬರ ಕಣ್ಣಿಗೆ ಮಾತ್ರ ಬಿದ್ದಿದೆ. ನಾವೆ ಅದೃಷ್ಟವಂತರು ಎಂದು ಹೆಮ್ಮೆಯಾಯಿತು. ಆದರೆ ಏನು ಉಪಯೋಗ. ಅದನ್ನು ಪಡೆಯುವ ಬಗೆ ಹೇಗೆ. ನಮ್ಮಿಂದ ಅಂತೂ ಕಬ್ಬಿಣದ  ಮುಳ್ಳುಗಳ ಬುಟ್ಟಿ ಮಾಡಿಸಲಾಗುವುದಿಲ್ಲ. ಇನ್ನೊಬ್ಬರಿಗೆ ಹೇಳುವ ಹಾಗಿಲ್ಲ. ಇಬ್ಬರೂ ತಲೆ ಕೆರೆದುಕೊಂಡೆವು. ಶಾಲೆಗೆ ಹೋಗುತ್ತಾ ಯೋಚಿಸೋಣ ಎಂದು ತೀರ್ಮಾನಿಸಿದೆವು.
ಮನೆಗೆ ಹೋದವನೆ, ಅಮ್ಮಾ, ಬೇಗ ಬೇಗ ಊಟ ಹಾಕು, ಎಂದು ಗಡಿ ಬಿಡಿ ಮಾಡಿದೆ. ಇನ್ನೂ ಹೊತ್ತಾಗಿಲ್ಲ ಯಾಕಿಷ್ಟು ಅವಸರ, ಎಂದ ಅಮ್ಮನಿಗೆ, ಇಲ್ಲ ಇವತ್ತು ಶಾಲೆಗೆ ಬೇಗ ಹೋಗಬೇಕು, ಮೇಷ್ಟ್ರು ಹೇಳಿದ್ದಾರೆ ಎಂದು ಹಿಂದುಮುಂದು ನೋಡದೆ ಸುಳ್ಳು ಹೇಳಿದೆ. ಸರಿಯಪ್ಪಾ, ನೀನೋ ನಿನ್ನ ಮಾಷ್ಟ್ರೋ ಏನಾದರೂ ಮಾಡಿಕೋ, ಬಿಸಿ ಅನ್ನ ಬಾಯಿ ಸುಟ್ಟೀತು ಹುಷಾರಾಗಿ ತಿನ್ನು, ಎಂದರು. ಅವರ ಮಾತು ಕಿವಿಯ ಮೇಲೆ ಹಾಕಿಕೊಳ್ಳದೆ ಗಬಾಗಬಾ ಊಟ ಮಾಡಿ ಪಾಟಿ ಚೀಲ ಹೆಗಲಿಗೆ ಏರಿಸಿ ಅಂಗಳದೊಳಗೆ ಬರುಷ್ಟರಲ್ಲೆ ಗಿರಿಯೂ ಹಾಜರಾದ.  ಇಬ್ಬರೂ ಹೆಗಲ ಮೇಲೆ ಕೈ ಹಾಕಿಕೊಂಡು ಹೊರಟೆವು. ಕೆಮ್ಮಣ್ಣ ಕುಣಿಯ ಹತ್ತಿರ ಉಸಿರು ಬಿಗಿ ಹಿಡಿದು ನೋಡಿದೆವು. ಅಲ್ಲಿ ಏನೂ ಇಲ್ಲ .ಈಗ ನಮಗೆ ಖಚಿತವಾಯಿತು ಸರ್ಪ ರಾತ್ರಿ ಮಾತ್ರ ಬರುವುದು..  ಅಲ್ಲಿಯ ಹತ್ತಿರದ ಮರದ ಕೆಳಗೆ ಕೂತು ಯೋಚನೆ ಮಾಡಿದೆವು.
