Showing posts with label New jersy. Show all posts
Showing posts with label New jersy. Show all posts

Tuesday, January 22, 2013

ಅಮೇರಿಕಾ ಅನುಭವ-10


                                                                     ಸ್ವಾತಂತ್ರ್ಯ  ಪ್ರತಿಮೆ
                                                                                       
  ಅಮೇರಿಕಾ ಎಂದೊಡನೆ ನೆನನಪು ಬರುವುದು, ಸ್ವಾತಂತ್ರ್ಯ ತಂದು ಕೊಟ್ಟ ಜಾರ್ಜ ವಾಷಿಂಗ್ಟನ್ , ಗುಲಾಮಗಿರಿ ನಿವಾರಿಸಿ ಸರ್ವರಿಗೂ ಸಮಾನತೆ ನೀಡಿದ ಅಬ್ರಾಹಂ ಲಿಂಕನ್ ಮತ್ತು  ಅಮೇರಿಕನರ ಆಶಯದ ಪ್ರತೀಕವಾದ ಸ್ವಾತಂತ್ರ್ಯ ಪ್ರತಿಮೆ. ನ್ಯೂಯಾರ್ಕ ಮತ್ತು ನ್ಯೂಜರ್ಸಿ ರಾಜ್ಯಗಳ ಮಧ್ಯದ ಹಡ್ಸನ್ ನದಿ ನೀರ ನಡುವೆ ಇರುವ ಪುಟ್ಟ ಲಿಬರ್ಟಿ ದ್ವೀಪದಲ್ಲಿ ಮುಗಿಲೆತ್ತರಕ್ಕೆ ಸ್ವಾತಂತ್ರ್ಯ ಜ್ಯೋತಿಯನ್ನು ಎತ್ತಿ ಹಿಡಿದಿರುವ ಅಮೆರಿಕಾದ ಹೆಮ್ಮೆಯ ಹೆಗ್ಗುರುತಾಗಿರುವುದೆ  ಸ್ವಾತಂತ್ರ್ಯ ಮಹಿಳೆ .  ಕಡಲ ಮಾರ್ಗವಾಗಿ ಬರುವವರಿಗೆಲ್ಲ ದಾರಿ ತೋರುವಂತಿರುವ, ಮಂಕು ಕವಿದ ಮನದಲ್ಲಿ ಬೆಳಕು ಮುಡಿಸುವ ,ಹೊಸ ಬಾಳಿನ ಆಶೆ ಚಿಗುರಿಸುವ ಈ ಪ್ರತಿಮೆ ನಾವಿಕರ ಬಾಯಲ್ಲಿ    “ಲೇಡಿ ಲಿಬರ್ಟಿ “  ಅಥವ  ಸ್ವಾತಂತ್ರ್ಯ ಮಹಿಳೆ.


 ಅಮೇರಿಕಾದ ಸ್ವಾತಂತ್ರ್ಯ ಯುದ್ಧವು ಯುರೋಪಿನಲ್ಲಿನ ಪ್ರಜಾಪ್ರಭುತ್ವ ವಾದಿಗಳಲ್ಲಿ ರೋಮಾಂಚನ ಮೂಡಿಸಿತು. ಅದರಲ್ಲೂ ಲೂಯಿಗಳ ರಾಜಾಡಳಿತವನ್ನು ಕಿತ್ತೆಸೆಯಲು ರಕ್ತ ಕ್ರಾಂತಿಯನ್ನೆ ಮಾಡಿದ ಫ್ರಾನ್ಸನಲ್ಲಿ ಮಿಂಚಿನ ಸಂಚಾರವಾಯಯಿತು.ಅವರ ನೈತಿಕ ಬೆಬಲವೂ ದೊರಕಿತು ಅಮೇರಿಕಾದ ಸ್ವಾತಂತ್ರ ಯುದ್ಧಕ್ಕೆ .  ಮೊದಲು ಮಿಲಿಯನ್ ಗಟ್ಟಲೆ ಹಣ ನೀಡಿ ಶಸ್ತ್ರಾಸ್ರ ಕೊಳ್ಳಲು ಸಹಾಯ ಮಾಡಿದರು. ಆದರೆ ಕೊನೆ ಹಂತದಲ್ಲಿ ದಕ್ಷಿಣದ ಯಾರ್ಕ ಟೌನ್ ನಲ್ಲಿ  ಸೇನಾ ಕಾರ್ಯಚರಣೆಯಲ್ಲಿ ನೇರವಾಗಿ ಫ್ರಂಚ ಸೇನೆ ಭಾಗವಹಿಸಿ ಲಾರ್ಡ ಕಾರ್ನ ವಾಲಿಸ್ ಸೋಲೊಪ್ಪಿ ವಾಪಸ್ಸು  ಹೋಗುವಂತೆ ಮಾಡಿತು. ಅವರ ಜತೆ ಸ್ಪೇನಿನ ನೌಕಪಡೆಯು ಇಂಗ್ಲಿ ಷ್ ನೌಕಾ ದಾಳಿಯನ್ನು ತಡೆಯಿತು. ಇದರಂದ ಅಮೇರಿಕನರ ಹೋರಾಟ  ಯಶಗಳಿಸಿತು. ಈ ರೀತಿಯಲ್ಲಿ ಸ್ವಾತಂತ್ರ್ಯಕ್ಕೆ ಸಹಾನುಭೂತಿ ತೋರಿದ ಫ್ರೆಂಚರಿಂದಲೆ ಸ್ವಾತಂತ್ರ  ಪ್ರತಿಮೆಯ ಸ್ಥಾಪನೆಗೆ ಚಾಲನೆ ದೊರೆಯಿತು
ಸ್ವಾತಂತ್ರ್ಯ ಪ್ರತಿಮೆಯ ಪ್ರಸ್ತಾವನೆ ಪ್ರಾರಂಭವವಾದದ್ದು ಪ್ಯಾರಿಸ್ಸಿನ ಲ್ಲಿ.  ಅಲ್ಲಿ ೧೮೬೫ ರಲ್ಲಿ  ನೆಡೆದ ಒಂದು ಭೋಜನ ಕೂಟದಲ್ಲಿ  ಲೇಖಕರು, ವಿದ್ವಾಂಸರು , ದೇಶ ಭಕ್ತರು  ಸೇರಿದ್ದರು. ಎಡ್ವರ್ಡ ಡಿ ಲಬ್ಯೊಲಯಾ ನ ಮುಂದಾಳುತನದಲ್ಲಿ  ಅಮೇರಿಕಾ ಸ್ವಾತಂತ್ರ್ಯದ ಶತಮಾನೊತ್ಸವದ ನೆನಪಿಗಾಗಿ ಕೊಡುಗೆ ನೀಡಲು ಯೊಚಿಸಲಾಯಿತು. ಅಮೇರಿಕಾ ಸ್ವಾತಂತ್ರ್ಯ ವನ್ನು ಸತತವಾಗಿ ನೂರು ವರ್ಷ ಅನುಭವಿಸಿರುವುದು   ಫ್ರೆಂಚರಿಗೆ ಹೆಮ್ಮೆಯ ವಿಷಯವಾಗಿತ್ತು.   ಅವರಿಗೂ ಮೊದಲೆ  ಫ್ರಾನ್ಸ  ಸ್ವಾತಂತ್ರ್ಯ ಪಡೆದಿದ್ದರೂ  ಅಲ್ಲಿ ಪ್ರಜಾ ಪ್ರಭುತ್ವ ಮತ್ತು  ಸರ್ವಧಿಕಾರ ಗಳ  ನಡುವೆ ಕಣ್ಣು ಮುಚ್ಚಾಲೆ ಸಾಗಿತ್ತು.   ಆಗ ಸರ್ವಾಧಿಕಾರಿ ೩ ನೇ ನೆಪೋಲಿಯನ್  ಅಳಿಕೆ.  ಆದರೂ ಮೂರನೆ  ಸಲ ಪ್ರಜಾಪ್ರಭುತ್ವ  ಪಡೆಯಲು   ಅವರ ಪ್ರಯತ್ನ  ಎಡಬಿಡದೆ ಸಾಗಿತ್ತು. ಸ್ವಾತಂತ್ರ್ಯದ ಕಿಡಿಯನ್ನು ಜನರ ಮನದಲ್ಲಿ ಹತ್ತಿಸಲು ಇದೂ ಒಂದು  ಅವರ ಒಳ ಉದ್ದೇಶ ವಾಗಿತ್ತು.   ಅದೆ ತಾನೆ ನಿರ್ಮಾಣವಾದ ಪ್ಯಾರಿಸ್ ನಲ್ಲಿನ ಜಗತ್ತಿನ ದೊಡ್ಡ ಲೋಹದ ಗೋಪುರ ವಾದ ಎಫೆಲ್ ಟವರ್ ಜಗದ ಗಮನ ಸೆಳೆದಿತ್ತು . ಅದರಂತೆಯೇ ಲೋಕ ವಿಖ್ಯಾತವಾದ ಕೊಡುಗೆಯನ್ನು  ಅಮೇರಿಕಾ ದೇಶಕ್ಕೆ ನೀಡಲು ನಿರ್ಧಾರವಾಯಿತು. ಅದರ ಫಲವೇ  ಜಗದ್ ವಿಖ್ಯಾತ ಸ್ವಾತಂತ್ರ್ಯಪ್ರತಿಮೆ. ಅದು   ಲೋಹದ ಪ್ರತಿಮೆ  . ಆದರೆ ಅವರ ಯೋಜನೆಗೆ ಮೂರ್ತರೂಪ ಬಂದಿದ್ದು ೧೮೭೧ರಲ್ಲಿ  ಅದೂ ೩ನೇ ನೆಪೋಲಿನ್  ನಿಧನಾನಂತರ.
ಫ್ರೆಡರಿಕ್ ಅಗಷ್ಟೆ ಬಾರತೊಲ್ಡಿ ಇದರ ಶಿಲ್ಪಿ. ಅವರು  151  ಅಡಿ ಎತ್ತರದ ಕಂಚಿನಪ್ರತಿಮೆಯನ್ನ  ಸ್ಥಾಪಿಸಲು ಯೋಜನೆ ಹಾಕಿದ. ಅದರ ಒಟ್ಟು ಎತ್ತರ   305 ಅಡಿಗಳು.ವಿಶ್ವದಲ್ಲೆ ಅತಿ ಎತ್ತರದ ಆಕೃತಿಗಳಲ್ಲಿ ಇದು ಒಂದು. ಇದಕ್ಕೂ ಎತ್ತರದ ಪ್ರತಿಮೆಗಳು ಅಗ ಇದ್ದವು .ಆದರೆ  ಅವು ಕಲ್ಲಿನ ಪ್ರತಿಮೆಗಳು.  ಲೋಹದ ಈ ರಿತಿಯ ಬೃಹತ್ ಪ್ರತಿಮೆ ಇಲ್ಲವೆ ಇಲ್ಲ ಎನ್ನಬಹುದು.  ಎಂಟನೆ ಶತಮಾನದಲ್ಲಿನ  ಚೀನಾದಲ್ಲಿನ ಕಲ್ಲಿನ ಲೇಷನ್ ಬುದ್ಧವಿಗ್ರಹದ ಎತ್ತರ ೨೨೦ ಅಡಿ ಎತ್ತರ . ಅಫ್ಘನಿಸ್ಥಾನದಲ್ಲಿದ್ದ ಒಮಿಯಾನ್ ಬುದ್ಧ ವಿಗ್ರಹದ ಎತ್ತರ ೧೭೫ ಅಡಿ,ಅದು ಇತ್ತೀಚೆಗಷ್ಟೆ  ತಾಲಿಬಾನ ಉಗ್ರರಿಂದ ರಿಂದ ನಾಶವಾಯಿತು.  

