Monday, September 17, 2012

ಹೀಗೊಂದು ಪ್ರಾರ್ಥನಾ ಪ್ರಸಂಗ




ಹೀಗೊಂದು ಪ್ರಾರ್ಥನಾ ಪ್ರಸಂಗ


http://www.kendasampige.com/images/trans.gif
ನಮ್ಮ ಕಾಲೇಜಿಗೆ ಹೊಸದಾಗಿ ರಾಜ್ಯ ಶಾಸ್ತ್ರ ಉಪನ್ಯಾಸಕರು ವರದಿ ಮಾಡಿಕೊಂಡರು. ಅವರು ಮೂಡಬಿದ್ರೆಯವರು. ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು   ಉತ್ತಮ ಅಂಕಗಳೊಂದಿಗೆ ಪಡೆದವರು. ಸಧೃಡ ಮೈಕಟ್ಟು. ಕೆಂಪನೆಯಮೈ ಬಣ್ಣ. ಬಹಳ ಟಿಪ್ ಟಾಪ್‌ ಉಡುಪು. ನಯವಾದ ಮಾತು. ಬಂದ ಕೆಲವೆ ದಿನಗಳಲ್ಲಿ ತಮ್ಮ ಪಾಠದಿಂದ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಹೆಸರುಗಳಿಸಿದರು. ತುಂಬಾ  ಆಕರ್ಷಕ ವ್ಯಕ್ತಿತ್ವದ ಅವರು ಹಳ್ಳಿಯ ಜೀವನಕ್ಕೆ ಬೇಗ  ಹೊಂದಿಕೊಂಡರು. ಯಾವುದೇ ಕೆಲಸ ವಹಿಸಿದರೂ ಅಚ್ಚುಕಟ್ಟಾಗಿ ಮಾಡುವರು. ಎರಡು ವರ್ಷದಿಂದ ಇದ್ದ ಉಪನ್ಯಾಸಕರ ಕೊರತೆಯನ್ನು ಅವರು  ಸಮರ್ಥವಾಗಿ ತುಂಬಿದರು..
ಯಾವುದರಲ್ಲೂ ಬೆರಳು ತೋರಿಸದ ಹಾಗಿದ್ದ ಅರಿಫುಲ್ಲಾ ಬೇಗ್‌ ಒಂದು ವಿಷಯದಲ್ಲಿ ಮಾತ್ರ ಎಲ್ಲರ ಕಣ್ಣಿಗೆ ಎದ್ದು ಕಾಣುವಂತಾದರು. ಅವರು  ನಿತ್ಯ ಶಾಲಾ ಪ್ರಾರ್ಥನೆಗೆ ಬರುತ್ತಲೆ ಇರಲಿಲ್ಲ. ನಮ್ಮದು ಸಂಯುಕ್ತ ಪದವಿ ಪೂರ್ವಕಾಲೇಜು. ಹೈಸ್ಕೂಲು ಮತ್ತು ಕಾಲೇಜುಗಳು ಎರಡೂ ಇದ್ದವು. ಬೆಳಗಿನ ಪ್ರಾರ್ಥನೆ ಎಲ್ಲರಿಗೂ ಕಡ್ಡಾಯ. ವಿದ್ಯಾರ್ಥಿಗಳಿಗಂತೂ ತಡವಾದರೆ ಶಿಕ್ಷೆಯಾಗುತಿತ್ತು. ಸಿಬ್ಬಂದಿಗೂ ಪ್ರಾರ್ಥನೆ ಕಡ್ಡಾಯ.  ಯಾವಾಗಲಾದರೂ ಒಮ್ಮೆ  ಬಾರದಿದ್ದರೂ ಅದನ್ನು ದೊಡ್ಡದು ಮಾಡುತ್ತಿರಲಿಲ್ಲ. ಆದರೆ ಬೇಗ್‌ ಅವರು ನಿತ್ಯವೂ ಪ್ರಾರ್ಥನೆಗೆ ಗೈರು ಹಾಜರಾಗುವುದರಿಂದ ಎಲ್ಲರ ಬಾಯಿಗೆ ತುತ್ತಾದರು. ಈ ಅಂಶ ನನ್ನ ಗಮನಕ್ಕೂ ಬಂದಿತು. ಬಂದ ಹೊಸದು, ಮನೆಗೆಲಸದ ಗಡಿಬಿಡಿ.  ಅಡುಗೆ ಊಟ ಎಂದು ತಡವಾಗಿರಬಹುದು ಎಂದು ಅಂದು  ಕೊಂಡೆ. ಒಂದೆರಡು ವಾರ ಕಾಲಾವಕಾಶ ನೀಡಿದರೆ ಎಲ್ಲ ತಹಬದಿಗೆ ಬರಬಹುದು ಎಂಬ  ನಂಬಿಕೆ ನನ್ನದು. ನಂತರ ತಿಳಿಯಿತು. ಅವರು ದೊಡ್ಡದಾದ ಮನೆ ಹಿಡಿದಿದ್ದರೂ ಅಡುಗೆ ಮಾಡಿಕೊಳ್ಳುತ್ತಿರಲಿಲ್ಲ. ಹೋಟೆಲ್‌ನಲ್ಲಿ ಊಟ ಮಾಡುತ್ತಿರುವುದಾಗಿ ತಿಳಿಯಿತು. ಮನೆಯಲ್ಲಿ ಕಾಡಿ ಬೇಡುವ ಹೆಂಡತಿ ಇಲ್ಲ, ಅತ್ತು ಕರೆಯುವ ಮಕ್ಕಳಿಗೆ ಅನಾರೋಗ್ಯ ಎನ್ನುವ ಹಾಗಿಲ್ಲ. ಒಳ್ಳೆ ಗುಂಡ್ರಗೋವಿಯಹಾಗಿರುವರು.
ಅದಕ್ಕೆ ಒಂದು ದಿನ ಸುಮ್ಮನೆ ಕೇಳಿದೆ.ಏನ್ರಿ ಬೇಗ್‌  ನಿಮ್ಮ ಬೆಳಗಿನ ಕಾರ್ಯಕ್ರಮ ಏನು ? ನೀವು ಸೂರ್ಯವಂಶಿಯರಾ ಎಂದೆ.
ಅದೇನು ಸಾರ್‌ ಸೂರ್ಯವಂಶ ಎಂದರೆ ಕುತೂಹಲದಿಂದ ಕೇಳಿದರು.
ಅಷ್ಟೂ ಗೊತ್ತಿಲ್ಲವೇನ್ರಿ. ಸೂರ್ಯ ವಂಶದವರು ಎಂದರೆ ಅವರು ಯಾವಾಗಲೂ ಸೂರ್ಯ ಹುಟ್ಟಿ ಬಿಸಿಲು ಬೀಳುವ ತನಕ ಮಲಗಿರುವರು, ಎಂದು ವಿವರಣೆ ನೀಡಿದೆ. 
ಅವರು ಖೊಖಾಡಿಸಿ ನಕ್ಕರು .ಇಲ್ಲ ಸಾರ್ನಾನು ಸೂರ್ಯ ಹುಟ್ಟುವ ಮುಂಚೆಯೆ ಏಳುವೆ. ಅದು ನನ್ನ ಚಿಕ್ಕಂದಿನ ಅಭ್ಯಾಸ. ನಂತರ ಲಘು ವ್ಯಾಯಾಮ ಮಾಡುವೆ. ಒಂದೂ ದಿನವೂ ಬಿಡುವುದಿಲ್ಲ. ಅದರಿಂದ ಮೈ ಹಗುರ ಎನಿಸುವುದು. ದಿನವೆಲ್ಲ ಚಟುವಟಿಕೆಯಿಂದ  ಚುರುಕಾಗಿ  ಇರಬಹುದು,” ಎಂದರು
 
ತುಂಬಾ ಒಳ್ಳೆಯ ಅಭ್ಯಾಸ , ಎಂದು ಮೆಚ್ಚುಗೆ ಸೂಚಿಸಿದೆ. ಎಲ್ಲ ಹೊಂದಿಕೆಯಾಗಿದೆಯಾ ? ಪ್ರಶ್ನೆ ಹಾಕಿದೆ.
ಏನೂ ತೊಂದರೆ ಇಲ್ಲ ಎಲ್ಲ ಅನುಕೂಲವಾಗಿದೆ” , ಎಂದು ಉತ್ತರಿಸಿದರು.
ಹಾಗಿದ್ದರೂ ಅವರು ತಡವಾಗಿ ಕಾಲೇಜಿಗೆ ಬರುವುದು ಮುಂದುವರಿದಿತ್ತು.
ಮುಂದಿನ ಶಿಕ್ಷಕರ ಸಭೆಯಲ್ಲಿ ಎಲ್ಲರೂ ತರಗತಿಗಳು ಪ್ರಾರಂಭವಾಗುವ ಮೊದಲೆ ಕಾಲೇಜಿನ ಆವರಣದಲ್ಲಿರ ಬೇಕು ಎಂದು ಸೂಚನೆ ನೀಡಿದೆ.
ಮಾರನೆ ದಿನ  ಅವರು ಪ್ರಾರ್ಥನೆಗೆ ಮೊದಲೆ ಕಾಲೇಜಿಗೆ ಬಂದರು. ಆದರೆ ಸಿಬ್ಬಂದಿಯ ಕೊಠಡಿಯಲ್ಲಿ ಕುಳಿತಿದ್ದರು ಪ್ರಾರ್ಥನೆಗೆ ಹಾಜರಾಗಲಿಲ್ಲ.
ಮರುದಿನ ಪ್ರಾರ್ಥನಾ ನಂತರ ಆಡುವ ಎರಡು ನುಡಿಯಲ್ಲಿ ಒಂದು ಮಾತು ಹೇಳಿದೆ.ಪ್ರಾರ್ಥನೆ ಶಿಕ್ಷಣದ ವಿಭಾಜ್ಯ ಅಂಗ, ಎಲ್ಲ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ತಪ್ಪದೆ ಪ್ರಾರ್ಥನೆಯಲ್ಲಿ ಪಾಲುಗೊಳ್ಳ ಬೇಕು.