`ಅಪ್ಪ ಅಮ್ಮಗೆ ಹೇಳೋಣ. ಅವರು ಏನಾದರೂ ಮಾಡಬಹುದು' ಗಿರಿ ಹೇಳಿದ. ಯಾರ ಅಪ್ಪ ಅಮ್ಮಗೆ ಹೇಳಬೇಕು, ಅಲ್ಲದೆ ಅವರು ನಂಬುವರೆ. ಹುಡುಗರು ಎಂದು ಹಾಸ್ಯ ಮಾಡಬಹುದು.. ಅವರು ತಡಮಾಡಿದರೆ ಸರ್ಪ ಬೇರೆ ಕಡೆ ಹೋಗಬಹುದು. ಏನಾದರೂ ಮಾಡಿ ನಾವೆ ಆ ಮಣಿಯನ್ನು ವಶ ಮಾಡಿಕೊಳ್ಳಬೇಕು ಯಾರಿಗೂ ಹೇಳೋದು ಬ್ಯಾಡ ಎಂದು ನಿರ್ಧರಿಸಿದೆವು.
ಸರ್ಪವನ್ನಂತೂ ಹೊಡೆಯುವ ಮಾತೆ ಇಲ್ಲ.. ಇನ್ನು ಕದ್ದು ಓಡುಬಹುದೆಂದರೆ ಅದು ಬೆನ್ನಟ್ಟಿ ಬಂದು ಕಚ್ಚುವುದು. ಅದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಬಲಪ್ರಯೋಗದಿಂದ ಪಡೆಯಲಾಗದು. ಮತ್ತೆ ಹೇಗೆ ಮಾಡಬೇಕೆಂದು ಹೊಳೆಯಲಿಲ್ಲ. ಕೊನೆಗೆ ಗಿರಿ ಒಂದು ಉಪಾಯ ಹೇಳಿದ. ಮಣಿಯಮೇಲೆ ಏನಾದರೂ ಹಾಕಿ ಅದು ಸರ್ಪಕ್ಕೆ ಕಾಣದಂತೆ ಮಾಡಿ, ಓಡಿ ಹೋಗುವುದು. ಅದು ಹುಡುಕಿ ಹುಡುಕಿ ಬೆಳಗಿನ ಹೊತ್ತಿಗೆ ಹೊರಟು ಹೋದಾಗ ಬಂದು ತೆಗೆದುಕೊಂಡು ಹೋಗುವುದು. ಅಕಸ್ಮಾತ್‌ ಅದು ಅಲ್ಲಿಯೇ ಸುಳಿದಾಡುತ್ತಿದ್ದರೆ ಹತ್ತಿರ ಹೋಗುವುದೆ ಬೇಡ.  ಉಪಾಯವೇನೋ ಸರಿ ಎನಿಸಿತು ಆದರೆ ಆ ರತ್ನದ ಕಾಂತಿ ಕಾಣದಂತೆ ಏನು ಹಾಕುವುದು? ಮಣ್ಣನ್ನಂತೂ ಹಾಕಲಾಗುವುದಿಲ್ಲ. ಅದರಿಂದ ಕಾಂತಿ ಹೊರ ಬರುವುದು. ಬಟ್ಟೆ ಹಾಕಿದರೆ ಉಪಯೋಗವಿಲ್ಲ. ಸುಲಭವಾಗಿ ಸರಿಸಬಹುದು. ಏನು ಮಾಡಲು ತೋಚದೆ ಯೋಚಿಸುತ್ತಾ  ಕುಳಿತವು. ಆಗ ನಮ್ಮೆದುರು ಹೋಗುತಿದ್ದ ಒಂದು ಎಮ್ಮೆ ತೊಪತೊಪನೆ ಸೆಗಣಿ ಹಾಕಿತು. ತಕ್ಷಣವೆ ಹೊಳೆಯಿತು. ಆ ಮಣಿಯ ಮೇಲೆ ಸೆಗಣಿ ಹಾಕಿ ಓಟ ಕಿತ್ತುವುದು. ನಂತರ ಮುಂದಿನ ಮಾತು. ಕೊನೆಗೆ ಆ ಯೋಜನೆ ಎಲ್ಲಕ್ಕಿಂತ ಉತ್ತಮ ಎನಿಸಿದ್ದರಿಂದ ಅಂದೆ ರಾತ್ರಿ ಆ ಕೆಲಸ ಮಾಡಲು ನಿರ್ಧರಿಸಿದೆವು.
