ಹಂಪಿಯ ಅಪ್ಪಾಜಿ ಅಮೆರಿಕಾದಲ್ಲಿ ಬೆಟ್ಟ ಏರಿದ್ದು- | ||||
ಎಚ್. ಶೇಷಗಿರಿರಾವ್ | ||||
ನಾವು ಚಿಕ್ಕವರಿದ್ದಾಗ ಹೀಗೆ ಹಂಪಿ ಜಾತ್ರೆಗೆ ಹೋಗಿ ಬರುತ್ತಿದ್ದ ನೆನಪು ಬಂತು. ವ್ಯತ್ಯಾಸ ಒಂದೇ. ಆಗ ಕೈನಲ್ಲಿ ಬೆಂಡು, ಬತ್ತಾಸು ಇರುತಿತ್ತು. ಈಗ ಬಿಸ್ಕತ್, ಚಾಕಲೇಟ್ ಇದೆ. ನಾವು ಹಿರಿದಂಪತಿಗಳು ಆಗುಂಬೆ ಕಾಡಲ್ಲಿ ಚಾರಣ ಮಾಡಿದವರು, ಕೊಡಚಾದ್ರಿ, ಬ್ರಹ್ಮಗಿರಿ ಏರಿದವರು, ಇದೆಲ್ಲ ಏನು ಮಹಾ ಎಂದು ಎದೆಯುಬ್ಬಿಸಿ ಹೊರಟೆವು. ಬೆಟ್ಟದ ಬುಡದಲ್ಲಿ ಹೋದಾಗ ತಿಳಿಯಿತು ಅಲ್ಲಿನ ವ್ಯವಸ್ಥೆಯ ಪರಿ. ಅಲ್ಲೊಂದು ಫಲಕ ಎಲ್ಲ ಮಾಹಿತಿ ಇತ್ತು. ಇದು ಬರಿ ಬೆಟ್ಟ ಅಲ್ಲ. ದಟ್ಟವಾದ ಮರ-ಗಿಡಗಳಿಂದ ಪೂರ್ಣ ಆವೃತ. ಎಲ್ಲೆಲ್ಲೂ ಹಸಿರು. ಕಾಲು ಜಾಡೂ ಇಲ್ಲ. ಆದರೆ ಹೇಗೆ ಹೋಗಬೇಕೆಂದು ದಾರಿ ತೋರಲು ಅಲ್ಲಲ್ಲಿ ಮರಗಳಿಗೆ ಹಳದಿ, ನೀಲಿ ರಿಬ್ಬನ್ ಕಟ್ಟಿದ್ದರು. ಅದರಿಂದ ತುಸು ನೆಮ್ಮದಿ ಎನಿಸಿತು. ಚಾರಣಕ್ಕೆ ಹೊರಡುವ ಮೊದಲೇ ಎಲ್ಲಿ ಹೋಗುತ್ತೇವೆ ಎಷ್ಟು ಜನ ಎಂಬ ಮಾಹಿತಿಯನ್ನು ಶಿಬಿರದ ಕಛೇರಿಯಲ್ಲಿ ಪಡೆದಿದ್ದರು. ಮೊದಲೇ ಕರಡಿಗಳ ಹಾವಳಿ. ಮೊಬೈಲ್ಸಿಗ್ನಲ್ ಸಿಗುವುದು ಇಲ್ಲ. ದಾರಿ ತಪ್ಪಿದರೆ ದೇವರೇ ಗತಿ. ಯಾರಾದರು ಕಾಣೆಯಾದರು ಎಂದರೆ ತತ್ ಕ್ಷಣಸರ್ಚ್ ಪಾರ್ಟಿ ಹೊರಡುತಿತ್ತು. ಎಲ್ಲರೂ ನಮ್ಮ ನಮ್ಮ ಆಹಾರ-ನೀರನ್ನು ಬೆನ್ನಿನ ಚೀಲದಲ್ಲಿ ಹಾಕಿಕೊಂಡಿದ್ದೆವು. ಮೊದಲ ಹೆಜ್ಜೆಯಿಂದಲೇ ಏರಿಕೆ ಪ್ರಾರಂಭ. ಹಿಂದಿನ ದಿನ ಮಳೆ ಬಂದದ್ದರಿಂದ ಜಾರಿಕೆಯೂಇತ್ತು. ನೇರ ಹಾದಿ ಇಲ್ಲ. ದಟ್ಟ ಮರಗಳು. ಸುತ್ತಿ ಬಳಸಿ ಹೋಗಬೇಕು. ಇನ್ನೊಂದು ವಿಧದಲ್ಲಿಅನುಕೂಲ. ಹಿಡಿಯಲು