Saturday, August 23, 2014

ಸಾಹಿತ್ಯ ಸಾಕ್ಷಿ ಪ್ರಜ್ಞೆ ಅಸ್ತಂಗತ







ಅನಂತ ಯಾತ್ರೆ ಅಂತ್ಯ.



ಕನ್ನಡ ಸಾಹಿತ್ಯ ಜಗತ್ತಿನ ಮೇರುಶಿಖರ ಉರುಳಿದೆ. ಸಾಹಿತ್ಯ, ವಿಚಾರವಾದ, ರಾಜಕೀಯ ಮತ್ತು ಸಮಾಜಿಕ ವಿಷಯಗಳ ಅಂತರ್ಸಾಕ್ಷಿ ಮೂಕವಾಗಿದೆ. ಒಂದಲ್ಲ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತದ್ದ ಆರು ದಶಕಗಳಿಗೂ ಮಿಕ್ಕಿ ಸಾಹಿತ್ಯವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಬಹುತೇಕ ಸಾಹಿತಿಗಳಂತೆ ದಂತದ ಗೋಪುರದಲ್ಲಿ ಕುಳಿತು ತಮ್ಮ ಸಾಹಿತ್ಯ ಲೋಕದಲ್ಲಿಯೇ ಲೀನವಾಗದೆ. ನಾಡು, ನುಡಿ,ಯ ವಿಷಯಕ್ಕೆ ಸದಾಮಿಡಿಯುತಿದ್ದ  ಪ್ರಗತಿಪರ ಚಿಂತಕ , ವಿಚಾರವಾದಿ  ಸಮಾಜಮುಖಿ , ಜ್ಞಾನ ಪೀಠ ಪ್ರಶಸ್ತಿ ವಿಜೇತ ಉಡುಪಿ ರಾಜ ಗೋಪಾಲಾಚಾರ್ಯ ಅನಂತಮೂರ್ತಿ  ಇನ್ನಿಲ್ಲ.
ಯುವ ಅನಂತ ಮೂರ್ತಿ 
ಅವರ ವಂಶಜರ ಮೂಲ ದಕ್ಷಿಣ ಕನ್ನಡ ಜಿಲ್ಲೆಯಾದರೂ ಜನಿಸಿದ್ದು ಲೋಹಿಯಾವಾದದ ಜನಪರ ಚಳುವಳಿಯ  ನೆಲವಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಲಿ ತಾಲೂಕಿನ ಮೇಳಿಗೆ  ಗ್ರಾಮದಲ್ಲಿ. ಜನನ   ೨೧, ಡಿಸೆಂಬರ್ ೧೯೩೨ ರಂದು.. ಮನೆತನ ಕರ್ಮಠ ಬ್ರಾಹ್ಮಣರದು . ಪ್ರಾಥಮಿಕ ಮತ್ತು ಹೈಸ್ಕೂಲು ಶಿಕ್ಷಣ ತೀರ್ಥಹಳ್ಳಿ ತಾಲೂಕು ದೂರ್ವಾಸಪುರದಲ್ಲಿ. ಮೈಸೂರಿನಲ್ಲಿ ಮಾಸ್ಟರ್‌  ಡಿಗ್ರಿ ಪಡೆದರುಅವರ ಮೈಸೂರುವಾಸ ಅನೇಕ ಉತ್ತಮ ಗೆಳೆಯರನ್ನು  ಒದಗಿಸಿತು ಕೆ. ವಿ ಸುಬ್ಭಣ್ಣ, ಎಚ್ ಎಸ್ ಬಿಳಿಗಿರಿ, ತೇಜಸ್ವಿ, ಸದಾಶಿವ, ವಿಶ್ವನಾಥ ಮಿರ್ಲೆ ಜಿ.ಎಚ್. ನಾಯಕ , ಕಡಿದಾಳ್    ಶಾಮಣ್ಣ , ಡಾ.ರತ್ನ ಮೊದಲಾದ ಗೆಳೆಯರು   ತಿಂಗಳಿಗೊಂದು ಸಲ ವಿಮರ್ಶಕ ವೃಂದ ಎಂಬ ಹೆಸರಲ್ಲಿ ಸೇರಿ ಸಾಹಿತ್ಯ ಚರ್ಚೆಮಾಡುತಿದ್ದರು. ಗೋಪಾಲಕೃಷ್ಣ ಅಡಿಗರೂ ಅಲ್ಲಿ ಹಲವು ಸಲ ಕವನವಾಚನೆ ಮಾಡಿ ಚರ್ಚೆಯಲ್ಲಿಭಾಗವಹಿಸುತಿದ್ದರು.
ಸಿ.ಡಿ ಎನ್‌ ,  ಎಸ್ ವಿ ರಂಗಣ್ನ ಅವರಿಂದ ಇಂಗ್ಲಿಷ್ ಕಲಿಕೆ. ಎಂ. ಎ ನಂತರ ಕಾಮತ್‌ ವೆಲ್ತ್ ವಿದ್ಯಾರ್ಥಿ ವೇತನ ಪಡೆದು  ಇಂಗ್ಲೇಂಡಿನ ಬರ್ಮಿಂಗ್‌ಹ್ಯಾಂನಲ್ಲಿ ಪಿ. ಎಚ್ ಡಿ   ಪಡೆದರು..ಅವರ ಉನ್ನತ ಅಧ್ಯಯನದ ಮಾಹಾಪ್ರಬಂಧ ’Politics and fiction of 1930’s’- ಸಾಹಿತ್ಯ ಮತ್ತು ಜೀವನ ಯಾತ್ರೆಯ ಮುನ್ಸೂಚಿ.


             ಪ್ರೌಢ ಅನಂತ ಮೂರ್ತಿ
ಸಂಪ್ರದಾಯಸ್ಥ ಕುಟುಂಬದಲ್ಲಿ ಜನವಾದ್ದರಿಂದ ಎಳವೆಯಲ್ಲಿಯೇ ಸಂಸ್ಕೃತ ಜ್ಞಾನ ಕರಗತ. 
ಪಿಯುಸಿವಿಜ್ಞಾನ ವಿಭಾಗದಲ್ಲಿ ಫೇಲು. ನಂತರ ಕಲಾವಿಭಾಗದಲ್ಲಿ ಕಲಿಕೆ. ಅಲ್ಲಿ ಉನ್ನತಶ್ರೇಣಿ.    ಹದಿಹರೆಯದಲ್ಲಿ ಲೋಹಿಯಾವಾದಿ ಗೋಪಾಲಗೌಡರ ಸಂಪರ್ಕ. ಕೊಣಂದೂರು ಲಿಂಗಪ್ಪ, ಜೆ. ಎಚ್ ಪಾಟಿಲರ  ಸಹವಾಸದಿಂದ ಸಮಾಜವಾದಿ ಚಳುವಳಿಗಳಲ್ಲಿ ಕ್ರಿಯಾಶೀಲ. ವಿಚಾರವಾದದ ವಕ್ತಾರ. ಬರಿ ಮಾತಿನಲ್ಲಿ ಮಾತ್ರವಲ್ಲ ,ಕೃತಿಯಲ್ಲೂ ಅವರು ನಂಬಿಕೆಯಂತೆ ನಡೆದವರು. ವೈದಿಕ ಹಿನ್ನೆಲೆಯ ಕುಟುಂದ ಪ್ರತಿಭಟನೆಯ ನಡುವೆಯೂ ಪಾಶ್ಚಾತ್ ಜೀವನಶೈಲಿಯ ಅಳವಡಿಕೆ.  ಸಾಧಾರಣ ನಿಲುವಿನ ಉತ್ತಮ ಮೈಕಟ್ಟಿನ ಸುಂದರ ಅನಂತಮೂರ್ತಿಯವರು  ಉಡುಗೆ ತೊಡುಗೆಯಲ್ಲಿ ಸೊಗಸುಗಾರರು. ಕುಡಿತ ಮಾಂಸ ಸೇವನೆಮಾಡಿ ಸಭ್ಯರಂತೆ ಸೊಗುಹಾಕುವ ಆಷಾಡಭೂತಿಗಳಲ್ಲ. ಇದ್ದುದನ್ನು  ಒಪ್ಪಿಕೊಳ್ಳುವ ಎದೆಗಾರಿಕೆ. ತಪ್ಪನ್ನು ಒಪ್ಪಿಕೊಳ್ಳುವ ಪ್ರಾಂಜಲತೆ.ಅವರ ವಿಶೇಷತೆ.