ಶಾಲೆಗೆ ಹೋದ ಮೇಲೂ ನಾನು ಅದೆ ಗುಂಗಿನಲ್ಲಿ ಕುಳಿತೆ. ಶಾಲೆಯಲ್ಲಿ ಮಾಷ್ಟ್ರಿಂದ ಬೈಗಳು ತಿನ್ನಬೇಕಾಯಿತು. ಅವರು ಕೇಳಿದ ಪ್ರಶ್ನೆಗೆ ನಾನು ಪರಧ್ಯಾನದಲ್ಲಿ ಏನೋ ಉತ್ತರ ಕೊಟ್ಟೆ. ಇಲ್ಲಿ ಕುಳಿತು ಏನು ನಕ್ಷತ್ರ ಎಣಿಸುತ್ತಿರುವೆಯಾ ಎಂದು ಕಿವಿ ಹಿಂಡಿದರು. ಆದಿನ ಪೂರ್ತಿ ಏನು ಪಾಠ ಮಾಡಿದರೋ ನನ್ನ ತಲೆಗಂತೂ ಹೋಗಲೆ ಇಲ್ಲ. ಬೆಲ್ಲು ಹೊಡೆಯುವುದನ್ನೆ ಕಾಯುತ್ತಾ ಕುಳಿತೆ. ಕೊನೆಯ ಬೆಲ್ಲಾಗುತ್ತಲೆ ಚಂಗನೆ ತರಗತಿಯಿಂದ ಹೊರಬಂದೆ. ಗಿರಿ ಆಗಲೆ ಬಂದಿದ್ದೆ. ಈಗ ನಮ್ಮ ಯೋಜನೆ ಕಾರ್ಯಗತ ಮಾಡುವ ವಿಧಾನದ ಕುರಿತು ಯೋಚಿಸ ತೊಡಗಿದೆವು. ಮೊದಲು ಸೆಗಣಿ ಸಂಗ್ರಹಿಸಬೇಕಿತ್ತು. ಸೆಗಣಿಗೇನೂ ಬರವಿರಲಿಲ್ಲ. ಹಾದಿಯುದ್ದಕ್ಕೂ ಒಂದಲ್ಲ ಒಂದು ದನ ಸೆಗಣಿ ಹಾಕುತ್ತವೆ. ಆದರೆ ಎರಡು ಬೊಗಸೆಯಷ್ಟು ಸೆಗಣಿಯನ್ನು ಮೂರು ಮೈಲು ಹೇಗೆ ಒಯ್ಯುವುದು?