ಆಸರೆಯಾಗಿದ್ದವು. ಹಿಂದಿನ ದಿನದ ಮಳೆಯನ್ನು ನಾವು ಮರೆತೇ ಬಿಟ್ಟಿದ್ದೆವು. ಹೊರಡುವಾಗ ಬಿರು ಬಿಸಿಲು ಇದ್ದರೂ, ಇಲ್ಲಿ ಸೂರ್ಯನ ಕಿರಣ ನೆಲ ಮುಟ್ಟಿಲ್ಲ. ಎಲ್ಲ ಕೆಸರುಮಯ. ಹದಿನೈದು ನಿಮಿಷ ಹತ್ತಿರಬಹುದು. ಆಗಲೇ ಇಬ್ಬರು ಜಾರಿ ಬಿದ್ದರು. ಮಗುವಿದ್ದವರು ಹತ್ತು ಅಡಿ ಎತ್ತರವನ್ನು ಹತ್ತಿಲ್ಲ. ತಾಯಂದಿರು ಅಷ್ಟೇ. ನಾವೇನೋ ಕೊಂಬೆ ರೆಂಬೆ ಹಿಡಿದು ಮುಂದೆ ಸಾಗಿದ್ದೆವು. ಹತ್ತುವುದೇನೋ ಸರಿಇಳಿಯುವುದು ಹೇಗೆ ಎಂಬ ಯೋಚನೆ ಶುರುವಾಯಿತು. ಎಲ್ಲರೂ ಯುವಕರಾದರೂ ಕಾರಿನಲ್ಲಿ ಕುಳಿತು ಬೆಟ್ಟ ನೋಡಿದವರೇ... ಹತ್ತಲಾರದೆ ಕಣ್ಣು-ಬಾಯಿ ಬಿಡತೊಡಗಿದರು. ನಮ್ಮ ಚಾರಣಕ್ಕೆ ಮಂಗಳಹೇಳಬೇಕಾಯಿತು. ಜಾರುವ ದಾರಿಯಲ್ಲಿ ಇಳಿಯುವದು ಸುಲಭವಾಗಿರಲಿಲ್ಲ. ಮರದಿಂದ ಮರಕ್ಕೆ ಆಸರೆಪಡೆಯುತ್ತಾ ಹೇಗೋ ತಳ ತಲುಪಿದೆವು. ಒಂದು ಹಂತದಲ್ಲಿ ನಾವು ನರರಾಗದೆ, ವಾನರರಾಗಿದ್ದರೆಕೊಂಬೆಯಿಂದ ಕೊಂಬೆಗೆ ಹಾರಿ ಕೊಚ್ಚೆ ನೆಲ ಮುಟ್ಟದೆ, ಬಟ್ಟೆ ಕೈ ಕಾಲು ಕೆಸರು ಮಾಡಿಕೊಳ್ಳದೆ ವಾಪಸ್ಸು ಬರಬಹುದಿತ್ತಲ್ಲ ಎನಿಸಿತು. ವಾನರರೆ ಆಗಿದ್ದರೆ ಆ ಪ್ರಶ್ನೆ ಏಳುತ್ತಿರಲಿಲ್ಲ. ಬಟ್ಟೆ ಬರೆ ಇದ್ದರೆ ತಾನೇ ಕೊಳೆ ಕೆಸರು. ಚಾರಣ ಪೂರ್ಣವಾಗದಿದ್ದರೂ ಬಟ್ಟೆ, ಮೈ ಕೈ ಕೆಸರು ಆಗಿತ್ತು. ಒಬ್ಬಿಬ್ಬರು ಕುಂಟುತ್ತ, ಕೆಲವರು ತೆರೆದ ಕೈಕಾಲು ನೇವರಿಸುತ್ತ ಬೆಟ್ಟದ ಬುಡ ತಲುಪಿದರು. ಮಕ್ಕಳು ಮಾತ್ರ ಮುಗುಳು ನಗೆ ಬೀರುತ್ತ ಆರಾಮಾವಾಗಿ ಬೆನ್ನಿನ ಮರೆಯಿಂದ ಇಣುಕುತ್ತಿದ್ದವು. ಬೆಟ್ಟ ಹತ್ತುವ ಯೋಜನೆ ಬದಿಗಿಟ್ಟು,ಕೊಳೆಯಾಗಿದ್ದ ಕೈ ಕಾಲು ತೊಳೆಯಲು ಹೊಳೆ ಕಡೆ ಹೊರಟೆವು. ಹಾದಿಯಲ್ಲಿ ಗಾಳಿ ತುಂಬಿದ ಬಣ್ಣ ಬಣ್ಣದ ಟ್ಯೂಬುಗಳನ್ನು ತೂಗಿಹಾಕಿದ್ದರು. ಈ ರಬ್ಬರ್ ಟೂಬುಗಳ ಮೇಲೆ ಕುಳಿತೋ ಮಲಗಿಯೋ ನೀರಿನ ಹರಿಗುಂಟ ಸಾಗುವುದೇ ಜನಪ್ರಿಯ ಜಲಕ್ರೀಡೆ. ನಮ್ಮ ಗೆಳೆಯರು ಈ ಸಾಹಸಕ್ಕೆ ಎಳಸಿದರು, ನದಿಯಲ್ಲಿ ನೀರೇನು ಬಹಳ ಇಲ್ಲ. ಆದರೆ ಸೆಳವು ಬಹಳ. ಎಲ್ಲಿ ಹೋದರು ನಾಲ್ಕು ಅಡಿಗಿಂತ ಹೆಚಿಲ್ಲ. ಆದರು ನೀರಿಗಿಳಿಯುವವರು ಲೈಫ್ ಜಾಕೆಟ್ ಹಾಕಿ ಕೊಡು ಹೋಗುತ್ತಿದ್ದರು. ನೀರು ಬಹು ತಿಳಿ. ನದಿ ಪಾತ್ರದಲ್ಲಿ ಚಿಕ್ಕ ಚಿಕ್ಕ ಗುಂಡು, ಕಲ್ಲು ಬಂಡೆ ಗಳು... ಅವುಗಳ ನಡುವೆ ನೀರು ರಭಸವಾಗಿ ನುಗ್ಗಿ ಹರಿಯುತಿತ್ತು. ಕೆಲವು ಕಡೆ ಹತ್ತಾರು ಅಡಿ ಅಗಲದ ಮಡುಗಳು, ನಂತರ ಬಂಡೆಯ ಮೇಲೆ ಭೋರ್ಗರೆವ ನೀರು. ದಡದಲ್ಲಿ, ಸಕ್ಕರೆಯಂತಹ ಮರುಳ, ಗೋಲಿ ಗಾತ್ರದ ಆಣೆಕಲ್ಲುಗಳು, ನೀರಾಟಕ್ಕೆ ಹೇಳಿ ಮಾಡಿಸಿದಂತಹ ತಾಣ. ನದಿಯ ತಟದಲ್ಲಿ ದೊಡ್ಡ ಮರಗಳು. ಅವುಗಳ ನಡುವೆ ರಸ್ತೆ. ಹೇಗಿದ್ದರೂ ತಂದ ಬುತ್ತಿ ಬೆನ್ನಿಗೆ ಇತ್ತು. ಜಲಕ್ರೀಡೆಗೆ ಮುಂದಾದ ಸಾಹಸಿಗಳೇ ಜೊತೆ ನಾವು ನದಿ ಗುಂಟ ನಡೆದೆವು. ಸುಮಾರು ಎರಡು ಮೈಲು ದೂರದಲ್ಲಿ ಅವರು ನೀರಿಗಿಳಿದರು. ಇಪ್ಪತ್ತು ಡಾಲರ್ ಎಂದಿದ್ದ ಅವರನ್ನು ಲೈಫ್ ಜಾಕೆಟ್ ತೊಡಿಸಿ -ಟ್ಯೂಬಿನಲ್ಲಿ ಕೂಡಿಸಿ ಕೈಬಿಟ್ಟರು. ಕುಳಿತೋ, ಮಲಗಿಯೋ ಜೋತುಬಿದ್ದೋ ನೀರಿನಗುಂಟಸಾಗಬೇಕಿತ್ತು. ಈಜುಡುಗೆ ತೊಟ್ಟ ಲಲನೆಯರು ಬೀಳುತ್ತಾ ಏಳುತ್ತಾ ನಲಿಯುತ್ತಿದ್ದರು. ದಢೂತಿ ದೇಹದವರಂತೂ ಬಿದ್ದು ಎದ್ದು ಸಾಗುವುದು ಬಹು ಮಜಾ ಕೊಟ್ಟಿತು. ಅವರ ಭಾರಕ್ಕೆ ಟ್ಯೂಬು ತಲೆ ಕೆಳಗಾದಾಗನೋಡಬೇಕಿತ್ತು ಅವರ ಫಜೀತಿ. ಅಲ್ಲಲ್ಲಿ ರಬ್ಬರಿನ ಚಿಕ್ಕ ದೋಣಿಯಲ್ಲಿ ಕುಳಿತು ಹುಟ್ಟು ಹಾಕುತ್ತ ಪ್ರವಾಹಕ್ಕೆ ಎದುರಾಗಿ ಸಾಗುತ್ತಿದ್ದರು. ಇನ್ನು ಕೆಲ ಸಾಹಿಸಿಗಳು. ಟ್ಯೂಬಿನ ಸಹವಾಸವೇ ಬೇಡವೆಂದು ಲೈಫ್ ಜಾಕೆಟ್ಧಾರಿಗಳಾಗಿ ನೀರಿನಲ್ಲಿ ಈಜುತ್ತಾ ತೇಲುತ್ತಾ ಸಾಗುತಿದ್ದರು. ನಾವೆಲ್ಲ ಅಲ್ಲೇ ನೀರ ನಡುವಿನ ಬಂಡೆಯ ಮೇಲೆ ಕುಳಿತು ನೀರಾಟವಾಡಿದೆವು. ಬೆನ್ನ ಬುತ್ತಿ ಹೊಟ್ಟೆ ಸೇರಿತು. ಗಂಟೆಗಳು ಕಳೆದಿದ್ದು ಗೊತ್ತಾಗಲೇ ಇಲ್ಲ. ಎಲ್ಲರು ಶಿಬಿರ ಸೇರಿದಾಗ ಸಂಜೆಯ ಐದು ಗಂಟೆ. ನಮ್ಮ ಮಲೆನಾಡಿನಂತೆ ಇಲ್ಲಿ ಜನ ಸಂಖ್ಯೆ ಯೂ ವಿರಳ. ಮನೆಗಳೂ ದೂರ ದೂರ. ವರ್ಷದ ಎಂಟು ತಿಂಗಳೂ ಪಂಜರದ ಪಕ್ಷಿಯ ತರಹ ಏಕಾಂತ ವಾಸ. ಬೇಸಿಗೆಯ ಈ ಕಾರ್ನಿವಲ್ ಅವರಿಗೆ ಅಮೋಘ ಅವಕಾಶ. ನಮ್ಮಶಿಬಿರಕ್ಕೆ ಬಂದಾಗ ಆಗಲೇ ಹನ್ನೊಂದು. ಶಿಬಿರದಲ್ಲಿನ ಅರ್ಧಕರ್ಧ ವಾಹನಗಳು ಜಾಗ ಖಾಲಿಮಾಡಿದ್ದವು ಬಿಸಿ ಬೇಳೆ ಭಾತ್ ಮಾಡಿ ತಿಂದು ಮಲಗಿದ್ದೆ ಬಂತು ಮರು ಮಾತಿಲ್ಲದೆ ನಿದ್ದೆ. ಮರುದಿನ ಎಂಟಾದರೂ ಯಾರೂ ಏಳಲಿಲ್ಲ... ಸಾವಕಾಶವಾಗಿ ಎದ್ದು ಮತ್ತೊಂದು ಸುತ್ತು ಊರಲ್ಲೇ ಸುತ್ತಿಸೆವು. ಅಲ್ಲಿನ ಚರ್ಚ್, ಶತಮಾನಕ್ಕೂ ಹಳೆಯದಾದ ಮನೆ ನೋಡುವಂತಿದ್ದವು. ಅಲ್ಲೇ ರಸ್ತೆ ಬದಿಯಲ್ಲೇ ಗ್ರಂಥಾಲಯ ಇದೇ ತೋರಿತು. ಹತ್ತಿರ ಹೋಗಿ ನೋಡಿದೆಅಲ್ಲಿ ಯಾರೂ ಇಲ್ಲ, ಯಾವ ಸೂಚನೆಯೂ ಬರಹದಲ್ಲಿ ಏನೂ ಇಲ್ಲ. ಕಾಣುವಂತೆ ಕಪಾಟಿನಲ್ಲಿ ಜೋಡಿಸಿದ ಸ್ತಕಗಳು... ಪತ್ರಿಕೆಗಳು.. ಮಾತ್ರ ಇವೆ. ಅಲ್ಲಿಯೇ ಎರಡು ಮೂರು ಕುರ್ಚಿ ಒಂದು ಬೆಂಚು. ನೋಡಿಕೊಳ್ಳುವವರು ಯಾರು ಇಲ್ಲ. ಯಾರೋ ಬಂದರು ಪುಸ್ತಕ ತೆಗದುಕೊಂಡು ಓದುತ್ತ ಕುಳಿತರು. ಇನ್ನೊಬ್ಬರು ಬಂದು ತಾವು