 ..ಅವರ ಬಾಳ ಸಂಗಾತಿ ಎಸ್ತರ್‌  ಅವರನ್ನು ಹಾಸನದಲ್ಲಿ  ಬೋಧಕರಾಗಿದ್ದಾಗಲೇ  ಭೇಟಿಯಾದರೂ .  ಅಂತರ್‌ ಧಾರ್ಮಿಕ ವಿವಾಹಕ್ಕೆ ವರ್ಷಗಟ್ಟಲೇ ಕಾದು ೧೯೫೬ ರಲ್ಲಿ ಮದುವೆಯಾದರು. ಅವರ ಸುಮಾರು ಅರ್ಧಶತಕಕ್ಕೂ ಮಿಕ್ಕಿದ  ಸಾರ್ಥಕ ದಾಂಪತ್ಯದ ಫಲ ಇಬ್ಬರು ಮಕ್ಕಳು. ಶರತ್‌ ಮತ್ತು ಅನುರಾಧ.
ಬಾಳ ಸಂಗಾತಿ ಎಸ್ತರ್‌ ಒಡನೆ
 ಬಾಲ್ಯದಲ್ಲೇ ಸಾಹಿತ್ಯಾಸಕ್ತಿ ಇದ್ದಿತು.ಶಾಲಾಪತ್ರಿಕೆ  ’ ತರಂಗಿಣಿ’ ಪ್ರಾರಂಭಿಸಿ   ಕನ್ನಡ ಇಂಗ್ಲಿಷ್ ಮತ್ತು ಸಂಸ್ಕೃತ  ಬರಹಗಳನ್ನು ಪ್ರಕಟಿಸಿದ್ದರು.ಇವರ ಎಳವೆಯಲ್ಲಿಯೇ ಪ್ರಾರಂಭವಾದ ಸಾಹಿತ್ಯ ಕೃಷಿ  ಸುಮಾರು ಅರವತ್ತು ದಶಕಗಳ ಕಾಲ ಸಮೃದ್ಧವಾಗಿ ಸಾಗಿತು. ಮೊದಲ ಕೃತಿ ಹೊರ ಬಂದಿದ್ದು ಅವರ ಇಪ್ಪತ್ತಮೂರನೆಯ ವಯಸ್ಸಿನಲ್ಲಿ  . ೧೯೫೫ರಲ್ಲಿ "ಎಂದೆಂದೂ ಮುಗಿಯದ ಕತೆ" ಕಥಾ ಸಂಕಲನ. ಮೌನಿಪ್ರಶ್ನೆಆಕಾಶ ಮತ್ತು ಬೆಕ್ಕು -ಇವರ ಕಥಾಸಂಕಲನಗಳು. ಈ ಎಲ್ಲ ಕತೆಗಳನ್ನೂ ಒಳಗೊಂಡ "ಮೂರು ದಶಕದ ಕಥೆಗಳು" ೧೯೮೯ರಲ್ಲಿ ಹೊರಬಂದಿದೆ. ಅನಂತಮೂರ್ತಿಯವರ ಹಲವು ಕತೆಗಳು ಕನ್ನಡ ಸಾಹಿತ್ಯ ವಿಮರ್ಶಕರ ಗಮನ ಸೆಳೆದಿವೆ ಮತ್ತು ಚರ್ಚೆಗೂ ವಿವಾದಕ್ಕೂ ಒಳಗಾಗಿವೆ. ಸೂರ್ಯಕುದುರೆನವಿಲುಗಳುಬರಘಟಶ್ರಾದ್ಧತಾಯಿ,ಹುಲಿಯ ಹೆಂಗರಳು ಈ ಸಾಲಿಗೆ ಸೇರುತ್ತವೆ.
