Monday, March 25, 2013

ಬೆಳೆಗೆರೆ  ಕೃಷ್ಣ ಶಾಸ್ತ್ರಿಗಳು  -ಗಾಂಧಿಯುಗದ ಕೊನೆಯ ಕೊಂಡಿ 


ಸುಮಾರು ಒಂದ ದಶಕದ ಹಿಂದೆ ನಿವೃತ್ತನಾಗಿ ಚಿತ್ರದುರ್ಗದಲ್ಲಿ ಮಗನ ಜೊತೆ ಇದ್ದೆ.ಒಂದು ದಿನ ಬೆಳಗ್ಗೆ ಬಿಳಿ ಜುಬ್ಬತೊಟ್ಟ ಬಿಳಿ ಧೋತರ ಉಟ್ಟ  ತಲೆಗೆ ಬಿಳಿ ಟವೆಲ್‌  ಸುತ್ತಿಕೊಂಡ ಗಾಂಧೀಜಿಯಂತೆ ಮುಖವೆಲ್ಲ ಮುಗುಳು ನಗೆಯಾದ ಹಲ್ಲಿಲ್ಲದ ಬಾಯಿಯ ,ಕೋಲು ಮುಖದ ಹಿರಿಯರೊಬ್ಬರು ಆಕಾಶವಾಣಿಯ ಬೇದ್ರೆ ಮಂಜುನಾಥರ ಜೊತೆಗೆ ಮನೆಗೆ ಬಂದರು..ಕುಳಿತಿದ್ದ ಮಗ ಧಡಕ್ಕನೆ ಎದ್ದು ಅವರಿಗೆ ಕೈ ಮುಗಿದ.,”ಬೆಳೆಗೆರ ಶಾಸ್ತ್ರಿಗಳು ಬರಬೇಕು, ಬರಬೇಕು “ ಎಂದು ಸ್ವಾಗತಿಸಿದ, ಯಾವುದೇ ಬಿಂಕ ಬಿಗುಮಾನ ಇಲ್ಲದೆ ಒಳ ಬಂದು ಕುಳಿತರು. ಹೊಸದಾಗಿ ಬಂದಿರುವಿರಂತೆ ಹೇಗಿದೆ ಜೀವನ ಎಂದು ಉಭಯ ಕುಶಲೋಪರಿ ವಿಚಾರಿಸಿದರು . “ಹಿಂದೂ ಪತ್ರಿಕೆಗೆ ಹೊಸದಾಗಿ ಜಿಲ್ಲಾವರದಿಗಾರರಾಗಿ ಬಂದಿರುವವರಿಗೆ  ಸಾಹಿತ್ಯ ಸಂಸ್ಕೃತಿಯಲ್ಲಿ ಆಸಕ್ತಿ ಇದೆ. ನಿಮ್ಮನ್ನು  ನೋಡ ಬೇಕು ಎಂದರು, ಹಾಗಾದರೆಗ ಸರಿ , ನಾವೆ ಹೋಗೋಣ ಎಂದು ಬಂದೆ.”  ಎಂದು.ನುಡಿದರು.. ಸಾಹಿತ್ಯ , ಜೀವನ, ಶಿಕ್ಷಣ ಎಲ್ಲದರ ಬಗ್ಗೆ ನಿರರ್ಗಳವಾಗಿ ಮಾತನಾಡಿದರು. ಮಹಾತ್ಮಗಾಂದೀಯವರ ಅಂತಿಮ ಕ್ಷಣ, ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿ,ಮಾಸ್ತಿಯವರಮೃದು ಮನಸ್ಸು, ಜಿಡ್ಡು ಕೃಷ್ಣ ಮೂರ್ತಿಯವರ ತತ್ವಜ್ಞಾನ ದವರೆಗೆ ಅವರ ಮಾತಿನ ವ್ಯಾಪ್ತಿ ಹರಡಿತ್ತು.ಅವರು ಬಳ್ಳಾರಿಯ ರವಿಬೆಳಗೆರೆಯವರ ಸೋದರಮಾವನೆಂದು ತಿಳಿದು ಇನ್ನೂ ಹತ್ತಿರವೆನಿಸಿತು ನಾನು ನಿವೃತ್ತ ಪ್ರಾಂಶುಪಾಲನೆಂದು ಗೊತ್ತಾಗಿ ಒಂದು ಸಲ ನಮ್ಮ  ಹಳ್ಳಿಯ ಶಾಲೆ ನೋಡಲು ಬನ್ನಿ ಎಂದು ಆಮಂತ್ರಣ ನೀಡಿದರು.ತಾವಾಗಿಯೇ ಬಂದು ಬಾಯ್ತುಂಬ ಮಾತನಾಡಿದ ಹಿರಿಯ ಜೀವದ ಸರಳತೆ ಮನ ಗೆದ್ದಿತುನಮ್ಮ ಮನೆಯಾಕೆ ನೀಡಿದ ತಿಂಡಿತಿನ್ನಲಿಲ್ಲ. ಒಂದುಲೋಟ ಹಾಲು ಮಾತ್ರ ಸೇವಿಸಿದರು.ಅವರ ದರ್ಶನದ ಭಾಗ್ಯ ಮತ್ತೆ ದೊರಕಿದ್ದು ಅವರ ಊರಿಗೆ ಹೋದಾಗ.
ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು ಎಂದರೆ ಚಿತ್ರ ದುರ್ಗ ಜಿಲ್ಲೆಯಲ್ಲಿ  ಮನೆ ಮಾತು. ಎಲ್ಲರಿಗೂ ಬೇಕು. ಸಾತ್ವಿಕ ಜೀವನದ ಇನ್ನೊಂದು ಹೆಸರು. ಒಂದುರೀತಿಯಲ್ಲಿ ನಡೆದಾಡುವ ಗಾಂಧಿ. ಅವರು ವಿಶ್ವ ಕುಟುಂಬಿಗಳು. ಜಾತಿಮತಗಳ ಗೋಜುಇಲ್ಲ . ಹಿರಿಕಿರಿಯರೆಂಬ ಬೇಧವಿಲ್ಲ. ಯಾವುದೇ ಸಾಹಿತ್ಯಕಾರ್ಯಕ್ರಮವಿದ್ದರೆ ಹಾಜರು..ಎತ್ತಿದವರ ಕೈ ಕೂಸು.. ಮಾಕಂ ಸೆಟ್ಟರು, ಕಾಳಿಂಗ ಕೃಷ್ಣ, ಬೇದ್ರೆ, ಹುಸೆನ್‌ ಸಾಬ್,ಸಿದ್ದಯ್ಯ  ಎಲ್ಲರೂ ಬೇಕು.ತನ್ನದೆನ್ನುವ ಕುಟುಂಬ ಇಲ್ಲ ಹೆಂಡತಿ ಮಕ್ಕಳು ಇಲ್ಲ. ಚಳ್ಳಕೆರೆ ತ ಪಟ್ಟಣಕ್ಕೆ ಹತ್ತು ಕಿಲೋಮೀಟರ್‌ ದೂರದಲ್ಲಿರುವ  ಅವರು ಪ್ರಾರಂಭಿಸಿದ ಶ್ರೀ ಶಾರದಾವಿದ್ಯಾ ಮಂದಿರ ಶಾಲೆ ಮತ್ತು ಶಾಲೆಯಲ್ಲಿನ ನೂರಾರು ಮಕ್ಕಳ ಯೋಗಕ್ಷೇಮ, ಊಟ ಬಟ್ಟೆ ವಿದ್ಯೆಯ ಹೊಣೆ ಅವರದು.ತಮಗಿರುವ ಆದಾಯದಲ್ಲಿ ಸರ್ಕಾರದ ನೆರವಿಲ್ಲದೆ ವಿದ್ಯಾರ್ಥಿಗಳಗೆ ವಿದ್ಯೆಯ  ಜೊತೆ ಅನ್ನದಾನವನ್ನು ಮಾಡುವರು. ಅದಕ್ಕಾಗಿ ಇಳಿ ವಯಸ್ಸಿನಲ್ಲೂ ಕಳಕಳಿ.
ಮುಂದಿನವಾರವೇ ಅವರ ಅಭಿಮಾನಿ ಮಾಕಂ ಶ್ರೀನಿವಾಸಲುಅವರ ಜೊತೆ ಚಳ್ಳಕೆರೆಗೆ ಹೋಗುವ ಅವಕಾಶ ಸಿಕ್ಕಿತು ಅಲ್ಲಿಂದ ಬೆಳೆಗೆರೆ ಹೋದೆವು . ಊರ ಮುಂದೆಯೆ ಸುಸಜ್ಜಿತವಾದ ಕಟ್ಟಡದಲ್ಲಿ ಅವರ ಶಾಲೆ. ಹತ್ತಿರದಲ್ಲೆ ಇರುವ ತೋಟ. ಅಲ್ಲಿ ಒಂದು ಪುಟ್ಟ ಮನೆ. ಪುಟ್ಟ ಪೂರಾ ಕೃಷಿಕರ ಪರಿಸರ. ಕಾಂಕ್ರೀಟ್‌ಮನೆಯಲ್ಲ.ಗುಡಿಸಿಲಿಗೆ ಹೊಂದಿಕೊಂಡಂತೆ ಪುಟ್ಟ ಹಳ್ಳಿ ಮನೆ. ಹಲಗೆಯ ಮಂಚ ಕಟ್ಟಿಗೆಯ ಕುರ್ಚಿ  ಮತ್ತು ಹಲಗೆ ಜೋಡಿಸಿದ ಬೀರುಗಳಲ್ಲಿ ಪುಸ್ತಕಗಳು. ಅಲ್ಲಿಅವರ ಆಸ್ತಿ. ಒಂದು ರೀತಿಯಲ್ಲಿ ಅದು ಪರ್ಣ ಕುಟೀರ.ಅವರ ದೈನಂದಿನ ಅಗತ್ಯಗಳನ್ನು ನೋಡಿಕೊಳ್ಳಲು ಇರುವ ಹಳ್ಳಿಯ ಹೆಂಗಸನ್ನು ಮಗಳೆ  ಎಂದೇ ಕರೆಯುವರು. ಹೋದ ತುಸು ಹೊತ್ತಿನಲ್ಲಿಯೇ ಬಿಸಿಬಿಸಿ ಉಪ್ಪಿಟ್ಟು ಬಂದಿತು .