ತಂದಿದ್ದ ಪುಸ್ತಕ ಕಪಾಟಿನಲ್ಲಿ ಇಟ್ಟು ಬೇರೊಂದು ಪುಸ್ತಕ ತೆಗೆದುಕೊಂಡು ಅಲ್ಲಿಯೇ ಇದ್ದ ರಿಜಿಸ್ಟರ್ ನಲ್ಲಿ ದಾಖಲೆ ಮಾಡಿ ಹೊರಟರು. ಮಹಿಳೆಯೊಬ್ಬಳು ಬಂದು ತನ್ನ ಕೈ ಚೀಲ ಆಲ್ಲಿ ಇಟ್ಟು ಪತ್ರಿಕೆ ಯೊಂದನ್ನು ತೆಗೆದುಕೊಂಡು ಓದಲು ಕುಳಿತಳು. ಈ ಸ್ವಯಂ ಸೇವಾಗ್ರಂಥಾಲಯ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಈ ಮಾದರಿಯದು ನಾನು ನೋಡಿದ್ದು ಇದೆ ಮೊದಲು. ಇದು ಅವರ ಪುಸ್ತಕ ಪ್ರೀತಿ, ಜತೆಗೆ ಪ್ರಮಾಣಿಕತೆಯನ್ನು ಸಾರಿ ಹೇಳಿತು. ಬಹಳಮಟ್ಟಿಗೆ ಎಲ್ಲರೂ ಪಾಲಿಸಬೇಕಾದ ನೀತಿ ನಿಯಮಗಳು ಇರಬಹುದು.ಆದರೆ ಇಲ್ಲಿನ ಪಾರದರ್ಶಕತೆ, ಹೊಣೆಗಾರಿಕೆ ಎಲ್ಲ ಕಡೆಅಲ್ಲದಿದ್ದರೂ ಕೊನೆಗೆ ಪುಸ್ತಕ ಪ್ರಪಂಚದಲ್ಲಾದರೂ ಬಂದರೆ ಎಷ್ಟು ಚೆನ್ನ! ಇದೊಂದು ಅನುಸರಿಸಬೇಕಾದ ಆದರ್ಶ. ಬೆಂಗಳೂರಿಗೆ ಹಿಂದಿರುಗಿದ ಮೇಲೆ ಎನ್ ಆರ್ ಕಾಲೋನಿಯ ಕಟ್ಟೆ ಬಳಗದ ಅನುಕೂಲ ಕಂಡೆ. ಇಲ್ಲೂ ಹೆಚ್ಚು ಕಡಿಮೆ ಇದೇ ಬಗೆಯ ವ್ಯವಸ್ಥೆಯುಂಟು. ಮುಖ್ಯರಸ್ತೆಯ ಮಧ್ಯದಲ್ಲಿಯೇ ಇರುವ ಮರಗಳ ಕೆಳಗೆ, ಹಾಕಿದ ಕಲ್ಲು ಬೆಂಚಿನ ಮೇಲೆ, ಹಲವಾರು ದಿನ ಪತ್ರಿಕೆಗಳು. ಅವನ್ನು ವಿರಾಮವಾಗಿ ಓದುತ್ತಿರುವ ಬಹುತೇಕ ನಿವೃತ್ತರನ್ನು ನೋಡಿದಾಗ ಖುಷಿಯಾಯಿತು. ಮಧ್ಯಾಹ್ನ ಹೊತ್ತಿಗೆ ಅಲ್ಲಿನ ಅತಿ ಪುರಾತನ ರೈಲುನಿಲ್ದಾಣಕ್ಕೆ ಭೇಟಿ ನೀಡಿದೆವು. ಅಲ್ಲಿ ಒಂದು ವಸ್ತು ಸಂಗ್ರಹಾಲಯ ಇದೆ. ಮೊದಲ ರೈಲು ಬಂದಾಗಿನ ಸರಕು ಸಾಮಗ್ರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅಂದಿನ ಇಂಜಿನ್, ಬೋಗಿ, ಸರಕು ಸಾಗಣೆ ಗಾಡಿ, ಬಳಸುತಿದ್ದ ದೀಪ, ಸಮವಸ್ತ್ರ -ಏನೆಲ್ಲ ಇವೆ. ಎಲ್ಲಕ್ಕಿಂತ ಮಿಗಿಲಾಗಿ ಪುಟ್ಟ ಟ್ರೈನ್ ನಲ್ಲಿ ಸುಂದರ ಬೆಟ್ಟಗಳ, ದಟ್ಟ, ಕಾಡಿನ ಪ್ರವಾಸ ಕಣ್ಣಿಗೆ ಹಬ್ಬ. ಮನಸಿಗೆ ಮುದ. ಹೊರಡುವ ಮುನ್ನ, ಅಲ್ಲಿಯೇ ಇದ್ದ ಹುಂಡಿಗೆ ಹಣ ಹಾಕಲು ಮರೆಯಲಿಲ್ಲ. ಆ ಹುಂಡಿ ಸ್ಥಳೀಯ ಸೇವಾ ಸಂಸ್ಥೆಗೆ ಸೇರಿದ್ದು. ಆ ಸಂಸ್ಥೆಯು ಪ್ರವಾಸಿಗರಿಗಾಗಿ ಬಗೆ ಬಗೆಯ ಬ್ರೆಡ್ಡು, ಬನ್ನು, ಬಿಸ್ಕತ್ತು ಇತ್ಯಾದಿ ಸ್ಥಳೀಯ ತಿನಿಸುಗಳನ್ನು ಪ್ರದರ್ಶಿಸುತ್ತಿತ್ತು. ಬೇಕೆಂದವರು ಉಚಿತವಾಗಿ ಪಡೆಯಬಹುದು. ಆಸಕ್ತರು ತಮಗೆ ತೋಚಿದಷ್ಟು ಹಣವನ್ನು ಹುಂಡಿಗೆ ಹಾಕಿದರೆ ಆಯಿತು. ಕಡ್ಡಾಯವೇನೂ ಇಲ್ಲ. ಬಹುತೇಕ ಪ್ರವಾಸಿ ತಾಣಗಳಲ್ಲಿ ಒಂದಕ್ಕೆರಡು ಬೆಲೆಯೇರಿಸಿ, ಪ್ರವಾಸಿಗರ ಸುಲಿಗೆ ಮಾಡುವ ಪ್ರವೃತ್ತಿ ಕಂಡಿದ್ದವರಿಗೆ, ಇದನ್ನು ಕಂಡು ಸೋಜಿಗ. ಬಿಟ್ಟಿ ಎಂದರೆ, ನನಗೂ ಇರಲಿ, ನಮ್ಮಪ್ಪನಿಗೂ ಇರಲಿ ಎನ್ನುವ ಫ್ರೀ ಎಂದರೆ, ಫಿನಾಯಿಲ್ಲೂ ಕುಡಿಯುವ, ಮನೋಭಾವ ಇರುವ ಜಗತ್ತಿನಲ್ಲಿ ಇಂಥ ಆತಿಥ್ಯ ಅಚ್ಚರಿ ತರಬಹುದು. ಸ್ಥಳೀಯ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಚಯಿಸುವ, ಗ್ರಾಮದ ಅಭಿಮಾನದ ದ್ಯೋತಕವಾಗಿ ಕಂಡಿತು. ಕರಡಿ ಶಿಬಿರಕ್ಕೆ ವಿದಾಯ ಹೇಳಿದಾಗ ಸಹಜವಾಗಿ ಕರಡಿಗಳು ಏರಿ ಕುಳಿತಿದ್ದ ಮರದ ಕಡೆ ನೋಡಿದೆವು. ಅಲ್ಲಿ ಅವುಗಳ ಸುಳಿವೇ ಇಲ್ಲ. ಹಿಂದಿನ ರಾತ್ರಿಯೇ ಜನಸಂಚಾರ ನಿಂತಮೇಲೆ ಮರವಿಳಿದು ನಮಗಿಂತ ಮೊದಲೇ ಮನೆ ಸೇರಿದ್ದವು. ಕ್ಯಾಟ್ಸ್ ಕಿಲ್ ಬೆಟ್ಟಕ್ಕೆ ವಿದಾಯ ಹೇಳಿ ಊರ ಕಡೆ ಕಾರು ಓಡಿಸಿದಾಗ ಹೊತ್ತು ಮುಳುಗಿತ್ತು.
(ಚಿತ್ರಗಳು: ಲೇಖಕರವು)
|
No comments:
Post a Comment