ಜಪಾನನಲ್ಲಿನ ಟೋಕಿಯೋಗೆ ೫೦ ಕಿಮೀಟರ್ ದಲ್ಲಿರುವ ಉಷಿಕೋ ಅಮಿದಾ ಬುದ್ದ ನ ವಿಗ್ರಹ  ೧೦೦ ಮೀಟರ್ ಎತ್ತರವಿದೆ . ಅದರ ಪೀಠವು ಸೇರಿದರೆ೩೯೬ ಅಡಿಯಾಗುವುದು.
ಇತ್ತೀಚೆಗೆ ಅನೇಕ ವಿಗ್ರಹಗಳು ಎತ್ತರ ಎತ್ತರಕ್ಕೆ ನಿರ್ಮಿತವಾಗುತ್ತಿವೆ. ಅಷ್ಟೆ ಏಕೆ ನಮ್ಮ ದೇಶದಲ್ಲಿಯೂ ನಿರ್ಮಿತವಾಗುತ್ತಿರುವ ೫೦೦ ಅಡಿ ಮೈತ್ರೇಯಿ ಬುದ್ಧನವಿಗ್ರಹವು ಪ್ರಪಂಚದಲ್ಲೆ ಅತಿ ಎತ್ತರದ  ವಿಗ್ರಹವಾಗಲಿದೆ.                ಎಷ್ಟೆ ಎತ್ತರದ ವಿಗ್ರಹವಾದರೂ ,ಯಾವದೂ ಸ್ವಾತಂತ್ರ್ಯ ಪ್ರತಿಮೆಗೆ ಹೋಲಿಕೆಯಾಗಲಾರವು. ಇಲ್ಲಿ ಗಣನೆಗೆ ಬರುವುದು ಬರಿ ಗಾತ್ರವಲ್ಲ ಅಥವ ಎತ್ತರವಲ್ಲ. ಬೇರೆಲ್ಲಾ   ಪ್ರತಿಮೆಗಳು ರಚಿತವಾಗಿರುವುದು. ಧಾರ್ಮಿಕ ಕಾರಣ ಗಳಿಗಾಗಿ. ಅದರಲ್ಲೂ ವಿಶೇಷವಾಗಿ ಏಷಿಯಾಖಂಡದಲ್ಲಿ ಬುದ್ಧನ ಪ್ರತಿಮೆಯದೆ  ಮೇಲುಗೈ.  ಜಪಾನು, ಚೀನಾ , ಇಂಡೋನೇಷಿಯಾ, ಬರ್ಮ ಮತ್ತು ಶ್ರೀಲಂಕಾದಲ್ಲಿ ಬುದ್ಧನ  ಗೃಹತ್ ಪ್ರತಿಮೆಗಳು ಸಾವಿರಾರು ವರ್ಷದಷ್ಟು ಹಳೆಯವು ಇವೆ. ಈಗಲೂ ನಿರ್ಮಾಣ ವಾಗುತ್ತಿವೆ. ಆದರೆ  ಸ್ವಾತಂತ್ರ್ಯ ಪ್ರತಿಮೆಯದೆ ಒಂದು ವಿಶೇಷ. ಅದಕ್ಕೆ ಜಾತಿ ಧರ್ಮದ ಗಳ ಸೋಂಕಿಲ್ಲ. ಅಲ್ಲದೆ ಒಂದು ಖಂಡದಲ್ಲಿ ನಿರ್ಮಿತವಾಗಿ ಇನ್ನೊಂದು  ಖಂಡಕ್ಕೆ ಸಾಗಣಿಕೆಯಾಗಿ ಸ್ಥಾಪನೆಯಾಗಿರುವುದು ಇದರ ಹೆಗ್ಗಳಿಕೆ. ಅದೂ ಒಂದು ರಾಷ್ಟ್ರದ ಜನರಿಂದ ಮತ್ತೊಂದು ರಾಷ್ಟ್ರದ ಜನರಿಗೆ  ಸ್ವಾತಂತ್ರ್ಯ ಶತಮಾನೋತ್ಸವದ ನೆನಪಿನ ಕಾಣಿಕೆ.   ಅದಕ್ಕೆಂದೆ   ಅಂದು  , ಇಂದು  ಮತ್ತು ಮುಂದೆಯೂ ಇದರ ಆಕರ್ಷಣೆ  ಅದಮ್ಯವಾದದು.
            ಈ ಉದ್ಧೇಶಕ್ಕಾಗಿ ಪ್ರಾಂಕೊ ಅಮೇರಿಕನ್  ಸಮಿತಿಯನ್ನು ರಚಿಸಲಾಯಿತು. ಮೊದಲ ಹೆಜ್ಜೆಯಾಗಿ ಪ್ರಖ್ಯಾತ ಶಿಲ್ಪಿ           ಫ್ರೆಡ್ರಿಕ್ ಆಗಷ್ಟೆ ಬಾರ್ತೋಲ್ಡಿ ಯನ್ನು   ಅಮೇರಿಕಕ್ಕೆ ಕಳುಹಿಸಲಾಯಿತು. ಅವನು  ಮೊದಲು ಸೈನ್ಯದಲ್ಲಿ ಕಮ್ಯಾಂಡರ್ ಆಗಿ ಸೇವೆ ಸಲ್ಲಸಿದ್ದ. ನಂತರ ಬೃಹತ್ ಪ್ರತಿಮೆಗಳ ಶಿಲ್ಪಿಯಾಗಿ ಹೆಸರು ಮಾಡಿದ. ಆಗ ನಿಯೋ ಕ್ಲಾಸಿಕಲ್ ಶೈಲಿ ಪ್ರಚಾರದಲ್ಲಿತ್ತು. ಗ್ರೀಕೊ ರೋಮನ್ ಶೈಲಿಯಲ್ಲಿ  ದೊಡ್ಡ ದೊಡ್ಡ ಪ್ರತಿಮೆಗಳ ನಿರ್ಮಾಣ   ಆಗ ಜನಪ್ರಿಯವಾಗಿತ್ತು. ಅಮೇರಿಕಾಕ್ಕೆ ಹೊರಟಾಗ  ಅವನೊಂದಿಗೆ ಅವನ ಕೆಲ  ಕಲಾಕೃತಿಗಳೂ ಇದ್ದವು. ನ್ಯೂಯಾರ್ಕ್ ನಲ್ಲಿನ   ಕಲಾವಿದರು, ಲೇಖಕರು, ರಾಜಕಾರಣಿಗಳ ಜೊತೆ ಸಮಾಲೋಚನೆ ಮಾಡಿದ. ಶತಮಾನೋತ್ಸವದ ನೆನಪಿಗೆ ಸ್ವತಂತ್ರ್ಯ ಪ್ರತಿಮೆ ಸ್ಥಾಪಿಸುವ ಯೋಜನೆ ಎಲ್ಲರ ಮನ ಸೆಳೆಯಿತು. ಈ ಕೆಲಸವನ್ನು ಎರಡೂ ದೇಶದ ಜನರು ಜಂಟಿಯಾಗಿ ಮಾಡಬೇಕೆಂಬ ಸಲಹೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಫೆಂಚರು ಪ್ರತಿಮೆಯ ನಿರ್ಮಾಣದ ವೆಚ್ಚ ವನ್ನು, ಅದರ ಪೀಠ ನಿರ್ಮಾಣದ ಖರ್ಚನ್ನು  ಅಮೇರಿಕನ್ನರು ನೀಡಬೇಕೆಂದು   ತೀರ್ಮಾನವಾಯಿತು.  ಬೃಹತ್ ಪ್ರತಿಮೆಯನ್ನು ಫ್ರಾನ್ಸಿನಲ್ಲಿ ನಿರ್ಮಿಸಿ ಅದನ್ನು ಬಿಡಿ ಬಿಡಿಯಾಗಿಸಿ  ಅಮೆರಿಕಾಗೆ ಸಾಗಿಸಿ ಅಲ್ಲಿ ಜೋಡಣೆ ಮಾಡಬೇಕೆಂದು ನಿರ್ಧಾರವಾಯಿತು. ಈರೀತಿಯಾಗ. ಪ್ರತಿಮೆಯನ್ನು ನ್ಯೂಯಾರ್ಕ ನಗರ  ಮತ್ತು
           ನ್ಯೂಜರ್ಸಿ  ತೀರದ ನಡುವೆ  ೧.೫ ಮೈಲು ದೂರದಲ್ಲಿ ನ  ಅಟ್ಲಾಂಟಿಕ್ ಸಾಗರವನ್ನುಸೇರುವ  ಹಡ್ಸನ್ ನದಿ  ಖಾರಿಯಲ್ಲಿ          ೧೨ ಎಕರೆ  ವಿಸ್ತಾರವಾಗಿರುವ ಬೆಡ್ ಲೋ ದ್ವೀಪದ ಮೇಲೆ ಪೂರ್ವಾ ಭಿಮುಖವಾಗಿ ಸ್ಥಾಪಿಸಲು ಸ್ಥಳ ನಿಗದಿ ಮಾಡಿದರು.  ಆ     ಸ್ಥಳ ಅಮೇರಿಕಾದ ಹೆಬ್ಬಾಗಿಲು.   ಸಾಗರದ ಮೂಲಕ ಅಷ್ಟೆ ಏಕೆ ಅಮೇರಿಕಾಕ್ಕೆ ಬರುವ ಎಲ್ಲರಿಗೂ ಎಲ್ಲ ಸಂಕಲೆಗಳಿಂದ , ಸಂಕಷ್ಟಗಳಿಂದ ವಿಮೋಚನೆ ನೀಡುವ   ಆಶಾದಾಯಕ  ಬದುಕಿನ ಭರವಸೆ ನೀಡುವ  ಪ್ರತಿಮೆ ಅದಾಗಲಿತ್ತು.   
