Sunday, September 30, 2012

ಟಯೋಟ ಕಾರಲ್ಲಿ ಕುಳಿತು ತಳ್ಳುಗಾಡಿಯ ತಿಂಡಿಗೆ ಕಾಯುವರು



ಸಮಯ ರಾತ್ರಿ ಹತ್ತು ಮೀರಿತ್ತು. ರವೀಂದ್ರ ಕಲಾಕ್ಷೇತ್ರದಲ್ಲಿ ಆಕಾಶವಾಣಿ ಸಂಗೀತೋತ್ಸವದಲ್ಲಿ ವಿದ್ವಾನ್‌ಗಣಪತಿ ಭಟ್‌ ಹಾಸಣಗಿ ಅವರ ಸಂಗೀತ ಕಾರ್ಯಕ್ರಮ.ಅಟೋ ಸಿಗಲಿಲ್ಲ. ಸರಿ ಬಂದ ಸಿಟಿ ಬಸ್‌ಹತ್ತಿ ರಾಮಕೃಷ್ಣ ಮಠ ವೃತ್ತದಲ್ಲಿ ಇಳಿದು ಅಲ್ಲಿಂದ ನರಸಿಂಹರಾಜಾ ಕಾಲೊನಿಯ ಮನೆಗೆ ನಡೆದೆ ಹೋದರಾಯಿತು ಎಂದು ಹೊರಟೆವು. ಸದಾ ಗಿಜಿಗುಟ್ಟುವ ಗಾಂಧಿ ಬಜಾರ ಆಗಲೆ ಭಣ ಗುಟ್ಟುತಿತ್ತು.ಜನಸಂಚಾರ ಕಡಿಮೆ. ಅಲ್ಲೊಂದು ಇಲ್ಲೊಂದು ಕಾರ್ ಭುರ್‌ ಎಂದು ಸಂಚಾರಿ ದೀಪದ ಹಂಗಿಲ್ಲದೆ ಜೋರಾಗಿ ಹಾರ್ನಹಾಕುತ್ತಾ ಹೊರಟಿದ್ದವು. ಇನ್ನು ದ್ವಿಚಕ್ರವಾಹನಗಳ ಭರಾಟೆಯಂತೂ ಹೇಳುವ ಹಾಗೆ ಇಲ್ಲ. ಎಲ್ಲರಿಗೂ ಮನೆ ಸೇರುವ ಆತುರ. ರಸ್ತೆ ಬದಿಯ ಹೂವಿನ ಹಣ್ಣಿನ ಅಂಗಡಿಯವರು, ಫುಟ್‌ಪಾತ್‌ನಲ್ಲಿನ ವ್ಯಾಪಾರ ಮಾಡುವವರು ಗಂಟು ಮೂಟೆ ಕಟ್ಟಿಯಾಗಿತ್ತು.ಚನ್ನೈ ನಿಂದ ಬಂದ ಮಗ , ವಾರದ ರಜೆಇರುವ ಮಗಳು ಜೊತೆಯಾಗಿ ಮಾತನಾಡುತ್ತಾ ಬೆಣ್ಣೆ ಗೋವಿಂದಪ್ಪ ಸರ್ಕಲ್‌ಗೆ ಬಂದೆವು..ನಿವೃತ್ತರ ಸ್ವರ್ಗ ಎಂದು ಹೆಸರಾಗಿದ್ದ ಬೆಂಗಳೂರು ಇತ್ತೀಚೆಗೆ ಮೊದಲಿನ ಪ್ರಶಾಂತತೆಯನ್ನು ಕಳೆದುಕೊಂಡಿದೆ. ಐಟಿ ಬಿಟಿಯ ಕಟಿಪಿಟಿ,  ಬಿಪಿಒಗಳ  ಭರಾಟೆಯಲ್ಲಿ ರಾತ್ರಿ ಯಲ್ಲಿಯೆ ದೂರದ ಅಮೇರಿಕಾದ ಕರೆಗ ಉತ್ತರಿಸುವ ಕೆಲಸ ಬಹಳ ಯುವಜನರಿಗೆ ಕಣ್ಣು ತುಂಬ ನಿದ್ದೆ ಕಸಿದು  ಕೈತುಂಬ ಕಾಸು ಕೊಡುವ ಕೆಲಸ ಕೊಟ್ಟಿದೆ.ಪಾರ್ಥನ ಹೆಸರು ಪೀಟರ್‌, ಸೌಮ್ಯಳ ಹೆಸರು ಶಾಲಿ ಎಂದುಹೊಸ ನಾಮಕರಣ. ಅಮೇರಿಕಾದ ಗ್ರಾಹಕರ ವಿಚಾರಣೆಗೆ ಅವರದೆ ಭಾಷೆಯ ದಾಟಿಯಲ್ಲಿ ಪಟಪಟನೆ ಉಲಿಯುತ್ತಾ ಮಧ್ಯ ಮಧ್ಯ ಕಣ್ಣು ರೆಪ್ಪೆ ಕೂಡಿದರೆ, ಎದ್ದು ಹೋಗಿ ಕಾಫಿ ಕುಡಿಯುವ, ನಾಲಕ್ಕು ಹೆಜ್ಜೆ ಹಾಕಿ  ಮಧ್ಯ ರಾತ್ರಿಯ ತಂಗಾಳಿಗೆ ಮುಖ ಒಡ್ಡಿ ಮತ್ತೆ ಕಿವಿಗೆ ಇಯರ್‌ಪೋನುಹಾಕಿ ಬರುವ ಕರೆಗಳನ್ನು ಸ್ವೀಕರಿಸಿ ಸಂದೇಹ ನಿವಾರಿಸುವ ಯುವಕರ ರಾತ್ರಿಪಾಳಿಯ ಕಾಲ್‌ ಸೆಂಟರ್‌ಗಳು ಬಹು ಮಹಡಿ ಕಟ್ಟಡಗಳಲ್ಲಿ ಕಚೇರಿಗಳಲ್ಲಿದ್ದ ಬೆಳಕು ಈಗ ಅಲ್ಲಿ ಇಲ್ಲಿ  ಕಾಣುತ್ತಿದೆ. ಹೀಗಾಗಿ ಸಾಮಾನ್ಯ ಹೋಟೇಲು ದರ್ಶಿನಿ ,ಅಂಗಡಿ ಮುಂಗಟ್ಟು ಮುಚ್ಚಿದರೂ ಸಂಗೀತ ಹೊರ ಹೊಮ್ಮಿಸುವ ತಾರಾ ಹೋಟೇಲುಗಳ ಮುಂದೆ ಕಾರು, ಬೈಕುಗಳ ಸಮಾವೇಶ ಸೇರುವುದು ಸಾಮಾನ್ಯ. ಆದರೆ ಇನ್ನು ಬೆಂಗಳೂರಿನ ಹಳೆಯಸಂಪ್ರದಾಯದ ಜನರೆ ಹೆಚ್ಚಿರುವ ಗಾಂಧಿ ಬಜಾರ್‌ನಲ್ಲಿ ಆ ಹಾವಳಿ ಕಡಿಮೆ. ನ್ಯೂಯಾರ್ಕಅನ್ನು ನಿದ್ರಿಸದ ನಗರ ಎಂದು ಕರೆಯುವರು. ಈಗ ಬೆಂಗಳೂರು ಸ್ವಲ್ಪ ಮಟ್ಟಿಗೆ ಅದೆ ಹಾದಿ ಹಿಡಿದರೂ ಕೆಲವು ಪ್ರದೇಶಗಳು ನಿದ್ರೆಯ ಮಡಿಲಿಗೆ ಜಾರುತ್ತವೆ.ಗಾಂಧಿ ಬಜಾರಿನಲ್ಲಿ ಬಿಪಿಒ ಗಳ, ಕಾಲ್‌ಸೆಂಟರ್‌ಗಳ ದಟ್ಟಣೆ ಇಲ್ಲ. ತಾರಾ ಹೋಟೇಲುಗಳ ಮೆರಗೂ ಕಡಿಮೆ. ಹಾಗಾಗಿ ಬಹುತೇಕ ರಸ್ತೆಗಳು ಬಿಕೋ ಎನ್ನುತಿದ್ದವು.ನಾವು ಬಸ್ಸಿನಿಂದ ಇಳಿದು ಡಿವಿಜಿ ರಸ್ತೆಯಲ್ಲಿ ತಿರುವು ತೆಗೆದುಕೊಂಡು ಮನೆಯ ಕಡೆ ಮುಖ ಮಾಡುವಾಗ ಸೋದೆ ಮಠದವಿರವ ಗೋವಿಂದಪ್ಪ ರಸ್ತೆಯ ಸರ್ಕಲ್ಲಿನಲ್ಲಿ ಜನ ಸೇರಿದ್ದು ಕಾಣಿಸಿತು. ಗಣೇಶೋತ್ಸವ ಒಂಬತ್ತಕ್ಕೆ ಕೊನೆ. ಅದೂ ನಾಲಕ್ಕಾರು ಕಾರುಗಳು ಹತ್ತಾರು ಬೈಕುಗಳು ಬಾಗಿಲುಮುಚ್ಚಿದ ಅಂಗಡಿಯಮುಂದೆ ನಿಲುಗಡೆ ಮಾಡಿ ಟಿಪ್‌ಟಾಪ್ ಉಡುಪು ಧಾರಿಗಳಾದ ಮೇಲ್ವರ್ಗದ ಜನ ತಮ್ಮ  ಸಂಗಾತಿಗಳ ಸಮೇತರಾಗಿ ಕಾಯುತಿದ್ದರು. ಒಂದಿಬ್ಬರು  ಮಕ್ಕಳು ಮರಿಗಳನ್ನು ಜೊತೆಗಿಟ್ಟುಕೊಂಡು ನಿಂತಿರುವುದು ಕಂಡು ಬಂದಿತು. ಕುತೂಹಲದಿಂದ  ಹೋಗಿ ನೋಡಿದೆವು. ಅದೇ ಸಮಯದಲ್ಲಿ ಅಲ್ಲಿಯೆ ನಿಂತ ತಳ್ಳುಗಾಡಿಯಲ್ಲಿ ಬಿಸಿಬಿಸಿ ತಿಂಡಿ ತಯಾರಿಸುವ ಸಿದ್ಧತೆ ಆಗತಾನೆ ನಡೆದಿತ್ತು ನೀಲಿ ಜ್ವಾಲೆಯ ಮೇಲೆ ಕರಿಯ ಹಂಚು ,ಪಕ್ಕದಲ್ಲೆ ತಾಜಾ ಇಡ್ಲಿ ತಯಾರಿಸುವ ಅಲ್ಯುಮಿನಿಯಂನ  ಆಯತಾಕಾರದ ಬಿಳಿ ಪಾತ್ರೆಯ ಪಕ್ಕದಲ್ಲಿ ಹಿಟ್ಟು ಕಲೆಸುವುದು ಕಾಣಿಸಿತು. ಬೆಂಗಳೂರಿನಲ್ಲಿ ತಳ್ಳುಗಾಡಿಯಲ್ಲಿ ತಿಂಡಿಗೆ ಮುಕುರವ ಜನಕ್ಕೇನೂ ಕಡಿಮೆಇಲ್ಲ.ಆದರೆ ರಾತ್ರಿ ಹತ್ತೂವರೆಗೆ ದೋಸೆ ಚುಂಯ್‌ ಎನಿಸುವ. ಮತ್ತು ಅದಕ್ಕಾಗಿ ಕಾರಿನಲ್ಲಿ ಬಂದು ಕಾಯುವ ಪರಿ ತುಸು ಅಚ್ಚರಿ ಮೂಡಿಸಿತು.ಕುತೂಹಲದಿಂದ ಹತ್ತಿರ ಹೋಗಿ ವಿಚಾರಿಸಲಾಗಿ ಬೆಣ್ಣೆ ಗೋವಿಂದಪ್ಪನ ವೃತ್ತದಲ್ಲಿ ರಾತ್ರಿ ಹತ್ತರಿಂದ ೨ ತಾಸು ಕಾರ್ಯ ನಿರ್ವಹಿಸುವ ಈ ಸಂಚಾರಿ ಹೋಟೇಲು ಬಹುಪ್ರಖ್ಯಾತ ಎಂದು ತಿಳಿಯಿತು. ಅದೂ ಇಂದು ನಿನ್ನೆಯದಲ್ಲ. ಸುಮಾರು ಮೂರುನಾಲಕ್ಕು ದಶಕದಿಂದ ನಡೆಸಿಕೊಂಡ ಹೆಗ್ಗಳಿಕೆ ಅದರದು.ತುಸು ದೊಡ್ಡದೆ ಆದ ತಳ್ಳುಗಾಡಿ. ಅದಕ್ಕೆ ಕಾರಿನ ಚಕ್ರದಷ್ಟೆ ದೊಡ್ಡದಾದ ನಾಲಕ್ಕು ಗಾಲಿಗಳು. ತಾತ್ಕಾಲಿಕ ವಿದ್ಯುತ್‌ ಸೌಲಭ್ಯವೂ ಇದೆ. ಮೂರು ನಾಲಕ್ಕು ಗ್ಯಾಸ್‌ ಒಲೆಗಳು. ಸರಿ ಸುಮಾರು  ಎಂಟುಹತ್ತು ಜನ ಕೆಲಸಗಾರರು,ಬಂದ ತಕ್ಷಣ ಸಿದ್ಧವಾಗಿದ್ದ ರೈಸ್‌ಭಾತ್‌ಗೆ ಜನ ಮುತ್ತಿದರು.. ಅದೂ ದೊಸೆಯ ಹೆಂಚು ಕಾಯುವ ಮತ್ತು ಇಡ್ಲಿ ಬೇಯುವ ತನಕ ಮಾತ್ರ ಲಭ್ಯ.. ಅರ್ಧ ಗಂಟೆಯಲ್ಲಿ ರೈಸ್‌ ಭಾತ್‌ಖಾಲಿ. ಹೆಂಚಿನ ಮೇಲೆ ದೊಸೆ ಚುಂಯ್‌ ಎನ್ನುವಷ್ಟರಲ್ಲಿ ನೂರಾರು ಪ್ಲೇಟು ಭಾತ್‌ ಖರ್ಚಾಗಿರುತ್ತದೆ. ಆನಂತರ ಬೇಕೆಂದರೂ ಸಿಗದು. ಚಕಚಕನೆ ಕೆಲಸ ಮಾಡುವರು. ಅವರೆಲ್ಲ ಹೆಸರಾಂತ ಹೋಟೇಲ್‌ ಒಂದರ ಅನುಭವಿ ಕೆಲಸಗಾರರು. ತಮ್ಮ ನಿತ್ಯದ ಕಾಯಕ ಮುಗಿಸಿ ಇಲ್ಲಿ ರಾತ್ರಿ ಹತ್ತರ ಮೇಲೆ ಎರಡುತಾಸು ಬಿಸಿಬಿಸಿ ತಿಂಡಿ ಆಗಿಂದಾಗಲೆ ತಯಾರಿಸಿ ನೀಡುವರು. ಅವರಕೈ ರುಚಿ ಯಾವ ತಾರಾ ಹೋಟೇಲಿಗೂ ಸರಿ ದೊರೆಯಾಗಿರುವುದು. ಜೊತೆಗೆ ಬೆಲೆಯೂ ದುಬಾರಿಯಲ್ಲ. ಅದಕ್ಕೆಂದೆ ಜನ ಕಾದು ನಿಂತು ಟೋಕನ್‌ ಪಡೆಯುವರು. ಹಂಚಿನಿಂದ ಕೈಗೆ ಬರುವ ತಿಂಡಿಯನ್ನು ಉಫ್ ಉಫ್‌  ಎನ್ನುತ್ತಾ ಸವಿಯುವರು.ಅಲ್ಲಿ ಹೆಚ್ಚಿನ ವೈವಿಧ್ಯಮಯ ತಿಂಡಿಗಳಿಲ್ಲ. ಒಂದು ರೈಸ್‌ಬಾತ್‌ , ಹಬೆಯಾಡುವ ಇಡ್ಡಲಿ ಮತ್ತು ಒಂದೆರಡು ವಿಧದ ಬಿಸಿ ಬಿಸಿ ದೋಸೆ ಮಾತ್ರ ಲಭ್ಯ.ಯಾವುದೆ ಕರಿದ ದಿನಿಸು ಇಲ್ಲ. ಮೂರು ಇಡ್ಡಲಿ. ರೈಸ್‌ಭಾತಿಗೆ ೨೦ ರೂಪಾಯಿ. ಯಾವುದೆ ದೋಸೆಗೆ ಇಪ್ಪತ್ತೈದುರೂಪಾಯಿ.ಅಲ್ಲಿ ಮುಚ್ಚಿದ ಅಂಡಿಯ ಕಿರುಕಟ್ಟೆಯ ಮೇಲೆ  . ಫುಟ್‌ ಪಾತ್‌ನಲ್ಲಿ ಬದಿಗೆ ನಿಲ್ಲಿಸಿದ ಕಾರಿನಲ್ಲಿಯೆ ಕುಳಿತು ಬಿಸಿಬಿಸಿ ತಿಂಡಿಯನ್ನು ತಡಮಾಡದೆ ತಿಂದು ಜಾಗ ಖಾಲಿ ಮಾಡುವವರು ಬಹಳ. ಜೊತೆಗೆ ಒಂದೆರಡು ಪ್ಲೇಟು ರೈಸ್‌ಭಾತ್‌ ಕಟ್ಟಿಸಿಕೊಂಡು ಮನೆಗೆ ಹೋಗವವರೂ ಇದ್ದರು. ತಟ್ಟೆ ಪ್ಲೇಟುಗಳಿಗಿಂತ ಅದರಲ್ಲಿಟ್ಟ ತಿಂಡಿತಿನಿಸು ಸವಿಯಾಗಿದ್ರೆ ಶುಚಿಯಾಗಿದ್ದರೆ ಸಾಕು ರಸ್ತೆ ಬದಿಯಾದರೂ ಅವರು ನಿಗದಿಮಾಡಿದ ಹೊತ್ತಿಗೆ ಬಂದು ಕಾದು ನಿಂತು ಎಲೆಯಲ್ಲಿ ನೀಡುವ ತಿಂಡಿ ತಿನ್ನುವ ಪರಿ ನೋಡಿ ಬಾಯಿ ರುಚಿಗೆ, ಬೆಲೆಕೊಡುವ ರಸಿಕರು ಬೆಂಗಳೂರಿನಲ್ಲಿ ಇನ್ನೂ ಇದ್ದಾರೆ ಎಂಬುದು ಖಚಿತವಾಯಿತು.ಎರಡು ತಾಸಿನ ಕೆಲಸ.. ಸುಮಾರು ನಲವತ್ತು  ಸಾವಿರ ಆದಾಯ. ಖರ್ಚುಕಳೆದು ಎಲ್ಲರಿಗೂ ಲಾಭ ಹಂಚಿಕೆ.  ಆದಾಯ ಸಾವಿರಕ್ಕೆ ಕಡಿಮೆಇಲ್ಲ. ನಾವು ಅಲ್ಲಿನ ತಿಂಡಿ ಸವಿದು ಮನೆಯತ್ತ ಹೆಜ್ಜೆಹಾಕಿದೆವು. ಮನೆ ಮುಟ್ಟಿದಾಗಲೂ ಬಾಯಲ್ಲಿ ತಿಂಡಿಯ ರುಚಿಯಘಮಲು  ಇನ್ನೂ ಇತ್ತು . ಬೆಣ್ಣೆ ಗೋವಿಂದಪ್ಪನ ವೃತ್ತದಲ್ಲಿನ ರಾತ್ರಿ ಹತ್ತರ ಮೇಲೆ ಜನರ ಹಸಿವು ತಣಿಸುವ . ತಳ್ಳು ಗಾಡಿಯ ತಿಂಡಿ ಬೆಂಗಳೂರಿನ ಪರಂಪರೆಯ ಭಾಗವಾಗಿ ಹೋಗಿರುವ ಕಾರಣ ಆಗ ನಮಗೆ ಗೊತ್ತಾಯಿತು.