ಮರುದಿನ ಆ ಉಪನ್ಯಾಸಕರು ಯಥಾ ರೀತಿ ಗೈರು.  ಬೋಧಕರ ಸಾಲನ್ನು ಗಮನಿಸಿದೆ. ಅವರೊಬ್ಬರನ್ನು ಬಿಟ್ಟು ಎಲ್ಲರೂ ನಿಂತಿದ್ದರು.
ಪ್ರಾರ್ಥನೆಯ ನಂತರ ಅವರನ್ನು ಛೇಂಬರಿಗೆ ಕರೆಸಿದೆ.
ಯಾಕ್ರಿ ತಡವಾಗಿ  ಬಂದಿರಿ ? ಎಂದೆ.
ಇಲ್ಲ ಸಾರ್‌ ತಡವಾಗಿ ಬಂದಿಲ್ಲ. ಮೊದಲೆ ಬಂದಿದ್ದೆ ಎಂದರು.
ಪ್ರಾರ್ಥನೆಯ ಸಮಯದಲ್ಲಿ ನೀವು ಕಾಣಲಿಲ್ಲ, ಎಂದು ನುಡಿದೆ.
ಇಲ್ಲ ಸಾರ್‌, ಆ ಸಮಯದಲ್ಲೆ ಇದ್ದೆ. ಪಕ್ಕದಲ್ಲಿ ಮರದ ಕೆಳಗೆ ನಿಂತಿದ್ದೆ”, ಎಂದು ಉತ್ತರಿಸಿದರು.
ನನಗೆ ಇದು ಯಾಕೋ ಅತಿಯಾಯಿತು ಎನಿಸಿತು. ಮೊದಲೆ ಬಂದಿರುವಿರಿ ಎನ್ನುವಿರಿ. ನಿಜವಿರಬಹುದುಮರದ ಕೆಳಗೆ ಏಕೆ ನಿಂತಿರಿ  ? ಆದರೆ ಪ್ರಾರ್ಥನೆಗೆ ಏಕೆ ಹಾಜರಾಗಲಿಲ್ಲ ? ಕೇಳಿದೆ.
ಸಾರ್‌ , ನಾನು ಕಾಲೇಜಿನಲ್ಲಿ ಪ್ರಾರ್ಥನೆಮಾಡುವುದಿಲ್ಲ. ಮನೆಯಲ್ಲಿಯೆ ಮಾಡಿ ಬರುವೆ”. ಎಂದರು.
ಮನೆಯಲ್ಲಿ ಮಾಡುವುದು  ನಿಮ್ಮ ವೈಯುಕ್ತಿಕ ಪ್ರಾರ್ಥನೆ. ಅದನ್ನು ಮಾಡುವುದು ಬಿಡುವುದು ನಿಮಗೆ ಸಂಬಂಧಪಟ್ಟ  ಮಾತಾಯಿತು . ಇಲ್ಲಿನದು ಹಾಗಲ್ಲ. ಕಾಲೇಜಿನದು ಸಾಮೂಹಿಕ ಪ್ರಾರ್ಥನೆ.  ಇದು ಶೈಕ್ಷಣಿಕ ಚಟುವಟಿಕೆಯ  ಆರಂಭದ ಸಂಕೇತ. ಎಲ್ಲರೂ ಭಾಗವಹಿಸಬೇಕು.
ನಾನು ಮನೆಯಲ್ಲೆ   ನಮಾಜು ಮಾಡಿರುವೆ” , ಎಂದರು.
ನಾನು ನಿಮ್ಮ ನಮಾಜಿನ ವಿಷಯ ಅಲ್ಲ ಹೇಳುತ್ತಿರುವುದು.
ನಾನು ಭಾಗವಹಿಸಲು ಆಗುವುದಿಲ್ಲ. ಅದು ಧರ್ಮ ವಿರೋಧ. ಆದ್ದರಿಂದ ನಾನು ಬೇರೆ ಯಾವುದೆ ಪ್ರಾರ್ಥನೆ ಮಾಡುವುದಿಲ್ಲ” , ಎಂದರು.
ಇದು ಧಾರ್ಮಿಕ ಪ್ರಾರ್ಥನೆ ಅಲ್ಲ. ಮಂದಿರ ಮಸೀದಿ ಮತ್ತು ಇಗರ್ಜಿಗಳಲ್ಲಿ ಮಾಡುವ ಪ್ರಾರ್ಥನೆಗೂ ಇದಕ್ಕೂ ಸಂಬಂಧವಿಲ್ಲ. ಒಂದುವೇಳೆ ಜೀವನದಲ್ಲಿ ಪ್ರಾರ್ಥನೆಯನ್ನೆ ಮಾಡುವುದಿಲ್ಲ ಎನ್ನುವ ವಿಚಾರವಾದಿಗಯಾಗಿದ್ದರೂ ಇಲ್ಲಿ ಭಾಗವಹಿಸಬೇಕು. ಇಲ್ಲಿನ ಪ್ರಾರ್ಥನೆ ಎಂದರೆ  ನಾಡಗೀತೆ  ಮತ್ತು ರಾಷ್ಟ್ರಗೀತೆಯ ಗಾಯನ. ಅದಕ್ಕೆ ಗೌರವ ಕೊಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇದು ಖಂಡಿತ ಧರ್ಮವಿರೋಧಿಯಲ್ಲ.ಡಾ. ಝಕೀರ್‌ ಹುಸೇನ್‌. ಡಾ.ಫಕೃದ್ದೀನ್‌ ಅಲಿ ಅಹಮದ್‌, ಡಾ ಜೆ. ಅಬ್ದುಲ್‌ಕಲಾಂನಂಥಹ ಮಹಾನ್‌ ನಾಯಕರೂ  ಧರ್ಮಭೀರುಗಳೆ. ಅವರು  ಕೆಂಪುಕೋಟೆಯ ಮೇಲೆ ನಿಂತು ಲಕ್ಷಾಂತರ ಜನರ ಜೊತೆ ರಾಷ್ಟ್ರಗೀತೆ ಹಾಡಿದ್ದಾರೆ. ಜಮಿಯಾ ಮಿಲಿಯಾಅಲೀಗರ್‌ ಮುಸ್ಲಿಂ ಯೂನಿವರ್ಸಿಟಿಗಳಲ್ಲೂ ರಾಷ್ಟ್ರ ಗೀತೆ ಮೊಳಗುತ್ತದೆ. ತಪ್ಪು ತಿಳುವಳಿಕೆ ಬಿಡಿ.  ನಾಳೆಯಿಂದ ಪ್ರಾರ್ಥನೆ ತಪ್ಪಿಸ ಬೇಡಿ, ಎಂದೆ.
ಇಲ್ಲ ಸಾರ್‌, ನಾನು ಪ್ರಾರ್ಥನೆಯಲ್ಲಿ ಭಾಗವಹಿಸುವುದು ಸಾಧ್ಯವೇ ಇಲ್ಲಎಂದು ಕಡ್ಡಿಮುರಿದಂತೆ ಉತ್ತರಿಸಿದರು.  ನನಗೆ ತಲೆ ಬಿಸಿಯಾಯಿತು. ಯಾಕೋ ಇದು ಅತಿಯಾಯಿತು ಅಂದುಕೊಂಡೆ. ಅಲ್ಲಿ ಸೇರಿದ್ದ ಇತರ ಸಿಬ್ಬಂದಿ ಏನಾಗುವುದೋ ಎಂದು ಕುತೂಹಲದಿಂದ ಕಾಯುತಿದ್ದರು. ಇನ್ನು ಹೆಚ್ಚು ಮಾತನಾಡುವುದರಲ್ಲಿ ಅರ್ಥವಿಲ್ಲ ಎನಿಸಿತು. 
ಈ ಸಮಸ್ಯೆಯನ್ನು ಬಗೆಹರಿಸಲೇಬೇಕಿತ್ತು. ಹಾಗೆಯೇ ಬಿಟ್ಟರೆ ಇನ್ನೂ ಅನೇಕರಿಗೆ ಅಶಿಸ್ತಿನಿಂದ ವರ್ತಿಸಲು ಅವಕಾಶ. ಕಠಿಣ ಕ್ರಮ ತೆಗೆದುಕೊಂಡರೆ ಅವರು ಅಲ್ಪಸಂಖ್ಯಾತರು. ಅವರಿಗೆ ಬೇಕೆಂದೆ ತೊಂದರೆ ನೀಡುತಿದ್ದಾರೆ ಎಂಬ ಆಪಾದನೆ. ಸುಮ್ಮನಿದ್ದರೆ ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ಎಂಬ ಆರೋಪ. ಅತ್ತ ದರಿ ಇತ್ತ ಪುಲಿ ಎಂಬ ಪರಿಸ್ಥಿತಿ. ವಿದ್ಯಾರ್ಥಿಗಳಿಗೂ ತಪ್ಪು ಸಂಕೇತ ರವಾನೆ ಯಾಗುವುದು. ಇದೆ ವಾದ ಮಂಡಿಸಿ ಅವರೂ ಪ್ರಾರ್ಥನೆಗೆ ರಿಯಾಯತಿ ಕೇಳಬಹುದು.
ದಿನವೆಲ್ಲಾ ಇದೇ ಚಿಂತೆ ನನ್ನನ್ನು ಕಾಡಿತು, ಕೊನೆಗೆ ಒಂದು ನಿರ್ಧಾರಕ್ಕೆ ಬಂದೆ. ಸಂಸ್ಥೆಯಲ್ಲಿ ಶಿಸ್ತು ಅತಿ ಮುಖ್ಯ.  ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು, ಆದದ್ದಾಗಲಿ ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿದೆ.
ನಮ್ಮಲ್ಲಿ ಹಾಜರಿ ಪುಸ್ತಕವನ್ನು ಪ್ರಾರ್ಥನೆಗೆ ತುಸು ಮುಂಚೆ ಶಿಕ್ಷಕರ ಕೋಣೆಯಲ್ಲಿ ಮೇಜಿನ ಮೇಲೆ ಇರಿಸಲಾಗುತಿತ್ತು. ತರಗತಿಗಳು ಪ್ರಾರಂಭವಾದ ತುಸು ಹೊತ್ತಿನ ನಂತರ ಅದನ್ನು ತಂದು ನನ್ನ ಮೇಜಿನ ಮೇಲೆ ಇಡಲಾಗುತಿತ್ತು. ಅಕಸ್ಮಾತ್ತಾಗಿ ತಡವಾಗಿ ಬಂದವರು ಸಹಿಮಾಡದೆ ಇದ್ದವರು ನನ್ನ ಕೋಣೆಗೆ ಬಂದು ಸಹಿಮಾಡಬೇಕಿತ್ತು.  ಯಾವಗಲೋ ಒಮ್ಮೆ ಯಾರಾದರೂ ತಡವಾಗಿ ಬಂದರೆ ನನ್ನ ಕೋಣೆಗೆ ಬರುವರು, ನಮಸ್ಕಾರ ಎನ್ನುವರು. ನಾನೂ ನಮಸ್ಕಾರ ಎಂದು ಹಾಜರಿ ಪುಸ್ತಕ ಕೊಡುವೆ. ಸಾಧಾರಣವಾಗಿ ಏಕೆ ತಡವಾಯಿತು ಎಂದು ಕೇಳುತ್ತಿರಲಿಲ್ಲ. ಅವರು  ನನ್ನ ಎದುರಲ್ಲೆ ಸಹಿ  ಮಾಡಿ  ತರಗತಿಗೆ ಹೋಗುತಿದ್ದರು. ಸಹಜವಾಗಿ ಯಾರೂ ಪದೇಪದೆ ತಡಮಾಡಿ ಬರುತ್ತಿರಲಿಲ್ಲ.
ಮಾರನೆ ದಿನ ಯೋಚನೆ ಮಾಡಿದೆ. ಪ್ರಾರ್ಥನೆಯಾದ ತಕ್ಷಣ  ಹಾಜರಿ ಪುಸ್ತಕವನ್ನು ನನ್ನ ಕೋಣೆಗೆ ತರಿಸಿಕೊಂಡೆ. ಅದನ್ನು ಮೇಜಿನ ಮೇಲೆ ಇಡಲಿಲ್ಲ.  ಹಾಜರಿ ಪುಸ್ತಕವನ್ನು ನನ್ನ ಕಪಾಟಿನಲ್ಲಿ ಇಟ್ಟುಕೊಂಡೆ. ದಿನದಂತೆ ಆ  ವ್ಯಕ್ತಿ ಪ್ರಾರ್ಥನೆಗೆ ಬರಲಿಲ್ಲ. ನಂತರ ಸಿಬ್ಬಂದಿ ಕೋಣೆಗೆ ಹೋದರು. ಅಲ್ಲಿ ಹಾಜರಿ ಪುಸ್ತಕ ಇಲ್ಲ. ಅವರಿವರನ್ನು ಹಾಜರಿ ಪುಸ್ತಕ ಎಲ್ಲಿ ಎಂದು ಕೇಳಿದಾಗ, ಪ್ರಿನ್ಸಿಪಾಲರ ಕೋಣೆಗೆ ಹೋಗಿದೆ ಎಂದು ಗೊತ್ತಾಗಿದೆ.
ಅವರು ಸಾವಕಾಶವಾಗಿ ನನ್ನ ಕೋಣೆಗೆ ಬಂದರು.
'ನಮಸ್ಕಾರ ಸಾರ್‌ಎಂದರು.
ನಾನೂನಮಸ್ಕಾರಎಂದೆ. ಮೇಜಿನ ಮೇಲೆ ಕಣ್ಣಾಡಿಸಿದರು. ಹಾಜರಿ ಪುಸ್ತಕ ಕಾಣಲಿಲ್ಲ. ಸರ್‌ , ಹಾಜರಿ ಪುಸ್ತಕ ಕಾಣುತ್ತಿಲ್ಲಎಂದರು.
ಅದೂ ಎಲ್ಲಿಯೂ ಹೋಗಿಲ್ಲ , ನನ್ನ ಹತ್ತಿರ ಇದೆ, ಎಂದು ಉತ್ತರಿಸಿದೆ.
ಕೊಡಿ ಸಾರ್‌ , ಸಹಿ ಮಾಡುವೆ. ಮೊದಲ ಅವಧಿಯಲ್ಲೆ ತರಗತಿ ಇದೆ. ತಡವಾಗುವುದು”, ಎಂದರು.
ಕೊಡುವುದಿಲ್ಲ, ಎಂದೆ.
ಏನು ಸಾರ್‌ ಹಾಗೆಂದರೆ. ನಾನು ಕಾಲೇಜಿಗೆ ಬಂದರೂ ಹಾಜರಿ ಪುಸ್ತಕ ಕೊಡುವುದಿಲ್ಲ ಎಂದರೆಹೇಗೆಮುಖ ಕೆಂಪು ಮಾಡಿಕೊಂಡು ಕೇಳಿದರು.
ನೀವು ಪ್ರಾರ್ಥನೆಗೆ ಬರುತ್ತಿಲ್ಲ. ಅದು  ಶೈಕ್ಷಣಿಕ ಚಟುವಟಿಕೆಯ ಪ್ರಮುಖ ಅಂಗ. ಅದಕ್ಕೆ ಹಾಜರಾಗದಿದ್ದರೆ  ಆ ದಿನ ಗೈರು ಹಾಜರಾದಂತೆ”, ಎಂದು ಶಾಂತವಾಗಿ ವಿವರಣೆ ನೀಡಿದೆ.
ನೀವು ಹೀಗೆ ಮಾಡುವುದು  ಸರಿಯಲ್ಲ.  ಇದು ಕಾನೂನು ಬಾಹಿರ” , ಎಂದು ಗಡುಸಾಗಿ ಹೇಳಿದರು.
ರಾಷ್ಟ್ರಗೀತೆಯನ್ನು ಹಾಡುವುದಿಲ್ಲ  ಎಂದರೆ ರಾಷ್ಟ್ರಕ್ಕೆ ಅಪಮಾನ ಮಾಡಿದಂತೆ  ಹೀಗೆ ಅಗೌರವ ತೋರಿಸುವುದು ಶಿಕ್ಷಾರ್ಹ ಅಪರಾಧ.  ಈ ಬಗ್ಗೆ ಈ ದಿನವೆ  ಮೇಲಾಧಿಕಾರಿಗಳಿಗೆ ವರದಿಮಾಡಬಹುದುಎಂದೆ.   ಆ ವ್ಯಕ್ತಿ ತುಸು ಮೆತ್ತಗಾದ.
ಸಾರ್‌, ಅದೆಲ್ಲ ಏಕೆ. ನಾನು ನೀವು ವಹಿಸಿದ ಎಲ್ಲ ಕೆಲಸವನ್ನೂ ನಿಷ್ಠೆಯಿಂದ  ಮಾಡುತ್ತಿರುವೆ.  ಪಾಠದ ಬಗ್ಗೆ ಮಕ್ಕಳೂ ಒಳ್ಳೆಯ ಅಭಿಪ್ರಾಯ ಹೊಂದಿರುವರು. ಯಾರನ್ನಾದರೂ ಕೇಳಿ. ನನ್ನ ಕೆಲಸವನ್ನುನೀವೂ ಮೆಚ್ಚಿರುವಿರಿ. ಎಷ್ಟೋ ಸಲ ನೀವೆ ಎಲ್ಲರೆದುರು ಹೊಗಳಿರುವಿರಿ.ಎಂದರು.
ನಿಮ್ಮ ಕೆಲಸದ ಬಗ್ಗೆ ನನ್ನ ತಕರಾರಿಲ್ಲ. ಆದರೆ ನೀವು ಭಾರತೀಯ ನಾಗರಿಕರು ಮೇಲಾಗಿ ಸರ್ಕಾರಿ ನೌಕರರು. ಇಲ್ಲಿ ಜಾತಿ ಧರ್ಮದ ಪ್ರಶ್ನೆ ಬರುವುದಿಲ್ಲ. ಸರಕಾರದ ನಿಯಮಾವಳಿಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವವು. ಅವನ್ನು ಮೀರಿದವರು ಶಿಸ್ತಿನ ಕ್ರಮಕ್ಕೆ ಒಳಗಾಗುವರು, ಎಂದು ನುಡಿದೆ.
ಈ ಎಲ್ಲ ಮಾತುಕಥೆಗಳು  ಕೋಪ ತಾಪಗಳಿಲ್ಲದೆ ನಡೆದವು.
ಅವರು ಹತ್ತು ನಿಮಿಷ ಹಾಗೆಯೆ ನಿಂತರು ನಾನು ನನ್ನ ಕೆಲಸದಲ್ಲಿ ತೊಡಗಿದೆ. ಅವರು ಮತ್ತೇನು ಮಾತನಾಡದೆ ಶಿಕ್ಷಕರ ಕೋಣೆಗೆ ಹೋದರು. ನಂತರ ತರಗತಿಗೂ ಹೋದರು.




ನಾನೂ ಆ ವಿಷಯ ಕುರಿತು  ಯಾರೊಡನೆಯೂ ಮಾತನಾಡಲಿಲ್ಲ.ನಾನು ಅವರಿಗೆ ಸಹಿ ಮಾಡಲು ಹಾಜರಿ ಪುಸ್ತಕ ನೀಡದೆ ಇರುವುದು ಕಾನೂನು ಬದ್ಧಕ್ರಮ ಅಲ್ಲ, ಅವರು ಮೇಲಾಧಿಕಾರಿಗಳಿಗೆ ದೂರು ನೀಡಿದರೆ ಕಷ್ಟ. ಸುಮ್ಮನೆ ಏಕೆ ಸಮಸ್ಯೆ. ಮೇಲಾಧಿಕಾರಿಗಳಿಗೆ ದೂರು ನೀಡಿದರೆ ಅವರೆ ಬುದ್ದಿ ಕಲಿಸುವರು. ಎಂದು ಹಿರಿಯ ಸಹಾಯಕರು  ಸೂಚಿಸಿದರು.
