Sunday, September 21, 2014

ಹಸ್ತ ಪ್ರತಿ ಜಾಗೃತಿ



 ಹಸ್ತಪ್ರತಿ ಕುರಿತಾಗಿ  ಜಾಗೃತಿ ಮೂಡಿಸುವಸಲುವಾಗಿ ದೂರದರ್ಶನದ   , ’ಬೆಳಗು’  ಕಾರ್ಯಕ್ರಮದಲ್ಲಿ   ತುಸು ಮಾಹಿತಿ ನೀಡಲು  ಯತ್ನಿಸಿರುವೆ    ದಿನಾಂಕ ಸೆಪ್ಟಂಬರ್‌  ೨೩ನೆಯ    ಮಂಗಳ ವಾರ  ಚಂದನ ಚಾನಲ್‌   ಬೆಳಗ್ಗೆ   7  ಗಂಟೆಗೆ  ಪ್ರಸಾರಮಾಡಲಿದೆ  ದಯವಿಟ್ಟು  ವೀಕ್ಷಿಸಿ .









Tuesday, September 9, 2014

ಸಾಮಾಜಿಕ ಚಿಂತಕ -ಪ್ರೊ. ಜಿ. ರಾಮಕೃಷ್ಣ


‌ಎಚ್‌. ಶೇಷಗಿರಿರಾವ್








ಸನಾತನ ವೃಕ್ಷದ  ವಿಚಾರವಾದಿ ಫಲ ಪ್ರೊ. ಜಿ. ರಾಮಕೃಷ್ಣ
 ಕೀರ್ತಿ ಶನಿಯೇ ತೊಲಗತ್ತ, ಎಂದ ರಾಷ್ಟ್ರಕವಿ ಕುವೆಂಪು ಅವರ ನುಡಿಯನ್ನು ಅಕ್ಷರಶಃ ನಡೆಯಲ್ಲಿ ತಂದ ವಿರಳಾತಿವಿರಳ ವ್ಯಕ್ತಿ.  ಸನಾತನ ಕುಟುಂದಲ್ಲಿ ಜನಿಸಿದರೂ ಗೊಡ್ಡುಸಂಪ್ರದಾಯದ ವಿರುದ್ದ ಸಿಡಿದೆದ್ದ ವಿಚಾರವಾದಿ.  ಧರ್ಮದ ಹೆಸರಿನಲ್ಲಿ, ವ್ಯವಸ್ಥೆಯ ಅಡಿಯಲ್ಲಿ ನಡೆಯುವ ಶೋಷಣೆಯ ವಿರುದ್ಧ ಹೋರಾಟ ನಡೆಸಿದ ಛಲಗಾರ. ಹುಡುಕಿ ಬಂದ ಹಲವು ಪ್ರಶಸ್ತಿಗಳ ಪ್ರಲೋಭನೆಗೆ ಒಳಗಾಗದೆ ಭ್ರಷ್ಟ ವ್ಯವಸ್ಥೆಯನ್ನು ಪ್ರತಿಭಟಿಸಿದ  ಜೀವನ್ಮುಖಿ. ವಿಚಾರ ಮತ್ತು ಸಾಹಿತ್ಯಕ್ಕೆ ಬದುಕು ಮೀಸಲಿಟ್ಟ ಪ್ರಗತಿಪರ  ಚಿಂತಕ.  ರಾಜಕೀಯದ ಸೋಂಕಿಲ್ಲದ ಮತ್ತು ಮನಸ್ಸಾಕ್ಷಿಗೆ ವಿರೋಧವಾಗದ ಸಾಹಿತ್ಯ ಸಂಘಟನೆಗಳ ಗೌರವವನ್ನುಮಾತ್ರ ಅತಿ ಸಂಕೋಚದಿಂದ ಸ್ವೀಕರಿಸಿದ ಮಾನವತಾವಾದಿ.   ಬಿ. ಎಂ. ಶ್ರೀ. ಸ್ಮಾರಕ ಪ್ರತಿಷ್ಠಾನವು ತನ್ನ ಮೊಟ್ಟ ಮೊದಲ ಶ್ರೀಮತಿ ಸಾವಿತ್ರಮ್ಮ – ಪ್ರೊ. ಎಂ.ವಿ. ಸೀ. ಸಾಹಿತ್ಯ ಪ್ರಶಸ್ತಿಯನ್ನು.ಸನಾತನ ವೃಕ್ಷದಲ್ಲಿ ಬಿಟ್ಟ ವಿಚಾರವಾದ ಮತ್ತು ಮಾನವತೆಯ ಪ್ರತೀಕವಾದ ಫ  ಪ್ರೊ. ಜಿ. ರಾಮಕೃಷ್ಣ ಅವರಿಗೆ ನೀಡಿದೆ.
ಇವರ ಮೂಲನೆಲೆ ಮಧುಗಿರಿ ತಾಲೂಕಿನ ಗಂಪಲಹಳ್ಳಿಯಾದರೂ  ಇವರು ಜನಿಸಿದ್ದು ಬೆಳೆದದ್ದು ಮಾಗಡಿ ತಾಲೂಕಿನ ಕೆಂಪಸಾಗರದಲ್ಲಿ ಜನನ ೧೭ ಜೂನ್ ೧೯೩೯ರಲ್ಲಾಯಿತು. ಅವರ ತಂದೆ ಸುಬ್ರಮಣ್ಯಂ ಪ್ರಾಥಮಿಕ ಶಾಲಾಶಿಕ್ಷಕರು- ತಾಯಿ ನರಸಮ್ಮ.. ಅವರದು ಸಂಪ್ರದಾಯಸ್ಥ ಮುಲುಕುನಾಡು ಪಂಗಡದ ಬ್ರಾಹ್ಮಣ ಕುಟುಂಬ. ಬಾಲ್ಯದಲ್ಲೇ ಸಂಸ್ಕೃತ ಅಧ್ಯಯನಕ್ಕೆ  ಬುನಾದಿ. ಶಾಲಾ ಶಿಕ್ಷಣ ಮಾಗಡಿಯಲ್ಲಿ. ಅಲ್ಲಿಗೆ ನಡೆದೇ ಹೋಗುತಿದ್ದರು ಶಾಲೆ ಬಿಟ್ಟೊಡನೆ ಜತೆಯವರೊಂದಿಗೆ ಹೊಲ ಗದ್ದೆಗಳಲ್ಲಿ ದನ ಕುರಿ ಮೇಯಿಸುವ ಗೆಳೆಯರೊಡನೆ ಒಡನಾಟ. ಅಲ್ಲಿಯೇ ಆಯಿತು ಕೆಲವು ಗುರುಗಳಿಂದ ಗಾಂಧೀಜಿ, ಸುಭಾಶ್ ಚಂದ್ರ ಬೋಸ್, ಲೆನಿನ್‌ ಮಾರ್ಕ್ಸ ಹೆಸರಿನ  ಪರಿಚಯ. ಅಸ್ಪೃಶ್ಯತೆಯ  ಅಮಾನವಿತೆಯ ಅರಿವು ಶಾಲಾ ಅವಧಿಯಲ್ಲಿಯೇ ಆಯಿತು.  ನಿಷ್ಠ ಶಿಕ್ಷಕರೊಬ್ಬರು ಈ ಕಾರಣದಿಂದ ಹೋಟೆಲಿನಲ್ಲಿ ತಿರಸ್ಕಾರಕ್ಕೆ ಒಳಗಾದುದು ಮನತಟ್ಟಿತು. ತಮ್ಮ ಗ್ರಾಮದ ಬಡ ಮಹಿಳೆಯೊಬ್ಬಳನ್ನು ಅವಳ ಗಂಡನ ಎದುರೇ ಸಾಮಾಜದ ಪಟ್ಟಭದ್ರ ಹಿತಾಸಕ್ತಿಗಳು  ಶೋಣೆಗೆ, ದೂಷಣೆಗೆ ಗುರಿಮಾಡಿದ ಅವರ ಬಾಲ್ಯದ ನೆನಪು ವರ್ಗಸಂಘರ್ಷದ ಪರ ಹೋರಾಟದ ಬೀಜ ಬಿತ್ತಿತು.  ಇಂಟರ್‌ ಮಿಡಿಯಟ್‌ ಶಿಕ್ಷಣ ತುಮುಕೂರಿನಲ್ಲಿ. ಅಲ್ಲಿ ಭಿಕ್ಷಾನ್ನವೇ ಆಸರೆ. ನಂತರ ಪದವಿಗೆ ಮೈಸೂರಿಗೆ ಬಂದರು. ಅಲ್ಲಿ ತಾತಯ್ಯನವರ ಅನಾಥಾಲಯದಲ್ಲಿ ವಾಸ ಮತ್ತು ವಾರಾನ್ನದ ಊಟ. ಸಂಸ್ಕೃತದಲ್ಲಿ ಬಿ.ಎ ಆನರ್ಸ ವೇದ, ತತ್ವ ಶಾಸ್ತ್ರಗಳ ಕಲಿಕೆ.  ಗೆಳೆಯರ ಗುಂಪಿನಲ್ಲಿ ತನ್ನ ನೇರ ನಡೆ, ದಿಟ್ಟ ನುಡಿ, ಪ್ರತಿಭಟನೆಯ ಗುಣದಿಂದ ಹೆಸರುವಾಸಿ. ಸಾಹಿತ್ಯ ಚಟುವಟಿಕೆಗಳಲ್ಲಿ ಮುಂದು. ಎಲ್‌ಎಸ್‌ ಬೈರಪ್ಪ, ಸಿ ಎನ್‌.ರಾಮಚಂದ್ರನ್‌ ಸಹಾ ಇವರ ಹಾಸ್ಟೆಲ್‌ವಾಸಿಗಳು. ಇವರ ಗೆಳೆಯರ ಬಳಗ ದೊಡ್ಡದು. ಅವರೊಡನೆ ಓಡಾಟ ಪುಸ್ತಕ ವಿದ್ಯೆಯಲ್ಲಿ ಆಸಕ್ತಿ ಅಷ್ಟಕಷ್ಟೆ.  ಸಿನೆಮಾ, ನಾಟಕ, ಓಡಾಟ ಮತ್ತು ಭಾಷಣದಲ್ಲಿ ಆಸಕ್ತಿ. ಸಂಸ್ಕೃತದಲ್ಲಿ ಎಂ. ಎ. ಮಾಡಿದರು ಮತ್ತು ಪೂನಾ ವಿಶ್ವ ವಿದ್ಯಾಲಯದಿಂದ ಎಕ್ಸಟರ್ನಲ್‌  ಇಂಗ್ಲಿಷ್‌ ಎಂ ಎ. ಪದವಿ ಪಡೆದರು.
ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ- ಕುಳಿತವರಲ್ಲಿ ಎರಡನೆಯವರು


