Wednesday, October 31, 2012

ಬಯಸದೆ ಬಂದ ಭಾಗ್ಯ !

                                                                 
                                  
http://www.kendasampige.com/images/trans.gif
                         ಮಂಡ್ಯ ಜಿಲ್ಲೆಯ ಹಳ್ಳಿಯಕಾಲೇಜು ಒಂದರಲ್ಲಿ  ಪ್ರಭಾರಿ ಪ್ರಾಂಶುಪಾಲನಾಗಿ ಕಾರ್ಯ ನಿರ್ವಹಿಸುತ್ತಿದ್ದೆ ಪ್ರಾಂಶುಪಾಲನಾಗಿ ಮುಂಬಡ್ತಿ ಬರುವುದೆಂದು ತಿಳಿಯಿತು. ನಾನು  ಅಲ್ಲಿಯೆ ಮುಂದುವರಿಯ ಬೇಕೆಂದು ಸ್ಥಳೀಯ ನಾಯಕರು ನನ್ನ ಮನ ಒಲಿಸಿದರು. ಎಲ್ಲ ಸಹಕಾರ ನೀಡುವುದಾಗಿ ಮಾತುಕೊಟ್ಟರು. ಜಿಲ್ಲಾ ಪಂಚಾಯತ್‌ ಸದಸ್ಯರು ತಮ್ಮ ಭಾವ ನೆಂಟರಾಗಿದ್ದ ಮಂತ್ರಿಗಳಿಗೆ ಹೇಳಿ ಮಿನಿಟ್ಸ ಹಾಕಿಸಿದ್ದರು. ಆರು ತಿಂಗಳಿಂದ ಪ್ರಾಂಶುಪಾಲನಾಗಿ ಕೆಲಸ ಮಾಡಿದ್ದರಿಂದ   ಆಡಳಿತ ಹಿಡಿತಕ್ಕೆ ಬಂದಿತ್ತು. ನಾನು ನಿರ್ಭೀತಿಯ ಮತ್ತು ದಿಟ್ಟನಿರ್ಧಾರಗಳಿಂದ ಜನರ ಮನ ಗೆದ್ದಿದ್ದೆ. ಮಕ್ಕಳೂ ತುಂಬ ಹಚ್ಚಿ ಕೊಂಡಿದ್ದರು. ನಮ್ಮಹುಟ್ಟೂರು  ಬಿಟ್ಟು ಬಂದ ಮೇಲೆ ಇದ್ದ ಊರೇ ನಮ್ಮದು ಎಂದು ಕೊಳ್ಳುವ ನಾನೂ ಅವರ ಮಾತಿಗೆ ಸಮ್ಮತಿ ಸೂಚಿಸಿದೆ.
ಒಂದೇ ವಾರದಲ್ಲಿ ಮುಂಬಡ್ತಿ ಆದೇಶ ಬಂದಿತು. ಆದರೆ ದೊಡ್ಡ  ಆಶ್ಚರ್ಯ ಕಾದಿತ್ತು. ಇಲ್ಲಿಗೆ ಮೈಸೂರು ನಿವಾಸಿಯೊಬ್ಬರು  ಪ್ರಾಂಶುಪಾಲರಾಗಿ ಹಾಕಿಸಿಕೊಂಡಿದ್ದರು. ನನಗೆ ಅದೇ ಜಿಲ್ಲೆಯ, ತಾಲೂಕು ಸ್ಥಳದಲ್ಲಿನ ಬಹು ದೊಡ್ಡ ಮತ್ತು ಅತಿ ಹಳೆಯ  ಕಾಲೇಜಿಗೆ ಪ್ರಾಂಶುಪಾಲನಾಗಿ ಮುಂಬಡ್ತಿ ನೀಡಿ ವರ್ಗವಾಗಿತ್ತು. ಇದು  ನಾನು ಕನಸು ಮನಸಿನಲ್ಲೂ ಊಹಿಸಿರದ  ಅವಕಾಶ. ಮೈಸೂರು ಮತ್ತು ಮೈಸೂರಿನಿಂದ ನಿತ್ಯ ಓಡಾಡ ಬಹುದಾದ ಸುತ್ತ ಮುತ್ತಲಿನ ಕಾಲೇಜುಗಳ ಹುದ್ದೆಗಳಿಗೆ ಬಹು ಬೇಡಿಕೆ. ಮೈಸೂರಲ್ಲಿ ನೆಲಸಿದ ಪ್ರಾಂಶುಪಾಲರು ಉಪನ್ಯಾಸಕರು ಜತೆಗೆ ಮಹಿಳಾ ಉಪನ್ಯಾಕರಿಗೆ ಮತ್ತು ಸರಕಾರಿ ನೌಕರಿಯಲ್ಲಿರುವ ದಂಪತಿಗಳಿಗೆ ಈ ಕಾಲೇಜುಗಳು ಮೀಸಲು. ಅದಕ್ಕಾಗಿ ತಮ್ಮ ಪ್ರಭಾವ, ಜಾತಿ, ಹಣ ಎಲ್ಲವನ್ನೂ ಧಾರಾಳವಾಗಿ ಬಳಸುವರು. ಹೀಗಿದ್ದಾಗ  ಏನೂ ಇಲ್ಲದ ದೂರದ  ಬಳ್ಳಾರಿಯಿಂದ ಬಂದ ನನಗೆ ಅಷ್ಟು ಉತ್ತಮ ಸ್ಥಳ ಸಿಕ್ಕಿದ್ದು ಹೇಗೆ ಎಂಬ ಅನುಮಾನ ಮೂಡಿತು.
ಕಾಲೇಜು ಹೇಗಿದೆ ಎಂದು ನೋಡಿ ಕೊಂಡು ಬರಲು ಪದವಿ ವಿದ್ಯಾರ್ಥಿಯಾಗಿದ್ದ ನನ್ನ ಮಗ ತನ್ನ ಗೆಳೆಯನ ಜೊತೆ ಹೋಗಿ ಬಂದ. ಅವನು ನೀಡಿದ ವರದಿ ಆಘಾತ ಕಾರಿಯಾಗಿತ್ತು.  ಆ ಕಾಲೇಜು ಸಮಸ್ಯೆಗಳ ಆಗರ. ಅದರ ಹಿಂದಿನ ಇಬ್ಬರು ಪ್ರಾಂಶುಪಾಲರೂ ಅಮಾನತ್ತಾಗಿದ್ದರು. ಅಲ್ಲಿ ಒಂದೇ ಜನಾಂಗದ ಪ್ರಾಭಲ್ಯ.  ದಲಿತ ಮತ್ತು ಹಿಂದುಳಿದ ಮಕ್ಕಳೆ ಹೆಚ್ಚು. ಸದಾ ಹೊಡೆದಾಟ ಬಡಿದಾಟ. ಕಳೆದ ಮೂರು ತಿಂಗಳಿಂದ ಅಮಾನತ್ತಾಗಿರುವ ಪ್ರಾಂಶಪಾಲರನ್ನ ಪುನಃ ಅಲ್ಲಿಗೆ  ನೇಮಿಸಬೇಕೆಂದು ಕಾಲೇಜಿನ ಮುಂದೆ ಟೆಂಟುಹಾಕಿಕೊಂಡು  ಸತ್ಯಾಗ್ರಹ ಬೇರೆ ನಡೆಸಿದ್ದರು. ಅಲ್ಲಿನ ಉಪನ್ಯಾಸಕರು ಯಾರೂ ಪ್ರಭಾರೆ ಮುಖ್ಯಸ್ಥರಾಗಿ ಕೆಲಸ ಮಾಡಲೂ ಸಿದ್ಧರಿದ್ದಿಲ್ಲ. ಅವರು ಆಯುಕ್ತರ ಬಳಿ ಹೋಗಿ ತಮ್ಮ ಗೋಳು ತೋಡಿಕೊಂಡಾಗ ಅವರಿಂದ ನಿಮ್ಮ ಕಾಲೇಜಿಗೆ ಒಬ್ಬ ಸಮರ್ಥ ವ್ಯಕ್ತಿಯನ್ನೆ ಕಳುಹಿಸುತ್ತೇವೆ. ಚಿಂತೆ ಮಾಡಬೇಡಿ. ಎಂದು ಆಶ್ವಾಸನೆ ನೀಡಿದ್ದರಂತೆ. ಅದರ ಫಲವಾಗಿ ಶಿಫಾರಸ್ಸಿನ ಹೊರತಾಗಿಯೂ ನನಗೆ ಈ ಚಿಕ್ಕ ಕಾಲೇಜಿನಿಂದ  ದೊಡ್ಡ ಕಾಲೇಜಿಗೆ ಬಡ್ತಿಯ ಮೇಲೆ ವರ್ಗ ವಾಗಿತ್ತು. ಇಲಾಖೆ ನನ್ನ ಸಾಮರ್ಥ್ಯಕ್ಕೆ ಸೂಕ್ತವಾದ  ಪ್ರಶಸ್ತಿ ನೀಡಿತ್ತು. ಆದರೆ ಅದು ವರವೋ ಶಾಪವೋ ಎಂದು ನನಗೆ  ಜಿಜ್ಞಾಸೆ ಎದ್ದಿತು.
ಕಾಲೇಜಿಗೆ ವರದಿ ಮಾಡಲು ಹೋದಾಗ ನನಗೆ ಭ್ರಮ ನಿರಸನವಾಯಿತು. ಮೊದಲನೆಯದಾಗಿ ಅಮಾನತ್ತಿನಲ್ಲಿದ್ದ  ಹಿಂದಿನ ಪ್ರಾಂಶುಪಾಲರು ಛೇಂಬರ್‌ನ ಬೀಗದ ಕೈನಿಂದ ಹಿಡಿದು ಯಾವುದೆ ಹೊಣೆಯನ್ನು ಹಸ್ತಾಂತರ ಮಾಡಿರಲಿಲ್ಲ. ನಾನು ಹೋಗಿ ಉಪನ್ಯಾಸಕರ ಕೋಣೆಯಲ್ಲಿ ಕುಳಿತು ಕೊಳ್ಳ ಬೇಕಾಯಿತು. ಅಲ್ಲಿನ ಬಹುತೇಕ ಉಪನ್ಯಾಸಕರು ಸ್ಥಳೀಯರು. ಅವರಿಗೆ ವರದಿ ಮಾಡಿಕೊಂಡ ನನ್ನನ್ನು ನೋಡಿ   ಅಚ್ಚರಿಯಾಯಿತು. ಖುದ್ದು ಆಯುಕ್ತರೆ ಅಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸಶಕ್ತ ವ್ಯಕ್ತಿಯನ್ನು ನೇಮಿಸುವುದಾಗಿ ಭರವಸೆ ನೀಡಿದ್ದರು. ಐದು ಅಡಿ ಎರಡಿಂಚು ಇತ್ತರದ, ಐವತ್ತು ಕಿಲೋ ತೂಕದ ಮುಂದುವರಿದ ಜನಾಂಗದ ಯಾವುದೋ ಜಿಲ್ಲೆಯ ವ್ಯಕ್ತಿ ಅದು ಹೇಗೆ ಕಾಲೇಜು ನಿಭಾಯಿಸುವರು ಎಂಬ ಅವರ ಭಯ ಸಕಾರಣವಾಗಿತ್ತು. ಆದರೂ ತಮ್ಮ ತಲೆಯ ಮೇಲಿನ ಭಾರ ಇಳಿಯಿತಲ್ಲ , ಅಷ್ಟೆ  ಸಾಕು ಎಂದು ಎಲ್ಲ ಮಾಹಿತಿ ನೀಡಿ ಪೂರ್ಣ ಸಹಕಾರ ಕೊಡುವುದಾಗಿ ತಿಳಿಸಿ ತುಂಬು ಹೃದಯದಿಂದ ಸ್ವಾಗತಿಸಿದರು.
ನಾನು ಮೇಲಾಧಿಕಾರಿಗಳಿಗೆ ವಿವರವಾಗಿ ಅಲ್ಲಿನ ಪರಿಸ್ಥಿತಿಯನ್ನು ವರದಿ ಮಾಡಿ ನಾನು ಹಾಜರಾದ ವರದಿಯನ್ನೂ ಮತ್ತು ಅಲ್ಲಿನ ಪರಿಸ್ಥಿತಿಯನ್ನು ಕುರಿತ ಅರೆ ಸರ್ಕಾರಿ ಪತ್ರವನ್ನು ಆಯುಕ್ತರಿಗೆ ಕಚೇರಿಗೆ  ಹಿರಿಯ ಉಪನ್ಯಾಸಕರ ಕೈನಲ್ಲಿ ಬೆಂಗಳೂರಿಗೆ  ಕಳುಹಿಸಿದೆ.
ಮಾರನೆ ದಿನವೆ  ನಿರ್ದೇಶಕರು  ಕ್ರಮ ತೆಗದು ಕೊಂಡು ಪ್ರತಿಸ್ಪಂದಿಸಿದ್ದರು.ಅದೇ ಸಮಯದಲ್ಲಿ ಮೈಸೂರಿಗೆ ಬಂದಿದ್ದ ಶಿಕ್ಷಣ ಸಚಿವರನ್ನೂ ಊರಿನ ಗಣ್ಯರು ಸಂಪರ್ಕಿಸಿದ್ದರು. ಅಲ್ಲಿಂದಲೆ ಸಹಾಯಕ ಶಿಕ್ಷಣ ಅಧಿಕಾರಿಗೆ  ಪಂಚನಾಮೆ ಮಾಡಿ ಬೀಗ ಒಡೆದು ಪ್ರಭಾರಿ ವಹಿಸಬೇಕೆಂದು ಆದೇಶ  ಕಳುಹಿಸಿದರು.
ಅಲ್ಲಿನ ಸಹಾಯಕ ಶಿಕ್ಷಣಾಧಿಕಾರಿಗಳು ಯುವಕರು, ಉತ್ಸಾಹಿಗಳು ಮತ್ತು ಉತ್ತಮ ಕೆಲಸಗಾರರು. ಅವರು ಖುದ್ದಾಗಿ ಬಂದು ನಮ್ಮ ಉಪನ್ಯಾಸಕರು ಹಾಗೂ ಊರಿನ ಮುಖಂಡರಿಬ್ಬರ ಎದುರಿನಲ್ಲಿ ಛೇಂಬರಿನ ಬೀಗ ಒಡೆದು ಒಳಗೆ ಹೋಗಲು ಅನುವು ಮಾಡಿಕೊಟ್ಟರು. ಅಲ್ಲಿರುವ ಬೀಗದ ಕೈ ಗೊಂಚಲಿನಲ್ಲಿ ಬಹುತೇಕ ಬೀರುಗಳನ್ನು ತೆಗೆಯಬಹುದಾಗಿತ್ತು. ಆದರೆ ಕಬ್ಬಿಣದ ಪೆಟ್ಟಿಗೆ  ಮತ್ತು ಎರಡು ಬೀರುಗಳ ಬೀಗದ ಕೈ ಇರಲಿಲ್ಲ. ಅವನ್ನೂ ಬೀಗ ರಿಪೇರಿ ಮಾಡುವವನ ಸಹಾಯದಿಂದ ತೆಗೆಸಲಾಯಿತು. ನಂತರ ಪ್ರಾಂಶುಪಾಲರ ನೇರ ಪ್ರಭಾರೆಯಲ್ಲಿರುವ ಎಲ್ಲ ವಸ್ತುಗಳನ್ನೂ ಪಂಚನಾಮೆ ಮಾಡಿ  ಮೂರು ಪಟ್ಟಿ ತಯಾರಿಸಿ ಎಲ್ಲರೂ ಸಹಿ ಮಾಡಿದರು.  ಪ್ರಯೋಗ ಶಾಲೆಯ ಕೀಲಿಕೈ ಇರಲಿಲ್ಲ. ಅದನ್ನು ನಂತರ ತೆಗೆದುಕೊಳ್ಳಲು  ಸೂಚಿಸಿದರು. ಎಲ್ಲ ದಾಖಲೆಗಳನ್ನು ಅವು ಇದ್ದಂತೆ ನಾನು ವಹಿಸಿಕೊಂಡೆ. ಇದೆಲ್ಲ ಕೆಲಸ ಮಾಡಲು ಸಂಜೆ ಏಳು ಗಂಟೆಯಾಯಿತು.  ಹಿರಿಯ ಸಹಾಯಕರು ಹಾಗೂ ಉಪನ್ಯಾಸಕರೂ ಜೊತೆಯಲ್ಲೆ ಇದ್ದು ಸಹಕರಿಸಿದರು.
ಮಾರನೆ ದಿನ ತುಸು ಮೊದಲೆ ಬಂದೆ. ಅದು ಸಂಯುಕ್ತ ಪದವಿಪೂರ್ವ ಕಾಲೇಜು  ಜತೆಗೆ ನಾಲಕ್ಕು ವೃತ್ತಿ ಶಿಕ್ಷಣ ಕೋರ್ಸುಗಳು ಹಾಗೂ ಹಿಂದಿನ ಮಲ್ಟಿ ಪರ್ಪಸ್‌ ಹೈಸ್ಕೂಲು ಆದಾಗಿನ  ಆರನೆ ತರಗತಿಯಿಂದಲೆ ಕಾರ್ಪೆಂಟರಿ, ಫಿಟ್ಟರ್‌,ಮೆಷಿನಿಷ್ಟ್ ವಿವಿಧ ಕಸಬು ಕಲಿಸುವ ಮೂಲಶಿಕ್ಷಣದ ಯೋಜನೆಯ ಅಡಿಯಲ್ಲಿನ ವೃತ್ತಿ ವಿಭಾಗವೂ ಇದ್ದವು. ಎಲ್ಲ ಸೇರಿ ಬರೋಬ್ಬರಿ ನೂರರ ಹತ್ತಿರ  ಸಿಬ್ಬಂದಿ. ಸಾವಿರದ ಐದು ನೂರು ವಿದ್ಯಾರ್ಥಿಗಳು.
ಕಾಲೇಜಿನ ಕಟ್ಟಡದಲ್ಲೆ ಒಳಗೆ ಒಂದು ಸುತ್ತು  ಹೋಗಿ ಬಂದೆ. ಗೋಡೆಗಳ ತುಂಬ ಪ್ರೇಮ ಸಂದೇಶಗಳು. ಕೆಲವು ಕಡೆ ಸಾರ್ವಜನಿಕ ಶೌಚಾಲಯದ ಬರಹವನ್ನೂ ನಾಚಿಸುವಂತಿದ್ದವು. ಅಲ್ಲಿ ಎರಡು ಮೂತ್ರಾಲಯಗಳಿದ್ದವು. ಅವು ಇನ್ನೂ ದೂರಲ್ಲಿರುವಾಗಲೆ ಮೂಗು ಮುಚ್ಚಿಸುವ  ದುರ್ವಾಸನೆ. ಒಳಗೆ ಹೋಗಿ ನೋಡಿದರೆ ಸಾಕ್ಷಾತ್‌ ನರಕ. ತಕ್ಷಣ    ಜವಾನರನ್ನು ಕರೆಸಿ ಅದನ್ನು ಶುಚಿ ಮಾಡುವ ಜನರನ್ನು ಬರಹೇಳಿದೆ. ಫೆನಾಯಲ್‌ ಬ್ಲೀಚಿಂಗ್‌ಪೌಡರ್‌ ತರಿಸಿ ತಕ್ಷಣ ಕ್ರಮ ತೆಗೆದುಕೊಳ್ಳಲು ತಿಳಿಸಿದೆ. ನಮ್ಮ ಹಿರಿಯ ಸಹಾಯಕರಿಗೆ ಆ ಹೊಣೆ ವಹಿಸಲಾಯಿತು. ನಮ್ಮಲ್ಲಿ ಕೆಲವರು ಎಲ್ಲ ಬಿಟ್ಟು ಬಂದ ತಕ್ಷಣ  ಮೊದಲು ಸಂಡಾಸ ಶುಚಿ ಮಾಡಲು ಹೊರಟಿದ್ದಾರಲ್ಲ ಎಂದು ಗೊಣಗಿದರು.  ನಮ್ಮದು  ಆಯತಾಕಾರದ ಮುಚ್ಚಿದ ಆವರಣದಲ್ಲಿನ ಕಾಲೇಜು ಕಟ್ಟಡ. ಸಂಡಾಸವು  ದೂರದ ಒಂದು ಮೂಲೆಯಲ್ಲೆ ಇದ್ದರೂ  ಎಲ್ಲ ಕಡೆ ಅದರ ದುರ್ವಾಸನೆ ಹೊಡೆಯುತಿತ್ತು. ಅಲ್ಲದೆ ವಿದ್ಯಾರ್ಥಿಗಳ ಆರೋಗ್ಯ ಮತ್ತು ಆವರಣದ ಸ್ವಚ್ಛತೆ . ನನಗೆ ಮೊದಲ ಆದ್ಯತೆಯಾಗಿತ್ತು. ಆದರೆ ನಂತರ ನನಗೆ ಗೊತ್ತಾಯಿತು. ಆ ನನ್ನ ಚಿಕ್ಕ ಕಾಳಜಿ ಮಕ್ಕಳಿಗೆ ಒಂದು ಸಕರಾತ್ಮಕ ಸಂದೇಶ ನೀಡುವಲ್ಲಿ ಯಶಸ್ಸುಗಳಿಸಿತ್ತು. ವಿದ್ಯಾರ್ಥಿಗಳಲ್ಲಿ ಆತ್ಮೀಯತೆ ಬೆಳೆದು  ನನಗೆ ಹತ್ತಿರವಾದಾಗ . ಅವರೆ ಹೇಳಿದರು ನಮ್ಮ ಕಾಲೇಜಿನಲ್ಲಿ ನಮ್ಮ ಸೌಲಭ್ಯ ಕುರಿತು ಯೋಚಿಸದವರಲ್ಲಿ ನೀವೆ ಮೊದಲಿಗರು. ಇದುವರೆಗೂ ಎಷ್ಟೇ ಹೇಳಿದರೂ ಯಾರೂ ಕಿವಿಯ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಯಾರೂ ಕೇಳದೆ ಇದ್ದರೂ ನೀವು ಕ್ರಮ ತೆಗೆದುಕೊಂಡಿರಿ”  ನನ್ನ ಒಂದು ಚಿಕ್ಕನಡೆಯು ಈ ಮಟ್ಟಿನ ವಿಶ್ವಾಸ ಬೆಳೆಸುವುದೆಂಬ ಕಲ್ಪನೆಯೂ  ನನಗೆ ಇರಲಿಲ್ಲ.
ಪ್ರಾಂಶುಪಾಲರ ಕೋಣೆಯ ಬಾಗಿಲ ಮೇಲೆ “ No admission without permission” ಎಂಬ ಫಲಕ ಎದ್ದು ಕಾಣುತಿತ್ತು. ಬೋಧಕ ಸಿಬ್ಬಂದಿಗೂ ನಿರ್ಬಂಧವಿತ್ತು. ಯಾರೂ ಪ್ರವೇಶಿಸುವಂತಿರಲಿಲ್ಲ. ಅವರು ಹೇಳಿಕಳುಹಿಸಿದಾಗ ಮಾತ್ರ ಭೇಟಿ. ಅದನ್ನು ಮೊದಲು ತೆಗೆಸಿ ಹಾಕಿದೆ.ಯಾರು ಬೇಕಾದರೂ ಕೆಲಸವಿದ್ದಾಗ ಬರಬಹುದೆಂದು ಶಿಕ್ಷಕರ ಸಭೆಯಲ್ಲಿ ತಿಳಿಸಿದೆ. ಅಲ್ಲದೆ ಹೈಸ್ಕೂಲು ಮತ್ತು ಕಾಲೇಜು ವಿಭಾಗದ ಹಾಜರಿ ಪುಸ್ತಕಗಳು  ಗುಮಾಸ್ತರ ಹತ್ತಿರವಿದ್ದವು. ಅಲ್ಲಿಯೆ ಎಲ್ಲರೂ ಹೋಗಿ ಸಹಿ ಮಾಡ ಬೇಕಿತ್ತು ಕಾರಣ ಪ್ರಾಂಶುಪಾಲರು ಯಾವಾಗ ಬೇಕಾದರೂ ಬರುತಿದ್ದರು. ಸಹಜವಾಗಿ ಅವರ ಚಲನ ವಲನಕ್ಕೆ ಅಡಚಣೆ ಯಾಗದಿರಲೆಂದು ಆ ವ್ಯವಸ್ಥೆ ಮಾಡಲಾಗಿತ್ತು. ನಾನು ಎಲ್ಲರಿಗಿಂತ ಮುಂಚೆ ಬಂದು ಎಲ್ಲರೂ ಹೋದ ಮೇಲೆ ಕಾಲೇಜು ಬಿಡುವ ಹವ್ಯಾಸವನ್ನು ಅಳವಡಿಸಿ ಕೊಂಡಿರುವುದರಿಂದ , ಹಾಜರಿ ಪುಸ್ತಕಗಳನ್ನು  ನನ್ನ ವಶಕ್ಕೆ ತೆಗೆದು ಕೊಂಡೆ.  ಕಾಲೇಜು ಪ್ರಾರಂಭವಾಗುವ ಹದಿನೈದು ನಿಮಿಷ ಮೊದಲೆ ಅವನ್ನು ಶಿಕ್ಷಕ ಮತ್ತು ಉಪನ್ಯಾಸಕರ ಕೋಣೆಗೆ ಕಳುಹಿಸಿ ಅಲ್ಲಿಯೆ ಸಹಿ ಮಾಡಲು ಸೂಚಿಸಲಾಯಿತು. ತರಗತಿ ಪ್ರಾರಂಭವಾದನಂತರ ಅವು ನನ್ನ ಕೋಣೆಗೆ ಬರುತಿದ್ದವು. ತಡವಾಗಿ ಬಂದವರು ನನ್ನಕೋಣೆಗೆ ಬಂದು ಸಹಿ ಮಾಡಬಹುದಾಗಿತ್ತು.ಇದರಿಂದ ಸಿಬ್ಬಂದಿ ಯಾವಾಗಂದರೆ ಆವಾಗ ಬರುವ ಪದ್ದತಿಗೆ ಕಡಿವಾಣ ಬಿದ್ದಿತು. ಅಕಸ್ಮಾತ್ತಾಗಿ ತಡವಾಗಿ ಬಂದವರು ನನ್ನೆದುರೆ ಸಹಿ ಮಾಡಬೇಕಾದುದರಿಂದ ನಾನು ಏನೂ ಅನ್ನದಿದ್ದರೂ ಸಂಕೋಚ ಪಟ್ಟುಕೊಳ್ಳುತ್ತಿದ್ದರು. ಕ್ರಮೇಣ ಬಹುತೇಕರು ಸಮಯಕ್ಕೆ ಸರಿಯಾಗಿ ಬರತೊಡಗಿದರು.
ಕಾಲೇಜಿನ ಸಮಸ್ಯೆಯ ಮೂಲ ತುಸು ಮಟ್ಟಿಗೆ ತಿಳಿಯಿತು. ಅಲ್ಲಿರುವ ಬಹುಪಾಲು ಮಕ್ಕಳು ದಲಿತ ವರ್ಗಕ್ಕೆ ಸೇರಿದವರು. ಉಪನ್ಯಾಸಕರು ಮುಂದುವರಿದ ಜನಾಂಗದವರು. ಕೆಲವು ಜನ ಅದೇ ವರ್ಗದವರು ಇದ್ದರೂ ಅವರು ತಮ್ಮ ಹುದ್ದೆಯ ಘನತೆಯ ಬಗ್ಗೆ ಕಾಳಜಿವಹಿಸಿದವರು. ಇದರಿಂದ ಮಕ್ಕಳಲ್ಲಿ ಬೋಧಕರ ಬಗ್ಗೆ ವಿಶ್ವಾಸವೆ ಇರಲಿಲ್ಲ. ಬಹುತೇಕರು ಮೊದಲ ಪೀಳಿಗೆಯ ಕಾಲೇಜು ಕಟ್ಟೆ ಹತ್ತಿದವರು. ಹಳ್ಳಿ ಮತ್ತು ಬಡ ಮಕ್ಕಳೆ ಹೆಚ್ಚು. ಮತ್ತು ಅವರನ್ನು ಜಾತಿಯ ಹೆಸರಲ್ಲಿ ಹಾದಿ ತಪ್ಪಿಸುವವರೂ ಇದ್ದರು.  ಅಲ್ಲಿ ಹುಡುಕಿದರೂ ಅನುಕೂಲಸ್ಥ ಮತ್ತು ಅಧಿಕಾರಿಗಳ ಮಕ್ಕಳು ಸಿಗುವುದು ವಿರಳ. ಅನುಕೂಲಸ್ಥರು ಅಲ್ಲೆ ಇರುವ ಖಾಸಗಿ ಕಾಲೇಜಿಗೆ ಹೆಚ್ಚಿನ ಶುಲ್ಕ ಕೊಟ್ಟು ಸೇರುವರು. ಒಂದು ರೀತಿಯಲ್ಲಿ ನಮ್ಮದು ದೀನ ದಲಿತರ ಗೂಡು. ಸಹಜವಾಗಿಯೆ ಮಕ್ಕಳು ಹುಂಬರು, ಒರಟರು ಮತ್ತು ವಿನಯದಗಾಳಿ ಸೋಂಕದವರು.ನಮ್ಮ ಕಾಲೇಜು ಒಂದು ರೀತಿಯಲ್ಲಿ ವಿವಾಹ ವೇದಿಕೆಯಾಗಿತ್ತು ಪ್ರತಿ ವರ್ಷ ಒಂದೋ ಎರಡೋ ಗಾಂಧರ್ವ ವಿವಾಹಗಳು ನಡೆದೇ ನಡೆಯುತಿದ್ದವು. ಅಂತರ್‌ಜಾತಿಯಾದರೆ ಗುಲ್ಲೋ ಗುಲ್ಲು ಒಂದೆ ವರ್ಗದವರ ಉಪಪಂಗಡದವರ ನಡುವಿನ ಪ್ರೇಮ ಪ್ರಕರಣವು ಅನೇಕ ಸಲ ಹೊಡೆದಾಟಕ್ಕೆ ಕಾರಣ ವಾಗುತಿತ್ತು. ಅಲ್ಲಿ ಬೋಧಕ ವರ್ಗದವರು ಬಹುತೇಕ ಸ್ಥಳೀಯರು. ಮನೆ ಮಠ ವ್ಯವಹಾರವಿದೆ. ಮನೆ ಹತ್ತಿರ ಕೆಲಸ. ತಿಂಗಳಿಗೆ ಸರಿಯಾಗಿ ಸಂಬಳ ಬರುವುದು ಹೇಗೋ ಕಾಲ ಕಳೆದರಾಯಿತು ಎಂಬ ಮನೋಭಾವನೆಯವರೆ ಹೆಚ್ಚು.  ಹೀಗಾಗಿ ವಿದ್ಯಾರ್ಥಿಗಳ ಮತ್ತು ಬೋಧಕರ ನಡುವೆ ಕಂದಕ ಬೆಳೆದಿತ್ತು. ಅಲ್ಲದೆ ಅಲ್ಲಿನ ಎರಡು ದಲಿತ ಪಂಗಡಗಳ ಮಕ್ಕಳಲ್ಲೂ ವೈಷಮ್ಯ. ಕಾಲೇಜಿಗೆ ಹತ್ತಿರದಲ್ಲಿಯೆ ನೂರಾರು ಮನೆ ಇರುವ ಅವರ ಪ್ರತ್ಯೇಕ ಕೇರಿಗಳು. ಸಣ್ಣ ಪುಟ್ಟ ಘಟನೆಗೂ  ತೀವ್ರವಾಗಿ ಪ್ರತಿಸ್ಪಂದಿಸಿ ಕಾಲೇಜಿನಲ್ಲಿ ನುಗ್ಗಿ ಗಲಾಟೆ ಮಾಡುವರು.ಅದರೊಂದಿಗೆ ಪರಿಶಿಷ್ಟ ವರ್ಗಕ್ಕೆ ಸೇರಿದವರದು ಇನ್ನೊಂದು ಗುಂಪು. ಸಣ್ಣ ಕಾರಣಕ್ಕೂ ಗಲಭೆ ಹೊಡೆದಾಟ. ಅವರಲ್ಲಿ ಸಮನ್ವಯ ಮತ್ತು ನಂಬಿಕೆಯ 
ಕೊರತೆ ಎದ್ದುಕಾಣುತಿತ್ತು. ಮೇಲಾಗಿ ಮೆಲುವರ್ಗದವರು ತಮ್ಮನ್ನು ಶೋಷಿಸುತ್ತಾರೆ ಎಂಬ ಭಾವನೆ ಬಲವಾಗಿ ಬೇರೂರಿತ್ತು. ಈ ಊರು ಜಾತಿಸಾಮರಸ್ಯದ  ಕೊರತೆಯಿಂದಾಗಿ ಪದೇ ಪದೇ ಗಲಭೆಗಳಾಗುತ್ತಿದ್ದುರಿಂದ  ಅತಿ ಸೂಕ್ಷ್ಮ ಪ್ರದೇಶವೆಂದು ಪರಿಗಣಿತವಾಗಿತ್ತು.  ಅದರಿಂದ ಉಪನ್ಯಾಸಕರು ತರಗತಿಯಲ್ಲಿ ಮಕ್ಕಳಿಗೆ ಬುದ್ಧಿ ಹೇಳಿದರೆ ಸಾರ್‌, ಹೆಚ್ಚು ಮಾತನಾಡ ಬೇಡಿ. ನಿಮ್ಮ ಪಾಠವಷ್ಟೋ ಅಷ್ಟು ಮಾಡಿ .ಪಿರಿಯಡ್‌ಮುಗಿದ ತಕ್ಷಣ  ಜಾಗ ಖಾಲಿ ಮಾಡಿ ಎನ್ನುವ ಹಂತಕ್ಕೆ  ವಿದ್ಯಾರ್ಥಿಗಳು ತಲುಪಿದ್ದರು..
ಉತ್ತಮ ಉಪನ್ಯಾಸಕರಿದ್ದರೂ ಅವರಿಗೆ ಕೆಲಸದಲ್ಲಿ ತೃಪ್ತಿ ಇರಲಿಲ್ಲ. ಕಾಟಾಚಾರಕ್ಕೆ ಪಾಠ ಮಾಡುವಂತಾಗಿತ್ತು  ಭಯ  ಭಕ್ತಿ ಬಿಡಿ ಕೊನೆಗೆ ತುಸುವಾದರೂ ಗುರುಗಳೆಂಬ ಗೌರವ ಸಿಕ್ಕರೆ ಸಾಕು ಎನ್ನುವಂತಾಗಿತ್ತು. ಅವರೆಲ್ಲ ತರಗತಿಗೆ ಹೋದರೆ ಗಂಟೆ ಹೊಡೆಯುವುದನ್ನೆ ಕಾಯುತ್ತಾ , ತರಗತಿ ಮುಗಿದ ತ ಕ್ಷಣ ಒಂದು ದಿನ ಕಳೆಯಿತು ಎಂದು ವಿಶ್ರಾಂತಿ ಕೋಣೆಗೆ ಬಂದು ಇವತ್ತಿಗೆ ಗೆದ್ದೆ ಎಂದು ನಿಟ್ಟುಸಿರು  ಬಿಡುವರು.  ಕಲಿಕೆಯ ವಾತಾವರಣವೆ ಕಾಣೆಯಾಗಿತ್ತು ಕಾಲೇಜಿನಲ್ಲಿ. ಹೈಸ್ಕೂಲುವಿಭಾಗ ಇದ್ದುದರಲ್ಲೆ ಉತ್ತಮ. ಆದರೂ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎನ್ನುವಂತೆ ಅವರೂ ಚಿಕ್ಕವರಾದರೂ ಆಗೀಗ ಬಾಲ ಬಿಚ್ಚುತಿದ್ದರು.
ಹೋದ ಎರಡು ಮೂರು ದಿನದಲ್ಲೆ ಅಮಾನತ್ತಿನಲ್ಲೆ ಇದ್ದ ಮಾಜಿ ಪ್ರಾಂಶುಪಾಲರು ಕಾಲೇಜಿಗೆ ಭೇಟಿಕೊಟ್ಟರು. ಜವಾನರಿಂದ ಹಿಡಿದು ಕೆಲ ಉಪನ್ಯಾಸಕರ ಸಂಭ್ರಮ ಹೇಳ ತೀರದು. ಸಾಹೇಬರು ಬಂದರು , ಸಾಹೇಬರು ಬಂದರು ಎಂದು ಹಿರಿ ಹಿರಿ ಹಿಗ್ಗಿದರು. ಅವರು ಅಮಾನತ್ತು ಆದೇಶ ರದ್ದು ಪಡಿಸಿ ಕೊಂಡು ಕೆಲಸಕ್ಕೆ ಹಾಜರಾಗಲು ಬಂದಿರಬಹುದು ಎಂಬ ಎಣಿಕೆ ಅವರೆಲ್ಲರದು.
ಅವರು ಪ್ರಿನ್ಸಿಪಾಲರ ಕೋಣೆಯ  ಒಳಗೆ ಬಂದರು.ಬನ್ನಿ ಸಾರ್‌, ಕುಳಿತು ಕೊಳ್ಳಿ ಎಂದೆ.
ನನ್ನನ್ನು ಒಂದು ಸಲ ಮೇಲಿನಿಂದ ಕೆಳಗೆ ನೋಡಿ ,"ನಾನು ಈಗ ಕುಳಿತು ಕೊಳ್ಳುವುದಿಲ್ಲ . ನಿನ್ನನ್ನು ಕುರ್ಚಿ ಸಮೇತ ಎತ್ತಿ ಹೊರ ಹಾಕಿಸಿ,ನಂತರ ಕುಳಿತು ಕೊಳ್ಳುವೆ" ಎಂದು ನುಡಿದು ಸ್ವಿಂಗ್‌ಡೋರ್‌ ಧಡಾರನೆ ತೆಗೆದು ಕೊಂಡು ಹೊರ ನಡೆದರು.
ನಾನು ಕಕ್ಕಾವಿಕ್ಕಿಯಾಗಿ ಕುಳಿತೆ.
ಇದೆಂಥಾ ಬಯಸದೆ ಬಂದ  ಭಾಗ್ಯ ! ಎಂದು ಕೊಂಡೆ.
  



