Monday, March 10, 2014

ಕವನ ವಾಚನ



     ಎಚ್‌.ಶೇಷಗಿರಿರಾವ್‌ 

           ಬಿ. ಎಂ.  ಶ್ರೀ. ಗೋಷ್ಠಿಯಲ್ಲಿನ  ಮಂಡಿಸಿದ  ಕವನ    ಆಲಿಸಿ

                               

                                    -ಕವನ 
 ಮನಸಿನ ಅಂಗಳದಿ ಭಾವದಾ ಗಿಡ ಗಂಟಿ
ಕಾಲಿಡಲು ತಾವಿಲ್ಲ ಬರಿ ಮುಳ್ಳುಕಂಟಿ
ನಡುವೆ ನಳ ನಳಿಸುವ ಒಂದೇ ಹೂವು
 ಮೂಡಿ ಬರೆ ಅದೇ
 ಕವನ

ಏರುತಿರೆ ಹಿಮ ಗಿರಿಶಿಖರ
 ನೆರಳಿಲ್ಲ , ನೀರಿಲ್ಲ
ಇಲ್ಲ ಮರ, ಮಣ್ಣು
 ಬಿಳಿ ಬಿಟ್ಟು ಬೇರೆಏನು ಕಾಣದು ಕಣ್ಣು
ಬಿಡುವ ಉಸಿರೂ ಕೂಡಾ ನುಣ್ಣನೆ ಹಿಮಮಣಿ
ಮೂಳೆ ಮುಟ್ಟುವ ಚಳಿಯಲಿ
ಉಕ್ಕುವಾ  ಬಿಸಿ  ನೀರ ಬುಗ್ಗೆ 
ಕವನ
ಮೇಲೆ ಧಗಧಗಿಸುವ ಭಾನು
ಜ್ವರವೇರಿರುವ ಭೂಮಿ
ಕಣ್ಣೋಟ ಹರಿವವರೆಗ ಮರಳೇ ಮರಳು
ನಡುವೆ ಕಜ್ಜೂರದ ನೆರಳು
ಒಸರುವ ಸಿಹಿ ನೀರ ಒರತೆ
ಅದುವೆ ಕವಿತೆ

 ಹೊರಗೆ ವಾಹನ ಮೈಕುಗಳ ಭರಾಟೆ
ಮನೆಯಲಿ ರೇಡಿಯೋ,ಟಿವಿ , ಮಕ್ಕಳ ಗಲಾಟೆ
ಕಿವಿಗಾಗಬಹುದು ತೂತು
ಎನುವಾಗ ಕೇಳುವ
ಇನಿಯಳ ಪಿಸು ಮಾತೆ
ಕವಿತೆ.
ತಾಯ ಮಡಿಲಿನ ಹಸುಳೆ
ಮೂಡದಿಹ ಹಾಲುಹಲ್ಲು,
ಜಾರುತಿರೆ ಜೊಲ್ಲು
ಅರೆ ಬಿರಿದ ಅಧರ
 ಹೂವಿನ ಎಸಳು
ಪಶು, ಪಕ್ಷಿ, ಜಡ ಚೇತನ,
ತನ್ನವರು ಅನ್ಯರು  ಎನದೆ
ಖುಷಿಯಿಂದ ಮಗು
 ತೂರಿಬಿಡುವ ನಗು
ಬಹು ಸುಂದರ
 ಕವನ.









No comments:

Post a Comment