ಏನೋ ತಿಳುವಳಿಕೆ ಇಲ್ಲದೆ ಹೀಗೆ ಮಾತನಾಡಿದ್ದಾರೆ. ದೂರು ನೀಡುವುದು ಸಲ್ಲದು.ಕಡ್ಡಿಯನ್ನು ಗುಡ್ಡ ಮಾಡುವುದು ಸರಿಯಲ್ಲ. ನಾವು ಒಟ್ಟಿಗೆ ಕೆಲಸ ಮಾಡ ಬೇಕಾದವರು. ಚತುರೋಪಾಯ ಬಳಸಿ ಹಾದಿಗೆ ತರೋಣ. ಸಂಸ್ಥೆಯಲ್ಲಿನ ಶಿಸ್ತು , ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅಡಚಣೆಯಾದರೆ  ಸುಗಮ ಆಡಳಿತಕ್ಕಾಗಿ ಕಾನೂನೇತರ ಕ್ರಮ ತೆಗೆದುಕೊಳ್ಳಲು ಆಡಳಿತಾಧಿಕಾರಿಗೆ ಅವಕಾಶವಿದೆ.ಕೈ ಮೀರಿದರೆ ಅದು ಬೇರೆಯ ಮಾತು. ಅವರಾಗಿಯೆ ದೂರು ನೀಡಿದರೆ ಇನ್ನೂ ಉತ್ತಮವಾಯಿತು. ತನಿಖೆಗೆ ಬಂದ ಅಧಿಕಾರಿಗಳಿಗೆ ವಿಷಯ ತಿಳಿಯುವುದು. ತಾವು ತೋಡಿದ ಹಳ್ಳಕ್ಕೆ ತಾವೆ ಬೀಳಬೇಕಾಗುವುದು. ಅಧಿಕಾರಿಗಳಿಗೆ ಅವರೆ ಉತ್ತರದಾಯಿಯಾಗುವರು, ಎಂದು ಸಮಾಧಾನಪಡಿಸಿದೆ.
ಮಾರನೆ ದಿನ ಪ್ರಾರ್ಥನೆಯ ಗಂಟೆ ಬಾರಿಸಿತು. ನಾನು ಹೋಗಿ ನಿಂತು ಕೊಂಡೆ. ಉಪನ್ಯಾಸಕರ ಸಾಲನ್ನು ಗಮನಿಸಿದೆ.ಅವರೂ ನಿಂತಿದ್ದರು.
ಪ್ರಾರ್ಥನೆಯು ಆದನಂತರ ಅವರನ್ನು ನನ್ನ ಕೋಣೆಗೆ ಕರೆಸಿದೆ. ಬಂದು ನನ್ನ ಮುಂದೆ ಬಿಮ್ಮನೆ ನಿಂತರು.  ಹಾಜರಿ ಪುಸ್ತಕ ನೋಡಿದೆ . ಅವರು ಆಗಲೆ  ಆ ದಿನದ ಸಹಿ ಮಾಡಿದ್ದರು
ಅವರಿಗೆ ಹಾಜರಿ ಪುಸ್ತಕ ನೀಡಿ,’  ಹಾಜರಿಯಲ್ಲಿ ಸಹಿ ಮಾಡಿ ಎಂದೆ.
ಆಗಲೆ ಸಹಿ ಮಾಡಿರುವೆ”, ಎಂದರು.
ನಿನ್ನೆಯ ದಿನದ ಸಹಿ ಮಾಡಿ ಎಂದೆ.
ಅಲ್ಲಿ ಹಸಿರು ಇಂಕಿನಲ್ಲಿ  ಪ್ರಶ್ನಾರ್ಥಕ ಚಿಹ್ನೆ ಇದೆ, ಎಂದರು.
ಹೌದು , ನಾನೆ ನಿನ್ನೆ ಅದನ್ನು ಹಾಕಿದ್ದೆ.  ಆದರೂ ಪರವಾ ಇಲ್ಲ. ಅದರ ಮೇಲೆ ನಿಮ್ಮ ಸಹಿ ಮಾಡಿ. ನಾನು ದೃಢೀಕರಿಸುವೆ, ಎಂದು ತಿಳಿಸಿದೆ.
ಅವರು ನಿಟ್ಟುಸಿರುಬಿಟ್ಟು ಸಹಿ  ಮಾಡಿದರು. ನಂತರ ತಲೆ ತಗ್ಗಿಸಿಕೊಂಡು ತರಗತಿಗೆ ಹೋದರು.
ಪ್ರಾರ್ಥನೆಯ ಪ್ರಸಂಗ ಸುಖಾಂತ್ಯವಾಯಿತು. ಮೊದಲಿನಷ್ಟೆ ಕಳಕಳಿಯಿಂದ ನಗುನಗುತ್ತಾ ಕಾಲೇಜಿನ ಕೆಲಸ ನಿರ್ವಹಿಸುವಂತಾಯಿತು. ನಾವೆಲ್ಲ ಮೊದಲು ಭಾರತೀಯರು ನಂತರ ಹಿಂದು,ಮುಸ್ಲಿಮ್‌ ,ಸಿಖ್, ಇಸಾಯಿ ,ರಾಷ್ಟ್ರ ಧರ್ಮ ಎಲ್ಲ ಧರ್ಮಕ್ಕೂ ಮಿಗಿಲು ಎಂಬ ಅರಿವು ಅವರಲ್ಲಿ ಮೂಡಿದ್ದು ತುಂಬ ನೆಮ್ಮದಿ ತಂದಿತು

Thursday, September 13, 2012

ಕರಡಿ ಮರವ ಏರಿತು


                          ಕರಡಿ ಮರವ ಏರಿತು
ಕಾರಿನ ಕರಗ ನೋಡಿ ಊರಲ್ಲಿ ಸುತ್ತ ಹೊರಟೆವು.  ನಮ್ಮ ಶಿಬಿರ ಇರುವದು ಪುಟಾಣಿ ಊರಲ್ಲಿ.  ಫಿನಿಶಿಯಾ ಎಂಬ ಪುರಾತನ ನಾಗರಿಕತೆಯ ಹೆಸರು. ಇಲ್ಲಿ ಬಂದ ಬಗೆ ನಮಗೆ ತಿಳಿಯದು.  ಬೆಟ್ಟದ ಬುಡದಲ್ಲಿ, ನದಿಯ ತಟದಲ್ಲಿ ಕಾಡಿನ ನಡುವೆ ಇರುವ ಸುಂದರ ಗ್ರಾಮ. ಊರಿಗೆ ಒಂದೇ ಒಂದು ಮುಖ್ಯ ರಸ್ತೆ. ಎರಡು ಬದಿಯಲ್ಲಿ  ಕಟ್ಟಿಗೆ ಮನೆಗಳು. ಪ್ರವಾಸಿಗರ ಅಗತ್ಯ ಪೂರೈಸುವ ಸರ್ವ ವಸ್ತು  ಭಂಡಾರ, ಹೋಟೆಲ್, ಮೋಟೆಲ್, ವಸತಿ ಗೃಹಗಳು. ಊರು ಭಿತ್ತಿ ಚಿತ್ರದಂತೆ ಬಹು ಸುಂದರ. ಇದು ಸದ ಪ್ರವಾಸಿಗರ ನೆಚ್ಚಿನ ತಾಣ. ಬೇಸಗೆಯಲ್ಲಿ ಜನ ಜಾತ್ರೆ. ಚಾರಣಿಗರು, ಬೆಟ್ಟ  ಏರುವವರುಸಾಹಸ ಕ್ರೀಡೆಗಾಗಿ ಕಾರಿನಲ್ಲಿಬಸ್ಸಿನಲ್ಲಿ  ಸೈಕಲ್ ಸವಾರರಾಗಿ ವಾರಾಂತ್ಯದಲಿ ಮುಕುರುವರು. ಚಳಿಗಾಲದಲ್ಲೂ ಸಹಾ ತೆರಪಿಲ್ಲ.  ಸ್ಕೀಯಿಂಗ್ ಗೂ ಇದು ಹೇಳಿ ಮಾಡಿಸಿದ ಜಾಗ.  ಆಗ ಮರಗಳೆಲ್ಲ ಬೋಳು ಬೋಳು.  ಅವುಗಳ ನಡುವೆ ಬೆಟ್ಟಗಳ ಇಳಿಜಾರಿನಲ್ಲಿ ಕಾಲಿಗೆ ಹಲಗೆ ಕಟ್ಟಿಕೊಂಡು, ಹಿಮಾವೃತ ಬೆಟ್ಟಗಳನ್ನೂ ದಾಟುವ ಸಾಹಸಿಗರ  ಸ್ವರ್ಗ ಇದು. ಸಕ್ಕರೆ ಬೆಟ್ಟದ ಮೇಲಿನ ಕರಿ ಇರುವೆಗಳ ರೀತಿ ಕಾಣುತ್ತಾರೆ. ವಿಶೇಷ ಉಡುಪು ಧರಿಸಿದ ಆ ಜನ. ಊರಿನ ಪ್ರಮುಖ ಭಾಗದಲ್ಲಿ ದೊಡ್ಡ ಫಲಕ ಅಲ್ಲಿರುವ ಚಾರಣದ ದಾರಿಗಳ ವಿವರ. ಅವುಗಳ ಅಂತರ, ಎತ್ತರ, ಪ್ರಯಾಸದ  ಮಟ್ಟ ಎಂದರೆ, ಸುಲಭ, ಸಾಧಾರಣ, ಕಷ್ಟ, ಕಡು ಕಷ್ಟ, ಇತ್ಯಾದಿ. ಎಷ್ಟು ದೂರ ಕಾರಲ್ಲಿ ಹೋಗಬಹುದು, ಹೆಂಗಸರು, ಮಕ್ಕಳು, ಹಿರಿಯರು ಹೋಗಬಹುದೆ, ಅಲ್ಲಿ ದೊರಕಬಹುದಾದ ಸೌಲಭ್ಯ, ಬೇಕಾಗುವ ಸಮಯ ಅಗತ್ಯವಾದ ಪೂರ್ವ ತಯಾರಿ, ಎಲ್ಲ ನಮೂದಿತವಾಗಿದ್ದವು.