 ಫ್ರಾ ನ್ಸಿಗೆ ಬಂದೊಡನೆ  ನಿಧಿ ಸಂಗ್ರಹದ ಕೆಲಸ ಕೈಗೆತ್ತಿಕೊಳ್ಳಲಾಯಿತು. ಪ್ರತಿಮೆಯ ಅಂದಾಜು ವೆಚ್ಚ ೧ ಮಿಲಿಯನ್ ಡಾಲರು. ಜನರು ಸ್ವಾತಂತ್ರ ಪ್ರಿಯರಾದರೂ ಹಣ ಸಂಗ್ರಹ ಸುಲಭವಾಗಲಿಲ್ಲ.  .ಆದರೆ ಶಿಲ್ಪದ  ಚಿಕ್ಕ ಪ್ರತಿಕೃತಿಗಳನ್ನು ಮಣ್ಣಿನಲ್ಲಿ ತಯಾರಿಸಿ ಅವುಗಳಿಗೆ ಸಂಖ್ಯೆ ನೀಡಿ ಮಾರಾಟ ಮಾಡಿ ಹಣ ಸಂಗ್ರಹಿಸಲಾಯಿತು. ಆದರೂ ಕೊರತೆ ಎದುರಾಯಿತು.ಆಗ ಲಾಟರಿ ಯೋಜನೆ ಹೊಳೆಯಿತು . ಬಾ ರ್ತೋಲ್ಡಿ ಯ  ಎರಡು ಕಲಾಕೃತಿಗಳೂ  ಸೇರಿದಂತೆ  ಆಕರ್ಷಕ ಬಹುಮಾನ ವಿರುವ ಲಾಟರಿ ಯೋಜನೆಯನ್ನು ಘೋಷಿಸಲಾಯಿತು. ಅದು ಜನರ ಮನ ಗೆದ್ದಿತು. ಅಗತ್ಯ ನಿಧಿ ಸಂಗ್ರಹ ವಾದೊಡನೆ   ೧೮೭೫ರಲ್ಲಿ  ಬರೋಬ್ಬರಿ ಅಂದುಕೊಂಡ ಹತ್ತು ವರ್ಷಗಳ ನಂತರ ಪ್ರತಿಮೆಯ ಕೆಲಸ ಪ್ರಾರಂಭ ವಾಯಿತು. ಮೊದಲು ಸ್ವತಂತ್ರ್ಯ ಪ್ರತಿಮೆಯ ಎರಡು  ಮಾದರಿಗಳನ್ನು ತಯಾರಿಸಲಾಯಿತು. ಈಗ ಅವು ಪ್ಯಾರಿಸ್ ನಗರದಲ್ಲಿ  ಜನಾಕಾರ್ಷಣೆಯ ತಾಣಗಳಾಗಿವೆ. ಪ್ರತಿಮೆ ಪೂರ್ಣವಾಗಲೂ  ಹತ್ತುವರ್ಷಗಳೆ  . ಬೇಕಾಯಿತು   ೧೮೮೫ ರಲ್ಲಿ ಅಮೇರಿಕಾ   ಪಯಣಕ್ಕೆ ಸಿದ್ಧವಾಯಿತು. ಸ್ಟೀಲ್ ಮತ್ತು ತಾಮ್ರದ ಈ ಪ್ರತಿಮೆಯ ತೂಕ ೨೨೫ ಟನ್ ಗಳು. ೧೫೧ ಅಡಿ ಎತ್ತರದ ಪ್ರತಿಮೆ , ಪೀಠದ ಮೇಲೆ ನಿಂತಾಗ  ಒಟ್ಟು ಎತ್ತರ ೩೦೫ ಅಡಿ. ಅದು ಗಾಳಿ , ಮಳೆ ,ನೈಸರ್ಗಿಕ ವಿಕೋಪಗಳನ್ನು ಎದುರಿಸಿ ನೂರಾರುವರ್ಷ ನಿಲ್ಲಬೇಕು  ಅದಕ್ಕಾಗಿ   ಈ ಪ್ರತಿಮೆ ಯ ನಿರ್ಮಾಣದಲ್ಲಿನ್ನು ಎಫೆಲ್ ಟವರ್ ನಿರ್ಮಾತೃ ಅಲೆಗ್ಜಾಂಡರ್ ಗುಸ್ತೋವ್ ಎಫೆಲ್ ನ  ಸಹಾಯ ಪಡೆಯಲಾಯತು. ಸ್ಟೀಲಿನ  ನಾಲಕ್ಕು ಬಲವಾದ ಉಕ್ಕಿನ ಕಂಭಗಳ ಮೇಲೆ  ಅಸ್ಥಿ ಪಂಜರದ ಚೌಕಟ್ಟು ನಿರ್ಮಿಸಲಾಯಿತು. ಅದರ ಮೇಲೆ  ೨.೫ ಮಿ. ಮೀ . ದಪ್ಪದ ತಾಮ್ರದ ತಗಡಿನ ಹೊದಿಕೆ ಹಾಕಲಾಗಿದೆ. ಮಹಿಳೆಯನ್ನು ಶಿಲ್ಪಿಯ ಮಡದಿಯ ಮಾದರಿಯನ್ನಾಗಿಸಿ ಮಾಡಿದೆ ಎನ್ನಲಾಗಿದೆ. ಇದು ತುಸು ಆಫ್ರಿಕನ್ ಛಾಯೆ ಯನ್ನೂ ಹೋದಿದೆ , ಮೂಲತಃ ಸುಯೇಜ್ ಕಾಲುವೆಯ ದಡದಲ್ಲಿ ಈಜಿಪ್ಟನಲ್ಲಿ ಸ್ಥಾಪಿಸಲು ತಯಾರಿಸಲಾಗಿತ್ತು ಎಂಬ ಮಾತೂ ಚಾಲತಿಯಲ್ಲಿದೆ. ಪ್ರತಿಮೆಯ ಎತ್ತರ ೧೫೧ ಅಡಿ  ಎತ್ತರದ ಬಲಗೈನಲ್ಲಿ ಪಂಜಿನ ಮಾದರಿಯ ದೀಪವನ್ನು  ಎತ್ತಿಹಿಡಿದು ಪೂರ್ವಾಭಿಮುಖವಾಗಿ ನಿಂತಿದೆ ಎಡಗೈನಲ್ಲಿ ಪುಸ್ತಕವಿದೆ.  ಅದರ ಮೇಲೆ. ಜೂನ್ ೪ .೧೭೭೬ ಎಂಬ ಬರಹ ಇದೆ . ಅದು ಅಮೇರಿಕಾ ಸ್ವತಂತ್ರವಾದ ದಿನ. ತಲೆಯ ಮೇಲಿನ ಕಿರೀಟದಲ್ಲಿ ಏಳು ಕಿರಣ ಗಳಿವೆ . ಅವು ಜಗತ್ತಿ ಏಳು ಭೂ ಖಂಡಗಳನ್ನು ಪ್ರತಿನಿಧಿಸುತ್ತವೆ,  ಬೆಳಕಿನ ಸಪ್ತವರ್ಣಗಳ ಸಂಕೇತವೂ ಆಗಿರಬಹುದು. ಸಪ್ತ ಸಾಗರಗಳ ಪ್ರತೀಕವೂ ಅಹುದು.ಅವುಗಳ ನಡುವಿನ ಅವಕಾಶವು ದೊಡ್ಡ ಕಿಟಕಿಗಿಂತ ವಿಸ್ತಾರ. ಅದರ ಉಡುಗೆ ರೋಮನ್ ಉಡುಪನ್ನು ಹೋಲುತ್ತದೆ ಅದು ಧರಿಸಿರುವಂತೆ ಉಡುಪು ತಯಾರಿಸಲು  ೪೦೦೦ ಗಜ ಬಟ್ಟೆಬೇಕಾಗಬಹುದು. ಅದರ ಕೆಳಗೆ ಇರುವ ಮುರಿದ ಸರಪಳಿಯು ಗುಲಾಮಗಿರಿಯ ನಿರ್ಮೂಲನದ ಸಂಕೇತ.  ಪ್ರತಿಮೆಯನ್ನು ೩೫೦ ತುಂಡುಗಳಾಗಿ ಮಾಡಿ ಸುಮಾರು ೨೦೦ ಕಟ್ಟಿಗೆ ಪೆಟ್ಟಿಗೆಗಳಲ್ಲಿ ಅಮೇರಿಕಾಕ್ಕೆ ಸಾಗಿಸಲಾಯಿತು. ನಂತರ ಪ್ರತಿಮೆಯನ್ನು ಜೋಡಿಸಲಾಯಿತು.
ಫ್ರಾನ್ಸ ನ ಜನ ಮಿಲಿಯನ್ ಗಟ್ಟಲೆ ನಿಧಿಸಂಗ್ರಹಿಸಿ ಪ್ರತಿಮೆ ತಯಾರಿಸ ಕಳುಹಿಸಿಲು ಸಿದ್ಧವಾದರೂ.  ಅದನ್ನು ಸ್ಥಾಪಿಸಲು ಅಮೇರಿಕಾದಲ್ಲಿ ಹೆಣಗಾಡಿದರು. ಆ ಬೃಹತ್ ಪ್ರತಿಮೆ ನಿಲ್ಲಿಸಲು ದೃಢವಾದ ಪೀಠ ನಿರ್ಮಾಣವಾಗಬೇಕಿತ್ತು. ನಕ್ಷೆಯ ಪ್ರಕಾರ ಪೀಠದ ಎತ್ತರ  ಪ್ರತಿಮೆಗಿಂತ ಹೆಚ್ಚಾಗಿರಲೇ ಬೇಕಿತ್ತು ಅದು ೧೫೪ ಅಡಿ ಇರಬೇಕೆಂದು ನಿರ್ಧಾರವಾಗಿತ್ತು. ಹನ್ನೊಂದು ಮೂಲೆಯ  ನಕ್ಷತ್ರಾಕಾರದ ಪೀಠದ ವಿನ್ಯಾಸ ಸಿದ್ಧವಾಗಿತ್ತು.  ಕಾಂಕ್ರೀಟ್  ರಚನೆಯ ತೂಕ ಸರಿ ಸುಮಾರು  ೨೭೦೦೦ ಟನ್  ಅಗುತ್ತಿತ್ತು.ಅಂಥಹ ಮಜಭೂತಾದ ಕಾಂಕ್ರೀಟು  ರಚನೆಗೆ ಹಣ ಹೊಂದಿಸಲು ಅಮೆರಿಕಾದ್ಯಂತ ಪ್ರಚಾರ ಮೊದಲಾಯಿತು. ಪೀಠದ ವಿನ್ಯಾಸ ಮಾಡಲು  ಹೆಸರಾಂತ ಶಿಲ್ಪಿ ರಿಚರ್ಡ ಮೋರಿಸ್ ನನ್ನು ನೇಮಿಸಲಾಯಿತು. ಅಂದಾಜು ವೆಚ್ಚ ಒಂದು ಮಿಲಿಯನ್ ಡಾಲರಾಗುವುದೆಂದು ಲೆಕ್ಕಹಾಕಲಾಯಿತು. ನಿಧಿಸಂಗ್ರಹಕ್ಕಾಗಿ  ಸ್ವಾತಂತ್ರ್ಯ ಪ್ರತಿಮೆಯ  ಜ್ಯೋತಿ ಹಿಡಿದ ಕೈಯನ್ನು ಮಾತ್ರ ಅಮೇರಿಕಾಕ್ಕೆ ಬಹಳ ಮುಂಚೆಯೇ  ಕಳುಹಿಸಲಾಗಿತ್ತು . ಅದರ ಎತ್ತರ ೩೦ ಅಡಿಗಳು. ಕಬ್ಬಿಣದ ಏಣಿಯ ಮೂಲಕ ಹತ್ತಿ  ಜ್ಯೋತಿಯ ಸುತ್ತಲೂ ಇರುವ ವರಾಂಡದಲ್ಲಿ  ಸಂದರ್ಶಕರು ಓಡಾಡಬಹುದಿತ್ತು. ಅದಕ್ಕೆ  ೫೦ ಸೆಂಟ್ಸ  ಪ್ರವೇಶ  ಶುಲ್ಕವನ್ನು ನಿಗದಿ ಪಡಿಸಲಾಯಿತು. ಅದನ್ನು ಅಮೇರಿಕಾದ ಎಲ್ಲ ಪ್ರಮುಖ ನಗರಗಳಲ್ಲಿ ಪ್ರದರ್ಶನ ಮಾಡಿ ಹಣ ಸಂಗ್ರಹಿಸಲಾಯಿತು. ಆದರೆ ಸಂಗ್ರಹವಾದ ನಿಧಿ ಯಾವುದಕ್ಕೂ ಸಾಲದು. ರಾವಣನ ಹೊಟ್ಟೆಗೆ ಮೂರುಕಾಸಿನ ಮಜ್ಜಿಗೆಯಂತೆ.