ಪ್ರಕೃತಿಯ ಮಡಿಲಲ್ಲಿ ಇರುವ ಆ ಸರಳವ್ಯಕ್ತಿಯ ಆಗಷ್ಣೆ  ಹೇಳ ತೀರದು ಎಂಥೆಂಥ ಉದ್ದಾಮ ಸಾಹಿತಿಗಳು ಬಂದು ಅಲ್ಲಿ ತಂಗುವರು. ಅವರ ಜೊತೆ ಚರ್ಚೆಮಾಡಿರುವರು . ವಿದೇಶಿ ಸ್ವಯಂ ಸೇವಕರು ಸಮಾಜ ಸೇವೆಯ ಪಾಠಕಲಿಯಲು ಅಲ್ಲಿಗೆ ಬರುವುದು ಸಾಮಾನ್ಯ ಬಂದವರೆಲ್ಲ ಸರಳತೆಯ ಸಾಕಾರವವಾದ .ಅವರೊಂದಿಗೆ ಇರುವುದು  ಮತ್ತು ಮಾತುಕಥೆಯಾಡುವುದು ಒಂದು ಅನುಭವ.ಯಾರೆ ಬಂದರು ಅದೇ ರಾಗಿಮುದ್ದೆ ಅವರು ಕೈಯಾರೆ ಬೆಳೆದ ತರಕಾರಿ ಸಾರು. ನಾವು ಹೋದಾಗಲೇ ಒಬ್ಬ ವಿದೇಶಿಯರೂ ಬಂದಿದ್ದರು. ನಮ್ಮಿಬ್ಬರನ್ನು ತಮ್ಮ ಶಾಲೆಗೆ ಕೆರದುಕೊಂಡುಹೋಗಿ ಅಲ್ಲಿನ  ಧ್ಯಾನ ಮಂದಿರ, ವ್ಯಾಯಾಮಶಾಲೆ  ತೋರಿಸಿದರು. ಸಂಜೆ ಮಕ್ಕಳ ಸಭೆ ಸೇರಿಸಿ ಎರಡು ಮಾತನಾಡಿ ಎಂದರು. ಬಂದವರುಇಂಗ್ಲಿಷ್‌ನಲ್ಲಿ ಮಾಡಿದ ಭಾಷಣ ನಾನು ಅನುವಾದಿಸ ಬೇಕಾಯಿತು.. ಹಳ್ಳಿಯ ಮಕ್ಕಳಿಗೆ ಅವರ ಭಾಷೆಯ ಶೈಲಿಯನ್ನು ಅನುಸರಿಸುವುದು ಕಷ್ಟಕರವಾಗಿತ್ತು. ಹಳ್ಳಿಯ ಮಕ್ಕಳಿಗೆ ಬರಿ ಅಕ್ಷರ ವಿದ್ಯ ಕಲಿತರೆ ಸಾಲದು.ಹೊಸದಕ್ಕೆತೆರೆದುಕೊಳ್ಳ ಬೇಕು ಎಂದು ಅವರ ನಂಬಿಕೆ.ಅವರಿಗೆ “ Spoken English” ಕಲಿಸಲು ಕೋರಿದರುನನಗೂ ಆಸಕ್ತಿ ಇತ್ತು ಆದರೆ  ಅಲ್ಲಿಗೆ ಹೋಗಿ ಇರಲಾಗಲಿಲ್ಲ.ಅದಕ್ಕೆ ಯಾರೆ ಬಂದರೂ ಅರ್ಧ ಗಂಟೆಯಾದರೂ ಅವರ ಮಾತು ಮಕ್ಕಳಿಗೆ ಹೇಳಿಸುತಿದ್ದರು. ಶಾಲೆ ಸುಸಜ್ಜಿತವಾಗಿತ್ತು ಪರಿಸರ ಸ್ವಚ್ಛವಾಗಿತ್ತು. ಅಲ್ಲಿನ ಹೂ ಹಣ್ಣುಗಳ ಗಿಡಗಳು ಮಕ್ಕಳ ಆಸಕ್ತಿಯ ಕಥೆ ಹೇಳುತಿದ್ದವು.ಮಕ್ಕಳಿಗೆ ಯೋಗ, ಧ್ಯಾನ,ಕೃಷಿ , ಹೈನುಗಾರಿಕೆ ಕಲಿಕೆಯ ಒಂದುಭಾಗ.ಜೊತೆಗೆ ವೃತ್ತಿ ಶಿಕ್ಷಣವೂ ಇದೆ.ಅದು ನೂರಾರು ಸದಸ್ಯರು ಇರುವ ದೊಡ್ಡ  ಕುಟುಂಬವಾಗಿತ್ತು. ಊರಲ್ಲಿ ಇರುವಾಗ ಮನೆಯ ಹಿರಿಯನಂತೆ ಮಕ್ಕಳ ಜತೆ ಸಹ ಭೋಜನ.ಅಡುಗೆ ಮನಯೂ ಬಹಳ ಅಚ್ಚು ಕಟ್ಟು.ಸರತಿಯ ಮೇಲೆ ಅಡುಗೆಯವರಿಗೆ ಮಕ್ಕಳ ಸಹಾಯ.. ಕೈಗೊಂದು ಕಾಲಗೊಂದು ಆಳಿನ ಪ್ರಶ್ನೆಯೇಇಲ್ಲ.. ಎಲ್ಲದರಲ್ಲೂ  ಸ್ವಾವಲಂಬನೆ.