Friday, September 28, 2012

ಸಾಸರಿನಿಂದ ನಾ ಕುಡಿವೆ



ಈ ವರೆಗೆ  ಸಿರಿಯ   ನಾ  ಗಳಿಸಿಲ್ಲ 
ಮುಂದೆ  ನಾ ಉಳಿಸುವುದು  ಇಲ್ಲ 
ಆದರೂ  ನನಗಿಲ್ಲ  ಯಾವುದೇ  ಚಿಂತೆ 
ಸುಖಿಯಾಗಿ  ನಾನಿರಲು  ಬೇರೆ  ಏಕಂತೆ ?
ಬಾಳದಾರಿಯಲ್ಲಿ  ನಾ ನಡೆಯುತಿರುವಾಗ  
 ಬಿತ್ತಿದಕಿಂತಲು ಪಡೆದ ಫಲ ಬಹಳ 
ಕಪ್ಪಿನಲ್ಲಿ  ಹಾಲು ತುಂಬಿ  ತುಳುಕಿದೆ  ತಾನು 
 ನನ್ನ  ಬಳಿ ಹಣ ಬಹಳ  ಏನಿಲ್ಲ 
ಕೆಲವು ಸಲ ಜೀವನ ನಡೆವುದೇ  ಕಠಿನ 
ಬಂದ ಬಂದವರು ನೀಡುತಿರೆ ಭರವಸೆ 
ಬೇಕೇನು    ಬದುಕಿಗೆ ಬೇರೆ  ಭರವಸೆ .
                                      
ಕರುಣಾಮಯ  ದೇವನಿಗೆ  ವಂದನೆ
ದಯೆಯ  ಮಳೆಗರೆದಿರುವ  ಎನ್ನ ಮೇಲೆ 
ಸಾಸರಿ ನಿಂದ ಸುಖವ  ಕುಡಿಯುತಿರುವೆ  
ಕಾರಣ  ತುಂಬಿ  ತುಳುಕಿದೆ  ಬಟ್ಟಲು 
                                        
ಶಕ್ತಿ  ಮತ್ತು ಧೈರ್ಯ ವದನು  ಅವನು 
ಬಾಳ ಬಟ್ಟೆಯಲ್ಲಿ  ಹರಡಿದಿರೆ ಮುಳ್ಳುಕಲ್ಲು 
ಹೆಚ್ಚೇನು  ಬೇಡಲಿ  ಅವನ ನಾನು 
ಈಗಾಗಲೇ  ನೀಡಿರುವ  ಎಲ್ಲ ತಾನು 
                                       
ನಮಗೆ  ಸದಾ ದೊರಕಲಿ  ಪುರುಸೊತ್ತು
ಆಸರೆ ನೀಡಲು  ಬಳಲಿದವರಿಗೆ ಹೊರೆಹೊತ್ತು 
ಆಗ  ನಾವೆಲ್ಲ  ಸುಖದಿಂದ ಕುಡಿಯೋಣ 
ತುಂಬಿ ತುಳಿಕಿರಲು ಎಲ್ಲರ  ಬಟ್ಟಲು  ತಾನು 


(ಅಂತರ್‌ಜಾಲದಲ್ಲಿ ಓದಿದ ಕವನ ಒಂದರಿಂದ ಪ್ರೇರಿತ)

Thursday, September 27, 2012

Tuesday, September 25, 2012

ಕನ್ನಡವೆ ಎನ್ನುಸಿರು ಎಂದು ಬದುಕಿದ ಪ್ರೊ. ಡಿ.ಲಿಂಗಯ್ಯ:ಅಪ್ಪಾಜಿರಾಯರ ಸ್ಮರಣೆ    
ಎಚ್. ಶೇಷಗಿರಿರಾವ್
ಶುಕ್ರವಾರ, 21 ಸೆಪ್ಟೆಂಬರ್ 2012 (00:00 IST) 
ಪ್ರೊ. ಡಿ ಲಿಂಗಯ್ಯ
ಬೆಂಗಳೂರಿಗೆ   ಬಂದ ಹೊಸದು. ಹಳೆಯ ಬೆಂಗಳೂರಿನ ಭಾಗವಾದ ಬಸವನಗುಡಿಗೆ ಹೊಂದಿಕೊಂಡಿರುವ   ನರಸಿಂಹರಾಜಾ ಕಾಲನಿಯಲ್ಲಿ ವಾಸ.  ಪಕ್ಕದ ರಸ್ತೆಯಲ್ಲೆ ಬಿ.ಎಂ.ಶ್ರೀ ಪ್ರತಿಷ್ಠಾನದ ಹೆಸರು ಹೊತ್ತ ಸುಂದರ ಭವನ. ಅಲ್ಲಿನ ಉಚಿತ ವಾಚನಾಲಯಕ್ಕೆ ಆಗಾಗ  ಭೇಟಿ  ನೀಡುವುದು ವಾಡಿಕೆ ಮತ್ತು ಅಲ್ಲಿ ನಡೆವ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ  ವೇದಿಕೆಯ ಮೇಲೆ ಕುಳಿತ ಎತ್ತರದ ನಿಲುವಿನ ಸಾಧಾರಣ ಮೈಕಟ್ಟಿನ ಸಾದ ಬಣ್ಣದ ಅಚ್ಚುಕಟ್ಟಾಗಿ ಉಡುಪು  ಧರಿಸಿದ,ಅತಿಥಿಗಳನ್ನು, ಪರಿಚಿತರನ್ನು ಸದಾ ಮುಗುಳುನಗೆಯಿಂದ ಮೃದು ಮಾತಿನಿಂದ ಸ್ವಾಗತಿಸು ವ್ಯಕ್ತಿ ಯಾರಿರಬಹುದೆಂಬ  ಕುತೂಹಲವು . ಒಂದೆರಡು ಸಮಾರಂಭದಲ್ಲಿ ಹಾಜರಿ ಹಾಕಿದ ನಂತರ ತಣಿಯಿತು.  ಅವರ ವಾಗ್‌ವೈಖರಿ  ಅಸದಳ . ಪುಸ್ತಕದ ಬಿಡುಗಡೆ ಇರಲಿ, ಖ್ಯಾತ ನಾಮರ ಜಯಂತಿಯೆ ಇರಲಿ, ಕಥೆಗಾರ, ಕಾದಂಬರಿಕಾರ, ಕವಿ, ಜಾನಪದ ತಜ್ಞ , ಹಸ್ತ ಪ್ರತಿ ತಜ್ಞರ ಸನ್ಮಾನವಿರಲಿ, ವಿಷಯ ಯಾವುದೆ ಇದ್ದರೂ ಅವರ ಅಧ್ಯಕ್ಷೀಯ ಭಾಷಣ ಎಂದರೆ  ತಲಸ್ಪರ್ಶಿವಿಚಾರ ಪೂರಿತ ಮಾತುಗಳ ಮಳೆ. ಅದರ ಸ್ವಾದ ಕೇಳಿಯೆ ತಿಳಿಯ ಬೇಕು.
ಪ್ರತಿಷ್ಠಾನವು ನಡೆಸುತಿದ್ದ ಹಸ್ತಪ್ರತಿ ಅಧ್ಯಯನದ ತರಗತಿಗೆ ನಾನು ಸೇರಿದ ಮೇಲೆ ಜತೆಗೆ ಅವರೊಂದಿಗೆ ರಾಮಚಂದ್ರಾಪುರ ಮಠದಲ್ಲಿ ನಡೆಸಿದ ಹಸ್ತಪ್ರತಿ ಆಧ್ಯಯನ ಸಮಾವೇಶದಲ್ಲಿ ಭಾಗವಹಿಸಿದಾಗ ಅವರ ಬಹು ಮುಖ ಪ್ರತಿಭೆಯ ಸರಳ ವ್ಯಕ್ತಿತ್ವದ  ಪರಿಚಯವಾಯಿತು. ಸುಮಾರು ಎಂಬತ್ತಕ್ಕೂ ಹೆಚ್ಚು ಕೃತಿಗಳ, ಅದೂ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿರುವುದು  ಮೆಚ್ಚಿಗೆ ಮೂಡಿಸಿತು.
ಈ ಸಾಹಿತ್ಯ ಸೇವೆ ಸತತ  ಐದು ದಶಕಗಳ ನಿರಂತರ ಸೇವೆಯ ಫಲ. ಕಾಲೇಜು ಕಟ್ಟೆ ಹತ್ತಿದಾಗಲೆ ವಿದ್ಯಾರ್ಥಿ ದೆಶೆಯಲ್ಲೆ ೧೯೬೨ರಲ್ಲಿ  ಮೊದಲ ನಾಟಕ “ ದಡ್ಡ ಶಿಖಾಮಣಿ “  ಪ್ರಕಟ, ಸತತ ಸಾಹಿತ್ಯ ಸೇವೆ  ಜಾನಪದಲೋಕದ ದಿಗ್ಗಜ ಎಸ್‌.ಕೆ ಕರೀಂಖಾನರ ಬದುಕು ಮತ್ತು ಬರಹಗಳ  ಕುರಿತ ಬೃಹತ್‌ ಕೃತಿ ಅವರ ಅಂತಿಮ ಕಾಣಿಕೆ ಈಗ ಪ್ರಕಟನೆಗೆ ಸಿದ್ಧವಾಗಿದೆ. ಈ ಅವಧಿಯಲ್ಲಿ ನಾಲ್ಕು ನಾಟಕಗಳು, ಮೂರು ಕಥಾ ಸಂಗ್ರಹಗಳು, ನಾಲ್ಕು, ವಿಮರ್ಶಾಗ್ರಂಥಗಳು, ಡಜನ್‌ ಕವನ ಸಂಗ್ರಹಗಳು, ಐದು  ವ್ಯಕ್ತಿಚಿತ್ರಗ್ರಂಥಗಳು, ಐದು  ಜೀವನ ಚರಿತ್ರೆಗಳು, ನಾಲ್ಕು ಪ್ರಬಂಧ ಸಂಕಲನಗಳು ಮೂರು ಸ್ವಾತಂತ್ರ್ಯ ಚಳುವಳಿ ಸಂಬಂಧಿತ ಗ್ರಂಥಗಳು  ಎರಡು ಕಾದಂಬರಿಗಳು, ೨೧ ಜಾನಪದ ಸಂಬಂಧಿತ ಕೃತಿಗಳು.  ೨೦ ಸಂಪಾದಿತ ಗ್ರಂಥಗಳು, ಇನ್ನು ನೂರಾರು ಕಿರುಲೇಖನಗಳು, ಸಾಕ್ಷ್ಯ ಚಿತ್ರಗಳಿಗೆ ಸಾಹಿತ್ಯ, ರಚನೆ ಮತ್ತು ದೂರದರ್ಶನಗಳಲ್ಲಿ ಸಂವಾದಗಳು  ಅವರ ಆಸಕ್ತಿಯ ಪಾಂಡಿತ್ಯದ ವ್ಯಾಪ್ತಿಗೆ ಸಾಕ್ಷಿಯಾಗಿವೆ.
ಪ್ರೊ. ಡಿ ಲಿಂಗಯ್ಯ  ಹುಟ್ಟಿದ್ದು  ೧೯೩೯ ರಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಪೀ ಹಳ್ಳಿಯ ರೈತ ಕುಟುಂಬದಲ್ಲಿ ತಂದೆ ದೇವೆಗೌಡ ಚಿಕ್ಕ ರೈತ. ತಾಯಿ ಸಿದ್ದಮ್ಮ, ಬಡ ಕುಟುಂಬ. ಕೃಷಿ ಕೆಲಸದಲ್ಲಿ ಸಹಾಯ ಮಾಡುತ್ತಾ ಶಿಕ್ಷಣ ಮುಂದುವರಿಸಿದರು. ೧೯೬೮ ರಲ್ಲಿ ಮೈಸೂರು  ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಎಂ ಎ. ಪದವಿ. ಆಗಲೆ ಕವಿತರೊಂದಿಗೆ ಮದುವೆ.  ಎರಡು ಹೆಣ್ಣು ಮತ್ತು ಒಬ್ಬ ಗಂಡು ಮಗನನ್ನು ಹೊಂದಿದ ಚಿಕ್ಕ ಸಂಸಾರ ಅವರದು. ಅವರ ವೃತ್ತಿ ಪ್ರಾಂಭವಾದುದು ವಿಶ್ವೇಶ್ವರಯ್ಯ  ಪದವಿ ಕಾಲೇಜಿನಲ್ಲಿ. ಮೊದಲು ಉಪನ್ಯಾಸಕರಾಗಿ ಹಂತ ಹಂತವಾಗಿ ಮೇಲೇರಿ ಪ್ರಾಧ್ಯಾಪಕ  ನಂತರ ಪ್ರಾಚಾರ್ಯರಾಗಿ ಸೇವೆ. ೧೯೯೭ರಲ್ಲಿ ನಿವೃತ್ತಿಯಾದುದೂ ಅಲ್ಲಿಯೆ. ಸಾವಿರಾರು ವಿದ್ಯಾರ್ಥಿಗಳಿಗೆ ನೆಚ್ಚಿನ  ಕನ್ನಡ ಮೇಷ್ಟ್ರು. ನೂರಾರು ಸಹೋದ್ಯೋಗಿಗಳಿಗೆ ಆತ್ಮೀಯ ಒಡನಾಡಿ ಲಕ್ಷಾಂತರ ಓದುಗರ ಮನೆಯಲ್ಲಿ ಮನದಲ್ಲಿ ನೆಚ್ಚಿನ  ಸಾಹಿತಿ.
ವೃತ್ತಿ ಮತ್ತು ಪ್ರವೃತ್ತಿಗಳು ಪರಸ್ಪರ ಪೂರಕವಾದ ಸೌಭಾಗ್ಯ ಅವರದು. ಹಳ್ಳಿಗಾಡಿನಿಂದ ಬಂದ ಅವರಿಗೆ ಜಾನಪದ ಸಂಸ್ಕೃತಿ ರಕ್ತಗತ. ಹಳ್ಳಿಯ ಜನ ಹೃದಯಕ್ಕೆ ಹತ್ತಿರ. ಅಂತೆಯೆ ತಮ್ಮ ಸಮಯವನ್ನು ಗ್ರಾಮೀಣ ಸೊಗಡಿನ ಅನಾವರಣಕ್ಕೆ ಮೀಸಲಿರಿಸಿದರು. ಅವಿರತ ಕ್ಷೇತ್ರ ಕಾರ್ಯ  ಮಾಡಿ, ಜನಪದ ಗೀತೆಗಳು, ಜನಪದ ಕಾವ್ಯಗಳು, ಪ್ರಾಣಿ ಕಥೆಗಳು ಹೀಗೆ ಸುಮಾರು ೨೧ ಪುಸ್ತಕಗಳನ್ನು ಪ್ರಕಟಿಸಿರುವ ಹಿರಿಮೆ ಇವರದು. ಲಿಂಗಯ್ಯನವರು ಕೃಷಿ ಮಾಡದ ಸಾಹಿತ್ಯ ಕ್ಷೇತ್ರವನ್ನು ಕನ್ನಡದಲ್ಲಿ ಹುಡುಕುವುದು ಕಷ್ಟ, ಎನ್ನುವುದು ಕ್ಲೀಷೆಯಲ್ಲ. ನಾಟಕ, ಕಥೆ, ಕವನ, ಜೀವನ ಚರಿತ್ರೆ,bವ್ಯಕ್ತಿಚಿತ್ರಗಳು, ಪ್ರಬಂಧ ಮತ್ತು ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ  ಗುರುತು ಮೂಡಿಸಿರುವರು.
ಅವರ ಕಾಣಿಕೆ ಬರಿ  ಸಾಹಿತ್ಯಕ್ಕೆ ಸೀಮಿತವಾಗದೆ ಜನಪರ  ಚಳುವಳಿಗಳಲ್ಲೂ ವ್ಯಕ್ತವಾಗಿದೆ. ಕನ್ನಡಪರ ಚಳುವಳಿಯಲ್ಲಿ ಅವರದು ಸದಾ ಎದ್ದು ಕಾಣುತಿದ್ದರು. ಅವರು ಬರಿ ಪತ್ರಿಕಾ ಹೇಳಿಕೆ ನೀಡಿ ಪ್ರತಿಭಟಿಸುವ ಕಾಗದದ ಹುಲಿಯಲ್ಲ. ೧೯೬೭ ರಿಂದ ೨೦೦೭ ರ ವರೆಗೆನ ಹಲವಾರು ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಿಗಳು.೧೯೮೨ ರಲ್ಲಿ ಗೋಕಾಕ ಚಳುವಳಿಯಲ್ಲಿ ಸರಕಾರದ ವಿಳಂಬ ನೀತಿ ಪ್ರತಿಭಟಿಸಿ ಕನ್ನಡ ಸಾಹಿತ್ಯ ಪರಿಷತ್ತಿನ  ಗೌ. ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆನೀಡಿದ್ದರು. ಜನಪರ ನಿಲುವಿನಿಂದಾಗಿ ಅವರು ಜನಪ್ರಿಯರೂ ಆಗಿದ್ದರು ಹಾಗಾಗಿ ಅನೇಕ ಸಾಹಿತ್ಯ ಸಂಘಟನೆಗಳಲ್ಲಿ  ಪದಾಧಿಕಾರಿಯಾಗಿ ಕೊನೆಯುಸಿರು ಇರುವವರೆಗೆ ಶ್ರಮಿಸಿದರು.