 ಎಳವೆಯಲ್ಲಿಯೇ ಎ.ಜಿ ಕಚೇರಿಯಲ್ಲಿ ಪ್ರಾರಂಭವಾಯಿತು ಅವರ ಉದ್ಯೋಗ ಪರ್ವ. ನಂತರ ಕೈವಲ್ಯಧಾಮದಲ್ಲಿ ಮೂರುವರ್ಷ ವಾಸ. ಲೋನಾವಾಲದಲ್ಲಿನ ಕೈವಲ್ಯಧಾಮದಲ್ಲಿ ಸಂಶೋಧನಾ ಸಹಾಯಕರಾದರು. ಯೋಗ ವಿಶ್ವಕೋಶದ ಕೆಲಸ.ಅದಕ್ಕಾಗಿ ಪತಂಜಲಿಭಾಷ್ಯ, ವಾಚಸ್ಪತಿಭಾಷ್ಯ ಮತ್ತು ಅನೇಕ ಸಂಸ್ಕೃತ ಗ್ರಂಥಗಳನ್ನು  ಓದ ಬೇಕಿತ್ತು.ಅವರ ಅದ್ಯನ ಅಷ್ಟಕ್ಕೇ ಸೀಮಿತವಾಗಲಿಲ್ಲ. ಅಲ್ಲಿರುವ ಗ್ರಂಥಾಲಯದ ಉತ್ತಮ ಕೃತಿಗಳನ್ನು ಓದಿದರು.ಅವರಧ್ಯನದ ವ್ಯಾಪ್ತಿ ವಿಶಾಲವಾಯಿತು. ಇತರ ಆಸಕ್ತ ವಿಷಯಗಳ ಅಧ್ಯಯನ ಮೂರುವರ್ಷಗಳ ಕಾಲ ಸಾಗಿತು. ಜೊತೆಗೆ ಯೋಗದಲ್ಲಿ ಡಿಪ್ಲೊಮೋ ಕೂಡಾ ಆಯಿತು. ಅಲ್ಲಿಯೇ ಕುವಲಾಯನಂದರ ಸಂಪರ್ಕ ಬಂದಿತು ಧ್ಯಾನಕ್ಕೆ ಭಾರತದ ಭೂಪಟ ಆಯ್ದುಕಂಡಿದ್ದ  ಅವರ ಮನೋವೃತ್ತಿಯ ಪ್ರತೀಕ.
. ಅಲ್ಲಿಂದ ಮಹಾರಾಷ್ಟ್ರ ರಾಜ್ಯದ ಹಿಂದುಳಿದ ಪ್ರದೇಶದಲ್ಲಿರುವ ಮಹಾಡ್‌  ಅಂಬೇಡ್ಕರ್  ಕಾಲೇಜಿನಲ್ಲಿ  ಉಪನ್ಯಾಸಕ ಹುದ್ದೆ  ದೊರೆಯಿತು.ಅಲ್ಲಿ  ಇಂಗ್ಲಿಷ್‌ ಜೊತೆ ಪಾಲಿ ಪಾಠ ಮಾಡಬೇಕಿತ್ತು. ಅಲ್ಲಿ ದಲಿತ ವಿದ್ಯಾರ್ಥಿಗಳೇ ಹೆಚ್ಚು.ದಮನಿತರ ಜೀವನದ ಒಳ ನೋಟ ದೊರೆತಿದ್ದುದು ಅಲ್ಲಿಯೇ.ಆಗಲೇ ಮರಾಠಿಯನ್ನು ಕಲಿತರು.  ಅಲ್ಲಿಂದ ಬೆಂಗಳೂರಿನ ನ್ಯಾಷನಲ್‌ ಕಾಲೇಜಿಲ್ಲಿ ಕೆಲಸಕ್ಕೆ ಸೇರಿದರು. ಮೂರೇ ತಿಂಗಳಲ್ಲಿ ಬ್ರಿಟನ್‌ಗೆ ಹೋದರು.  ಅಲ್ಲಿ ವೇಲ್ಸ ವಿಶ್ವ ವಿದ್ಯಾಲಯದಲ್ಲಿ. ಕಮ್ಯುನಿಜಂ ಚಟುವಟಿಕೆಗಳ ಸಂಪರ್ಕಕ್ಕೆ ಬಂದರು . ಸ್ವಅಧ್ಯಯನ ಮತ್ತು ಉಪನ್ಯಾಸಗಳಿಂದ ಅವರ ಸಭೆಗಳಿಗೂ ಹೋಗಿ ಮಾರ್ಕ್ಸವಾದದ ತಿರುಳನ್ನು ಅರಿತರು.
ಸಂಸ್ಕೃತ ಸಾಹಿತ್ಯ ವೇದ , ವೇದಾಂತ ಶಾಸ್ತ್ರ ಓದಿದ ಅವರು. ಪ್ರೊ. ರಾಮಚಂದ್ರರಾವ್‌ವರ ಮಾರ್ಗದರ್ಶನದಲ್ಲಿ “ ಋಗ್ವೇದದಲ್ಲಿ ಋತದ ಕಲ್ಪನೆ” ವಿಷಯ ಕುರಿತು ಪಿ.ಎಚ್‌ ಡಿ ಮಾಡಿದರು ಅವರ ಬಾಳ ಗುರಿ ಸರಳ ಜೀವನ ಮತ್ತು ಉದಾತ್ತ ವಿಚಾರದ ಸಂಗಮವಾಗಿತ್ತು.ಜ್ಞಾನ ಯಾನದಲ್ಲಿ ತೊಡಗಿದ ಅವರು ಸಂಸಾರ ಬಂಧನಕ್ಕೆ ಸಿಲುಕಲಿಲ್ಲ. ತಮ್ಮ ವಿರಾಮದ ಅವಧಿಯನ್ನೆಲ್ಲ ಸಾಮಾಜಿಕ ಜಾಗೃತಿ ಮತ್ತು ಚಳುವಳಿಗೆ ಮೀಸಲಿಟ್ಟರು ಅವರಿಗೆ ಸಿ.ಪಿ ಐ ಪಕ್ಷದ ಪ್ರಣಾಳಿಕೆ ಮೆಚ್ಚಿಗೆ ಯಾಗಿತ್ತು. ಹಳತನ್ನು ಹೊಸ ದೃಷ್ಟಿಯಿಂದ ನೋಡುವ ಲೇಖನಗಳು ಮತ್ತು ಭಾಷಣಗಳು ಅವರ ವೈಶಿಷ್ಟ್ಯವಾಗಿತ್ತು . ವೇದಾಧ್ಯಯನ ಮಾಡಿದವರು ಕುತೂಹಲರಹಿತ ಜಡರು, ಆಂಗ್ಲ ಅಧ್ಯಯನ ಮಾಡಿದವರು ಭಾರತೀಯ ಕೃತಿಗಳ ಮೂಲವನ್ನೇ ಮೂಸಿ ನೋಡದೆ ಮಾತನಾಡುವ ಉಡಾಫೆಯವರು ಎಂಬ ಮಾತಿಗೆ ಅವರು ಅಪವಾದ. ಅವರು ಯೋಗ, ಧ್ಯಾನ, ಭೌತವಾದ ಮತ್ತು ಮಾರ್ಕ್ಸವಾದಗಳ ನಡುವೆ ಸಮತೋಲನ ಕಾಪಾಡಿಕೊಂಡಿದ್ದರು. ಚರಿತ್ರೆ ಪುರಾಣವಾಗಬಾರದು ಎಂಬುದು ಅವರ ದೃಢ ನಂಬಿಕೆ..

 ಪೌರಾತ್ಯ ಮತ್ತು ಪಶ್ಚಿಮಾತ್ಯ ಸಾಹಿತ್ಯ ಮತ್ತು ಸಂಸ್ಕೃತಿ  ವಿಚಾರಗಳ ಸುಸಂಗತ ಸಂಗಮವಾಗಿರುವ  ಜಿ.ಆರ್. ಹೀಗೆ ಪಾರಂಪರಿಕ ಮತ್ತು ಆಧುನಿಕ ಮೌಲ್ಯಗಳ  ಸತ್ವ ಹೀರಿದ ಗುಣ ಗ್ರಾಹಿ.ಅವರ ಚಿಂತನದ ಫಲವಾಗಿ ಹೊರಬಂದ ಕೃತಿಗಳು: ಭಾರತೀಯ ಸಂಸ್ಕೃತಿಯ ಇಣಕುನೋಟ, ಆಯತನ, ಭಾರತೀಯ ವಿಜ್ಞಾನದ ಹಾದಿ,ವೈಚಾರಿಕ ಜಾಗೃತಿ.ತಮ್ಮಮೆಚ್ಚಿದ ಸಿದ್ಧಾಂತದ ಹಿರಿಯ ಸಾಧಕರ ನುಡಿ ಚಿತ್ರಗಳನ್ನು ರಚಿಸಿದರು. –ಯುಗ ಪುರುಷ,ಭಗತ್‌ ಸಿಂಗ್‌, ಭೂಪೇಶ ಗುಪ್ತ ಮತ್ತು ಚೆಗೆವಾರ. ಕಾರ್ಲಮಾರ್ಕ್ಸರ  ”ಬಾ ನೊಣ ವೇ ಬಾ ನೊಣವೆ’,  ಏಂಗಲ್ಸ್‌ರ ,’ ವಾನರನಿಂದ ಮಾನವನವರೆಗೆ”,ಕೃತಿಗಳು ಕ್ರಾಂತಿಕಾರಿ ಜೀವನದ ಒಳನೋಟ ನೀಡುತ್ತವೆ. ಕೂಲಿ ಮತ್ತು ಕೆಲಸ ಮತ್ತು ದರ್ಶನ , ಅವರ ಅನುವಾದ ಕೃತಿಗಳು. ಅವುಗಳ ಜೊತೆಗ  ನಂಬಿದ ಸಿದ್ಧಾಂತದ ಪ್ರಚಾರಕ್ಕಾಗಿ ಅನೇಕ ಕಿರು ಪುಸ್ತಿಕೆಗಳನ್ನೂ ರಚಿಸಿರುವರು.
ಇಂಗ್ಲಿಷ್‌ನಲ್ಲಿಯೂ ನಾಲ್ಕು ಕೃತಿಗಳನ್ನು ಬರೆದಿರುವರು.ಅವರ ಸಂಪಾದಕತ್ವದಲ್ಲಿ  ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯ ಕುರಿತಾದ ಸುವರ್ಣ ಸ್ವತಾಂತ್ರ್ಯಮಾಲಿಕೆಯ ೧೨ ಕೃತಿಗಳು ಬಂದಿವೆ. ಕೋಶ ಓದುವುದರ ಜೊತೆ ಜೊತೆಗೆ ದೇಶ ಸುತ್ತುವುದರಲ್ಲೂ ಇವರಿಗೆ ಆಸಕ್ತಿ. ದೇಶದ ಬಹುಭಾಗದಲ್ಲಿ ಸಂಚಾರ ಮಾಡಿರುವರು. 