       ಫ್ರಾನ್ಸಿನಲ್ಲಿ ಪ್ರತಿಮೆ ಏನೋ ಸಿದ್ಧವಾಯಿತು  ಆದರೆ ಅಮೇರಿಕಾದಲ್ಲಿ ಅದನ್ನು ಸ್ಥಾಪಿಸಲು ಅಗತ್ಯವಾದ ಪೀಠವೆ ಸಿದ್ಧವಾಗಿರಲಿಲ್ಲ. ಫ್ರಾನ್ಸನವರು ಪ್ರತಿಮೆ ನಿಡಿದ್ದಾರೆ  ಅದರ ಸ್ಥಾಪನೆಗೆ ನಾವೇಕೆ ಹಣ ನೀಡ ಬೇಕು  ಎಂದು ಕೆಲವರ ವಾದ. ಅದನ್ನು ನ್ಯೂಯಾರ್ಕ ನಗರದಲ್ಲಿ ಸ್ಥಾಪಿಸುವರು.ಅಲ್ಲಿನವರೆ  ಹಣ ನೀಡಲಿ ಎಂದು ಬೇರೆ ರಾಜ್ಯಗಳವರು ವಾದಿಸಿದರು. ಪ್ರತಿಮೆ ತಯಾರಿಸಲೇ ೧ ಮಿಲಿಯನ್ ಡಾಲರ್  ವೆಚ್ಚವಾಗಿದೆ   ಅದರ ಪೀಠ ನಿರ್ಮಾಣಕ್ಕೆ  ೧ ಮಿಲಿಯನ್ ಡಾಲರು  ಖರ್ಚು ಮಾಡುವುದು ಮೂರ್ಖ ತನ ಎಂದು ಹೀಯಾಳಿಸಲಾಯಿತು . ಅದಕ್ಕಾಗಿ ಅನುದಾನ ನೀಡುವ ಪ್ರಸ್ತಾವನೆಯನ್ನು ಅಮೇರಿಕಾ ಕಾಂಗ್ರೆಸ್ ತಿರಸ್ಕರಿಸಿತು.  ಬೇಡಿಕೆಯನ್ನು  ಅರ್ಧಕ್ಕೆ ಇಳಿಸಿದರೂ ನ್ಯೂಯಾರ್ಕ ರಾಜ್ಯವಾಗಲೀ ಅಥವ ನ್ಯೂಯಾರ್ಕನಗರಸಭೆಯಾಗಲಿ  ೫೦೦೦೦ ಡಾಲರು  ಹಣ ಕೊಡಲು ಒಪ್ಪಲಿಲ್ಲ. ಫಿಲೆಡೆಲ್ಫಿಯಾ ಮತ್ತು ಇತರ ನಗರಗಳು ಹಣ ಕೊಡಲು ಮುಂದಾದವು. ಆದರೆ ಅವರು  ಪ್ರತಿಮೆಯನ್ನು ತಮ್ಮಲ್ಲಿ ಯೇ  ಸ್ಥಾಪನೆ ಮಾಡಬೇಕೆಂದು ಶರತ್ತು  ಹಾಕಿದರು. ಅದಕ್ಕೆ ಫ್ರಂಚರು ಒಪ್ಪಲು ಸಿದ್ಧವಾಗಲಿಲ್ಲ. ಹಾಗಾಗಿ  ಸ್ವಾತಂತ್ರ  ಪ್ರತಿಮೆ ಸಿದ್ಧ ವಾಗಿ ವರ್ಷ ಕಳೆದರೂ ಅಮೇರಿಕಾದಲ್ಲಿ ಅದನ್ನು ಸ್ಥಾಪಿಸುವ ಪೀಠದ ರಚನೆ ನೆನೆಗುದಿಗೆ   ಬಿದ್ದು ಪ್ರತಿಮೆ ಫ್ರಾನ್ಸಿನಲ್ಲಿಯೇ ಉಳಿಯುವುದೇನೊ ಅನಿಸಿತು.ಇನ್ನೇನು ಸ್ವಾತಂತ್ರ್ಯ ಪ್ರತಿಮೆಯ ವಿಷಯ  ಕೈ ಬಿಟ್ಟಂತೆಯೇ  ಎಂದು ಎಲ್ಲರೂ ಅಂದು ಕೊಂಡರು .  ಆಗ  ಹಂಗೆರಿ ಮೂಲದ ಜೋಸೆಫ್ ಪುಲ್ಟಿಜರ್ ನಿಧಿ ಸಂಗ್ರಹಣೆಗೆ ಮುಂದೆ ಬಂದ. ಅವನು ವರ್ಲ್ದ ಎಂಬ ಪತ್ರಿಕೆಯ ಪ್ರಕಾಶಕ, ಹತ್ತು  ಸಾವಿರ ಪ್ರಸಾರವಿದ್ದ ನ್ಯೂಯಾರ್ಕನ ಪತ್ರಿಕೆ ಅದು. ಅವನು ನಿಧಿ  ಸಂಗ್ರಹಕ್ಕೆ ಚಳುವಳಿಯನ್ನೆ ಪ್ರಾರಂಭಿಸಿದ. ಅವನು ಒಂದೆ  ಕಲ್ಲಿನಲ್ಲಿ  ಮೂರು ಹಕ್ಕಿ ಹೊಡೆಯಲು ಹೊಂಚುಹಾಕಿದ. ಮೊದಲನೆಯದಾಗಿ ಸ್ವಾತಂತ್ರ್ಯ ಪ್ರತಿಮ ಯ ಸ್ಥಾಪನೆ, ಎರಡನೆಯದಾಗಿ ತನ್ನ ಪತ್ರಿಕಾ ಪ್ರಸಾರದ ಹೆಚ್ಚಳ , ಮೂರನೆಯದಾಗಿ ನಿರಾಸಕ್ತಿ ತೋರಿದ ನ್ಯೂಯಾರ್ಕನ ನವ ಕುಬೇರರಿಗೆ ಪಾಠ ಕಲಿಸುವುದಾಗಿತ್ತು. ಪ್ರತಿ ದಿನ ಪತ್ರಿಕೆಯಲ್ಲಿ ಪ್ರಚಾರಾಂಧೋಳನ ಪ್ರಾರಂಭಿಸಿದ. ಮೊದಲು ಇದು ಮಿಲಿಯನರುಗಳ,  ಕೋಟ್ಯಧೀಶರ  ಕೊಡುಗೆ ಅಲ್ಲ,  ಫ್ರಾನ್ಸಿನ ಸಾಮಾನ್ಯ ಪ್ರಜೆಯಿಂದ  ಅಮೇರಿಕಾದ ಜನಸಾಮಾನ್ಯರಿಗೆ ಕಾಣಿಕೆ. ಹೀಗೆ  ಸಂದ ಗೌರವ ಉಳಿಸಿಕೊಳ್ಳುವುದು  ಅಮೇರಿಕಾದ ಜನರ ಕರ್ತವ್ಯ . ಅದಕ್ಕಾಗಿ ಶ್ರೀಮಂತರನ್ನು ಬೇಡ ಬೇಕಿಲ್ಲ. ಯಾರು ಬೇಕಾದರೂ ಎಷ್ಡು  ಕಡಿಮೆಯಾದರೂ   ಕೊಡುಗೆ ನೀಡಬಹುದು , ಸೆಂಟ, ಡೈಮ್ , ಕ್ವಾರ್ಟರು, ಡಾಲರು ಯಾವದೂ ಚಿಕ್ಕದಲ್ಲ. ಎಂದು ಪ್ರಚಾರ ಮಾಡಿದ. ಅಷ್ಟೆಅಲ್ಲ  ಪ್ರತಿದಿನ ದಾನಿಗಳ ಹೆಸರನ್ನು ಎಷ್ಟೆ ಕೊಟ್ಟಿರಲಿ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದ. ಬಹಶಃ ಪ್ರಪಂಚದಲ್ಲೆ ಸಾರ್ವಜನಿಕ ಕಾರ್ಯಕ್ಕಾಗಿ ನಿಧಿ ಸಂಗ್ರಹಿಸಲು ಭಿನ್ನ ಬೇಧವಿಲ್ಲದೆ ಜನಸಾಮಾನ್ಯರ ಹೆಸರನ್ನು ಪತ್ರಿಕೆಯಲ್ಲಿ ಪ್ರಕಟಿಸಿದ ಮೊದಲ ಪ್ರಯತ್ನ ಅದಾಗಿತ್ತು. ಈಗ ಬರ,  ಭೂಕಂಪ, ನರೆ ಹಾವಳಿ ಯಾದಾಗ ಅನೇಕರು ನಿಧಿ ಸಂಗ್ರಹಮಾಡಲು ಅದೇ ಪ್ರೇರಣೆ  ಎನ್ನಬಹುದು. ಪುಲಿಟ್ಜರನ ಈ ಉಪಾಯ ಜನರ ಮನ ಗೆದ್ದಿತು. ದೇಶದ ಅಭಿಮಾನದ ಪ್ರಶ್ನೆ ಬಂದಾ ಗ  ಜನೆ ಎಚ್ಚೆತ್ತರು. ಮಹಾನ್ ಕೆಲಸದಲ್ಲಿ ತಮ್ಮದೂ ಕಿರು ಕಾಣಿಕೆ ಇರಲಿ ಎಂದು ನಿಧಿ ಸಂಗ್ರಹ ದಲ್ಲಿ ಭಾಗವಹಿಸಿದರು.ಮೇಲಾಗಿ ಸ್ವಾತಂತ್ರ್ಯದ  ಸಂಕೇತ ಎಂಬ ಅಭಿಯಾನ  ಕಪ್ಪು ಅಮೇರಿಕನರ ಮನ ಮುಟ್ಟಿತು. ಕೂಲಿಕಾರರು ,ಕಾರ್ಮಿಕರು, ವಿದ್ಯಾರ್ಥಿಗಳು , ಮಕ್ಕಳು ,ಮುದುಕರು ಕೈಲಾದಷ್ಟು ಕೊಡುಗೆ ನೀಡಿ  ಕೃತಾರ್ಥರಾದರು. ಹನಿ ಹನಿ ಕೂಡಿ ಹಳ್ಳವಾಯಿತು . ಹಳ್ಳ ಹೊಳೆಯಾಯಿತು . ವಿಶೇಷ ಎಂದರೆ ೧.೨ಮಿಲಿಯನ್ ಡಾಲರು ನಿಧಿ  ಸಂಗ್ರಹವಾಯಿತು. ಅದನ್ನು ನೀಡಿದವರು ೧.೨೫ ಮಿಲಿಯನ್ ದಾನಿಗಳು . ಅಂದರೆ ಪ್ರತಿಯೊಬ್ಬರೂ ೮೫ ಸೆಂಟ್ಸ ನೀಡಿದಂತಾಗಿತ್ತು. ಜನಸಾಮಾನ್ಯರ ಮನ ಮುಟ್ಟಿ ಮಿಲಿಯನ್ ಗಟ್ಟಲೆ ಜನರನ್ನು ಈ ಕೆಲಸದಲ್ಲಿ ತೊಡಗಿಸಿದ ಕೀರ್ತಿ ಅವನದಾಯಿತು.  