Tuesday, October 23, 2012

ಮುಂಜಾನೆ ನಾನೆದ್ದು ಯಾರ ಯಾರ ನೋಡಲಿ !



ನಮಗೆಲ್ಲ “ಮುಂಜಾನೆ ನಾನೆದ್ದು ಯಾರುಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯುವ , ಎಳ್ಳು ಜೀರಿಗೆ ಬೆಳೆಯುವ ಭೂತಾಯಿ ನೆನೆವೇನೆ”  ಎಂಬ ಜನಪದ ಗೀತೆ ಬಹು ಪರಿಚಿತ ಇನ್ನು ಅನೇಕ ಜನರಿಗೆ ಬೆಳಗಾದೊಡನೆ ಮೈಮುರಿದು ಏಳುವ ಮೊದಲೆ  ದೇವರುಗಳ ಸುಪ್ರಭಾತ ಕೇಳುವ  ಹವ್ಯಾಸ.ಇರಬಹುದು. ಆದರೆ ಬೆಳಗಾಗೆದ್ದು ಮೊದಲು  ನೋಡುವ  ಮಾತು ಕೇಳಿ ಹುಬ್ಬು ಏರಿಸಿ ಬೇಡಿ
ಈಗಲೂ ಕೆಲವು ಸಂಪ್ರದಾಯಸ್ಥರು ಹಾಸಿಗೆಯಿಂದ ಏಳುವ ಮುಂಚೆ ಎರಡು ಅಂಗೈಗಳನ್ನು ಗಸಗಸ ತಿಕ್ಕಿ  ಮುಖದ ಎದುರು ಹಿಡಿದು ’” ಕರಾಗ್ರೆ ವಸತೇ ಲಕ್ಷ್ಮೀ, ಕರಮಧ್ಯ ಸರಸ್ವತಿ ಕರಮೂಲೆ  ಸ್ಥಿತೆಗೌರಿ ಪ್ರಭಾತೆ ಕರದರ್ಶನಂ” ಎಂದು ಹೇಳಿಕೊಳ್ಳುವವರು. ಬಹುಶಃ ಬೆಳಗಿನಿಂದ ಮಲಗುವ ತನಕ ಕೈನಿಂದ ಮಾಡುವ ಕೆಲಸಗಳ ಮುನ್ಸುಚನೆಯೇ ಅದು ಎಂದುಕೊಂಡಿರುವೆ. ಹಣ ಎಣಿಸುವುದು ತುದಿ ಬೆರಳುಗಳಿಂದ, ಪುಸ್ತಕ ಹಿಡಿದು ಓದುವುದು ಅಂಗೈನಲ್ಲಿ  ಶಕ್ತಿ ಪ್ರದರ್ಶನಕ್ಕಂತೂ ಕರಮೂಲವೆ ಕಾರಣ.ಈಗ ಅದೂ ಕಾಣೆಯಾಗುತ್ತಿರುವ ಅಭ್ಯಾಸ.ಅನೇಕರ ಬೆಳಗು  ಶುರುವಾಗುವುದು ಬೆಡ್‌ಕಾಫಿಯಿಂದ.ತರುವವರು ಅರ್ಧಾಂಗಿಯಾಗಿದ್ದರೆ ಮಡದಿಯದೆ ಮೊದಲ ಮುಖದರ್ಶನ.ಜತೆಗೆ  ಶುದ್ಧ ಸೋಮಾರಿ ಎದ್ದೇಳುವುದು ಎಷ್ಟು ಹೊತ್ತು ಎಂಬ ಸುಪ್ರಾಭಾತವೂ ಕೇಳಿಬಂದರೂ ಅಚ್ಚರಿ ಇಲ್ಲ. ಇನ್ನು ಈಗಿನ ಐಟಿ ಯುವಕರಿಗೆ ಸುಪ್ರಭಾತದ ಅಗತ್ಯವೆ ಇಲ್ಲ ಅವರು ಮಲಗುವುದು ಯಾವಾಗಲೋ , ಏಳುವುದು ಯಾವಗಲೋ.  ಬಿ.ಪಿ.ಒ.ಗಳಲ್ಲಿ ಕೆಲಸ ಮಾಡುವವರಂತೂ ಜಗವೆಲ್ಲ ಮಲಗಿರಲು “ಇವನೊಬ್ಬ ಎದ್ದ, ಜಗವೆಲ್ಲ ಎದ್ದಿರಲು ಇವ ಮಲಗಲು ಸಿದ್ಧ”   ಎಂಬ ನುಡಿಗೆ ಅನುಗುಣವಾಗಿ ಬದುಕುವವರು ಅವರಿಗೆ ಹಗಲು ಇರುಳುಗಳ ನಡುವಿನ ಅಂತರ ಝಣ ಝಣ ಎಣಿಸುವ ಹಣದ ನಾದದಲ್ಲಿ ಮರೆತೇ ಹೋಗಿರುವುದು. 
ಶ್ರೀ ಪೆರಂಬುದೂರಿನ ರಾಮಾನುಜ ದೇವಾಲಯ

ಮಧ್ಯವಯಸ್ಕರು ಆಗಾಗ ಗೊಣಗುವದೂ  ಉಂಟು ಬೆಳಗ್ಗೆ ಎದ್ದು ಯಾರ ಮುಖ ನೋಡಿದೆನೋ ದಿನವೆಲ್ಲಾ ಹಿಡಿದ ಕೆಲಸ ಹಾಳು ಎಂದು ಹಿಡಿಶಾಪ ಹಾಕುವರು, ಅದಕ್ಕೆ ಕೆಲವರು ದೇವರ ಫೋಟೋ, ಇಲ್ಲವಾದರೆ ಕನಿಷ್ಟ ಕ್ಯಾಲಂಡರ್‌ ಅನ್ನಾದರೂ ಹಾಸಿಗೆಯಲ್ಲಿ ಕಣ್ಣು  ಬಿಟ್ಟಾಗ ತಕ್ಷಣ ಕಣ್ಣಿಗೆ  ಬೀಳುವಂತೆ ಹಾಕಿಕೊಂಡಿರುವರು, ಅಷ್ಟಾದರೂ  ಅಧ್ವಾನವಾದರೆ ನಮ್ಮ ಕರ್ಮ ಎಂದುಕೊಂಡು ಸುಮ್ಮನಾಗುವರು. ಆದರೆ ಆಧುನಿಕ ಯುವಜನರಿಗೆ  ಆ ಅನುಕೂಲವೂ ಇಲ್ಲ ಅವರು ಬೆಳಗ್ಗೆ ಎದ್ದಕೂಡಲೆ ಹಲ್ಲು ಉಜ್ಜಲು ಕನ್ನಡಿಯಮುಂದೆ ನಿಲ್ಲುವುದರಿಂದ, ಏನಾದರೂ ಆಗಬಾದ್ದು ಆದರೆ ಬೆಳಗಾಗೆದ್ದು  ಯಾವ ದರಿದ್ರ ಮುಖ ನೋಡಿದೆನೋ ಏನೋ ಎಂದು  ಕೊಂಡರೆ,  ತಮ್ಮನ್ನು ತಾವೆ ಬೈದುಕೊಂಡಂತಾಗುವುದು.
ಇನ್ನು ನಾವು ಪೂಜಿಸುವ ದೇವರುಗಳನ್ನು ಗಮನಿಸಿದರೆ ಅವರಿಗೆ ಹೆಚ್ಚು  ಆಯ್ಕೆಯೇ ಅವಕಾಶವೆ ಇಲ್ಲ. ವಾರ ತಿಥಿ ನೋಡಿ ಆಯುಷ್ಕರ್ಮ  ಮಾಡಿಸಿಕೊಳ್ಳುವ ಅದೇ ಹಳೆಯ ಪೂಜಾರಿಯ ಎಳ್ಳು ಅಕ್ಕಿ ಬೆರತಂತೆ ಇರುವ ಕಪ್ಪು ಬಿಳುಪಿನ ಮೋಟು ಕೂದಲಗಡ್ಡದ ಮುಖವನ್ನೇ ನೋಡಬೇಕು. ಇನ್ನು ಹೆಸರಾಂತ ದೇವರಾದರೆ ಉದಾಹರಣೆಗೆ ನಮ್ಮ ತಿರುಪತಿಯ ವೆಂಕಟೇಶ್ವರನ ಫಜೀತಿ ಹೇಳ ತೀರದು ದರ್ಶನಕ್ಕೆ ಬರುವ ಭಕ್ತ ಸಮೂಹ ಮಲಗಲು ಬಿಟ್ಟರೆ ತಾನೆ ಏಳುವ ಪ್ರಶ್ನೆ. ತಡರಾತ್ರಿ  ಮೂರರ ಮೇಲೆ  ಶಯನೋತ್ಸವ ಮಾಡಿಸುವರು,ಲಾಲಿಹಾಡು ಕೇಳುತ್ತಾ  ಕಣ್ಣು ಮುಚ್ಚುವದರೊಳಗೆ  ಮೂರೂವರೆಗೇ ಶುರುವಾಗುತ್ತದೆ ಸುಪ್ರಭಾತ. “ಕೌಶಲ್ಯ ಸುಪ್ರಜಾ ರಾಮ ಸಂಧ್ಯಾ ಪ್ರವರ್ಧತೆ, ಉತ್ತಿಷ್ಠ ನರ ಶಾರ್ದೂಲ ಕರ್ತವ್ಯಂ ದೈವಮಾತ್ಮಿಕಂ” ಎಂದು ಗಾನಕೋಕಿಲೆ ಸುಬ್ಬಲಕ್ಷ್ಮೀಯೆ ಉಲಿದರೂ ಮಲಗಿದ್ದ ದೇವರಿಗೆ ಏನು,   ಯಾರಿಗೇ ಆದರೂ ಅದು ಕರ್ಣಕಠೋರ. ದೇವರೇನಾದರೂ ಆಧುನಿಕ ವ್ಯಕ್ತಿಯಾಗಿದ್ದರೆ ಭೃಗು ಋಷಿ ಎದೆಗೆ ಪಾದತಾಡನ ಮಾಡಿದಾಗ  ತನಗೆ ಅವಮಾನವಾಯಿತೆಂದು ದೂರವಾಗಿ ಹೋದ  ಮೊದಲ ಮಡದಿ ಲಕ್ಷ್ಮಿ ದೇವಿಯ ಜೊತೆ ಎರಡನೆ ಹೆಂಡತಿಯಾದ ದೇವಿ ಪದ್ಮಾವತಿಯು ಖಂಡಿತವಾಗಿ ಲಾಯರನಿಂದ  ಡಿವೋರ್ಸ ನೋಟೀಸು ಕಳುಹಿಸುತಿದ್ದಳು.
ಶ್ರೀರಾಮಾನುಜಾಚಾರ್ಯರು




ತುಸು ಅನುಕೂಲ ಇರುವ ದೇವಸ್ಥಾನದ  ಹತ್ತಿರ ಇರುವ ಮನೆಯ ಜನರಿಗೆ ಅಲರಾಂ ಇಡುವ ತೊಂದರೆಯೆ ಇಲ್ಲ. ಬೆಳಗಾಗುವದೆ ತಡ ಧ್ವನಿವರ್ಧಕದ ಮೂಲಕ ಕಿವಿಗಪ್ಪಳಿಸುತ್ತದೆ ಭಕ್ತಿ ಗೀತಗಳ ಸರಮಾಲೆ. ಮಸೀದಿ ಹತ್ತಿರವಿದ್ದರೂ ಅಷ್ಟೆ ಪ್ರಾರ್ಥನೆಗೆ ಬರಲು ಮುಲ್ಲಾನ ಕರೆ  ಬಡಿದೆಬ್ಬಿಸುವುದು,
ಹಳ್ಳಿಗಳಲ್ಲಿ ಬೆಳಗಾಗುವುದರ ಸೂಚನೆ ಕೋಳಿ ಕೂಗುವುದು ಎಂದಿತ್ತು. ಅದರಲ್ಲೂ ಮುಂಗೋಳಿ ಕೂಗಿದ ತಕ್ಷಣ ಹಿರಿತಲೆಗಳು ಎದ್ದು ಕೆಲಸ ಶುರು ಮಾಡಿಕೊಳ್ಳುತ್ತಿದ್ದರು. ಹೈನಿದ್ದವರ ಮನೆಯಲ್ಲಿ ಸರಬರ ಬೆಣ್ಣೆ ತೆಗೆಯಲು ಮೊಸರು ಕಡೆಯುವ ಕೆಲಸ ಸಾಗುತಿತ್ತು . ನಂದಿನಿ ಬಂದ ಮೇಲೆ ಹಾಲು , ಮೊಸರಿನ  ಪಾಕೆಟ್‌ ಮತ್ತು ತುಪ್ಪದ ಬಾಟಲಿಗಳು ಬಂದು ಮೊಸರಿನ ಮಂಗಮ್ಮ ಈಗ ಯಾರು ಎಂದು ಕೇಳುವರು ಹೊಸ ಪೀಳಿಗೆಯ ಜನ.. ಈಗ  ಹಳ್ಳಿಗಳಲ್ಲಿ ಜನ ಕೋಳಿಸಾಕುವುದು ಕಡಿಮೆಯಾಗಿದೆ. ಸಾವಿರಾರು ಕೋಳಿಗಳನ್ನು ಸಾಕುವ ಪೌಲ್ಟ್ರಿ ಫಾರಂನಲ್ಲಿನ ಸಂಕರ ಕೋಳಿಗಳಿಗೆ ಕೂಗುವುದೆ ಗೊತ್ತಿಲ್ಲ.  ಇತ್ತೀಚೆಗಂತೂ ಕೆಂಟುಕಿ ಚಿಕನ್‌ ಮತ್ತು ಸುಗುಣ ಚಿಕನ್‌ ಬಂದಿರುವುದರಿಂದ ಧಿಡೀರ್‌ ಕೋಳೀ ಮಾಂಸ ಸಿಗುವಾಗ, ಅಲ್ಲದೆ ಜನರೆ ಕೋಳೀಗೂಡಿನಂತಹ ಮನೆಗಳಲ್ಲಿ ಬದುಕುವುದರಿಂದ ಕೋಳಿ ಸಾಕಣೆ ಕಳೆದು ಹೋದ ಉಪವೃತ್ತಿಯಾಗಿದೆ. ಕೃಷಿ ಕುಟುಂಬಗಳು ಮಾತ್ರವಲ್ಲದೆ ಗ್ರಾಮಂತರ ಪ್ರದೇಶದಲ್ಲಿ ಪ್ರತಿಕುಟುಂಬವೂ ನಾಲಕ್ಕಾರು ಕೋಳಿ ಒಂದೆರಡು ದನ ಸಾಕುವ ಪ್ರವೃತ್ತಿಯು ಇಂದು ಇಲ್ಲದಾಗಿ ಆ ವೃತ್ತಿಯೂ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿದೆ. ಇನ್ನು ಸುಪ್ರಭಾತ ಕೇಳಲು ದೇವಸ್ಥಾನದ ಹತ್ತಿರವೇ ಇರಬೇಕೆಂದಿಲ್ಲ. ಟಿವಿ, ರೇಡಿಯೋಗಳು ಬೇಕೆಂದವರ ಮನೆಯಲ್ಲಿ ಒಂದೇಕೆ ಹನ್ನೊಂದು ವಿವಿಧ ಸುಪ್ರಭಾತ ಬಿತ್ತರಿಸುತ್ತವೆ.  ಐ.ಪಾಡು ಮತ್ತು ಮೊಬೈಲುಗಳಂತೂ ಮಲಗಿದವರ ತಲೆ ದಿಂಬಿನಡಿಯಲ್ಲೆ ಇಲ್ಲವಾದರೆ ಕಿವಿಯಲ್ಲೆ ಗುಣುಗುಡುತ್ತವೆ.


ದೇಗುಲದ ಪ್ರದಕ್ಷಿಣೆ ಮಾಡುತ್ತಿರುವ ಗಜರಾಜ


 

ಇಷ್ಟೆಲ್ಲ ಯೋಚನಾ ಲಹರಿಗೆ ಕಾರಣ ಇತ್ತೀಚೆಗೆ ದೇವಸ್ಥಾನ  ಒಂದರಲ್ಲಿ  ನೋಡಿದ ಒಂದು ದೃಶ್ಯ..ಮಂಡ್ಯ ಜಿಲ್ಲೆಯ ಮೇಲು ಕೋಟೆಗೆ ಬಂದು ಹೊಯ್ಸಳಅರಸ ವಿಷ್ಣುವರ್ಧನನ ಗುರುವಾದ ಶ್ರೀ ರಾಮಾನುಜರ ಹುಟ್ಟೂರಾದ ಶ್ರೀ ಪೆರಂಬುದೂರಿಗೆ ಭೇಟಿ ನೀಡಿದೆವು. ಅದೂ ಚುಮು ಚುಮುಮುಂಜಾನೆ. ಮೇಲೆ ಜತೆಗೆ ಜಿನಜಿನಿ ಮಳೆಬೇರೆ. ಈ ಸಲ ಚೆನ್ನೈನ  ಮನೆಯಲ್ಲಿ ದಸರಾ ಹಬ್ಬಕ್ಕೆ ಎಲ್ಲರೂ ಸೇರಿದ್ದೆವು.ಸರಿ ಎಲ್ಲರೂ ಬಂದ ಮೇಲೆ ಯಾಕೆ ಒಂದ ಸುತ್ತು ಪ್ರವಾಸ ಹೋಗಬಾರದೆಂದು  ಬಾಡಿಗೆ ಕಾರು ಗೊತ್ತುಮಾಡಿದೆವು. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಮಳೆಹಿಡಿದುಕೊಂಡಿತು.  ಧೈರ್ಯಮಾಡಿ ಹೊರೆಟೆವು. ಶ್ರೀ ಪೆರಂಬೂರು ತಲುಪಿದಾಗ ಬೆಳಗಿನ  ಆರೂವರೆ ಗಂಟೆ.ಶ್ರೀ ಪೆರಂಬೂರು ಎಂದರೆ ನಮಗೆ ಏನೋ ಒಂದು ರೀತಿಯ ಆಸಕ್ತಿ. ನಮ್ಮ ಮೇಲುಕೋಟೆಗೆ ಬಂದು ನೆಲಸಿದ ರಾಮಾನುಜಾಚಾರ್ಯರ ಜನ್ಮ ಸ್ಥಳ. ಶ್ರೀ ವೈಷ್ಣವರ ಯಾತ್ರಾಸ್ಥಳ. ಹೇಗಿದ್ದರೂ ಹೈವೇ ಪಕ್ಕದಲ್ಲೆ ಇದೆ. ಅರ್ಧ ಗಂಟೆಯಲ್ಲಿ ನೋಡಿದರಾಯಿತುಎಂದು ಕೊಂಡು ಹೋದವರಿಗೆ  ತುಸು ನಿರಾಶೆಯೆ ಆಯಿತು.ದೇವಸ್ಥಾನದ ಬಾಗಲು ತೆರೆದಿತ್ತು.ದೇವರ ದರ್ಶನ ಮಾಡಿ ಹೊರಡೆವ ನಮ್ಮ ಯೋಜನೆ ತಡೆಯಾಯಿತು. ನಮ್ಮಂತೆ ಇನ್ನೂ ಅನೇಕರು ಕಾದುನಿಂತಿದ್ದರು. ಆದರೆ ಯಾರಿಗೂ ಪ್ರವೇಶನೀಡಿರಲಿಲ್ಲ.ಕಾರಣ ಕೇಳಿದಾಗ ನೈರ್ಮಾಲ್ಯದರ್ಶನ ಮೊದಲು ಮಾನವರಿಗೆ ಅಲ್ಲ ಎಂಬ ಉತ್ತರ ಬಂದಿತು.ಅಷ್ಟರಲ್ಲೆ ಅಲ್ಲಿಗೆ ಆನೆಯೊಂದು ಬಂದಿತು. ನಮಗೆ ಆನೆಯಾದರೂ ನೋಡಲು ಸಿಕ್ಕಿತಲ್ಲ ನೋಡಲು ಎಂದು ನಮ್ಮೊಡನಿದ್ದ ಮಕ್ಕಳಿಗೆ ಗಜರಾಜನ ದರ್ಶನ ಮಾಡಿಸಿದೆವು.ನಂತರ ತಿಳಿಯಿತು ಗಜರಾಜನ ಪ್ರವೇಶದ ನಂತರವೆ ನಮಗೆಲ್ಲ ದೇವಾಲಯದ ಪ್ರವೇಶ ಎಂದು ನಮಗಂತೂ ಅಚ್ಚರಿ. ಆನೆ ಏನೂ ಚಿಕ್ಕದಲ್ಲ. ಆಗಲೆ ನಡುವಯಸ್ಸಿನದು. ಅದಕ್ಕೆ ತಕ್ಕಂತೆ ಬೃಹತ್ತಾಗಿ ಬೆಳೆದಿತ್ತು.ನಾವು ದೇವಾಲಯದ ಗರ್ಭಗುಡಿಗೇ ಅದರ ಪ್ರವೇಶ ಎಂದಂದಾಗ ಅರೆ ಕ್ಷಣ ದಂಗಾದೆವು. ಇದು  ದೇವಸ್ಥಾನದ ಒಳಗೆ ಅದೂ ಆರೆಂಟು ಮೆಟ್ಟಿಲು ಹತ್ತಿ ಒಳ ಹೋಗುವದು ಎಂದರೆ ಕುತೂಹಲದ ವಿಷಯವೆ. 