ಜೊತೆಗೆ ಚಾರಣದಲ್ಲೂ ಎತ್ತಿದ ಕೈ.. ಕೈಲಾಸಮಾನಸ ಸರೋವರ, ಗೋಮುಖ ಗಂಗೋತ್ರಿಗಳ ಸಮೀಪ ದರ್ಶನ ಮಾಡಿರುವರು. ಮೌಂಟ್‌ಎವರೆಷ್ಟ  ಬೇಸ್‌ಕ್ಯಾಂಪ್ ಮೊದಲಾಗಿ ಹಿಮಾಲಯದ ಪರ್ವತ ಪ್ರದೇಶಗಳಲ್ಲಿ ಚಾರಣ ಮಾಡಿರುವರು.
ಸಾಹಿತ್ಯ ,ಯೋಗ ಮತ್ತು ಸಂಗೀತ ಪ್ರೀತಿ ಅವರ ಜೀವನದಲ್ಲಿ ಮುಪ್ಪುರಿಗೊಂಡಿದೆ. ಸಿದ್ಧಾಂತವನ್ನು ವಿರೋಧಿಸಿದರೂ ವ್ಯಕ್ತಿಯನ್ನು ಆದರಿಸುವ ಅವರ ಗುಣದಿಂದಾಗಿ ಅವರ ಗೆಳೆಯರ ಬಳಗ ಬಹು ದೊಡ್ಡದಾಗಿದೆ.. ಕಟ್ಟಾಹಿಂದುತ್ವವನ್ನು ವಿರೋಧಿಸಿದರೂ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಸಕ್ರಿಯರಾದ ಆರ್.ರಾಮಸ್ವಾಮಿ ಇವರ ಆತ್ಮೀಯ ಗೆಳೆಯರು
ಅದ್ಯಯನ ಮತ್ತು ವಿಚಾರವಿನಿಮಯಕ್ಕಾಗಿ ಇಂಗ್ಲೆಂಡ, ಅಮೇರಿಕಾ, ರಷ್ಯಾ. ನೇಪಾಳ, ಟಿಬೆಟ್‌  ಮತ್ತು ಆಫ್ಘನಿಸ್ತಾನಗಳಲ್ಲೂ  ಪ್ರವಾಸ ಮಾಡಿರುವರು. ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರುವರು.  ಮಾ.ಲೆ- ಅವರು ಪ್ರಾರಂಭಿಸಿದ ಪ್ರಕಾಶನ ಸಂಸ್ಥೆ ಅದರಲ್ಲಿ .ಅನೇಕ  ಮೌಲಿಕ ಪುಸ್ತಕಗಳನ್ನು ಪ್ರಕಟಿಸಿರುವರು. ಮಾ.ಲೆ  ಅಂದರೆ ಮಾರ್ಕ್ಸ ಲೆನಿನ್‌ ಗ್ರಂಥಮಾಲೆ. ಅಲ್ಲದೆ ’ಹೊಸತು” ಎಂಬ  ಪತ್ರಿಕೆಯನ್ನೂ ಹೊರತಂದಿರುತ್ತಾರೆ. 
ಬೆಂಗಳೂರಿನಲ್ಲಿ ನೆಲಸಿದ ತರುವಾಯ ಅವರ ಸಾಮಾಜಿಕ ಚಟುವಟಿಕೆ ಗರಿ ಗೆದರಿತು. ಕಾಲೇಜು ಅಧ್ಯಾಪಕರ ಸಂಘಟನೆಯಲ್ಲಿ ಅವರ ಪಾತ್ರ ಹಿರಿದು ರಾಜ್ಯ ಮಟ್ಟದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ರಾಷ್ಟ್ರ ಮಟ್ಟದಲ್ಲೂ ಚಳುವಳಿಯಲ್ಲಿ ಭಾಗ ವಹಿಸಿದರು. ಅವರ ಹೊರಾಟದ ಫಲವಾಗಿ ಖಾಸಗಿ ಕಾಲೇಜಿನ ಬೋಧಕರಿಗೂ ಸೇವಾ   ಸೌಲಭ್ಯ   ದೊರೆಯಿತು. ಡಾ, ಕೆ.. ದ್ನಾರಕಾನಾಥ್ ಮೊದಲಾದವರ ಹೋರಾಟದ ಫಲವಾಗಿ ಕಾಲೇಜುಅಧ್ಯಾಪಕರಿಗೆ ಸಾಮಾಜಿಕ ಪ್ರತಿಷ್ಠೆಯ ಜೊತೆ ಆರ್ಥಿಕ ಸೌಲಭ್ಯವೂ ದೊರೆಯಿತು. ಖಾಸಗಿಯವರು ನಡೆಸುತಿದ್ದ ಶೋಷಣೆ ನಿಯಂತ್ರಣಕ್ಕೆ ಬಂದಿತು. ವಿಪರ್ಯಾಸವೆಂದರೆ ಈಗ ಅವರ ಕಣ್ಣೆದುರಿಗೆ ಕಾಲೇಜುಅಧ್ಯಾಪಕರ ಸಂಘಟನೆ ದುರ್ಬಲವಾಗಿದೆ. ಖಾಸಗಿಯವರು ಅನುದಾನರಹಿತ ಹುದ್ದೆಗಳಲ್ಲಿ ನೇಮಕ ಮಾಡಿಕೊಂಡು ನಿಯಮಗಳಲ್ಲಿನ ಮಿತಿಯ ಲಾಭ ಪಡೆದುಕೊಂಡು ಅರ್ಹತೆಗೆ ತಕ್ಕವೇತನ ನೀಡದೆ ಶೋಷಣೆಗೆ ಮುಂದಾಗಿರುವರು.
ಎಲ್ಲ ಜನಪರ ಹೋರಾಟಗಳಲ್ಲೂ ಪ್ರತ್ಯಕ್ಷ್ಯ ಅಥವ ಪರೋಕ್ಷವಾಗಿ  ಒತ್ತಾಸೆ ನೀಡುವರು. ಗೋಕಾಕ ಚಳುವಳಿಯಲ್ಲೂ ಹೋರಾಟಕ್ಕೆ ಹೊಸಬರಾದ ಸಾಹಿತಿಗಳಿಗೆ ಬೆಂಬಲ ನೀಡಿದ್ದರು.ಮುಂಚೂಣಿಯಲ್ಲಿದ್ದ ಡಾ. ಚಿದಾನಂದಮೂರ್ತಿ ಮತ್ತು ಡಾ.ಪಿ.ವಿ ನಾರಾಯಣರಿಗೆ ಬೆನ್ನುತಟ್ಟಿ ’ ಚಳುವಳಿಗೆ ಹಣ ಬೇಕಾಗುತ್ತದೆ, ಎಂದು ಮೊದಲ ಕಾಣಿಕೆ ನೀಡಿದವರು. ವಾಮಪಂಥೀಯಚಿಂತಕರಲ್ಲಿ ಅತಿಪ್ರಮುಖರಾದ ಇವರು ಯುವಜನರಿಗೆ ಮತ್ತು ಚಳುವಳಿಗಾರರಿಗೆ ನಿರಂತರವಾಗಿ      ಸ್ಪೂರ್ತಿ ನೀಡುತಿದ್ದಾರೆ.
ಅಂತರಿಕ ಪ್ರಜಾಪ್ರಭುತ್ವವು ಸಮಾಜ, ಪಕ್ಷ, ಕುಟುಂಬ ಮತ್ತು ವ್ಯಕ್ತಿಯಲ್ಲೂ ಅತಿ ಮುಖ್ಯ. ಇದರಿಂದ ಅಧಿಕಾರದ ದುರುಪಯೋಗ ನಿಯಂತ್ರಣ ದಲ್ಲಿರುತ್ತದೆ.  ಸ್ವಾತಂತ್ರ್ಯ ಎಂದರೆ ಅಗತ್ಯತೆಯ ಮೆಚ್ಚುಗೆ.  ತನ್ನಂತೆ ಇನ್ನೊಬ್ಬನಿದ್ದಾನೆ ಎಂಬ ಭಾವನೆಯೇ ಆಸ್ತಿಕತೆ. ಧಾರ್ಮಿಕ ಅಭಿವ್ಯಕ್ತಿ ಯಾಂತ್ರಿಕ ಆಚರಣೆಯಾದಾಗ ಅರ್ಥ ಹೀನವಾಗುವುದು.  ವರ್ಗ ಸಂಘರ್ಷ ಎಂದರೆ ಪರಂಪರೆಯನ್ನು ತಿರಸ್ಕರಿಸುವುದು ಅಲ್ಲ .ನಮ್ಮ ಹಿಂದಿನ ಪೀಳಿಗೆಯವರ ಹೆಗಲ ಮೇಲೆ ನಿಂತು ಹೊಸತನ್ನು ನೋಡುವುದು. ಕ್ರಾಂತಿಕಾರಿಗಳು ಹಿಂದೂ ಇದ್ದರು, ಇಂದೂ ಇರುವರು ಮತ್ತು  ಮುಂದೂ ಇರುತ್ತಾರೆ..  ಮನುಷ್ಯ ಸ್ವಭಾವ ಬರಿ ಸಂಸ್ಕಾರದಿಂದ ಬರುವುದಿಲ್ಲ ಸನ್ನಿವೇಶವೂ  ಅದಕ್ಕೆ ಕಾರಣ .   
ಭಾರತದ ವೈಶಿಷ್ಟ್ಯವೆಂದರೆ ಲಾಭದ ಆಶೆ ಇಲ್ಲದೆ ಜನರನ್ನು ಆಪ್ತರಾಗಿಸಿಕೊಳ್ಳುವುದು. ಇದನ್ನು ಆತ್ಮೀಯತೆ ಎನ್ನಲೂಬಹುದು ಇದು ಭಾರತದಲ್ಲಿ ಸಂಪ್ರದಾಯ ಪ್ರಿಯತೆಯ ಹೊರತಾಗಿಯೂ ಕಂಡು ಬರುತ್ತದೆ.. ಆದರೆ ವಿದೇಶಗಳಲ್ಲಿ ವಿರಳ. ಧರ್ಮ ದುಖಃ ದುಮ್ಮಾನಗಳಿಗೆ ಸಿದ್ಧೌಷದಿಯಾಗಿ ಕಾಣಬಹುದು. ಆದರೆ ಅದು ತಾತ್ಕಾಲಿ ಪರಿಹಾರ ಮಾತ್ರ.ಧಾರ್ಮಿಕತೆಯು ಸರಕಾಗುವುದು ಸ್ವಸ್ಥ ಮನಸ್ಸಿನ ಸಂಕೇತವಲ್ಲ.ವಿಶ್ವದ ವಿಸ್ಮಯದ ಹಿನ್ನೆಲೆಯಲ್ಲಿ ಉದಾತ್ತ ಮೌಲಿಕ ಪ್ರಜ್ಞೆ ಮೂಡಿಸುವುದೆ ಧರ್ಮ ಮೊದಲಾದ ಅವರ ಅನೇಕ ಚಿಂತನಶೀಲ ನುಡಿಗಳು ಯುವ ಜನಾಂಗಕ್ಕೆ ದಾರಿ ದೀಪವಾಗಿವೆ.
ಇವರ ಸಾಹಿತ್ಯ ಪ್ರತಿಭೆಗೆ ಸಾಕಷ್ಟು ಗೌರವ ಸಮದಿದೆ. ಮುನೋಟ , ಆಯತನ,ಭಾರತೀಯ ಮತ್ತು ವಿಜ್ಞಾನದ ಹಾದಿ ಕೃತಿಗಳು ಕರ್ನಾಟಕ ಸಾಹಿತ್ಯಕಾಡಮಿ ಬಹುಮಾನಕ್ಕೆ ಭಾಜನವಾಗಿವೆ ಇವರ ಸಾಹಿತ್ಯ ಪ್ರತಿಭೆಗೆ ಗೌರವ ಸಲ್ಲಿಸಲು ಅನೇಕ ಸಾಹಿತ್ಯೇತರ ಸಂಸ್ಥೆಗಳ  ಪ್ರಯತ್ನಗಳಿಗೆ ಅವರು ಸ್ಪಂದಿಸಿಲ್ಲ. ಸರ್ಕಾರ ನೀಡಿದ  ರಾಜ್ಯೋತ್ಸವ ಪ್ರಶಸ್ತಿಯನ್ನು ವಿನಯದಿಂದ ನಿರಾಕರಣೆ ಮಾಡಿರುವರು.ಈಗ ಸಾಹಿತ್ಯ ಸಂಶೋಧನಾ ಸಂಸ್ಥೆಯಾದ ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನ ಪ್ರಪ್ರಥಮವಾಗಿ ಪ್ರದಾನ ಮಡುತ್ತಿರುವ  ಶ್ರೀಮತಿ ಸಾವಿತ್ರಮ್ಮ ಮತ್ತು ಎಂ.ವಿ. ಸೀ ಪ್ರಶಸ್ತಿ ಯನ್ನು ಸ್ವೀಕರಿಸಲು ತುಂಬಾ ಒತ್ತಾಯದ ಮೇಲೆ ಒಪ್ಪಿರುವರು. ಇಳಿವಯಸ್ಸಿನಲ್ಲೂ ಒಂಟಿಯಾಗಿ ಸ್ವತಂತ್ರ ಜೀವನ ನಡೆಸುತ್ತಾ ತಮ್ಮ ಸಾಮಾಜಿಕ ಕಳಕಳಿ, ವಿಚಾರವಾದ ಮತ್ತು ಚಿಂತನ ಶೀಲತೆಯಿಂದ ಸಮಾಜಮುಖಿ ಜೀವನ  ನಡೆಸುತ್ತಿರುವರು.
”ವಿಶ್ವದ ಯಾವುದೇ ಭಾಗದಲ್ಲಾದರೂ ನ್ಯಾಯವಾಗುತ್ತಿದ್ದರೆ, ಕೆರಳಿ ಸ್ಪಂದಿಸ ಬಲ್ಲವರಾದರೆ ನಾವು ನಿಜವಾದ ಸಂಗಾತಿಗಳು’ , ಎಂಬ ನುಡಿಯಂತೆ ನಡೆದವರು.  ದಮನಿತರ ನೋವಿಗೆ ಮಿಡಿಯುವ,ಶೋಷಿತರ ಕಷ್ಟಕ್ಕೆ ಮರುಗುವ,  ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮತ್ತು ಹೋರಾಟಗಾರರಿಗೆ ಜೊತೆಯಾಗುವ ಅವರಿಗೆ  ’ಸಂಗಾತಿ” ಎಂಬ ಹೆಸರಿನ ಅಭಿನಂದನಾ ಗ್ರಂಥ ಅರ್ಪಣೆಯಾಗಿರುವುದು ಬಹಳ ಅರ್ಥ ಪೂರ್ಣವಾಗಿದೆ.       
 ( ಚಿತ್ರ ಕೃಪೆ- -ಅಭಿನಂದನ ಗ್ರಂಥ   ಸಂಗಾತಿ  )                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                      