ಅವರ ಕಾದಂಬರಿಗಳು  ಸಾಹಿತ್ಯ  ಜಗತ್ತಿಗೆ ಹೊಸ ದಿಕ್ಕನ್ನೇ ತೋರಿದವು  ೧೯೬೫ರಲ್ಲಿ  ಪ್ರಕಟವಾದ ಇವರ.   ಕಾದಂಬರಿ "ಸಂಸ್ಕಾರ" ಬ್ರಾಹ್ಮಣ ಸಂಪ್ರದಾಯದ ಅಸಂಗತೆಯನ್ನು ವಿಶದ ಪಡಿಸುವ ಈ ಕೃತಿ  ಪ್ರಕಟವಾದಾಗ ತುಂಬ ವಿವಾದವನ್ನುಂಟು ಮಾಡಿತು. ಇದು ಹಲವಾರು ದೇಶಿ ಮತ್ತು ವಿದೇಶಿಯ ಭಾಷೆಗಳಿಗೆ ಅನುವಾದಗೊಂಡಿದೆ. ಭಾರತೀಪುರ,ಅವಸ್ಥೆ ಮತ್ತು ಭವ -ಇವರ ಇತರ ಕಾದಂಬರಿಗಳು. ಅವರು ೧೯೫೮ ರಲ್ಲಿ ಬರೆದು ಪ್ರಕಟವಾಗಿರದಿದ್ದ "ಪ್ರೀತಿ-ಮೃತ್ಯು-ಭಯ"ಎಂಬ ಕಾದಂಬರಿ ೨೦೧೨ ಜೂನ್ ೧೦ಕ್ಕೆ ಬಿಡುಗಡೆಯಾಯಿತು.
ಚಲನ ಚಿತ್ರಂಗದಲ್ಲೂ ಇವರ ಕೃತಿಗಳು ಅಲೆ ಎಬ್ಬಿಸಿವೆ. ಅನಂತಮೂರ್ತಿಯವರ ಸಂಸ್ಕಾರಅವಸ್ಥೆ ಕಾದಂಬರಿಗಳನ್ನು ಮತ್ತು ಬರಘಟಶ್ರಾದ್ಧ ಕತೆಗಳನ್ನು ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿವೆ. ಇವೆಲ್ಲವೂ ಮಹತ್ವದ ಚಿತ್ರಗಳಾಗಿದ್ದುರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ.ಘಟಶ್ರಾದ್ಧ ಕತೆಯನ್ನು ಆಧರಿಸಿ "ದೀಕ್ಷಾ" ಎಂಬ ಹಿಂದಿ ಚಲನಚಿತ್ರವೂ ತಯಾರಾಗಿದೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು  ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ.
ಜ್ಞಾನಪೀಠಪ್ರಶಸ್ತಿ ಪಡೆದಾಗ
ಅವರು  "೧೫ ಪದ್ಯಗಳು", "ಮಿಥುನ" ಮತ್ತು "ಅಜ್ಜನ ಹೆಗಲ ಸುಕ್ಕುಗಳು" ಎಂಬ ಮೂರು ಕವನ ಸಂಕಲನಗಳನ್ನೂ ಮತ್ತು . .ಆವಾಹನೆ" ಎಂಬ ಒಂದು ನಾಟಕವನ್ನು ರಚಿಸಿದ್ದಾರೆ.ಪ್ರಜ್ಞೆ ಮತ್ತು ಪರಿಸರಪೂರ್ವಾಪರಸಮಕ್ಷಮ -ಇವು ಅವರ ಪ್ರಬಂಧ ಸಂಕಲನಗಳು. ಇಷ್ಟಲ್ಲದೆ ಇಂಗ್ಲೀಷಿನಲ್ಲಿ ಇವರು ಬರೆದಿರುವ ಹಲವಾರು ಪ್ರಬಂಧಗಳು ದೇಶ-ವಿದೇಶಗಳ ಸಾಹಿತ್ಯಿಕ   ಪತ್ರಿಕೆಗಳಲ್ಲಿ ಪ್ರಕಟವಾಗಿವೆ.೧೯೮೧ರಲ್ಲಿ ರಾಜಕೀಯಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಷಯಗಳಿಗೆಂದು "ರುಜುವಾತು" ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದರು. 
ಇನ್ನೊಬ್ಬ  ಜ್ಞಾನ ಪೀಠಿ ಗಿರೀಶ್‌ಕರ್ನಾಡರೊಡನೆn
ಇವರು ಪ್ರಶಸ್ತಿಗಳ ಸರಮಾಲೆಯನ್ನೇ ಧರಿಸಿದವರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ಮಾಸ್ತಿ ಪ್ರಶಸ್ತಿ –ಮತ್ತು  ಜ್ಞಾನ ಪೀಠ ಪ್ರಶಸ್ತಿಗಳು  ಅನಂತಮೂರ್ತಿಯವರಿಗೆ ಬಂದಿವೆ. ಅಂತರಾಷ್ಟ್ರೀಯ ಮಟ್ಟದ ಬೂಕರ್‌ಪ್ರಶಸ್ತಿಯ ಅಂತಿಮ ಹಂತ ತಲುಪಿದ್ದರು.. ಭಾರತ ಸಕಾರದ ಪದ್ಮ ಭೂಷಣವೂ ದೊರೆತಿದೆ. ಸಂಸ್ಕಾರಘಟಶ್ರಾದ್ಧ ಮತ್ತು ಬರ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಅನಂತಮೂರ್ತಿಯವರಿಗೆ ಪ್ರಶಸ್ತಿ ಸಿಕ್ಕಿದೆ.