ಅವರ ಬಹುಮುಖ ಪ್ರತಿಭೆ ಪ್ರಶಸ್ತಿಗಳು ಅವರ ಬೆನ್ನು ಹತ್ತಿ ಬಂದವು. ರಾಜ್ಯ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಚುಂಚ ಶ್ರೀ ಪ್ರಶಸ್ತಿ ಅವರಿಗೆ ಬಂದ ಹತ್ತಕ್ಕೂ ಹೆಚ್ಚು ಪ್ರಶಸ್ತಿಗಳಲ್ಲಿ ಮುಖ್ಯವಾದವು.
ಅವರ “ ಬಯಲು ಸೀಮೆಯ ಜನಪದ ಗೀತೆಗಳು” ಕರ್ನಾಟಕ ಸಾಹಿತ್ಯಕಾಡಮಿಯ ಬಹುಮಾನ ಪಡೆದರೆ, ಕರ್ನಾಟಕ ಜಾನಪದ ಕಾವ್ಯವು, ದೇವರಾಜ ಬಹದ್ದೂರ್‌ ಪ್ರಶಸ್ತಿಗೆ ಭಾಜನವಾಗಿದೆ.”ವಚನ ದವನ “  ಜಾನಪದ ಸಾಹಿತ್ಯ ಅಕಾಡಮಿಯ ಬಹುಮಾನ  ಪಡೆದಿದೆ. ”ಸತ್ಯಾಗ್ರಹಿಗಳ ಸಂದರ್ಶನ”, ಕರ್ನಾಟಕ ಗಾಂಧಿ ಪ್ರತಿಷ್ಠಾನ ಪ್ರಶಸ್ತಿ ಪಡೆದಿದೆ. ಅವರ  ವ್ಯಾಪಕ ಕ್ಷೇತ್ರಾನುಭವ ಮತ್ತು  ಜನಸಂಪರ್ಕದಿಂದಾಗಿ ಅನೇಕ ಪ್ರಶಸ್ತಿ ಸಮಿತಿಗಳ ಸದಸ್ಯರಾಗಿ ದುಡಿದರು. ಹಿರಿಯರಿಗೆ ಮನ್ನಣೆ ನೀಡಿ ಕಿರಿಯರಿಗೆ ಬೆನ್ನುತಟ್ಟಿ  ಅರ್ಹರಿಗೆ ಪ್ರಶಸ್ತಿ ನೀಡಿ ಬೆನ್ನು ತಟ್ಟುವಲ್ಲಿ ಸದಾ ಮುಂದು.
ಅವರ ಅವಿರತ ಶ್ರಮವೆ ಸಂಘಸಂಸ್ಥೆಗಳ ಪಾಲಿಗೆ ಸಂಜೀವಿನಿ. ಎತ್ತರದ ನಿಲುವಿನ ಸಾಧಾರಣ ಮೈಕಟ್ಟಿನ ಮೃದು ಮಾತಿನ ಅವರಲ್ಲಿ ಸಂಘರ್ಷದ ಮಾತೆ ಇಲ್ಲ. ಸಾಮರಸ್ಯದಿಂದ ಎಲ್ಲರೊಡನೆ ಒಂದಾಗಿ  ಹೋಗುವ ಗುಣ ಅವರನ್ನು ಸರ್ವಗ್ರಾಹಿಯನ್ನಾಗಿಸಿತು. ಹಾಗಾಗಿ ಇಳಿವಯಸ್ಸಿನಲ್ಲೂ ಏರು ಜವ್ವನಿಗರು ನಾಚುವ ಉತ್ಸಾಹದ ಕೆಲಸ ಅವರದು. ಸಾಹಿತ್ಯವಲಯದ ಗುಂಪೊಂದರ ಸದಸ್ಯ ಎಂಬ ಮಾತಿಗೆ ಮುಗುಳ್‌ ನಗುತ್ತ ಮಾಡುವ ಕೆಲಸವೆ ಅವರ ಉತ್ತರ.
ಶರಣರ ಸಾವು ಮರಣದಲ್ಲಿ ನೋಡು ಎಂಬ ಮಾತುಬಹು ಪ್ರಸಿದ್ಧ. ಆದರೆ ಅದರ ಪ್ರತ್ಯಕ್ಷದರ್ಶನ ನನಗೆ ಇತ್ತೀಚೆಗೆ ಆಯಿತು. ಬಿ.ಎಂ.ಶ್ರೀ ಪ್ರತಿಷ್ಠಾನವು  ಬೆಂಗಳೂರು ಮೂಲದ ವಿಶಿಷ್ಟ ಸಾಂಸ್ಕೃತಿಕ ಸಂಸ್ಥೆ. ಖ್ಯಾತ ಸಾಹಿತಿ ಎಂವಿ ಸೀತಾರಾಮಯ್ಯನವರ ಕನಸಿನ ಕೂಸು. ಅಳಿದು ಹೋಗುತ್ತಿರುವ ಹಸ್ತ ಪ್ರತಿ  ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಮೊಟ್ಟ ಮೊದಲ ಸಂಸ್ಥೆ. ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ ಮತ್ತು ಸಂಪಾದನೆಯ  ಗುರಿ ಅದರದು. ಕನ್ನಡಸಾಹಿತ್ಯ ಲೋಕದ ಘಟಾನುಘಟಿಗಳೆಲ್ಲರ ಸಹಯೋಗದ ಭಾಗ್ಯ ಅದಕ್ಕಿದೆ. ಕಳೆದ ವಾರ ಕನ್ನಡದ ಹಿರಿಯ ವಿದ್ವಾಂಸರಾದ ಡಾ. ಜಿ. ನಾಡೋಜ ಪ್ರೊ. ಜಿ.ವೆಂಕಟಸುಬ್ಬಯ್ಯ ನವರು, ಸಾಹಿತ್ಯ ಸಾಧನೆಗಾಗಿ ಇರುವ ಬಿ.ಎಂ.ಶ್ರೀ ಪ್ರಶಸ್ತಿಯನ್ನು, ಕೆ. ಸತ್ಯನಾರಾಯಣ ಅವರಿಗೆಗೆ ಪ್ರದಾನ ಮಾಡುವ ಸಮಾರಂಭ. ಡಾ. ಚಿದಾನಂದ ಮೂರ್ತಿ, ವೆಂಕಟಾಚಲ ಶಾಸ್ತ್ರಿ, ಎಲ್‌.ಎಸ್‌.ಶೇಷಗಿರಿರಾಯರುಗಳನ್ನು ಗೌರವಿಸುವ ಮತ್ತು  ಸಭಾಂಗಣ ಸಾಹಿತಿಗಳಿಂದ ವಿದ್ವಾಂಸರಿಂದ ಕಿಕ್ಕಿರಿದಿತ್ತು. ಅವರ ದರ್ಶನ ಪಡೆವ ,ಅನುಭವಾಮೃತ ಸ್ವಾದಿಸುವ ಸವಿಗಳಿಗೆಗಾಗಿ ಕಾತುರದಿಂದ ಕಾಯುತಿತ್ತು ಜನ. ಶತಾಯುಷಿಗಳಿಗೆ ಸನ್ಮಾನವಾಯಿತು, ಈ ಎಲ್ಲ ಕಾರ್ಯಕ್ರಮದ ರೂವಾರಿ  ಪ್ರೊ.ಡಿ. ಲಿಂಗಯ್ಯ, ಪ್ರತಿಸ್ಠಾನದ ಅಧ್ಯಕ್ಷರು, ಹೆಮ್ಮೆಯಿಂದ ಬೀಗುತಿದ್ದರು. ಹೀಗೆ ಹಿರಿತಲೆಗಳನ್ನೆಲ್ಲ ಒಟ್ಟು ಗೂಡಿಸಿರುವುದಕ್ಕೆ ಅವರಿಗೆ ಕಣ್ಣುತುಂಬಿ ಬಂದಿತ್ತು. ಶಾಲು ಹೊದಿಸಿ ಹಾರ ಹಾಕಿ  ವೇದಿಕೆಯಲ್ಲೆ ಕುಸಿದರು.
ವೇದಿಕೆಯ ಮೇಲೆ ಕುಳಿತಿದ್ದವರು ಆತಂಕಕ್ಕೆ ಒಳಗಾದರು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಎಲ್ಲರೂ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಮಾಹಿತಿಗಾಗಿ ಆತಂಕದಿಂದ ಎದುರುನೋಡುತ್ತಿರುವಾಗಲೆ ಅವರು ಕಾಲವಶರಾದ ವಾರ್ತೆ ಬಂದಿತು.
ಅವರ ತಲೆಮಾರಿನ ಹದ  ಕೆಲವೆಗಂಟೆಗಳಲ್ಲಿ  ಅವರ ಕಳೆಬರವನ್ನು ಅವರ ಕಾರ್ಯಕ್ಷೇತ್ರದಲ್ಲೆ ಅಂತಿಮ ಗೌರವ ಸಲ್ಲಿಸಲು ತರಲಾಯಿತು. ಸಂತೋಷ ಸಭೆ ಸಂತಾಪ ಸೂಚಕ  ಸಭೆಯಾಯಿತು. ಜನಪದ ವಿದ್ವಾಂಸ, ಸಾಹಿತಿ ಮತ್ತು   ಉತ್ತಮ ಆಡಳಿತಗಾರರು ತಮ್ಮ ಎಪ್ಪತ್ತನಾಲ್ಕನೆ ವಯಸ್ಸಿನಲ್ಲೂ ಚುರುಕಾಗಿದ್ದ ಅವರ  ಆಕಸ್ಮಿಕ ಅಂತ್ಯವನ್ನು ಕಂಡ ಜನರೆಲ್ಲ ಮರುಗಿದರೂ ಎಂಥಹ ಪುಣ್ಯದ ಸಾವು. ಕನ್ನಡದ ಸೇವೆಯಲ್ಲೆ ವೇದಿಕೆಯಲ್ಲೆ ಕಾಲವಶರಾದರು ಎಂದು ಅಶ್ರುತರ್ಪಣ ಅರ್ಪಿಸಿದೆವು. ಅಂತಿಮಗೌರವ ಸಲ್ಲಿಸಲಾಯಿತು. ತಮ್ಮ ಪ್ರೀತಿಯ ಕಾಯಕದ ನಿರ್ವಹಣೆಯಲ್ಲೆ ಕೈಲಾಸ ಸೇರಿದ ಅವರ ಸೇವೆ ಧನ್ಯ ಎನಿಸಿತು.  ಎರಡುವರ್ಷದ ಹಿಂದೆ ಖ್ಯಾತ ವಿರ್ಮಶಕ ಡಾ.ಕಿರಂ ನಾಗರಾಜ, ಬೇಂದ್ರೆಕುರಿತು ಸತತ  ೨ ತಾಸು ಮಾತನಾಡಿ, ಕೇಳುಗರನ್ನು ಮಂತ್ರ ಮುಗ್ದಗೊಳಿಸಿ ಮನೆಗ ಹೋಗುವ ಹಾದಿಯಲ್ಲೆ ಮರಣವನ್ನಪ್ಪಿದ್ದು ನೆನಪಿಗೆ ಬಂತು. ಅವರ ನೆನಪಿನಲ್ಲಿ ಈಗ ಪ್ರತಿವಾರ ಶನಿವಾರ ಕಿರಂ ನುಡಿ ಮನೆಯಲ್ಲಿ ಸಾಹಿತ್ಯಕಾರ್ಯಕ್ರಮ ,ಸಂವಾದವನ್ನು  ತಪ್ಪದೆ ಸುಚಿತ್ರ ಸೊಸೈಟಿಯವರು ನೆಡಿಸಿಕೊಡುತ್ತಾ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ಅನಂತಮೂರ್ತಿಯವರಿಂದ ಹಿಡಿದು ಯುವ ಸಾಹಿತಿಗಳವರೆಗೆ ಎಲ್ಲ ಹಿರಿ ಕಿರಿಯರಿಗೆ ವೇದಿಕೆ ದೊರಕಿದೆ. ಅವರ ನುಡಿಯಾಲಿಸುವ ಸೌಭಾಗ್ಯ ದೊರಕುತ್ತಿದೆ.
ಕಲ್ಲು ಮಣ್ಣಿನ ಕಟ್ಟಡ , ಲೋಹದ ಪುತ್ಥಳಿಗಳಿಗಿಂತ ಈ ಮಾದರಿಯ ಸ್ಮರಣೆ ಸ್ವಾಗತಾರ್ಹ.ಪ್ರೊ. ಡಿ ಲಿಂಗಯ್ಯನವರ ಸ್ಮರಣಾರ್ಥ ಅಂತಹ ಸಾಹಿತ್ಯೋಪಾಸನೆ ಜರುಗಲಿ ಎಂಬುದು ಸಾಹಿತ್ಯಾಸಕ್ತರ ಸದಾಶಯ.