ಈ ಉರಿನಲ್ಲಿ ಎಲ್ಲಿಯೂ ಮೊಬೈಲ್ ಸಂಕೇತ ದೊರಕದು. ಏನಿದ್ದರೂ ಸ್ಥಿರ ದೂರವಾಣಿಯಿಂದ ಮಾತ್ರ ಸಂಪರ್ಕ.  ಹೀಗೆ ನಮಗೆ ಆ ದಿನ ಎಲ್ಲಿ ಹೀಗಿರಬಹುದು ಎನ್ನುವ ಸ್ಥೂಲ ಕಲ್ಪನೆ ಸಿಕ್ಕಿತು. ಆಗಲೇ ಗಂಟೆ ಎಂಟೂವರೆ. ಮಲಗಿದ್ದವರೆಲ್ಲರನ್ನು ಹೊರಡಿಸಬೇಕೆಂದು ಮನೆ ಕಡೆ ಮುಖ ಮಾಡಿದೆವು.
ನಮ್ಮ ಶಿಬಿರದ ಪ್ರವೇಶ ದ್ವಾರದ ಹತ್ತಿರ ಆಗಲೇ ಜನ ಜಂಗುಳಿ. ರಸ್ತೆಯ ಆಚೆ ಬದಿಯಲ್ಲಿ ನಿಂತು ಏನನ್ನೋ ನೋಡುತ್ತಿದ್ದಾರೆ. ಎಲ್ಲರ ದೃಷ್ಟಿ ದೂರದ ಮರದ ಮೇಲೆ. ಸಮವಸ್ತ್ರಧಾರಿ ಮಹಿಳೆಯೋಬ್ಬಳು  ರಸ್ತೆಯಲ್ಲಿನ ವಾಹನಗಳ ಒಡಾಟ ನಿಲ್ಲಿಸಿ, ಜನರನ್ನು ನಿಯಂತ್ರಿಸುತ್ತಿದ್ದಾಳೆ. ಆಗಲೇ ಅಗ್ನಿಶಾಮಕ ವಾಹನದಲ್ಲಿ ಬಂದ ಇಬ್ಬರು ಆ ಮರದ ಸುತ್ತ ನೂರು ಅಡಿಯವರೆಗೆ ಯಾರು ಹೋಗದಂತೆ ಸೂಚನೆ ಇರುವ ಬಣ್ಣದ ತಡೆ ಟೇಪನ್ನು ಕಟ್ಟಿದರು. ಏನಾಗಿದೆ ಎಂಡು ನಮಗೆ ಅಚ್ಚರಿ. ಕೇಳಿದಾಗ ತಿಳಿಯಿತು. ಹಿಂದಿನ ರಾತ್ರಿ ಕರಡಿಗಳ ಗುಂಪು ನಮ್ಮ ಶಿಬಿರಕ್ಕೆ ಭೇಟಿ ನೀಡಿದ್ದವು. ಅವುಗಳ ಪೈಕಿ ಒಂದು ದೊಡ್ಡ ಹೆಣ್ಣು  ಕರಡಿ ಎರಡು ಮರಿಗಳೊಂದಿಗೆ ಮರವೇರಿ ಕುಳಿತಿದೆ. ಕರಡಿ ಬೆಟ್ಟಕೆ ಹೋಯಿತು ಎಂದು ಶಿಶು ಗೀತೆ ಕೇಳಿದ್ದ ನಾವು ಬೆಟ್ಟದಿಂದ ಇಳಿದು, ಬಯಲಲ್ಲಿ ತಿಂಡಿ ತಿಂದು, ಮರವೇರಿ ಕುಳಿತ ಕರಡಿಗಳನ್ನು ನೋಡಿದ್ದು ಇದೆ ಮೊದಲು. 
ಚಿತ್ರದುರ್ಗದಲ್ಲಿ ಬೆಟ್ಟ ಇಳಿದು ಬರುವ ಕರಡಿ ದರ್ಶನ ಆಗೀಗ ಆಗುತಿತ್ತು.  ಜನ ಕೊಡುವ ಬ್ರೆಡ್ಡು, ಶೇಂಗಾ ಪಡೆಯಲು ಸಂಜೆಯ ಕಾಲಕ್ಕೆ ಸರಿಯಾಗಿ ಹಾಜರಾಗುತ್ತಿದ್ದ, ಅದಕ್ಕೆ ಜಂಬೂ ಎಂದು ಹೆಸರಿಟ್ಟಿದ್ದರು. ಒಂದು ಬಾರಿಯಂತೂದುರ್ಗದ ಬೆಟ್ಟ ಗುಡ್ಡಗಳಲ್ಲಿ ಮಿನಿ ಚಾರಣಕ್ಕೆ ಹೋಗಿದ್ದ ನಮ್ಮಿಂದಲೂ ಏನೋ ನಿರೀಕ್ಷಿಸಿ, ಬೆನ್ನು ಹತ್ತಿ ಬಂತು.  ತಪ್ಪಿಸಿಕೊಳ್ಳಲು, ಬಂಡೆಯೊಂದನ್ನು ಹತ್ತಿ ಕೂರಬೇಕಾಗಿ ಬಂದಿತ್ತು.  ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ, ಅದು ನಮ್ಮನ್ನು ನಿರೀಕ್ಷಿಸುತ್ತ, ಕೆಳಗೆ ಕಾವಲು ಕೂತಿತ್ತು.
ಆದರೆ, ರಸ್ತೆ ಬದಿಯ ಎತ್ತರದ ಮರವನ್ನು ಮರಿಗಳ ಸಮೇತ ಏರಿ ಕುಳಿತದ್ದನ್ನು ನೋಡಿದ್ದು ಇದೆ ಮೊದಲು. ಅದಕ್ಕೆ ಗಾಬರಿಯಾಗದಿರಲೆಂದು ಸಂಚಾರದ ದಿಕ್ಕನ್ನೇ ಬದಲಿಸಲಾಗಿತ್ತು. ಬೆಟ್ಟದಲ್ಲಿ ಕರಡಿ ಇವೆ ಎಂದು ಕೇಳಿದ್ದ ನಮಗೆ ಅವು ನಮ್ಮ ಭೇಟಿಗೆ ಬಂದಿದ್ದವು ಎಂದಾಗ ಹೊರಗೆ ಸಂತೋಷ ತೋರಿಸಿದರೂ, ಮನದಲ್ಲಿ ಭೀತಿ ಮನೆ ಮಾಡಿತ್ತು. ಆದರೆ ಇದು ಪ್ರವಾಸಿಗಳಿಗೆ ಅನಿರೀಕ್ಷಿತ ಬೋನಸ್. ಎಲ್ಲರೂ ಕೆಮರ ಕ್ಲಿಕ್ ಮಾಡುವವರೆ. ಟೆಲಿ ಲೆನ್ಸ್ ಇದ್ದವರಿಗೆ ಖುಷಿಯೋ ಖುಷಿ. ಇಲ್ಲದವರು ಕ್ಲೋಸ್ ಅಪ್ ಚಿತ್ರಕ್ಕಾಗೇ ಕುಳಿತೂ- ನಿಂತೂ, ಮರವೇರಿ ಸರ್ಕಸ್ಸು ಮಾಡಿ ಉತ್ತಮ ಚಿತ್ರ ಪಡೆವ ಪ್ರಯತ್ನಪಟ್ಟರು.
ನಮ್ಮ ತಂಬೂಗೆ ಬಂದಾಗ ಬೆಳಗಿನಜಾವದ ಜಾಂಬವ ಸೈನ್ಯದ ದಾಂಧಲೆಯ ಪರಿಚಯವಾಯಿತು. ನಡುರಾತ್ರಿ ಮೀರಿ, ಕುಡಿದು ಕುಪ್ಪಳಿಸಿದ ಜನ ತಿಂಡಿ ತೀರ್ಥಗಳನ್ನೂ ಬಯಲಲ್ಲೇ ಮೇಜಿನ ಮೇಲೆ ಬಿಟ್ಟಿದ್ದರು. ಅವು ಕರಡಿ ಪಡೆಯ ಪಾಲಿಗಿದ್ದವು. ತಿಂದದ್ದಕ್ಕಿಂತ ಚೆಲ್ಲಾಪಿಲ್ಲಿಯಾದದ್ದೇ ಹೆಚ್ಚು. ಕರಿ ಕರಡಿ ಶಿಬಿರ ಎಂಬ ಹೆಸರಿಗೆ ನ್ಯಾಯ ಒದಗಿಸಲು ಕರಡಿಗಳೆ ದರ್ಶನ ನೀಡಿದ್ದವು ಅಥವಾ ಪ್ರವಾಸಿಗಳಲ್ಲಿ ರೋಮಾಚಂನ ಹುಟ್ಟಿಸಲು ಮಾಡಿದ ಮಾರ್ಕೆಟಿಂಗ್ ಟ್ರಿಕ್ಕಾ..? ಇರಲಾರದು ಎಂದೇ ಅಂದುಕೊಂಡೆವು.

