Saturday, April 19, 2014

ವಚನ ಚಳವಳಿ




ಬೆಂಗಳೂರಿನಲ್ಲಿ ನಡೆದ ಎರಡು ದಿನದ ವಚನ ಸಾಹಿತ್ಯ ವಿಚಾರ ಸಂಕಿರಣದಲ್ಲಿ ಡಾ. ಪಿ.ವಿ. ನಾರಾಯಣ ಅವರು ಮಂಡಿಸಿದ ಪ್ರಬಂಧವನ್ನು ಓದುಗರ ಅವಗಾಹನೆಗೆ ತಂದಿರುವೆ.ತಂತ್ರಜ್ಞಾನದ ಅಭಿವೃದ್ಧಿಯಿಂದ ನಾನು ಸಾವಿರಾರು ಮೈಲು ದೂರದಲ್ಲಿದ್ದರೂ ಸಂವಹನ ಸಾಧ್ಯವಿದೆ.ಚಿತ್ರಗಳಿಗೆ ನಾನು ಹಲವರಿಗೆ ಋಣಿ.


ವಚನ ಚಳವಳಿ - ಪರ್ಯಾಯದ ಹುಡುಕಾಟ



ವಿಚಾರ ಸಂಕಿರಣದ ಉದ್ಘಾಟನೆ
           
            ವಚನ ಚಳವಳಿ ಆರಂಭಗೊಳ್ಳುವುದಕ್ಕೆ ಮುಂಚೆ ಇದ್ದ ಕನ್ನಡ ಬದುಕಿನ ಸ್ವರೂಪವನ್ನು ತಿಳಿದಾಗ ಮಾತ್ರ ವಚನ ಚಳವಳಿ ಸಂಭವಿಸಿದ ಅನಿವಾರ್ಯತೆ ಮತ್ತು ಮಹತ್ವ ಅರ್ಥವಾಗಲು ಸಾಧ್ಯ. ಮಧ್ಯಕಾಲದ ಕನ್ನಡ ಬದುಕಿನ ಒಡಲಾಳದಲ್ಲಿ ನಿಗಿನಿಗಿ ಕುದಿಯುತ್ತಿದ್ದ ಎರಡು ಲಾವಾಪ್ರವಾಹಗಳೆಂದರೆ ಜಾತಿ ದುರಂತ ಮತ್ತು ರಾಜತ್ವ ದೈವೀಕರಣದ ಪರಿಣಾಮವಾದ ಯುದ್ಧ ಮತ್ತು ಅದರಿಂದಾಗುವ ಸಾವು, ವೇಳೆವಾಳಿತನ, ಬಿಟ್ಟಿ, ಅಧಿಕ ತೆರಿಗೆಗಳ ದುರಂತ. ಇವೆರಡೂ ವೈದಿಕದ ಕೊಡುಗೆಗಳೇ ಆಗಿವೆ. ವೈದಿಕಕ್ಕೆ ಬಹು ಹಿಂದೆಯೇ ಉತ್ತರದಲ್ಲಿ ಜೈನ ಬೌದ್ಧಗಳೆಂಬ ಎರಡು ರೂಪದಲ್ಲಿ ಪರ್ಯಾಯದ ಹುಡುಕಾಟದಲ್ಲಿ ತೊಡಗಿದರೂ, ವೈದಿಕದ ಕಬಂಧಬಾಹುವಿಗೆ ಸಿಕ್ಕಿಕೊಂಡು, ಅದರೊಡನೆ ರಾಜಿಯಾಗಲು ಸಿದ್ಧವಿಲ್ಲದಿದ್ದ ಬೌದ್ಧವು ಬಹುತೇಕ ಕಣ್ಮರೆಯಾದರೆ, ಬದುಕುಳಿಯಲು ಜೈನವು ನಾನಾ ನೆಲೆಗಳಲ್ಲಿ ವೈದಿಕದೊಡನೆ ರಾಜಿಮಾಡಿಕೊಂಡದ್ದಲ್ಲದೆ, ಅದರ ದಟ್ಟ ನೆರಳಿನಡಿ ಉಸಿರಾಡಿತು. ವೈದಿಕ ಪುರಾಣಗಳು, ಪೂಜೆಪುನಸ್ಕಾರಗಳು, ಇವುಗಳಲ್ಲದೆ ಸಾಮಾಜಿಕವಾಗಿ ಜಾತಿವ್ಯವಸ್ಥೆಯನ್ನೂ ಅಳವಡಿಸಿಕೊಂಡಿತು. ಪಂಪನಆದಿಪುರಾಣದಲ್ಲಿಯೇ ಮೊದಲ ತೀರ್ಥಂಕರನೇ ಮುಂಚೆ ವಿಂಗಡಣೆಯಿರದ ಮನುಷ್ಯರ ಗುಂಪನ್ನುಕ್ಷತ್ರಿಯ ವಣಿಕ್ಶೂದ್ರರೆಂಬ ಮೂಱು ವರ್ಣಂಗಳೊಳಗೆ ಕ್ಷತ್ರತ್ರಾಣಾದಿ ಗುಣೋಪೇತಮಪ್ಪ ಅಖಿಳ ಕ್ಷತ್ರಿಯ ಸಮೂಹಕ್ಕೆ ಶಸ್ತ್ರಕರ್ಮಮುಮಂ, ವಣಿಗ್ವಂಶಕ್ಕೆ ಪಾಶುಪಾಲ್ಯ ಕೃಷಿ ಪಣ್ಯಕರ್ಮಂಗಳುಮಂ, ಮತ್ತಂ ಸ್ಪøಶ್ಯಾಸ್ಪøಶ್ಯಕಾರುಗಳುಮೆಂದಿರ್ತೆಱದ ಶೂದ್ರಸಂತತಿಗೆ ಶುಶ್ರೂಷಾನಿಯೋಗಂಗಳುಮಂ ಯಥಾಯೋಗ್ಯಂ ಉಪದೇಶಂಗೆಯ್ದು, ವರ್ಣಸಂಕರಮಾಗಲೀಯದೆ ತಮ್ಮ ತಮ್ಮ ಜಾತಿಗಳೊಳ್ ನಣ್ಪುಮಂ ಕೊಳ್ಕೊಡೆಯುಮಂ ನಿಯೋಜಿಸಿದ”; ಹಾಗೂ ಅವನ ಮಗ ಭರತನು ಮುಂದೆ ಸೂಕ್ಷ್ಮಮತಿಗಳಾಗಿ ಕಂಡ ಕೆಲವರನ್ನು ಬ್ರಹ್ಮಸೂತ್ರಾಭಿಧಾನ ಯಜ್ಞೋಪವೀತದಿಂ ಪವಿತ್ರಗಾತ್ರರ್ಮಾಡಿಬ್ರಾಹ್ಮಣವರ್ಣವನ್ನು ಸೃಷ್ಟಿಸಿದ ಕತೆಗಳಿವೆ.

            ಹೀಗೆ ವೈದಿಕವಿರೋಧಿ ನೆಲೆಯಿಂದ ಹೊರಟ ಜೈನವೂ ವೈದಿಕದ ಕಪಿಮುಷ್ಟಿಯಲ್ಲಿ ಸಿಲುಕಿದ ಬಳಿಕ ಅದ್ವಿಜಸಮೂಹದ ಜನತೆಯ ಬವಣೆಗೆ ಕೊನೆಯೆಲ್ಲಿ ಬಂತು? ತಾನು ಪ್ರಚುರಪಡಿಸಿದ್ದ ನಂಬಿಕೆ, ಧರ್ಮ, ದೇವರು ಇವುಗಳ ಮೂಲಕವಾಗಿ ಜನಸಮೂಹದ ಮನದಾಳವನ್ನೇ ಹಿಡಿತದಲ್ಲಿಟ್ಟುಕೊಂಡು ವೈದಿಕವು ಪ್ರತಿರೋಧವಿಲ್ಲದೆ ಬೀಗುತ್ತಿತ್ತುಜೈನವು ರಾಜಾಶ್ರಯದಲ್ಲಿ ಪಟ್ಟವೇರಿದರೂ ಅದು ವೈದಿಕದ ಪರಿಚಾರಕನಂತಾದ್ದರಿಂದ ಸಾಮಾನ್ಯರ ಸ್ಥಿತಿ ಸುಧಾರಿಸದಾಯಿತು. ವೈದಿಕದ ಪರಿಯು ಯಾವುದನ್ನು ಕಳೆದ ಶತಮಾನದ ಮೊದಲಲ್ಲಿ ಆಂಟೋನಿಯೋ ಗ್ರಾಮ್ಶಿಸಾಂಸ್ಕøತಿಕ ಯಜಮಾನಿಕೆಎಂದು ಕರೆದನೋ ಅದೇ ಆಗಿತ್ತು. ನಾನು ಆಗಲೇ ಗುರುತಿಸಿದ ಕನ್ನಡ ಬದುಕಿನ ಎರಡು ತೀವ್ರ ತಲ್ಲಣಗಳಾದ ಜಾತಿ ಮತ್ತು ಯುದ್ಧಗಳನ್ನು ಪಂಪನವಿಕ್ರಮಾರ್ಜುನ ವಿಜಯವೇ ಸ್ಥೂಲವಾಗಿಯೂ ಸೂಕ್ಷ್ಮವಾಗಿಯೂ ಚಿತ್ರೀಕರಿಸುತ್ತದೆ. ಇವೆರಡೇ ಮುಖ್ಯವಾಗಿ ಕೆಳವರ್ಗದ ಅತೃಪ್ತಿ ಆಕ್ರೋಶಗಳ ಕಾರಣವಾಗಿ ಹನ್ನೊಂದನೆಯ ಶತಮಾನದ ಕೊನೆಯ ವೇಳೆಗೆ ಕೊಂಡಗುಳಿ ಕೇಶಿರಾಜ ಮುಂತಾದವರಿಂದ ಆರಂಭಗೊಂಡ ತೀವ್ರ ವೈದಿಕವಿರೋಧವು ಹೊಗೆಯಾಡಲು ಆರಂಭಿಸಿ ಹನ್ನೆರಡನೇ ಶತಮಾನದ ನಡುವಿನ ವೇಳೆಗೆ ಸಿಡಿಯಲು ಕಾರಣವಾಯಿತು. ಇದರಲ್ಲಿ ಒಟ್ಟುಗೂಡಿದ್ದವರು ಗ್ರಾಮ್ಶಿ ಆಶಿಸಿದ ರೀತಿಯಲ್ಲಿ ಕೆಳವರ್ಗದ ಬುದ್ಧಿಜೀವಿಗಳು; ಹಾಗಾಗಿಯೇ ವಚನಕಾರರೆಲ್ಲ ಕೆಳವರ್ಗದವರು, ಕೆಳವರ್ಗದ ಕೆನೆ. ಕೆನೆ ಒಂದುಗೂಡಿ ಒಡ್ಡಿದ ವೈದಿಕಪ್ರತಿರೋಧವೇ ವಚನ ಚಳವಳಿ. ಒಗ್ಗೂಡುವಿಕೆಯು ವೈದಿಕವನ್ನು ತನ್ನೆಲ್ಲ
ರೂಪದಲ್ಲಿ ತಿರಸ್ಕರಿಸಿತು. ಅದರಲ್ಲಿ ಪ್ರಮುಖವಾದವು ಆಗಲೇ ಗುರುತಿಸಿದಂತೆ ಜಾತಿವಿನಾಶ ಮತ್ತು ರಾಜತ್ವ ದೈವೀಕರಣ ನಿರಾಕರಣೆ.
ವಚನ ಚಳವಳಿಯೊಂದು ಭಕ್ತಿ ಚಳವಳಿಯಲ್ಲ; ಅದೊಂದು ಪ್ರತಿಭಟನೆ, ಪರ್ಯಾಯದ ಹುಡುಕಾಟ. ಅದರಲ್ಲಿ ಭಕ್ತಿ ಚಳವಳಿಯ ಪ್ರಮುಖ ಲಕ್ಷಣಗಳಾದ ವ್ಯವಸ್ಥೆಯ ಬಗೆಗಿನ ಮೆದು ನಿಲುವಾಗಲೀ ಶರಣಾಗತಿಯಾಗಲೀ ಇಲ್ಲ. ಅದು ಉಗ್ರ ಸ್ವರೂಪದ್ದು. ತನ್ನ ಕಪಿಮುಷ್ಟಿಯಿಂದಾಗಿ ಸಾಮಾಜಿಕ-ರಾಜಕೀಯ ಕ್ಷೇತ್ರಗಳ ಮೇಲೂ ಹಿಡಿತವನ್ನು ಸಾಧಿಸಿದ್ದ ವ್ಯವಸ್ಥೆಯ ವಿರುದ್ಧದ ನಿಲವು ಅದರದ್ದು. ವರ್ಣ-ಜಾತಿ, ಲಿಂಗ ತಾರತಮ್ಯ ಹಾಗೂ ಸಾಮಾಜಿಕ ಶ್ರೇಣೀಕರಣಗಳ ವಿರುದ್ಧ ಅದು ಸೆಟೆದು ನಿಂತಿತು. ವೈದಿಕಕ್ಕೆ ಹೊರತಾದ ಪರ್ಯಾಯವೊಂದರ ಸೃಷ್ಟಿ ಅದರ ಗುರಿ. ವಚನಕಾರರಿಗೆ ಭಕ್ತಿ ಒಟ್ಟು ಬದುಕಿನ ಒಂದು ಅಂಶವಾಗಿದ್ದಿರಬಹುದೇ ಹೊರತು, ಅದೇನೂ ಚಳವಳಿಯ ಉಸಿರಾಗಿರಲಿಲ್ಲ. ಅದು ಮಾನ್ಯಮಾಡಿದ್ದು ವಿಶೇಷವಾಗಿ ಕಾಯಕ-ದಾಸೋಹಗಳನ್ನು.v
           
ವೈದಿಕವನ್ನು ತಿರಸ್ಕರಿಸಿದ ಕೆಳವರ್ಗದ ಚಿಂತಕಸಮೂಹ ಬದುಕಿನ ಇಹದ ಹೊರತಿನ ಆಶೋತ್ತರಗಳ ತೃಪ್ತಿಗಾಗಿ ಧಾರ್ಮಿಕ ನೆಲೆಗಟ್ಟನ್ನೇ ಆಶ್ರಯಿಸಬೇಕಾಯಿತೆಂದು ಕಾಣುತ್ತದೆ. ವೈದಿಕವನ್ನು ಹಿಂದೆ ಎದುರಿಸಿದ್ದ ಜೈನ-ಬೌದ್ಧಗಳೆರಡೂ ನಿರೀಶ್ವರವಾದವನ್ನೇ ಒಪ್ಪಿಕೊಂಡರೂ, ಇಲ್ಲಿ ಉಳಿದ ಜೈನವು ಬಸದಿಗಳನ್ನು ದೇವಾಲಯಗಳಾಗಿ ಪರಿವರ್ತಿಸುವ ಮೂಲಕ ಮೂರ್ತಿಪೂಜೆಯನ್ನು ಸ್ವೀಕರಿಸಿತು. ಸಾಮಾನ್ಯರು ದೇವರಿಲ್ಲದ ಸ್ಥಿತಿಯನ್ನು ಒಪ್ಪಿಕೊಳ್ಳಲಾರರೆಂದೋ ಏನೋ, ಅಥವಾ ತಮಗೇ ಅದು