Monday, September 17, 2012

ಹೀಗೊಂದು ಪ್ರಾರ್ಥನಾ ಪ್ರಸಂಗ




ಹೀಗೊಂದು ಪ್ರಾರ್ಥನಾ ಪ್ರಸಂಗ


http://www.kendasampige.com/images/trans.gif
ನಮ್ಮ ಕಾಲೇಜಿಗೆ ಹೊಸದಾಗಿ ರಾಜ್ಯ ಶಾಸ್ತ್ರ ಉಪನ್ಯಾಸಕರು ವರದಿ ಮಾಡಿಕೊಂಡರು. ಅವರು ಮೂಡಬಿದ್ರೆಯವರು. ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು   ಉತ್ತಮ ಅಂಕಗಳೊಂದಿಗೆ ಪಡೆದವರು. ಸಧೃಡ ಮೈಕಟ್ಟು. ಕೆಂಪನೆಯಮೈ ಬಣ್ಣ. ಬಹಳ ಟಿಪ್ ಟಾಪ್‌ ಉಡುಪು. ನಯವಾದ ಮಾತು. ಬಂದ ಕೆಲವೆ ದಿನಗಳಲ್ಲಿ ತಮ್ಮ ಪಾಠದಿಂದ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಹೆಸರುಗಳಿಸಿದರು. ತುಂಬಾ  ಆಕರ್ಷಕ ವ್ಯಕ್ತಿತ್ವದ ಅವರು ಹಳ್ಳಿಯ ಜೀವನಕ್ಕೆ ಬೇಗ  ಹೊಂದಿಕೊಂಡರು. ಯಾವುದೇ ಕೆಲಸ ವಹಿಸಿದರೂ ಅಚ್ಚುಕಟ್ಟಾಗಿ ಮಾಡುವರು. ಎರಡು ವರ್ಷದಿಂದ ಇದ್ದ ಉಪನ್ಯಾಸಕರ ಕೊರತೆಯನ್ನು ಅವರು  ಸಮರ್ಥವಾಗಿ ತುಂಬಿದರು..
ಯಾವುದರಲ್ಲೂ ಬೆರಳು ತೋರಿಸದ ಹಾಗಿದ್ದ ಅರಿಫುಲ್ಲಾ ಬೇಗ್‌ ಒಂದು ವಿಷಯದಲ್ಲಿ ಮಾತ್ರ ಎಲ್ಲರ ಕಣ್ಣಿಗೆ ಎದ್ದು ಕಾಣುವಂತಾದರು. ಅವರು  ನಿತ್ಯ ಶಾಲಾ ಪ್ರಾರ್ಥನೆಗೆ ಬರುತ್ತಲೆ ಇರಲಿಲ್ಲ. ನಮ್ಮದು ಸಂಯುಕ್ತ ಪದವಿ ಪೂರ್ವಕಾಲೇಜು. ಹೈಸ್ಕೂಲು ಮತ್ತು ಕಾಲೇಜುಗಳು ಎರಡೂ ಇದ್ದವು. ಬೆಳಗಿನ ಪ್ರಾರ್ಥನೆ ಎಲ್ಲರಿಗೂ ಕಡ್ಡಾಯ. ವಿದ್ಯಾರ್ಥಿಗಳಿಗಂತೂ ತಡವಾದರೆ ಶಿಕ್ಷೆಯಾಗುತಿತ್ತು. ಸಿಬ್ಬಂದಿಗೂ ಪ್ರಾರ್ಥನೆ ಕಡ್ಡಾಯ.  ಯಾವಾಗಲಾದರೂ ಒಮ್ಮೆ  ಬಾರದಿದ್ದರೂ ಅದನ್ನು ದೊಡ್ಡದು ಮಾಡುತ್ತಿರಲಿಲ್ಲ. ಆದರೆ ಬೇಗ್‌ ಅವರು ನಿತ್ಯವೂ ಪ್ರಾರ್ಥನೆಗೆ ಗೈರು ಹಾಜರಾಗುವುದರಿಂದ ಎಲ್ಲರ ಬಾಯಿಗೆ ತುತ್ತಾದರು. ಈ ಅಂಶ ನನ್ನ ಗಮನಕ್ಕೂ ಬಂದಿತು. ಬಂದ ಹೊಸದು, ಮನೆಗೆಲಸದ ಗಡಿಬಿಡಿ.  ಅಡುಗೆ ಊಟ ಎಂದು ತಡವಾಗಿರಬಹುದು ಎಂದು ಅಂದು  ಕೊಂಡೆ. ಒಂದೆರಡು ವಾರ ಕಾಲಾವಕಾಶ ನೀಡಿದರೆ ಎಲ್ಲ ತಹಬದಿಗೆ ಬರಬಹುದು ಎಂಬ  ನಂಬಿಕೆ ನನ್ನದು. ನಂತರ ತಿಳಿಯಿತು. ಅವರು ದೊಡ್ಡದಾದ ಮನೆ ಹಿಡಿದಿದ್ದರೂ ಅಡುಗೆ ಮಾಡಿಕೊಳ್ಳುತ್ತಿರಲಿಲ್ಲ. ಹೋಟೆಲ್‌ನಲ್ಲಿ ಊಟ ಮಾಡುತ್ತಿರುವುದಾಗಿ ತಿಳಿಯಿತು. ಮನೆಯಲ್ಲಿ ಕಾಡಿ ಬೇಡುವ ಹೆಂಡತಿ ಇಲ್ಲ, ಅತ್ತು ಕರೆಯುವ ಮಕ್ಕಳಿಗೆ ಅನಾರೋಗ್ಯ ಎನ್ನುವ ಹಾಗಿಲ್ಲ. ಒಳ್ಳೆ ಗುಂಡ್ರಗೋವಿಯಹಾಗಿರುವರು.
ಅದಕ್ಕೆ ಒಂದು ದಿನ ಸುಮ್ಮನೆ ಕೇಳಿದೆ.ಏನ್ರಿ ಬೇಗ್‌  ನಿಮ್ಮ ಬೆಳಗಿನ ಕಾರ್ಯಕ್ರಮ ಏನು ? ನೀವು ಸೂರ್ಯವಂಶಿಯರಾ ಎಂದೆ.
ಅದೇನು ಸಾರ್‌ ಸೂರ್ಯವಂಶ ಎಂದರೆ ಕುತೂಹಲದಿಂದ ಕೇಳಿದರು.
ಅಷ್ಟೂ ಗೊತ್ತಿಲ್ಲವೇನ್ರಿ. ಸೂರ್ಯ ವಂಶದವರು ಎಂದರೆ ಅವರು ಯಾವಾಗಲೂ ಸೂರ್ಯ ಹುಟ್ಟಿ ಬಿಸಿಲು ಬೀಳುವ ತನಕ ಮಲಗಿರುವರು, ಎಂದು ವಿವರಣೆ ನೀಡಿದೆ. 
ಅವರು ಖೊಖಾಡಿಸಿ ನಕ್ಕರು .ಇಲ್ಲ ಸಾರ್ನಾನು ಸೂರ್ಯ ಹುಟ್ಟುವ ಮುಂಚೆಯೆ ಏಳುವೆ. ಅದು ನನ್ನ ಚಿಕ್ಕಂದಿನ ಅಭ್ಯಾಸ. ನಂತರ ಲಘು ವ್ಯಾಯಾಮ ಮಾಡುವೆ. ಒಂದೂ ದಿನವೂ ಬಿಡುವುದಿಲ್ಲ. ಅದರಿಂದ ಮೈ ಹಗುರ ಎನಿಸುವುದು. ದಿನವೆಲ್ಲ ಚಟುವಟಿಕೆಯಿಂದ  ಚುರುಕಾಗಿ  ಇರಬಹುದು,” ಎಂದರು
 