ಗಿರಿ ಮಹಾತ್ಯಾಗಕ್ಕೆ ಮುಂದಾದ. ಅವನ ಪುಸ್ತಕಗಳನ್ನು ನನ್ನ ಚೀಲದಲ್ಲೆ ಇಟ್ಟುಕೊಂಡರೆ ತನ್ನ ಚೀಲದಲ್ಲಿ ಸೆಗಣಿ ಹಾಕಿಕೊಳ್ಳುವುದಾಗಿ ಹೇಳಿದ. ಅವನ ಜಾಣತನಕ್ಕೆ ನಾನು ತಲೆ ತೂಗಿದೆ. ತಕ್ಷಣ ಅವನ ಎಲ್ಲ ಪುಸ್ತಕಗಳನ್ನೂ ನನ್ನ ಚೀಲದಲ್ಲೆ ತುರುಕಿದೆ. ಚೀಲ ಬಸುರಿ ಹೆಂಗಸಿನ ಹೊಟ್ಟೆಯಂತೆ ಉಬ್ಬಿತು.ಚೀಲ ಹರಿಯುವುದೇನೋ ಎನಿಸಿತು. ಏನೂ ಪರವಾಇಲ್ಲ. ನಾವು ಸಾಧಿಸಬೇಕಾದ ಮಹಾನ್‌ ಕೆಲಸದ ಮುಂದೆ ಇವೆಲ್ಲ ಏನು, ಎಂದು ಸಮಾಧಾನ ಮಾಡಿಕೊಂಡೆ. ದಾರಿಯಲ್ಲಿ ಹೋಗುವಾಗ ಎಲ್ಲಿ ದನ ಕಂಡರೆ ಅಲ್ಲಿ ನಿಲ್ಲುತ್ತಿದ್ದೆವು. ಎರಡು ಮೂರು ಕಡೆ ಏನೂ ಫಲ ಸಿಗಲಿಲ್ಲ. ಕೊನೆ ನಾಲಕ್ಕಾರು ದನಗಳು ಬರುತ್ತಲಿದ್ದವು ಅವುಗಳಲ್ಲಿ ಎರಡು ಸೆಗಣಿ ಹಾಕಿದವು. ಆತುರಾತುರದಿಂದ ಬಿಸಿ ಬಿಸಿ ಶೆಗಣಿ ಸಂಗ್ರಹಿಸಿದೆವು. ನಮ್ಮ ಮುಖ ಊರಗಲ ಆಯಿತು. ಕತ್ತಲಾಗುವ ತನಕ ಕಾದು ನಂತರ ಮೆಲ್ಲಗೆ ಊರ ಕಡೆ ಹೊರಟೆವು. ಕೆಮ್ಮಣ್ಣು ಕುಣಿ ಹತ್ತಿರ ಬಂದಂತೆ ಎದೆ ಬಡಿತ ಹೆಚ್ಚಾಯಿತು.
ಗಿರಿ, `ಬೇಡ ಕಣಪ್ಪಾ ಹಾವಿನ ಸಹವಾಸ, ಸುಮ್ಮನೆ ಮನೆಗೆ ಹೋಗೋಣ. ಇದರ ಗೊಡವೆಯೆ ಬೇಡ' ಎಂದು ತಲೆ ಕೊಡವಿದ.
`ನೀನು ಪುಕ್ಕಲ. ಏನೂ ಆಗುವುದಿಲ್ಲ ಬಾ. ನಾವು ಮಣಿ ಕೈಗೆ ಬರುವ ಸಮಯದಲ್ಲಿ ಹಿಂದೆ ಸರಿಯುವುದೆ. ನೀನು ನನ್ನ ಚೀಲ ಹಿಡಿದು ದೂರ ನಿಂತುಕೋ. ನಾನೊಬ್ಬನೆ ಹೋಗಿ ಸೆಗಣಿಯನ್ನು ಅದರ ಮೇಲೆ ಹಾಕಿ ಬರುವೆ. ತಕ್ಷಣ ಅಲ್ಲಿಂದ ಓಡೋಣ' ಅವನನ್ನು ಒಪ್ಪಿಸಿದೆ. ಕೆಮ್ಮಣ್ಣು ಕುಣಿ ಹತ್ತಿರ ಬಂದಿತು.