ಶಾಸ್ತ್ರಿಗಳದು  ಅಲೆಮಾರಿ ಜೀವನ. ಇಂದು ದುರ್ಗ ನಾಳೆ ಬೆಂಗಳೂರು. ಮುಂದಿನ ವಾರ ಮೈಸೂರು.. ಯಾವ ಊರಿಗೆ ಹೋದರೂ ಆತ್ಮೀಯ ಸ್ವಾಗತ. ಎಲ್ಲ ಹಿರಿಯ ಸಾಹಿತಿಗಳೂ ಅವರ ಆತ್ಮೀಯರು. ಗಾಂಧೀಜಿಯಿಂದ ಹಿಡಿದು ದರ್ಜಿ ಅಕ್ಬರ್‌ಸಾಬಿಯವರೆಗೆ ಒಂದೆ ರೀತಿಯ ಆತ್ಮಿಯ ಒಡನಾಟ.ಅವರಿಗೆ  ಮಕ್ಕಳಲ್ಲೂ ಅಷ್ಟೆ ಸಲಿಗೆ.ಅವರು ಬಂದರೆ ತಾತನನ್ನು ಕಂಡ ಮೊಮ್ಮಕ್ಕಳಿಗೆ ಆಗುವಷ್ಟು ಸಂತೋಷ  ಮಕ್ಕಳಿಗೆ. ಅವರುಇತ್ತೀಚಿನ ವರೆಗೂ ಇಂಗ್ಲಿಷ್‌ಪಾಠ ಮಾಡುತಿದ್ದರೆಂಬುದು ಅವರ ಕಾಯಕದನಿಷ್ಠೆಯನ್ನು ತೋರುವುದು.

ಊರಿನಲ್ಲಿ ಇರುವಾಗ ಹೆಚ್ಚು ತೋಟದ ಕೆಲಸವೇ ಅವರಿಗೆ ಆದ್ಯತೆ. ನಂತರ ಶಾಲೆಗೆ ಹೊರಡುವರು. ಶಾಲೆಯಲ್ಲಿ.ಅಲ್ಲಿನ ಜವಾನನಿಂದ ಹಿಡಿದು ಪ್ರಾಂಶುಪಾಲರವರೆಗ ಯೋಗಕ್ಷೇಮದ ವಿಚಾರಣೆ. ಇನ್ನು ಮಕ್ಕಳಿಗಂತೂ ಇನ್ನಿಲ್ಲದ ಸಂತೋಷ. ಅವರದು ಅಗತ್ಯವಿದ್ದವರಿಗೆ ವಸತಿ ಶಾಲೆ. ಸುಸಜ್ಜಿತವಾದ ಕೊಟ್ಟಡಿಗಳು ಅಡಿಗೆ ಮನೆಗೆ ಗೋಬರ್‌ಗ್ಯಾಸ್‌ ಅದಕ್ಕೆ ಸೆಗಣಿಒದಗಿಸಲು ನಾಲ್ಕಾರು ದನಗಳು ಅವುಗಳಲ ಯೊಗಕ್ಷೇಮ ಮಕ್ಕಳದು ಅದರ  ಉತ್ಪನ್ನಗಳಾದ ಹಾಲು ಮೊಸರು ಮಕ್ಕಳಿಗೆ . ವಿದ್ಯಾರ್ಥಿ ನಿಲಯದಲ್ಲಿ  ದೂರದೂರಿನವರು ಇದ್ದಾರೆ..ಗುಲ್ಬರ್ಗ ರಾಯಚೂರಿನವರು ಇದ್ದಾರೆ. ಅವರಿಗೆ ಬರಿ ಪುಸ್ತಕದ ವಿದ್ಯೆ ಮಾತ್ರವಲ್ಲ ಕೈ ಕೆಲಸ ಕಲಿಯುವ ಅವಕಾಶ. ಅವರು ತಿನ್ನುವುದ ಅವರೇ ಬೆಳೆದ ತರಕಾರಿ.ಅಲ್ಲಿ ಜಾತಿ ಮತ ಬೇಧವಿಲ್ಲ. ಯಾವ ಊರು ಎಂದು ಕೇಳುವುದಿಲ್ಲ. ಅವರಿಗೆ ಸೇರಲುಇರುವ ಅರ್ಹತೆ ಎಂದರೆ ಬಡತನ ಮತ್ತು ಓದುವ ಹಂಬಲ.. ಇನ್ನು ಉಳಿದ ಯಾವ ಅಂಶಗಳೂ ಲೆಕ್ಕಕ್ಕೆ ಇಲ್ಲ.