Friday, September 5, 2014

ಮೆಸಪಟೋಮಿಯಾದ ಕ್ಯೂನಿಫಾರಂ ಲಿಪಿ


ಕ್ಯೂನಿಫಾರಂ ಲಿಪಿ
ಎಚ್. ಶೇಷಗಿರಿರಾವ್

ಲಿಪಿಯು ನಾಗರೀಕತೆಯ ಹೆಗ್ಗುರುತು .ಯುಫ್ರಟಿಸ್ಟ್ ಮತ್ತು ಟೈಗ್ರಿಸ್ ನದಿಗಳ ನಡುವಿನ ಮೆಸಪಟೋಮಿಯಾ ಪ್ರದೇಶದಲ್ಲಿ ನಾಲ್ಕನೆ ಸಹಸ್ರಮಾನದ ಕೊನೆಯಲ್ಲಿ ಕ್ಯೂನಿಫಾರಂ ಲಿಪಿಯ ವಿಕಾಸವಾಯಿತು. ಅದಕ್ಕೆ ಮುಖ್ಯ ಕಾರಣ ಹಣಕಾಸು ವ್ಯವಹಾರದಾಖಲೆಯ ನಿರ್ವಹಣೆಯ ಅಗತ್ಯ. ಬಹುತೇಕ ಎಲ್ಲ ಕ್ಯೂನಿಫಾರಂ ಬರಹಗಳು ಎರಡನೆ ಸಹಸ್ರಮಾನದವರೆಗೆ ಹಣ ಮತ್ತು ವ್ಯಾಪಾರ ಕುರಿತಿರುವವೇ ಆಗಿವೆ.
ಮೂಲ ಸುಮೇರಿಯನ್ ಬರಹವನ್ನು ಅಕ್ಕಾಡೈನ್, ಎಬಲೈಟ್, ಹಿಟೈಟ,ಲುವೇಯನ್,ಹ್ಯುರಾಟಿನ್ ಭಾಷೆಗಳು ಅಳವಡಿಸಿಕೊಂಡವು. ಅವು ಉಗಾರ್ಟಿಕ್ ಮತ್ತು . ಪ್ರಾಚೀನ ಪರ್ಶಿಯನ್ ಭಾಷೆಗಳ ಮೇಲೂ ಪ್ರಭಾವ ಬೀರಿದವು ಕ್ಯೂನಿಫಾರಂ ಲಿಪಿಯು ಕ್ರಮೇಣ ಫೋನಿಷಿಯನ್ ಲಿಪಿಗಳಿಗೆ ದಾರಿ ಮಾಡಿದವು. ಅದು ನವ ಅಸ್ಸೀರಿಯನ್ ಅವಧಿಯಲ್ಲಿ ಆಯಿತು. ಕ್ರಿ.ಶ ೨ನೇ ಶತಮಾನದ ಹೊತ್ತಿಗೆ ಅದು ಮಾಯವಾಯಿತು.
ಬರಹ ಮೊದಲಾದ್ದು ಹಣಕಾಸಿನ ವ್ಯವಹಾರ ದಾಖಲಿಸಲು. ಕೃಷಿಉತ್ಪನ್ನ ಮತ್ತು ಪಶುಸಂಪತ್ತು ಹಾಗೂ ಎಣ್ಣೆ ಜಾಡಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಕಳುಹಿಸಲು ಅವುಗಳನ್ನ ಎಷ್ಟಿವೆ ಎಂಬುದನ್ನು ದಾಖಲೆ ಮಾಡಿಕಳುಹಿಸಲು ಲಿಪಿಯ ಬಳಕೆ ಮೊದಲಾಯಿತು.
ಅದಕ್ಕಾಗಿ ಮೂರು ಆಯಾಮದ ಮಣ್ಣಿನ ಟೋಕನ್ ಗಳು ಬಳಸಿದರು.ವಿವಿಧ ವಸ್ತುಗಳನ್ನುನ್ನು ಪ್ರತಿನಿಧಿಸಲು ಬೇರೆ ಬೇರೆ ಆಕಾರದ ಮತ್ತು ಗಾತ್ರದಮಣ್ಣಿನ ಗುರುತಿನಬಿಲ್ಲೆ(ಟೋಕನ್)) ಇರುತ್ತಿದ್ದವು. ಅದು ಧಾನ್ಯ, ದನ,ಕುರಿ ಬುಟ್ಟಿ,ಬೆಳ್ಳಿಯ ಗಟ್ಟಿಯಾಗಿರಬಹುದು. ಅವನ್ನು ಟೋಕನ್ ಗಳು ಪ್ರತಿನಿಧಿಸುತಿದ್ದವು.ಅವುಗಳಿಗೆ ಭಾಷೆಯ ತೊಡುಕು ಇರಲಿಲ್ಲ.ಅವಕ್ಕೆ ಯಾವುದೇ ಭಾಷೆಯಲ್ಲೂ ಒಂದೇ ಅರ್ಥ.ಅವನ್ನು ಸರಳಗೊಳಿಸಿ ಗೆರೆ ಅಥವ ಗುರುತು ಮಾಡತೊಡಗಿದರು. ನಮ್ಮ ಹಳ್ಳಿಕಡೆ ಸುಮಾರು 60 ವರ್ಷದ ಹಿಂದೆ ಮೊಸರು ಮಾರುವ ಹೆಂಗಸರು ಇದೇ ರೀತಿ ಬಿಳಿಗೋಡೆಯ ಮೇಲೆ ಕರಿ ಚುಕ್ಕೆ ಇಟ್ಟು ಲೆಕ್ಕ ಮಾಡುತಿದ್ದರು.ಇಲ್ಲವೆ ಇದ್ದಲಿನಿಂದ ಚಿಕ್ಕಗೆರೆ ಹಾಕಿ ಗುರುತಿಸುತಿದ್ದರು.ಅವರೂ ಅನಕ್ಷರಸ್ಥರು. ಆದರೆ ಸಂಕೇತಳ ಬಳಕೆ ಮಾಡುತಿದ್ದರು ಎಂಬುದು ಪುರಾತನ ಸಂಸ್ಕೃತಿಯ ಮುಂದುವರಿಕೆಯ ಭಾಗ ಎಂಬುದ ಗಮನಾರ್ಹ.
ನಾಲ್ಕನೆ ಸಹಸ್ರಮಾನದ ಮಧ್ಯ ಭಾಗದಲ್ಲಿ ಮಣ್ಣಿನ ಗೂಡೆಗಳನ್ನು ಗುರತಿನ ಬಿಲ್ಲೆಗಳನ್ನು ಮಣ್ಣಿನ ಗೂಡೆಗಳಲ್ಲಿ ಹಾಕಿ ಬಳಸಲುಶುರು ಮಾಡಿದರು. ಅದರಲ್ಲಿ ಹಾಕಿದ ಗುರುತಿನ ಬಿಲ್ಲೆಗಳ ಮೇಲೆ ಚಿತ್ರವನ್ನು ಮೇಲೆ ಬರೆಯುತಿದ್ದರು.ಅವು ವ್ಯವಹಾರದ ಸಾಧನವಾಗಿದ್ದವು. ಅದರಲ್ಲಿರುವ ವಸ್ತುಗಳನ್ನು ಪ್ರಮಾಣೀಕರಿಸಲು ಮುದ್ರೆ ಬಳಸಿದರು. ಲೇಖನಿಯನ್ನು ನೇರವಾಗಿ ಹಿಡಿದು.ಹಸಿಮಣ್ಣಿನ ಗೂಡೆಯಮೇಲೆ ಬರೆದರೆ ಮೇಲಿನ ಗುರುತು ಮೂಡುತಿತ್ತು. ಓರೆಯಾಗಿ ಹಿಡಿದು ಬರೆದರೆ ಕೇಳಗಿನ ಗುರುತು ಆಗುತಿತ್ತು. ದೊಡ್ಡ ವಸ್ತುಗಳಾದರೆ ಎರಡನ್ನೂ ಸೇರಿಸಿ ಗುರುತು ಮಾಡುತಿದ್ದರು. ಅದು ಮುಂದಿನಂತೆ ಗುರುತು ಆಗುವುದು. ಈ ಗುರುತಗಳ ಅರ್ಥ ಒಳಗಿರುವ ವಸ್ತುಗಳ ಸಂಖ್ಯೆಯನ್ನು ತಿಳಿಸುತಿತ್ತು. ಪುರಾತನ ನಗರ ಉರ್ರ್ ನಲ್ಲಿ ೧೦೦ನ್ನು ಪ್ರತಿನಿಧಿಸುವ ಇಂಥಹ ಸಂಕೇತಗಳು ಸಿಕ್ಕಿವೆ. ಒಳಗಿರುವ ಟೋಕನ್ ಗಳ ಮೇಲಿನ ಗುರುತನ್ನು ಅದೇ ರೀತಿ ನಕಲು ಮಾಡಿರಲಿಕ್ಕಿಲ್ಲ. ಅವು ಎರಡು ಆಯಾಮದ ಸಂಕೇತಗಳು.
ಚಿತ್ರ ಲಿಪಿಗಳು
ನಾಲ್ಕನೆ ಸಹಸ್ರಮಾನದ ಕೊನೆಯಲ್ಲಿ ಹೊಸ ಸಂಕೇತಗಳ ಉಗಮವಾಯಿತು. ಇದು ನಗರೀಕರಣದ ಜೊತೆ ಜೊತೆ ಆಯಿತು.ಅದೇ ಚಿತ್ರ ಲಿಪಿಯ ಆರಂಭದ ಕಾಲ ಎನ್ನಬಹುದು. ಒಂದೊಂದು ಚಿತ್ರವು ಒಂದು ವಸ್ತುವಿನ ಸಂಕೇತವಾಗಿರುತಿತ್ತು.
ಬರಹವು ಮೂಲತಃ ಚಿತ್ರಲಿಪಿಯಾಗಿ ಉಗಮವಾಗಿತ್ತು. ಕಣ್ಣಿಗೆ ಕಾಣುವ ವಸ್ತುಗಳು ಸಂಕೇತವಾದವು. ನಿರ್ಧಿಷ್ಟವಾಗಿ ಸೂಚಿಸಲು ಸಂಕೇತಕ್ಕೆ ಇನ್ನೂ ಹೆಚ್ಚಿನ ರೇಖೆಗಳನ್ನು ಸೇರಿಸುತಿದ್ದರು.
ಮಣ್ಣಿನಲ್ಲಿ ಬರೆಯುವುದು ಕಠಿನ. ಅದಕ್ಕೆ ಅವುಗಳ ಮುದ್ರೆ ಒತ್ತುತಿದ್ದರು. ವಕ್ರ ರೇಖೆಗಳು ಕ್ರಮೇಣ ಸರಳ ರೇಖೆಗಳಾದವು. ಮತ್ತು ನಿರ್ಧಿಷ್ಟವಾಗಿ ಗುರುತಿಸಲುವಿಶೇಷ ಗುರುತುಗಳನ್ನು ಮಾಡಲಾಯಿತು.
ಹೀಗೆ ಕ್ಯೂನಿಫಾರಂ ಬರಹ ಮೊನಚು ಬರಹ ಪ್ರಾರಂಭವಾಯಿತು. ಒಂದು ಸಹಸ್ರಮಾನದ ತರುವಾಯದ ಅಕ್ಕಾಡಿಯನ್ಲಿಪಿಯಲ್ಲೂ ಇದರ ಛಾಯೆ ಕಾಣಬಹುದು. ಅಕ್ಕಾಡಿಯನ್ಲಿಪಿಯಲ್ಲಿ ಮಹಿಳೆಯ ಸಂಕೇತ ವರ್ಣಲಿಪಿಯ (munus) ಕ್ಯೂನಿಫಾರಂ ಸಂಕೇತ 90 ಡಿಗ್ರಿ ತಿರುಗಿಸಿದರೆ ಸಿಗುವುದು.
ಬೆಟ್ಟದಸಂಕೇತವಾದ ವರ್ಣಲಿಪಿ'- kur ಇದ್ದರೂ ಮೆಸಪಟೋಮಿಯಾವು ಮೈದಾನವಾಗಿದ್ದು ಅಲ್ಲಿ ಬೆಟ್ಟಗಳೆ ಇಲ್ಲ. ಅದರಿಂದ ಅದುವಿದೇಶದ ಸಂಕೇತ. ದಾಸಿಯ ಯನ್ನು ಒಂದು ಸಂಯುಕ್ತ ಗುರತಿನಿಂದ munus.kur ಪ್ರತಿನಿಧಿಸಲಾಗಿದೆ. ಹೆಂಗುಸು ಮತ್ತು ವಿದೇಶಕ್ಕೆ ಸೇರಿದ ಹೆಣ್ಣು ಗುಲಾಮಳು ಶಬ್ದ ಮೂಡಿದೆ. ( (ಇಂಗ್ಲಿಷನಲ್ಲೂ Slave ಎಂಬ ಪದ ಸಾಲ್ವಿಕ್ ದೇಶದಿಂಧ ತಂದವರು ಎಂಬ ಅರ್ಥ ಕೊಡುವುದು) ಚಿತ್ರಲಿಪಿಯು ಯಾವುದೇ ಭಾಷೆಯಲ್ಲೂ ಅರ್ಥ ಪೂರ್ಣವಾಗಿರುವುದು. ಆದರೆ ಅದರ ವಿಕಾಸ ಮಾತ್ರ ಸುಮೇರಿಯಾದಲ್ಲಿ ಆಗಿದೆ. ಅದರಿಂದ ಬೇರೆ ಯಾವುದೇ ಹೊರಗಿನಪ್ರಭಾವಕ್ಕೆ ಒಳಗಾಗಿಲ್ಲ.
ಕ್ಯೂನಿಫಾರಂ ಲಿಪಿಯು ಎರಡು ಸಹಸ್ರಮಾನದಲ್ಲಿ ತುಂಬಾ ಬದಲಾವಣೆ ಹೊಂದಿದೆ.ಆ ಲಿಪಿಯಲ್ಲಿ ತಲೆಯನ್ನು ಪ್ರತಿನಿಧಿಸುವ ಸಂಕೇತದ ಬದಲಾವಣೆ ಗುರುತಿಸಲು ಕೆಳಗಿನ ಚಿತ್ರದಲ್ಲಿ ನೀಡಿದೆ
೧. ಚಿತ್ರಲಿಪಿಯ ಕಾಲ  ಕ್ರಿ. ಪೂ. ೩೦೦೦
೨. ಲಿಪಿಯು  ಕ್ರಿ. ಪೂ. ೨೮೦೦ ಹೊತ್ತಿಗೆ ತಿರುವು ಪಡೆದಿದೆ.
೩. ಅಮೂರ್ತ ಕೊರೆತವು ಸ್ಮಾರಕಗಳ ಬರಹಗಳಲ್ಲಿ ಕ್ರಿ.ಫೂ. ೨೬೦೦ ಹೊತ್ತಿಗೆ ಗೋಚರವಾಗಿದೆ.
೪. ಮಣ್ಣಿನ ಫಲಕದ ಮೇಲೆ ಬರೆದ ಸಂಕೇತವಾಗಿದೆ. ೩ ನೇ ಹಂತದ ಸಮಕಾಲೀನವಾದುದು.
೫.  3ನೇ ಸಹಸ್ರ ಮಾನದ ಅಂತಿಮ ಅವಧಿಯ ಪ್ರಾತಿನಿಧಿಕವಾಗಿದೆ.
೬. ಪುರಾತನ ಅಸ್ಸೀರಿಯನ್ಸಂಕೇತಗಳನ್ನು  2ನೇ ಸಹಸ್ರಮಾನದ ಮೊದಲ ಭಾಗದಲ್ಲಿ ಹಿಟೈಟಿಯರು ಅಳವಡಿಸಿ ಕೊಂಡರು. ಅಸ್ಸೀರಿಯನರ ಬರಹದ ಸರಳ ರೂಪ  ೧ ನೇ ಸಹಸ್ರಮಾನದ ಮೊದಲಲ್ಲಿನಂತೆ  ಅದು ಇಲ್ಲದಾಗುವವರೆಗೆ
ಕ್ಯೂನಿಫಾರ ಗಳ ಭೌತಿಕರೂಪ
ಕ್ಯೂನಿಫಾರ ಗಳ ಭೌತಿಕರೂಪ
ಕ್ಯೂನಿಫಾರಂ (ಲ್ಯಾಟಿನ್ನಲ್ಲಿ ಮೊನಚು ಆಕಾರದ) ನಲ್ಲಿ ಚಿಕ್ಕ ಮೊನಚಾದಗೆರೆಗಳ ಸರಣಿ ಇರುವುದು.ಅವನ್ನು ಮೃದುವಾದ ಮಣ್ಣಿನಹಲಗೆಯ ಮೇಲೆ ಚೂಪಾದ ಲೇಖನಿ ತರಹದ ಸಾಧನದಿಂದ ಮೊನಚಾಕಾರದ ಗುರುತು ಮಾಡುವರು.. ಗೆರೆಗಳು ಮೇಲುಭಾಗದಲ್ಲಿ ದಪ್ಪನಾಗಿರುವವು. ಕಠಿನವಾದ ವಸ್ತುವಿನ ಮೇಲೆ ಬರೆದಾಗ ಅದು ಆಕಾರದಲ್ಲಿ ಇರವುದುಈ ಸಂಕೇತಗಳನ್ನು ಮೇಲಿನಿಂದ ಕೆಳಕ್ಕೆ ಬರೆಯುವರು, ನಂತರ ಅವುಗಳನ್ನು ಪಕ್ಕಕ್ಕೆ ತಿರುಗಿಸಲಾಯಿತು. ಅವನ್ನು ಎಡದಿಂದ ಬಲಕ್ಕೆ ಬರೆಯಲಾಗುವುದು. ಮೊದಲು ಬರಹಕ್ಕೆ ಮೃದು ವಸ್ತುವನ್ನು ಬಳಸಿದರೂ ನಂತರ ಕಠಿನ ಮೇಲ್ಮೈ ಇರುವ ವಸ್ತುಗಳನ್ನೂ ಬಳಕೆಮಾಡಿದರು.ಕ್ಯೂನಿಫಾರಂ ಸಂಕೇತಗಳು ಮೂಲತಃ ಐದು ರೀತಿಯಲ್ಲಿಇವೆ..ಅಡ್ಡ, ಎರಡುದಿಕ್ಕಿನಲ್ಲಿ ಓರೆಯಾಗಿ,ಕೊಕ್ಕೆ ಮತ್ತು ನೇರ ಗೆರೆಗಳು.
ಮೇಲುಮುಖದ ಓರೆಗೆರೆಯ ಬಳಕೆ ವಿರಳ.ಈ ಐದು ಗುರುತುಗಳು ಎರಡು ಆಕಾರದಲ್ಲಿ ದ್ದವು. ಚಿಕ್ಕವು ಮತ್ತು ದೊಡ್ಡವು. ಚಿಕ್ಕ ಕೊಕ್ಕೆಗೆರೆ, ಓರೆಗೆರೆ ವ್ಯತ್ಯಾಸ ಗುರುತಿಸುವುದು ಕಷ್ಟ. ಎರಡು ಓರೆಗೆರೆಗಳನ್ನುಪ್ರತ್ಯೇಕ ಸಂಕೇತವಾಗಿ ಬಳಸುವುದಿಲ್ಲ.ನೇರ ಸಂಕೇತವನ್ನು ತಿರುಗು ಮುರುಗಾಗಿ ಪುರಾತನ ಫಲಕಗಳಲ್ಲಿ ವಿರಳವಾಗಿ ಬಳಸಿರುವರು.
ತಿರುಗು ಮುರುಗಾಗಿ ಪುರಾತನ ಫಲಕಗಳಲ್ಲಿ ವಿರಳವಾಗಿ ಬಳಸಿರುವರು. ಇದನ್ನು ಕೆಲವು ಸಲ ಕೈ ಸಂಕೇತವಾಗಿ ಸಾಧಾರಣವಾದ ಸಂಕೇತದ ಬದಲಾಗಿ ಬಳಕೆಯಾಗಿದೆ. ಇತ್ತೀಚೆಗೆ ಅದೂ ಇಲ್ಲ. ಎಡದಿಂದ ಬಲಕ್ಕಿರುವ ಗೆರೆ ಬಳಕೆ ಇಲ್ಲ . ಮೂಲಬರಹ ಅಥವ ನಕಲು ಎಂಬುದನ್ನು ಈ ಲಕ್ಷಣಗಳಿಂದಲೆ ಗುರುತಿಸಬಹುದು. ಸಂಕೇತಗಳು ಬಹಳ ಮಾರ್ಪಾಟಿಗೆ ಒಳಗಾದವು (ಉದಾ. ಪುರಾತನ ಬ್ಯಾಬಿಲೊನಿಯನ್ ಅವಧಿ ಕ್ರಿ ಪೂ.೧೮ನೆಯ ಶತಮಾನದಿಂದ, ನವ ಬ್ಯಾಬಿಲೊನಿಯನ್ ಅವಧಿ ಒಂದು ಸಹಸ್ರವರ್ಷದ ತರುವಾಯ) ವಿವಿಧ ಆಡುಭಾಷೆಗಳಲ್ಲಿ ಸ್ವಲ್ಪ ಬದಲಾವಣೆ ಕಂಡುಬರುವುದು. ಈಗಿನ ಸಂಕೇತಗಳು ನವಸ್ಸಿರಯನ್ ಅವಧಿಯವಾಗಿವೆ, ಇವುಗಳ ಅಧ್ಯಯನವನ್ನು ಅಸಿರಿಯಾಲಜಿ ಎನ್ನುವರು.ಮತ್ತು ಅಸಿರುಯಾಲಜಿ ಕಳೆದ ಶತಮಾನದ "ನಿನೆವೆ "ಯಲ್ಲಿ ಅಸ್ಸಿರಿಯನ್ ಗ್ರಂಥಾಲಯದ ಪರಿಶೋಧನೆಯಿಂದ ಪ್ರಾರಂಭವಾಯಿತು. ಹೊಸ ಅಸ್ಸೀರಿಯನ್ ಆಕೃತಿಗಳು ಹೆಚ್ಚು ಚೌಕಾಕಾರದಲ್ಲಿವೆ.
ಕ್ಯೂನಿಫಾರಂಗಳನ್ನು ಅವುಗಳ ಕಾರ್ಯಕ್ಕೆ ಅನುಗುಣವಾಗಿ ೪ ಭಾಗ ಮಾಡ ಲಾಗಿದೆ. phonogram,ಫೋನೊಗ್ರಾಮ್ ಪೂರ್ಣ ವರ್ಣವನ್ನು ಪ್ರತಿನಿಧಿಸಿದರೆ syllabogram logogram, ಪೂರ್ಣ ಶಬ್ದ ಅಥವ ಪರಿಕಲ್ಪನೆಯನ್ನು ಪ್ರತಿನಿಧಿಸಿದ ಐಡಿಯೋಗ್ರಾಂ Ideogram. ಅಕ್ಕಾಡಿಯನ್ ಲೋಗೋ ಗ್ರಾಮ್ ಗಳನ್ನು ಸುಮೆರೊಗ್ರಾಂಗಳೆಂದು ಕರೆಯುವರುಕಾರಣ ಅವುಗಳ ಮೂಲ ಸುಮೇರಿಯಾ.ಅಥವ ಅರೆ ಸುಮೇರಿಯಾ.
ದ್ವನಿ ಪೂರಕಗಳು phonetic complement, ನಿರ್ಧಿಷ್ಟ ಲೊಗೊಗ್ರಾಮ್ಗಳನ್ನು ಆಯ್ದು ವ್ಯಾಕರಣ ರೂಪ ಸೂಚಿಸುವುದು.
ನಿರ್ಣಾಯಕಗಳು
ಹಿಂದಿನ ಅಥವ ಮುಂದಿನ ಪದದ ಲಾಕ್ಷಣಿಕ ಸ್ವರೂಪ ತಿಳಿಸುವವು. (ಪೂರ್ವಪ್ರತ್ಯಯ ಅಥವ ಉತ್ತರಪ್ರತ್ಯಯ) ಅದು ಲೊಗೊಗ್ರಾಮ್ ಅಥವ ಸೊಮೊಗ್ರಾಮ್ ಗಳ ಸರಣಿ ಆಗಿರಬಹುದು. ಪದವು ದೇವರ ಹೆಸರು, ಮನುಷ್ಯನ, ವಸ್ತುವಿನ, ಪಟ್ಟಣದ ಮತ್ತು ಜಡವಸ್ತು.. ಅವುಗಳ ಉಚ್ಚಾರಣೆ ಇಲ್ಲ.. ಕೆಲವು ಸಲ ಪೂರ್ವ ಮತ್ತು ಉತ್ತರ ನಿರ್ಣಾಯಕಗಳನ್ನು ಬಳಸಲಾಗುವುದು.
ಪದಗಳನ್ನು ಕೂಡಿಸಿ ವಾಕ್ಯಗಳನ್ನು ರಚಿಸಬಹುದು. ಅದೇರೀತಿ ವಾಕ್ಯಗಳ ಸಮೂಹದಿಂದ ಮಣ್ಣಿನ ಫಲಕದ ಮೇಲೆ ಅಥವ ಬಂಡೆಯ ಮೇಲೆ ಕೊರೆಯಬಹುದಾಗಿತ್ತು. ಅದೂ ಅಲ್ಲದೆ ಹೆಚ್ಚಿ ಪ್ರಮಾಣದಲ್ಲಿ ಪೆಪ್ರಸ್ಮೇಲೆ ಚಿತ್ರಿಸಬಹುದಿತ್ತು.
ಹಲವು ದಶಕಗಳ ಸಂಶೋಧನೆಯಿಂದ ಆಧುನಿಕವಿಜ್ಞಾನದ ಅದರಲ್ಲೂ ಗಣಕಯಂತ್ರದ ನೆರವಿನಿಂದ ಕ್ಯೂನಿಫಾರಂ ಲಿಪಿಗಳ ಅಧ್ಯಯನ ಯಶಸ್ವಿಯಾಗಿದೆ.ಈಗ ಇಂಗ್ಲಿಷ್ ಅಕ್ಷರಗಳಿಗೆ ಸಂವಾದಿಯಾದ ಕ್ಯುನಿಫಾರಂ ಲಿಪಿಗಳಪಟ್ಟಿಯೇ ಲಭ್ಯವಿದೆ. ಅದನ್ನುಬಳಸಿ ಯಾರು ಬೇಕಾದರೂ ತಕ್ಕ ಮಟ್ಟಿಗೆ ಆ ಲಿಪಿಯಲ್ಲಿ ಬರೆಯಬಹುದು.