ತುಂಬಾ ಒಳ್ಳೆಯ ಅಭ್ಯಾಸ , ಎಂದು ಮೆಚ್ಚುಗೆ ಸೂಚಿಸಿದೆ. ಎಲ್ಲ ಹೊಂದಿಕೆಯಾಗಿದೆಯಾ ? ಪ್ರಶ್ನೆ ಹಾಕಿದೆ.
ಏನೂ ತೊಂದರೆ ಇಲ್ಲ ಎಲ್ಲ ಅನುಕೂಲವಾಗಿದೆ” , ಎಂದು ಉತ್ತರಿಸಿದರು.
ಹಾಗಿದ್ದರೂ ಅವರು ತಡವಾಗಿ ಕಾಲೇಜಿಗೆ ಬರುವುದು ಮುಂದುವರಿದಿತ್ತು.
ಮುಂದಿನ ಶಿಕ್ಷಕರ ಸಭೆಯಲ್ಲಿ ಎಲ್ಲರೂ ತರಗತಿಗಳು ಪ್ರಾರಂಭವಾಗುವ ಮೊದಲೆ ಕಾಲೇಜಿನ ಆವರಣದಲ್ಲಿರ ಬೇಕು ಎಂದು ಸೂಚನೆ ನೀಡಿದೆ.
ಮಾರನೆ ದಿನ  ಅವರು ಪ್ರಾರ್ಥನೆಗೆ ಮೊದಲೆ ಕಾಲೇಜಿಗೆ ಬಂದರು. ಆದರೆ ಸಿಬ್ಬಂದಿಯ ಕೊಠಡಿಯಲ್ಲಿ ಕುಳಿತಿದ್ದರು ಪ್ರಾರ್ಥನೆಗೆ ಹಾಜರಾಗಲಿಲ್ಲ.
ಮರುದಿನ ಪ್ರಾರ್ಥನಾ ನಂತರ ಆಡುವ ಎರಡು ನುಡಿಯಲ್ಲಿ ಒಂದು ಮಾತು ಹೇಳಿದೆ.ಪ್ರಾರ್ಥನೆ ಶಿಕ್ಷಣದ ವಿಭಾಜ್ಯ ಅಂಗ, ಎಲ್ಲ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ತಪ್ಪದೆ ಪ್ರಾರ್ಥನೆಯಲ್ಲಿ ಪಾಲುಗೊಳ್ಳ ಬೇಕು.
ಮರುದಿನ ಆ ಉಪನ್ಯಾಸಕರು ಯಥಾ ರೀತಿ ಗೈರು.  ಬೋಧಕರ ಸಾಲನ್ನು ಗಮನಿಸಿದೆ. ಅವರೊಬ್ಬರನ್ನು ಬಿಟ್ಟು ಎಲ್ಲರೂ ನಿಂತಿದ್ದರು.
ಪ್ರಾರ್ಥನೆಯ ನಂತರ ಅವರನ್ನು ಛೇಂಬರಿಗೆ ಕರೆಸಿದೆ.
ಯಾಕ್ರಿ ತಡವಾಗಿ  ಬಂದಿರಿ ? ಎಂದೆ.
ಇಲ್ಲ ಸಾರ್‌ ತಡವಾಗಿ ಬಂದಿಲ್ಲ. ಮೊದಲೆ ಬಂದಿದ್ದೆ ಎಂದರು.
ಪ್ರಾರ್ಥನೆಯ ಸಮಯದಲ್ಲಿ ನೀವು ಕಾಣಲಿಲ್ಲ, ಎಂದು ನುಡಿದೆ.
ಇಲ್ಲ ಸಾರ್‌, ಆ ಸಮಯದಲ್ಲೆ ಇದ್ದೆ. ಪಕ್ಕದಲ್ಲಿ ಮರದ ಕೆಳಗೆ ನಿಂತಿದ್ದೆ”, ಎಂದು ಉತ್ತರಿಸಿದರು.
ನನಗೆ ಇದು ಯಾಕೋ ಅತಿಯಾಯಿತು ಎನಿಸಿತು. ಮೊದಲೆ ಬಂದಿರುವಿರಿ ಎನ್ನುವಿರಿ. ನಿಜವಿರಬಹುದುಮರದ ಕೆಳಗೆ ಏಕೆ ನಿಂತಿರಿ  ? ಆದರೆ ಪ್ರಾರ್ಥನೆಗೆ ಏಕೆ ಹಾಜರಾಗಲಿಲ್ಲ ? ಕೇಳಿದೆ.
ಸಾರ್‌ , ನಾನು ಕಾಲೇಜಿನಲ್ಲಿ ಪ್ರಾರ್ಥನೆಮಾಡುವುದಿಲ್ಲ. ಮನೆಯಲ್ಲಿಯೆ ಮಾಡಿ ಬರುವೆ”. ಎಂದರು.
ಮನೆಯಲ್ಲಿ ಮಾಡುವುದು  ನಿಮ್ಮ ವೈಯುಕ್ತಿಕ ಪ್ರಾರ್ಥನೆ. ಅದನ್ನು ಮಾಡುವುದು ಬಿಡುವುದು ನಿಮಗೆ ಸಂಬಂಧಪಟ್ಟ  ಮಾತಾಯಿತು . ಇಲ್ಲಿನದು ಹಾಗಲ್ಲ. ಕಾಲೇಜಿನದು ಸಾಮೂಹಿಕ ಪ್ರಾರ್ಥನೆ.  ಇದು ಶೈಕ್ಷಣಿಕ ಚಟುವಟಿಕೆಯ  ಆರಂಭದ ಸಂಕೇತ. ಎಲ್ಲರೂ ಭಾಗವಹಿಸಬೇಕು.
ನಾನು ಮನೆಯಲ್ಲೆ   ನಮಾಜು ಮಾಡಿರುವೆ” , ಎಂದರು.
ನಾನು ನಿಮ್ಮ ನಮಾಜಿನ ವಿಷಯ ಅಲ್ಲ ಹೇಳುತ್ತಿರುವುದು.
ನಾನು ಭಾಗವಹಿಸಲು ಆಗುವುದಿಲ್ಲ. ಅದು ಧರ್ಮ ವಿರೋಧ. ಆದ್ದರಿಂದ ನಾನು ಬೇರೆ ಯಾವುದೆ ಪ್ರಾರ್ಥನೆ ಮಾಡುವುದಿಲ್ಲ” , ಎಂದರು.
ಇದು ಧಾರ್ಮಿಕ ಪ್ರಾರ್ಥನೆ ಅಲ್ಲ. ಮಂದಿರ ಮಸೀದಿ ಮತ್ತು ಇಗರ್ಜಿಗಳಲ್ಲಿ ಮಾಡುವ ಪ್ರಾರ್ಥನೆಗೂ ಇದಕ್ಕೂ ಸಂಬಂಧವಿಲ್ಲ. ಒಂದುವೇಳೆ ಜೀವನದಲ್ಲಿ ಪ್ರಾರ್ಥನೆಯನ್ನೆ ಮಾಡುವುದಿಲ್ಲ ಎನ್ನುವ ವಿಚಾರವಾದಿಗಯಾಗಿದ್ದರೂ ಇಲ್ಲಿ ಭಾಗವಹಿಸಬೇಕು. ಇಲ್ಲಿನ ಪ್ರಾರ್ಥನೆ ಎಂದರೆ  ನಾಡಗೀತೆ  ಮತ್ತು ರಾಷ್ಟ್ರಗೀತೆಯ ಗಾಯನ. ಅದಕ್ಕೆ ಗೌರವ ಕೊಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇದು ಖಂಡಿತ ಧರ್ಮವಿರೋಧಿಯಲ್ಲ.ಡಾ. ಝಕೀರ್‌ ಹುಸೇನ್‌. ಡಾ.ಫಕೃದ್ದೀನ್‌ ಅಲಿ ಅಹಮದ್‌, ಡಾ ಜೆ. ಅಬ್ದುಲ್‌ಕಲಾಂನಂಥಹ ಮಹಾನ್‌ ನಾಯಕರೂ  ಧರ್ಮಭೀರುಗಳೆ. ಅವರು  ಕೆಂಪುಕೋಟೆಯ ಮೇಲೆ ನಿಂತು ಲಕ್ಷಾಂತರ ಜನರ ಜೊತೆ ರಾಷ್ಟ್ರಗೀತೆ ಹಾಡಿದ್ದಾರೆ. ಜಮಿಯಾ ಮಿಲಿಯಾಅಲೀಗರ್‌ ಮುಸ್ಲಿಂ ಯೂನಿವರ್ಸಿಟಿಗಳಲ್ಲೂ ರಾಷ್ಟ್ರ ಗೀತೆ ಮೊಳಗುತ್ತದೆ. ತಪ್ಪು ತಿಳುವಳಿಕೆ ಬಿಡಿ.  ನಾಳೆಯಿಂದ ಪ್ರಾರ್ಥನೆ ತಪ್ಪಿಸ ಬೇಡಿ, ಎಂದೆ.
ಇಲ್ಲ ಸಾರ್‌, ನಾನು ಪ್ರಾರ್ಥನೆಯಲ್ಲಿ ಭಾಗವಹಿಸುವುದು ಸಾಧ್ಯವೇ ಇಲ್ಲಎಂದು ಕಡ್ಡಿಮುರಿದಂತೆ ಉತ್ತರಿಸಿದರು.  ನನಗೆ ತಲೆ ಬಿಸಿಯಾಯಿತು. ಯಾಕೋ ಇದು ಅತಿಯಾಯಿತು ಅಂದುಕೊಂಡೆ. ಅಲ್ಲಿ ಸೇರಿದ್ದ ಇತರ ಸಿಬ್ಬಂದಿ ಏನಾಗುವುದೋ ಎಂದು ಕುತೂಹಲದಿಂದ ಕಾಯುತಿದ್ದರು. ಇನ್ನು ಹೆಚ್ಚು ಮಾತನಾಡುವುದರಲ್ಲಿ ಅರ್ಥವಿಲ್ಲ ಎನಿಸಿತು. 
ಈ ಸಮಸ್ಯೆಯನ್ನು ಬಗೆಹರಿಸಲೇಬೇಕಿತ್ತು. ಹಾಗೆಯೇ ಬಿಟ್ಟರೆ ಇನ್ನೂ ಅನೇಕರಿಗೆ ಅಶಿಸ್ತಿನಿಂದ ವರ್ತಿಸಲು ಅವಕಾಶ. ಕಠಿಣ ಕ್ರಮ ತೆಗೆದುಕೊಂಡರೆ ಅವರು ಅಲ್ಪಸಂಖ್ಯಾತರು. ಅವರಿಗೆ ಬೇಕೆಂದೆ ತೊಂದರೆ ನೀಡುತಿದ್ದಾರೆ ಎಂಬ ಆಪಾದನೆ. ಸುಮ್ಮನಿದ್ದರೆ ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ಎಂಬ ಆರೋಪ. ಅತ್ತ ದರಿ ಇತ್ತ ಪುಲಿ ಎಂಬ ಪರಿಸ್ಥಿತಿ. ವಿದ್ಯಾರ್ಥಿಗಳಿಗೂ ತಪ್ಪು ಸಂಕೇತ ರವಾನೆ ಯಾಗುವುದು. ಇದೆ ವಾದ ಮಂಡಿಸಿ ಅವರೂ ಪ್ರಾರ್ಥನೆಗೆ ರಿಯಾಯತಿ ಕೇಳಬಹುದು.
ದಿನವೆಲ್ಲಾ ಇದೇ ಚಿಂತೆ ನನ್ನನ್ನು ಕಾಡಿತು, ಕೊನೆಗೆ ಒಂದು ನಿರ್ಧಾರಕ್ಕೆ ಬಂದೆ. ಸಂಸ್ಥೆಯಲ್ಲಿ ಶಿಸ್ತು ಅತಿ ಮುಖ್ಯ.  ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು, ಆದದ್ದಾಗಲಿ ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿದೆ.
ನಮ್ಮಲ್ಲಿ ಹಾಜರಿ ಪುಸ್ತಕವನ್ನು ಪ್ರಾರ್ಥನೆಗೆ ತುಸು ಮುಂಚೆ ಶಿಕ್ಷಕರ ಕೋಣೆಯಲ್ಲಿ ಮೇಜಿನ ಮೇಲೆ ಇರಿಸಲಾಗುತಿತ್ತು. ತರಗತಿಗಳು ಪ್ರಾರಂಭವಾದ ತುಸು ಹೊತ್ತಿನ ನಂತರ ಅದನ್ನು ತಂದು ನನ್ನ ಮೇಜಿನ ಮೇಲೆ ಇಡಲಾಗುತಿತ್ತು. ಅಕಸ್ಮಾತ್ತಾಗಿ ತಡವಾಗಿ ಬಂದವರು ಸಹಿಮಾಡದೆ ಇದ್ದವರು ನನ್ನ ಕೋಣೆಗೆ ಬಂದು ಸಹಿಮಾಡಬೇಕಿತ್ತು.  ಯಾವಗಲೋ ಒಮ್ಮೆ ಯಾರಾದರೂ ತಡವಾಗಿ ಬಂದರೆ ನನ್ನ ಕೋಣೆಗೆ ಬರುವರು, ನಮಸ್ಕಾರ ಎನ್ನುವರು. ನಾನೂ ನಮಸ್ಕಾರ ಎಂದು ಹಾಜರಿ ಪುಸ್ತಕ ಕೊಡುವೆ. ಸಾಧಾರಣವಾಗಿ ಏಕೆ ತಡವಾಯಿತು ಎಂದು ಕೇಳುತ್ತಿರಲಿಲ್ಲ. ಅವರು  ನನ್ನ ಎದುರಲ್ಲೆ ಸಹಿ  ಮಾಡಿ  ತರಗತಿಗೆ ಹೋಗುತಿದ್ದರು. ಸಹಜವಾಗಿ ಯಾರೂ ಪದೇಪದೆ ತಡಮಾಡಿ ಬರುತ್ತಿರಲಿಲ್ಲ.
ಮಾರನೆ ದಿನ ಯೋಚನೆ ಮಾಡಿದೆ. ಪ್ರಾರ್ಥನೆಯಾದ ತಕ್ಷಣ  ಹಾಜರಿ ಪುಸ್ತಕವನ್ನು ನನ್ನ ಕೋಣೆಗೆ ತರಿಸಿಕೊಂಡೆ. ಅದನ್ನು ಮೇಜಿನ ಮೇಲೆ ಇಡಲಿಲ್ಲ.  ಹಾಜರಿ ಪುಸ್ತಕವನ್ನು ನನ್ನ ಕಪಾಟಿನಲ್ಲಿ ಇಟ್ಟುಕೊಂಡೆ. ದಿನದಂತೆ ಆ  ವ್ಯಕ್ತಿ ಪ್ರಾರ್ಥನೆಗೆ ಬರಲಿಲ್ಲ. ನಂತರ ಸಿಬ್ಬಂದಿ ಕೋಣೆಗೆ ಹೋದರು. ಅಲ್ಲಿ ಹಾಜರಿ ಪುಸ್ತಕ ಇಲ್ಲ. ಅವರಿವರನ್ನು ಹಾಜರಿ ಪುಸ್ತಕ ಎಲ್ಲಿ ಎಂದು ಕೇಳಿದಾಗ, ಪ್ರಿನ್ಸಿಪಾಲರ ಕೋಣೆಗೆ ಹೋಗಿದೆ ಎಂದು ಗೊತ್ತಾಗಿದೆ.
ಅವರು ಸಾವಕಾಶವಾಗಿ ನನ್ನ ಕೋಣೆಗೆ ಬಂದರು.
'ನಮಸ್ಕಾರ ಸಾರ್‌ಎಂದರು.
ನಾನೂನಮಸ್ಕಾರಎಂದೆ. ಮೇಜಿನ ಮೇಲೆ ಕಣ್ಣಾಡಿಸಿದರು. ಹಾಜರಿ ಪುಸ್ತಕ ಕಾಣಲಿಲ್ಲ. ಸರ್‌ , ಹಾಜರಿ ಪುಸ್ತಕ ಕಾಣುತ್ತಿಲ್ಲಎಂದರು.
ಅದೂ ಎಲ್ಲಿಯೂ ಹೋಗಿಲ್ಲ , ನನ್ನ ಹತ್ತಿರ ಇದೆ, ಎಂದು ಉತ್ತರಿಸಿದೆ.
ಕೊಡಿ ಸಾರ್‌ , ಸಹಿ ಮಾಡುವೆ. ಮೊದಲ ಅವಧಿಯಲ್ಲೆ ತರಗತಿ ಇದೆ. ತಡವಾಗುವುದು”, ಎಂದರು.
ಕೊಡುವುದಿಲ್ಲ, ಎಂದೆ.
ಏನು ಸಾರ್‌ ಹಾಗೆಂದರೆ. ನಾನು ಕಾಲೇಜಿಗೆ ಬಂದರೂ ಹಾಜರಿ ಪುಸ್ತಕ ಕೊಡುವುದಿಲ್ಲ ಎಂದರೆಹೇಗೆಮುಖ ಕೆಂಪು ಮಾಡಿಕೊಂಡು ಕೇಳಿದರು.
ನೀವು ಪ್ರಾರ್ಥನೆಗೆ ಬರುತ್ತಿಲ್ಲ. ಅದು  ಶೈಕ್ಷಣಿಕ ಚಟುವಟಿಕೆಯ ಪ್ರಮುಖ ಅಂಗ. ಅದಕ್ಕೆ ಹಾಜರಾಗದಿದ್ದರೆ  ಆ ದಿನ ಗೈರು ಹಾಜರಾದಂತೆ”, ಎಂದು ಶಾಂತವಾಗಿ ವಿವರಣೆ ನೀಡಿದೆ.
ನೀವು ಹೀಗೆ ಮಾಡುವುದು  ಸರಿಯಲ್ಲ.  ಇದು ಕಾನೂನು ಬಾಹಿರ” , ಎಂದು ಗಡುಸಾಗಿ ಹೇಳಿದರು.
ರಾಷ್ಟ್ರಗೀತೆಯನ್ನು ಹಾಡುವುದಿಲ್ಲ  ಎಂದರೆ ರಾಷ್ಟ್ರಕ್ಕೆ ಅಪಮಾನ ಮಾಡಿದಂತೆ  ಹೀಗೆ ಅಗೌರವ ತೋರಿಸುವುದು ಶಿಕ್ಷಾರ್ಹ ಅಪರಾಧ.  ಈ ಬಗ್ಗೆ ಈ ದಿನವೆ  ಮೇಲಾಧಿಕಾರಿಗಳಿಗೆ ವರದಿಮಾಡಬಹುದುಎಂದೆ.   ಆ ವ್ಯಕ್ತಿ ತುಸು ಮೆತ್ತಗಾದ.
ಸಾರ್‌, ಅದೆಲ್ಲ ಏಕೆ. ನಾನು ನೀವು ವಹಿಸಿದ ಎಲ್ಲ ಕೆಲಸವನ್ನೂ ನಿಷ್ಠೆಯಿಂದ  ಮಾಡುತ್ತಿರುವೆ.  ಪಾಠದ ಬಗ್ಗೆ ಮಕ್ಕಳೂ ಒಳ್ಳೆಯ ಅಭಿಪ್ರಾಯ ಹೊಂದಿರುವರು. ಯಾರನ್ನಾದರೂ ಕೇಳಿ. ನನ್ನ ಕೆಲಸವನ್ನುನೀವೂ ಮೆಚ್ಚಿರುವಿರಿ. ಎಷ್ಟೋ ಸಲ ನೀವೆ ಎಲ್ಲರೆದುರು ಹೊಗಳಿರುವಿರಿ.ಎಂದರು.
ನಿಮ್ಮ ಕೆಲಸದ ಬಗ್ಗೆ ನನ್ನ ತಕರಾರಿಲ್ಲ. ಆದರೆ ನೀವು ಭಾರತೀಯ ನಾಗರಿಕರು ಮೇಲಾಗಿ ಸರ್ಕಾರಿ ನೌಕರರು. ಇಲ್ಲಿ ಜಾತಿ ಧರ್ಮದ ಪ್ರಶ್ನೆ ಬರುವುದಿಲ್ಲ. ಸರಕಾರದ ನಿಯಮಾವಳಿಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವವು. ಅವನ್ನು ಮೀರಿದವರು ಶಿಸ್ತಿನ ಕ್ರಮಕ್ಕೆ ಒಳಗಾಗುವರು, ಎಂದು ನುಡಿದೆ.
ಈ ಎಲ್ಲ ಮಾತುಕಥೆಗಳು  ಕೋಪ ತಾಪಗಳಿಲ್ಲದೆ ನಡೆದವು.
ಅವರು ಹತ್ತು ನಿಮಿಷ ಹಾಗೆಯೆ ನಿಂತರು ನಾನು ನನ್ನ ಕೆಲಸದಲ್ಲಿ ತೊಡಗಿದೆ. ಅವರು ಮತ್ತೇನು ಮಾತನಾಡದೆ ಶಿಕ್ಷಕರ ಕೋಣೆಗೆ ಹೋದರು. ನಂತರ ತರಗತಿಗೂ ಹೋದರು.




ನಾನೂ ಆ ವಿಷಯ ಕುರಿತು  ಯಾರೊಡನೆಯೂ ಮಾತನಾಡಲಿಲ್ಲ.ನಾನು ಅವರಿಗೆ ಸಹಿ ಮಾಡಲು ಹಾಜರಿ ಪುಸ್ತಕ ನೀಡದೆ ಇರುವುದು ಕಾನೂನು ಬದ್ಧಕ್ರಮ ಅಲ್ಲ, ಅವರು ಮೇಲಾಧಿಕಾರಿಗಳಿಗೆ ದೂರು ನೀಡಿದರೆ ಕಷ್ಟ. ಸುಮ್ಮನೆ ಏಕೆ ಸಮಸ್ಯೆ. ಮೇಲಾಧಿಕಾರಿಗಳಿಗೆ ದೂರು ನೀಡಿದರೆ ಅವರೆ ಬುದ್ದಿ ಕಲಿಸುವರು. ಎಂದು ಹಿರಿಯ ಸಹಾಯಕರು  ಸೂಚಿಸಿದರು.
ಏನೋ ತಿಳುವಳಿಕೆ ಇಲ್ಲದೆ ಹೀಗೆ ಮಾತನಾಡಿದ್ದಾರೆ. ದೂರು ನೀಡುವುದು ಸಲ್ಲದು.ಕಡ್ಡಿಯನ್ನು ಗುಡ್ಡ ಮಾಡುವುದು ಸರಿಯಲ್ಲ. ನಾವು ಒಟ್ಟಿಗೆ ಕೆಲಸ ಮಾಡ ಬೇಕಾದವರು. ಚತುರೋಪಾಯ ಬಳಸಿ ಹಾದಿಗೆ ತರೋಣ. ಸಂಸ್ಥೆಯಲ್ಲಿನ ಶಿಸ್ತು , ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅಡಚಣೆಯಾದರೆ  ಸುಗಮ ಆಡಳಿತಕ್ಕಾಗಿ ಕಾನೂನೇತರ ಕ್ರಮ ತೆಗೆದುಕೊಳ್ಳಲು ಆಡಳಿತಾಧಿಕಾರಿಗೆ ಅವಕಾಶವಿದೆ.ಕೈ ಮೀರಿದರೆ ಅದು ಬೇರೆಯ ಮಾತು. ಅವರಾಗಿಯೆ ದೂರು ನೀಡಿದರೆ ಇನ್ನೂ ಉತ್ತಮವಾಯಿತು. ತನಿಖೆಗೆ ಬಂದ ಅಧಿಕಾರಿಗಳಿಗೆ ವಿಷಯ ತಿಳಿಯುವುದು. ತಾವು ತೋಡಿದ ಹಳ್ಳಕ್ಕೆ ತಾವೆ ಬೀಳಬೇಕಾಗುವುದು. ಅಧಿಕಾರಿಗಳಿಗೆ ಅವರೆ ಉತ್ತರದಾಯಿಯಾಗುವರು, ಎಂದು ಸಮಾಧಾನಪಡಿಸಿದೆ.
ಮಾರನೆ ದಿನ ಪ್ರಾರ್ಥನೆಯ ಗಂಟೆ ಬಾರಿಸಿತು. ನಾನು ಹೋಗಿ ನಿಂತು ಕೊಂಡೆ. ಉಪನ್ಯಾಸಕರ ಸಾಲನ್ನು ಗಮನಿಸಿದೆ.ಅವರೂ ನಿಂತಿದ್ದರು.
ಪ್ರಾರ್ಥನೆಯು ಆದನಂತರ ಅವರನ್ನು ನನ್ನ ಕೋಣೆಗೆ ಕರೆಸಿದೆ. ಬಂದು ನನ್ನ ಮುಂದೆ ಬಿಮ್ಮನೆ ನಿಂತರು.  ಹಾಜರಿ ಪುಸ್ತಕ ನೋಡಿದೆ . ಅವರು ಆಗಲೆ  ಆ ದಿನದ ಸಹಿ ಮಾಡಿದ್ದರು
ಅವರಿಗೆ ಹಾಜರಿ ಪುಸ್ತಕ ನೀಡಿ,’  ಹಾಜರಿಯಲ್ಲಿ ಸಹಿ ಮಾಡಿ ಎಂದೆ.
ಆಗಲೆ ಸಹಿ ಮಾಡಿರುವೆ”, ಎಂದರು.
ನಿನ್ನೆಯ ದಿನದ ಸಹಿ ಮಾಡಿ ಎಂದೆ.
ಅಲ್ಲಿ ಹಸಿರು ಇಂಕಿನಲ್ಲಿ  ಪ್ರಶ್ನಾರ್ಥಕ ಚಿಹ್ನೆ ಇದೆ, ಎಂದರು.
ಹೌದು , ನಾನೆ ನಿನ್ನೆ ಅದನ್ನು ಹಾಕಿದ್ದೆ.  ಆದರೂ ಪರವಾ ಇಲ್ಲ. ಅದರ ಮೇಲೆ ನಿಮ್ಮ ಸಹಿ ಮಾಡಿ. ನಾನು ದೃಢೀಕರಿಸುವೆ, ಎಂದು ತಿಳಿಸಿದೆ.
ಅವರು ನಿಟ್ಟುಸಿರುಬಿಟ್ಟು ಸಹಿ  ಮಾಡಿದರು. ನಂತರ ತಲೆ ತಗ್ಗಿಸಿಕೊಂಡು ತರಗತಿಗೆ ಹೋದರು.
ಪ್ರಾರ್ಥನೆಯ ಪ್ರಸಂಗ ಸುಖಾಂತ್ಯವಾಯಿತು. ಮೊದಲಿನಷ್ಟೆ ಕಳಕಳಿಯಿಂದ ನಗುನಗುತ್ತಾ ಕಾಲೇಜಿನ ಕೆಲಸ ನಿರ್ವಹಿಸುವಂತಾಯಿತು. ನಾವೆಲ್ಲ ಮೊದಲು ಭಾರತೀಯರು ನಂತರ ಹಿಂದು,ಮುಸ್ಲಿಮ್‌ ,ಸಿಖ್, ಇಸಾಯಿ ,ರಾಷ್ಟ್ರ ಧರ್ಮ ಎಲ್ಲ ಧರ್ಮಕ್ಕೂ ಮಿಗಿಲು ಎಂಬ ಅರಿವು ಅವರಲ್ಲಿ ಮೂಡಿದ್ದು ತುಂಬ ನೆಮ್ಮದಿ ತಂದಿತು