ದೇವರ ಪ್ರಥಮ ದರ್ಶನಕ್ಕೆ ದೇಗುದಲ್ಲಿ ಹೋಗುತ್ತಿರುವ ಗಜರಾಜ ಮತ್ತು ಗೋ ಮಾತೆ

ರಾಜ ಸೊಂಡಿಲು ಎತ್ತಿ ಘೀಳಿಟ್ಟು ತನ್ನ ಗೌರವ ಸಲ್ಲಿಸಿದಮೊದಲು ಆದಿಕೇಶವನ ನಂತರ ರಾಮಾನುಜರ ಅರ್ಚನೆಯಾಯಿತು. ನಂತರ ಹಾಲನ್ನು ತೀರ್ಥಎಂದು ಮತ್ತು ಹಾಲಿನಲ್ಲಿ ಮಾಡಿದ ಗೋಧಿ ರೊಟ್ಟಿಯ ತುಣುಕುಗಳನ್ನು ಪ್ರಸಾದವೆಂದು ನೀಡಲಾಯಿತು. ರಾಮಾನುಜರ ಕಾಲದಿಂದಲೂ ಈ ಆಚರಣೆ ಇದೆ ಎಂದು ಭಕ್ತರು ಹೇಳಿದರು.ಪ್ರಸಾದವೆಂದರೆ ಸಿಹಿಪೊಂಗಲ್‌, ಮೊಸರನ್ನ ಪುಳಿಯೋಗರ ಇತ್ಯಾದಿಗಳೆಂದು ತಿಳಿದಿದ್ದ ನಮಗೆ ಆಶ್ಚರ್ಯವೇ ಆಶ್ಚರ್ಯ. ಬೆಳಗಿನ ವಿಶ್ವರೂಪದರ್ಶನದ ಸಮಯದಲ್ಲಿ ಸದಾ ಇದೇ ಪದ್ದತಿ ಎಂದು ಕೆಲಭಕ್ತರು ತಿಳಿಸಿದರು. ಫೂಜೆ ಮುಗಿಯುವುದರಲ್ಲಿ ಗೋಮಾತ್ರವಿಸರ್ಜನೆ ಆಯಿತು. ಹಾಗಾದಾಗ ಮಾತ್ರ ಆವರಣ ಸುದ್ಧಿಯಾಗಿದೆ ಎಂದು ಸಂಕೇತ ಬಂದಂತೆ. ಮುಂದಿನ ವಿಧಿವಿಧಾನಗಳು ಶುರುವಾಗಲು ಗೋಮೂತ್ರದ ಅಗತ್ಯವಾಗಿ ಇರಲೇಬೇಕಂತೆ. ಮತ್ತು ಅದು ತಪ್ಪದೇ ಆಗುವುದು ಎಂದು ತಿಳಿದು ಬಂತು. ಬಹುಶಃ ಹಸುವೂ ಈ ಆಚರಣೆಗ  ಹೊಂದಿಕೊಂಡು ತಪ್ಪದೆ ಗೋಮಾತ್ರ ವಿಸರ್ಜಿಸಬಹುದೆಂದು ಕೊಂಡೆವು. ರಷ್ಯಾದ ಮನಶಾಸ್ತ್ರಜ್ಞ ಪಾವಲೋವ್‌ ನಾಯಿಯ ಮೇಲೆ ಮಾಡಿದ್ದ ಪ್ರಯೋಗದ ಪುನರಾವರ್ತನೆ ಇದಾಗಿರಬಹುದೆ ಎನಿಸಿತು.
ಇನ್ನು ಬೆಳಗಾಗೆದ್ದು ನೋಡುವ ಮಾತಿಗೆ ಬಂದರೆ ಯಥಾ ರೀತಿ ಟಿ.ವಿಯದೇ ಪಾರುಪತ್ಯ. ಏನುನೋಡುವುದು? ದೇವರು ದೇವಿಯರ ದರ್ಶನ ಮಾಡುವುದೋ ಕುಣಿಯುವ ಕಾಮಿನಿಯರತ್ತ ಕಣ್ಣು ಹಾಯಿಸುವುದೋ  ಎನ್ನುವುದು  ಅವರವರ ಅಭಿರುಚಿಗೆ ಬಿಟ್ಟ ವಿಚಾರವಾಗಿದೆ.
ಮುಂಜಾನೆ ಎದ್ದು ಯಾರ ಯಾರ ನೋಡಲಿ ಎಂಬ ವಿಚಾರ ಗಾಳಿಪಟದಂತೆ ಮನದಾಗಸದಲ್ಲಿ ಹಾರಾಡಿದೆ.
ನಾವು ಕಂಡು ಕೇಳಿ ಅರಿಯದ ವಿಷಯ. ಅನೇಕ ದೇಗುಲಗಳಲ್ಲಿ ಆನೆ ಇರುವುದು ಸಾಮಾನ್ಯ. ಆದರೆ ಅದು ಹೊರಗೆ ನಿಲ್ಲುವುದು. ಆದರೆ ಇಲ್ಲಿ ಅದು  ಸೀದಾ ದೇವರು ಕಾಣುವಂತೆ ಮಧ್ಯರಂಗಕ್ಕೆ ಬರುವುದು. ಆನೆಯನ್ನು ಬಾಗಿಲಬಳಿ ನಿಲ್ಲಿಸಿ ಉತ್ಸವ ಮೂರ್ತಿಯ ದರ್ಶನ ಮಾಡಿಸುವರು ಎಂದುಕೊಂಡಿದ್ದ ನಮ್ಮ ಊಹೆ ತಪ್ಪಾಗಿತ್ತು. 


 ವಾದ್ಯ ಸಮೇತ  ದೇಗುಲದ ಪ್ರದಕ್ಷಿಣೆಗೆ ಹೊಟಿತು. ಜತೆಗೆ ದೇವರ ಮುಖಮಾರ್ಜನಕ್ಕಾಗಿ ನೀರಿನಕುಂಭ ಹೊತ್ತ ಅರ್ಚಕರೂ ಇದ್ದರು.ಆನೆಯು ಗಂಭೀರವಾಗಿ ದೇಗುಲದ ಹೊರಪ್ರಕಾರದ ಒಂದು ಪ್ರದಕ್ಷಿಣೆ ಹಾಕಿತು. ನೋಡ ನೋಡುತ್ತಿರುವಂತೆಯೇ ಎಂಟು ಮೆಟ್ಟಲುಗಳನ್ನೂ ಹತ್ತಿ ಮಧ್ಯರಂಗ ಪ್ರವೇಶಿಸಿತು. ನಂತರವೇ ನಮ್ಮನ್ನೂ ಒಳ ಬಿಟ್ಟರು. ಅಲ್ಲಿ ದೇವರಿಗೆ ಮುಖ ಮಾರ್ಜನಕ್ಕೆ ನೀರಿನ ಜತೆಗೆ ಮುಖವರಸಿಕೊಳ್ಳಲು ರೇಷ್ಮೆ ವಸ್ತ್ರವಿರುವ ತಟ್ಟೆ.ಒಳಗೆ ಹೋದಾಗ ನಮಗೆ ಇನ್ನೂ ಒಂದು ಅಚ್ಚರಿಕಾದಿತ್ತು ಮಧ್ಯರಂಗದಿಂದ ಒಳಗಿನ ಆವರಣದಲ್ಲಿ ಸೀದಾ ದೇವರ ಎದುರಾಗಿ ಹಸು ಒಂದು ಬಂದು ನಿಂತಿತ್ತು. ಆನೆಯನ್ನು ಅದರ ಮಾವುತನು ಮುನ್ನೆಡಿಸಿ ಅದಕ್ಕಾಗಿಯೆ ನಿಗದಿಯಾದ ಒಳಪ್ರಕಾರದಲ್ಲಿ ದೇವರು ಅದನ್ನು ನೋಡುವಂತೆ ನಿಲ್ಲಿಸಿದ. ಆಗ ಅರ್ಚಕರು ಗರ್ಭಗುಡಿಯ ಬಾಗಿಲು ತೆರೆದರು.ಒಳಗೆ ಹೋಗಿ ಪ್ರಾತಃ ಪೂಜೆ ಸಲ್ಲಿಸಿ ನಂತರ ಅಲ್ಲಿರುವ ರೇಷ್ಮೆಯ ತೆರೆಯನ್ನೂ ಸರಿಸಿದರು  . 

ದೇವರ ದರ್ಶನ ಮೊದಲು ಗೋ ಮಾತೆಗೆ ಹಾಗೂ ಗಜರಾಜನಿಗೆ. ತೆರೆ ಸರಿದ ತಕ್ಷಣ ಗಜrA
ಅನೇಕ ದೇವಾಲಯಗಳಲ್ಲಿ ಆನೆ ಹಸುಗಳು ಇವೆ. ಆದರೆ ದೇವರ ಪ್ರಥಮ ದರ್ಶನ ಅವಕ್ಕೆ  ಮೀಸಲು ಎಂಬುದು ಮಾತ್ರ  ಈವರೆಗೆ ನಮಗೆ ಗೊತ್ತಿರಲಿಲ್ಲ.ಕಾರಣ ಕೇಳಿದಾಗ ಮೊದಲಿಂದ ಬಂದ ಸಂಪ್ರದಾಯ ಎಂಬ ಸಿದ್ಧ ಉತ್ತರ ಸಿಕ್ಕಿತು.
ಸಮಯ ಎಂಟುಮೀರಿತ್ತು. ಹೊಟ್ಟೆ ತಾಳ ಹಾಕುತಿತ್ತು. ಉಪಹಾರಕ್ಕೆ ವಿಚಾರಿಸಿದಾಗ ಹತ್ತಿರದಲ್ಲಿಯೇ ಇದ್ದ ರಾಮಾನುಜ ಹೋಟೆಲ್‌ ತೋರಿಸಿದರು.  ಮೇಜಿನ ಮೇಲೆ ಕುಡಿಬಾಳೆ ಎಲೆ ಅದರಲ್ಲಿ ಬಿಸಿಬಿಸಿ ಇಡ್ಲಿ, ವಡೆ, ಜೊತೆಗೆ ಪೊಂಗಲ್‌ ,ಪೂರಿತರಿಸಿ ಹಂಚಿಕೊಂಡು ರುಚಿ ನೋಡಿದೆವು.ಅಲ್ಲಿಒಂದೊಂದೆ ಪೂರಿ ಕೊಡುವ ಅವಕಾಶವಿತ್ತು. ಗುಣ ಮಟ್ಟಚೆನ್ನಾಗಿತ್ತು ಏಳ ಹೊರಟಾಗ ನಾವು ತಿಂದ ತಿಂಡಿಯ ಎಲೆಯನ್ನು ನಾವೆ ಎತ್ತಿ ಹೊರಗಿರುವ ಡ್ರಮ್‌ನಲ್ಲಿ ಹಾಕಲು ತಿಳಿಸಿದರು. ಆಗ ನನಗೆ ಶ್ರೀ ವೈಷ್ಣವರ ಮನೆಗೆ ಹೋದಾಗಿನ ನೆನಪು ಬಂತು.ಅವರ ಮನೆಯಲ್ಲಿ ಎಂಜಲು ಮುಸುರಿಯ ಬಗ್ಗೆ ಕಟ್ಟುನಿಟ್ಟು. ಅವರ ಮನೆಯಲ್ಲಿ ನೀರಿಗೆ ತೀರ್ಥ ಎನ್ನುವರು.ಅದಕ್ಕೆ ಕಾಣುತ್ತೆ ನೀರನ್ನು ಕುಡಿಯುವಾಗಲೂ ದೇವರ ತೀರ್ಥ ಕುಡಿದಷ್ಟೆ ಶ್ರದ್ಧೆ.. ಎಲ್ಲರೂ ನೀರಿನ ಲೋಟವನ್ನು ತುಟಿಗೆ ತಾಗಿಸದೆ ಕುಡಿಯುವರು. ನಾವೂ ಅವರನ್ನು ಅನುಸರಿಸಲು ಹೋಗಿ ನೀರೆಲ್ಲ ಮೈ ಮೇಲೆ ಚೆಲ್ಲಿ ತೀರ್ಥದಿಂದ ಅಭಿಷೇಕವಾಗಿತ್ತು. ಬಾಳೆ ಹಣ್ಣನ್ನೂ ತುಸುವೆ ಸುಲಿದು ಕೈನಿಂದ ಮುರಿದು ತಿನ್ನುತ್ತಿದ್ದರು.ಪೂರ್ತಿ ಹಣ್ಣನ್ನು ಕಚ್ಚುತ್ತಿರಲಿಲ್ಲ. ಅವರು ಬಿಸಿ ಕಾಫಿಯನ್ನು ಕುಡಿವಬಗೆ ನಮಗೆ ಅಚ್ಚರಿ ಮೂಡಿಸುತಿತ್ತು.ಶ್ರೀವೈಷ್ಣವರ ಹೋಟೆಲಿನಲ್ಲಿ ಆಷ್ಟು ಮಡಿವಂತಿಕೆ ಇರಲಿಲ್ಲ.  ಅದು ನಮ್ಮ ಪುಣ್ಯ ಎಂದುಕೊಂಡು ಅಲ್ಲಿಂದ ಹೊರೆಟೆವು.

ವಿಚಾರ ಸಂಕಿರಣ

ಪ್ರೊ. ಲಿಂಗಯ್ಯನವರ ಬದಕು  ಮತ್ತು ಬರಹ ವಿಚಾರ ಸಂಕಿರಣ

 

ಸ್ವಾಗತ ಎಸ್‌.ವಿ.ಶ್ರೀನಿವಾಸರಾವ್‌ ಗೌರವ ಕಾರ್ಯದರ್ಶಿಗಳಿಂದ





ಶ್ರೀನಿವಾಸರಾವ್‌, ಅಬ್ದುಲ್‌ಗಫೂರ್‌ ಕಾರ್ಯದರ್ಶಿಗಳು. ಚಕ್ಕೆರೆ ಶಿವಶಂಕೆರ್, ಎಚ್‌ ಎಂ ಕೃಷ್ಣಯ್ಯ ಅಧ್ಯಕ್ಷರು,
ಪ್ರೊ ಅಶ್ವತ್ಥನಾರಾಯಣ ಮತ್ತು ಎಚ್‌ಶೇಷಗಿರಿರಾವ್‌


"ಕನ್ನಡವೆ ಎನ್ನ ಉಸಿರು ಎಂದು ಬದುಕಿದ ಪ್ರೊ. ಲಿಂಗಯ್ಯ" ಉಪನ್ಯಾಸ ಎಚ್‌ ಶೇಷಗಿರಿರಾವ್‌ ಅವರಿಂದ





Saturday, October 20, 2012

Thursday, October 18, 2012

ಸ. ರಘುನಾಥರೊಂದಿಗೆ -ಒಂದು ಸಾರ್ಥಕ ಸಂಜೆ



“ಜಗವೆಲ್ಲ ನಗುತಿರಲಿ  ಜಗದಳಲು ಎನಗಿರಲಿ” ಎಂಬ ಕವಿವಾಣಿಯನ್ನು ಬದುಕಿ ತೋರುತ್ತಿರುವ ವ್ಯಕ್ತಿಯೊಬ್ಬನನ್ನು ನೋಡುವ ,ಅವರ ಮನದಾಳದ ತುಮುಲವನ್ನು ಆಲಿಸುವ ಮತ್ತು ಕವನವಾಚನವನ್ನು ಕೇಳುವ ಅಪರೂಪದ ಅವಕಾಶ ಶನಿವಾರ ಸಂಜೆ ಕಿ.ರಂ ನುಡಿಮನೆಯಲ್ಲಿ ನಡೆಯುವ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಲಭಿಸಿತು.ಅವರನ್ನು ಚಿಂತಾಮಣಿಯ ಹತ್ತಿರದ ಹಳ್ಳಿಯಿಂದ ಕರೆತಂದವರು, ಅವರ  ಜೀವದ ಗೆಳೆಯ ಕವನದಿಂದ  ಕಚಗುಳಿ ಇಡುತ್ತಾ ಚಿಂತನೆಗೆ ತೊಡಗಿಸುವ,ಲಘುಧಾಟಿಯಲ್ಲೆ ಮನಸಿನ ಆಳಕ್ಕೆ ಲಗ್ಗೆ ಇಡುವ,ಕಾವ್ಯ ಘನ ಗಂಭೀರ ಭಾವಪ್ರಪಂಚಕ್ಕೆ ಸೇರಿದುದು ಎನ್ನುವವರ ಮೊಗದಲ್ಲೂ ಕೆಲವರು ಪೋಲಿ ಎನಬಹುದಾದ ಸಾಲುಗಳಿಂದ ಮುಗುಳುನಗೆ ಮೂಡಿಸುವ,  ಪ್ರೀತಿಯಿಂದ   ತುಂಟ ಕವಿ ಎಂದೂ ಕರೆಸಿಕೊಳ್ಳುವ  ಬಿ.ಆರ್‌.ಲಕ್ಷ್ಮಣ ರಾವ್‌.
ಕನ್ನಡ ಓದುಗ ಪ್ರಪಂಚಕ್ಕೆ ಸಂವೇದನಾಶೀಲ ಕವಿ ಮತ್ತು ಕಥೆಗಾರ ಎಂದು ಪರಿಚಿತವಾಗಿರುವ ಸ. ರಘುನಾಥ ಚಿಂತಾಮಣಿಯ ಹತ್ತಿರದ ಹಳ್ಳಿಯಾದ ಗೌನಿಪಲ್ಲಿಯಲ್ಲಿ ಪ್ರಾಥಮಿಕಶಾಲಾ ಶಿಕ್ಷಕರು.ಶಾಲೆಗೆ ಬಂದ ಮಕ್ಕಳಿಗೆ ಕಲಿಸುವುದು ಮಾತ್ರ ಅವರ ವೃತ್ತಿಯಾದರೆ. ಸುತ್ತಮುತ್ತಲ ಅನಾಥಮಕ್ಕಳ,ಪೋಲಿ ಅಲೆಯುವವರ,ಹೇಳುವವರು ಕೇಳುವವರು ಯಾರೂ ಇಲ್ಲದ ಮಕ್ಕಳು ಕಣ್ಣಿಗೆ ಬಿದ್ದರೆ ಅವರನ್ನು ಕರೆತಂದು ಆಶ್ರಯ ಕೊಟ್ಟು ಮೊದಲು ಹೊಟ್ಟೆಗೆ ಅನ್ನ ಹಾಕಿ ನಂತರ ಅಕ್ಷರ ಕಲಿಸಿ, ವೃತ್ತಿ ಮಾರ್ಗದರ್ಶನ ನೀಡಿ ತನ್ನ ಕಾಲಮೇಲೆ ತಾನು ನಿಲ್ಲುವಂತೆ ಮಾಡಿ, ದುಡಿಮೆಯ ದಾರಿಗೆ ಹತ್ತಿದ ಮೇಲೆ ಉಪಕಾರ ಸ್ಮರಣೆ ಮಾಡಲು, ಋಣ ಸಂದಾಯ ಮಾಡಲು ಪುನಃ ಬಂದು ಕಾಣಲೂ ಕೂಡದು ಎಂಬ ಕಟ್ಟುನಿಟ್ಟಿನ ನಿಷ್ಕಾಮ ಕರ್ಮಿ. .ಕಿಂಚಿತ್‌ ಸೇವೆ ಮಾಡಿದರೂ ಕೊಂಬು ಕಹಳೆ ಊದಿಸಿಕೊಳ್ಳುವ ಕಾಲಘಟ್ಟದಲ್ಲಿ, ಮಾಡಿದ ಕೂಡಲೆ ಮರೆತು ಬಿಡುವ ಮನಃಸತ್ವ ಅವರದು. ಅದಕ್ಕೆ ಪೂರಕವಾದದ್ದು ಅವರ “ನಮ್ಮ ಮಕ್ಕಳು”  ಎಂಬ ಸಂಘಟನೆ. ಅವರ ಗೆಳೆಯನ ಮಾತಿನಲ್ಲೆ ಹೇಳುವುದಾದರೆ ಅವರದು “ಏಕ ವ್ಯಕ್ತಿಯ ಸೈನ್ಯ.” ತನ್ನ ಸೇವಾಕಾರ್ಯಕ್ಕೆ ಅನ್ಯರ ನೆರವು ಕೇಳದ, ಸರಕಾರದ ಸಹಾಯ ಬಯಸದ,ಸಮಾಜದ ಸಹಕಾರ ನಿರೀಕ್ಷಿಸದ ಆರಿಸಿ ಕೊಂಡ ಹಾದಿಯಲ್ಲಿ ಅತ್ತಿತ್ತ ನೋಡದೆ ಮುನ್ನೆಡೆಯುತ್ತಿರುವ ಒಂಟಿ ಸಲಗ.
ಸಮುದ್ರ ಮಥನದಲ್ಲಿ ವಿಷ ಉದಿಸಿದ ಮೇಲೆಯೇ ಅಮೃತ ಬಂದಿದ್ದು ಎನ್ನು ನಂಬಿಕೆಗೆ ಅವರ ಜೀವನ ಪ್ರತ್ಯಕ್ಷ ಸಾಕ್ಷಿ. ಹುಟ್ಟುತ್ತಲೆ ಅನಾಥ. ಮಗುವಾಗಿದ್ದಾಗಲೆ ಹೆತ್ತವರ ಮಮತೆಯಿಂದ ವಂಚಿತ. ತಂದೆಗೆ ಮಾಟ,ಮಂತ್ರ ವಾಮಾಚಾರದ ಗೀಳು. ಹೆತ್ತ ತಾಯಿಗೆ ಹುಸಿಯಾಡುತ್ತಾ ಭ್ರಮಾ ಲೋಕದಲ್ಲಿರುವ ಚಟ. ಪರಿಣಾಮವಾಗಿ ಎಳೆಯ ಮಗುವಿಗೆ ಆಸರೆ ಅಜ್ಜಿ ತಾತ. ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನ. ಎಲ್ಲೆಲ್ಲೂ ವಿಷಾದದ ಛಾಯೆ. ಬದುಕೆ ಬೇಡವೆಂಬ ಭಾವದಿಂದ ಚಲಿಸುವ ರೈಲಿಗೆ ತಲೆ ನೀಡಿ ಶಾಶ್ವತ ಶಾಂತಿ ಪಡೆವ ಹತಾಶೆ. ಪರಿಣಾಮ ಕಾಲೊಂದು ಕಳೆದುಕೊಂಡು ಜೀವನ ಪರ್ಯಂತ ಎರಡು ಬಗಲು ಗೋಲು ಬಳಸಿ ನಡೆದಾಡುವ ಯೋಗ. ಒಂಟಿಕಾಲ ಬಂಟನಿಗೆ ತನಗಿಂತ ಸುತ್ತಮತ್ತಲ ನೊಂದವರ, ದೀನರ,ಅನಾಥರ ಕಷ್ಟ ಕೋಟಲೆಯ ಹೊರೆ ಹಗುರ ಮಾಡುವ ಹಂಬಲ. ಜೀವನದ ಉದ್ದಕ್ಕೂ.ಅದೆ ಕಾಯಕ
ಹುಟ್ಟಿದ್ದು ಮುಂದುವರಿದ ಜಾತಿಯಲ್ಲಿ. ಆದರೆ ಬೆಳೆದಿದ್ದು ಸುತ್ತಮುತ್ತಲಿನ ಸಹೃದಯಿ ತಾಯಿಯರ ನೀಡಿದ ಕೈತುತ್ತಿನಿಂದ. ಅವರು ತಿಂದ ಮುದ್ದೆಗೆ ಮುಸ್ಲಿಂ, ಹಿಂದು,ಆಜಾತಿ,ಈ ಜಾತಿ ಎಂಬ ಸೋಂಕೆ ಇಲ್ಲ. ಅವರೆ ಹೇಳಿದಂತೆ ಅವರ ದೇಹದಲ್ಲಿ ಹರಿಯುತ್ತಿರುವುದು ಎಲ್ಲ ಜಾತಿ ವರ್ಗದವರ ಋಣದ ರಕ್ತ.ಅದಕ್ಕೆ ಇರಬೇಕು ಸದಾ ಜಾಗೃತವಾಗಿರುವ ಋಣ ಪ್ರಜ್ಞೆ.ಮೇಲು ಕೀಳು ಎಂದು ಕಚ್ಚಾಡುವವರ ನಡುವೆ ನೌಕರಿ ನೀಡಿದ ದಲಿತ ಅಧಿಕಾರಿಯನ್ನು ನೆನವಾಗ ಕಣ್ಣಂಚಿನಲ್ಲಿ ಕಂಬನಿ.
ಅವರಿಗೆ ಕಥೆ,ಕವನ ಮನದಲ್ಲಿ ದಟ್ಟವಾಗಿ ಮೇಳೈಸಿದ ಭಾವಗಳನ್ನು ಅಭಿವ್ಯಕ್ತಗೊಳಿಸುವ ಸಾಧನ ಮಾತ್ರ. ಅದೆ ಜೀವನದ ಗುರಿಯಲ್ಲ. ಸಾಹಿತ್ಯಕ್ಕಿಂತ ಜೀವನ ಶ್ರೇಷ್ಟ ಎಂಬುದು ಅವರ ದೃಢವಾದ ನಂಬಿಕೆ. ನಂಬಿಕೆಗೆ ತಕ್ಕಂತೆ ನಡೆ. ಮೇಷ್ಟ್ರ ಕೆಲಸದ ಆದಾಯವನ್ನೂ ನಾಳೆಗೆ ಉಳಿಸಿಕೊಳ್ಳದೆ ಎಲ್ಲವನ್ನೂ “ನಮ್ಮ ಮಕ್ಕಳ”  ಯೋಗಕ್ಷೇಮಕ್ಕೆ ಮೀಸಲು. ಸಾಹಿತ್ಯ ಕೃಷಿಯಿಂದ ಬರುವ ಗೌರವಧನವೂ ಅದೇಕೆಲಸಕ್ಕೆ. ಒಂಡೆರಡು ಪತ್ರಿಕೆಗಳಲ್ಲಿ ಸತತ ಅಂಕಣ ಬರಹ. ಗೆಳೆಯರು, ಏನು ರಘುನಾಥ, ಹೀಗೆ ಬರೆಯುತ್ತಿರುವೆ ? ಎಂಬ ಮಾತಿಗೆ ನಮ್ಮ ಮಕ್ಕಳಿಗೆ ಅಷ್ಟೋ ಇಷ್ಟೋ ಅನುಕೂಲವಾಗುವುದಲ್ಲ, ಅದಕ್ಕೆ ಬರೆಯುವೆ ಎಂಬ ಉತ್ತರ. ಬಂದ ಸಂಭಾವನೆಎಲ್ಲಾ “ನಮ್ಮ ಮಕ್ಕಳ” ನಿಧಿಗೆ. ಅವರ ಗೆಳೆಯ ಮಯೂರದಲ್ಲಿ ಬರೆದ ಲೇಖನದಿಂದ ಪ್ರಭಾವಿತರಾದ ಓದುಗರು ಒಳ್ಳೆಯ ಕೆಲಸಕ್ಕೆ ಕೈಜೋಡಿಸಲು ಕಳುಹಿಸಿದ ಹಣ ಸುಮಾರು ೪೦ ಸಾವಿರ. ಆದರೆ ಯಾರೂ ಲೆಕ್ಕ ಪತ್ರ ಕೇಳದೆ ನಿಮಗೆ ತೋಚಿದ ಕೆಲಸಕ್ಕೆ ಖರ್ಚು ಮಾಡಿ ಎಂಬ ಮಾತು ಅವರನ್ನು ಕುಗ್ಗಿಸಿದೆ. ಈ ವಿಶ್ವಾಸದ ಋಣ ಮುಕ್ತನಾಗಲು ಯತ್ನಿಸದೆ ಅದನ್ನು ಕೊನೆ ತನಕ ನೆನಸುವ ಹಂಬಲ ಅವರದು.ಯಾವುದೋ ಸಮಾರಂಭದಲ್ಲಿ ಗೌರವ ಧನ ಎಂದು ನೀಡಿದ ಹಣದಿಂದ ಹೆಂಡತಿಗೆ ಸೀರೆ ಕೊಡಿಸಿದೆ. ಆಹಣ ಇನ್ನೂ ವಾಪಸ್ಸು ನೀಡಲಾಗಿಲ್ಲ ಎಂಬ ಹಳಹಳಿ.  ಅವರಿಗೆ ತಕ್ಕ ಮಡದಿ. ಅವರು ಸಾಹಿತಿ ವಿಜಯರಾಘವನ್‌ ಅವರ ಸೋದರಿ. ತನ್ನ ಗಂಡ ಮಗುವಿಗೆ ಮಾತ್ರವಲ್ಲ , ಗಂಡನ “ನಮ್ಮ ಮಕ್ಕಳ” ಸದಸ್ಯರಿಗೂ ಅಗತ್ಯಬಿದ್ದಾಗ  ಹೊಟ್ಟೆಗೆ ತುಂಬಿಸುವ  ಅನ್ನಪುರ್ಣೆ.ಊರಿಗೆಲ್ಲ ಶಾಂತ ಮೂರ್ತಿಯಾದರೂ, ಮನೆಯಲ್ಲಿ ಹಲವೊಮ್ಮೆ ದೂರ್ವಾಸನಾಗುವ ಪತಿಯ ವೈಚಿತ್ರಗಳನ್ನೆಲ್ಲ ಹೊಟ್ಟೆಗೆ ಹಾಕಿಕೊಂಡು ಕ್ಷಮಯಾ ಧರಿತ್ರಿಯಾಗುವ ದೊಡ್ಡ ಗುಣ
ಸಾಹಿತ್ಯ ಇವರ ಕಾರ್ಯದ ಉಪ ಉತ್ಪನ್ನವಾದರೂ ಅದರ ವ್ಯಾಪ್ತಿ ಬಹಳ. ಕಥೆ, ಕಾದಂಬರಿ, ಕನ್ನಡ ದಿಂದ ತೆಲುಗಿಗೆ ತೆಲುಗಿನಿಂದ ಕನ್ನಡಕ್ಕೆ ಅನುವಾದದ ಕೆಲಸ ನಡೆದ ಇರುವುದು.
ಹಾಗೆಂದು ಮಾಡುವ ಉದ್ಯೋಗಕ್ಕು ಪೂರ್ಣ ನ್ಯಾಯ ಒದಗಿಸದಿದ್ದರೆ ಊಟ ಸೇರದು. ಸರಕಾರದ “ಸರ್ವ ಶಿಕ್ಷಣ ಅಭಿಯಾನ,” “ಮರಳಿ ಶಾಲೆಗೆ ಬನ್ನಿ”   ಮೊದಲಾದ ಯೋಜನೆಗಳ ಹೊರತಾಗಿಯೂ ಶಿಕ್ಷಣ ವಂಚಿತರಾದರನ್ನು ಹುಡುಕಿ ಹಿಡಿದು ತಂದು ಅನ್ಣ ಬಟ್ಟೆ ವಸತಿ ನೀಡಿ ಅಕ್ಷರ ಕಲಿಸುವ ಕಾಯಕ.ಏನು ಮಾಷ್ಟ್ರೆ,ಮುಂದೆ  ಭಯೋತ್ಪಾದಕರಾಗಬಹುದಾದ  ಮಕ್ಕಳಿಗೆ ಉತ್ತೇಜನ ಕೊಡುವಿರಲ್ಲ?ಕಳ್ಳರು ಕೆಡಿಗಳ ಮಕ್ಕಳಿಗೆ ಆಶ್ರಯ ನೀಡುವಿರಲ್ಲಾ ಎಂಬ ಮಾತಿಗೆ ಮನದಲ್ಲೆ ಮರುಗುತ್ತಾ ಮುಗಳ್ನಗುವರು.ಹಸಿವೆಗೆ ಜಾತಿ ಇಲ್ಲ, ಅನಾರೋಗ್ಯಕ್ಕೆ ಮತವಿಲ್ಲ, ನೋವಿಗೆ ಧರ್ಮದ ಹಂಗಿಲ್ಲ, ಎಂಬ ಸತ್ಯವನ್ನು ಸ್ವಂತ ಅನುಭವದಿಂದ ಅರಿತಿರುವ ಅವರು,ಮಕ್ಕಳ, ವೃದ್ಧರ , ರೋಗಿಗಳ, ಮಹಿಳೆಯರ, ಶೋಷಿತರ ಕಣ್ಣಿರು ಒರೆಸುವ ಕೈಆಗುವ ಯತ್ನ ಅವರದು.ಪ್ರಾಥಮಿಕ ಅಗತ್ಯ ಒದಗಿಸಿ ಗಿಡ ಮೂಲಿಕೆಗಳ ಔಷಧಿ ನೀಡಿ ಸಾಂತ್ವನ ಹೇಳುವುದೆ ಅವರ ಗುರಿ. ದಿನದಿಂದ ದಿನಕ್ಕೆ ವಿನಾಶದತ್ತ ಸಾಗುತ್ತಿರುವ ಗ್ರಾಮ ಸಂಸ್ಕೃತಿ, ಹಾಳಾಗುತ್ತಿರುವ ಪರಿಸರ ಅವರನ್ನು ಬರೆಯಲಾರದಷ್ಟು ಕ್ಷೋಭೆಗೆ ಈಡು ಮಾಡಿದೆ.ನಗರಗಳ ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ  ಎಂಬ ಮಾತು ಎಲ್ಲೆಲ್ಲೂ ಕೇಳಿಬರುತ್ತಿದೆ. ಆದರೆ ಹಳ್ಳಿಗಳೂ ಇದಕ್ಕೆ ಅಪವಾದ ಅಲ್ಲ. ಹಳ್ಳಿಗಳಲ್ಲಿನ ಅಕ್ಷರ ಕಲಿತ ಅನೇಕರು ಬೆಇಳಗಾದೊಡನೆ ಬಿಳಿ ಬಟ್ಟೆ ಹಾಕಿಕೊಂಡು ಹತ್ತಿರದ ಪಟ್ಟಣಕ್ಕೆ ಹೋಗುವರು.ಅಲ್ಲಿಅದೂ ಇದೂ ಮಾಡಿಸಂಜೆ ಬಟುಲಿಭಾಯಿಗಳಾಗಿ ಮನೆಬರುವರು.  ಮಧ್ಯ ,ಭಟ್ಟಿ ಸರಾಯಿಗಳ ಜೊತೆಗೆ ಇಂಕ್‌ ಎರೇಜರ್‌ಅನ್ನುಇನ್ನೊಂದು ರಸಾಯನಿಕದೊಡನೆ ಬೆರಸಿ ಮೂಸಿ ನೋಡುತ್ತಾ ಮತ್ತೇರಿಸಿಕೊಳ್ಳುವವರು, ಪೇಂಟಿನ ತಿಳಿಯ, ಎಸ್‌ಆರ್‌ ದ್ರಾವಣವನ್ನು ಬಳಸಿ ಮೈ ಮರೆಯುವ ಹಳ್ಳಿ ಹುಡುಗರು ಈಗ ಎಲ್ಲೆಲ್ಲಿಯೂ ಕಾಣುವರು ಈಗ ಚಿಕ್ಕ ಹಿಡುವಳಿಗಳು ಕಡಿಮೆ ಯಾಗಿ ಅಲ್ಲೆಲ್ಲ ಯಾಂತ್ರಿಕೃತ ಕೃಷಿ ಮೊದಲಾಗಿದೆ. ಆದರೆ ಅದನ್ನು ಮಾಡುತ್ತಿರುವವರು  ಸಣ್ಣ ರೈತರಲ್ಲ ಬದಲಾಗಿ ಕಾರ್ಪೊರೇಟ್‌ ಸಂಸ್ಥೆಗಳ ಜನ.ಬೇಸಾಯವೆ ಗ್ರಾಮ ಜೀವನದ ಬೆನ್ನೆಲುಬು ಎನ್ನುವ ಕಾಲ ಇನ್ನಿಲ್ಲ. ದಿನ ಬೆಳಗಾದರೆ ಹಳ್ಲೀಯ ಹೊರಗೆ ಗಟ್ಟಿ ಮುಟ್ಟಾದ ಯುವಕರು ಹತ್ತಿರದ ಪಟ್ಟಣಕ್ಕೆ ಕೋಲಿ ಕೆಲಸ ಮಾಲು ಸಾಲಹೋಗಲು ಸಾಲು ಗಟ್ಟಿ ನಿಂತಿರುವರು.ಸಂಜೆ ತನಕ ದುಡಿದು ಹಿಂತಿರುಗುವಾಗ ಕ್ವಾಟರ್‌ ಬಾಟಲಿ ಹಿಡಿದೆ ಬರುವರು. ಮನೆಯಲ್ಲಿ ಬೆಳಗಿನಿಂದ ಕಸಮುಸುರೆ ಮಾಡಿ, ದನ ಕರುನೋಡಿಕೊಂಡು, ಕೃಷಿಕೆಲಸಕ್ಕೆ ಗಮನ ಹರಿಸಿ ಸುಸ್ತಾದ ಹೆಂಗಸರ ಮೇಲೆ ಕುಡಿದ ಜೋರು ಮಾಡಿ. ಹೆಚ್ಚು ಮಾತನಾಡಿದರೆ ಹೊಡೆದು ಬಡಿದುಮಾಡುವುದು ದಿನ ನಿತ್ಯದ ಮಾತು ಲಿಂಗತಾರತಮ್ಯದ ವಿಷಯ ಭಾಷಣ ಬಿಗಿಯುವವರು ಹಳ್ಳಿಯ ಈ ಚಿತ್ರಣ ನೋಡಿದರೆ ಅದರ ದಾರುಣತೆ ತಿಳಿಯುವುದು.ಇನ್ನು ಅತೀವವಾದ ಹಿಂಸಾಚಾರವು ಮಕ್ಕಳ ಮುಗ್ದತೆಯನ್ನೂ ಕಸಿದುಕೊಂಡಿದೆ. ಶಾಲೆಗ ಬಾರದೆ ಇದ್ದ ಹುಡುಗನೊಬ್ಬನ್ನು ಏಕೆ ಒಂದುವಾರ ಬರಲಿಲ್ಲ, ಎಂದು ಮಾಷ್ಟ್ರು  ಕೇಳಿದಾಗ ಸಂಜೆ ಅಂಗಳದಲ್ಲಿ ಎಲ್ಲರೂ ಕುಳಿತಿದ್ದೆವು, ಸಾರು. ನಾಲಕ್ಕಾರು ಜನ ಗಾಡಿಯಲ್ಲಿ ಬಂದು ಅಪ್ಪನನ್ನು ಮಚ್ಚಿನಿಂದ ಕೊಚ್ಚಿ ಹಾಕಿದರು, ಅದಕ್ಕೆ ಬರಲಿಲ್ಲ ಎಂದು ತಣ್ಣಗೆ ಹೇಳುವ ಮಾತು ಬದಲಾದ ಪರಿಸ್ಥಿತಿಯ ಪ್ರತಿಕ. ಅಪ್ಪ ಕುಡುಕ, ಚಟಕ್ಕಾಗಿ ಇದ್ದಬದ್ದುದೆಲ್ಲವನ್ನೂ ಮಾರುತ್ತಾ ತಡೆಯೊಡ್ಡಿದ ಹೆಂಡತಿಗೆ ಹೊಡೆಯುತ್ತಾ ತಾನಾಯಿತು ತನ್ನ ಚಟವಾಯಿತು, ಎಂದಿರುವಾಗ, ಅವ್ವ, ನೋಡುವ ತನಕ ನೋಡಿ ಸಹನೆಯ ಕಟ್ಟೆ ಒಡೆದಾಗೊ ಯಾರೊಡನೋ ಓಡಿ ಹೋಗುವುದು ಅಪರೂಪವಲ್ಲ. ಅಗ ಮಕ್ಕಳ ಗತಿ ಏನು? ಅಂಥಹ ಒಡೆದ ಕುಟುಂಬಗಳ, ತಂದೆ ತಾಯಿಇದ್ದರೂ ಇಲ್ಲದಂತಾಗಿರುವವರ ಸಹಾಯಕ್ಕೆ  ಧಾವಿಸುವರು   “ನಮ್ಮ ಮಕ್ಕಳು” ಸಂಘಟನೆಯ  ರಘುನಾಥ..
ಗ್ರಾಮದಲ್ಲೂ ಕಾಡುತ್ತಿರುವ,ಕ್ರೌರ್ಯ,ಹೆಚ್ಚುತ್ತಿರುವ ಚಟಗಳು,ನಾಶವಾಗುತ್ತಿರುವ ಪರಿಸರ, ಮಾಯವಾಗುತ್ತಿರುವ ಮುಗ್ದತೆ ಮನ ಕಲಕುತ್ತದೆ.ಶಾಲೆಯಲ್ಲಿ ಮಧ್ಯಾಹ್ನದ ಊಟಮಾಡಿ ಕಣ್ಣು ಮುಚ್ಚಿ ತೂಕಡಿಸುವ ಎಳೆಯ ಮಕ್ಕಳನ್ನು ನೊಡಿ ರಾತ್ರಿ ಇವರೇನು ಮಾಡುತ್ತಾರೆ ನಿದ್ರೆ ಮಾಡದೆ, ಎಂದು ತನಿಖೆ ಮಾಡಿದಾಗ ತಿಳಿದ ಸತ್ಯ ಗಾಬರಿ ಹುಟ್ಟಿಸಿತು. ಗ್ರಾಮದ  ವಯಸ್ಕರು ಅರ್ಧ ರಾತ್ರಿಯವರೆಗೆ ಹುಣಿಸೆ ಬೀಜ , ಕಲ್ಲು ಕವಡೆಗಳ ಬಳಸಿ ಜೂಜಾಡವುದು ಸಾಮಾನ್ಯ. ಆಟಕ್ಕೆ ಕುಳಿತವರಿಗೆ  ತಿಂಡಿ ತೀರ್ಥ ,ಬೀಡಿ ಸಿಗರೇಟು,ಎಲೆ ಅಡಿಕೆ ತಂದುಕೊಡಲು ಈ ಮಕ್ಕಳ ಬಳಕೆ. ಪ್ರತಿಫಲವಾಗಿ ದೊರಕುವ ಪುಡಿಗಾಸಿನ ಆಶೆಗೆ ಮನೆಯವರ ಮೌನ ಸಮ್ಮತಿ. ಬಾಲ ಕಾರ್ಮಿಕ ನಿಷೇಧ  ಕಾಗದದಲ್ಲಿ ಮಾತ್ರ.ಅದು ಹಳ್ಳಿಯನ್ನು ತಲುಪುವುದೆ ಇಲ್ಲ..ಕೂಲಿಖಾತ್ರಿ ಯೋಜನೆಗೆ ಲಕ್ಷ ಲಕ್ಷ ಖರ್ಚು. ಮಾಡುವಕೈಗಳು ದುಡಿಯುವುದಿಲ್ಲ. ಅಲ್ಲಿ ಜೆಸಿಬಿ ಯಂತ್ರ ಬಳಸಿ ಕಾರ್ಯ ಪೂರೈಸುವರು. ಕೂಲಿಜನರ ಕಾರ್ಡುಗಳನ್ನು ಖರೀದಿಸಿ ಗುತ್ತಿಗೆ ದಾರರು ಹಣ ಹೊಡೆಯುವರು. ಬಂದ ಹಣದಲ್ಲಿ ಮೂರುದಿನ ಮಜಮಾಡಿದ ಜನ  ಕೆಲಸ ವಿಲ್ಲದೆ ಇದ್ದರೂ ಕೈ ಮುಟ್ಟಿ ಕೂಲಿ ಕೆಲಸ ಮಾಡಲು ತಯಾರಿಲ್ಲ. ದುಡಿಯದೆ ದೊರೆಯುವ ಹಣಕ್ಕೆ ಬಯಿ ಬಿಡುವರು.ಮನೆಯ ಹೆಂಗಸರು ಮಕ್ಕಳು ಇದರ ಪರಿಣಾಮ ಎದುರಿಸಬೇಕು ಇಂಥಹ ಪರಿಸರದಲ್ಲಿ ಬರೆಯುವುದು ಕಷ್ಟದ ಕೆಲಸ.ಅದರ ಬದಲು ನೋವಿನಿಂದ ನೆರಳುವ ಅಜ್ಜನ ಕಾಲಿಗೆ ಮುಲಾಮು, ಹಚ್ಚಿದರೆ, ಹಸಿವಿನಿಂದ ಬಳಲುವ ಹುಡುಗನ ಹೊಟ್ಟೆಗೆ ಹಾಕವುದೆ ಸಾರ್ಥಕ ಕೆಲಸ. ಅದನ್ನೆ  ಮಾಡತಿದ್ದಾರೆ ಸ. ರಘುನಾಥ. ಆದರೆ ಬರೆಯುವುದೆ ಇಲ್ಲ ಎಂಬ ಹಟವಿಲ್ಲ. ಗೆಳಯರ ಸಹೃದಯರ ಪ್ರೀತಿಯ ಒತ್ತಾಯ ಅವರನ್ನು ಬರವಣಿಗೆಗೆ ತೊಡಗಿಸುತ್ತದೆ.
ಇನ್ನು ಎರಡು ವರ್ಷದಲ್ಲಿ ನಿವೃತ್ತಿ. ನೆರಳಿಗೂ ಸ್ವಂತ ಮನೆ ಅಂತ ಇಲ್ಲ. ಉಳಿತಾಯವಂತೂ ಶೂನ್ಯ. “ನಮ್ಮ ಮಕ್ಕಳು” ಸಂಘಟನೆಯ ಅಡಿಯಲ್ಲಿ  ಮಾಡಿದ ಕೆಲಸ, ಕಥೆ ಕವನಗಳು ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ. ಅವರ ವಿಳಾಸ ನೀಡಿದರೆ, ವಿಷಯ ತಿಳಿಸಿ ಏನಾದರೂ ಒಂದು ವ್ಯವಸ್ಥೆಮಾಡಬಹುದು ಎಂಬ ಹಿತೈಷಿಗಳ ಮಾತಿಗೆ, ಮನೆ ಇಲ್ಲದಿದ್ದರೆ ಹಳ್ಳಿಯಲ್ಲಿರುವ ಹಲವರಂತೆ ಗುಡಿಸಲಲ್ಲಿ ಇರಬಹುದು. ಆದರೆ ಬೇಡುವ ಭಂಗ ಬೇಡ ಎಂಬುದು ಅವರ ದೃಢ ನಿಲುವು.ದುಡಿದುದನ್ನು ನೆಚ್ಚಿನ ಕೆಲಸವಾದ ದೀನರ, ಅನಾಥರ ಸೇವೆಗೆ ವೆಚ್ಚಮಾಡಿ ಕೆಡುತ್ತಿರುವ ಸಮಾಜದಲ್ಲಿ ಕೈಲಾದ ಮಟ್ಟಿಗೆ ನೊಂದವರ ಕಣ್ಣೀರು ಒರೆಸುವ ಅಪರೂಪದ ವ್ಯಕ್ತಿ  ಸ. ರಘುನಾಥ
.



Tuesday, October 16, 2012

ಹಸ್ತ ಪ್ರತಿ ಅಧ್ಯಯನ ರಂಗದ ದೊಡ್ಡಣ್ಣ – ಪ್ರೊ. ಬಿಎಸ್ ಸಣ್ಣಯ್ಯ


ಶ್ರವಣಬೆಳಗೊಳದಲ್ಲಿ ೨೦೧೧ರ್ಷ ಡಿಸೆಂಬರ್ ೧೯ ರಿಂದ ೨೩ ರ ವರೆಗೆ  ನಡೆದ ಹಸ್ತ ಪ್ರತಿ ಆಧ್ಯಯನಕ್ಕೆ ಸಂಬಂಧಿಸಿದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆತಿತ್ತು. ನಾನು ಅಲ್ಲಿಗೆ ಹೋದಾಗ ಎಲ್ಲರ ಹುಬ್ಬುಗಳು ಮೇಲೇರಿದ್ದವು. ಅದರಲ್ಲಿ ಭಾಗವಹಿಸಿದವರು ಬಹುತೇಕ ಯುವ ಕನ್ನಡ ಮತ್ತು ಇತಿಹಾಸದ ಅಧ್ಯಾಪಕರು. ಎಪ್ಪತ್ತರ ಅಂಚಿಗೆ ಬಂದ ನಾನು ಇನ್ನೂ ಅಧ್ಯಯನ ಮಾಡಲು ಬಂದುದು ಅವರೆಲ್ಲರ ಕುತೂಹಲಕ್ಕೆ ಮೊದಲು ಕಾರಣವಾದರೂ ಮೂರುದಿನ ಕಳೆಯುವದರಲ್ಲಿ ಇಳಿವಯಸ್ಸಿನಲ್ಲಿಯ ಚುರುಕುತನ ಮತ್ತು ಆಸಕ್ತಿ ಅವರಲ್ಲಿ  ಅಚ್ಚರಿ ಮತ್ತು ಮೆಚ್ಚುಗೆ ಮೂಡಿಸಿತು.ನನಗೂ ಅವರೆಲ್ಲರ ಸಾಂಗತ್ಯ ವಿದ್ವತ್‌ಪೂರ್ಣ ಉಪನ್ಯಾಸಗಳು ನವ ಚೇತನ ಮೂಡಿಸಿದವು  ಆದರೆ ಇದೆಲ್ಲಕ್ಕಿಂತ ನನಗೆ ಖುಷಿಯಾದುದು ಅಲ್ಲಿನ ಅಧ್ಯಯನ ಪೀಠದ ನಿರ್ದೇಶಕರ ವ್ಯಕ್ತಿತ್ವ.
 ಪ್ರೊ.ಬಿ.ಎಸ್.ಸಣ್ಣಯ್ಯನವರ ಸುಮಾರು ಅರ್ಧ ಶತಕಕ್ಕೂ ಮೀರಿದ ಸಾಹಿತ್ಯ ಮತ್ತು ಸಂಪಾದನ ಕ್ಷೇತ್ರದ ಅನುಭವ ಪ್ರತಿಹಂತದಲ್ಲೂ ಎದ್ದುಕಾಣುತಿತ್ತು.ಅವರಿಂದ ಸಂಪಾದಿತ ಗ್ರಂಥಗಳನ್ನು ನಾನು ನಾಲಕ್ಕು ದಶಕಗಳ ಹಿಂದೆಯೆ ಅವಲೋಕಿಸಿದ್ದೆ. ಆದರೆ ಐದು ದಿನಗಳ ಕಾಲ ಅವರೊಡನೆ  ಒಡನಾಡುವ ಭಾಗ್ಯ ಈಗ ದೊರಕಿತ್ತು.
ವಿಚಾರ ಸಂಕಿರಣದಲ್ಲಿ ಹಸ್ತಪ್ರತಿಗಳ ಸಂಗ್ರಹ , ಸಂರಕ್ಷಣೆ ಮತ್ತು ಸಂಪಾದನೆಯನ್ನು ಕುರಿತು ಆ ಕ್ಷೇತ್ರದ ಉದ್ದಾಮ ವಿದ್ವಾಂಸರು ಉಪನ್ಯಾಸ  ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಿದರು .ಕೆಳದಿಯ  ಖಾಸಗಿ ಸಂಗ್ರಹಾಲಯದ ಡಾ.ವೆಂಕಟೇಶ್‌ ಕೆಳದಿ ಅವರಿಂದ  ಹಿಡಿದು ಕಾಂಪ್ಯೂಟರ್‌ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಂಶೋಧನೆ ಮಾಡುತ್ತಿರುವ ಹಂಪಿಯ ಕನ್ನಡ  ವಿಶ್ವ ವಿದ್ಯಾಲಯದ ಹಸ್ತ ಪ್ರತಿ ವಿಭಾಗದ ಮುಖ್ಯಸ್ಥ ಶ್ರೀ ವೀರೇಶ ಬಡಿಗೇರ ಅವರೆಲ್ಲರ  ವಿವರಣೆಗೂ ಮುಕುಟ ಪ್ರಾಯವಾದುದು ಶ್ರೀ ಸಣ್ಣಯ್ಯನವರ ಮಂಗಳ ವಾಕ್ಯದ ನುಡಿಗಳು.
ಅವರಿಗೆ ಎಂಬತ್ತರ ಮೇಲೆ ವಯಸ್ಸಾದರೂ ಬೆಳಗಿನಿಂದ ಹಿಡಿದು ಬೈಗಿನವರೆಗೆ ವಿಚಾರಸಂಕಿರಣದಲ್ಲಿ ಹಾಜರಿರುತ್ತಿದ್ದ ಕೆಲವೆ ಆಸಕ್ತರಲ್ಲಿ ಅವರು ಎದ್ದು ಕಾಣುತಿದ್ದರು.ಮಧ್ಯಮಧ್ಯ ಅವರು ಮೈಸೂರಿನ ಅಧ್ಯಯನ ಪೀಠದಲ್ಲಿ ಮತ್ತು ಪ್ರಾಚ್ಯ ಸಂಶೋಧಾನಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವಾಗಿನ ಅನುಭವದ, ಕಥನಗಳು ರಸವತ್ತಾಗಿದ್ದವು.ದೇಶಾದ್ಯಂತ ಹಸ್ತಪ್ರತಿ ಸಂಗ್ರಹಿಸಲು ಮಳೆ ಚಳಿ ಎನ್ನದೆ ಅವರು  ಬಸ್ಸು.ಎತ್ತಿನ ಗಾಡಿ , ಸೈಕಲ್ಲು  ಕೆಲವು ಬಾರಿ ನಡೆದೆ ಹೋಗುತಿದ್ದ ಅವರ ಪರಿಶ್ರಮ  ಮತ್ತು ಬದ್ಧತೆ ಈ ರಂಗದಲ್ಲಿನ ಹೊಸಬರಿಗೆ ಸ್ಪೂರ್ತಿ ದಾಯಕವಾಗಿದ್ದಿತು.
ಎಲ್ಲ ಉಪನ್ಯಾಸಗಳ ಕೊನೆಗೂ ಅವರು ನೀಡುತ್ತಿರುವ ಪ್ರತಿಕ್ರಿಯೆಯು ಅವರ ಆಳವಾದ ಅಧ್ಯಯನ ಮತ್ತು ಅನುಭವದ ರಸಪಾಕ. ಅವರು ಆಗಾಗ ನೀಡುತಿದ್ದ ಸಾಹಿತ್ಯ ಕೃತಿಗಳ ಪದ್ಯಗಳ ಉದಾಹರಣೆಗಳಂತೂ ರೋಮಾಂಚನ ಗೊಳಿಸುವಂತಿದ್ದವು. ರನ್ನನ ಸಾಹಸಭೀಮ ವಿಜಯದಲ್ಲಿ ವೈಶಂಪಾಯನ ಸರೋವರದಿಂದ ಮೇಲೆದ್ದು ಬರುವ ಸುಯೋಧನನ ಠೀವಿಯನ್ನು ವರ್ಣಿಸುವಾಗಿನ ಅವರ ಗತ್ತು ಗಾಂಭಿರ್ಯದಿಂದ  ನಮಗಂತೂ ಅವರು ಗಧೆ ಇಲ್ಲದ ಆಧುನಿಕ ಉಡುಪಿನ ದುರ್ಯೋಧನನಂತೆ ಕಂಡರು.
 ಆ ಸಮಯದಲ್ಲಂತೂ ನಮ್ಮಲ್ಲಿ ಅನೇಕರಿಗೆ ಅವರು ಹಸ್ತಪ್ರತಿಗಳ ಮಧ್ಯ ಕಳೆದು ಹೋದ ದೊಡ್ಡ ಕವಿಚೇತನವಾಗಿ ಕಂಡರು ಅವರು ಗತಸಾಹಿತ್ಯ ಮತ್ತು ಸಂಸ್ಕೃತಿ ಪುನರುತ್ಥಾನದಲ್ಲೆ ಸಾರ್ಥಕತೆ ಪಡೆದಿರುವರು, ಆ ರಂಗಕ್ಕೆ ಎಣೆಯಿಲ್ಲದ ಕೊಡುಗೆ ನೀಡಿರುವರು .ಶಿಬಿರದಲ್ಲಿನ ಎಲ್ಲರಿಗೂ ಆಧ್ಯಯನಕ್ಕೆ ಉತ್ತೇನ ನೀಡುತ್ತಾ ತಮ್ಮಿಂದ ಎಲ್ಲ ಸಹಕಾರ ಸಹಾಯಗಳನ್ನು ನೀಡಲು ಭರವಸೆ ನೀಡಿರುವುದು ಅವರ ಕಳಕಳಿಯ ದೋತ್ಯಕವಾಗಿದೆ. ಆದರೂ ಸೃಜನಶೀಲ ಸಾಹಿತ್ಯಕ್ಕಂತೂ ತುಂಬಲಾಗದ  ನಷ್ಟವಾಗಿದೆ ಎನಿಸಿತು
 ಹೆಸರು  ಮಾತ್ರ  ಸಣ್ಣಯ್ಯ ಆದರೆ ವಿದ್ವತ್ತು, ಸಾಧನೆ ಮತ್ತು ವ್ಯಕ್ತಿತ್ವದಲ್ಲಿ  ದೊಡ್ಡಯ್ಯ – ಬಹು ದೊಡ್ಡ ಅಯ್ಯ.
.
  