ಈಜಿಪ್ಟ್ ಲಿಪಿಯ ಕೀಲಿ ಕೈ ರೊಜೆಟ್ಟಾ ಶಿಲೆ


ಈಜಿಪ್ಟ್ ಲಿಪಿಯ ಕೀಲಿ ಕೈ ರೊಜೆಟ್ಟಾ ಶಿಲೆ


ಈಜಿಪ್ಟಿನ ರೊಜೆಟ್ಟಾ ಶಿಲೆ
ಎಚ್. ಶೇಷಗಿರಿರಾವ್

(ಹೈಗ್ರೋಗ್ಲಿಫ್:ಸೋಥ್ ದೇವತೆ ನೀಡಿದ ಕೊಡುಗೆ)
ನೈಲ್ ನದಿ ನಾಗರೀಕತೆಯು ಪುರಾತನ ನಾಗರಿಕತೆಗಳಲ್ಲಿ ಒಂದು. ಅಲ್ಲಿನ ಕಲೆ ವಾಸ್ತು ಶಿಲ್ಪ ಮತ್ತು ಶಾಸನಗಳು ಸಾಂಸ್ಕೃತಿಕ ಚರಿತ್ರೆಯ ಸ್ಮಾರಕಗಳಾಗಿವೆ. ಪ್ರಪಂಚದ ಏಳು ಅಧ್ಭುತಗಳಲ್ಲಿ ಒಂದಾದ ಪಿರಮಿಡ್ ನಂತೆಯೇ ಅವರ ಲಿಪಿಯೂ ನಿಗೂಢ ಮತ್ತು ಭವ್ಯ. ಅವರು ಲಿಪಿಯನ್ನು ದೇವರ ದೇಣಿಗೆ ಎಂದೇ ಭಾವಿಸಿದ್ದರು. ಅವರ ಪ್ರಕಾರ ಹೈಗ್ರೋಗ್ಲಿಫ್( ಪವಿತ್ರಲಿಪಿ) ಸೋಥ್ ದೇವತೆ ನೀಡಿದ ಕೊಡುಗೆ. ಕ್ರಿ..ಪೂ,೩೪೦೦ರಿಂದಲೇ ಪವಿತ್ರ ಲಿಪಿಗಳು ಕಂಡುಬಂದಿವೆ. ಅವರ ನಂಬುಗೆಯ ಪ್ರಕಾರ ಚಿತ್ರಲಿಪಿ ಬರಹಗಳು ಭಾಷೆಯವಾಹಕ ಮಾತ್ರವಲ್ಲ ವ್ಯಕ್ತಿಯ ಅಂತಃಸತ್ವವೇ ಆಗಿವೆ. ಯಾವುದೇ ವ್ಯಕ್ತಿಯ ಕುರಿತಾದ ಲಿಪಿ ಇರುವವರೆಗೆ ಅವನು ಜೀವಂತ ಎಂಬುದು ಅವರ ಗಾಢ ನಂಬುಗೆ. ಬರಹ ಅಳಿಸಿ ಹೋದಾಗಲೇ ಅವನ ನಾಶ. ಅದರಿಂದ ಅವು ಬಹು ಕಾಲದವರೆಗೆ ಬದಲಾಗದೇ ಉಳಿದವು. ಅವು ದೈವೀ ನುಡಿ ಎಂಬ ಕಾರಣವೇ ಅವುಗಳ ಸ್ಥಿರತೆಗೆ ಕಾರಣ. ಹಾಗಾಗಿ ಬರಹಗಳು ಹೆಚ್ಚಾಗಿ ಸ್ಮಾರಕ ಮತ್ತು ದೇವಾಲಯಗಳಲ್ಲಿ ಕಂಡು ಬರುತ್ತವೆ. ಕಾಲ ಕಳೆದಂತೆ ಅನ್ಯ ಭಾಷೆಯ, ಸಂಸ್ಕೃತಿಯ ಜನರು ಅವನ್ನು ನಿಗೂಢ ಮತ್ತು ಮಾಂತ್ರಿಕ ಬರಹಗಳೆಂದು ನಂಬಿದರು. ಹಾಗಾಗಿ ಅವುಗಳ ಬಳಕೆ ಪೂರ್ಣವಾಗಿ ನಿಂತುಹೋಯಿತು.
ಕ್ರಿ.ಪೂ. ೩೧೧೦ ರಿಂದ ಕ್ರಿ. ಪೂ. ೩೩೦ ರವರೆಗ ಸುಮಾರು ೩೩ ವಂಶದ ಅರಸರು ಈಜಿಪ್ಟನ್ನು ಆಳಿದರು. ಈಗ ದೊರೆತಿರುವ ಪ್ರಾಚೀನ ಉಲ್ಲೇಖ ಕ್ರಿ. ಪೂ. ೩೦೦೦ ಇಸ್ವಿಯದು.ಅದರಲ್ಲಿ ಉತ್ತರ ಮತ್ತು ದಕ್ಷಿಣ ಈಜಿಪ್ಟಗಳ ಅಧಿಪತಿ ನಾರ್ ಮೇಲ್ ಪಲೆಟ್ಟೆಯ ಮೇಲೆ ಕಂಡುಬಂದಿದೆ. ಆ ಅವಧಿಯಲ್ಲಿನ ಪ್ರಾಚೀನ ಈಜಿಪ್ಟಿನ ಲಿಪಿಗಳು ಬೃಹತ್ಪ್ರಮಾಣದಲ್ಲಿ ದೊರೆತಿವೆ. ಕ್ರಿ..ಪೂ.ಅವಧಿಯ ಅನೇಕ ಬರಹಗಳು ಬಂಡೆಗಳ ಮೇಲೆ, ದೇವಾಲಯದ ಗೋಡೆಗಳ ಮೇಲೆ, ಪಿರಮಿಡ್ಡುಗಳ ಒಳಗೆ, ಪೆಪ್ರಸ್ ಸುರಳಿಗಳಲ್ಲಿ ಅಪಾರ ಪ್ರಮಾಣದಲ್ಲಿ ಕಂಡು ಬಂದಿವೆ. ಕ್ರಿ.ಪೂ ೩-೬ನೆಯ ಶತಮಾನ ಈಜಿಪ್ಟ್ ಮತ್ತು ಗ್ರೀಕ್ ಸಂಸ್ಕೃತಿಗಳ ಸಂಘರ್ಷದ ಕಾಲ. ಅಲೆಗ್ಜಾಂಡರನ ದಂಡನಾಯಕ ಟಾಲೆಮಿ ಅಲ್ಲಿ ೩೨ ನೆಯ ಫೆರೊ ಆಗಿ ಹೊಸ ರಾಜವಂಶದ ಉದಯಕ್ಕೆ ಕಾರಣನಾದ. ಅಲ್ಲಿಂದ ಮುಂದೆ ಅವನ ಉತ್ತರಾಧಿಕಾರಿಗಳನ್ನು ಟಾಲೆಮಿ ಮತ್ತು ಉತ್ತರಾಧಿಕಾರಿಣಿಯರನ್ನು ಕ್ಲಿಯೋಪಾತ್ರ ಎಂದೂ ಸಂಬೋಧಿಸುವ ಸಂಪ್ರದಾಯ ಜಾರಿಗೆ ಬಂದಿತು. ಅವರ ಕಾಲದಲ್ಲಿ ಗ್ರೀಕ್ ಮತ್ತು ಹೈಗ್ರೊಗ್ಲಿಫ್ಗಳೆರಡೂ ಬಳಕೆಯಲ್ಲಿದ್ದವು .ಕ್ರಿ. ಶ ೩ನೆಯ ಶತನಮಾನದ ಸುಮಾರಿಗೆ ಸಂಪೂರ್ಣ ಈಜಿಪ್ಟ್ ರೋಮನ್ ಆಧಿಪತ್ಯಕ್ಕೆ ಒಳಗಾಯಿತು. ಚಕ್ರವರ್ತಿಯು ರೋಮ್ ಸಾಮ್ರಾಜ್ಯದ ವಿಗ್ರಹಾರಾಧನೆಯುಳ್ಳ ಎಲ್ಲ ದೇಗುಲಗಳನ್ನೂ ಮುಚ್ಚಿಸಿದ. ಪರಿಣಾಮ ಹೈಗ್ರೊಲಿಫ್ಗಳ ಬರವಣಿಗೆ ನಿಂತು ಹೋಯಿತು.