ಸಾಧ್ಯವಿಲ್ಲದ್ದರಿಂದಲೋ ವಚನ ಚಳವಳಿಯೂ ಪ್ರಾಯಶಃ ದೇವರ ಅಸ್ತಿತ್ವವನ್ನು ಒಪ್ಪಿಕೊಂಡಿತು. ಆದರೆ ಇಲ್ಲಿನ ದೇವೋಪಾಸನೆಯ ರೀತಿ ವೈದಿಕಕ್ಕೆ ತೀರ ಭಿನ್ನವಾದುದು. ಹೊತ್ತಿಗೆ ವ್ಯಾಪಕವಾಗಿ ಭ್ರಷ್ಟಾಚಾರದ ಭೂಮಿಕೆಯಾಗಿದ್ದ ದೇವಾಲಯಪದ್ಧತಿಯನ್ನೂ, “ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು, ಬೇರೆ ಮತ್ತೊಬ್ಬರ ಕೈಲಿ ಮಾಡಿಸಬಹುದೇಎಂಬ ಕಾರಣಕ್ಕಾಗಿ ಪೂಜಾರಿಯ ಮೂಲಕ ಪೂಜಿಸುವುದನ್ನೂ ನಿರಾಕರಿಸಿ, ತಾನೇನಿತ್ಯನೇಮವಮಾಡುವುದನ್ನು ಅವರು ಪ್ರತಿಪಾದಿಸಿದರು. ದೇವಾಲಯಪದ್ಧತಿಯಲ್ಲಾದರೆ ಗರ್ಭಗುಡಿಯಲ್ಲಿ ಪ್ರತಿಷ್ಠಿತವಾಗಿದ್ದ ದೇವರಿಗಿಂತ ಹೆಚ್ಚಾಗಿ ಅದನ್ನು ನಿರ್ಮಿಸಿದ, ಪ್ರತಿಷ್ಠಾಪಿಸಿದ ವ್ಯಕ್ತಿಗೇ ಹೆಚ್ಚು ಪ್ರಾಧಾನ್ಯ. ಕನ್ನಡ ನಾಡಿನಲ್ಲಿ ನಿರ್ಮಿತವಾದ ದೇವಸ್ಥಾನಗಳ ಗರ್ಭಗುಡಿಯಲ್ಲಿನ ದೇವರು ಕಟ್ಟಿಸಿದವನ ಹೆಸರನ್ನು ಹೊತ್ತಿರುವುದು ಸಾಮಾನ್ಯ. ವಚನಕಾರರು ಆಕಾರವುಳ್ಳ ದೇವರನ್ನು ನಿರಾಕರಿಸಿದರೂ, ಹಲವರು ತಮ್ಮ ಪ್ರೀತಿಯ ಸ್ಥಳಗಳ ಸ್ಥಾವರಲಿಂಗವನ್ನು ಆಪ್ತವಾಗಿ ತಮ್ಮ ವಚನಾಂಕಿತಗಳನ್ನಾಗಿ ಮಾಡಿಕೊಂಡದ್ದೊಂದು ವಿಪರ್ಯಾಸ. ಬಹುತೇಕ ವಚನಕಾರರುಕಿರುಕುಳದೈವಗಳನ್ನು ಅಲ್ಲಗಳೆದರೂ, ದೇವನೊಬ್ಬನನ್ನು ನಂಬಿದರು. ಸಾಮೂಹಿಕವಾಗಿ ಪೂಜೆಗೊಳ್ಳುವ ದೇವರ ಸ್ಥಾನದಲ್ಲಿ ಅವರು ಇಷ್ಟಲಿಂಗಪರಿಕಲ್ಪನೆಯನ್ನು ಪುರಸ್ಕರಿಸಿದರು. ವಚನಕಾರರು ಏಕದೇವೋಪಾಸನೆಯನ್ನು ಪುರಸ್ಕರಿಸಿದವರು ಎಂಬ ಭಾವನೆಯಿದ್ದರೂ, ಶಿವಒಬ್ಬದೇವನಲ್ಲ. ಎಷ್ಟು ಮಂದಿ ಭಕ್ತರೋ ಅಷ್ಟು ಮಂದಿ ಶಿವರು, ‘ಇಷ್ಟಲಿಂಗಆಯಾ ಭಕ್ತನ ಕಲ್ಪನೆಯ ಶಿವನ ಕುರುಹು. ಒಂದು ನೆಲೆಯಲ್ಲಿ ವಚನಕಾರರು ತಿರಸ್ಕರಿಸಿದಸ್ಥಾವರದೇವಸ್ಥಾನದ ದೇವರಾದರೂ, ಇನ್ನೊಂದು ನೆಲೆಯಲ್ಲಿ ಕಟ್ಟಿಕೊಂಡ ಲಿಂಗವೂ ಸ್ಥಾವರವೇ. ಸ್ಥಾವರ ಎಂದರೆ ವಸ್ತುರೂಪದ್ದು. ಎರಡೂ ತಿರಸ್ಕಾರಾರ್ಹವೇ, ಅಥವಾ ಅನಿವಾರ್ಯವಲ್ಲ. ದೇವರು ಅಮೂರ್ತ. ವಚನಕಾರರ ದೈವದ ಪರಿಕಲ್ಪನೆಯಲ್ಲಿ ಏಕರೂಪತೆಯಿಲ್ಲ. “ಖಂಡಿತವಿಲ್ಲದ ಅಖಂಡಿತ ನೀನೆ, ನಿನ್ನ ಕಂಡವರುಂಟೆ ಹೇಳಯ್ಯಎಂಬ ಜೇಡರ ದಾಸಿಮಯ್ಯನ ಅಜ್ಞೇಯತಾವಾದವೆನ್ನಿಸುವ ನಿಲವಿನಿಂದ ಹಿಡಿದು, ಮೊರದಲ್ಲಿ ಮಾರಿಯನ್ನಿರಿಸಿಕೊಂಡು ಡೊಳ್ಳು ಬಾರಿಸುತ್ತಿದ್ದ ಡಕ್ಕೆಯ ಬೊಮ್ಮಣ್ಣನವರೆಗೆ ವಚನಕಾರರ ದೇವರ ಕಲ್ಪನೆಯಿದೆ.
            ಭಕ್ತ ಎಂಬ ಪದ ಒಂದು ಪಾರಿಭಾಷಿಕ ಶಬ್ದವಾಗಿಯೇ ಹೆಚ್ಚು ಬಳಕೆಯಲ್ಲಿದೆ; ವಚನಕಾರರ ನಿಲವಿಗೆ ಬದ್ಧರಾದವರೆಲ್ಲಭಕ್ತರು. ಅಂದರೆ ಪ್ರತಿಭಟನೆಯ ನೆಲೆಯಲ್ಲಿ ಒಗ್ಗೂಡಿದ ಸಮಾನಮನಸ್ಕರ ಗುಂಪು ಅದು. ಅವರು ವಿವಿಧ ನೆಲೆಗಳಿಂದ ಬಂದಿದ್ದವರು; ವಿವಿಧ ಮನೋಭಾವದವರು. ಹೀಗಾಗಿಯೇ ಚಳವಳಿಯ ಕಾಲದ ಭಕ್ತರಲ್ಲಿ ಅನೇಕ ನೆಲೆಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಶರಣಸತಿ-ಲಿಂಗಪತಿಯಂತಹ ಬಹು ಮುಖ್ಯ ವಿಷಯಗಳಲ್ಲಿಯೂ ಇದನ್ನು ಕಾಣಬಹುದು: ಅಂಬಿಗರ ಚೌಡಯ್ಯನಶರಣಸತಿ ಲಿಂಗಪತಿ ಎಂಬ ಮಾತು ಮೊದಲಿಗೆ ಮೋಸಎಂಬ ಮಾತನ್ನು ನೆನೆಯಿರಿ. ವಚನಕಾರರು ತಮ್ಮ ಅಭಿಪ್ರಾಯಗಳನ್ನು ವಚನಗಳ ಮೂಲಕ ವ್ಯಕ್ತಪಡಿಸುವುದರ ಮೂಲಕ ವಚನರಚನೆಯನ್ನು ಚರ್ಚಾವೇದಿಕೆಯನ್ನಾಗಿ ಮಾಡಿಕೊಂಡರು. ಅನುಭವಮಂಟಪದ ಭೌತಿಕ ಅಸ್ತಿತ್ವವನ್ನು ನಾನು ಒಪ್ಪುವುದಿಲ್ಲವಾದರೂ ಒಟ್ಟಾರೆ ವಚನಗಳ ಸಮೂಹವನ್ನು ಆನಂತರ ಪರಿಭಾವಿಸಿದವರಿಗೆ ಅದರಲ್ಲಿನ ಚರ್ಚೆಯ ಆಕಾರವು ಕಾಣಸಿಗುತ್ತದೆ. ಎಂದರೆ, ವಚನಕಾರರು ಎದುರುಬದುರು ನಿಂತು ಚರ್ಚಿಸಲಿಲ್ಲ, ನಿಜ; ಆದರೆ ತಮ್ಮ ಅಭಿಪ್ರಾಯವನ್ನು ವಚನಗಳಲ್ಲಿ ವ್ಯಕ್ತಪಡಿಸಿದ್ದರಿಂದಾಗಿ ಮುಂದಿನವರಿಗೆ ಅದು ಚರ್ಚೆಯ ರೂಪದಲ್ಲಿ ಕಾಣಿಸಿತು. ಇದನ್ನು ಗಮನಿಸಿದ ಶಿವಗಣ ಪ್ರಸಾದಿ ಮಹದೇವಯ್ಯನು ಕಾರಣದಿಂದಲೇ ವಚನಗಳನ್ನು ಬಳಸಿಕೊಂಡು ಎದುರುಬದುರು ನಿಂತು ಮಾಡಿದ ಚರ್ಚೆಯನ್ನಾಗಿ ಮಾರ್ಪಡಿಸಿದ್ದು.
            ಮೊದಮೊದಲು ವಚನಕಾರರು ಏಕಾಭಿಪ್ರಾಯವನ್ನು ಎಲ್ಲ ವಿಧದಲ್ಲೂ ರೂಪಿಸಬೇಕೆಂಬ ಛಲವನ್ನು ಹೊತ್ತವರಲ್ಲ; ಪ್ರಾಯಶಃ ಅದು ಸಾಧ್ಯವೂ ಇರಲಿಲ್ಲ. ಯಾಕಂದರೆ ಅವರು ವಿವಿಧ ನೆಲೆಗಳಿಂದ ಬಂದಿದ್ದವರು, ವಿವಿಧ ಮನೋಭಾವದವರು; ಆದರೆ ಅವರು ಒಟ್ಟಾಗಿದ್ದು ಸಮಾನ ಶತ್ರುವನ್ನು ಬಗ್ಗುಬಡಿಯಲು.  ಅಂದರೆ, ವಚನಗಳ ಕಾಲದಲ್ಲಿ ಅದಕ್ಕೊಂದು ಸಾಂಸ್ಥಿಕ ಸ್ವರೂಪ ಇನ್ನೂ ಬಂದಿರಲಿಲ್ಲ. ಚೆನ್ನಬಸವಣ್ಣನಂತಹವರು ತಮ್ಮ ಮಾತುಗಳಿಗೊಂದು ಪರಿಭಾಷೆಯ ಸ್ವರೂಪವನ್ನೂ, ನಡವಳಿಕೆಗೆ ಆಚರಣೆಗಳ ಸ್ವರೂಪವನ್ನೂ ಕೊಡಲು ಪ್ರಯತ್ನಿಸಿದ್ದೇನೋ ನಿಜ. ಕೊಂಚಮಟ್ಟಿಗೆ ಇವೆಲ್ಲ ಕಸ್ಟಮೈಸ್ ಆಗಿದ್ದಿರಬಹುದಾದರೂ, ಚಳವಳಿಯ ನಿಲವು-ನಡಾವಳಿ ಪೂರ್ಣರೂಪದ ಸಾಂಸ್ಥಿಕತೆಯನ್ನು ಗಳಿಸಿಕೊಂಡಿರಲಿಲ್ಲ. ಇದು ನಡೆದದ್ದು ವಿಶೇಷವಾಗಿಶೂನ್ಯಸಂಪಾದನೆ ಬಳಿಕ. ಕಾರಣದಿಂದಲೇ ಮುಂದಿನ ಪೀಳಿಗೆಗಳುಶೂನ್ಯಸಂಪಾದನೆಯನ್ನು ತಮ್ಮ ಧಾರ್ಮಿಕಪಠ್ಯವೆಂದು ಒಪ್ಪಿಕೊಂಡದ್ದು. ಇದೇ ಕಾರಣಕ್ಕಾಗಿಯೇ ಅದು ಅನೇಕ ಪರಿಷ್ಕರಣಗಳಿಗೂ ಒಳಗಾಯಿತು. ಕೊನೆಯ ಪರಿಷ್ಕರಣೆಯ ನಂತರ ಗ್ರಂಥವು ಲಿಂಗಾಯತದ ನಿಲವೆಲ್ಲವನ್ನೂ ಸಮರ್ಪಕವಾಗಿ ಬಿಂಬಿಸುತ್ತದೆಂಬ ಭಾವನೆಯಿಂದಾಗಿ ಅದು ಅಂತಿಮಸ್ವರೂಪದಲ್ಲಿ ನೆಲೆಗೊಂಡಿತು; ಹೀಗೆ ಪರಿಷ್ಕರಣೆಗಳನ್ನು ಮಾಡಿದವರು ಮಠಾಧಿಪತಿಗಳೆಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಯಾವುದನ್ನು ನಾವು ಲಿಂಗಾಯತದ ಎರಡನೆಯ ಘಟ್ಟವೆಂದು ಗುರುತಿಸುತ್ತೇವೋ ಕಾಲದಲ್ಲಿ ಇಂಥ ಸಂಪಾದನೆಗಳು ನಡೆದುದಲ್ಲದೆ, ಬಸವಾದಿಗಳ ಬಗ್ಗೆ ಪುರಾಣಗಳೂ ರಚಿತವಾಗಿ ವಚನಕಾರರ ಆದರ್ಶಗಳಿಗೆ ಒಂದು ಚೌಕಟ್ಟು ಪ್ರಾಪ್ತವಾಗಿ, ಮುಂದೆ ವೈದಿಕದ ನೆರಳಲ್ಲಿಯೇ ಸಾಗುತ್ತ ಅದು ಮತ್ತೊಂದು ಮತವಾಯಿತು. ನೆರಳಿನ ಕಾರಣದಿಂದಲೇ ಎರಡು ನೆಲೆಗಳ ಅಂದರೆ ವೈದಿಕ ಹಾಗೂ ಲಿಂಗಾಯತ - ಹಿಂಬಾಲಕರಲ್ಲಿ ಭಿನ್ನತೆಗಿಂತ ಸಾಮ್ಯವೇ ಬಹು ಹೆಚ್ಚಾದುದರಿಂದ, ಈಗ ವಚನಕಾರರ ಅನುಯಾಯಿಗಳು ವೈದಿಕರೋ ಅರ್ಥಾತ್ ಹಿಂದುಗಳೋ ಅವರಿಗಿಂತ ಭಿನ್ನರೋ ಎಂಬ ಗೊಂದಲ ಸೃಷ್ಟಿಯಾಗಿದೆ. ವೈದಿಕದ ನೆಲೆಯಲ್ಲಿ ಗುರುತಿಸಿಕೊಂಡರೆ ಲಿಂಗಾಯತ ಒಂದು ಜಾತಿಯಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ.

ಅಂದರೆ ಈಗಿನ ಬಸವಾನುಯಾಯಿಗಳೆನ್ನಿಸಿಕೊಂಡವರುಸಾಂಸ್ಥಿಕ ಧರ್ಮಪಾಲಕರೇ ಆಗಿದ್ದಾರೆ. ಧರ್ಮವೆಂದರೆ ಎಂತಹ ಕಾರ್ಯಕ್ಕೂ ಒಂದು ಮಿತಿ ಬರುತ್ತದೆ, ಚೌಕಟ್ಟು ಬೀಳುತ್ತದೆ; ಅಮೂರ್ತವು ಮೂರ್ತವಾಗಿಬಿಡುತ್ತದೆ. ಬಸವಣ್ಣನ ಸಾಮಾಜಿಕ ಕಾರ್ಯವನ್ನು ಈಗೇನೋ ಹಾಡಿಹೊಗಳುತ್ತೇವೆ. ಆದರೆ ಬಸವಣ್ಣ ಈಗ ಬಸವೇಶ್ವರನಾಗಿಬಿಟ್ಟಿದ್ದಾನೆ, ಜಗದ್ಗುರುವಾಗಿದ್ದಾನೆ. ‘ಉಳ್ಳವರುಈಗಲೂ ಶಿವಾಲಯವನ್ನು ನಿರ್ಮಿಸುತ್ತಿರುವುದು ಮಾತ್ರವಲ್ಲ, ಬಸವಣ್ಣನಿಗೇ ಆಲಯವನ್ನು ಕಟ್ಟುತ್ತಿದ್ದಾರೆ. ಪೂಜಾರಿಪೂಜೆಯನ್ನು ವಿರೋಧಿಸಿದ ಅವನನ್ನೇ ಪೂಜಾರಿಗಳ ಮೂಲಕ ಪೂಜಿಸುವ ಪರಿಪಾಠ ಬಂದಿದೆ. ವಚನಕಾರರ ನಿಲವುಗಳನ್ನು ಮೆಚ್ಚಿಕೊಳ್ಳುವ ನಾವು ವಚನಕಾರರನ್ನು ಧಾರ್ಮಿಕ ಪರಿವಲಯದಿಂದ ಪಾರುಮಾಡಿದರೆ ಮಾತ್ರ ಅವರ ಚಿಂತನೆಗೊಂದು ಮಾನ್ಯತೆ ದೊರೆಯುವುದು. ‘ಧಾರ್ಮಿಕತೆಯಿಂದಾಗಿ ಪ್ರಶ್ನಿಸುವ ಬುದ್ಧಿ ಹೋಗಿ ಒಪ್ಪಿಕೊಳ್ಳುವ, ವಿವೇಚಿಸುವುದರ ಬದಲು ನಂಬುವ ಮನೋಭಾವ ಆಳವಾಗುತ್ತದೆ; ಅಂದರೆ ಬಸವಾದಿಗಳಪ್ರತಿಭಟನಾತ್ಮಕ ಮನೋಭಾವ ಕಣ್ಮರೆಯಾಗಿಬಿಡುತ್ತದೆ. ಮನೋಭಾವ ಉಳಿಯದಿದ್ದರೆ ವಿಚಾರವಂತಿಕೆ ಮೂಡಲಾರದು.


ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ ವಚನಕಾರರು ಹೇಳಿದ್ದನ್ನೇ ನಾವು ಅನುಸರಿಸಬೇಕೇ, ಅಥವಾ ಎಲ್ಲ ಬಗೆಯ ತಾರತಮ್ಯದ ವಿರುದ್ಧದ ಅವರ ನಿಲವನ್ನು ಮಾತ್ರ ಅಳವಡಿಸಿಕೊಳ್ಳಬೇಕೇ ಎಂಬುದು. ಹೀಗಾಗಿಲಾಂಛನಕೆ ಶರಣೆಂಬೆ”, “ಭಕ್ತನೊಂದು ಕುಲ, ಭವಿಯೊಂದು ಕುಲ”, “ಒಮ್ಮೆ ಶರಣೆನ್ನೆಲವೋ, .. .. ಹೊನ್ನಪರ್ವತಂಗಳೈದವು”, “ನಡೆಲಿಂಗ ಜಂಗಮ” -  ಮುಂತಾದ ಮಾತುಗಳನ್ನು ಕೈಬಿಡಬೇಕುನಮ್ಮ ಮಾತು ಪರಿಭಾಷೆಯಿಂದ ಮುಕ್ತವಾಗಬೇಕು, ನಮ್ಮ ನಡೆಯಲ್ಲಿ ಸ್ವತಂತ್ರ ಮನೋಭಾವಕ್ಕೆ ಮಾನ್ಯತೆಯಿರಬೇಕು. ಭಿನ್ನಾಭಿಪ್ರಾಯಗಳ ನಡುವೆ ಸಾಮರಸ್ಯ ಮೂಡಬೇಕು. ಸಾರ್ವತ್ರಿಕ ದೇವರ ಅಗತ್ಯವಿಲ್ಲ, ದೇವರು ವ್ಯಕ್ತಿಯ ಅಗತ್ಯವೇ ಹೊರತು ಸಮಾಜಕ್ಕೆ ಬೇಡ. ಅಂದರೆ ಧರ್ಮ ಎಂಬುದು ವ್ಯಕ್ತಿಸೀಮಿತವಾಗಬೇಕು. ಒಬ್ಬನು ದೇವರನ್ನು ನಂಬುತ್ತಾನೋ ಬಿಡುತ್ತಾನೋ, ಯಾವ ದೇವರ ಬಗ್ಗೆ ಅವನಿಗೆ ನಂಬಿಕೆಯಿದೆಯೋ ಬಿಟ್ಟಿದೆಯೋ ಅದು ಮುಖ್ಯವಲ್ಲ; ಮಾನವೀಯತೆಯನ್ನು ಕೇಂದ್ರದಲ್ಲಿರಿಸಿಕೊಳ್ಳುವ ಯಾವುದೇ ಚಿಂತನೆ ಮಾನ್ಯವಾಗಬೇಕು. ಅಂದರೆ ನಾವೀಗ ಬಸವಾದಿಗಳ ಕುರುಡು ಅನುಸರಣೆಯಿಂದ ಹೊರಬಂದು, ಅವರ ಹೋರಾಟದ ಹಿಂದಿನ ಮನೋಭಾವವನ್ನು ಅಳವಡಿಸಿಕೊಂಡು, ಧರ್ಮವನ್ನು ಬೀದಿಗೆ ತರದೆ ಬದುಕುವ ದಾರಿ ನಮ್ಮದಾಗಬೇಕು. ಯಾಕೆಂದರೆ ಸಾಂಸ್ಥಿಕ ಧರ್ಮಗಳಿಂದಾಗಿ ಜಗತ್ತಿನಲ್ಲಿ ಆಗಿರುವಷ್ಟು ಮನೋಮಾಲಿನ್ಯ ಬೇರಾವುದಿರಿಂದಲೂ ಆಗಿಲ್ಲ. ಧರ್ಮ ಮತ್ತದರ ಸಾಂಸ್ಥಕತೆಗಳಿಗೆ ಪ್ರಾಯಶಃ ಕಾರಣ ಸಾವಿನ ಭಯ. ಸಾವನ್ನು ತಾನಾಗಿ ತಂದುಕೊಳ್ಳದ, ಆದರೆ ಅದರ ಭಯದಿಂದ ಬದುಕನ್ನು ಹಾಳುಮಾಡಿಕೊಳ್ಳದ ಗಟ್ಟಿ ಮನೋಭಾವವನ್ನು ಮೂಡಿಸಿಕೊಂಡರೆ ಪ್ರಾಯಶಃ ಸಾಮುದಾಯಿಕ  ದೇವರು-ಧರ್ಮಗಳ ಹಂಗು ತಾನಾಗಿ ಹರಿಯುವುದೆಂದು ಭಾವಿಸಬಹುದು. ಅಂತಹುದೊಂದು ಮನೋಭಾವವನ್ನು ಸೃಷ್ಟಿಸುವ ಸಮಾನಮನಸ್ಕರ ವೇದಿಕೆಯಾಗಿ ಸಮಾವೇಶ ಮಾರ್ಪಡಲಿ ಎಂದು ಆಶಿಸುತ್ತೇನೆ.
*****








No comments:

Post a Comment