ಅಲ್ಲಿ ಕೆಲಸಮಾಡುವವರೂ ಅವರಿಂದ ಸ್ಪೂರ್ತಿ ಪಡೆದು ಸೇವಾ ದೀಕ್ಷೆ ತೊಟ್ಟವರೆ. ಸಂಬಳಕ್ಕಾಗಿ ದುಡಿಯುವವರಲ್ಲ. ಶಾಲೆ ನೋಡಿ ಬಹಳ ಖುಷಿಯಾಯಿತು ನನ್ನದೂ ಕಿರು ಕಾಣಿಕೆಇರಲಿ ಎಂದು ತುಸು ಕಾಣಿಕೆ ಕೊಟ್ಟುಬಂದೆ.ಮುಂದಿನ ಭಾನುವಾರವೇ ಅವರ ಶಾಲೆಯ ಶಿಕ್ಷಕರೊಬ್ಬರು ಖುದ್ಧು ಮನೆಗೆ ಬಂದು ರಸೀತಿ ನೀಡಿಹೋದರು.ಅಷ್ಟು ನಿಖರ ಅವರ ಹಣಕಾಸಿನ. ವ್ಯವಹಾರ.

ಕೃಷ್ಣ ಶಾಸ್ತ್ರಿಗಳು ಹುಟ್ಟಿದ್ದು  ಬೆಳಗೆರೆಯಲ್ಲಿ ೧೯೧೬ನೆಯ ಇಸ್ವಿ ಮೇ೨೨ ರಂದು ತಂದೆ ಚಂದ್ರಶೇಖರ ಶಾಸ್ತ್ರಿ  ಕಂಚಿಯಲ್ಲಿ  ಅಧ್ಯಯನ ಮಾಡಿದವರು. ನಂತರ ಜಾನಪದಕ್ಕೆ ಮಾರುಹೋಗಿ ಆ ರಂಗದಲ್ಲಿ ಸಾಧನೆ ಗೈದರು. ಆಶುಕವಿತೆ ರಚಿಸುವರು. ಸಾಹಿತ್ಯಾರಾಧಕರು. ಸ್ವಥಃ ಬರಹಗಾರರು. ಬೇಂದ್ರೆ, ಮಾಸ್ತಿ, ಡಿವಿಜಿ, ವಿಸೀಯರಿಗೆ ನಿಕಟವಾಗಿದ್ದವರು. ಅದೇ ಸಂಪರ್ಕ ಮಗನಿಗೂ ಮುಂದುವರಿಯಿತು ಸಾಹಿತ್ಯಾಸಕ್ತಿ ಕುದುರಿತು.ಶಾಸ್ತ್ರಿಗಳ ತಾಯಿ ಅನ್ನ ಪೂರ್ಣಮ್ಮ.ಸುಸಂಸ್ಕೃತೆ .ದೈವ ಭಕ್ತೆ.
ಪ್ರಾಥಮಿಕ ಶಿಕ್ಷಣ ಬೆಂಗಳುರಿನಲ್ಲಿ  ನಂತರ ಮೈಸೂರಲ್ಲಿ ಶಿಕ್ಷಕ ತರಬೇತಿ. ಸ್ವಅಧ್ಯಯನವಂತೂ ಜೀವನದ ಉದ್ದಕ್ಕೂ ನಡೆದೇ ಇತ್ತು.
 ಹರೆಯದಲ್ಲಿ ಗಾಂಧೀಜಿಯವರ ತತ್ವಗಳಿಂದ ಆಕರ್ಷಿತರಾಗಿ ಚಳುವಳಿ ಸೇರಿದರು. ಸಬರಮತಿ ಆಶ್ರಮದಲ್ಲಿ  ಕೆಲಕಾಲ ಇದ್ದು ಬಂದರು.ಚಳುವಳಿಮಡಿ ಜೈಲು ಸೇರಿದರು. ಅಂದಿನಿಂದ ಅಪ್ಪಟ ಖಾದಿಧಾರಿ ಜತೆಗೆ ಗಾಂಧಿತತ್ವ ಪಾಲಕ. ನಂತರ ವಿನೋಬಾಜಿಯವರೊಂದಿಗೆ ಒಡನಾಟ. ಅವರ ಭೂದಾನ ಚಳುವಳಿಯಲ್ಲಿ ಸಕ್ರಿಯರು. ಸರಕಾರಿ ಶಿಕ್ಷಕರಾಗಿ ಕೆಲಸ ಕ್ಕೆ ಸೇರಿದರು. ಮದುವೆಯೂ ಆಯಿತು. ಒಂದು ಗಂಡುಮಗುವೂ ಆಯಿತು. ಮಗುವು ಚಿಕ್ಕದಿರುವಾಗಲೇ ತಾಯಿ ಮಗು ಇಬ್ಬರೂ ಒಂದೇ ದಿನ ಮೃತರಾದರು. ಇನ್ನೂ ವಯಸ್ಸು ಮೀರಿಲ್ಲ . ಮನೆಯಲ್ಲಿ ಮದುವೆಗೆ ಒತ್ತಾಯ.  ಎರಡನೆ ಮದುವೆಗೆ ಹುಡುಗಿಗೆ ಹುಡುಕಾಟ.ಶಾಸ್ತ್ರಿಗಳದು ಒಂದೆ ನಿರ್ಧಾರ. ಮದುವೆ ಬೇಡ.ಸಂಸಾರ ಸುಖ ಸಾಕು.