Sunday, October 14, 2012

ಒಟ್ಟಾಗಿ ದುಡಿ ಮತ್ತು ಒಟ್ಟಾಗಿ ಪಡೆ



ಬಾದಲ್‌ಸರ್ಕಾರರ “ Beyond The Land of Hattamala”  ನಾಟಕವನ್ನು ಸಿಎಫ್ ಡಿ ತಂಡವು ಸುಚಿತ್ರ ಫಿಲ್ಮ ಸೊಸೈಟಿಯಲ್ಲಿನ ಸಭಾಂಗಣದಲ್ಲಿ ಶನಿವಾರ ಸಂಜೆ  ಅಭಿನಯಿಸಿತು.ಬಾದಲ್‌ ಸರ್ಕಾರ ನಾಟಕಗಳು  ನಗೆ,  ವಿಡಂಬನೆ ಮತ್ತು ಚುರುಕಾದ ಸಂಭಾಷಣೆಗಳ  ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ  ಹೊಸ ನೋಟ ಬೀರುವವು. ಇದೂ ಅದಕ್ಕೆ ಹೊರತಲ್ಲ. ಮೂಲತಃ ಇದು ಇಂಗ್ಲಿಷ್‌ ನಾಟಕವಾದರೂ ಅಲ್ಲಿ ಇಲ್ಲಿ ಬಳಸಿದ ಪ್ರಾದೇಶಿಕ ಭಾಷೆಯು ಸಂಭಾಷಣೆಯ  ಸೊಗಡು ಹೆಚ್ಚಿಸಿ, ಭಾವನೆಯ ಅಭಿವ್ಯಕ್ತಿಗೆ  ಭಾಷೆಯ ಚೌಕಟ್ಟಿನ ಮಿತಿ ಇರದು ಎಂಬುದನ್ನು ಸಾದರ ಪಡಿಸಿತು  ಜಗದ್ವಿಖ್ಯಾತ .ನಾರ್ವೇಜಿಯನ್‌  ನಾಟಕಕಾರ  ಹೆನ್ರಿಕ್‌ ಇಬ್ಸನ್‌ ಹೇಳಿದಂತೆ “ಪ್ರಶ್ನೆ ಮಾಡುವುದು ನಾಟಕದ ಕೆಲಸ, ಸಮಸ್ಯೆಗೆ ಪರಿಹಾರ ಕೊಡುವುದಲ್ಲ.”  ಈ ಮಾತು ಸರ್ಕಾರರ ನಾಟಕಗಳಲ್ಲೂ ನಿಜ. ಅದರಲ್ಲೂ “Beyond the land of Hattamala “ ನಾಟಕದಲ್ಲಂತೂ ನೂರಕ್ಕೆ ನೂರಷ್ಟು ಸತ್ಯ. ಇದು ಒಂದು ಆದರ್ಶಮಯ ಸಮಾಜದ ಚಿತ್ರಣ. ಅಲ್ಲಿ ಕೊಳ್ಳುವುದು, ಮಾರುವುದು, ಸ್ವಂತದ ಆಸ್ತಿ , ಕದಿಯುವುದು ಕಾಪಾಡುವುದು , ಕಳ್ಳ,  ಪೋಲೀಸ್‌ ಮೊದಲಾದ ನಾಗರೀಕ ಸಮಾಜದ ಯಾವುದೆ ಪರಿಕಲ್ಪನೆಗಳಿಗೆ ಜಾಗವಿಲ್ಲ. ಅಲ್ಲಿ ನೆಲ ,ಜಲ, ಗಾಳಿ, ಆಹಾರ, ಅಗತ್ಯ ವಸ್ತುಗಳು  ಎಲ್ಲವೂ   ಮುಕ್ತ. ಉಚಿತ.  ಅವು ಎಲ್ಲರವೂ ಹೌದು. ಯಾರವೂ ಅಲ್ಲ. .”Work together and take together “ ಅಲ್ಲಿನ  ಸಮಾಜಿಕ ವ್ಯವಸ್ಥೆಯ ಅಡಿಪಾಯ.  ಚುರುಕಾದ ಸಂಭಾಷಣೆ,ಮಾರ್ಮಿಕ ಮಾತುಗಳು, ವಿನೋದಮಯ ಸನ್ನಿವೇಶಗಳು, ರಂಗದ ಮೇಲೆ ತಮ್ಮಹಾವ, ಭಾವ ಚಲನೆಯಿಂದ ಅಗತ್ಯ ರಂಗಸಜ್ಜಿಕೆಗಳನ್ನು ನಿರ್ಮಿಸುವ ನಟರ ಚಾಕಚಕ್ಯತೆ, ಕಾಡು, ನಾಡು, ನದಿ, ಗೋಡೆಗಳನ್ನು ಕಣ್ಣಿಗೆ ಕಟ್ಟುವಂತೆ ನಟರನ್ನೆ ಬಳಸಿ, ಅತಿ ಕಡಿಮೆ ರಂಗಪರಿಕರಗಳನ್ನು ಉಪಯೋಗಿಸಿ ಸೂಕ್ತ ವಾತಾವರಣ ನಿರ್ಮಿಸುವ ನಿರ್ದೇಶಕರ ಕೌಶಲ ನೋಡುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಯಿತು.
’ಹಟ್ಟಮಾಲ ನಾಡಿನ ಆಚೆ” ಶುರುವಾಗುವುದೆ ಕೆನಾ ಮತ್ತು ಬೇಚಾ ಎಂಬ ಇಬ್ಬರು ಕಳ್ಳರು ಪೋಲೀಸರ ಕೈನಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ಒಂದು ಅನಾಮಿಕ ನಾಡನ್ನುತಲುಪುವ ಸನ್ನಿವೇಶದಿಂದ. ಅವರು ಕೈನಲ್ಲಿ  ಗೊಡೆ ಒಡೆಯಲು, ಬೀಗ ಮುರಿಯಲು ಸಹಾಯಕವಾಗುವ ಚಿಕ್ಕ ಹಾರೆ ಹಿಡಿದಿರುವರು.ಅವರ ಅನುಮಾನದ ನೋಟ, ಅಭದ್ರತೆಯ ಹಾವ ಭಾವ , ಸಿಕ್ಕಿ ಬಿದ್ದೇವು ಎಂಬ ಶಂಕೆ ನಾಟಕಕ್ಕೆ ಉತ್ತಮ ಪ್ರಾರಂಭ ಒದಗಿಸುವುದು. ಅವರ ಮೊದಲ ಗುರಿ ಹಸಿದ ಹೊಟ್ಟೆಗೆ ಏನಾದರೂ ಆಹಾರ ಹುಡುಕುವುದು. ಹಣ್ಣಿನ ಅಂಗಡಿಯವನಿಗೆ ಯಾಮಾರಿಸಿ  ತಿಂದೆವು ಅಂದುಕೊಂಡಿದ್ದ  ಅವರಿಗೆ ಹಣ್ಣು ಉಚಿತವಾಗಿ ಲಭ್ಯ ಎಂದು ಅರಿತಾಗ ಅಪಾರ ಅಚ್ಚರಿ.  ನಂತರ ಉಪಹಾರ ಸ್ಥಳದಲ್ಲೂ ಅದೆ ಅನುಭವ.ಇಲ್ಲಿನ ಜನರೆಲ್ಲ ಮೂರ್ಖರು ಎಂದು ಅವರ ಅನಿಸಿಕೆ.ಅವರ ದಡ್ಡತನದ ಲಾಭ ಪಡೆಯುವ ಹೊಂಚು. ಅವರಿಗೆ ಒಂದೆ ಅನುಮಾನ ಇದೆಲ್ಲ ತಮ್ಮನ್ನು ಹಿಡಿಯಲು ಗುಪ್ತ ಚರರು ಹೂಡಿದ ಜಾಲ ಎಂದು. ಉಪಹಾರ ಗೃಹದ ಗೋಡೆಗೆ ಕನ್ನ ಹಾಕಿ ಒಳಗಿರುವ ತಟ್ಟೆ ಬಟ್ಟಲು ಕದಿಯಲು ಹೋದಾಗ ಅಲ್ಲಿ ಹಿಂಬಾಗಿಲು ಹೆಬ್ಬಾಗಿಲು ಎರಡೂ ತೆರೆದೆ ಇರುವುದುರಿಂದ ಅವರಿಗೆ ಅಯೋಮಯ. ಅಷ್ಟೆ ಅಲ್ಲ ಬಾಗಿಲಿನಿಂದಲೆ ಒಳ ಬರಬಹುದಿತ್ತಲ್ಲ? ಗೋಡೆಗೆ ಕನ್ನ ಹಾಕುವ ಕಷ್ಟ ಯಾಕೆ ಬೇಕಿತ್ತು? ಏನು ಬೇಕಿದ್ದರೂ ತೆಗೆದುಕೊಂಡು ಹೋಗಿ ಆದರೆ ಅದರಿಂದ ಏನು ಉಪಯೋಗ ? ಎಂದಾಗ  ಅವರಿಗೆ ದಿಗ್ಭ್ರಮೆ. ಅವರು ಹಾಕಿದ ಕನ್ನವನ್ನು ಮೆಚ್ಚಿ ಅದನ್ನೊಂದು ಕಲೆ ಎಂದು ಹೊಗಳಿದಾಗ ತಲೆ ಬುಡ ತಿಳಿಯಲಿಲ್ಲ.. ಲೈಬ್ರರಿಯಲ್ಲಿ ಚಿನ್ನದ ಒಡವೆಗಳನ್ನು ಎರವಲು ಕೊಡುವ ಪದ್ದತಿ ಗಾಬರಿ ಗೊಳಿಸಿತು. ಬೆಳ್ಳಿ ಬಂಗಾರದ ಒಡವೆಗಳಿಗಿಂತ ಪುಸ್ತಕಗಳಿಗೆ ಅವರು ನೀಡುವ ಪ್ರಾಧಾನ್ಯತೆ ಕಕ್ಕಾವಿಕ್ಕಿಯಾಗಿಸಿತು.ವೈದ್ಯರೂ ಕೂಡಾ ಅವರಿಂದ ಗೋಡೆ ಒಡೆಯುವ ಕಲೆ ಕಲಿಯಲು ಆಸಕ್ತರು. ಕೊನೆಗೆ ಅವರಿಗೆ ಅರಿವಾಯಿತು. “ಹಟ್ಟಮಾಲದ ಆಚೆಗಿನ ನಾಡಿ” ನಲ್ಲಿನ  ರೀತಿ ನೀತಿ. ಒಡೆಯುವುದನ್ನು ಅರಿತಿರುವ ಅವರು ಗೋಡೆಯನ್ನು ಕಟ್ಟಲೂ ಬಹುದು ಎಂದು.ಅಲ್ಲಿನ ಜನರೆಂದಾಗ ಅವರೂ ಬದಲಾದರು.
“ ಎಲ್ಲರೂ ಒಟ್ಟಾಗಿ ದುಡಿಯೋಣ ಮತ್ತು ಒಟ್ಟಾಗಿ ಪಡೆಯೋಣ” ಎಂಬ ಘೋಷ ವಾಕ್ಯವನ್ನು ಕಳ್ಳರೂ ಸೇರಿದಂತೆ ಎಲ್ಲರೂ ಹೇಳುವುದರೊಂದಿಗೆ ನಾಟಕ ಮುಗಿಯಿತು.
ಬಹುತೇಕ ಹದಿವಯಸ್ಸಿನವರೆ ನಟಿಸಿರುವ ಈ ನಾಟಕದಲ್ಲಿ ಕಳ್ಳರಿಬ್ಬರನ್ನೂ ಹೊರತು ಪಡಿಸಿ ಉಳಿದೆಲ್ಲರೂ ಒಂದೆ ರೀತಿಯ ಬಿಳಿಯುಡುಪು ಧರಿಸಿ. ಮುಖಕ್ಕೆ ಬಿಳಿಬಣ್ಣ ಬಳಿದು ಕೊಂಡಿರುವುದು ಆ ನಾಡಿನಲ್ಲಿನ ಸಮಾನತೆಯ ಸಂಕೇತವಾಗಿದೆ ಎನ್ನಬಹುದು. ವಿಶೇಷವಾಗಿ ಅವರ ಮಾತಿನಲ್ಲಿನ ಮುಗ್ಧತೆ ಮನತಟ್ಟುವಂತೆ ಇದೆ.ಅವರಿಗೆ ಕಳ್ಳತನ  ಗೊತ್ತಿಲ್ಲ. ಪೋಲೀಸು ತಿಳಿದಲ್ಲ. ಹಣ ಅರಿಯರು.ಮಾರಾಟ, ಕೊಳ್ಳುವುದು ಕೂಡಾ ಅವರ ಅಳಿವಿಗೆ ಸಿಗದ ಕ್ರಿಯೆಗಳು.
ಇಂಥಹ ಆದರ್ಶ ಸಮಾಜವನ್ನು ರಂಗದಮೇಲೆ ಕಟ್ಟಿಕೊಡುವ ಪ್ರಯತ್ನದಲ್ಲಿ ನಿರ್ದೇಶಕ ಪ್ರಕಾಶ ಬೆಳಕವಾಡಿ ಯಶಸ್ವಿಯಾದರು ಎನ್ನಬಹುದು. ಹಿನ್ನೆಲೆ ಸಂಗಿತವೂ ಸನ್ನಿವೇಶಕ್ಕೆ ತಕ್ಕ ವಾತಾವರಣ ಮೂಡಿಸುವಲ್ಲಿ ಪೂರಕವಾಗಿತ್ತು.ಅತಿಯಾದ ಸಂಕೀರ್ಣತೆ ಇಲ್ಲದೆ ಬೆಳಕಿನ ಸಂಯೋಜನೆ ಸರಳ ಮತ್ತು ಸಹಜವಾಗಿತ್ತು. ನಟರಂತೂ ನಾಟಕದ ಉದ್ಧೇಶವನ್ನು ನಗುತ್ತಾ ನಗಿಸುತ್ತಾ ನೋಡುಗರಿಗೆ ಮುಟ್ಟಿಸುವಲ್ಲಿ ಯಶಗಳಿಸಿದರು. ವಾರಾಂತ್ಯದ ಸಮಯ ಕಳೆಯಲು ಮತ್ತು ಸಮಾಜದ ಸಮಸ್ಯೆಗಳತ್ತ  ಹೊಸ ನೋಟ ಬೀರಲು ಮಾಡಿದ ಉತ್ತಮ ಪ್ರಯತ್ನ  ಎನಿಸಿತು ಈ ನಾಟಕ.