ಘಟ್ಟದ ತಪ್ಪಲಲ್ಲೂ ಬಿಡದ ಹುಟ್ಟುಗುಣ


 ಘಟ್ಟದ ತಪ್ಪಲಲ್ಲೂ ಬಿಡದ ಹುಟ್ಟುಗುಣ
ರಿಪ್ ವ್ಯಾನ್ ವಿನ್ ಕಲ್', ಕತೆಗಾರ ಇರ್ವಿನ್ ವಾಶಿಂಗ್ ಟನ್ ಇಲ್ಲಿಗೆ ಬಂದೆ ಇರಲಿಲ್ಲವಂತೆ. ಹರೆಯದ ಹುಡುಗ ಬೆಟ್ಟದ ಮೇಲೆ ಕುಡಿದು ಮಲಗಿದ ಎದ್ದು ನೋಡಿದಾಗ ಮಾರುದ್ದ ಬಿಳಿ ಗಡ್ಡತಲೆಯಲ್ಲ ಬೋಳು. ಹಣ್ಣು ಹಣ್ಣು ಮುದುಕ. ಕೆಳಗಿಳಿದು ಬಂದರೆ ಊರೆಲ್ಲ ಪೂರ್ಣ ಬೇರೆ... ಪರಿಚಿತರಿಲ್ಲವೇ ಇಲ್ಲ. ಮನೆ ಹುಡುಕಿ ಹೋದಾಗ ಹರೆಯದವ ಅವನ ಮೊಮ್ಮಗನಂತೆ...' ಈ ಕತೆ ದೇಶ, ಕಾಲ, ಭಾಷೆ ಮೀರಿ ಜನಪ್ರಿಯ. ಇಲ್ಲಿ ದೊರಕುವ ಮದ್ಯ ಮತ್ತು ಬರುವ ನಿದ್ದೆ ನೋಡಿದರೆ ಕತೆ ನಿಜ ಎನಿಸಿತು. ಸುತ್ತಮುತ್ತ ನೋಡಿದರೆ ಸರ್ವಜನಾಂಗದ ಸುಂದರ ತೋಟ ಕಾಣಿಸಿತು. ಬಿಳಿಯರು, ಕರಿಯರು, ಕಂದು, ಕೆಂಪು, ಹಳದಿ, ಕಕೆಶಿಯನರು, ಆಫ್ರಿಕಾನರು, ದೇಸಿಗಳು, ಮುಂಗೊಲಿಯ ಮೂಲದವರು, ವರ್ಣ, ಜನಾಂಗ ಭೇದವಿಲ್ಲದೆ ಎಲ್ಲ ಒಂದೆಡೆ  ಇದ್ದಾರೆ.
ಇನ್ನು ಭಾಷೆಗಳು ಹಲವು ಬಗೆಯ ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಶ್, ಇಟ್ಯಾಲಿಯನ್, ಕೊರಿಯನ್ ಅಲ್ಲಲ್ಲಿ ಹಿಂದಿ. ಮಿನಿ ವಿಶ್ವ ಸಂಸ್ಥೆಯೇ ಅಲ್ಲಿದೆ ಎನಿಸಿತು. ಎಲ್ಲ ಹರೆಯದ ಹುರುಪಿನ ಜೋಡಿಗಳು. ಅಲ್ಲೊಬ್ಬ, ಇಲ್ಲೊಬ್ಬ ಮಕ್ಕಳು. ಸಾಕು ನಾಯಿಗಳು ಮಾತ್ರ ಸಾಕಷ್ಟು. ಎಲ್ಲ ಸರ್ವ ಸನ್ನದ್ಧರಾಗೇ ಬಂದಿದ್ದಾರೆ. ಅಲ್ಲಿ ಇದ್ದ ಎರಡು ಮರಗಳಿಗೆ ಬಿಗಿದ ಹ್ಯಾಮಕ್ಕಿನಲ್ಲಿ (ಹ್ಯಾಮಕ್ ಎಂದರೆ, ಎರಡು ಮರಗಳಿಗೆ ಕಟ್ಟಿದ ಹಗ್ಗದಿಂದ ಮಾಡಿದ ಬಲೆ, ತೊಟ್ಟಿಲ ತರ ಉಪಯೋಗಿಸುತ್ತಾರೆ. ಒಂದು ನಿಸರ್ಗದ ನಡುವೆ ಅಂತರಿಕ್ಷದಲ್ಲಿ ಮಲಗಿದ ಅನುಭವ.) ಮಲಗಿ ಮುಗಿಲು ನೋಡುವವರು, ಕೆಲವರಾದರೆ, ಮರದ ಟೊಂಗೆಗೆ ನೇತು ಬಿಟ್ಟ ಜೋಕಾಲಿಯಲ್ಲಿ ತೂಕಡಿಸುವವರು, ಟೆಂಟ್ ಮುಂದೆ ಮರದ ಕೆಳಗೆ ಹಾಕಿದ ಮಡಿಚುವ ಆರಾಮ ಕುರ್ಚಿಯಲ್ಲಿ ಕುಳಿತು ಓದುವವರು ಹಲವರು. ಇದ್ದ ಜಾಗದಲ್ಲೇ ಶಟಲ್ ಆಡಿದರೆ, ಊಟದ ಮೇಜಿನ ಮೇಲೆ ಕೇರಂ, ಚೆಸ್. ನಿಧಾನವಾಗಿ ಕತ್ತಲು ಕವಿದಂತೆ ಚಳಿಗಾಳಿ ಶುರುವಾಯಿತು. ಕ್ಯಾಂಪ್ ಫೈರ್ ಹಾಕಲು ಗಡಿಬಿಡಿ ಮೊದಲಾಯಿತು. ಒಣ ಕಟ್ಟಿಗೆ ಹೇರಿಕೊಂಡ ವಾಹನ ಹಾಜರು. ಮಟ್ಟಸವಾಗಿ ಕೊರೆದ ಸುಮಾರು ಗಾತ್ರದ ದುಂಡನೆ, ನಿಗೂಳಾದ, ದಿಂಡುಗಳು. ಇವನ್ನು ಸುಡುವುದೇ... ಎಂದು ಕಣ್ಣು ಕಣ್ಣು ಬಿಟ್ಟೆವು. ಕಡ್ಡಿ ಪುರಲೇ ಕೊಂಬೆ, ರೆಂಬೆ ಸುಡುವ ನಮಗೆ, ಮನೆ ಮುಟ್ಟಿಗೆ ಯೋಗ್ಯವಾದ ಅವುಗಳನ್ನು ಸುಡುವುದಕ್ಕೆ, ನೋಟಿನ ಕಟ್ಟಿಗೇ ಬೆಂಕಿ ಹಚ್ಚಿದಷ್ಟು ಬಾಧೆಯಾಯಿತು. ಸುತ್ತಲು ನೋಡಿದಾಗ ಮುಗಿಲು ಮುಟ್ಟುವ ನಿಸೂರಾದ ಓಕ್ ಮರಗಳ ಗುಂಪು ತುಸು ನೆಮ್ಮದಿ ತಂದಿತು.
ಅಗ್ನಿ ದೇವನಿಗೆ ಹವಿಸ್ಸಿನಂತೆ  ಹಾಕಲು ಎಣ್ಣೆ  ಕ್ಯಾನ್. ಎಲ್ಲದಕ್ಕೂ ಕಾಸು. ಬೆಲೆ ಕೇಳುವ ಹಾಗಿಲ್ಲ ಹೇಳಿದಷ್ಟು. ಅಗ್ನಿ ದೇವ ಚಕ್ಕನೆ ಪ್ರತ್ಯಕ್ಷನಾದ. ಕೆಂಡದ ಕುಂಡದ ಮುಂದೆ ಎಲ್ಲ ದುಂಡಗೆ ಕುಳಿತೆವು. ನಾವು  ಹಿರಿಯರು ಆಗಲೇ ಬೆಚ್ಚನೆ ಉಡುಪು ಧರಿಸಿದ್ದೆವು. ತಾಳಲಾರದ ಚಳಿ. ಕೆಂಡದಲ್ಲಿ ಕೈ ಇಟ್ಟರೆ ಮಾತ್ರ ಮೈ ತುಸು ಬಿಸಿಯಾಗಬಹುದು ಎನಿಸಿತು. ಉಟ್ಟ ಬಟ್ಟೆ ಸುಟ್ಟೀತು ಎಂದು  ಸುಮ್ಮನಾದೆವು.  ನಮ್ಮವರು ಮೆಕ್ಕೆ ತೆನೆ ತಂದಿದ್ದರು. ಅವನ್ನು ಹದವಾಗಿ ಸುಟ್ಟು ಬಿಸಿ ಬಿಸಿ ಕಾಳನ್ನು ಬಿಡಿಸಿ ತಿನ್ನ ತೊಡಗಿದೆವು. ನಮ್ಮ ಯುವ ಗೆಳೆಯರು ಉದ್ದನೆ ಲೋಹದ ಕಡ್ಡಿ ತೆಗೆದು ಅದಕ್ಕೆ ಪೊಟ್ಟಣ ದಲ್ಲಿದ್ದ ಏನನ್ನೋ ತೆಗೆದು ಸುಡತೊಡಗಿದರು. ಅದು ಸುಯ್ಯ್ ಎಂದಾಗ ಹಿಂತೆಗೆದು ಚಪ್ಪರಿಸತೊದಗಿದರು. ನಮಗೂ ತಿನ್ನಲು ಹೇಳಿದರು. ಹೇಳಿ ಕೇಳಿ ಶುದ್ದ ಸಸ್ಯಾಹಾರಿಗಳು, ಮೊದಲೇ ಅನುಮಾನದ ಪ್ರಾಣಿಗಳು. ಏನೇ ತಿನ್ನುವ ಮೊದಲು ಅದರಲ್ಲಿ ಮಾಂಸದ  ಅಂಶ ಇಲ್ಲ ಎಂದು ಖಾತ್ರಿ ಮಾಡಿಕೊಳ್ಳುತಿದ್ದೆವು. ತೊಂದರೆ ಏಕೆಂದು ಎಲ್ಲಿಯೇ ಹೋದರು ಬುತ್ತಿಯ ಗಂಟು, ನೀರಿನ ಶೀಸೆ ನಮ್ಮ ಸಂಗಾತಿ. ಈ ರೀತಿ ಮಾಂಸ ಸುಡುವರೆಂದು ಎಲ್ಲೋ ಓದಿದ ನೆನಪು. ಈ ಗೊಡವೆಯೇ ಬೇಡ ಎಂದು ತಲೆ ಆಡಿಸಿದೆವು. ಮಾರನೆ ದಿನ ಬೆಳಕಿನಲ್ಲಿ ಅದರ ಮೇಲಿದ್ದ ಬರಹ ಓದಿದೆ. ಅದು 'ಲಶ್  ಮೇಲೋಎಂದು ಹೆಸರಿನ ಸಕ್ಕರೆಯ ತಯಾರಿ.  ಹೇಗಿದ್ದರೂ ಸಿಹಿರಕ್ತದ ನಾವು ತಿನ್ನುವ ಹಾಗಿಲ್ಲ. ಬೇಡ ಎಂದಿದ್ದು ಒಳ್ಳೆಯದೇ ಆಯಿತು ಎಂದು ಸಂತಸಪಟ್ಟೆ. ಹೊಟ್ಟೆ ಆಗಲೇ ತಾಳ ಹಾಕ ಹತ್ತಿತು.