ಒಂದುದಿನ ಊರಿನಿಂದ ಈ ಸಂಜೆ ಹೆಣ್ಣು ತೋರಿಸಲು ಬರುತ್ತಾರೆ ನೀನು ಊರಿಗೆ ಬರಲೇ ಬೇಕು ಎಂದು ಒತ್ತಾಯಿಸಿ ಕಾಗದ ಬಂತು. ಸರಿ ಊರಿಗೆ ಹೋದರು .  ಏಕೆ ಕಿಟ್ಟಣ್ಣ ಮುಖ ಮುಚ್ಚಿಕೊಂಡಿರುವೆ , ಎಂದಾಗ  ಬಾಯಿಗೆ ಅಡ್ಡ ಹಿಡಿದ ಟವಲ್‌ ತೆಗೆದು ನಕ್ಕರು ಮನೆಯವರು ಇವರ ಹಲ್ಲಿಲ್ಲದ ಬಾಯಿನೋಡಿ ಗಾಬರಿಯಾದರು.  ಶಾಸ್ತ್ರಿಗಳು ವೈದ್ಯರಲ್ಲಿಗೆ ಹೋಗಿ ಎಲ್ಲ ಹಲ್ಲು ಕಿತ್ತಿಸಿಕೊಂಡು ಬಂದಿದ್ದರು. ಮದುವೆ ಮಾತು ಅಲ್ಲಿಗೆ ಮುರಿದು ಬಿತ್ತು.
ಅಂದಿನಿಂದ ಸುಮಾರು ಆರು ದಶಕಗಳ ಕಾಲ ಹಸುಳೆಯ ನಗು ಅವರದಾಯಿತು.ಅವರಿಗೆ ಶಾಲೆಯೆ ಮನೆ. ವಿದ್ಯಾರ್ಥಿಗಳೇ ಮಕ್ಕಳು.ಗ್ರಾಮಸ್ಥರೆ ಬಂಧುಗಳು ವಿದ್ಯಾದಾನವೇ ಕಾಯಕ. ಸಾಹಿಯ್ವೇ ಹವ್ಯಾಸ.ತಳಕಿನ ವೆಂಕಣ್ಣಯ್ಯ, ಕ್ಷೀರಸಾಗರ,ತರಾಸು ಅವರ ಬಂಧುಗಳು ಬೇಂದ್ರೆ, ಕಾರಂತ ಕುವೆಂಪು ಮಾಸ್ತಿ, ಡಿವಿಜಿ , ವೀಸಿ, ವೆಂಕಟಾಚಲಯ್ಯಯ, ಮೊದಲಾದ ಘಟಾನುಘಟಿಗಳ ಸಂಪರ್ಕವಿತ್ತು ತಮ್ಮ ಊರಿನಲ್ಲಿ ಹಳ್ಳಿಗಾಡಾದರೂ ಸಾಹಿತ್ಯ ಸಮಾರಾಧನೆ ಮಾಡುತಿದ್ದರು. ಹಿರಿಯ ಸಾಹಿತಿಗಳನ್ನು ಕರೆಸಿ ಉಪನ್ಯಾಸ ಮಾಡಿಸುತಿದ್ದರು  ಭಾರತದಾದ್ಯಂತ ಸುತ್ತಾಡಿದರು ರಮಣ ಮಹರ್ಷಿಗಳ ಅನುಗ್ರಹಕ್ಕೂ ಪಾತ್ರರು.ಆದರೆ ಅವರು ವಿಶ್ವ ಕುಟುಂಬಿ. ಮಿರಾಸಾಬಿಹಳ್ಳಿ,ಹೆಗ್ಗೆರೆ, ಕಡೂರು ನಲ್ಲಿನ ದೇವನೂರು ಹೀಗೆ ಹಲವುಕಡೆ ಸೇವೆ ಸಲ್ಲಿಸಿದರು ಅವರು ಕೆಲಸ ಮಾಡಿದ ಹಳ್ಳಿಗಳಲ್ಲಿ ಅವರ ಪಾಠ ಮಾಡುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. , ಆಸ್ಪತ್ರೆ ,ಶಾಲೆಯ ಕಟ್ಟಡ, ವಿದ್ಯಾರ್ಥಿನಿಲಯ ಪಾಠೋಪಕರಣ, ಪೀಠೋಪಕರಣಗಳಿಂದ ಸುಸಜ್ಜಿತಗೊಳಿಸಿದರು.ತಾವೆಹಣ ಹಾಕಿದರು ಇತರರು ಅವರ ಮಾದರಿ ಅನುಸರಿಸಿದರು. ಅವರು ಕೊನೆಯ ತನಕ ಬಡ ಮೇಷ್ಟ್ರುಆಗಿಯೇ ಉಳಿದರು. ಅವರು ಮಕ್ಕಳಿಗೆ ಮಾತ್ರ ಮೇಷ್ಟ್ರು ಅಲ್ಲ. ಊರಿನಲ್ಲಿ ಸಾಮಾಜಿಕ  ಸುಧಾರಣೆ , ಆರ್ಥಿಕ ಪ್ರಗತಿ ಮತ್ತು ಕೋಮುಸಾಮರಸ್ಯಕ್ಕೆ ಕಾರಣರಾದರು. ಕಡೂರು ತಾಲೂಕಿನಲ್ಲಂತೂ ಮುಕುಂದ ಸ್ವಾಮಿಗಳ ಸಂಪರ್ಕಕ್ಕೆ ಬಂದಮೇಲೆ ಅವರ  ಅಧ್ಯಾತ್ಮದ ಅನುಭವ ದಟ್ಟವಾಯಿತು. ಜೀವನ ಇನ್ನು ಪಕ್ವವಾಯಿತು ಅವರಿಗೆ ಎರಡು ಬಾರಿ  ಶ್ರೇಷ್ಠ ಶಿಕ್ಷಕ ಪ್ರಶಸ್ತಿಬಂದಿತ್ತು ಅದನ್ನು ನಯವಾಗಿಯೇ ನಿರಾಕರಿಸಿದರು. ಮೂರನೆಯಬಾರಿಗೆ ಬಂದಾಗ ತಮ್ಮ ಗುರುಗಳ ಒತ್ತಾಯಕ್ಕೆ ಮಣಿದು೧೯೭೧ ರಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಮಾಶಾಸನ ಕೊಡಲು ಮನೆತನಕ ಬಂದರೂ ನಯವಾಗಿ ಬೇಡ ಎಂದರು..ನಾನು ನಮ್ಮಮನೆ ದೇಶ ಉಳಿಸಿಕೊಳ್ಳಲು ಚಳುವಳಿ ಮಾಡಿದೆ. ಅದಕ್ಕೆ ಕೂಲಿ ಪಡೆಯುವುದಿಲ್ಲ ಎಂದರು
ಹುಟ್ಟೂರಿನ ಜನರಿಗೆ ಶಿಕ್ಷಣದ ಸೌಲಭ್ಯವಿಲ್ಲ. ಇದುಹಳ್ಳಿಗಾಡು,  ಏನಾದರೂ ಮಾಡು ಎಂಬ ತಂದೆಯವರ ಮಾತಿನಂತೆ ನಿವೃತ್ತರಾದ ಮೇಲೆ  ಅಂದರೆ ೧೯೬೭ ರಲ್ಲಿ ಶಾಲೆ ತೆಗೆದರು ಅದು ಈಗ ಪದವಿ ಪೂರ್ವ ಹಂತಕ್ಕೆ ಬಂದುನಿಂತಿದೆ.
ಓದಲುಬರುವ ಮಕ್ಕಳಿಗೆ ಮನೆಯಲ್ಲಿ ಮುದ್ದೆಗೂ ಪರದಾಟ.  ಕೂಲಿಗೆ ಹೋದರೆ, ದನ ಮೇಯಿಸಿದರೆ ತುಸುವಾದರೂ ಅನುಕೂಲವಾಗುವುದೆಂದು ಶಾಲೆಗೆ ಕಳುಹಿಸಲು ಪೋಷಕರ ಹಿಂದೇಟು. ಅದಕ್ಕಾಗಿಗಿ ವಿದ್ಯಾರ್ಥಿನಿಲಯ ತೆಗೆದರು.ಪ್ರೌಢ ಶಾಲಾಮಕ್ಕಳಿಗೆಉಚಿತ ವಿದ್ಯಾರ್ಥಿನಿಲಯವಿದೆ. ಜಾತಿ ಮತ ಬೇಧವಿಲ್ಲದೆ ಎಲ್ಲರಿಗೂ ಉಚಿತ ಊಟ ಮತ್ತು ವಸತಿ ಸೌಲಭ್ಯ ಅದು ಪ್ರಾರಂಭವಾಗಿ .ನಲವತ್ತುವರ್ಷವಾದರೂ ಸರಕಾರದ ಅನುದಾನ ಇಲ್ಲ. ಅವರ ನಿವೃತ್ತಿವೇತನ,  ಜಮೀನಿನ ಆದಾಯ ಮತ್ತು  ಅಭಿಮಾನಿಗಳ ನೆರವಿನಿಂದ  ಮಕ್ಕಳಿಗೆ ಎಲ್ಲ ಅನುಕೂಲ ಮಾಡಿರುವರು. ಅವರಿಗೆ ತಂದೆಯ ಸಾಹಿತ್ಯಾಭಿರುಚಿಯೂ ಮೈಗೂಡಿದೆ.ಹಳ್ಳಿಚಿತ್ರ, ಹಳ್ಳಿ ಮೇಷ್ಟ್ರು, ಮರೆಯಲಾದೀತೆ, ಸಾಹಿತಿಗಳ ಸ್ಮೃತಿ, ಎಲೆಮರೆಯ ಅಲರು ಎಂಬ ಕೃತಿಗಳನ್ನುರಚಿಸಿದ್ದಾರೆ.ಜೊತೆಗೆ ನಾಲ್ಕು ಅನುವಾದಿತ ಕೃತಿಗಳೂ ಬಂದಿವೆ.ಅವರ ಮುಕುಂದುರು ಸ್ವಾಮಿಗಳ ಕುರಿತಾದ ಕೃತಿ “ “ ಯೇಗ್ದಾಗೆಲ್ಲಾ ಐತೆ’ ಬಹು ಜನಪ್ರಿಯ ಪುಸ್ತಕ.೧೨ ಮರು ಮುದ್ರಣ  ಕಂಡಿದೆ. ಅದುಹಿಂದಿ ತೆಲುಗು ಮರಾಠಿ ಭಾಷೆಗೂ ಅನುವಾದಗೊಂಡಿದೆ ಅಲ್ಲದೆ  ನಾಟಕ ರೂಪದಲ್ಲೂ ರಂಗ ಮಂದಿರದಲ್ಲಿ ಯಶ ಪಡೆದಿದೆ.