Thursday, October 11, 2012

ಕನ್ನಡವೆ ಎನ್ನುಸಿರು ಎಂದು ಬದುಕಿದ ಪ್ರೊ. ಡಿ.ಲಿಂಗಯ್ಯ



ಪ್ರೊ. ಲಿಂಗಯ್ಯನವರ ಪರೋಕ್ಷ ಪರಿಚಯ ಅವರ ಪುಸ್ತಕ ಗಳ ಮೂಲಕ ಹಲವು ದಶಕಗಳಿಂದ ಇದೆ. ಮತ್ತು ಮೌಲ್ಯ ಮಾಪನಕ್ಕೆ   ಬಂದಾಗ  ಹಲವು ಕನ್ನಡ ಕಾರ್ಯಕ್ರಮಗಳಲ್ಲಿ ಅವರನ್ನು  ನೋಡಿದ ನೆನಪು.  ಪ್ರತ್ಯಕ್ಷ ಪರಿಚಯ ಮಾತ್ರ  ಮೂರು ವರ್ಷಗಳಿಂದ ಈಚೆಗೆ. ಹಳೆಯ ಬೆಂಗಳೂರಿನ ಭಾಗವಾದ ಬಸವನಗುಡಿಗೆ ಹೊಂದಿಕೊಂಡಿರುವ   ನರಸಿಂಹರಾಜಾ ಕಾಲನಿಯಲ್ಲಿ ವಾಸಕ್ಕೆ ಬಂದಾಗಿನಿಂದ.  ಪಕ್ಕದ ರಸ್ತೆಯಲ್ಲೆ ಬಿ.ಎಂ.ಶ್ರೀ ಪ್ರತಿಷ್ಠಾನದ ಹೆಸರು ಹೊತ್ತ ಸುಂದರ ಭವನ. ಅಲ್ಲಿನ ಉಚಿತ ವಾಚನಾಲಯಕ್ಕೆ ಆಗಾಗ  ಭೇಟಿ  ನೀಡುವುದು ವಾಡಿಕೆ ಮತ್ತು ಅಲ್ಲಿ ನಡೆವ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ  ವೇದಿಕೆಯ ಮೇಲೆ ಕುಳಿತ ಎತ್ತರದ ನಿಲುವಿನ ಸಾಧಾರಣ ಮೈಕಟ್ಟಿನ ತಿಳಿ ಬಣ್ಣದ ಅಚ್ಚುಕಟ್ಟಾಗಿ ಉಡುಪು  ಧರಿಸಿದ,ಅತಿಥಿಗಳನ್ನು, ಪರಿಚಿತರನ್ನು ಸದಾ ಮುಗುಳುನಗೆಯಿಂದ ಮೃದು ಮಾತಿನಿಂದ ಸ್ವಾಗತಿಸುವ  ವ್ಯಕ್ತಿ ಯಾರಿರಬಹುದೆಂಬ  ಕುತೂಹಲ. ಅವರನ್ನು ಹಿಂದೆ ಅನೇಕ  ಸಾಹಿತ್ಯ ಕಾರ್ಯಕ್ರಮಗಳಲ್ಲಿ ನೋಡಿದ ನೆನಪು ಸಹಾಯಕ್ಕೆ ಬರಲಿಲ್ಲ. .. ಒಂದೆರಡು ಸಮಾರಂಭದಲ್ಲಿ ಹಾಜರಿ ಹಾಕಿದ ನಂತರ  ಕುತೂಹಲ ತಣಿಯಿತು.  ಅವರ ವಾಗ್‌ವೈಖರಿ  ಅಸದಳ . ಪುಸ್ತಕದ ಬಿಡುಗಡೆ ಇರಲಿ, ಖ್ಯಾತ ನಾಮರ ಜಯಂತಿಯೆ ಇರಲಿ, ಕಥೆಗಾರ, ಕಾದಂಬರಿಕಾರ, ಕವಿ, ಜಾನಪದ ತಜ್ಞ , ಹಸ್ತ ಪ್ರತಿ ತಜ್ಞರ ಸನ್ಮಾನವಿರಲಿ, ವಿಷಯ ಯಾವುದೆ ಇದ್ದರೂ ಅವರ ಅಧ್ಯಕ್ಷೀಯ ಭಾಷಣ ಎಂದರೆ  ತಲಸ್ಪರ್ಶಿವಿಚಾರ ಪೂರಿತ ಮಾತುಗಳ ಮಳೆ. ಅದರ ಸ್ವಾದ ಕೇಳಿಯೆ ತಿಳಿಯ ಬೇಕು.
        ನಾನು “ ಆರರಿಂದ ಅರವತ್ತು “ ಎಂಬ ಸರಣಿಯನ್ನು ಕೆಂಡ ಸಂಪಿಗೆಯಯಲ್ಲಿ  ಪ್ರಕಟಿಸುವಾಗ ಶಿವಪುರದ ಸತ್ಯಾಗ್ರಹಕ್ಕೆ ಸಂಬಂಧಿಸಿದ ಕೆಲವು ಮಾಹಿತಿ ತಿಳಿಯಲು ಅವರ ಬಳಿ ಹೋದಾಗ ಸುಮಾರು ಒಂದು ಗಂಟೆ ಕಾಲ ಎಲ್ಲ ವಿವರಗಳನ್ನು ಆಗಿಂದಾಗಲೆ ತಿಳಿಸಿದರು. ಅಷ್ಟು ಪ್ರಖರ ಅವರ ಜ್ಞಾಪಕ ಶಕ್ತಿ.ಅಷ್ಟು ಸರಳ ಅವರ ನಡೆ.
ಪ್ರತಿಷ್ಠಾನವು ನಡೆಸುತಿದ್ದ ಹಸ್ತಪ್ರತಿ ಅಧ್ಯಯನದ ತರಗತಿಗೆ ನಾನು ಸೇರಿದ ಮೇಲೆ ಜತೆಗೆ  ರಾಮಚಂದ್ರಾಪುರ ಮಠದಲ್ಲಿ ನಡೆಸಿದ ಹಸ್ತಪ್ರತಿ ಆಧ್ಯಯನ ಸಮಾವೇಶದಲ್ಲಿ ಭಾಗವಹಿಸಿದಾಗ ಅವರ ಬಹು ಮುಖ ಪ್ರತಿಭೆಯ ಸರಳ ವ್ಯಕ್ತಿತ್ವದ  ಪರಿಚಯವಾಯಿತು. ಅವರು  ರಚಿಸಿರುವುದು ಸುಮಾರು ಎಂಬತ್ತಕ್ಕೂ ಹೆಚ್ಚು ಕೃತಿಗಳು, ಅದೂ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿನ ಅವರ  ಸಾಧನೆ ಮಾಡಿರುವುದು  ಮೆಚ್ಚಿಗೆ ಮೂಡಿಸಿತು.
ಲಿಂಗಯ್ಯನವರದು  ಸತತ  ಐದು ದಶಕಗಳ ನಿರಂತರ ಸಾಹಿತ್ಯ ಸೇವೆಯ. ಕಾಲೇಜು ಕಟ್ಟೆ ಹತ್ತಿದಾಗಲೆ ವಿದ್ಯಾರ್ಥಿ ದೆಶೆಯಲ್ಲೆ   ೧೯೬೨ರಲ್ಲಿ  ಮೊದಲ ನಾಟಕ “ ದಡ್ಡ ಶಿಖಾಮಣಿ “  ಪ್ರಕಟ, ಅವರದೆ  ದಿನಕರ  ಪ್ರಕಟನಾಲಯ . ಅದರಲ್ಲೆ ಬಹುಪಾಲು ಅವರ ಕೃತಿಗಳ ಪ್ರಕಟನೆ.ಸತತ ಸಾಹಿತ್ಯ ಸೇವೆ ಕೆಂಗಲ್‌ ಕುರಿತಾದ ಅವರ ಗ್ರಂಥ  ಮೊದಲು  ಕರ್ಮವೀರದಲ್ಲಿ ಸತತ ಒಂದುವರ್ಷ ಸರಣಿಯಲ್ಲಿ ಪ್ರಕಟಿತವಾಯಿತು. ಅದು ಇತಿಹಾಸ ಪ್ರಜ್ಞೆ , ಸಾಮಾಜಿಕ ಕಳಕಳಿ ಮತ್ತು ಸರಳ ಶೈಲಿಯಿಂದ ಸಾವಿರಾರು ಓದುಗರ ಮನ ಸೆಳೆಯಿತು. ಅವರ ಅಂತಿಮ ಕೃತಿಯೂ ಅವರ ನೆಚ್ಚಿನ ಜಾನಪದಲೋಕದ ದಿಗ್ಗಜ ಎಸ್‌.ಕೆ ಕರೀಂಖಾನರ ಬದುಕು ಮತ್ತು ಬರಹಗಳ  ಕುರಿತದ್ದು.ಅವರ ಐದು ದಶಕಗಳ  ಅವಧಿಯಲ್ಲಿ ನಾಲ್ಕು ನಾಟಕಗಳು, ಮೂರು ಕಥಾ ಸಂಗ್ರಹಗಳು, ನಾಲ್ಕು, ವಿಮರ್ಶಾಗ್ರಂಥಗಳು, ಹನ್ನೆರಡು ಕವನ ಸಂಗ್ರಹಗಳು, ಐದು  ವ್ಯಕ್ತಿಚಿತ್ರಗ್ರಂಥಗಳು, ಐದು  ಜೀವನ ಚರಿತ್ರೆಗಳು, ನಾಲ್ಕು ಪ್ರಬಂಧ ಸಂಕಲನಗಳು ಮೂರು ಸ್ವಾತಂತ್ರ್ಯ ಚಳುವಳಿ ಸಂಬಂಧಿತ ಗ್ರಂಥಗಳು  ಎರಡು ಕಾದಂಬರಿಗಳು, ೨೧ ಜಾನಪದ ಸಂಬಂಧಿತ ಕೃತಿಗಳು.  ೨೦ ಸಂಪಾದಿತ ಗ್ರಂಥಗಳು, ಇನ್ನು ನೂರಾರು ಕಿರುಲೇಖನಗಳು, ಸಾಕ್ಷ್ಯ ಚಿತ್ರಗಳಿಗೆ ಸಾಹಿತ್ಯ, ರಚನೆ ಮತ್ತು ದೂರದರ್ಶನಗಳಲ್ಲಿ ಸಂವಾದಗಳು  ಅವರ ಆಸಕ್ತಿಯ ಪಾಂಡಿತ್ಯದ ವ್ಯಾಪ್ತಿಗೆ ಸಾಕ್ಷಿಯಾಗಿವೆ.
ಪ್ರೊ. ಡಿ ಲಿಂಗಯ್ಯ  ಹುಟ್ಟಿದ್ದು  ೧೯೩೯ ರಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪೀ ಹಳ್ಳಿಯ ರೈತ ಕುಟುಂಬದಲ್ಲಿ ತಂದೆ ದೇವೆಗೌಡ ಸಣ್ಣ ರೈತ. ತಾಯಿ ಸಿದ್ದಮ್ಮ,  ಇವರಿಗೆ ಇಬ್ಬರು ಸೋದರರು ಮತ್ತು ಇಬ್ಬರು ಸೋದರಿಯರು . ಸಾಧಾರಣ  ಕುಟುಂಬ. ಕೃಷಿ ಕೆಲಸದಲ್ಲಿ ಸಹಾಯ ಮಾಡುತ್ತಾ ಶಿಕ್ಷಣ ಮುಂದುವರಿಸಿದರು.ಮಂಡ್ಯದ ಮೈಶುಗರ್‌ ಶಾಲೆಯಲ್ಲಿ ಶಿಕ್ಷಣ .  ಮಂಡ್ಯ ಜಿಲ್ಲೆಏಕೈಕ ಅಪ್ಪಟ ಕನ್ನಡ ಮಾತನಾಡುವ ಪ್ರದೇಶ. ಅಲ್ಲಿನವರಿಗೆ ಅನ್ಯಭಾಷೆಯ ಗಾಳಿ  ಕೂಡಾ ಸೋಕುವುದಿಲ್ಲ ಮೇಲಾಗಿಮಂಡ್ಯ ಜನಪದ ಸಾಹಿತ್ಯದ ಕಣಜ ಅಲ್ಲಿ ೪೦ ವಿಧದ ಜಾನಪದ ಕುಣಿತಗಳಿವೆಹಲವು ಜನಪದಪ್ರಕಾರಗಳು ಇವೆ. ಇನ್ನು ಸಾಹಿತ್ಯದ ಬೆಳೆಯಂತೂ ಬಹು ಹುಲಸು. ಅಲ್ಲಿನ ಕ.ರಾ.ಕೃಅವರು ಜಾನಪದ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದವರು. ಹೀಗಾಗಿ ಲಿಂಗಯ್ಯನವರ ಮೇಲೆ ಜಾನಪದದ ಪ್ರಭಾವ ಗಾಢವಾಗಿತ್ತು.
 ವಿದ್ಯಾರ್ಥಿ ಇದ್ದಾಗಲೇ ಸಾಹಿತ್ಯದ ಒಲವು. ಓರಿಗೆಯ ಹುಡುಗರು ಆಡುತಿದ್ದಾಗ , ಗೆಳೆಯರು ಹಳ್ಳಿಯ ಕಾಲುವೆಯಲ್ಲಿ ಈಜುತಿದ್ದಾಗ ಇವರು ಪುಸ್ತಕ ಹಿಡಿದು ಕೂಡುತಿದ್ದರು  ಆದರೆ ದೈಹಿಕ ದೃಢತೆಗೆ ಪ್ರಾಮುಖ್ಯತೆ ಕೊಡುವರು. ನಿತ್ಯ ಲಘು ವ್ಯಾಯಾಮ ಮತ್ತು ನಡೆದಾಟ ಕೊನೆಯವರೆಗೂ ಅಭ್ಯಾಸ ಮಾಡಿಕೊಂಡಿದ್ದರು. ಇಂಟರ್‌ ಮಿಡಿಯಟ್‌ ಮಂಡ್ಯದ ಸರ್ಕಾರಿ ಕಾಲೇಜಿನಲ್ಲಿ. ಆಗ ಅವರಿಗೆ ಹಂ.ಪಾ. ನಾಗರಾಜಯ್ಯ ಗುರುಗಳಾಗಿ ದೊರೆತರು. ಅವರ ಸತತ ಪ್ರೋತ್ಸಾಹದಿಂದ ಸಾಹಿತ್ಯದಲ್ಲಿ ಆಸಕ್ತಿ ಕುದುರಿತು. ಹಂಪನಾ ಅವರೊಡಗಿನ  ಸಂಬಂಧ ಕೊನೆತನಕ ಉಳಿದು ಬೆಳೆಯಿತು. ಅವರ ಉತ್ತೇಜನದ ಫಲವಾಗಿ ಬೆಂಗಳೂರಿಗೆಉದ್ಯೋಗಕ್ಕೆ ಬಂದಾದ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸಕ್ಕೆ ಮುಂದಾದರು  ಜಿ. ನಾರಾಯಣರು ಅಧ್ಯಕ್ಷರಾಗಲು ದುಡಿದರು. ಮತ್ತು ಜ್ವಾಲನಯ್ಯವರ ಅವಧಿಯಲ್ಲಿ ಸಕ್ರಿಯವಾಗಿ ಕನ್ನಡದ ಕೆಲಸದಲ್ಲಿ ತೊಡಗಿಸಿ ಕೊಂಡರು.ಹಂಪನಾ ಅವರ ಅವಧಿಯಲ್ಲಿ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾದ ಮೇಲೆ ಕನ್ನಡದ ಕೆಲಸದ ವ್ಯಾಪ್ತಿ ನಾಡಿನಾದ್ಯಂತ ವಿಸ್ತರಿಸಿತು. ಜಾನಪದ ವಿಭಾದ ಪೂರ್ಣ ಹೊಣೆ ನಿರ್ವಹಿಸಿದರು.ಇವರ ಸಂಘಟನಾ ಸಾಮರ್ಥ್ಯಕ್ಕೆ ಸಾಹಿತ್ಯಪರಿಷತ್ತಿನ ಪದಾಧಿಕಾರಿ ಹುದ್ದೆ ಸಾಣೆ ಹಿಡಿಯಿತು. ಸಾಹಿತ್ಯ ಲೋಕದ ಹೆಸರಾಂತ ವ್ಯಕ್ತಿಗಳ ಸಂಪರ್ಕಕ್ಕೆ ಅದೆ ಸೋಪಾನವಾಯಿತು.ಅದರ  ಫಲವಾಗಿ ಹಲವಾರು ವ್ಯಕ್ತಿ ಚಿತ್ರಣಗಳು ಮೂಡಿ ಬಂದವು.ಅವರ ಬರಹದಲ್ಲಿ ಗಟ್ಟಿತನ ಬರಲುಕಾರಣ  ಅವರ ಬರವಣಿಗೆ,  ಬರಿ ಓದು ಅಥವ ಅವರಿವರ ಮಾತು ಕೇಳಿ ಬರೆದದ್ದಲ್ಲ. ತಾವೆ ಸ್ವತಃ ಒಡನಾಡಿ  ಬರೆದುದು.
 ಇಂಟರ್‌ಮೀಡಿಯಟ್‌ನಲ್ಲಿ ವಿಜ್ಞಾನ ವಿದ್ಯಾರ್ಥಿಯಾದರೂ ಪದವಿಯಲ್ಲಿ ಕನ್ನಡ ಮುಖ್ಯವಿಷಯ.ಅದೂ  ಮಹರಾಜ ಕಾಲೇಜಿನಲ್ಲಿ  ವ್ಯಾಸಾಂಗ. ಮುಂದೆ ಮಾನಸ ಗಂಗೋತ್ರಿಯ ಆಡಳಿತ ವಿಭಾಗದಲ್ಲಿನ ಅಧ್ಯಯನ ಪೀಠದಲ್ಲಿ ಇವರದೆ ಜಾನಪದ ವಿಷಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿದ ಪ್ರಥಮ ತಂಡ
 ಘಟಾನು ಘಟಿ ಗುರುವೃಂದದಿಂದ ಮಾರ್ಗದರ್ಶನ  ದೊರೆಯಿತು.ಪ್ರೊ. ಪರಮೇಶ್ವರ ಭಟ್‌,  ಎಚ್‌.ತಿಪ್ಪೆ ರುದ್ರಸ್ವಾಮಿ,ದೇ. ಜವರೇ ಗೌಡ , ವರದರಾಜರಾವ್‌ ,ಹಾ.ಮಾ ನಾಯಕ,ಚಿದಾನಂದ ಮೂರ್ತಿ, ಪ್ರಭುಶಂಕರ್‌, ಸಿಪಿಕೆ ಯವರುಗಳ ಶಿಷ್ಯತ್ವ. ಆಗಾಗ ಡಿಎಲ್‌ಎನ್ ಮತ್ತು ತಿ.ನಂ ಶ್ರೀ ಗಳ ಅತಿಥಿ ಉಪನ್ಯಾಸ ಕೇಳುವ ಭಾಗ್ಯ.   ೧೯೬೭-೬೮-ರಲ್ಲಿ  ಮೈಸೂರು  ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಎಂ ಎ. ಪದವಿ. ಎಲ್ಲ ಗುರುವರ್ಯರ ಮಾರ್ಗದರ್ಶನ ಪಡೆದರೂ ದೆ. ಜವರೇಗೌಡರ ಪಟ್ಟದ ಶಿಷ್ಯರು ಮತ್ತು ಸಿಪಿಕೆಯವರ ಸಾಹಿತ್ಯ ಕೃಷಿಯಿಂದ ಪ್ರಭಾವಿತರು. ಅವರಜೀವನ .ಮತ್ತು ಬರಹದಮೇಲೆ ಅವರಿಬ್ಬರ  ಗಾಢ ಪ್ರಭಾವ.ದೇ. ಜ. ಅವರದೂ ಆತ್ಮೀಯ ಸಂಬಂಧ. ಒಂದೆ ಪ್ರದೇಶದಿಂದ ಮತ್ತು ಹಿನ್ನೆಲೆಯಿಂದ ಬಂದವರೆಂಬ ನಂಟು ಬೇರೆ. ದೇ. ಜ ಅವರ ಸಂಘಟನಾ ಚಾತುರ್ಯವೆ ಲಿಂಗಯ್ಯನವರ ಜೀವನದುದ್ದಕ್ಕೂ ಬೆನ್ನಿಗೆ ನಿಂತಿತು. ಸಿಪಿಕೆಯವರ ಸತತ ಪರಿಶ್ರಮದ ಬರವಣಿಗೆಯಿಂದ ಸ್ಪೂರ್ತಿ ಹೊಂದಿದ ಅವರು  ವಿವಿಧ ರಂಗಗಳಲ್ಲಿ ಅಧ್ಯಯನ ಮತ್ತು ಕೃತಿ ರಚನೆಗೆ ಕಾರಣ.ಅವರ ಸಹಪಾಠಿಗಳಲ್ಲಿ ಅನೇಕರು.ಹೆಸರಾಂತ ಬರಹಗಾರರಾಗಿದ್ದಾರೆ. ಶ್ರೀ ಜಯಚಂದ್ರ, ಇವರ ಆತ್ಮೀಯ ಒಡನಾಡಿ.-ಇಬ್ಬರಲ್ಲೂ ನಾಮುಂದು ತಾ ಮುಂದು ಎಂದು  ಸ್ಪರ್ಧಾತ್ಮಕ ಬರವಣಿಗೆ. ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಪ್ರಾಧ್ಯಾಪಕಾಗಿದ್ದ   ಕೆಆರ್‌ ಬಸವರಾಜ್, ಶೃಂಗೇರಿಯಲ್ಲಿ ಸಿಕ್ಕಾಗ ತಮ್ಮ ಗೆಳೆಯನ ಮೃದು ನುಡಿ, ವಿನಯದ ನಡೆ, ಗರಿ ಮುರಿಯದ ಉಡುಪು, ವಾದ ವಿವಾದಗಳಿಂದ ದೂರವಿರುವ ಗುಣ ನೆನೆದು ಹನಿಗಣ್ಣಾದರು.  ಈಗ ವಿದೇಶ ವಾಸಿಯಾಗಿರುವ  ಪರಮೇಶ್ವರ ಭಟ್ಟರ ಮಗಳಾದ ಶ್ರೀ ಮತಿ ನಾಗರತ್ನ , ರುಜುವಾತು ಪತ್ರಿಕೆಯ  ಕಾರ್ಯ ನಿರ್ವಹಿಸಿದ ಶ್ರೀ ಮತಿ ಸರ್ವ ಮಂಗಳ ಅವರ ಸಹಪಾಠಿಗಳು
ಇವರಿಗಿಂತ ಒಂದು ವರ್ಷ ಕಿರಿಯರಾದ ಶ್ರೀ.ಕೆ. ರಾಮದಾಸ  ಮತ್ತು ಆಲನಹಳ್ಳಿ ಕೃಷ್ಣ ಅವರು ಆಗಲೆ ವಿಚಾರ ವಾದದ ಮೋಡಿಗೆ ಒಳಗಾದವರು. ಅವರೂ ತೇಜಸ್ವಿಯವರ ಪ್ರಬಾ ವಲಯದಲ್ಲಿದ್ದವರು. ಸಾಹಿತ್ಯ ಲೋಕದಲ್ಲಿ ತಮ್ಮದೆ ಆದ ಅಭಿಪ್ರಾಯ ಹೊಂದಿದವರು.ಅವರು ಆಗಾಗ ಲಿಂಗಯ್ಯನವರ ನಿರಂತರ ಕೃಷಿಯನ್ನು ,ಶ್ರದ್ಧೆಯನ್ನೂ  ಕಿಚಾಯಿಸಿದರೂ ಇವರು ಮಾತ್ರ  ತಲೆ   ಕೆಡಿಸಿಕೊಳ್ಳದೆ ತಮ್ಮ ಗುರಿಸಾಧನೆಯಿಂದ ವಿಚಲಿತರಾಗದೆ ಮುಂದುವರಿದರು. ಆ ಗುಣವೆ ಅವರನ್ನು ಕೊನೆ ತನಕ ಸಾಮಾಜಿಕ ವಲಯದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ  ಕೈ ಹಿಡಿದು ನಡೆಸಿತು ಮತ್ತು ಅಪಾರ ಗೆಳೆಯರ ಬಳಗವನ್ನು ಗಳಿಸಿ ಕೊಟ್ಟಿತು.
ಓದುತಿದ್ದಾಗಲೆ ಅಕ್ಕನ ಮಗಳು ಕವಿತಾರೊಂದಿಗೆ ಮದುವೆ. ಅಕ್ಕರೆಯ ಸಂಸಾರ. ಮನೆವಾರ್ತೆಯನೆಲ್ಲ ಮಡದಿಗೆ ಒಪ್ಪಿಸಿ ಸದಾ   ತಾವಾಯಿತು ತಮ್ಮ ಕನ್ನಡದ ಕೆಲಸವಾಯಿತು. ಒಂದೆ ಓದು ಇಲ್ಲವೆ ಬರಹ ಹೊರಗೆ ಹೋದರೂ ಅದೂ ಕನ್ನಡಕಾರ್ಯಕ್ರಮಗಳ ಸಂಘಟನೆ, ನಿರ್ವಹಣೆ ಮತ್ತು  ಪಾಲುಗೊಳ್ಳಲು ಮಾತ್ರ. ಸಿನೆಮಾ , ನಾಟಕದ ಹಂಬಲವಿಲ್ಲ. ಟಿವಿಯನ್ನೂ ಕನ್ನಡ ವಾರ್ತೆನೊಡಲು ಬಳಕೆ.  ಸವಿತಾ ಪ್ರಿಯದರ್ಶಿನಿ ರೂಪಾಪ್ರಿಯದರ್ಶಿನಿ ಇಬ್ಬರು ಹೆಣ್ಣು ಮಕ್ಕಳು ಮತ್ತು ಅನಂತರಾಜು ಒಬ್ಬನೆ  ಗಂಡು ಮಗ. ಐವರ ಚಿಕ್ಕ ಮತ್ತು ಚೊಕ್ಕ ಸಂಸಾರ ಅವರದು. ಅವರದು.
ವೃತ್ತಿ ಪ್ರಾರಂಭವಾದುದು ವಿಶ್ವೇಶ್ವರಪುರ  ಪದವಿ ಕಾಲೇಜಿನಲ್ಲಿ. ೧೯೬೮ ರಲ್ಲಿ ಮೊದಲು ಉಪನ್ಯಾಸಕರಾಗಿ ಹಂತ ಹಂತವಾಗಿ ಮೇಲೇರಿ ಪ್ರಾಧ್ಯಾಪಕ  ನಂತರ ಪ್ರಾಚಾರ್ಯರಾಗಿ ಸೇವೆ. ೧೯೯೭ರಲ್ಲಿ ನಿವೃತ್ತಿಯಾದದ್ದೂ. ಅಲ್ಲಿಯೆ. ಸಾವಿರಾರು ವಿದ್ಯಾರ್ಥಿಗಳಿಗೆ ನೆಚ್ಚಿನ  ಕನ್ನಡ ಮೇಷ್ಟ್ರು. ನೂರಾರು ಸಹೋದ್ಯೋಗಿಗಳಿಗೆ ಆತ್ಮೀಯ ಒಡನಾಡಿ ಲಕ್ಷಾಂತರ ಓದುಗರ ಮನೆಯಲ್ಲಿ ಮನದಲ್ಲಿ ನೆಚ್ಚಿನ  ಸಾಹಿತಿ.
 ಆಡಳಿತಗಾರರಾಗಿ ಸೌಮ್ಯಸ್ವಭಾವದ ಇವರು ಶಿಸ್ತಿನ ವಿಷಯ ಬಂದಾಗ ಕಟ್ಟು ನಿಟ್ಟು. ವಿಶ್ವೇಶ್ವರ ಪುರಂ ಕಲೆ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳು ಯಾವುದೆ ಚಳುವಳಿಯಲ್ಲಿ ಸದಾ  ಮುಂದು. . ಚಿಕ್ಕ ಕಾರಣಕ್ಕೂ  ತೀವ್ರವಾಗಿ ಪ್ರತಿಕ್ರಿಯಿಸುವರು. ಬಹು ಬೇಗ ಬೀದಿಗಿಳಿದು ಹೋರಾಟಕ್ಕೆ ಅಣಿಯಾಗುವರು. ಅದರಲ್ಲೂ ವಿದ್ಯಾರ್ಥಿ ಸಂಘವಂತೂ ಹೋರಾಟ ಗಾರರ ವೇದಿಕೆ. ಯಾವುದೆ ಚಳುವಳಿಯಲ್ಲೂ ಅವರೆ ಮುಂಚೂಣಿಯಲ್ಲಿರುವರು .ಅನೇಕ ಬಾರಿ ರಾಜಕೀಯ ವಲಯದ ಪ್ರಭಾವವೂ ದಟ್ಟ ವಾಗಿ ಅಲ್ಲಿನ ಚನಾವಣೆ ಒಂದು ಕಿರು ವಿದಾಸಭಾ ಚುನಾವಣೆಯ ತಾಲೀಮು ಎನಬಹುದು.. ಪ್ರಿನ್ಸಿಪಾಲರಾದ ಹೊಸದರಲ್ಲಿ  ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಅಗತ್ಯ ಮನಗಂಡು ವಿದ್ಯಾರ್ಥಿ ಸಂಘದ ಚುನಾವಣೆಗೆ ನಿರ್ಬಂಧ ಹೇರುವ ಕಠಿನ ನಿರ್ಧಾರ ತೆಗದುಕೊಂಡರು. ಅದರ ಪರಿಣಾಮವಾಗಿ ಒಂದು ಗುಂಪು ತೀವ್ರ ಪ್ರತಿಭಟನೆ ಮಾಡಿತು ಬೆದರಿಕೆಯಕರೆ ಬಂದವು, ಮನೆಯ ಹತ್ತಿರ ಗಲಭೆಗೂ ಮುಂದಾದರೂ ಜಗ್ಗದೆ ನಿರ್ಧಾರಕ್ಕೆ ಅಂಟಿಕೊಂಡರು. ಪರಿಣಾಮವಾಗಿ ಅಶಿಸ್ತಿನ ಬೇರು ಒಣಗಿ ಹೋಯಿತು.. ಅವರಿರುವ ವರೆಗೆ  ಹೆಚ್ಚಿನ ಗಲಭೆ ಗಲಾಟೆಗೆ ಅವಕಾಶ ದೊರಕಲಿಲ್ಲ.. ಆ  ಕಾಲೇಜಿನಲ್ಲಿ ಅತ್ಯಂತ ಹೆಚ್ಚು ಕಾಲ ಪ್ರಾಂಶುಪಾಲರಾದ ಹಿರಿಮೆ ಅವರದು.
ಮನೆಗೆ ಬಂದ ಮೇಲೆ ಮುಗಿಯಿತು ಅವರದು ಸದಾ ಕನ್ನಡದ  ಧ್ಯಾನ. ಅಧ್ಯಯನ ಬರವಣಿಗೆ ಬಿಟ್ಟು ಬೇರೆ ಹವ್ಯಾಸವೆ  ಇಲ್ಲ. ಮನೆಗ ಯಾರೆ ನೆಂಟರಿಷ್ಟರು ಬಂದರು ಅವರು ತಮ್ಮ ಪಾಡಿಗೆ ತಾವು ಕೋಣೆಯಲ್ಲಿ ವ್ಯಾಸಂಗ ನಿರತರು. ಒಂದೊಂದು ಸಾರಿ ಬಂದವರು ಯಾರೆಂಬ ನೆನೆಪೂ ಅವರಿಗೆ ಇಲ್ಲದಷ್ಟು  ಪರಧ್ಯಾನ.ಮದುವೆ ಮುಹೂರ್ತ, ಗೃಹಪ್ರವೇಶ ಪೂಜೆ ಪುನಸ್ಕಾರ ಎಂದು ಎಲ್ಲಿಗೂ ಹೆಚ್ಚಾಗಿ ಹೋಗರು. ಅತೀವ ಆತ್ಮೀಯರಾದರೆ ಭೇಟಿ ನೀಡಿ ಕೆಲವೆ ಗಂಟೆಗಳಲ್ಲಿ ವಾಪಸ್ಸು ಬರುವರು. . ಮನೆ ದೇವರು ಮಲೆ ಮಾದೇಶ್ವರ.  ನಿತ್ಯ ಪೂಜೆ ಮಾಡುವ ಆಸ್ತಿಕತೆ  ಇರಲಿಲ್ಲ. ಅವರ ಕೋಣೆಯಲ್ಲಿ ತಾಯಿಯ ಪೋಟೋ ಒಂದು ಮಾತ್ರ. ಅದಕ್ಕೆ ಬೆಳಗ್ಗೆ ಎದ್ದು ಕೈ ಮುಗಿದರೆ ಮುಗಿಯಿತು. ನಂತರ ಕನ್ನಡದ ಕೈಂಕರ್ಯ ಕನ್ನಡ ತಾಯಿಯೆ ಎಲ್ಲ. . ಅವರ ಗೆಳೆಯರ ಬಳಗವೂ ಅತಿ ಹಿತ ಮಿತ. ಡಾ. ಜಯಚಂದ್ರ, ಹರಿಹರ ಪ್ರಿಯ,ಎಲ್ಲೆ ಗೌಡರು,ಕ್ಯಾತನಹಳ್ಳಿರಾಮಣ್ನ ಮತ್ತು  ಡಾ.ಮಾದಯ್ಯ  ಅವರ ಆಪ್ತರು.
 ಕಾಲೇಜಿನ ಉದ್ಯೋಗಕ್ಕೆ ಹೋಗುವಾಗ ಬಹುಶಿಸ್ತಿನ ಉಡುಗೆ. ಫುಲ್‌ ಸೂಟು ಇಲ್ಲವೆ ಸಫಾರಿ. ಮನೆಗೆ ಬಂದಾಗ ಖಾದಿ ಧಾರಿ. ಒಳ ಉಡುಪಿನಿಂದ ಹಿಡಿದು ಪಂಚೆಯವರೆಗೆ ಶುಭ್ರ ಬಿಳಿಯ ಖಾದಿ ಬಳಕೆ.. ೧೯೭೪ ರ ಅವಧಿಯಲ್ಲಿ ದ್ವಿಚಕ್ರವಾಹನ ಓಡಿಸುತಿದ್ದರು. ನಂತರ ಅವರ ಪುತ್ರ ನ್ಯಾಷನಲ್‌ ಕಾಲೇಜಿನಲ್ಲಿ ಅಧ್ಯಯನ ಮಾಡುವವರೆಗೆ ಅವನೆ ಇವರ ಸಾರಥಿ.ಅದಾಗದಿದ್ದರೆ ನೆಮ್ಮದಿಯಾಗಿ ಬಿಟಿ ಎಸ್‌ ಬಸ್ಸಿನಲ್ಲಿ ಪಯಣಿಸುತಿದ್ದರು.
ವೃತ್ತಿ ಮತ್ತು ಪ್ರವೃತ್ತಿಗಳು ಪರಸ್ಪರ ಪೂರಕವಾದ ಸೌಭಾಗ್ಯ ಅವರದು. ಹಳ್ಳಿಗಾಡಿನಿಂದ ಬಂದ ಅವರಿಗೆ ಜಾನಪದ ಸಂಸ್ಕೃತಿ ರಕ್ತಗತ. ಹಳ್ಳಿಯ ಜನ ಹೃದಯಕ್ಕೆ ಹತ್ತಿರ. ಅಂತೆಯೆ ತಮ್ಮ ಸಮಯವನ್ನು ಗ್ರಾಮೀಣ ಸೊಗಡಿನ ಅನಾವರಣಕ್ಕೆ ಮೀಸಲಿರಿಸಿದರು. ಅವಿರತ ಕ್ಷೇತ್ರ ಕಾರ್ಯ  ಮಾಡಿ, ಜನಪದ ಗೀತೆಗಳು, ಜನಪದ ಕಾವ್ಯಗಳು, ಪ್ರಾಣಿ ಕಥೆಗಳು ಹೀಗೆ ಸುಮಾರು ೨೧ ಪುಸ್ತಕಗಳನ್ನು ಪ್ರಕಟಿಸಿರುವ ಹಿರಿಮೆ ಇವರದು. ಲಿಂಗಯ್ಯನವರು ಕೃಷಿ ಮಾಡದ ಸಾಹಿತ್ಯ ಕ್ಷೇತ್ರವನ್ನು ಕನ್ನಡದಲ್ಲಿ ಹುಡುಕುವುದು ಕಷ್ಟ, ಎನ್ನುವುದು ಕ್ಲೀಷೆಯಲ್ಲ. ನಾಟಕ, ಕಥೆ, ಕವನ, ಜೀವನ ಚರಿತ್ರೆ,ವ್ಯಕ್ತಿಚಿತ್ರಗಳು, ಪ್ರಬಂಧ ಮತ್ತು ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ  ಗುರುತು ಮೂಡಿಸಿರುವರು.
ಅವರ ಕಾಣಿಕೆ ಬರಿ  ಸಾಹಿತ್ಯಕ್ಕೆ ಸೀಮಿತವಾಗದೆ ಜನಪರ  ಚಳುವಳಿಗಳಲ್ಲೂ ವ್ಯಕ್ತವಾಗಿದೆ. ಕನ್ನಡಪರ ಚಳುವಳಿಯಲ್ಲಿ ಅವರು ಸದಾ ಎದ್ದು ಕಾಣುತಿದ್ದರು. ಹಂಪನಾಅವರ ಪ್ರೇರನಣೆಯಿಂದ ಬೆಂಗಳೂರಿಗೆ ಬಂದ ಹೊಸತರಲ್ಲೆ ಜಿ. ನಾರಾಯಣರನ್ನು ಸಾಹಿತ್ಯ ಪರಿಷತ್ತಿಗೆ ಅದ್ಯಕ್ಷರಾಗಿಸಲು ಶ್ರಮಿಸಿದರು . ವಿಪರ್ಯಾಸವೆಂದರೆ ಅವರ ಅಸಾಹಿತಿಕ ನಡೆಗೆ ರೋಸಿ ೧೯೭೭ರಲ್ಲಿ ಸಮಕಾಲೀನ ವಿಚಾರವೇದಿಕೆಯಿಂದ ಅನೇಕ ಹೆಸರಾಂತ ಸಾಹಿತಿಗಳು ನಡೆಸಿದ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿದರು. ವಿರೋಧಿಗಳ ಕಿರುಕುಳಕ್ಕೂ ಒಳಗಾದರು. ನಂತರ ನಡೆದ ಚುನಾವಣೆಯಲ್ಲಿ ಹಂಪಾನಾ  ಅವರನ್ನು ಬೆಂಬಲಿಸಿದರು ಅವರು ಆಯ್ಕೆಯಾದಾಗ  ನಾಲಕ್ಕುವರ್ಷಗಳ ಕಾಲ ಕಾರ್ಯದರ್ಶಿಯಾಗಿ ದುಡಿದರು. ಅವರು ಬರಿ ಪತ್ರಿಕಾ ಹೇಳಿಕೆ ನೀಡಿ ಪ್ರತಿಭಟಿಸುವ ಕಾಗದದ ಹುಲಿಯಲ್ಲ. ಕನ್ನಡ ಕ್ರೈಸ್ತರ  ಚಳುವಳಿ ಮೊದಲುಗೊಂಡು   ಹಲವಾರು ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಿಗಳು.೧೯೮೨ ರಲ್ಲಿ ಗೋಕಾಕ ಚಳುವಳಿಯಲ್ಲಿ ಸರಕಾರದ ವಿಳಂಬ ನೀತಿ ಪ್ರತಿಭಟಿಸಿ ಕನ್ನಡ ಸಾಹಿತ್ಯ ಪರಿಷತ್ತಿನ  ಗೌ. ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆನೀಡಿದ್ದರು. ಜನಪರ ನಿಲುವಿನಿಂದಾಗಿ ಅವರು ಜನಪ್ರಿಯರೂ ಆಗಿದ್ದರು ಹಾಗಾಗಿ ಅನೇಕ ಸಾಹಿತ್ಯ ಸಂಘಟನೆಗಳಲ್ಲಿ  ಪದಾಧಿಕಾರಿಯಾಗಿ ಕೊನೆಯುಸಿರು ಇರುವವರೆಗೆ ಶ್ರಮಿಸಿದರು.


Friday, October 5, 2012


ಪ್ರೊ. ಲಿಂಗಯ್ಯ ಅವರ ಬದುಕು  ಮತ್ತು ಬರಹ ಕುರಿತಾದ ವಿಚಾರ ಸಂಕಿರಣ


ಪ್ರೊ. ಲಿಂಗಯ್ಯ ಅವರ ಬದುಕು  ಮತ್ತು ಬರಹ ಕುರಿತಾದ ವಿಚಾರ ಸಂಕಿರಣವು  ದಿನಾಂಕ  ಬೆಂಗಳೂರಿನಲ್ಲಿ  ಅಕ್ಟೋಬರ್‌-೨೦೧೨ ರಂದು ಬಿ ಎಂ. ಪ್ರತಿಷ್ಠಾನದಲ್ಲಿ ನಡೆಯಿತು
ಬೆಳಗಿನ ಗೋಷ್ಠಿಯಲ್ಲಿ ಡಾ. ಜಯ ಚಂದ್ರ, ಅರು ಪ್ರೊ. ಲಿಂಗಯ್ಯನವರ ಜೀವನದ ಬಗ್ಗೆ ಮಾತನಾಡಿದರು. ಅವರ ನಿರ್ಲಿಪ್ತತೆ, ಅಧ್ಯನ ಶೀಲತೆ ಮತ್ತು  ದುಡಿಮೆಯ ತಿಳಿಸಿದರು  ಶ್ರೀ ಎಚ್‌. ಶೇಷಗಿರಿರಾವ್‌,  ಕನ್ಮನಡವೆ ಎನ್ತ್ತುನುಸಿರು ಎಂದು ಅವರು ಬದುಕಿದ ವಿಧಾನ ವಿವರಿಸಿದರು  ಪ್ರೊ. ಅಶ್ವತ್ಥನಾರಾಯಣ ಅವರ ವಚನಗಳಕುರಿತು ಮಾತನಾಡಿದರುತಮ್ಮಪ್ರಬಂಧ ಮಂಡಿಸಿದರು
ಅಧ್ಯಕ್ಷತೆಯನ್ನು ಡಾ. ಚಕ್ಕರೆ ಶಿವ ಶಂಕರ್‌ ವಹಿಸಿದ್ದರು.