ಇಂಗ್ಲಿಷ್‌  ಪ್ರವಾಚಕರಾಗಿ ವೃತ್ತಿ ಪ್ರಾರಂಭಿಸಿದ ಇವರು ಹಂತಹಂತವಾಗಿ ಮೇಲೇರಿ ಪ್ರಾಧ್ಯಾಪಕರಾದರು. 
ದೇಶವಿದೇಶಗಗಳ ಪ್ರತಿಠಿತ ಸಂಸ್ಥೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವರು , ಕೇರಳದ ಮಹಾತ್ಮಗಾಂಧಿ ವಿಶ್ವ ವಿದ್ಯಾಲಯ, ಕರ್ನಾಟಕದ ಸೆಂಟ್ರಲ್‌ ಯುನಿವರ್ಸಿಟಿಯ    ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು. ವ್ಯಾಪಕವಾಗಿ ವಿದೇಶಿ ಪ್ರವಾಸ ಮಾಡಿರುವ ಅವರು ಭಾಗವಹಿಸಿದ  ಅಂತರಾಷ್ಟ್ರೀಯ ಸಮ್ಮೇಳನ ಮತ್ತು ವಿಚಾರಸಂಕಿರಣಗಳು ಅಸಂಖ್ಯಾತ.  ನ್ಯಾಷನಲ್‌ಬುಕ್‌ ಟ್ರಸ್ಟ, ಕೇಂದ್ರ ಸಾಹಿತ್ಯ ಅಕಾಡೆಮಿ, ನ್ಯಾಷನಲ್‌ ಫಿಲ್ಮ್‌ ಅಂಡ್‌  ಟೆಲಿವಿಜನ್‌ ಇನಸ್ಟಿಟ್ಯೂಟ್ ಅದ್ಯಕ್ಷರಾಗಿ ಸೇವೆ ಸಲ್ಲಿಸಿರುವರು. ರಾಷ್ಟ್ರ ಮಟ್ಟದಲ್ಲಿ ಅನಂತಮೂರ್ತಿಇಲ್ಲದ ಯಾವುದೇ ಸಾಹಿತ್ಯ ಸಮಾರಂಭ ಅಪರೂಪ..
ಅನಂತ ಮುರ್ತಿಯವರ  ಸಾಮಾಜಿಕ ಪ್ರಜ್ಞೆ ಸದಾಜಾಗೃತ. ಕೊನೆಯವರೆಗೂ ಪ್ರತಿಯೊಂದು ಸಮಸ್ಯೆಗೂ ಅವರ ಸ್ಪಂದನೆ ಇದ್ದೇ ಇರುತಿತ್ತು ಅದು ಜನಪರ ಎಂದು ಅವರು ಭಾವಿಸಿದ್ದರೆ ಜನಪ್ರಿಯವಲ್ಲದ ನಿಲುವಿಗೂ ಅವರು ಬದ್ದರು..ಹೀಗಾಗಿ ಅನೇಕ ವಿವಾದಗಳ ಹುತ್ತ ಅವರ ಸುತ್ತ . 