ಮನೆಯಿಂದ ತಂದಿದ್ದ  ದಿಢೀರ್ ಉಪ್ಪಿಟ್ಟು ತಡವಿಲ್ಲದೆ ರೆಡಿಯಾಯಿತು. ಜತೆಗೆ ಚಿಪ್ಸ್, ಉಪ್ಪಿನಕಾಯಿ. ಬಿಸಿ ಬಿಸಿ ಉಪ್ಪಿಟ್ಟು ಹೊಟ್ಟೆ ಸೇರಿತು. ಸುತ್ತಮುತ್ತಲಿನವರ ಹಾಡು, ಕೇಕೆ, ಕುಣಿತ ಸಾಗಿಯೇ ಇತ್ತು. ಎಲ್ಲರೂ ಕಡಿಮೆ ಉಡುಪಿನಲ್ಲೇ ಇದ್ದರು. ಇವರಿಗೆ ಚಳಿಯಾಗದೇನೋ ಎನಿಸಿತು. ನಂತರ ತಿಳಿಯಿತು. ಅವರ ಮೈ ಬಿಸಿಯ ಕಾರಣ. ಹೊರಗಿನ ಬೆಂಕಿಯಲ್ಲ. ಹೊಟ್ಟೆಯಲ್ಲಿ ಸೇರುತ್ತಿದ್ದ ದ್ರವಾಗ್ನಿ ಎಂದು. ಗಂಟೆಗಟ್ಟಲೆ ಕೈನಲ್ಲಿ ಹಿಡಿದು ಬಾಯಿ ಚಪ್ಪರಿಸುತಿದ್ದ ಬಣ್ಣ ಬಣ್ಣದ ಪೇಯಗಳೇ ಖುಷಿಯಿಂದ ಕುಣಿಸುತಿದ್ದವು. ನಮ್ಮ ಗುಂಪಿನ ಯುವಕರು ಕಣ್ಣು ಬಾಯಿ ಬಿಡುತಿದ್ದ ಪರಿ ನೋಡಿ ಕನಿಕರವಾಯಿತು. ಪಾನಕ ಕುಡಿವಾಗ ನೊಣ ಬಂದಂತಗಬಾರದು ಎಂದು ನಾವು, ಹಿರಿಯ ದಂಪತಿಗಳು, ಅವರಿಗೆ ಶುಭ ರಾತ್ರಿ ಹೇಳಿ ಟೆಂಟ್ ಸೇರಿದೆವು. ಹೇಗಿದ್ದರೂ ಕಣ್ಣುಗಳು ಆಗಲೇ ಎಳೆಯುತಿದ್ದವು. ಪವನ ತಲ್ಪದ ಮೇಲೆ ಪವಡಿಸಿದೆವು. ಗಾಳಿ ಗಾದಿಯ ಮೇಲೆ ಮಲಗಿದ್ದು ಅದೇ ಮೊದಲು. ಹೇಗೋ ಹೇಗೋ ಎನಿಸಿತು. ಶೀತ ಆಗಬಾರದು ಎಂದು ಆ ವ್ಯವಸ್ಥೆ. ಹವಾ ಹಾಸಿಗೆಯ ಮೇಲೆ ಮಲಗಿರುವ ನಮಗೇ ಏನೆಲ್ಲಾ ಅನಿಸಿರುವಾಗ ಹಾವಿನ ಹಾಸಿಗೆಯ ಮೇಲೆ ಮಲಗಿರುವ ಹರಿಗೆ ಹೇಗಿದ್ದಿರಬೇಕು  ಎಂದು ಕೊಳ್ಳುತ್ತಾನಿದ್ರಾ ಚೀಲದಲ್ಲಿ ತೂರಿಕೊಂಡೆವು. ಜಿಪ್ ಎಳೆದುಕೊಂದು ಗಪ್ಪಗೆ ಮಲಗಿದ್ದೆ ತಡ ನಿದ್ದೆ ಆವರಿಸಿತು.
ನಗರ ನಾಮಾವಳಿ...
ಹುಟ್ಟುಗುಣ ಘಟ್ಟದ ತಪ್ಪಲಿನಲ್ಲೂ ಹೋಗಲಿಲ್ಲ. ಯಥಾರೀತಿ ಬೆಳಗ್ಗೆ ಐದು ಗಂಟೆಗೇ ಎಚ್ಚರವಾಯಿತು. ಟೆಂಟ್ ಬಿಟ್ಟು ಹೊರಬಂದರೆ ಆಗಲೇ ಬೆಳ್ಳಂ ಬೆಳಕು. ಎಲ್ಲೆಡೆ ನೀರವ ಮೌನ. ಹಕ್ಕಿಗಳ ಚಿಲಿ ಪಿಲಿ ಬಿಟ್ಟರೆ ಬೇರೇನೂ ಇಲ್ಲ. ಸುತ್ತಲೂ ಬಣ್ಣ ಬಣ್ಣದ ಟೆಂಟ್ ಗಳೂ ಕೂಡ ನಿದ್ದೆಯ ಮಬ್ಬಿನಲ್ಲಿ  ಇರುವಂತೆ ತೋರಿತು. ಹತ್ತಿರದಲ್ಲಿನ ಕ್ಯಾಂಪ್ ಫೈರ್ ನಿಂದ  ಹೌದೋ ಅಲ್ಲವೋ ಎನ್ನುವಷ್ಟು ಹೊಗೆ. ಸುತ್ತಲೂ ಎತ್ತರದ ಹಸಿರು ಸೂಸುವ ಮರಗಳು. ಅವುಗಳ ನಡುವಿನ ಕಂಡಿಗಳಲ್ಲಿ ಹಾವಸೆಯ ನಡುವಿನ ತಿಳಿ ನೀರಿನಂತೆ ಕಾಣುವ ನೀಲಿ ಆಕಾಶ. ಹತ್ತಿರದಲ್ಲೇ ಜುಳು ಜುಳು ಹರಿಯುವ ತೊರೆಯ ಮಂಜುಳಾ ನಿನಾದ. ಈ ಸೊಬಗ ಸವಿಯಲು ಎರಡು ಕಣ್ಣು, ಎರಡು ಕಿವಿ ಸಾಲದು ಎನಿಸಿತು. ಹಿಂದಿನ ದಿನ ಮಳೆಬಂದದ್ದರಿಂದ ಎಲ್ಲೆಲ್ಲೂ ಕೊಚ್ಚೆ ಕೆಸರು ಮನಸಿಗೆ ಕಿಸಿರು ಆಗಿದ್ದುದು ನಿಜ. ಮೋಡ ಕರಗಿ ಮೂಡಿದ ಹೊಂಬೆಳಕು ನೋಡಿ ಬಂದದ್ದು   ಸಾರ್ಥಕವಾಯಿತು ಎನಿಸಿತು.
ಬೆಳಗಿನ ಕಾರ್ಯ ಮುಗಿಸಿ ಎಂದಿನಂತೆ ವಾಯುವಿಹಾರಕ್ಕೆ  ಹೊರಟೆವು. ನಮ್ಮ ಶಿಬಿರದಲ್ಲಿ ಎಲ್ಲಿ ನೋಡಿದರು ಕಾರೆ ಕಾರು. ಕಾಲಿಡಲು ತಾವಿಲ್ಲ. ನೋಡುತ್ತಾ ಹೋದಂತೆಲಾ ನಂಬರ್ ಪ್ಲೇಟಿನ ಮೇಲೆ ಬರೆದ ರಾಜ್ಯಗಳ ಹೆಸರುಗಳು ಕುತೂಹಲ ಕೆರಳಿಸಿದವು. ಗಾರ್ಡನ್ ಸ್ಟೇಟ್, ಎಂಪೈರ್ ಸ್ಟೇಟ್, ಗೋಲ್ಡನ್ ಸ್ಟೇಟ್, ಸಿಲ್ವರ್ ಸ್ಟೇಟ್, --ಕೊಪ್ಪರ್ ಸ್ಟೇಟ್, ಜೆಂ ಸ್ಟೇಟ್, ಕೌಬಾಯ್ ಸ್ಟೇಟ್ ಹೀಗೆ ಹತ್ತಾರು ಸ್ಟೇಟುಗಳ ಹೆಸರು ಹೊತ್ತ ಕಾರುಗಳು ಅಲ್ಲಿದ್ದವು. ಇವು ಯಾವ ದೇಶದಲ್ಲಿನ ರಾಜ್ಯಗಳಪ್ಪ ಎಂದು ಹುಬ್ಬು ಹಾರಿಸಬೇಡಿ. ಇವೆಲ್ಲ ಯು.ಎಸ್.ಎ.ನಲ್ಲಿನ ರಾಜ್ಯಗಳೇ. ನಮ್ಮೂರಲ್ಲಿ ಮನುಷ್ಯರಿಗೆ ಅಡ್ಡ ಹೆಸರು ಇರುವಂತೆ ಇಲ್ಲಿ ರಾಜ್ಯಗಳಿಗೆ. ಉದಾಹರಣೆಗೆ ನ್ಯೂ ಜರ್ಸಿ -ಗಾರ್ಡನ್ ಸ್ಟೇಟ್. ಅಲ್ಲಿ ಎಲ್ಲಿ ನೋಡಿದರೂ ಹಸಿರು. ನ್ಯೂಯಾರ್ಕ್- ಎಂಪೈರ್  ಸ್ಟೇಟ್ಜಗದ ವಾಣಿಜ್ಯ ಸಾಮ್ರಾಜ್ಯ  ಅದೇ ತಾನೇ. ಹೀಗೆ ಐವತ್ತು ರಾಜ್ಯಗಳಿಗೂ ಆ ರಾಜ್ಯದ ಹಿರಿಮೆಯನ್ನು ಸಾರುವ ಹೆಸರು ಇವೆ. ಬೆಳಗಿನ ನಡಿಗೆ ಮುಂದೂಡಿ ಕಾರುಗಳ ನಡುವೆ ಓಡಾಡುತ್ತ ಅವುಗಳ ಮೇಲೆ ಬರೆದಾದ ನುಡಿಗಟ್ಟುಗಳನ್ನೂ ಓದುತ್ತ ಹೋದಂತೆ. ಕೆಲವು ಕಡೆ ವಿಶೇಷ ವಾಕ್ಯಗಳಿದ್ದವು. `All for country country', ‘Live free or die`,  `Liberty for prosperity'.