ಮದುವೆ ಮಕ್ಕಳು ಬೇಡವೆಂದರೂ ಅವರು ಜೀವನ್ಮುಖರು. ಮಮತೆಗೆ ಏನೂ ಕೊರತೆಇರಲಿಲ. ತಮ್ಮ ಜಮೀನಿನಕೆಲಸಕ್ಕೆ ಬರುತಿದ್ದ ಹುಡುಗಿಯೊಬ್ಬಳು ಅನಾಥಳದಾಗ. ಇವರೆ ಆಶ್ರಯ ಕೊಟ್ಟರು.ಜಾತಿ ಮತ ಲೆಕ್ಕಿಸದೆ ಮನೆಯಲ್ಲಿಯೇ ತಮ್ಮ ಜೊತೆ ಇಟ್ಟುಕೊಂಡರು .ಅವಳು ಮಗಳೇ ಆದಳು ಶಿಕ್ಷಣ ಕೊಡಿಸಿ ಮದುವೆ ಮಾಡಿಸಿ ನೆಲೆ ನಿಲ್ಲುವಂತೆ ನೊಡಿಕೊಂಡರು.  ಇಟ್ಟುಕೊಂಡರು . ಈಗ ಗಂಡ ಹೆಂಡರು ಇಬ್ಬರೂ ಜಮೀನು ಮನೆ ನೋಡಿಕೊಳ್ಳುತಿದ್ದಾರೆ. ಅವರ ಮಗು ಇವರಿಗೆ ಮುದ್ದಿನ ಮೊಮ್ಮಗು .ತಮ್ಮ ನಂತರವೂ ಸಂಸ್ಥೆಯು ಸಾಂಗವಾಗಿ ನಡೆಯಬೇಕೆಂದು. ಆಸ್ತಿ ಮತ್ತು ಶಾಲೆಯ ಹೊಣೆಯನ್ನು ನಿರ್ವಹಿಸಲು  ಸೂಕ್ತ ವ್ಯವಸ್ಥೆ  ಮಾಡಿದರು.. ಅದಕ್ಕೆ ಮೊದಲು   ತಮ್ಮೊಡನಿರುವ ಸಾಕುಮಗಳ ಜೀವನೋಪಾಯದ ವ್ವಸ್ತೆ ಮಾಡಲು ಲು ಮರೆಯಲಿಲ್ಲ. ಅವರ ಜೀವನಕ್ಕೆ ಭದ್ರತೆ ಒದಗಿಸಿದುದು ಅವರ ದೂರದೃಷ್ಠಿಗೆ ಮತ್ತು ಮಮತೆಗೆ ಸಾಕ್ಷಿಯಾಗಿದೆ.    ಬೆಳೆಗೆರೆಯ ನೂರಾರು ಮಕ್ಕಳಿಗೆ ದಾರಿದೀಪವಾಗಿ, ಸಂಪರ್ಕಬಂದವರಿಗೆ ಸಾಕ್ಷಿಪ್ರಜ್ಞೆಯಾಗಿದ್ದ ಕೃಷ್ಣ ಶಾಸ್ತ್ರಿಗಳು ಇನ್ನಿಲ್ಲ.
 ಶತಮಾನದ ಗಡಿಯ ಹತ್ತಿರ ಬಂದು ಸಮಾಜ ಬೆಳಗಿ ಸಾರ್ಥಕಬಾಳು ಬಾಳಿದ ಧನ್ಯ ಜೀವ  ಶನಿವಾರ, ಮಾರ್ಚ೨೩ ರಂದು ಬರಿ ನೆನಪಾಗಿ ಉಳಿಯಿತು..ಗಾಂಧಿ ಯುಗದ ಕೊನೆಯ ಕೊಂಡಿ ಕಳಚಿತು

No comments:

Post a Comment