ಮಧ್ಯಾಹ್ನದ ಗೋಷ್ಠಿಯಲ್ಲಿ ಡಾ. ಬೈರಮಂಗಲ ರಾಮೇಗೌಡ, ಡಾ. ಸುರೇಶ್‌ ಪಾಟೀಲ್‌ ಮತ್ತು ಡಾ. ಕೊ.ವೆಂ ರಾಮಕೃಷ್ಣೇ ಗೌಡ ಭಾಗ ವಹಿದರು. ಡಾ. ವಿಜಯಾ ಸುಬ್ಬರಾಜ್‌ ಅಧ್ಯಕ್ಷತೆವಹಿಸಿದ್ದರು
                    ಪ್ರಾಸ್ತಾವಿಕ ನುಡಿಯನ್ನ್ನ ಪ್ರತಿಷ್ಠಾನದ ಅಧ್ಯಕ್ಷರಾದ  ಪ್ರೊ.. ಎಂ ಎಚ್‌ ಕೃಷ್ಣಯ್ಯ ಆಡಿದರು.

ಸಮಾರೋಪ ಭಾಷಣ ಶ್ರೀ. ರಾಮಣ್ಣ ಕೋಡಿ ಹೊಸ ಹಳ್ಳಿ ಮಾಡಿದರು. ಅಧ್ಯಕ್ಷತೆಯನ್ನು ಡಾ. ಪಿ.ವಿ ನಾರಾಯಣ .ವಹಿಸಿದ್ದರು.

Tuesday, October 2, 2012

ಕರ್ನಾಟಕ ಇತಿಹಾಸ ಅಕಾದಮಿಯ 26ನೆಸಮ್ಮೇಳನ, ಶೃಂಗೇರಿ




             ಕರ್ನಾಟಕ ಇತಿಹಾಸ ಅಕಾದಮಿಯ 26ನೆ   ವಾರ್ಷಿಕ ಸಮ್ಮೇಳನವು ,  ಸೆಪ್ಟಂಬರ್‌ ೨೨, ೨೩ ಮತ್ತು ೨೪ ರಂದು ಮೂರುದಿನ ಶ್ರೀಮದ್‌ಶಂಕರಾಚಾರ್ಯರ ದಕ್ಷಿಣಾಮ್ನಯ ಪೀಠದ  ಸಹಯೋಗದಲ್ಲಿ ಶೃಂಗೇರಿಯಲ್ಲಿ ಜರುಗಿತು.                   ಡಾ. ಎಸ್‌ವಿ ವೆಂಕಟೇಶಯ್ಯನವರು ಸಮ್ಮೇಳನದ  ಸರ್ವಾಧ್ಯಕ್ಷರಾಗಿ ಮೂರುದಿನದ  ಕಾರ್ಯಕ್ರಮ ನಡೆಸಿ ಕೊಟ್ಟರು         .ಶ್ರೀ ಡಿ.ಎಚ್‌.ಶಂಕರ ಮೂರ್ತಿ,  ಕರ್ನಾಟಕ ವಿಧಾನ ಪರಿಷತ್‌ ಸಭಾಪತಿಗಳು,  ಶೃಂಗೇರಿ ಮಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಗೌರಿಶಂಕರ ಅವರು, ಅಕಾದಮಿಯ ಅಧ್ಯಕ್ಷರಾದ ಡಾ. ದೇವರ ಕೊಂಡಾ ರೆಡ್ಡಿ,” ಇತಿಹಾಸ ಸಂಸ್ಕೃತಿ” ಪ್ರಶಸ್ತಿಯ ವಿಜೇತರಾದ ಪ್ರೊ. ಲಕ್ಷ್ಮಣ ತೆಲಗಾವಿ ಮತ್ತು ಗೋಪಾಲ್ ರಾವ್‌ ಪ್ರಶಸ್ತಿ ಪಡೆದ ಡಾ. ಸೀತರಾಮರಾವ್‌ಜಾಗಿರ್‌ದಾರ  ಮತ್ತು, ನಿಕಟ ಪೂರ್ವ ಸರ್ವಾದ್ಯಕ್ಷರಾದ ಎಚ್‌ಎಸ್ ಗೋಪಾಲರಾವ್‌ , ಅನೇಕ ಹಿರಿಯ ಇತಿಹಾಸ ತಜ್ಞರು ಮತ್ತು , ಅಕಾದಮಿಯ ಪದಾಧಿಕಾರಿಗಳು  ವೇದಿಕೆಯ ಮೇಲಿದ್ದರು.


BKA_4419.JPG
          ಕರ್ನಾಟಕ ರಾಜ್ಯ ವಿಧಾನ ಪರಿಷತ್‌ ಸಭಾಪತಿಗಳಿಂದ ಸಮ್ಮೇಳನದ  ಉದ್ಘಾಟನೆ
      

 ಈ ಕಾರ್ಯಕ್ರಮದ ವಿಭಿನ್ನತೆ ಎಂದರೆ ಸಮಯಕ್ಕೆ ಸರಿಯಾಗಿ ಆದ ಉದ್ಘಾಟನೆ. ಕರ್ನಾಟಕದ ಮೂಲೆ ಮೂಲೆಮೂಲೆಗಳಿಂದ ಬಂದ ಪ್ರತಿನಿಧಿಗಳಿಗೆ ಉತ್ತಮ ವಸತಿ ಸೌಕರ್ಯ ದೊರಕಿತು ಸುಮಾರು ಅರವತ್ತೈದು ಸುಸಜ್ಜಿತ ಕೊಟ್ಟಡಿಗಳನ್ನು ಕೊಡಲಾಗಿತ್ತು. ಬೆಳಗ್ಗೆ ಎಂಟುವರೆಗ ಸರಿಯಾಗಿ ಬೆಳಗಿನ ಉಪಹಾರ.ಸಹ ಪ್ರಾಯೋಜಕರಾದ ಶ್ರೀ ಮಠದಿಂದ ಏರ್ಪಾಡಾಗಿತ್ತು ಹಾಗಾಗಿ ರಾತ್ರಿ ಪ್ರಯಾಣ ಮಾಡಿ ದಣಿದು ಬಂದವರು ಬಿಸಿ ನೀರ ಸ್ನಾನ ಮಾಡಿ ಗಡದ್ದು ತಿಂಡಿ  ತಿಂದು ಕಾರ್ಯಕ್ರಮ  ನಡೆವ ವೇದಿಕೆಗೆ ಬಂದು ನೊಂದಾವಣೆ ಮಾಡಿಕೊಳ್ಳಲು ಸರತಿಗಾಗಿ ಕಾದಿದ್ದರು..ಅದೃಷ್ಟ ಎಂದರೆ ಅತಿಥಿಗಳಿಗಾಗಿ ಕಾಯುವ ಗೋಜಿರಲಿಲ್ಲ. ಸಮ್ಹೇಮೇಳನದ ಸ್ಳಳ ದೇವಸ್ಥಾನದ ಆವರಣದಲ್ಲಿನ ಸಭಾಂಗಣ  . ಎಲ್ಲರೂ ಪಾದರಕ್ಷೆಗಳನ್ನು ಅದರ ಜೊತೆ ತಮ್ಮ ದುಶ್ಚಟಗಳನ್ನು ಆವರಣದ ಹೊರಗೆ ಬಿಟ್ಟು ಶ್ರದ್ಧೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

BKA_4442.JPG
             ಶ್ರೀ ಮಠದ ಆಡಳಿತಾಧಿಕಾರಿಗಳಾದ ಪದ್ಮ ಶ್ರೀ ಗೌರಿಶಂಕರ  ಅವರು 


ಕಾರ್ಯಕ್ರಮದ ಲ್ಲಿ ಶ್ರೀಗೌರಿ ಶಂಕರ ಅವರು ಸಮ್ಮೇಳನದ ಸಹಯೋಗ  ತಮ್ಮಸೌಭಾಗ್ಯ ಎಂದು ತಿಳಿಸಿದರು. ಮಠ ಒಂದು ಶ್ರದ್ಧಾಕೇಂದ್ರ. ಇಲ್ಲಿ ಇತಿಹಾಸ ಮತ್ತು ಪರಂಪರೆಗಳ ಸಮ್ಮಿಳನವಾಗಿದೆ. ಆದ್ದರಿಂದ ಇತಿಹಾಸ ಸಮ್ಮೇಳನ ನಡೆಸುವಲ್ಲಿ ಕೈ ಜೋಡಿಸಲು ತಮಗೆ ಅತೀವ ಆನಂದ , ಎಂದುಹೇಳಿದರು. ಅಲ್ಲದೆ ಈ ಕೆಲಸ ಮಾಡಲೆಂದೆ ತಾವಿರುವುದು. ಇಂಥಹ ಸಹಕಾರ ಭವಿಷ್ಯದಲ್ಲಿಯೂ ನೀಡಲು ಸಿದ್ಧ ಎಂದರು.



                              ಸಮ್ಮೇಳನ ಉದ್ದೇಶಿಸಿ ಶ್ರೀ ಡಿಎಚ್‌ಶಂಕರ ಮೂರ್ತಿ ಅವರ ಭಾಷಣ 

ಸಮ್ಮೇಳನವನ್ನು ಉದ್ಘಾಟಿಸುತ್ತಾ ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್‌.ಶಂಕರಮೂರ್ತಿಯವರು ಸುದೀರ್ಘವಾಗಿ ಪರಂಪರೆಯನ್ನು ಉಳಿಸಿಕೊಳ್ಳುವ ಅಗತ್ಯದ ಬಗೆಗೆ ಮಾತನಾಡಿದರು. ಯುವಜನರ ಜಾಗೃತಿಗೆ ಇತಿಹಾಸದ ಅಧ್ಯಯನದ ಅಗತ್ಯವನ್ನು ಒತ್ತಿ ಹೇಳಿದರು.ಸರಿಯಾದ ಇತಿಹಾಸದ ರಚನೆಯ ಪ್ರಾಮುಖ್ಯತೆ ತಿಳಿಸಿದರು ಇದೆ ಸಮಯದಲ್ಲಿ  ಇತಿಹಾಸ ತಜ್ಞರರಾದ  ಡಾ. ಲಕ್ಷ್ಮಣ ತೆಲಗಾವಿ ಯವರಿಗೆ  “ “ಇತಿಹಾಸ ಸಂಸ್ಕೃತಿ ಶ್ರೀ”  ಪ್ರಶಸ್ತಿ ಪ್ರದಾನ ಮಾಡಿ ಜೊತೆಗೆ ಒಂದುಲಕ್ಷ ರೂಪಾಯಿ ನಗದು ನೀಡಲಾಯಿತು. ಈ ಪ್ರಶಸ್ತಿಯ  ಪ್ರಾಯೋಜಕರಾದ ಲಕ್ಷ್ಮಿ ಪ್ರಿಂಟರ್ಸನ ಶ್ರೀಅಶೋಕಕುಮಾರ್‌ ಅವರು ತಮ್ಮ ಬಿ.ಆರ್‌.ಆರ್‌ ಟ್ರಸ್ಟ ವತಿಯಿಂದ  ಬಹುಶಃ ದೇಶದಲ್ಲಿಯೆ ಅತಿ ಹೆಚ್ಚು ಮೌಲ್ಯಯುತವಾದ ಈ  ಇತಿಹಾಸ ಪ್ರಶಸ್ತಿಯನ್ನು ಪ್ರತಿವರ್ಷ ಕರ್ನಾಟಕ ಇತಿಹಾಸ ಅಕಾದಮಿಯ ಮೂಲಕ ನೀಡುವುದಾಗಿ ಘೋಷಿಸಿದರು.

ಇದೆ ಸಮಯದಲ್ಲಿ  ಡಾ. ಬಾ.ರಾ. ಗೋಪಾಲ್ ಶಾಸನ ದತ್ತಿ ಪ್ರಶಸ್ತಿಯನ್ನು ಡಾ. ಸೀತಾರಂ ಜಾಗಿರದಾರ ಅವರಿಗೆ ಪ್ರದಾನ ಮಾಡಲಾಯಿತು..ಮತ್ತು ೨೬ನೆ ವಾರ್ಷಿಕ “ಇತಿಹಾಸದರ್ಶಿನಿ” ಗ್ರಂಥವನ್ನೂ ಬಿಡುಗಡೆ ಮಾಡಲಾಯಿತು.

BKA_4468.JPG
      ಸಮ್ಮೇಳನದ  ಸರ್ವಾದ್ಯಕ್ಷರಾದ ಡಾ. ಎಸ್‌ವಿ. ವೆಂಕಟೇಶಯ್ಯನವಿಗೆ ಸನ್ಮಾನ. 

     ಈ ಸಮ್ಮೇಳನದ ಸರ್ವಾದ್ಯಕ್ಷರಾದ ಡಾ. ಎಸ್‌ವಿ. ವೆಂಕಟೇಶಯ್ಯನವರು ತಮ್ಮ ೩೩ ವರ್ಷದ ಸುದೀರ್ಘ ಮತ್ತು ಸಾರ್ಥಕ ಕಾರ್ಯದಿಂದ ಪ್ರಾಚೀನ ಸ್ಮಾರಕಗಳ ರಕ್ಷಣೆ, ಉತ್ಖನನ ಮತ್ತು ಪ್ರಾಚ್ಯವಸ್ತು ಇಲಾಖೆಯ ಮೂಲಕ ಮಾಡಿದ  ಕೆಲಸದ ವಿವರ ನೀಡಿದರು.. ಪುರಾತತ್ವ ಇಲಾಖೆಯ ಕಾರ್ಯವೈಖರಿ, ಪರಂಪರೆಯ  ಸ್ಮಾರಕಗಳ ಸಂರಕ್ಷಣೆಗೆ ಇಲಾಖೆಯ  ಕಳಕಳಿ ಮತ್ತು ಕಾಳಜಿ  ಕುರಿತು ಮಾಹಿತಿ ನೀಡಿದರು.. ಇತಿಹಾಸ ಅಕಾದಮಿಯ ಅಧ್ಯಕ್ಷರಾದ  ಡಾ. ದೇವರ ಕೊಂಡಾರೆಡ್ಡಿಯವರು ಸಮ್ಮೇಳನದ ಹಿನ್ನೆಲೆ . ಅದರ ಯಶಸ್ಸಿಗೆ ಕೈ ಜೋಡಿಸಿದವರ ವಿವರ ನೀಡಿ ಎಲ್ಲರನ್ನೂ ಸ್ವಾಗತಿಸಿದರು.ಸರಿ ಸುಮಾರು ಮೂರು ನೂರು ಪ್ರತಿನಿಧಿಗಳು ಭಾಗವಹಿಸಿದ್ದರು ಅದರಲ್ಲಿ ಮಹಿಳೆಯರ ಸಂಖ್ಯೆಯೂ ಗಣನೀಯವಾಗಿತ್ತು ಇತಿಹಾಸ ಮತ್ತು ಸಾಹಿತ್ಯ ರಂಗದಲ್ಲಿನವರು ಜೊತೆಜೊತೆಗೆ ಸಮಾಜದ ವಿವಿಧ ರಂಗದಲ್ಲಿನ ಇಯಿಹಾಸಾಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. . ಅರವತ್ತು-ಎಪ್ಪತ್ತು ವಯೋಮಾನದ ಹಿರಿಯ ತಲೆಗಳೊಡನೆ ಅವರ ಮರ್ಗದರ್ಶನ ಪಡೆಯಲು,  ಸಂವಾದ ನಡೆಸಲು . ಸಂಪ್ರಬಂಧ ಮಂಡಿಸಲು  ಹೆಚ್ಚಿನ ಸಂಖ್ಯೆಯ ಯುವ ಜನರು ಭಾವಹಿಸಿದುದು ಭವಿಷ್ಯದ ಭರವಸೆಯ ಸಂಕೇತವಾಗಿತ್ತು..ಅಂದಾಜು ೧೪೦ಕ್ಕೂಹೆಚ್ಚು ಮಂದಿ ತಮ್ಮ ಸಂಪ್ರಬಂಧ ಮಂಡಿಸಲು ನೊಂದಾಯಿಸಿ ಕೊಂಡಿದ್ದರು ಅದಕ್ಕಾಗಿ ಮುಖ್ಯ ವೇದಿಕೆಯ ಜೊತೆಗೆ ಸಮಾಂತರವಾಗಿ ಕಾರ್ಯಕ್ರಮ ನಡೆಸಲು ಇನ್ನೊಂದು ವೇದಿಕೆಯನ್ನು ಸಿದ್ಧ ಮಾಡಲಾಗಿತ್ತು. ಅಲ್ಲಿ ಪವರ್‌ ಪಾಯಿಂಟ್‌ ಪ್ರಾತ್ಯಕ್ಷಿಕೆ ಕೊಡಲು ಸೂಕ್ತ ವ್ಯವಸ್ಥೆ ಮಾಡಿದುದು ಸಂಪ್ರಬಂಧಗಳನ್ನು ಪರಿಣಾಮಕಾರಿಯಾಗಿ ಚಿತ್ರ ಸಮೇತ ಮಂಡಿಸಲು ಅನುಕೂಲವಾಗಿತ್ತು..ಉದ್ಘಾಟನೆಯ ನಂತರ ಗೋಷ್ಠಿಗಳು  ಪ್ರಾಂಭವಾದವು. ಪ್ರತಿ ಗೋಷ್ಠಿಗೂ ತಜ್ಞರೊಬ್ಬರು ಅಧ್ಯಕ್ಷರು ಜೊತೆಗೆ ಒಬ್ಬ ನಿರೂಪಕರು . ಹೆಚ್ಚಿನ ಸಂಖ್ಯೆಯ ಪ್ರಬಂಧಗಳ ಮಂಡನೆ ಆಗಬೇಕಾದುದರಿಂದ ಪ್ರತಿ  ಪ್ರಬಂಧ ಮಂಡನೆಗೆ  ೮-೧೦ ನಿಮಿಷ ಕಾಲಾವಧಿ ನಿಗದಿ ಮಾಡಲಾಗಿತ್ತು ಜೊತೆಗೆ  ೨-೩ ಪ್ರಶ್ನೆಗಳಿಗೂ ಅವಕಾಶವಿತ್ತು. ಆಯ್ದ ಗೋಷ್ಠಿಗಳ ವಿವರವನ್ನು ಒಂದೊಂದಾಗಿ ಬ್ಲಾಗ್‌ನಲ್ಲಿ ಮುಂಬರುವ ದಿನಗಳಲ್ಲಿ ನಿರೀಕ್ಷಿಸಿ.



Monday, October 1, 2012

ಐತಿಹ್ಯ ಮತ್ತು ಇತಿಹಾಸ





ಇತ್ತೀಚೆಗೆ ಶೃಂಗೇರಿಯಲ್ಲಿ ನಡೆದ ಕರ್ನಾಟಕ ಇತಿಹಾಸ ಸಮ್ಮೇಳನದಲ್ಲಿ ಐತಿಹ್ಯದ ವಿಷಯ ವ್ಯಾಪಕ ಚರ್ಚೆಗೆ ಒಳಗಾಯಿತು.ಒಬ್ಬ ಪ್ರತಿನಿಧಿ “ ಶಾಸನ ಆಧಾರಿತ ಐತಿಹ್ಯಗಳು “  ಎಂಬ ಸಂಪ್ರಬಂಧ ಮಂಡಿಸಿದರು. ಆಗ ಗಂಭೀರ ಚರ್ಚೆಯಾಗಿ ಪ್ರಬಂಧದ ಶೀರ್ಷಿಕೆಯನ್ನೆ ಬದಲಾಯಿಸಲು ಸಲಹೆ ಮಾಡಲಾಯಿತು. ಕಾರಣ ಐತಿಹ್ಯವನ್ನು ಇತಿಹಾಸಕ್ಕೆ ಏಕ ಮೇವ ಆಧಾರವಾಗಿ ಪರಿಗಣಿಸುವ ಹಾಗಿಲ್ಲ. ಅದು ಇತಿಹಾಸವಲ್ಲ. ಅದುಬರಿ ಬಾಯಿ ಮಾತಿನಿಂದ ಪ್ರಚಲಿತವಾದ ವಿಚಾರ.. ಅದಕ್ಕೆ ಖಚಿತವಾದ ಶಾಸನ, ಲಿಖಿತ ಹಾಗೂ ನಾಣ್ಯದ ಆಧಾರವಿದ್ದರೆ ಅದನ್ನು ಐತಿಹ್ಯ ಎನ್ನಲಾಗದು ಎಂದು ಇತಿಹಾಸ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದರು..ಐತಿಹ್ಯವು ಸತ್ಯವಾಗಿರಬಹುದು ಇಲ್ಲವೆ ಕಪೋಲ ಕಲ್ಪಿತವಾಗಿ ಒಬ್ಬರಿಂದ ಒಬ್ಬರಿಗೆ ಹರಡುವಾಗ ಉತ್ಪ್ರೇಕ್ಷೆಗಳಿಂದ ಕೂಡಿದ ಮಾಹಿತಿಯಾಗಬಶೃಂಗೇರಿ    ಪಟ್ಟಣದ ಮಧ್ಯದಲ್ಲಿರುವ ಮಲ್ಲಿಕಾರ್ಜುನ ಬೆಟ್ಟಕ್ಕೆ ಭೇಟಿ ನೀಡಿದೆ. ಅದು ಅಂಥಹ ದೊಡ್ಡ ಬೆಟ್ಟವೇನೂ ಅಲ್ಲ. ಬರಿ ನೂರಕ್ಕೂ ತುಸು ಹೆಚ್ಚಿನ ಸಂಖ್ಯೆಯ ಮೆಟ್ಟಿಲುಗಳು . ಬೆಟ್ಟದ ಮೇಲೆ ಸುಂದರ ಈಶ್ವರ ದೇವಾಲಯ.  ಪೂಜೆ ನಡೆಯುತ್ತಿರುವಾಗ ಒಬ್ಬ  ವಯೋ ವೃದ್ಧರು ದೇವರ ಮುಂದೆ ನಿಂತು,  “ಸ್ವಾಮಿ ನಿನ್ನೆ ಕಿಗ್ಗಕ್ಕೆ ಹೋಗಿ ಬಂದೆ ಅಲ್ಲಿ ನಿನ್ನ ಮಗ ಸೊಸೆ  ಕ್ಷೇಮವಾಗಿದ್ದಾರೆ” ಎನ್ನುತ್ತಾ ಕೈ ಮುಗಿದು ನಮಸ್ಕಾರ ಹಾಕಿದ್ದು ನನಗೆ ಕುತೂಹಲ ಮೂಡಿಸಿತು. ಅವರು ದೇವಸ್ಥಾನದ ಹೊರಗೆ ಬರುವವರೆಗೆ ಕಾದು ನಂತರ ಮಾತನಾಡಿಸಿದೆ.
ಸ್ವಾಮಿ  ಅದೇನು ಮಗ, ಸೊಸೆ ಚೆನ್ನಾಗಿದ್ದಾರೆ . ಎಂದು ದೇವರಲ್ಲಿ ನಿವೇದನೆ ಮಾಡಿದಿರಲ್ಲ? ಯಾರ ಮಗ ?  ಯಾರ   ಸೊಸೆ. ಅದಕ್ಕೂ ಕಿಗ್ಗಕ್ಕೂ ಏನು ಸಂಬಂಧ ದಯಮಾಡಿ ತಿಳಿಸುವಿರಾ? ಎಂದು ವಿನಂತಿ ಮಾಡಿಕೊಂಡೆ.
ಅವರು ನೀವು ಈ ಭಾಗದವರಲ್ಲವೋ?  ಎಂದು ಪ್ರಶ್ನಿಸಿದರು. ಅಲ್ಲ , ಎಂದೆ.  ಯಾವ ಊರು?  ಎಂಧಾಗ ನಾನು ಹಂಪೆಯ ಹತ್ತಿರದವನು ಎಂದೆ.
ಕಿಗ್ಗದ ಋಷ್ಯ ಶೃಂಗೇಶ್ವರ

 ಅದಕ್ಕೆ ನಿಮಗೆ ಇಲ್ಲಿನ ಸ್ಥಳದ ಮಹತ್ವ ಗೊತ್ತಿಲ್ಲ. ಇದು ಇಲ್ಲಿನ  ಐತಿಹ್ಯ. ಈ ಬೆಟ್ಟ  ವಿಭಾಂಡಕ ಮುನಿಯ ವಾಸ ಸ್ಥಳವಾಗಿತ್ತು. ಅವರು ನಿತ್ಯ ಬೆಟ್ಟದಿಂದ ಇಳಿದು ತುಂಗೆಯಲ್ಲಿ ಸ್ನಾನ ಮಾಡಿ ಮತ್ತೆ ಇಲ್ಲಿ ಬಂದು ತಪಸ್ಸು ಮಾಡುತಿದ್ದರು. ಒಂದು ದಿನ ಅವರ ರೇತಸ್ಸು ನೀರಿನಲ್ಲಿ ವಿಸರ್ಜನೆಯಾದಾಗ  ಅಲ್ಲೊಂದು ಹೆಣ್ಣು ಜಿಂಕೆ ನೀರಿನ ಜೊತೆ ಅದನ್ನು ಕುಡಿಯಿತು. ಅದರ ಫಲವಾಗಿ ಅದು ಒಂದು ಗಂಡು ಮಗುವಿಗೆ ಜನ್ಮ ನೀಡಿತು. ಆ ಮಗುವಿನ ತಲೆಯಲ್ಲೆ ಒಂದು ಪುಟ್ಟ ಕೋಡಿತ್ತು. ಅದರಿಂದ ಅವನನ್ನು ಋಷ್ಯ ಶೃಂಗ ಎಂದು ಕರೆದರು. ಅವನು ಮಹಾಮುಗ್ದ. ಸದಾ ಜಪ,ತಪದಲ್ಲಿ ಮಗ್ನನಾದ ಜ್ಞಾನಿ . ಲೋಕಾಚಾರವನ್ನೆ ಅರಿಯದೆ ತನ್ನ ಪಾಡಿಗೆ ತಾನು ತಪಸ್ಸು ಮಾಡಿಕೊಂಡು ಇಲ್ಲಿಗೆ ಇಪ್ಪತೆಂಟು ಮೈಲುದೂರದ ಕಿಗ್ಗದಲ್ಲಿ  ನೆಮ್ಮದಿಯಿಂದ ಇದ್ದ. ಆ ಸಮಯದಲ್ಲಿ ರೋಮಪಾದನೆಂಬ ಅರಸನ ರಾಜ್ಯದಲ್ಲಿ ಭೀಕರ ಬರ ಕಾಣಿಸಿ ಕೊಂಡಿತು. ಮಳೆಯೆ ಇಲ್ಲದಾಯಿತು. ಏನು ಮಾಡ ಬೇಕೆಂದು ತೋಚದೆ ಪ್ರಾಜ್ಞರನ್ನು  ವಿಚಾರಿಸಿದಾಗ  ಋಷ್ಯ ಶೃಂಗ ಮುನಿ  ಆ ನಾಡಿನಲ್ಲಿ ಕಾಲಿಟ್ಟರೆ ಮಳೆ ಬರುವುದೆಂದು ನುಡಿದರು. ಅದಕ್ಕೆ ಅವನು ರಾಜಕುಮಾರಿಯಾದ ತನ್ನ ಮಗಳನ್ನೆ ಅವರನ್ನು ಕರೆತರಲು ನೇಮಿಸಿದ. ಅವಳು ಅವರನ್ನೆ ಮದುವೆಯೂ ಆದಳು. ಅವರಿಬ್ಬರೂ ಕಿಗ್ಗದ ಪ್ರದೇಶದಲ್ಲಿ ಸಂಸಾರ ನಡೆಸಿದರು. ಅದಕ್ಕೆ ಅಲ್ಲಿರುವ ಲಿಂಗದ ಮೇಲೆ ಶೃಂಗವಿದೆ. ಇಲ್ಲಿಯೇ ವಿಂಭಾಂಡಕ ಮುನಿ ಐಕ್ಯವಾದರು. ಅವರೆ ಪೂಜಿಸಿದ ಲಿಂಗವೆ ಮಲಪರಿಹಾರಕ ಕೇಶ್ವರ ಎಂದು ಪ್ರಸಿದ್ಧಿ ಪಡೆದಿದೆ. ಆದ್ದರಿಂದ ಮೊದಲು ಕಿಗ್ಗಕ್ಕೆ ಹೋಗಿ ದರ್ಶನ ಪಡೆದು ನಂತರ ಇಲ್ಲಿ ಬಂದು ಅವರ ಕುಶಲ ಸಮಾಚಾರ ಅರುಹಿದರೆ, ಸಂಪ್ರೀತನಾಗಿ ಕೇಳಿದ ವರ ನೀಡುವರೆಂಬ ಪ್ರತೀತಿ  ಇದೆ. ಎಂದು ವಿವರಿಸಿದರು ಮಾನವ ಸಂಬಂಧಗಳು ಹೇಗೆ ಪೌರಾಣಿಕ ಐತಿಹ್ಯವಾದ ಬಗೆ ನನಗೆ ಎಂದು ಅಚ್ಚರಿಯಾಯಿತು.. ಅವರ ಹೇಳಿದ ಕಥೆ ನನಗೆ ಚಿಂತನೆಗೆ ಆಹಾರವಾಯಿತು.