ಆಗ  ನನಗೆ ಅವು ಏನು ಎಂದು ತಿಳಿಯಲಿಲ್ಲ. ನಂತರ ಗೊತ್ತಾಯಿತು ಪ್ರತಿಯೊಂದು ರಾಜ್ಯಕ್ಕೂ ಅದರದೇ ಅದ ಧ್ವಜ, ಗೀತೆ, ವಿಶೇಷ ನಾಮ ಮತ್ತು ಧ್ಯೇಯ ವಾಕ್ಯಗಳಿವೆ ಎಂದು. ನಮ್ಮಲ್ಲಿ ವಿಧಾನಸೌಧದ ಮೇಲೆ ಬರೆಸಿದ್ದರಲ್ಲ ಆ ತರಹ. ಅದರೆ ಇಲ್ಲಿ ಅವು ಕಡ್ಡಾಯವಾಗಿ ಬಳಸಲಾಗುತ್ತಿದೆ. ಇವು ಬರಿ ಇಂಗ್ಲಿಷ್ ನಲ್ಲಿ ಮಾತ್ರ ಇಲ್ಲ. ಸ್ಪ್ಯಾನಿಶ್, ಗ್ರೀಕ್, ಲ್ಯಾಟಿನ್, ಫ್ರೆಂಚ್ ಮತ್ತು ಮೂಲ ನಿವಾಸಿ ಇಂಡಿಯನ್ ಭಾಷೆಯಲ್ಲೂ ಇವೆ. ಇದು ವಲಸಿಗರ ದೇಶ. ಅಲ್ಲಿನ ಜನ ಹೆಚ್ಚಾಗಿ ಬಳಸುತಿದ್ದ, ಇಷ್ಟ ಪಟ್ಟ ಭಾಷೆ ಅಲ್ಲಿದೆ. ನ್ಯೂಯಾರ್ಕ್ ನ ಘೋಷ ವಾಕ್ಯ--`ಎಕ್ಸ್ಸೇಲ್ಸೋರ್` (Excelsior) ಎಂಬ ಲ್ಯಾಟಿನ್ ಪದ. ಅದರ ಅರ್ಥ "Ever Upwards" `ಸದಾ ಮೇಲ್ಮುಖ' ಎಂದು. ನ್ಯೂಯಾರ್ಕ್ ನ ಗಗನಚುಂಬಿ ಸೌಧಗಳನ್ನೂ ನೋಡಿದಾಗ ಎಷ್ಟು ಸಮರ್ಪಕ ಎನಿಸದಿರದು. ಅಲ್ಲದೇ, ನ್ಯೂಯಾರ್ಕ್ ನಗರಕ್ಕಂತೂ ನೂರಾರು ಅಡ್ಡ ಹೆಸರುಗಳು. 
ಕೆಲವು ರಾಜ್ಯಗಳ ಘೋಷವಾಕ್ಯಗಳಂತೂ ಕಾವ್ಯಮಯ, ಸ್ಪೂರ್ತಿದಾಯಕ. "(Manly deeds, womanly words," "I lead," "Eureka", "It grows as it goes'", "All for our country", "Live free or die" -ನುಡಿಗಟ್ಟುಗಳು ನಿಜಕ್ಕೂ ಚೇತೋಹಾರಿ. ಅಲ್ಲಿನ ಜನರ ಮನೋಭಾವದ ಪ್ರತಿಬಿಂಬ. 
ಈ ಅಡ್ಡ ಹೆಸರಿನ ಬಳಕೆ ಬರಿ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ನಗರಕ್ಕೂ ಒಂದೋ ಎರಡೋ ನಿಕ್ ನೇಮ್. ಅವು ತುಂಬಾ ವಿಚಿತ್ರ ಎನಿಸಿಯಾವು. Biggest little town, Town too tough to die, City too busy to hate, Music city, Magic City, Salt City, Mile Long City, City of Angles, Apple city, Spanish Capital of the world, ಹನುಮನ ಬಾಲದಂತೆ ಬೆಳೆಯುತ್ತದೆ ಪಟ್ಟಿ. ಈ ಹೆಸರಿನ ಹಿಂದೆ ಹುಡುಕುತ್ತ ಹೊರಟರೆ ಭೌಗೋಳಿಕ, ಐತಿಹಾಸಿಕ, ಸಾಂಸ್ಕೃತಿಕ ವಿವರಗಳ ಸುರುಳಿ ಬಿಚ್ಚಿ ಕೊಳ್ಳುತ್ತದೆ. 
ಈ ನಿಕ್ ನೇಮ್ ಗಳ ದಾಳಿಯಿಂದ ಹೆಸರಾಂತ ವ್ಯಕ್ತಿಗಳು ಹೊರತಾಗಿಲ್ಲ. ಇವು ದೇಶದ ಪ್ರಥಮ ಪ್ರಜೆಯನ್ನು ಬಿಟ್ಟಿಲ್ಲ. ಇಂದಿನ ಅಧ್ಯಕ್ಷ ಬರಾಕ್ ಒಬಾಮ, ನೋ ಡ್ರಾಮಾ ಒಬಾಮ, ಹಿಂದಿನ ಅಧ್ಯಕ್ಷ ಬುಷ್- ದುಬ್ಯಾ, ಕ್ಲಿಂಟನ್- ಕಂ ಬ್ಯಾಕ್ ಕಿಡ್ಗೆರಾಲ್ಡ್ ಫೋರ್ಡ್- ಆಕ್ಸಿಡೆಂಟ್ ಪ್ರೆಸಿಡೆಂಟ್ಜಿಮ್ಮಿ ಕಾರ್ಟರ್- ಪೀ ನಟ್ ಪ್ರೆಸಿಡೆಂಟ್ಜಾರ್ಜ್ ವಾಶಿಂಗ್ ಟನ್- ಫಾದರ್ ಆಫ್ ಹಿಜ್ ಕಂಟ್ರಿ, ಥೋಮಸ್ ಜಫಾರ್ಸನ್- ಪೆನ್ ಆಫ್ ರೆವುಲುಶನ್, ಅಬ್ರಹಂ ಲಿಂಕನ್- ಲಿಬರೆಟರ್ಆನೆಸ್ಟ್ ಅಬೆ, ಜೇಮ್ಸ್ ಬುಕನಿನ್-  ಡು ನಥಿಂಗ್ ಪ್ರೆಸಿಡೆಂಟ್, ಕೆಲವು ಸಲ  ವ್ಯಂಗ್ಯವಾಗಿ ಬಹಳ ಸಲ ನೈಜವಾಗಿ ಅವರ ವ್ಯಕ್ತಿತ್ವ ಸಾಧನೆ ಸಾದರಪಡಿಸುತ್ತವೆ.
ಆಟಗಾರರ ನಿಕ್ ನೇಮ್ ಬಹು ಮಜಾ ನೀಡುತ್ತವೆ. ಗಾಲ್ಫ್ ಆಟಗಾರ ವುಡ್ಸ್ -ಟೈಗರ್, ಟೆನ್ನಿಸ್ ಪಟು, ಕೆನ್ ರೋಸ್ವೆಲ್- ಮಸಲ್,   ಅಂಡ್ರ್ಯೂ ಅಗಸ್ಸೇ -ಪಿಸ್ತುಲ್ ಪಿಟೇ, ಈ ರೀತಿ. ನಮ್ಮಲ್ಲೂ ಇದ್ದಾರಲ್ಲ ಬಂಗಾಳದ ಹುಲಿ, ನಜಮ್ ಗಡದ ನವಾಬ್, ಹರ್ಯಾಣ ಹರ್ರಿಕೆನ್, ಮಾಸ್ಟರ್ ಬ್ಲಾಸ್ಟರ್, ಲಿಟಲ್ ಮಾಸ್ಟರ್, ಮೂಗುತಿ ಸುಂದರಿ. 
ಅಮೇರಿಕಾದ ಕಾರಿನ ನಂಬರ್ ಪ್ಲೇಟುಗಳು ಒಡೆಯನ ವೈಯುಕ್ತಿಕ  ವರದ ಜೊತೆ ಜೊತೆ ಆ ಪ್ರದೇಶದ ಮಾಹಿತಿ ನೀಡುತ್ತದೆ. ನಮ್ಮಲ್ಲೂ ಆಟೋಗಳು ಸಂಸ್ಕೃತಿ, ಜ್ಞಾನ ಪ್ರಸಾರದ ಸಂಚಾರಿ ಕೇಂದ್ರಗಳಂತೆ ಕೆಲಸ ಮಾಡುತ್ತವೆಯಲ್ಲವೇ. -ದುರ್ಗದ ಹುಲಿ, ಮಂಡ್ಯದ ಗಂಡು, ಬಿಜಾಪುರ ಬಲಭೀಮ, ಆಟೋ ರಾಜ, ತಾಯಿ ಪ್ರೀತಿ, ತಂದೆ ಆಶೀರ್ವಾದ ಇತ್ಯಾದಿ ಇತ್ಯಾದಿ....