ಜ್ಯಾತೀತ ದಳದ ನಾಯಕರೊಡನೆ
ರಾಜಕೀಯವಾಗಿ ಕ್ರಿಯಾಶೀಲ. ಬಲಪಂಥದ ಕಟ್ಟಾ ವಿರೋಧಿ. ಸಕ್ರಿಯ ರಾಜಕಾರಣಿಗಳ  ಸಂಗ ಅವರಿಗೆ ಅಧಿಕಾರದ ಹಪಾ ಹಪಿ ಇದೆ ಎನಿಸುವಷ್ಟು ನಿಕಟ. ದಿ.ರಾಮಕೃಷ್ಣಹೆಗಡೆ,ದಿ ಜೆ.ಎಚ್‌.ಪಟೇಲ್,ಮಾಜಿಪ್ರದಾನಿ, ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಾದವರು  ಬಹಳ ಹತ್ತಿರ. ರಾಜ್ಯಸಭಾ ಸದಸ್ಯರಾಗ ಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆ ಸೇರಿದ್ದು ಟೀಕೆಗೆ ಕಾರಣವಾಗಿತ್ತು.  ಯಾರವರು ಅನಂತಮೂರ್ತಿ? ಎಂದು ರಾಜಕೀಯ ನಾಯಕರೊಬ್ಬರು ವ್ಯಂಗ್ಯವಾಡಿದರೂ ಸಂಕೋಚವಿಲ್ಲ.. ಮೋದಿಯವರು ಪ್ರಧಾನ ಮಂತ್ರಿಯಾದರೆ ದೇಶ ತೊರೆಯುವೆ ಎಂಬ ಅವರ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣ.

 ಸಾಹಿತ್ಯ ರಂಗದಲ್ಲೂ ವಿಚಾರವಾದಿಗಳು ಮತ್ತು ಎಡಪಂಥೀಯರೆಡೆಗೆ ಒಲವು. ಅವರ ಮತ್ತು ಎಸ್ ಎಲ್ ಬೈರಪ್ಪನವರ ಜೊತಗಿನ  ವೈಚಾರಿಕ ಘರ್ಷಣೆ ತುಂಬ ಕುತೂಹಲಕಾರಿ. ಅವರೊಂದು ರೀತಿಯ ಯೋಚನಾ ಲಹರಿಯ , ವಿಚಾರ ಪ್ರಜ್ಞೆಯ ಸಾಕ್ಷಿಪ್ರಜ್ಞೆ. ಅಳಕು ಅಂಜಿಕೆ ಇಲ್ಲದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ದಿಟ್ಟ. ವರಿಗೆ ಯುವಬರಹಗಾರರನ್ನು ಕಂಡರೆ ಬಹು ಪ್ರೀತಿ. ಹೊಸ ವಿಚಾರಕ್ಕೆ ತೆರೆದ ಮನ.. ಅವರ ಅಗಲುವಿಕೆಯಿಂದ ನೂರಾರು ಬರಹಗಾರಿಗೆ ಅನಾಥ ಪ್ರಜ್ಞೆ ಕಾಡುವುದು ಖಂಡಿತ.

ಭಾರತೀಯ ಸಾಹಿತ್ಯ ರಂಗದಲ್ಲಿ ಕರ್ನಾಟಕದ ಸಾಮಾಜಿಕ ವಲಯದಲ್ಲಿ ಒಂದು ಬಹು ಪ್ರಭಾವಿ ವರ್ಣರಂಜಿತ ವ್ಯಕ್ತಿತ್ವದ ಕೊರತೆ ಬಹುಕಾಲದವರೆಗೆ ಕಾಡುವುದು. ಅವರಿಗಿರುವ ಪ್ರಾಮುಖ್ಯತೆ,ಜನಪ್ರಿಯತೆ ಮತ್ತು ಸಾಹಿತ್ಯ ಸಾಧನೆಯ ಸಂಕೇತವಾಗಿ ರಾಜ್ಯ ಸರ್ಕಾರವು ಮೂರುದಿನ ಶೋಕಾಚರಣೆ ಘೋಷಿಸಿದೆ. ಸಮಾಜ ಮತ್ತು ರಾಜಕಾರಣದ ಮಾರ್ಗದರ್ಶಕನಿಗೆಸಕಲಸರ್ಕಾರಿಗೌರವದೊಂದಿಗೆ ಅಂತಿಮಕಾರ್ಯ ಆಚರಣೆಗೆ ಮುಂದಾಗಿದೆ. ಆಗಸ್ಟ ೨೨, ೨೦೧೪ ರಂದು ಉದ್ದಾಮ ಸಾಹಿತಿ, ಪ್ರಖರ ಸಾಮಾಜಿಕ ಕಳಕಳಿ ಹೊಂದಿರುವ ಸಮಾಜಮುಖಿ, ಅಖಂಡ ಜೀವನಪ್ರೀತಿ ಹೊಂದಿದ  ಅನಂತಮೂರ್ತಿಯವರ ಆತ್ಮ ಅನಂತದಲ್ಲಿ ಲೀನವಾಗಿದೆ.


No comments:

Post a Comment