ರೋಮ್ ಸಾಮ್ರಾಜ್ಯ ಅಳಿದ ಮೇಲೆ ಮಧ್ಯಯುಗದಲ್ಲಿ ಈಜಿಪ್ಟಿನ ಬರವಣಿಗೆಯ ಕುರಿತು ಯುರೋಪಿನಲ್ಲಿ ಆಸಕ್ತಿ ಹುಟ್ಟಿತು.೧೬೩೩ ರಿಂದ ಹೈಗ್ರೊ ಗ್ಲಿಫ್ಗಳ ಅನುವಾದಕ್ಕೆ ಪ್ರಯತ್ನ ಪ್ರಾರಂಭವಾಯಿತು. ಒಂದೋ ಎರಡೋ ಅಧ್ಯಯನಗಳು ನಡೆದರೂ ಯಾವುದೂ ನಿಖರವಾಗಿರಲಿಲ್ಲ. ಆದರೆ ೧೭೯೮ ರಲ್ಲಿ ನಡೆದ ಆಂಗ್ಲೋ ಫ್ರೆಂಚ್ ಯುದ್ಧವು ಈಜಿಪ್ಟ್ ಅಧ್ಯಯನಕ್ಕೆ ಹೊಸ ತಿರುವು ನೀಡಿತು. ನೆಪೋಲಿಯನ್ನ ಸೈನ್ಯವು ಇಂಗ್ಲಿಷ್ರನ್ನು ಈಜಿಪ್ಟ್ ನಲ್ಲಿ ಭೂಯುದ್ಧದಲ್ಲಿ ಸೋಲಿಸಿ ಫಲವತ್ತಾದ ನೈಲ್ ನದಿ ಬಯಲನ್ನು ವಶಪಡಿಸಿ ಕೊಂಡಿತು. ಆದರೆ ಜಲಯುದ್ಧದಲ್ಲಿ ಇಂಗ್ಲಿಷರಿಗೆ ಗೆಲುವಾಯಿತು. ಅವರು ಫ್ರೆಂಚರನ್ನು ಜಲಮಾರ್ಗದಲ್ಲಿ ತಾಯ್ನಾಡಿಗೆ ವಾಪಸ್ಸು ಹೋಗದಂತೆ ತಡೆದರು. ಅದರಿಂದ ಫ್ರೆಂಚ್ ಸೈನ್ಯ ಮೂರುವರ್ಷ ಈಜಿಪ್ಟಿನಲ್ಲಿ ನಿಲ್ಲಬೇಕಾಯಿತು. ಆ ಅವಧಿಯಲ್ಲಿ ಸೈನ್ಯದೊಂದಿಗೆ ಬಂದಿದ್ದ ನೂರಾರು ವಿಜ್ಞಾನಿಗಳೂ ತಂತ್ರಜ್ಞರು ಮತ್ತು ಸಾವಿರಾರು ನಾಗರೀಕರು ಈಜಿಪ್ಟಿನ ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ತೊಡಗಿದರು. ಅವರ ಪ್ರಯತ್ನದ ಫಲವಾಗಿ " ಈಜಿಪ್ಟಿನ ವರ್ಣನೆ " ಎಂಬ ೧೯ ಸಂಪುಟಗಳು ಹೊರ ಬಂದವು . ಅವು ದು ಯುರೋಪಿನಲ್ಲಿ ಈಜಿಪ್ಟನ ಬಗ್ಗೆ ಹೊಸ ಕುತೂಹಲ ಮೂಡಿಸಿದವು. ಇದೇ ಸಮಯದಲ್ಲಿ ಫ್ರೆಂಚ್ ಸೈನಿಕರು ತಮ್ಮ ವಶದಲ್ಲಿದ್ದ ಪ್ರದೇಶಗಳ ಪುನರ್ನಿರ್ಮಾಣಕ್ಕೆ ಪ್ರಯತ್ನಿಸಿದರು ಆಯಕಟ್ಟಿನ ಸ್ಥಳಗಳಲ್ಲಿ ಕೋಟೆಕೊತ್ತಳ ಕಟ್ಟತೊಡಗಿದರು ಅವರಿಗೆ ಕೋಟೆಯೊಂದರ ಪುನರ್ನಿರ್ಮಾಣದ ಸಮಯದಲ್ಲಿ ಒಂದು ಬರಹವಿರುವ ಕಪ್ಪು ಶಿಲಾಫಲಕ .
ಕ್ರಿ.ಶ. 1799.ರಲ್ಲಿ ದೊರೆಯಿತು. ಈಜಿಪ್ಟಿನ ನೈಲ್ ನದಿ ಬಯಲಿನಲ್ಲಿ ಜೂಲಿಯಾನ್ ಎಂಬ ಕೋಟೆಯನ್ನು ಪುನರ್ನಿರ್ಮಾಣ ಮಾಡುತಿದ್ದರು. ಶಿಲಾಫಲಕವು ೩ ಅಡಿ ೯ ಅಂಗುಲ ಉದ್ದ, ೨ ಅಡಿ ೪.೫ ಅಂಗುಲ ಅಗಲ ಮತ್ತು ೧೧ ಅಗುಲ ದಪ್ಪವಿದ್ದಿತು . ಸೈನಿಕರಲ್ಲಿ ಪುರಾತತ್ತವ ಪರಿಜ್ಞಾನವಿದ್ದ ಒಬ್ಬನು ಅದರ ಮಹತ್ವ ಗುರುತಿಸಿದ.ಶಿಲೆ ನದಿಮುಖಜ ಭೂಮಿಯಲ್ಲಿರುವ ಚಿಕ್ಕಹಳ್ಳಿ ರೊಸೆಟ್ಟಾದಲ್ಲಿ ದೊರೆಯಿತು. ಅದನ್ನು ತಮ್ಮ ಜೊತೆ ಇದ್ದ ವಿದ್ವಾಂಸರಿಗೆ ತೋರಿಸಿದರು ಅದು ರೊಸೆಟ್ಟಾ(ರಷೀದ್) ಎಂಬ ಗ್ರಾಮದಲ್ಲಿ ಸಿಕ್ಕಿದುದರಿಂದ ರೊಜೆಟ್ಟಾ ಶಿಲೆ ಎಂದು ಹೆಸರಿಸಿದರು . ರೊಜೆಟ್ಟಾ ಶಾಸನವು ಎರಡುಭಾಷೆಯಲ್ಲಿ ( ಈಜಿಪ್ಷಿಯನ್ಮತ್ತು ಗ್ರೀಕ್) ಮೂರು ಲಿಪಿಗಳಲ್ಲಿ ( ಪವಿತ್ರಲಿಪಿ, ಡೆಮೊಟಿಕ್ಲಿಪಿ ಮತ್ತು ಗ್ರೀಕ್ ಲಿಪಿ) ಇರುವ ಶಾಸನ. ಮೇಲಾಗಿ ಅವೆಲ್ಲವೂ ಒಂದೇ ವಿಷಯವನ್ನು ಕುರಿತ ಬರಹ. ಇದರಿಂದ ಒಂದು ಭಾಷೆ ಮತ್ತು ಒಂದು ಲಿಪಿ ಗೊತ್ತಿದ್ದರೂ ಸಾಕು ಉಳಿದವುಗಳನ್ನು ಅರಿತು ಕೊಳ್ಳಬಹುದಾಗಿತ್ತು. ರೊಸೆಟ್ಟಾ ಶಿಲೆಯು ಮೇಲೆ ಮೂರು ವಿಭಿನ್ನ ಲಿಪಿಗಳಲ್ಲಿ ಬರಹವಿರಲು ಕಾರಣ ಆಗ ಈಜಿಪ್ಟಿನಲ್ಲಿ ಮೂರು ಲಿಪಿಗಳು ಬಳಕೆಯಲ್ಲಿ ಇದ್ದವು. . ಮೊದಲನೆಯದು ಪವಿತ್ರ ಲಿಪಿ .ಅದನ್ನು ಧಾರ್ಮಿಕ ಮತ್ತು ಅತಿಮುಖ್ಯವಾದ ರಾಜಕಾರಣದ ವಿಷಯ ದಾಖಲಿಸಲು ಬಳಕೆ ಮಾಡುತಿದ್ದರು. ಎರಡನೆಯದು ಈಜಿಪ್ಟನ್ನು ಆ ಕಾಲದಲ್ಲಿ ಆಳುತಿದ್ದ ಗ್ರೀಕರಭಾಷೆಯ ಲಿಪಿಯಾಗಿತ್ತು. ಮೂರನೆಯದು ಜನ ಸಾಮಾನ್ಯರು ಬಳಸುತ್ತಿರುವ ಸಾಮಾನ್ಯ ಲಿಪಿ (ಡೆಮೊಟಿಕ್) ಆಗಿತ್ತು.
ಆ ಶಾಸನವು ಮೂರು ವರ್ಗದವರಿಗೂ ಸಂಬಂಧಿಸಿರುವುದರಿಂದ ಮೂರು ಲಿಪಿಯಲ್ಲಿ ಬರೆಯಲಾಗಿತ್ತು. ಅದನ್ನು ಅರ್ಚಕರು , ಅಧಿಕಾರಿಗಳು, ಜನಸಾಮಾನ್ಯರು ಮತ್ತು ಆಳುವ ಗ್ರೀಕರು ಓದಿ ತಿಳಿಯಲು ಸಾಧ್ಯವಾಗ ಬೇಕಿತ್ತು. ಅದು ಒಂದು ರಾಜಾಜ್ಞೆಯಾಗಿತ್ತು .
ರೊಸೆಟ್ಟಾ ಶಿಲಾಶಾಸನವನ್ನು ಅರ್ಚಕರ ಗುಂಪೊಂದು ಬರೆಸಿದ್ದರು. ಅದು ಈಜಿಪ್ಟನ್ ಅರಸ ಫೆರೊನ ಕಾರ್ಯವೈಖರಿಯನ್ನು ವಿವರಿಸುವ ವಿಷಯ ಹೊಂದಿತ್ತು. ಇದು ಅರ್ಚಕರ ಸಮೂಹವು ಅನುಮೋದಿಸಿದ ನಂತರ ಕಂಡರಿಸಿದ ಶಾಸನ ಬರಹ.ಈಜಿಪ್ಟನ್ ಅರಸ ಟಾಲಮಿ -V ಯ ಕಿರೀಟ ಧಾರಣೆಯ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹೊರಡಿಸಿದ ಶಾಸನ ಅದಾಗಿತ್ತು.