ಹೀಗೆ ನಿಧಿ ಸಂಗ್ರಹ ಏರಿದಂತೆಲ್ಲ ಗೆಲ್ಲುವ ಕುದರೆ ಬಾಲ ಹಿಡಿಯಲು ಬಂದವರು ಬಹಳ. ಆದರೆ ಅವರಿಗೆ ಅವಕಾಶ ಕೊಡಲಿಲ್ಲ. ಒಂದು ಔಷಧಿ ಕಂಪನಿಯು ಸ್ವಾತಂತ್ರ್ಯ ಪ್ರತಿಮೆಯ ಕೆಳಗೆ ಪೀಠದ ಮೇಲೆ ತನ್ನ ವಿರೇಚನದ  ಔಷಧಿಯ ಹೆಸರು ಹಾಕಿದರೆ ೨೫ ಸಾವಿರಡಾಲರು ಕೊಡುಗೆ ನೀಡಲು ಮುಂದೆ ಬಂದಿತು. ಸ್ವಾತಂತ್ರ್ಯ ದೇವಿಯು ವಿರೇಚನ ಔಷಧಿಯ ಸಹಾಯದಿಂದ ನಿರ್ಮಿಸಿದ ಪೀಠದ ಮೇಲೆ ನಿಲ್ಲುವುದು ಎಂಥಹ ವಿಪರ್ಯಾಸ ! ಆದರೆ ಆ  ಕೊಡುಗೆಯನ್ನು ನಿರಾಕರಿಸಲಾಯಿತು. ಇದರಿಂದ ಪುಲಿಟ್ಜರ ಖ್ಯಾತಿಯ ಶಿಖರವೇರಿದ. ಅವನ ಪತ್ರಿಕೆ ಎಲ್ಲರ   ಕೈನಲ್ಲಿ ಬರತೋಡಗಿತು . ಜನಸಾಮಾನ್ಯರು ತಾವು ಭಾಗಿಗಳಾದ ಕೆಲಸದ ಪ್ರಗತಿ ಅರಿಯಲು ಪತ್ರಿಕೆಯನ್ನು ನಿತ್ಯವೂ ಓದತೊಡಗಿದರು.. ಅದರ ಪ್ರಸಾರ ಹತ್ತು ಹಲವು ಪಟ್ಟು ಹೆಚ್ಚಾಯಿತು. ಆ ದಿನಗಳಲ್ಲಿ ಯಾರ ಬಾಯಲ್ಲೂ ಪ್ರತಿಮೆ ಯ ಮಾತು, ಯಾರ ಕೈನಲ್ಲೂ ನ್ಯೂಯಾರ್ಕ ವರ್ಲ್ದ   ಪತ್ರಿಕೆ.   ಹೀಗೆ ಪತ್ರಿಕಾ ಪ್ರಪಂಚದಲ್ಲಿ ಪುಲಿಟ್ಜಜರ್‌ ಅಜರಾಮರನಾದ. ಈಗಲೂ ಪತ್ರಿಕಾ ರಂಗದಲ್ಲಿನ ಉತ್ಕೃಷ್ಟ ಸಾಧನೆಗೆ ಸಲ್ಲುವ ಪ್ರಶಸ್ತಿ ಎಂದರೆ ಪುಲಿಟ್ಜರ್ ಪ್ರಶಸ್ತಿ. ಅದು ಪತ್ರಿಕಾ ಪ್ರಪಂಚದ ನೋಬೆಲ್ ಪ್ರಶಸ್ತಿ ಎನ್ನುವ ಮಟ್ಟಿಗೆ ಪ್ರಖ್ಯಾತವಾಗಿದೆ. ಹಾಗಾಗಿ ೧೮೮೪ ರ ಹೊತ್ತಿಗೆ ಪಶ್ಛಿಮ ಗೋಲಾರ್ಧದಲ್ಲಿ ಅವನ ಪತ್ರಿಕೆ  ಮನೆ ಮಾತಾಯಿತು. ಅತ್ಯಂತ ಹೆಚ್ಚಿನ ಪ್ರಸಾರದ ಪತ್ರಿಕೆಯಾಯಿತು. 

 ಪೀಠವು ಸಿದ್ಧವಾದೊಡನೆ ಪ್ರತಿಮೆಯನ್ನು ೩೫೦ ತುಂಡು ಗಾಳಗಿಸಿ   ೨೦೦ ಪೆಟ್ಟಿಗೆಗಳಲ್ಲಿ ಸಾಗರದ ಮೂಲಕ ಅಮೇರಿಕಾಕ್ಕೆ ತರಲಾಯಿತು ಅದರ ಮರು ಜೋಡಣೆಯಾದ ಮೇಲೆ ಅದ್ಧೂರಿಯಾಗಿ ಅಧ್ಯಕ್ಷ  ಗ್ರೋವರ್ ಕ್ಲೀವ್ ಲ್ಯಾಂಡ್ ೧೮೮೬ ರಕ್ಟೋಬರ್ ೨೮ ರಂದು  ಸ್ವಾತಂತ್ರ್ಯ ಪ್ರತಿಮೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ವರೆಗೆ ಪ್ರತಿಮೆ  ಎಂದರೆ ಮೂಗು ಮುರಿಯುತ್ತಿದ್ದ ನ್ಯೂಯಾರ್ಕನ ಸಿರಿವಂತರು  ಕಾರ್ಯ ಕ್ರಮದ ವೇದಿಕೆಯ ಮೇಲೆ ಕುಳಿತು ಕೊಳ್ಳಲು ಹರಸಾಹಸ ನೆಡಸಿದರು. ಆದರೆ  ಅವಕಾಶಸಿಗಲಿಲ್ಲ.ಅದು ಅಮೇರಿಕದ ಪ್ರಜೆಗಳೆಲ್ಲರ ಹೆಮ್ಮೆಯ ಕುರುಹಾವಾಗಿತ್ತು. ಅಷ್ಟೇ ಏಕೆ ಅದು ಜಗತ್ತಿಗೆ ಸ್ಯಾತಂತ್ರ್ಯ ಮತ್ತು ಅವಕಾಶಗಳ ಸಂಕೇತ ವಾಯಿತು.ಅದರಿಂದ ಮಿಲಿಯನ್ ಗಟ್ಟಲೆ ಹೊಸ ಬಾಳು ಬಯಸಿ ಅಮೆರಿಕ  ಪ್ರವೇಶಿಸಿದ ಜನ  ನೂರಾರು ವರ್ಷದವರೆಗೆ ಭವ್ಯ ಸ್ವಾಗತವನ್ನು ಪಡೆದರು. ಕೆಲವೆ ವರ್ಷಗಳಲ್ಲಿ ಅದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಯಿತು. ನಂತರ ಅದು ವಿಶ್ವ ಪರಂಪರೆಯ ಸ್ಮಾರಕವೂ ಅಗಿದೆ. ಈಗ ಜಗತ್ತಿನಾದ್ಯಂತ ಪ್ರತಿಮೆ  ಎಂದರೆ ಸ್ವಾತಂತ್ರ್ಯ ಎನ್ನುವಷ್ಟು ತದ್ಯಾತ್ಮವಾಗಿದೆ.
ಈ ಪ್ರತಿಮೆಯು ಮಿಲಿಯನ್ ಜನರಿಗೆ ಅವರ ಮನೆಯಿಂದಲೇ ಕಾಣುವ ಹಾಗೆ  ಸ್ಥಾಪಿತ ವಾಗಿದೆ. ದಿನವೂ ಹತ್ತು ಮಿಲಿಯನ್ ಜನ ನಿತ್ಯ ಅದರತ್ತ ಕಣ್ಣು ಹಾಯಿಸತ್ತಾರೆ. ಅಮೇರಿಕಾದ ಪ್ರವಾಸಿ ತಾಣಗಳಲ್ಲಿ ಅದರದೆ ಪ್ರಪ್ರಥಮ ಸ್ಥಾನ.
 ಅವರಿವರೇಕೆ. ಒಂದು ಕಾಲದಲ್ಲಿ ಅಮೇರಿಕದ ಕಡು ವಿರೋಧಿಯಾಗಿದ್ದ ಚೀನದಲ್ಲೆ  ೧೯೮೯ರಲ್ಲಿ ವಿದ್ಯಾರ್ಥಿಗಳು  ಟಾಯನಮಿನ್  ಚೌಕದಲ್ಲಿ  ಸ್ವಾತಂತ್ರ್ಯಕ್ಕಾಗಿ ಚಳುವಳಿ ನಡೆಸಿ ನೂರಾರು ಸಂಖ್ಯೆಯಲ್ಲಿ ಗುಂಡಿನ ದಾಳಿಗೆ ಬಲಿಯಾದಾಗ ,ಅವರ ಸ್ಪೂರ್ತಿಯ ಸೆಲೆ ಅಲ್ಲಿ ಅವರು ಸ್ಥಾಪಿಸಿದ್ದ  ಈ ಪ್ರತಿಮೆಯ ಮಾದರಿಯ ಮೂರ್ತಿ.   
ಅಮೇರಿಕಾದಲ್ಲಿ ಸ್ವತಂತ್ರ್ಯ ಪ್ರತಿಮೆ ಜನಜೀವನದಲ್ಲಿ ಹಾಸು ಹೊಕ್ಕಾಗಿದೆ. ಅದು ನಿಂತಿರುವ ದ್ವೀಪವನ್ನು ಈಗ ಲಿಬರ್ಟಿ ದ್ವೀಪ ಎಂದು ಹೆಸರಿಸಲಾಗಿದೆ. . ಅಲ್ಲಿನದು ಲಿಬರ್ಟಿ ಪಾರ್ಕ.  ಲಿಬರ್ಟಿ ಸ್ವಾತಂತ್ರ್ಯ ಪ್ರತಿಮೆ ಈಗ ರಾಷ್ಟ್ರ ಲಾಂಛನದಷ್ಟೆ ಪ್ರಖ್ಯಾತ.  ಅದರ ಸ್ಮರಣಾರ್ಥ  ಅಂಚೆ ಚೀಟಿಗಳು, ನಾಣ್ಯಗಳು , ಕರೆನ್ಸಿ ನೋಟುಗಳು ಹೊರಬಂದಿವೆ. ಅಚ್ಚರಿ ಎಂದರೆ ಕೆನಡಾ ದೇಶದ ೧೦ ಮಿಲಿಯನ್ ಡಾಲರು ಬ್ಯಾಕ್  ಬಿಲ್ಲಿನಲ್ಲಿ ಈ ಪ್ರತಿಮೆ ಇದೆ. ಆದರೆ ಅದು ಸಾಮಾನ್ಯ  ಚಲಾವಣೆಗಾಗಿಅಲ್ಲ. ಇದು ವರ್ಷದ ಮುನ್ನೂರ ಅರವತ್ತೈದು ದಿನವೂ ಪ್ರವಾಸಿಗಳಿಗೆ ಮುಕ್ತ. ಇದನ್ನು ಎರಡು ಸಾರಿ ಮಾತ್ರ ಮುಚ್ಚಲಾಗಿತ್ತು ೧೯೮೪ ರಲ್ಲಿ ಗಾಳಿಮಳೆಗಳ ದಾಳಿಗೆ ಸಿಲುಕಿ ಶಿಥಿಲವಾಗಿತ್ತು. ಆಮ್ಲದ ಮಳೆಯ ಪರಿಣಾಮವಾಗಿ ತಾಮ್ರದ ತಗಡಿನ ಹೊದಿಕೆ ಬಣ್ಣಗೆಟ್ಟಿತ್ತು. ಅದನ್ನುಮಿಲಿಯನ್ ಗಟ್ಟಲೆ ಹಣ ವೆಚ್ಚಮಾಡಿ ವಿಶ್ವದ ಹೆಸರಾಂತ ಪರಿಣಿತರು ಪ್ರತಿಮೆಯ ಪುನರುತ್ಥಾನ ಮಾಡಿದರು.ನೆಲದಿಂದ ಪೀಠದ ಮೇಲಿನವರೆಗೆ ಲಿಫ್ಟ್ ಅಳವಡಿಸಲಾಯಿತು. ಅಲ್ಲಿಂದ ೩೫೪ ಮೆಟ್ಟಿಲು  ಏರಿದರೆ ಪ್ರತಿಮೆಯ ಶಿರೋ ಭಾಗ ಸೇರಬಹದು.
ಅದನ್ನು ರಕ್ಷಣಾ ದೃಷ್ಟಿಯಿಂದ ಪುನ: ೯/೧೧ ಭಯೊತ್ಪಾದಕರ ದಾಳಿಯನಂತರ ಪ್ರವೇಶ ನಿರ್ಭಂಧಿಸಲಾಯಿತು.ಎರಡು ವರ್ಷದ ನಂತರ ಮತ್ತೆ ಮುಕ್ತವಾಯಿತು. ಆದರೆ ಇತ್ತೀಚಿವರೆಗೆ ಶಿರೋಭಾಗಕ್ಕೆ ಹೋಗಲು ಅನುಮತಿ ಇರಲಿಲ್ಲ. ಇತ್ತೀಚೆಗೆ ಅದೂ ಸಹಾ ಸಂದರ್ಶಕರಿಗೆ ಮುಕ್ತವಾಗಿದೆ. ಆದರೆ ಆರು ತಿಂಗಳು ಮುಂಗಡವಾಗಿ ಅನುಮತಿ ಪಡೆಯ ಬೇಕಾಗುವುದು.
ನ್ಯೂಯಾರ್ಕ ಡೌನ್‌ ಟೌನ್‌ನಲ್ಲಿ  ಕಡಲ ತಡಿಯ ಬ್ಯಾಟರಿ ಪಾರ್ಕನಲ್ಲಿ  ಟಿಕೆಟ್‌ ಪಡೆದು ನೌಕೆ ಹತ್ತಿ  ಸ್ವಾತಂತ್ರ್ಯ ಪ್ರತಿಮೆ ನೋಡಲು ಹೋಗಬಹುದು. ಅರ ಜೊತೆಯಲ್ಲಿಯೇ ಎಲ್ಲೀಸ್‌ ದ್ವೀಪವನ್ನು ಸಂದರ್ಶಿಸಬಹುದು. ನ್ಯೂ ಝರ್ಶೀ ಯಿಂದ ಬರಲು ಅವಕಾಶವಿದೆ.ಅಲ್ಲಿಗೆ ಹೋದವರು ಸ್ವಾತಂತ್ರ್ಯ ಪ್ರತಿಮೆಯಂತೆ ಉಡುಗೆ ಧರಿಸಿ , ಮೈಗೆಲ್ಲ ಪೇಂಟ್‌ ಬಳಿದು ಕೊಂಡು ಮಿನಿ  ಪ್ರತಿಮೆಯಂತಿರುವವರ ಜತೆ ಫೋಟೋ ತೆಗೆಸಿ ಕೊಂಡಾಗಲೇ ಯಾತ್ರೆ ಪೂರ್ಣವಾದಂತೆ.ಪ್ರತಿಮೆಯ ಕಾಲಡಿ ಕಡಿದು ಬಿದ್ದಿರುವ  ಬಿಡುಗಡೆಯ ಬೇಡಿ ನೋಡಿದರೆ ರೋಮಾಂಚನ ವಾಗುವುದು.


ಎಮ್ಮಾ ಲಜರೇಸ್ ಬರೆದು ೧೮೮೩ ಅರ್ಪಿಸಿದ ಕವ್ಯಾಂಜಲಿಯು  ಪ್ರತಿಮೆಯ ಸಂಕೇತದ ಸಾರವಾಗಿದೆ.     ” ನ್ಯೂ ಕೊಲಾಸ್ಸಸ್” ಎಂಬ ಸಾನೆಟ್ಟನ್ನು ಈಗ ಪ್ರತಿಮೆಯ ಪೀಠದಲ್ಲಿ ಕೆತ್ತಲಾಗಿದೆ ಅದರ ಕೊನೆಯ ಐದು ಸಾಲುಗಳು ಹೀಗಿವೆ.
ನಿನ್ನ ಪುರಾತನ ಭೂಮಿ , ಭವ್ಯ ಪರಂಪರೆ ನಿನಗಿರಲಿ
ನಿನ್ನಲ್ಲಿನ ದಣಿದವರ, ಬಡವರ  ನನ್ನಲ್ಲಿಗೆ ಕಳುಹು ,
ಸಂದಣಿಯಲಿ ಸ್ವಾತಂತ್ರ್ಯದ ಉಸಿರಿಗೆ ಕಸಿವಿಸಿ ಪಡುವವರ
ಜನರಿಂದ  ಬಿರಿದ ನಿನ್ನ ತೀರದಿ  ನೊಂದವರ
ಬಿರುಗಾಳಿಗೆ ಬಲಿಯಾಗಿ ನೆಲೆಯಿಲ್ಲದವರ ಕಳುಹು
ನಾ ತೋರುವೆ ದಾರಿ ದೀಪ ಬಂಗಾರದ ಬಾಗಿಲೆಡೆಗೆ

              
                                            

                                       

Friday, November 23, 2012

ಅಮೇರಿಕಾದ ಅನುಭವ-೧



                            ಪ್ರದಾನ
      ಅಂದು ಬೆಳಗ್ಗೆ  ನಾರ್ಥ ಬ್ರನ್ಸವಿಕ್‌  ಲೈಬ್ರರಿಗೆ   ಯಥಾರೀತಿ ಗೆ ಹೊರಟಿದ್ದೆ. ಹಾದಿಯಲ್ಲಿ  ದೊಡ್ಡ ಅಕ್ಷರದ ಬ್ಯಾನರ್‌ಕಾಣಿಸಿತು. ಬಹುಶಃ ಗರಾಜ ಸೇಲ್‌ಇರಬಹುದು ಎಂದುಕೊಂಡೆ. ಇಲ್ಲಿ ಕೊಳ್ಳುಬಾಕ ಸಂಸ್ಕೃತಿಯ ಪರಿಣಾಮವಾಗಿ ಸಂಗ್ರಹವಾದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲಾರದೆ ಗರಾಜ ಸೇಲು, ಯಾರ್ಡ ಸೇಲು ಎಂದು  ಬೇಸಿಗೆಯ ಶನಿವಾರ ಭಾನುವಾರ ಕಾಸಿಗೆ ಎರಡು ಕೊಸರಿಗೆ ಒಂದು ಕೊಟ್ಟು ಕೈತೊಳೆದುಕೊಳ್ಳುವುದು  ಸಾಮಾನ್ಯ. ಆದರೆ ಹತ್ತಿರ  ಹೋಗಿ ನೋಡಿದಾಗ ಗೊತ್ತಾಯಿತು ಅಲ್ಲಿ ನಡೆಯುತ್ತಿದ್ದುದು  ಮಾರಾಟವಲ್ಲ.  ಅಲ್ಲಿ ದೊಡ್ಡ ಅಕ್ಷರದಲ್ಲಿ ಬರೆದಿದ್ದರು  "Give Away"   "ಅಗತ್ಯವಿರುವ ಮನೆಗಳಿಗೆ ಉಚಿತವಾಗಿ  ಕೊಂಡೊಯ್ಯಿರಿ,"
 ಅಷ್ಟೆ ಅಲ್ಲ ಹತ್ತಿರ ಹೋದಾಗ ಗೊತ್ತಾಯಿತು ಅದು  ಒಂದು ಅಭಿಯಾನ ಎಂದು. ಅಲ್ಲಿ  ಹಾಕಿದ ಮೇಜುಗಳ ಮುಂದೆ ಮೂವರು ಕುಳಿತಿದ್ದರು. ಅವರು ಒಂದು ಕರಪತ್ರ, ಅವರ ವಿಜಿಟಿಂಗ್‌ಕಾರ್ಟು ಜೊತೆಗೆ ಒಂದು ಪೆನ್‌.ನೀಡಿದರು. ನಂತರ ಅಲ್ಲೆ ಇದ್ದ ಪುಸ್ತಕದಲ್ಲಿ ಹೆಸರು ವಿಳಾಸ ಬರೆಯಲು ವಿನಂತಿಸಿದರು.ಅಲ್ಲಿರುವ ವಸ್ತುಗಳಲ್ಲಿ  ಮನೆಗೆ ಯಾವುದು ಅಗತ್ಯವಿದೆಯೋ ಅದನ್ನು ಕೊಂಡೊಯ್ಯುವಂತೆ ವಿನಂತಿಸಿದರು. ಜತೆಗೆ ಅಗತ್ಯವಿರುವ ದೊಡ್ಡ ಪ್ಲಾಸ್ಟಿಕ್‌ಚೀಲವನ್ನು ನೀಡಿದರು. ನನಗೆ ತುಸು ಕಕಮಕವಾಯಿತು. ಅದು  ಬಿ.ಸಿ.ಸಿ ಯವರ ಸೇವಾ ಕೆಲಸ. ಅಂದರೆ "ಬ್ರನ್ಸವಿಕ್‌ನ ಚರ್ಚ ಫಾರ್ ಕ್ರಿಸ್ತ " ಅವರ ಕಾರ್ಯಕ್ರಮ.