Thursday, September 13, 2012

ಕರಡಿ ಮರವ ಏರಿತು


                          ಕರಡಿ ಮರವ ಏರಿತು
ಕಾರಿನ ಕರಗ ನೋಡಿ ಊರಲ್ಲಿ ಸುತ್ತ ಹೊರಟೆವು.  ನಮ್ಮ ಶಿಬಿರ ಇರುವದು ಪುಟಾಣಿ ಊರಲ್ಲಿ.  ಫಿನಿಶಿಯಾ ಎಂಬ ಪುರಾತನ ನಾಗರಿಕತೆಯ ಹೆಸರು. ಇಲ್ಲಿ ಬಂದ ಬಗೆ ನಮಗೆ ತಿಳಿಯದು.  ಬೆಟ್ಟದ ಬುಡದಲ್ಲಿ, ನದಿಯ ತಟದಲ್ಲಿ ಕಾಡಿನ ನಡುವೆ ಇರುವ ಸುಂದರ ಗ್ರಾಮ. ಊರಿಗೆ ಒಂದೇ ಒಂದು ಮುಖ್ಯ ರಸ್ತೆ. ಎರಡು ಬದಿಯಲ್ಲಿ  ಕಟ್ಟಿಗೆ ಮನೆಗಳು. ಪ್ರವಾಸಿಗರ ಅಗತ್ಯ ಪೂರೈಸುವ ಸರ್ವ ವಸ್ತು  ಭಂಡಾರ, ಹೋಟೆಲ್, ಮೋಟೆಲ್, ವಸತಿ ಗೃಹಗಳು. ಊರು ಭಿತ್ತಿ ಚಿತ್ರದಂತೆ ಬಹು ಸುಂದರ. ಇದು ಸದ ಪ್ರವಾಸಿಗರ ನೆಚ್ಚಿನ ತಾಣ. ಬೇಸಗೆಯಲ್ಲಿ ಜನ ಜಾತ್ರೆ. ಚಾರಣಿಗರು, ಬೆಟ್ಟ  ಏರುವವರುಸಾಹಸ ಕ್ರೀಡೆಗಾಗಿ ಕಾರಿನಲ್ಲಿಬಸ್ಸಿನಲ್ಲಿ  ಸೈಕಲ್ ಸವಾರರಾಗಿ ವಾರಾಂತ್ಯದಲಿ ಮುಕುರುವರು. ಚಳಿಗಾಲದಲ್ಲೂ ಸಹಾ ತೆರಪಿಲ್ಲ.  ಸ್ಕೀಯಿಂಗ್ ಗೂ ಇದು ಹೇಳಿ ಮಾಡಿಸಿದ ಜಾಗ.  ಆಗ ಮರಗಳೆಲ್ಲ ಬೋಳು ಬೋಳು.  ಅವುಗಳ ನಡುವೆ ಬೆಟ್ಟಗಳ ಇಳಿಜಾರಿನಲ್ಲಿ ಕಾಲಿಗೆ ಹಲಗೆ ಕಟ್ಟಿಕೊಂಡು, ಹಿಮಾವೃತ ಬೆಟ್ಟಗಳನ್ನೂ ದಾಟುವ ಸಾಹಸಿಗರ  ಸ್ವರ್ಗ ಇದು. ಸಕ್ಕರೆ ಬೆಟ್ಟದ ಮೇಲಿನ ಕರಿ ಇರುವೆಗಳ ರೀತಿ ಕಾಣುತ್ತಾರೆ. ವಿಶೇಷ ಉಡುಪು ಧರಿಸಿದ ಆ ಜನ. ಊರಿನ ಪ್ರಮುಖ ಭಾಗದಲ್ಲಿ ದೊಡ್ಡ ಫಲಕ ಅಲ್ಲಿರುವ ಚಾರಣದ ದಾರಿಗಳ ವಿವರ. ಅವುಗಳ ಅಂತರ, ಎತ್ತರ, ಪ್ರಯಾಸದ  ಮಟ್ಟ ಎಂದರೆ, ಸುಲಭ, ಸಾಧಾರಣ, ಕಷ್ಟ, ಕಡು ಕಷ್ಟ, ಇತ್ಯಾದಿ. ಎಷ್ಟು ದೂರ ಕಾರಲ್ಲಿ ಹೋಗಬಹುದು, ಹೆಂಗಸರು, ಮಕ್ಕಳು, ಹಿರಿಯರು ಹೋಗಬಹುದೆ, ಅಲ್ಲಿ ದೊರಕಬಹುದಾದ ಸೌಲಭ್ಯ, ಬೇಕಾಗುವ ಸಮಯ ಅಗತ್ಯವಾದ ಪೂರ್ವ ತಯಾರಿ, ಎಲ್ಲ ನಮೂದಿತವಾಗಿದ್ದವು.
ಈ ಉರಿನಲ್ಲಿ ಎಲ್ಲಿಯೂ ಮೊಬೈಲ್ ಸಂಕೇತ ದೊರಕದು. ಏನಿದ್ದರೂ ಸ್ಥಿರ ದೂರವಾಣಿಯಿಂದ ಮಾತ್ರ ಸಂಪರ್ಕ.  ಹೀಗೆ ನಮಗೆ ಆ ದಿನ ಎಲ್ಲಿ ಹೀಗಿರಬಹುದು ಎನ್ನುವ ಸ್ಥೂಲ ಕಲ್ಪನೆ ಸಿಕ್ಕಿತು. ಆಗಲೇ ಗಂಟೆ ಎಂಟೂವರೆ. ಮಲಗಿದ್ದವರೆಲ್ಲರನ್ನು ಹೊರಡಿಸಬೇಕೆಂದು ಮನೆ ಕಡೆ ಮುಖ ಮಾಡಿದೆವು.
ನಮ್ಮ ಶಿಬಿರದ ಪ್ರವೇಶ ದ್ವಾರದ ಹತ್ತಿರ ಆಗಲೇ ಜನ ಜಂಗುಳಿ. ರಸ್ತೆಯ ಆಚೆ ಬದಿಯಲ್ಲಿ ನಿಂತು ಏನನ್ನೋ ನೋಡುತ್ತಿದ್ದಾರೆ. ಎಲ್ಲರ ದೃಷ್ಟಿ ದೂರದ ಮರದ ಮೇಲೆ. ಸಮವಸ್ತ್ರಧಾರಿ ಮಹಿಳೆಯೋಬ್ಬಳು  ರಸ್ತೆಯಲ್ಲಿನ ವಾಹನಗಳ ಒಡಾಟ ನಿಲ್ಲಿಸಿ, ಜನರನ್ನು ನಿಯಂತ್ರಿಸುತ್ತಿದ್ದಾಳೆ. ಆಗಲೇ ಅಗ್ನಿಶಾಮಕ ವಾಹನದಲ್ಲಿ ಬಂದ ಇಬ್ಬರು ಆ ಮರದ ಸುತ್ತ ನೂರು ಅಡಿಯವರೆಗೆ ಯಾರು ಹೋಗದಂತೆ ಸೂಚನೆ ಇರುವ ಬಣ್ಣದ ತಡೆ ಟೇಪನ್ನು ಕಟ್ಟಿದರು. ಏನಾಗಿದೆ ಎಂಡು ನಮಗೆ ಅಚ್ಚರಿ. ಕೇಳಿದಾಗ ತಿಳಿಯಿತು. ಹಿಂದಿನ ರಾತ್ರಿ ಕರಡಿಗಳ ಗುಂಪು ನಮ್ಮ ಶಿಬಿರಕ್ಕೆ ಭೇಟಿ ನೀಡಿದ್ದವು. ಅವುಗಳ ಪೈಕಿ ಒಂದು ದೊಡ್ಡ ಹೆಣ್ಣು  ಕರಡಿ ಎರಡು ಮರಿಗಳೊಂದಿಗೆ ಮರವೇರಿ ಕುಳಿತಿದೆ. ಕರಡಿ ಬೆಟ್ಟಕೆ ಹೋಯಿತು ಎಂದು ಶಿಶು ಗೀತೆ ಕೇಳಿದ್ದ ನಾವು ಬೆಟ್ಟದಿಂದ ಇಳಿದು, ಬಯಲಲ್ಲಿ ತಿಂಡಿ ತಿಂದು, ಮರವೇರಿ ಕುಳಿತ ಕರಡಿಗಳನ್ನು ನೋಡಿದ್ದು ಇದೆ ಮೊದಲು. 
ಚಿತ್ರದುರ್ಗದಲ್ಲಿ ಬೆಟ್ಟ ಇಳಿದು ಬರುವ ಕರಡಿ ದರ್ಶನ ಆಗೀಗ ಆಗುತಿತ್ತು.  ಜನ ಕೊಡುವ ಬ್ರೆಡ್ಡು, ಶೇಂಗಾ ಪಡೆಯಲು ಸಂಜೆಯ ಕಾಲಕ್ಕೆ ಸರಿಯಾಗಿ ಹಾಜರಾಗುತ್ತಿದ್ದ, ಅದಕ್ಕೆ ಜಂಬೂ ಎಂದು ಹೆಸರಿಟ್ಟಿದ್ದರು. ಒಂದು ಬಾರಿಯಂತೂದುರ್ಗದ ಬೆಟ್ಟ ಗುಡ್ಡಗಳಲ್ಲಿ ಮಿನಿ ಚಾರಣಕ್ಕೆ ಹೋಗಿದ್ದ ನಮ್ಮಿಂದಲೂ ಏನೋ ನಿರೀಕ್ಷಿಸಿ, ಬೆನ್ನು ಹತ್ತಿ ಬಂತು.  ತಪ್ಪಿಸಿಕೊಳ್ಳಲು, ಬಂಡೆಯೊಂದನ್ನು ಹತ್ತಿ ಕೂರಬೇಕಾಗಿ ಬಂದಿತ್ತು.  ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ, ಅದು ನಮ್ಮನ್ನು ನಿರೀಕ್ಷಿಸುತ್ತ, ಕೆಳಗೆ ಕಾವಲು ಕೂತಿತ್ತು.
ಆದರೆ, ರಸ್ತೆ ಬದಿಯ ಎತ್ತರದ ಮರವನ್ನು ಮರಿಗಳ ಸಮೇತ ಏರಿ ಕುಳಿತದ್ದನ್ನು ನೋಡಿದ್ದು ಇದೆ ಮೊದಲು. ಅದಕ್ಕೆ ಗಾಬರಿಯಾಗದಿರಲೆಂದು ಸಂಚಾರದ ದಿಕ್ಕನ್ನೇ ಬದಲಿಸಲಾಗಿತ್ತು. ಬೆಟ್ಟದಲ್ಲಿ ಕರಡಿ ಇವೆ ಎಂದು ಕೇಳಿದ್ದ ನಮಗೆ ಅವು ನಮ್ಮ ಭೇಟಿಗೆ ಬಂದಿದ್ದವು ಎಂದಾಗ ಹೊರಗೆ ಸಂತೋಷ ತೋರಿಸಿದರೂ, ಮನದಲ್ಲಿ ಭೀತಿ ಮನೆ ಮಾಡಿತ್ತು. ಆದರೆ ಇದು ಪ್ರವಾಸಿಗಳಿಗೆ ಅನಿರೀಕ್ಷಿತ ಬೋನಸ್. ಎಲ್ಲರೂ ಕೆಮರ ಕ್ಲಿಕ್ ಮಾಡುವವರೆ. ಟೆಲಿ ಲೆನ್ಸ್ ಇದ್ದವರಿಗೆ ಖುಷಿಯೋ ಖುಷಿ. ಇಲ್ಲದವರು ಕ್ಲೋಸ್ ಅಪ್ ಚಿತ್ರಕ್ಕಾಗೇ ಕುಳಿತೂ- ನಿಂತೂ, ಮರವೇರಿ ಸರ್ಕಸ್ಸು ಮಾಡಿ ಉತ್ತಮ ಚಿತ್ರ ಪಡೆವ ಪ್ರಯತ್ನಪಟ್ಟರು.
ನಮ್ಮ ತಂಬೂಗೆ ಬಂದಾಗ ಬೆಳಗಿನಜಾವದ ಜಾಂಬವ ಸೈನ್ಯದ ದಾಂಧಲೆಯ ಪರಿಚಯವಾಯಿತು. ನಡುರಾತ್ರಿ ಮೀರಿ, ಕುಡಿದು ಕುಪ್ಪಳಿಸಿದ ಜನ ತಿಂಡಿ ತೀರ್ಥಗಳನ್ನೂ ಬಯಲಲ್ಲೇ ಮೇಜಿನ ಮೇಲೆ ಬಿಟ್ಟಿದ್ದರು. ಅವು ಕರಡಿ ಪಡೆಯ ಪಾಲಿಗಿದ್ದವು. ತಿಂದದ್ದಕ್ಕಿಂತ ಚೆಲ್ಲಾಪಿಲ್ಲಿಯಾದದ್ದೇ ಹೆಚ್ಚು. ಕರಿ ಕರಡಿ ಶಿಬಿರ ಎಂಬ ಹೆಸರಿಗೆ ನ್ಯಾಯ ಒದಗಿಸಲು ಕರಡಿಗಳೆ ದರ್ಶನ ನೀಡಿದ್ದವು ಅಥವಾ ಪ್ರವಾಸಿಗಳಲ್ಲಿ ರೋಮಾಚಂನ ಹುಟ್ಟಿಸಲು ಮಾಡಿದ ಮಾರ್ಕೆಟಿಂಗ್ ಟ್ರಿಕ್ಕಾ..? ಇರಲಾರದು ಎಂದೇ ಅಂದುಕೊಂಡೆವು.