ಮಲ್ಲಿಕಾರ್ಜುನ ಬೆಟ್ಟ

ನಮ್ಮ ಪುರಾಣ ಇತಿಹಾಸಗಳೆಲ್ಲ ವಿಭಿನ್ನ ಸಂತಾನ ಪ್ರಾಪ್ತಿಯ ವಿಧಾನ ಕುರಿತಾದ ವಿವರಗಳಿಂದ ಕೂಡಿವೆ. ರಾಮಾಯಣದಲ್ಲಿ ರಾಮ,ಲಕ್ಷ್ಮಣ, ಭರತ ಮತ್ತು ಶತೃಜ್ಞರು ಯಾಗದ ಫಲವಾಗಿ ದೊರೆತ ಪ್ರಸಾದ ಸೇವನೆಯಿಂದ ಜನಿಸಿದರು, ಕರ್ಣ ಕುಂತಿದೇವಿಗೆ ಕಿವಿಯಿಂದ ಸೂರ್ಯನ ವರಪ್ರಸಾದದಿಂದ ಜನಿಸಿದವ,. ಪಾಂಡವರು ಐವರು ದೇವರ ವರ ಸಂಜಾತರು, ಕೌರವರು ಪಾತವಾದ  ಭ್ರೂಣವನ್ನು ತುಪ್ಪ ತುಂಬಿದ ಕೊಡದಲ್ಲಿ ಅವಧಿ ಪೂರ್ಣವಾಗುವವರೆಗೆ ಇರಿಸಿದ  ನಂತರ ಜನನವಾದವರು, ದ್ರೋಣರು ಕುಂಭ ಸಂಭವರು, ದ್ರೌಪತಿ ಅಗ್ನಿಸಂಜಾತೆ.ಹೀಗೆ ಹುಡುಕುತ್ತಾ ಹೋದರೆ  ನೈಸರ್ಗಿಕವಲ್ಲದ ಹುಟ್ಟಿನ ವಿವರ ಸಾಕಷ್ಟು ಸಿಗುತ್ತದೆ. ಇದೆಲ್ಲ ಅನೇಕ ಜಿಜ್ಞಾಸೆಗೆ ಕಾರಣವಾಗಿದೆ. ಇದು ಬರಿ ಸಾಂಕೇತಿಕವಾಗಿದೆಯೋ  ಅಥವ ಒಂದು ರೀತಿಯಲ್ಲಿ ಇಂದಿನ ಪ್ರನಾಳ ಶಿಶು, ಕ್ಲೌನಿಂಗ್‌ ಮತ್ತು ಇತ್ತೀಚೆಗೆ  ಲಂಡನ್ನನಲ್ಲಿ ಭಾರತೀಯ ಸಂಜಾತೆ ವೈದ್ಯೆಯೊಬ್ಬಳು ವೀರ್ಯದ ಸಹಾಯವಿಲ್ಲದೆ ಮಗುವಿನ ಜನನಸಾಧ್ಯತೆ ಇದೆ, ಎಂದು ಸಿದ್ಧ ಮಾಡಿರುವುದು  ಈ ಮೊದಲೆ ಇದ್ದ ಜ್ಞಾನದ ಮುಂದುವರಿಕೆಯಾಗಿ ಇರಬಹುದೆ? ಎಂಬಅನುಮಾನ ಹುಟ್ಟಿಸುತ್ತದೆ.

ಇನ್ನು ಸ್ಥಳ ಪುರಾಣಗಳನ್ನು ಗಮನಿಸಿದರೆ ಅವೂ ಕುತೂಹಲ ಹುಟ್ಟಿಸುತ್ತವೆ. ಶೃಂಗೇರಿಯಲ್ಲಿ ಶಂಕರರು ಶಾರದಾಪೀಠ ಸ್ಥಾಪನೆ ಮಾಡಲು ಇರುವ ಐತಿಹ್ಯ ಆಸಕ್ತಿದಾಯಕವಾಗಿದೆ. ಅವರು ಉತ್ತರ ಭಾರತದಿಂದ ಬಂದು ತುಂಗೆಯ ತಟದಲ್ಲಿ ತಪಸ್ಸು ಮಾಡುತಿದ್ದಾಗ ನದಿಯ ದಡದಲ್ಲಿ ತುಂಬುಗರ್ಭಿಣಿಯಾದ ಕಪ್ಪೆಗೆ ಹಾವು ಹೆಡೆಬಿಚ್ಚಿ ಬೆರಳು ನೀಡುವುದನ್ನು ನೋಡಿದರಂತೆ. ಅದರ ಶಿಲ್ಪವೂ ಅಲ್ಲಿ ಇದೆ. ಇಲ್ಲಿ ಆಜನ್ಮ ಶತೃವಿಗೂ ಕಷ್ಟಕಾಲದಲ್ಲಿ  ರಕ್ಷಣೆ  ನೀಡುವ ಗುಣಕ್ಕೆ  ಕಾರಣ ಈ ಸ್ಥಳದ ಮಹಿಮೆ ಅದಕ್ಕೆ ಶಂಕರಾಚಾರ್ಯರು ಇಲ್ಲಿಯೆ ಮಠ ಸ್ಥಾಪಿಸಿದರು ಎಂಬ ಕಥೆ ಇದೆ.. ಇದು ಪೌರಾಣಿಕ ಐತಿಹ್ಯ. ಬಾಯಿಂದ ಬಾಯಿಗೆ ಹರಿದು ಈಗ ನಂಬಿಕೆಯ ರೂಪ ಪಡೆದಿದೆ.
 ಇದೆರೀತಿಯಲ್ಲಿ ನಮ್ಮ ಹಂಪೆಯಹತ್ತಿರ ಹಕ್ಕ ಬುಕ್ಕರು ಬೇಟೆಗೆ ಹೋದಾಗ  ಬೇಟೆ ನಾಯಿಗಳಿಗೆ ಅಂಜಿ ಓಡುತಿದ್ದ ಮೊಲವೊಂದು ತುಸು ದೂರ ಹೋದ ನಂತರ ತಿರುಗಿನಿಂತು ನಾಯಿಗಳನ್ನು ಎದುರಿಸಿ ಕಾದಾಡಲು ಮೊದಲು ಮಾಡಿತಂತೆ. ಈ ಅಚ್ಚರಿಯನ್ನು ಕಂಡ ಅವರು ಹಕ್ಕ ಬುಕ್ಕರು ತಮ್ಮ ಗುರುಗಳಾದ ವಿದ್ಯಾರಣ್ಯರಿಗೆ ತಿಳಿಸಿದರು. . ಈ ವಿಚಿತ್ರಕ್ಕೆ  ಕಾರಣ ಅದು ಭೂಮಿಯ ಗುಣ ಇದು ವೀರಭೂಮಿ.  ಇಲ್ಲಿನ ಅತಿಮೃದು ಸ್ವಭಾವದವರೂ ಸಮಯ ಬಂದರೆ ದೃಢತೆಯಿಂದ ಕಾದಾಡಬಲ್ಲರು . ಇದೆ ವಿಜಯ ನಗರ ಸಾಮ್ರಾಜ್ಯ  ಸ್ಥಾಪನೆಗೆ ಸೂಕ್ತ ಸ್ಥಳ ಎಂದು ಅಲ್ಲಿಯೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿಸಿದರು  ಎಂಬ ಐತಿಹ್ಯವೂ ಪ್ರಚಲಿತವಿದೆ.
          ಅದೆ ರೀತಿ ವನವಾಸದ ಸಮಯದಲ್ಲಿ  ರಾಮಲಕ್ಮಣ ಸೀತೆಯರು ಹೋಗುತಿದ್ದಾಗ  ರಾಮನು ತಮ್ಮ ಲಕ್ಮಣನಿಗೆ , ತಮ್ಮಾ ಲಕ್ಷ್ಮಣಾ , ಬಾಯಾರಿಕೆಯಾಗಿದೆ,  ನೀರು ತಾ, ಎಂದರೆ ವಿನಯ ಮೂರ್ತಿಯಾದ ಲಕ್ಷ್ಮಣನು , ಬೇಕಾದರೆ ನೀನೆ ಹೋಗಿ ಕುಡಿ ಎಂದು ಬಿಮ್ಮನೆ ಕುಳಿತಿದ್ದನು. ಅಣ್ಣನ  ಮೇಲಿನ ಪ್ರೀತಿ ,ಗೌರವದಿಂದ ಮಡದಿಯನ್ನು ತೊರೆದು ಕಾಡಿಗೆ ನೆರಳಿನಂತೆ ಹಿಂಬಾಲಿಸಿರುವ ಲಕ್ಷ್ಮಣನ ಈ ನಡೆ ರಾಮನಿಗೂ ಅರೆ ಕ್ಷಣ ಅಚ್ಚರಿ ಮೂಡಿಸಿತು. ಮರು ಮಾತನಾಡದೆ ಅಲ್ಲಿಂದ ತುಸು ದೂರ ಹೋದರು. ನಂತರ ಲಕ್ಷ್ನಣನು ಅಣ್ಣಾ !, ನಿನಗೆ ಆಯಾಸವಾದಂತಿದೆ. ತುಸು ವಿಶ್ರಮಿಸು, ನೀರು ತರುವೆ, ಎಂದು ವಿನಯದಿಂದ ಹೇಳಿದಾಗ. ರಾಮನು ಮುಗಳ್ನಕ್ಕನಂತೆ. ಅವನಿಗೆ ಆಗಲೆ ತಿಳಿದಿತ್ತು ತಮ್ಮನ ಪೆಡಸಿನ ಮಾತಿಗೆ ಕಾರಣ ಆ  ಸ್ಳಳದ ಪ್ರಭಾವ ಎಂದು.ಇದು ಪೌರಾಣಿಕ ಐತಿಹ್ಯ.
 ಈ  ಎಲ್ಲ ನನಗೆ ಚಿಂತನೆಗೆ ಹಚ್ಚಿತು. ಶೃಂಗೇರಿಯಿದ್ದ ಸ್ಥಳದಲ್ಲಿ ಮಾನವ ಮತ್ತು ಪಶುಪಕ್ಷಿಗಳು ಸಾಮರಸ್ಯದಿಂದ ಬಾಳುತಿದ್ದವು.  ಮಾನವ ಶಿಶುವನ್ನು ಒಂದು ಜಿಂಕೆಯ  ತಾಯಿಯೋಪಾದಿಯಲ್ಲಿ ನೋಡಿಕೊಂಡಿರುವುದೆ ಈ ಋಷ್ಯ ಶೃಂಗರ  ಕಥೆಯ ಉಗಮಕ್ಕೆ ಕಾರಣವಾಗಿರಬಹುದೆ? ಎನಿಸಿತು.ಆದರೆ ಈಗ ಮಲ್ಲಿಕಾರ್ಜುನ ಬೆಟ್ಟವನ್ನು ಸಂಸ್ಕೃತಿ ಕರಣ ಮಾಡಿ ಮಲನಿವಾರಿಕೀಶ್ವರ  ಎಂದು ಹೆಸರಿಸಿರುವುದು  ಈ ಮಾತಿಗೆ ಪುಷ್ಟಿ ಕೊಡುವುದು.
ಇನ್ನುಹಾವುಕಪ್ಪೆಯ ರಕ್ಷಣೆಗೆ ಧಾವಿಸಿರುವುದು ಸಹಾ ನೆಲ ಮತ್ತು ನೀರಿನ ಗುಣವೆ ಆಗಿರಬಹುದು.. ಆದು ಈಗಲೂ ಅಲ್ಲಿನ ಜನರ ಸುಸಂಸ್ಕೃತ ನಡವಳಿಕೆ ಕಂಡಾಗ  ಅದು ಸಹಜವೇನೋ ಅನಿಸಿದೆ.
ಈ ರೀತಿಯ ಐತಿಹ್ಯಗಳು ಎಲ್ಲ ಪುಣ್ಯಕ್ಷೇತ್ರಗಳಲ್ಲೂ ಕೇಳಿ ಬರುತ್ತವೆ. ತಿರುಪತಿಯಲ್ಲಿ ಮೊದಲು ವರಾಹ ಸ್ವಾಮಿದರ್ಶನ ಮಾಡಿದರೆ ಮಾತ್ರ ಫಲ ಪ್ರಾಪ್ತಿ , ಎನ್ನುವ ನಂಬಿಕೆ, ಧರ್ಮಸ್ಥಳದಲ್ಲಿ ಅಪ್ಪಣ್ಣನನ ದರ್ಶನ. ಮಂತ್ರಾಲಯದಲ್ಲಿ ಮಂಚಾಲಮ್ಮನ ದರ್ಶನ ಮಾಡಿಕೊಳ್ಳದಿದ್ದರೆ ಫಲ ಪ್ರಾಪ್ತಿಯಾಗದು ಎನ್ನುವ ಸಂಪ್ರದಾಯ ಆಸ್ಥಳದ  ಮೂಲನಿವಾಸಿಗಳಿಗೂ ಆದ್ಯತೆ ನೀಡ ಬೇಕು ಎನ್ನುವ ಆಶಯದ ಪ್ರತೀಕ ಇರಬಹುದೆ ಎನಿಸಿತು.
ಹಂಪೆಯಲ್ಲಿ ವಿರೂಫಕ್ಷೇಶ್ವರನ ದರ್ಶನ ಮಾಡಿದ ಮೇಲೆ ಚಂಡಿಕೇಶ್ವರನಿಗೆ ಚಪಾಳೆ ಹೊಡೆದು ಕೈ ಮುಗಿದು, ಬಟ್ಟೆಯದಾರದ ತುಂಡನ್ನು ಕಿತ್ತಿ ಏರಿಸುವುದ ಸಹಾ ಇದೇ ರೀತಿಯ ಆಚರಣೆ ಗಮನಿಸಿದ್ದೆ. ಬಹುತೇಕ ಪ್ರಸಿದ್ಧ ಶಿವಾಲಯಗಳ ಆಸು ಪಾಸಿನಲ್ಲಿ ಚಂಡಿಕೇಶ್ವರನ ಚಿಕ್ಕ ಗುಡಿ ಇದ್ದೆ ಇರುವುದು ಗಮನಕ್ಕೆ ಬಂದಿತು. ಶಿವನು ಲಿಂಗಾಕಾರ ದಲ್ಲಿರುವುದರಿಂದ ಮತ್ತು  ಧ್ಯಾನ ಮಗ್ನ ನಾಗಿರುವುದರಿಂದ ಭಕ್ತರು ಬಂದಿರುವುದನ್ನು ಗಮನಿಸಿರುವುದಿಲ್ಲ ಅದಕ್ಕೆ ಚಂಡಿಕೇಶ್ವರನ ಹತ್ತಿರ ವರದಿ ಮಾಡಿಕೊಂಡರೆ ಅವನು ತಿಳಿಸುವನು ಎಂಬ ಐತಿಹ್ಯ..
ಸೊಂಡೂರಿನ ಕುಮಾರಸ್ವಾಮಿಯ ಕುರಿತಾದ ಐತಿಹ್ಯವಿದೆ ಒಂದಿದೆ.ಕುಮಾರಸ್ವಾಮಿಯದರ್ಶನಕ್ಕೆ ಇತ್ತೀಚಿನ ಮಹಿಳೆಯರಿಗೆ ಅವಕಾಶವೆ ಇರಲಿಲ್ಲ.ಅದಕ್ಕೆ ಕಾರಣ ಪಾರ್ವತಿಯ ಮಗನಿಗೆ ಮದುವೆ ಮಾಡಲು  ಕನ್ಯಾಕುಮಾರಿಯನ್ನು ಆಯ್ಕೆ ಮಾಡಿ ಬಂದು ಮಗನಿಗೆ ಅವಳ ಸೌಂದರ್ಯವನ್ನು ಅತಿಶಯವಾಗಿ ವರ್ಣಿಸಿದಳು.. ಕುಮಾರನು ಕುತೂಹಲದಿಂದ ಅವಳು ಯಾರ ಹಾಗಿದ್ದಾಳೆ ? ಎಂದು ಕೇಳಿದ. ಅದಕ್ಕೆ ಉತ್ಸಾಹದ ಭರದಲ್ಲಿ ತಾಯಿ ಅವಳು  ಖೂಬೆ ಖೂಬು ನನ್ನ ಹಾಗೆ ಇದ್ದಾಳೆ. ಅತಿಲಾವಣ್ಯ ವತಿ ಎಂದು ತುಸು ಗರ್ವದಿಂದಲೆ ಹೇಳಿದಳು. ಅದಕ್ಕೆ ಕಾರ್ತಿಕೇಯನು ಆ ಹುಡುಗಿ ನಿನ್ನ ಹಾಗಿದ್ದರೆ ತಾಯಿಯ ಸಮಾನ , ಮದುವೆ ಯಾಗಲಾರೆ ಎಂದು ನಿರಾಕರಿಸಿದ.ಕುಪಿತಳಾದ ಪಾರ್ವತಿ ಎಲ್ಲ ಹೆಣ್ಣುಗಳಲ್ಲೂ ನನ್ನ ಅಂಶ ಇದ್ದೆ ಇರುವುದು ಎಂದಾಗ ನಾನು ಮದುವೆಯನ್ನೆ ಆಗುವುದಿಲ್ಲ ಎಂದು ನಿರ್ಧಾರ ಮಾಡಿದ. ಅಷ್ಟೆ ಅಲ್ಲ ಹೆಣ್ಣಿನ ದರ್ಶನವೆ ಬೇಡ ಎಂದು ನಿರ್ಧರಿಸಿದ. ಅದಕ್ಕೆ ಮಹಿಳೆಯರಿಗೆ ಕುಮಾರ ಸ್ವಾಮಿಯ ದರ್ಶನ ನಿಷೇಧವಿತ್ತು ಜೊತೆಗೆ ಹೆಂಗಸರು ನೋಡಿದರೆ ರಕ್ತ ಕಾರಿ ಸಾಯುವರು ಎಂಬ ನಂಬಿಕೆಯನ್ನೂ ಹಬ್ಬಿಸಿದರು. ಪರಿಣಾಮವಾಗಿ ಶತಮಾನಗಳವರೆಗೆ ಅದನ್ನು ಪಾಲಿಸಲಾಯಿತು. ಆದರೆ ಕೆಲವೆ ವರ್ಷಗಳ ಹಿಂದೆ ವಿಚಾರವಂತ ಮಹಿಳೆಯರು ಚಳುವಳಿ ಮಾಡಿ ದೇವರ ದರ್ಶನ ಪಡೆದರು.ನಂಬಿಕೆ ಬರಿ ಮಿಥ್ಯ ಎಂದು ಸಿದ್ಧ ಮಾಡಿದರು. ಇಂದಿಗೂ ಆ ಮಹಿಳೆಯರು ಆರಾಮಾಗಿ ಇದ್ದಾರೆ. ಅವರ ಪ್ರಯತ್ನದ ಫಲವಾಗಿ ಈಗ ಎಲ್ಲ ಮಹಿಳೆಯರಿಗೂ ದರ್ಶನದ ಅವಕಾಶ ಲಭಿಸಿದೆ.
ಸೊಂಡೂರಿನ ಹೆಸರಾಂತ ಭಸ್ಮದ ಬಗೆಗೂ ಒಂದು ಐತಿಹ್ಯವಿದೆ. ಅದರ ಪ್ರಕಾರ ಅಲ್ಲಿ ದೊರೆವ ಭಸ್ಮ ಪರ್ವತಿಯ ಹಾಲು.  ಕುಮಾರಸ್ವಾಮಿ ಮದುವೆಯಾಗಲು ನಿರಾಕರಿಸಿದಾಗ, ಪಾರ್ವತಿಯು ಮಗನಾಗಿ ತಾಯಿಯ ಮಾತು ಮೀರುವೆಯಾದರೆ ನಾನು ಹಾಲುಕುಡಿಸಿ ನಿನ್ನನ್ನು ಬೆಳಸಿದ್ದು ವ್ಯರ್ಥವಾಯಿತು ಎಂದು ಹಲುಬಿದಳು. ಮನನೊಂದ ಕುಮಾರಸ್ವಾಮಿ ,ನನಗೆ ಹಾಲಿನ ಹಂಗೂ ಬೇಡ ಎಂದು ಕುಡಿದ ಹಾಲನ್ನೆಲ್ಲ ಕಕ್ಕಿ ಕೊಂಡ. ಅದೆ ಹಳ್ಳವಾಗಿ ಹರಿದು ಭಸ್ಮದ ಗುಡ್ಡ ವಾಯಿತು. ಕೊನೆಕೊನೆಗೆ ಹಾಲಿನ ಜೊತೆ ರಕ್ತ ಬರಲುಶುರುವಾದಾಗ ತಾಯಿ ಅವನನ್ನು ಕಾಡಿ ಬೇಡಿ ವಾಂತಿ ಮಾಡಿಕೊಳ್ಳದಂತೆ ತಡೆದಳಂತೆ. ಅದಕ್ಕೆ ಕೆಲಭಾಗದಲ್ಲಿ ಭಸ್ಮದ ಜೊತೆ ಕೆಂಪುಗೆರೆಗಳೂ ಕಾಣುತ್ತವೆ. ಸಂಡೂರಿನ ನಿರ್ಧಿಷ್ಟ ಭಾಗದಲ್ಲಿ ವರ್ಷಕೊಮ್ಮೆಮಾತ್ರ ನಿಗದಿತ ಪ್ರದೇಶದಲ್ಲಿ  ಅಗೆದರೆ ಭಸ್ಮ ದೊರೆಯುವುದು. ಅದನ್ನು ಸಂಗ್ರಹಿಸಿದು ಮತ್ತೆ ಆಭಾಗವನ್ನು ಮಣ್ಣನಿಂದ ಮುಚ್ಚುವರು . ಮುಂದಿನ ವರ್ಷದ ತನಕ ಅದನ್ನು ತೆರೆಯುವುದೆ ಇಲ್ಲ ಎಂಬ ಪ್ರತೀತಿ ಇದೆ.ಭಸ್ಮವು ಅಲ್ಯಮ್ಯುನಿಯಂನ ಅದಿರು , ಅದರಲ್ಲಿ ಮೆಂಗನೀಸ್‌ ಅಂಶವಿದ್ದರೆ ಕೆಂಪುಕಾಣುತ್ತದೆ ಎಂಬುದ ವೈಜ್ಞಾನಿಕ ಸತ್ಯ.
ಅದೂ ಅಲ್ಲದೆ ಕುಮಾರಸ್ವಾಮಿಯು ತನ್ನ ದರ್ಶನಕ್ಕೆ ಬರುವವರಿಗೆ ಅವರಷ್ಟೆ ಎತ್ತರವಿರುವಂತೆ ಗೋಚರಿಸುತ್ತಾನೆ. ಚಿಕ್ಕವರಿಗೆ ಚಿಕ್ಕವನಾಗಿ ಪ್ರೌಢರಿಗೆ ಪ್ರೌಢನಾಗಿ ಕಾಣುವನು ಎಂದು ಹೇಳುವರು ಅವನ ಎತ್ತರವನ್ನುನಿಖರವಾಗಿ ಅಳೆಯುವುದು ಕಷ್ಟದ ಕೆಲಸವೇನಲ್ಲ. ಆದರೆ ಜನರ ನಂಬಿಕೆಗೆ.ಭಂಗ ತರುವ ಅಗತ್ಯ ಕಾಣುತ್ತಿಲ್ಲ.
ಕುಮಾರಸ್ವಾಮಿಯಿಂದ  ತಿರಸ್ಕೃತಳಾದ ಕನ್ಯಾಕುಮಾರಿಯೂ ಮದುವೆಯಾಗದೆ ಹಾಗೆ ಚಿರಕನ್ಯಯಾಗಿ ಉಳಿದಳು, ಎನ್ನುವರು.

           ಹಂಪೆಯ ವಿಜಯ ವಿಠಲದೇವಸ್ಥಾನದಲ್ಲಿ ಕಲ್ಲು ತೇರು ಇದೆ. ಮತ್ತು ಅಲ್ಲಿ ಒಂದು ಕಲ್ಲಿನ ಹುಂಜವೂ ಹಿಂಎ ಇತ್ತಂತೆ. ಈಗ ಅದನ್ನು ಯಾರೋ ಅಪಹರಿಸಿದ್ದಾರೆ. ಕಲ್ಲು ಕೋಳಿ ಕೂಗಿದಾಗ ಕಲ್ಲುತೇರು ಚಲಿಸಿದಾಗ ಪ್ರಪಂಚದಲ್ಲಿ ಪ್ರಳಯವಾಗುವುದು ಎಂಬ ಮಾತನ್ನು ಹಳಬರು ನಂಬುತಿದ್ದರು
ಆಂಧ್ರ ಪ್ರದೇಶದ ಮಂಗಳಗಿರಿಯಲ್ಲಿ ಪಾನಕದ ನರಸಿಂಹನ ಐತಿಹ್ಯವು ಇಂದಿಗೂ ಜ್ವಲಂತವಾಗಿದೆ. ಅಲ್ಲಿ ಮೇಲುನೋಟಕ್ಕೆ ಕಂಡುಬರುವ ಹಾಗೆ ಭಕ್ತರು, ಬಾಯಿತೆರೆದು ಕೊಂಡಿರುವ ಲಕ್ಷ್ಮಿ ನರಸಿಂಹ ದೇವನಿಗೆ ಅರ್ಪಿಸಿದ ಪಾನಕನ್ನು ಅದರ ಪ್ರಮಾಣ ಎಷ್ಟೆ ಇರಲಿ ಅರ್ದ ಭಾಗವನ್ನು ಮಾತ್ರ ನರಸಿಂಹನು ಸ್ವೀಕರಿಸುವನು ಉಳಿದ  ಅರ್ಧವನ್ನು ತನ್ನ ಕಟವಾಯಿಯಿಂದ ಹೊರ ಹಾಕುವನು . ಒಂದು ಲೋಟ ಪಾನಕ ಅರ್ಪಿಸಿದರೆ, ಅರ್ಧ ಲೋಟ ಮಾತ್ರ ದೇವನು ಸ್ವೀಕಾರ ಮಾಡುವನು . ಒಂದು ಕೊಡ ಪಾನಕ ನೀಡಿದರೆ ಅರ್ಧಕೊಡ ಪಾನಕ ಕುಡಿದು ಬಿಡುವನು.ಇದನ್ನು ವೈಜ್ಞಾನಿಕ  ಪರಿಶಿಲನೆಗೆ ಒಳಪಡಿಸುವುದು ಕಷ್ಟಸಾಧ್ಯ. ಆದರೆ ಈ ಐತಿಹ್ಯವನ್ನು ಆಸ್ತಿಕರು ಇಂದಿಗೂ ನಂಬಿರುವರು.. ಅದಕ್ಕೆ ಭಂಗತರುವ ಕೆಲಸ ಸಲ್ಲ. ಧರ್ಮದ ಅಡಿಪಾಯವೆ ನಂಬಿಕೆ. ಈ ರೀತಿಯ ಐತಿಹ್ಯಗಳು ಈಗಲೂ ಸ್ವೀಕಾರಾರ್ಹವಾಗಿವೆ. ಮತ್ತು ಆಚರಣೆಯ ಅಂಗವಾಗಿ ಹೋಗಿವೆ.ಅವು ಜೀವ ವಿರೋಧಿ ಅಲ್ಲದಿದ್ದರೆ ಅವುಗಳನ್ನು ಪ್ರಶ್ನಿಸಿ  ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳವ ಅಗತ್ಯವೂ ಇಲ್ಲ  ಜನ ಮಾನಸದಲ್ಲಿ ಐತಿಹ್ಯಕ್ಕೆ ಅದರದೆ ಆದ ಸ್ಥಾನವಿದೆ. ಆದರೆ ಅದನ್ನೆ ಇತಿಹಾಸ ಎಂದು ಬಿಂಬಿಸ ಬೇಕಿಲ್ಲ.