 ದೇವರ ಕೆಲಸ ಎಂದರೆ ನಾವೆಲ್ಲ ದಾನ, ಧರ್ಮ, ದಕ್ಷಿಣೆ, ಕಾಣಿಕೆ ಗಳದೆ ದರ್ಬಾರು.ಭಕ್ತರು ಕೈಲಾದಷ್ಟನ್ನು ಕೊಟ್ಟು ಕೃತಾರ್ಥರಾಗವರು. ಆದರೆ ಇಲ್ಲಿ ಅವರೆ ಕೊಡುತಿದ್ದಾರೆ.ಇದು ತುಸು ವಿಚಿತ್ರವಾಗಿ ಕಂಡಿತು.ಅಲ್ಲಿ ನೋಡಿದಾಗ ಮಕ್ಕಳ ಆಟದ ಸಾಮಾನು,ಪುಸ್ತಕಗಳು, ಬಟ್ಟೆ ಬರೆ, ಕೊಡುಗೆ, ಅಲಂಕಾರಿಕ ಸಾಮಗ್ರಿ, ವಿಸಿಡಿ,ಪೀಠೋಪಕರಣಗಳು ಪ್ರಿಂಟರ್‌, ಟಿವಿ ,ಇತರೆ  ಎಲೆಕ್ಟ್ರಾನಿಕ್‌ವಸ್ತುಗಳನ್ನು ಮೇಜಿನ ಮೇಲೆ ಒಪ್ಪವಾಗಿ ಜೋಡಿಸಿರುವುರು.  ಇದು ಬಡ ಬಗ್ಗರಿಗೆ ಇರುವ ಕಾರ್ಯ ಕ್ರಮ ಎಂದುಕೊಂಡು ನಾನು ಅಲ್ಲಿಂದ ಕಾಲು ಕಿತ್ತೆ.   ಒಂದು ಗಂಟೆಯನಂತರ ವಾಪಸ್ಸು ಬರುವಾಗ ನೋಡಿದರೆ ಜನ ಕಿಕ್ಕಿರಿದಿದ್ದಾರೆ, ಅಲ್ಲಿ ಕಾರುಗಳು ಸಾಲು ಗಟ್ಟಿ  ನಿಂತಿವೆ.ಹರೆಯದವರು, ಹೆಂಗಸರು ಮಕ್ಕಳು ವಯಸ್ಸಾದವರು ಅಮೇರಿಕನರು, ಆಫ್ರಿಕನರು , ಸ್ಪಾನಿಷ್ ಜನ,   ದೇಸಿಯರು ಎಲ್ಲ ಸೇರಿದ್ದಾರೆ. ಅಲ್ಲಿಂದ ಇಲ್ಲಿಗೆ ಓಡಾಡುತ್ತಾ  ಆಯ್ದು ಕೊಳ್ಳುತಿದ್ದಾರೆ.ಅವರಗೆ ಸಹಾಯ ಮಾಡಲು ಆರೆಂಟು ಜನ ಸ್ವಯಂ ಸೇವಕರು ನಗುನಗುತ್ತಾ ಬಯಸಿದ ವಸ್ತುಗಳನ್ನು ಕಾರಿನೊಳಗೆ ಸಾಗಿಸಲು ಸಹಾಯ ಮಾಡುತಿದ್ದಾರೆ. ಅಲ್ಲಿದ್ದ  ಸ್ವಯಂ ಸೇವಕಿ ಶ್ರೀಮತಿ ಕ್ಯಾರಿನ್‌ ಅವರನ್ನು ಮಾತನಾಡಿಸಿದಾಗ ಗೊತ್ತಾಯಿತು. ಅದು ಬೇಡದ , ಹಳೆಯ ವಸ್ತುಗಳನ್ನು ದಾನ ಮಾಡುವ ಮೇಳವಲ್ಲ. ಸಮುದಾಯದಲ್ಲಿನ ಮನೆಗಳವರು ತಮ್ಮಲ್ಲಿನ ಹೆಚ್ಚಿನ ವಸ್ತುಗಳನ್ನು ಅವುಗಳ ಅಗತ್ಯವಿರುವವರೊಂದಿಗೆ ಹಂಚಿಕೊಳ್ಳುವ ಸೇವಾ ಕಾರ್ಯ. ಸರಳ ಜೀವನನ ಆ ಎಲ್ಲರ ಗುರಿ. ತಮ್ಮ ಸುತ್ತಮುತ್ತ ಇರುವರೆಲ್ಲ ನೆಮ್ಮದಿಯಾಗಿರಲು ತಮ್ಮ ಕೊಡುಗೆ ನೀಡಲು ಅವರು ಸದಾ ಸಿದ್ದ. ಅದರಂದ ಅವರು ಗೃಹ ಬಳಕೆಗೆ ಅತ್ಯವಾದ ಹೆಚ್ಚುವರಿ ವಸ್ತುಗಳನ್ನು ಮಕ್ಕಳ ಆಟಿಎ, ಪುಸ್ತಕ , ಡಿವಿಡಿ , ವಿಸಿಡಗಳನ್ನು ಸಂಗ್ರಹಿಸಿ ಈ ನೀಡುವ ಕಾರ್ಯ ಕ್ರಮ ಹಮ್ಮಕೊಂಡಿದ್ದರು. ಮೊದಲೆ ಫ್ಯಾಷನ್‌ಯುಗ. ಅತ್ಯಾಧುನಿಕವಾದುದು ಪೇಟೆಯಲ್ಲಿ ಬಂದ ತಕ್ಷಣ ಕೊಳ್ಳುವ ತನಕ. ಅವು ಬಂದ ಮೇಲೆ ಮೊದಲು ಇದ್ದದು ಸುಸ್ಥಿತಿಯಲ್ಲಿ ಇದ್ದರೂ  ಬೇಡ. ಅಂಥಹ ಅನೇಕ  ಕುರ್ಚಿ, ಮೇಜು, ಫೋರ್ಕ್,  ಚಮಚ ಬಟ್ಟಲು , ಪ್ಲೇಟು , ಮೊದಲಾದ ಗೈಹೋಪಯೋಗಿ ಸಾಮಾನುಗಳು ಅಲಂಕಾರಿಕ ವಸ್ತುಗಳು . ಪುಸ್ತಕ. ವಿಸಿಡಿ . ಡಿವಿಡಿ ಇದ್ದವು. ಅಲ್ಲಿ ಜಾತಿ ಮತ ಬಣ್ಣದ  ಬೇಧ ಇಲ್ಲ. ಯಾರಾದರೂ ಸರಿ ಅಲ್ಲಿಗೆ ಹೋಗಿ ಪಡೆಯಬಹುದು. ನಗು ನಗುತ್ತಾ ಕೊಟ್ಟು ನಮಸ್ಕಾರ ಹೇಳುವರು.ಮಾಲ್‌ಗೆ  ಹೋಗಿ ಸಾಮಾನು ತಂದಂತೆ. ಆದರೆ ಒಂದೆ ವ್ಯತ್ಯಾಸ. ಇಲ್ಲಿ ಬಿಲ್ಲು ಇಲ್ಲ . ಹಣ ಪಾವತಿ ಅಗತ್ಯವೂ ಇಲ್ಲ.  ಎಲ್ಲ ಸಾಮಗ್ರಿಗಳು ಇವೆ ಎಂದಲ್ಲ. ಬಹುತೇಕ ಇದ್ದವು.   ಅವೂ ಸುಸ್ಥಿತಿಯಲ್ಲಿಯೆ. ಕೆಲವು ಸಿದ್ಧ ಹಾರಪದಾರ್ಥಗಳು ಅಂದರೆ ಬೇಗ ಕೆಡಲಾರದವೂ ಕೂಡ ಅಲ್ಲಿ ಸಾಲಾಗಿಟ್ಟಿದ್ದರು. ಕೋಕ್‌, ಕೆಚಪ್‌, ಜ್ಯೂಸ್‌ಬಾಟಲಿಗಳು ಕ್ಯಾನುಗಳು ಇದ್ದವು.
ಅಲ್ಲಿನ ನಿರ್ವಾಹಕಿ ಶ್ರೀಮತಿ ಕ್ಯಾರಿನ್‌ರನ್ನು ಕೇಳಿದೆ. ಇದು ಹೇಗೆ ಸಾಧ್ಯ? ಕೆಲವು ಹೊಚ್ಚ ಹೊದವೂ  ಇವೆಯಲ್ಲ? ಎಂದು.
 ಅದಕ್ಕೆ ಅವರು ನೀಡಿದ ಉತ್ತರ ಸಮಾಧಾನ ತಂದಿತು. ಅಲ್ಲಿ ಕ್ರಿಸ್‌ಮಸ್‌ಗೆ, ಹುಟ್ಟುಹಬ್ಬಕ್ಕೆ ಹಾಗೂ ಅನೇಕ ಸಂಭ್ರಮಾಚರಣೆ  ಸಮಯದಲ್ಲಿ  ಕೊಡುಗೆ ನೀಡುವುದು ಸಾಮಾನ್ಯ. ಅನೇಕ ಸಲ ಇರುವ ವಸ್ತುಗಳೆ ಮೂರು ನಾಲಕ್ಕು ಸೆಟ್‌ ಬರುವವು.ಅವನ್ನು ಹಾಗೆ ಇಟ್ಟು ಕೊಳ್ಳುವುದಕ್ಕಿಂತ ಅದರ ಅಗತ್ಯವಿರುವವರಿಗೆ ಕೊಟ್ಟರೆ ತೃಪ್ತಿಯಾಗುವುದು. ಅಲ್ಲಿನ ಅನೇಕ ವಸ್ತುಗಳು ಆ ಮನೋಭಾವದವರ ಕೊಡುಗೆಯ ಫಲ..
ಅನೇಕರಿಗೆ ಸರಳ ಜೀವನದ ಹಂಬಲ. ಹೆಚ್ಚುವರಿಯಾಗಿ ಕಾಣಿಕೆಯಾಗಿ ಬಂದವನ್ನು ಬೇಡ ಎಂದರೆ ಕೊಡಲು ಬಂದವರ  ಮನಸ್ಸಿಗೆ ನೋವು.   ಸರಿ ಹಾಗೆ ಬಂದುದನ್ನು ಹೀಗೆ ವಿನಿಯೋಗ ಮಾಡಿದರೆ ಇಬ್ಬರಿಗೂ ನೆಮ್ಮದಿ.
ಈ  ಕೊಂಡೊಯ್ಯುವ ಕೆಲಸ ನಾಲಕ್ಕು ಗಂಟೆಯ ವರೆಗೆ ನೆಡೆದೆ ಇತ್ತು.  ಸಂಜೆ ಅವರನ್ನು ವಿಚಾರಿಸಿದೆ. ಅವರ ಪ್ರಕಾರ ಯೇಸುವಿನಂತೆ ಮಾನವ ಜನಾಂಗವನ್ನು ಪ್ರಿತಿಸುವುದು, ಅವರ ಸೇವೆ ಮಾಡುವುದು ಮತ್ತು ಅವರಿಗೆ ನೆಮ್ಮದಿ ಕೊಡುವುದೆ ಅತಿ ಮುಖ್ಯ.  ಉಳ್ಳವರು ಅಗತ್ಯವಿರುವವಿರಿಗೆ ನೆರವು ನೀಡುವುದೆ ಧರ್ಮ.