ಅದರಲ್ಲಿ ರಾಜನು ಅರ್ಚಕರ, ಅಧಿಕಾರಿಗಳ ಮತ್ತು ಜನಸಾಮಾನ್ಯರ ಅನುಕೂಲಕ್ಕಾಗಿ ಮಾಡಿರುವ ಕೆಲಸಗಳ ವಿವರವಾದ ಪಟ್ಟಿ ಇದ್ದಿತು.ಅದರಿಂದ ಅದನ್ನು ಮೂರೂ ವರ್ಗದವರೂ ಓದಿ ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಹಾಗೆ ಬರೆಸಲಾಗಿತ್ತು.
ಈಗಿನ ಇಜಿಪ್ಷಿಯನ್ ಭಾಷೆಯ ಪ್ರಾಚೀನದಲ್ಲಿನ ಒಂದು ಹಂತವನ್ನು ಕಾಪ್ಟಿಕ್ ಎನ್ನುವರು. ಅದನ್ನು ೧೭ ನೇ ಶತಮಾನದವರೆಗೆ ಬಳಸುತಿದ್ದರು. ಆದರೆ ಕ್ರಿ. ಶ. ಮೊದಲನೆಯ ಶತಮಾನದಿಂದಲೇ ಈಜಿಪ್ಷಿಯನ್ಭಾಷೆಯನ್ನು ಗ್ರೀಕ್ ಅಕ್ಷರಗಳಲ್ಲಿ ಬರೆಯಲು ಪ್ರಾಂಭಿಸಿದ್ದರು. ಆ ಲಿಪಿಗಳಲ್ಲಿ ಆರೇಳು ಕಾಪ್ಟಿಕ್ ಲಿಪಿಗಳೂ ಸೇರಿವೆ.
ಈ ಶಾಸನದಲ್ಲಿನ ಕಾಪ್ಟಿಕ್ ಲಿಪಿಗಳನ್ನು ಮೊದಲು ಗುರುತಿಸಿ ಅವುಗಳ ಸಹಾಯದಿಂದ ಉಳಿದವನ್ನೂ ಅರ್ಥೈಸುವ ಕೆಲಸ ಮೊದಲಾಯಿತು..'ಫ್ರೆಂಚ್ ವಿದ್ವಾಂಸನಾದ "ಸಿಲ್ವೆಸ್ಟ್ರೆ ಡಿಸಾಕಿ" ಡೊಮೆಟಿಕ್ಲಿಪಿಯಲ್ಲಿದ್ದ ಟಾಲೆಮಿ ಮತ್ತು ಅಲೆಕ್ಜಾಂಡರ್ ಹೆಸರುಗಳನ್ನು ಗುರುತಿಸುವಲ್ಲಿ ಸಫಲನಾದನುಅದರಿಂದ ಲಿಪಿಗೂ ಧ್ವನಿಗೂ ಇರುವ ಸಂಬಂಧ ಗುರುತಿಸುವುದು ಸಾಧ್ಯವಾಯಿತು.
ಲಿಪಿಗಳುಕೇವಲ ಒಂದು ಭಾಷೆಯ ಪದಗಳನ್ನು ಆಧರಿಸಿರುತ್ತವೆ. ಅನ್ಯ ಭಾಷೆಯ ಹೆಸರು ಬರೆಯುವುದು ಆಗದು. ಆದ್ದರಿಂದ ಪರಭಾಷಾ ಪದ ಬರೆಯಲು ಲಿಪಿ ಧ್ವನಿ ರೂಪಕವಾಗಿರುವುದರಿಂದ ಸಾಧ್ಯ ಎಂದು ನಿರೂಪಿಸಿದನು. ಅಲ್ಲದೆ ಅದರಲ್ಲಿ ಕೆಲವು ಚಿಹ್ನೆಗಳ ಗುಂಪು ತುಸು ಭಿನ್ನ ವಾಗಿದ್ದವು ಅವುಗಳನ್ನು ಪಟ್ಟಿಕೆಯೊಂದು ಆವರಿಸಿತ್ತು. ಅವು ಬುಲೆಟ್ಹೋಲುವುದರಿಂದ ಕರ್ಟಚ್ಚಸ್ಎಂದು ಕರೆದರು ಶಾಸನದಲ್ಲಿ ಅದೇ ರೀತಿಯಲ್ಲಿ ಆವರಣದಲ್ಲಿರುವ ಐದು ಹೆಸರುಗಳನ್ನು ಗುರುತಿಸಲಾಯಿತು.
ಥಾಮಸ್ ಯಂಗ್ ಮೊದಲಿಗೆ ಶಾಸನದಲ್ಲಿನ ಕೆಲವು ಸಂಕೇತಗಳು ಅರಸನನ್ನು ಸೂಚಿಸುತ್ತವೆ ಎಂದು ಅರ್ಥಮಾಡಿಕೊಂಡ. ಅಲ್ಲಿಂದ ಪುರಾತನ ಈಜಿಪ್ಟ ಬರಹಗಳನ್ನು ಅನೇಕ ವರ್ಷ ಅಧ್ಯಯನ ಮಾಡಿದ ಫ್ರೆಂಚ್ ವಿದ್ವಾಂಸ ಜೀನ್, ಫ್ರಾಂಕೊಯಿಸ್ ಮುಂದುವರಿದ. ಗೊತ್ತಿರುವ ಸಂಕೇತಗಳ ಸಹಾಯದಿಂದ ಉಳಿದವನ್ನು ತಿಳಿಯಲು ಪ್ರಯತ್ನಿಸಿದ. ಆ ಕೆಲಸದಲ್ಲಿ ಗ್ರೀಕ್ ಭಾಷೆ ಮತ್ತು ಲಿಪಿಗಳೂ ಸಹಾಯಕವಾದವು. ಈಜಿಪ್ಟ ಮತ್ತು ಗ್ರೀಕ್ ರಾಜ್ಯಗಳ ನಡುವಣ ಪತ್ರವ್ಯವಹಾರದ ದಾಖಲೆಗಳೂ ಲಭ್ಯವಿದ್ದವು. ಅವುಗಳ ಸಹಾಯವೂ ಉಪಯುಕ್ತವಾದವು. ಹೀಗೆ ಇದು ಹೈರೊಗ್ಲಿಫ್ಗಳ ಅರ್ಥೈಸುವಕೆಗೆ ಕೀಲಿ ಕೈ ಆಯಿತು .೧೮೨೨ ರಲ್ಲಿ ನೈಲ್ ನದಿ ತೀರದಲ್ಲಿನ ಸಿಂಬಬೆಲ್ ದೇವಾಲಯದಲ್ಲಿ ಹೊಸ ಶಾಶನಗಳು ಬೆಳಕಿಗೆ ಬಂದವು. ಅವುಗಳನ್ನು ಹೊಸ ಅಧ್ಯಯನದ ಬೆಳಕಿನಲ್ಲಿ ಓದಲು ಸಾದ್ಯವಾಯಿತು. ಅದನ್ನು ಕಟ್ಟಿಸಿದ ಫೆರೊ ( ಅರಸ) 'ರಮಸೆಸ್" ಎಂದು ಗುರುತಿಸಲಾಯಿತು.
ಹೀಗೆ ಈಜಿಪ್ಟಿನ ಪ್ರಾಚೀನ ಸಂಸ್ಕೃತಿ ಮತ್ತು ಮತ್ತು ಭಾಷೆಯನ್ನು ತಿಳಿದುಕೊಳ್ಳುವ ಪ್ರಯತ್ನಕ್ಕೆ ಈ ಅನ್ವೇಷಣೆ ಬುನಾದಿ ಹಾಕಿತು. ಅಲ್ಲಿಂದ ಕೆಲವೇ ದಶಕಗಳಲ್ಲಿ ನೈಲ್ ನದಿ ಕಣಿವೆಯ ನಾಗರಿಕತೆ,ಸಂಸ್ಕೃತಿಯ ಮತ್ತು ಲಿಪಿಯ ಪೂರ್ಣ ಅನಾವರಣವಾಯಿತು. ಆನಂತರದಲ್ಲಿ ಒಂದೆರಡು ದ್ವಿಭಾಷಾ ಶಾಸನಗಳು ದೊರೆತಿವೆ. ಆದರೆ ಪ್ರಪ್ರಥಮ ದ್ವಿಭಾಷಾ ಮತ್ತು ತ್ರಿಲಿಪಿ ಶಾಸನವಾದ ರೊಸೆಟ್ಟಾಶಿಲೆಯ ಸ್ಥಾನದ ಪ್ರಾಮುಖ್ಯತೆಯು ಎಂದಿಗೂ ಕಡಿಮೆಯಾಗದು.ಅದನ್ನು ಬ್ರಿಟಿಷ್ ಮ್ಯೂಜಿಯಂನಲ್ಲಿ ಸುರಕ್ಷಿತವಾಗಿ ಪ್ರದರ್ಶನಕ್ಕೆ ಇಡಲಾಗಿದೆ..ಅದಕ್ಕಾಗಿಯೇ ರೊಜೆಟ್ಟಾ ಶಿಲೆಯನ್ನು ಈಜಿಪ್ಟ್ ಸಂಸ್ಕೃತಿಯ ಬಾಗಿಲ ಬೀಗ ತೆಗೆದ ಕೀಲಿಕೈ ಎನ್ನವರು.