ನಮಗೆ ಒಂದು ಅನುಮಾನ. ಸರ್ಪ ಇವತ್ತು ಬರದೆ ಇದ್ದರೆ ಹೇಗೆ? ಹಾಗೇನಾದರೂ ಬರದಿದ್ದರೆ ನಮಗೆ ಅದೃಷ್ಟವಿಲ್ಲ, ಎಂದು ತೆಪ್ಪಗೆ ಮನೆಗೆ ಹೋಗೋಣ. ಎಂದು ಸಮಾಧಾನ ಮಾಡಿಕೊಂಡೆವು. ದೇವರನ್ನುನೆನಸುತ್ತಾ ಹತ್ತಿರ ಹೋದೆವು. ನಾಗರತ್ನ ಯಥಾರೀತಿ ಕಳ್ಳಿಯ ಗಿಡದ ಕೆಳಗೆ ಫಳ ಫಳ ಹೊಳೆಯುತಿತ್ತು. ನಾನು ಗಿರಿಯನ್ನು, `ಚೀಲ ಹಿಡಿದು ದೂರ ನಿಂತಿರು. ಅದರ ಮೇಲೆ ಶೆಗಣಿ ಹಾಕಿದ ತಕ್ಷಣ ನಾನು ಓಡಿ ಬರುವೆ. ಇಬ್ಬರೂ ಅಲ್ಲಿಂದ ಓಡಿ ಬಿಡೋಣ. ಸರ್ಪಕ್ಕೆ ಯಾವುದೆ ಸುಳಿವು ಸಿಗಬಾರದ' ತಿಳಿ ಹೇಳಿದೆ.
ಅವನು ದೂರ ಹೋದ. ನಾನು ಸೆಗಣಿಯನ್ನು ಎರಡೂ ಕೈನಲ್ಲಿ ಹಿಡಿದು ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಸದ್ದಾಗದ ಹಾಗೆ ಅದರತ್ತ ಸರಿದೆ. ಹತ್ತರ ಬಂದ ಕೂಡಲೆ ಎರಡೂ ಕೈತುಂಬ ಇದ್ದ ಹಸಿ ಸೆಗಣಿಯನ್ನುಥಳ ಥಳ ಹೊಳೆಯುತಿದ್ದ ಅದರ ಮೇಲೆ ಹಾಕಿದೆ. ಅದರ ಬೆಳಕು ಕಾಣದಾಯಿತು. ನಾನು  ಚೀಲದಲ್ಲಿದ್ದ ಉಳಿದ ಸೆಗಣಿಯನ್ನುಅದರ ಮೇಲೆ ಸುರಿದು ಅಲ್ಲಿಂದ ಒಂದೆ ಉಸುರಿಗೆ ಓಡಿದೆ. ಗಿರಿಯ ಹತ್ತಿರವೂ ನಿಲ್ಲಲಿಲ್ಲ. ಕಡೆಯ ಅಗಸಿಯವರೆಗೆ ದಮ್ಮು ಹಿಡಿದು ಓಡಿದೆ.
ಗಿರಿಯು `ತಡೆ, ತಡೆ, ಏನಾಯಿತು?' ಎಂದು ಕೇಳುತ್ತಾ ಹಿಂಬಾಲಿಸಿದ. ಏದುಸಿರು ಬಿಡುತ್ತಾ ಊರ ಗುಡ್ಡೆಕಲ್ಲಿನ ಹತ್ತಿರ ಬಂದೆವು. ಅಲ್ಲಿ ಸೆಗಣಿಹತ್ತಿದ ಚೀಲವನ್ನು ಏನು ಮಾಡಬೇಕು ಎಂದು ಚಿಂತೆಯಾಯಿತು. ನಮ್ಮ ಮನೆಯಲ್ಲಿದೆ ಎಂದು ಹೇಳು. ನಾಳೆ ಒಣಗಿಸಿದ ಮೇಲೆ ಎನಾದರೂ ಹೇಳ ಬಹುದು ಎಂದು ಅವನಿಗೆ ತಿಳಿಹೇಳಿದೆ.. ಅಂತೂ ಘನ ಕಾರ್ಯ ಸಾಧಿಸಿ ಮನೆ ಸೇರಿದೆ. ಪುಣ್ಯಕ್ಕೆ ನಾನು ಮನೆಗೆ ಬಂದಾಗ ಅಮ್ಮ ಅಡುಗೆ ಮನೆಯಲ್ಲಿದ್ದಳು. ಬೇರೆ ಯಾರೂ ಗಮನಿಸಲಿಲ್ಲ
ರಾತ್ರಿ ಕಣ್ಣಿಗೆ ಕಣ್ಣು ಹತ್ತಲಿಲ್ಲ. ತುಸು ಕಣ್ಣು ಮುಚ್ಚಿದರೆ ಸರ್ಪ ಭುಸ್‌ಎಂದಂತೆ ಕೇಳುತಿತ್ತು. ಅಮ್ಮನನ್ನುಗಟ್ಟಿಯಾಗಿ ಹಿಡಿದುಕೊಂಡು ನಿದ್ದೆ ಹೋದೆ.