ಅದಕ್ಕನುಗುಣವಾಗಿ ಅವರು ಕಾರ್ಯಕ್ರಮಗಳನ್ನು ರೂಪಿಸುವರು.ಅದರಲ್ಲಿ ಕಾರು ವಾಷಿಂಗ್‌ಕಾರ್ಯ ಕ್ರಮವೂ ಇದೆ. ಅವರು ನೀರಿನ, ವ್ಯಾಕ್ಯೂಮಿನ  ಮತ್ತು ಸಾಬೂನಿನ ವ್ಯವಸ್ಥೆ ಮಾಡುವರು. ಯಾರು ಬೇಕಾದರೂ  ಸ್ವಯಂ ಸೇವಕರಾಗಿ ಬಂದವರ  ಕಾರುಗಳ ಶುಚಿ ಮಾಡಬಹುದು.. ಅದು ಸೇವೆ. ಕಾರಿನ ಮಾಲಕರು ಸ್ವಾಭಾವಿಕವಾಗಿ ಸ್ವಂತ ಖುಷಿಯಿಂದ  ಬರುವರು.. ಹೊರಗೆ ಕಾರು ತೊಳೆಸಿದರೆ. ಕನಿಷ್ಟ ೧೫  ಡಾಲರು ಶುಲ್ಕ ಕೊಡುವರು. ಇಲ್ಲಿ ಧರ್ಮದ ಕೆಲಸ. ಸ್ವಾಬಾವಿಕವಾಗಿಯೆ ಎಲ್ಲರೂ ಧಾರಾಳವಾಗಿ ಹಣದ ಕೊಡುಗೆ ನೀಡುವರು. ಅಲ್ಲಿ ನನಗೆ ಬಹು ಕಂಡ ಮೋಜಿನ ಸಂಗತಿ  ಎಂದರೆ ಕೆಲವರು ಮಕ್ಕಳ ಸಮೇತ ಕಾರಿನಲ್ಲಿ  ಬಂದರು. ಅಲ್ಲಿ  ಅವರ ಮಕ್ಕಳೆ ಕುಣಿದಾಡುತ್ತಾ  ಕಾರು ತೊಳೆದರು. ನಂತರ ಅಲ್ಲಿರುವ ಕಾಣಿಕೆ ಡಬ್ಬಿಯಲ್ಲಿ ಕಾಸು ಹಾಕಿ ಖುಷಿಯಿಂದ ಹೋದರು.   ಮನೆಯಲ್ಲಿ ಮಾಡು ಎಂದರೆ ಗೊಣಗುವ ಮಕ್ಕಜಳು ಇಲ್ಲಿ ಇತರರನ್ನು ನೋಡಿ ಆಡಾಡುತ್ತಾ ಕಾಯಕದ ಗೌರವ ಕಲಿಯುವರು. ಮಕ್ಕಳು ಮಾಡುವರಲ್ಲ ಎಂಬ ನೆಮ್ಮದಿ  ತಾಯಿತಂದೆಯರಿಗೆ.ಸಂಗ್ರಹವಾದ  ಹಣವನ್ನು ಈ ಬಾರಿ ಜೋಪ್ಲಿನ್‌ನಲ್ಲಿನ ಬಿರುಗಾಳಿ ಸಂತ್ರಸ್ತರ ಸಹಾಯಾರ್ಥ ಬಳಸಲಾಗುವುದು  ಎಂದು ತಿಳಿಯಿತು
ಅವರ ಇನ್ನಂದು ಜನಪ್ರಿಯ ಕಾರ್ಯ ಕ್ರಮ ಬಾನಿನ ಅಡಿಯಲ್ಲಿ ಬಯಾಸ್ಕೋಪು. ಅಂದರೆ ಬೇಸಿಗೆಯಲ್ಲಿ  ಇಲ್ಲಿನ ಜನ ಸದಾ ಹೊರಗೆ ಇರಲು ಬಯಸುವರು. ಅದಕ್ಕಾಗಿ ಬಯಲಲ್ಲಿ ಕುಟುಂಬ ಸಮೇತ ಹೆಂಗಸರು ಮಕ್ಕಳು ನೋಡಬಹುದಾದ ಸಿನೇಮಾ ಪ್ರದರ್ಶಿಸುವರು. ಒಬ್ಬರಿಗೆ ಒಂದು ಡಾಲರು. ಅದರ ಜೊತೆ ಪ್ರತಿಯೊಬ್ಬರಿಗೂ ಪಾಪ್‌ಕಾರ್ನ್‌ಉಚಿತ.  ಮಜಾ ಎಂದರೆ ನಮ್ಮ ಭಾರತದಲ್ಲಿನ  ಬಯಲಾಟದಂತೆ. ಅಲ್ಲಿ ಕೂಡಾ  ಆಸನ ವ್ಯವಸ್ಥೆ ಇಲ್ಲ. ಬೇಕಾದರೆ ನೋಡುಗರು ಕುರ್ಚಿ ಬೆಂಚು ಒಯ್ಯ ಬಹುದು. ಇಲ್ಲವೆ ಕಾರಿನಲ್ಲೆ ಕುಳಿತು ಸಿನೆಮಾ ನೋಡಬಹುದು.ಸ್ವಟರ್ ಜಾಕೀಟು ಬೇಕಾದರೆ ರಗ್ಗು , ಬ್ಲಾಂಕೆಟ್ ತಂದರೂ ಸರಿ.   ಅದು ಅವರವರ ಅನುಕೂಲ. ಒಟ್ಟಿನಲ್ಲಿ ಆರಾಮಾಗಿ ಎಲ್ಲರ ಜತೆ ಕಲೆತು ಮಾತನಾಡುತ್ತಾ ನೋಡಬಹುದು.ನನಗೆ ಆಗ ನಲವತ್ತು ವರ್ಷಗಳ ಹಿಂದೆ ಬೆಂಗಳೂರಿನ ಬನ್ನೇರು ಘಟ್ಟದಲ್ಲಿನ ಡ್ರೈವ್‌ಇನ್‌ಸಿನಿಮಾದ ನೆನಪಾಯಿತು.,ಅಲ್ಲದೆ  ಮೂವತ್ತೈದು ವರ್ಷದ ಹಿಂದೆ ಕರ್ನಾಟಕದಲ್ಲೆ ಮೊದಲ ಬಾರಿಗೆ ಟಿವಿ ಬಂದಾಗ ಹೈದ್ರಾಬಾದಿನಿಂದ  ಪ್ರಸಾರ ವಾಗುತಿದ್ದ ಕನ್ನಡ ಕಾರ್ಯ ಕ್ರಮಗಳನ್ನು ನೋಡಲು ಅನುಕೂಲ ವಾಗುವಂತೆ ಗುಲ್ಬರ್ಗ ಜಿಲ್ಲೆ ಯ ಹಳ್ಳಿಗಳಲ್ಲಿ  ಪ್ರತಿ ಪಂಚಾಯತ್‌ಬೋರ್ಡುಗೆ ಒಂದು ಕಪ್ಪು ಬಿಳುಪು ಟಿವಿ ಕೊಡಲಾಗಿತ್ತು. .ಆಗ ನಾವು ಕೆಂಪುಬಾಳೆಹಣ್ಣಿಗೆ ಪ್ರಸಿದ್ದವಾದ ಕಮಲಾಪುರದಲ್ಲಿದ್ದವು. ಆ ಊರಲ್ಲಿ ಟಿವಿಯನ್ನು ಪ್ರತಿ ಭಾನುವಾರ ರಾತ್ರಿ  ಶಾಲೆಯ ಮುಂದಿನ ಬಯಲಲ್ಲಿ ಇಡಲಾಗಿತಿತ್ತು. ಊರಿನ ಜನರೆಲ್ಲ  ಅಂದು ಅದರಲ್ಲಿ ಬರುವ ಕನ್ನಡ ಸಿನೆಮಾ ನೋಡಲು ಬರುತ್ತಿದ್ದರು. ಆಗಲೂ ಸಹಾ ಇಲ್ಲಿಯಂತೆಯ  ಜನ ತಮ್ಮ ತಮ್ಮ ಕುರ್ಚಿ ತಾವೆ ತಂದು ಹಾಕಿಕೊಂಡು  ಟಿವಿಯಲ್ಲಿ  ಸಿನೇಮಾ ನೋಡಿದ ನಂತರ ಮನೆಗೆ ತೆಗೆದುಕೊಂಡು ಹೋಗುತಿದ್ದರು.
 ಹವಾ ನಿಯಂತ್ರಿತ ಥೇಟರಲ್ಲಿ ಕೂತು ನೋಡುವ ಆಧುನಿಕ ಜನ ಬಯಲಲ್ಲಿ ಜಮಾಯಿಸಿರುವುದು ಕಂಡು ನನಗೆ ಅಚ್ಚರಿಯಾಯಿತು.ಈಗ ಐವತ್ತು ವರ್ಷಗಳ ಹಿಂದೆ ನಮ್ಮ ಹಳ್ಳಿಗಳಲ್ಲೂ ವಾರ್ತಾ ಮತ್ತು ಪ್ರಚಾರ ಇಲಾಖೆಯವರು ಸುದ್ಧಿ ಚಿತ್ರಗಳನ್ನು ಪ್ರದರ್ಶಿಸಿದಾಗ ನೋಡಲು ಹಳ್ಳಿಗರಿಗಿದ್ದ ಹುಮ್ಮಸ್ಸು  ಮರುಕಳಿಸಿದೆ ಎನಿಸಿತು.
ಈ ಎಲ್ಲ ಕಾರ್ಯಕ್ರಮಗಳ ಉದ್ದೇಶ ಜನ ದ್ವೀಪಗಳಂತಾಗದೆ ಎಲ್ಲರೊಡನೆ ಬೆರೆತು ಒಂದಾಗ ಬೇಕೆಂದು
ನನಗೆ ಖುಷಿಯಾದ ಮತ್ತೊಂದು ಸಂಗತಿ ಎಂದರೆ ಅಲ್ಲಿ ಚರ್ಚಿಗೆ ಬನ್ನಿ ಎನ್ನುವಮಾತಿಲ್ಲ. ಧರ್ಮದ ಬಗ್ಗೆ ಪ್ರವಚನ ಇಲ್ಲ. ಎದ್ದು ಕಾಣುವುದು ಜನರನ್ನು ನೆಮ್ಮದಿಯಿಂದ ಇಡಬೇಕೆನ್ನಿಸುವ ಅವರ ಕಳಕಳಿ ಮಾತ್ರ .
ಅವರ ಪ್ರಕಾರ " ಬಡತನ , ನಿರುದ್ಯೋಗ, ಶಿಕ್ಷಣ ವ್ಯವಸ್ಥೆ, ರಾಜಕೀಯ, ತೆರಿಗೆ , ಅಂತರ್‌ಜಾಲಗಳು ಇವು ಯಾವೂ ನಮ್ಮ  ಸಮಸ್ಯೆಗಳಿಗೆ , ನೋವಿಗೂ ಕಾರಣವಲ್ಲ. ನಮ್ಮೆಲ್ಲರ ದುಖಃಕ್ಕೆ ನೋವಿಗೆ ಕಾರಣ ವಿಘಟಿತವಾಗುತ್ತಿರುವ  ಕುಟುಂಬ ವ್ಯವಸ್ಥೆಮುರಿದು ಬಿದ್ದ ಸಂಸಾರ  ಮತ್ತು ಕಾಣೆಯಾಗುತ್ತಿರುವ ಸಾಮಾಜಿಕ ಮೌಲ್ಯಗಳು. .ಜನರು ಈಗ ಹಣ , ವೃತ್ತಿ, ಸುಖ , ವೈಬೋಗಗಳನ್ನೆ ಜೀವನದ ಗುರಿಯಾಗಿಸಕೊಂಡಿರುವರು . ಪರಿಣಾಮ ಒಂದು ಹಂತದವರೆಗೆ ಎಲ್ಲ ಚಂದ . ನಂತರ ಪ್ರತಿಭಟಿಸುವ ಮಕ್ಕಳು, ಉದ್ದೀಪನ ಮದ್ದುಗಳ ದಾಸರಾದ ಯುವಕರು,ನಿರಾಸೆಯ ಮಡುವಿನಲ್ಲಿ ತಾಯಿತಂದೆಯರು ಮತ್ತು ವಿಷಾದಲ್ಲಿ ಮುಳುಗಿ ಏಕಾಂಗಿಗಾಳಗಿರುವ ವೃದ್ಧರು  ಸಮಾಜದಲ್ಲಿ ಹೆಚ್ಚಾಗಿದ್ದಾರೆ. ಅದಕ್ಕಾಗಿ ಪೂರ್ಣ ಸಮುದಾಯವನ್ನು ಒಟ್ಟಿಗೆ ತರುವ ಪ್ರಯತ್ನ ನಮ್ಮ  ಆಶಯ" .
ಅವರು ಏಸುವಿನ ಹೆಸರಲ್ಲಿ  ಮಾಡುವ ಈ ಕೆಲಸವನ್ನು  ಬೇರೆ ಯಾವುದೆ ದೇವರ ಹೆಸರಲ್ಲಿ   ಮಾಡಿದರೂ  ಈಗಿನ ಸಮುದಾಯ ಎದುರಿಸುತ್ತಿರುವ  ಸಮಸ್ಯೆಗಳಿಗೆ ಸುಲಭ ಪರಿಹಾರ ದೊರೆಬಹುದು ಎಂದು .ಎನಿಸಿತು, ನಾವೂ  ಆ ಕಾರ್ಯ ಕ್ರಮದಲ್ಲಿ "Home medicine ,  Redaers digest collection ಮತ್ತು ಅಲ್ಲಿ ಒಂದೆರಡು ಒಳ್ಳೆಯ ಮಕ್ಕಳ ಪುಸ್ತಕಗಳನ್ನು ತೆಗೆದುಕಂಡು ಬರುವಾಗ ವಂದನೆ ಸಲ್ಲಿಸಲು ಹೊಇರಟರೆ ಅವರೆ  ಮುಂದಾಗಿ ಅಭಿನಂದನೆ ತಿಳಿಸಿದರು.