ಬೆಳಗ್ಗೆ ಶಾಲೆಗೆಂದು ಹೊರಟೆವು ಅಲ್ಲಿ ಬಂದು ನೋಡಿದಾಗ ಕಳ್ಳಿಗಿಡದ ಬೊಡ್ಡೆಯಲ್ಲಿ ನಾವು ಹಾಕಿದ್ದ ಸೆಗಣಿಯ ರಾಶಿ ಹಾಗೆಯೇ ಇತ್ತು. ಅದನ್ನುಅಲುಗಿಸಿದ ಗುರುತೂ ಇರಲಿಲ್ಲ. ಗಿರಿ ಈಗಲೆ ನೋಡೋಣ ಎಂದ. ನಾನು ಮುನ್ನಚ್ಚರಿಕೆಯಿಂದ ಈಗ ಬೇಡ ಎಂದೆ. ಯಾರಿಗೆ ಗೊತ್ತು ಸರ್ಪ ಕಾಯುತ್ತಿಬಹುದು. ಸಂಜೆ ಬಂದು ನೋಡೋಣ ಎಂದುಕೊಂಡೆವು. ಶಾಲೆಗೆ ಹೊರಟೆವು..
ಆದರೆ ಗಿರಿ `ಸಂಜೆಯ ತನಕ ಕಾಯುವುದು ಬೇಡ. ಮಧ್ಯಾಹ್ನವೆ ಶಾಲೆಗೆ ಚಕ್ಕರ್‌ ಹೊಡೆದು ಬಂದು ಬಿಡೋಣ. ನಾಗಮಣಿ ದೊರಕುವಾಗ ಅರ್ಧ ದಿನ ಶಾಲೆ ಹೋದರೆ ಏನಂತೆ? ಮಾರನೆ ದಿನ ಏನಾದರೂ ಕಾರಣ ಕೊಟ್ಟರಾಯಿತು ಕಣ್ಣ ಬೆಳಕು ಇದ್ದಾಗಲೆ ಅದನ್ನು ತೆಗೆದು ಕೊಳ್ಳವುದು ಉತ್ತಮ' ಎಂದು ಸಲಹೆ ನೀಡಿದ.ನನಗೆ ಅವನ ಸಲಹೆ ಸರಿ ಎನಿಸಿತು
ಮಧ್ಯಾಹ್ನ ಊಟದ ಗಂಟೆಯಾದ ಮೇಲೆ ಮೆಲ್ಲಗೆ ಮನೆ ಕಡೆ ಹೊರಟೆವು. ನಾವು ಕೆಮ್ಮಣ್ಣು ಕುಣಿ ಹತ್ತಿರ ಬಂದಾಗ ಮೂರವರೆ ಸಮಯ. ಸುತ್ತ ಮುತ್ತ ನೋಡಿದೆವು ಯಾರೂ ಇರಲಿಲ್ಲ. ಸರ್ಪದ ಸುಳಿವೂ ಕಾಣಲಿಲ್ಲ. ನಾವು ಹಾಕಿದ ಸೆಗಣಿ ಗುಡ್ಡೆ ಹಾಗೆಯೆ ಇತ್ತು ಮೇಲೆ ತುಸು ಒಣಗಿತ್ತು. ನಾನು ಗಿರಿಯನ್ನು ಕಾಯಲು ನಿಲ್ಲಿಸಿ ಕೋಲೊಂದನ್ನು ತೆಗೆದುಕೊಂಡು ಕಳ್ಳಿಗಿಡದ ಬುಡದಲ್ಲಿನ ಸೆಗಣಿ ಕೆದಕ ತೊಗಿದೆ. ಅಲ್ಲಿ ಏನೂ ಕಾಣಲಿಲ್ಲ. ನನಗೆ ನಿರಾಶೆಯಾಯಿತು. ಮಣಿಯ ಮೇಲೆ ಸರಿಯಾಗಿ ಸೆಗಣಿ ಹಾಕಿದ ನೆನಪು ನನಗೆ ಇದೆ. ಸೆಗಣಿರಾಶಿಯೂ ಚದುರಿಲ್ಲ. ಹಾಗಿದ್ದರೆ ಮಣಿ ಹೇಗೆ ಮಾಯವಾಯಿತು ಗೊತ್ತೆ ಆಗಲಿಲ್ಲ. ಆದದ್ದಾಗಲಿ ಎಂದು ಕೈ ಬೆರಳನ್ನು ಹಾಕಿ ಹಾಕಿ ಸೆಗಣಿಯನ್ನು ಪೂರ್ತಿ ಜಾಲಾಡಿದೆ. ಕೊನೆಗ ಗುಡಗಿನ ವಸ್ತು  ಸಿಕ್ಕಿತು. ಓಹೋ ಸಿಕ್ಕಿತು! ಎಂದು ಕೂಗುತ್ತಾ ಗಿರಿಯ ಹತ್ತಿರ ಬಂದೆ. ಅವನಿಗೂ ಬ್ರಹ್ಮಾನಂದವಾಗಿತ್ತು. ಅದನ್ನು ಎಚ್ಚರಿಕೆಯಿಂದ ಕುಣಿಯಲ್ಲಿದ್ದ ನೀರಿನಲ್ಲಿ ತೊಳೆದೆವು. ಅದು ಮಣಿಯೂ ಅಲ್ಲ, ಮಣ್ಣೂ ಅಲ್ಲ. ಜೀರಂಗಿಯಂತಹ ಒಂದು ಹುಳ, ನಾನು ಸೆಗಣಿ ಹಾಕಿದ ರಭಸಕ್ಕೆ ಅದರೊಳಗೆ ಸಿಕ್ಕ ಸತ್ತು ಹೋಗಿತ್ತು. ಇಬ್ಬರೂ ಒಬ್ಬರ ಮುಖ ಒಬ್ಬರು ಮಿಮಿಕಿ ನೋಡಿದೆವು. ನಮ್ಮ ಮಡ್ಡು ತಲೆಗೆ ಆಗ ಹೊಳೆಯಿತು. ನಾವು ರಾತ್ರಿಯಲ್ಲಿ ನೋಡಿದ್ದು ನಾಗಮಣಿಯಲ್ಲ. ಮಿಂಚಿನ ಹುಳದ ಜಾತಿಯ ಆದರೆ ತುಸು ದೊಡ್ಡದಾದ ಕೀಟ. ಅದು ಸಹ ಕತ್ತಲ್ಲಿ ಹೊಳೆವ ಬೆಳಕನ್ನು ಹೊರಹಾಕುತ್ತದೆ.. ಮೂರು ದಿನ ನಾಗರತ್ನ ಕುರಿತು ನಾವು  ಕನಸು ಕಂಡಿದ್ದೆವು. ಅದನ್ನು ಪಡೆಯಲು ಹರಸಾಹಸ ಮಡಿದ್ದೆವು ಆದರೆ ಈಗ ನಮ್ಮ ಕೈನಲ್ಲಿ ಮಣಿ ಇರಲಿಲ್ಲ. ಹಸಿ ಸೆಗಣಿ ಬಳಿದುಕೊಂಡ ಹುಳ ಇತ್ತು.

No comments:

Post a Comment