Tuesday, August 21, 2012

ಕಲಬುರ್ಗಿಯ ಕಲರವ



ದಸರೆ ರಜೆ ಯಲ್ಲೆ ವರ್ಗಾವಣೆ ಯಾದ್ದರಿಂದ  ಏನು ಮಾಡುವುದು ಎಂದು ತೋಚಲಿಲ್ಲ. ಯಾವದಕ್ಕೂ ಒಂದು  ಸಾರಿ  ಹೊಸ ಊರು  ನೋಡಿ ಕೊಂಡು ಬರಲು ನಿರ್ಧರಿಸಿದೆ. ಜತೆಗೆ ಗೆಳೆಯರಾದ ಶರ್ಮ ಮತ್ತು ವೀರಪ್ಪ ಸಹಾ ಬಂದರು. ರಾತ್ರಿಯಿಡಿ ಪಯಣಿಸಿ ಬೆಳಗಿನ ಏಳಕ್ಕೆ ಕಲಬುರ್ಗಿಗೆ ಬಂದು ಅಲ್ಲಿಂದ ಬೀದರ್‌ ಬಸ್ಸು ಹಿಡಿದೆವು.ಒಂದು ತಾಸು ಕಳೆಯಿತು.ಕಲಬುರ್ಗಿಯಿಂದ ೩೦ ಕಿಲೋ ಮೀಟರ್‌ಹೋಗುತ್ತಿದ್ದಂತೆ ರಸ್ತೆಯಲ್ಲಿ ಬಸ್ಸು ನಿಂತೊಡನೆ ನಾಲಕ್ಕಾರು ಜನ ಕಿಟಕಿ ಹತ್ತಿರ ಬಂದು “ಲಾಲ್ ಕೇಲಾ ಲಾಲ್‌ಕೇಲಾ” ಎಂದು ಕೂಗ ತೊಡಗಿದರು. ಕಣ್ಣು ಹಾಯಿಸಿದಾಗ ಅವರ ಕೈನಲ್ಲಿ ಕೆಂಪನೆಯ ಹಣ್ಣು ಕಾಣಿಸಿದವು ನಂತರ ಗೊತ್ತಾಯಿತು ಅವು ಬಾಳೆ ಹಣ್ಣು ಎಂದು.ನನಗೆ ವರ್ಗವಾದ ಊರು ಕೆಂಪು ಬಾಳೆ ಹಣ್ಣಿಗೆ ಪ್ರಸಿದ್ಧಿ ಎಂದು ಆಗ ಅರಿವಾಯಿತು. ಹಂಪೆಯ ಹತ್ತಿರದ ನನಗೆ ಬಾಳೆ ಹಣ್ಣು ಚಿರ ಪರಿಚಿತ.  ನಾನು ಪಚ್ಛ ಬಾಳೆ, ಏಲಕ್ಕೆ ಬಾಳೆ , ರಸ ಬಾಳೆ ನೇಂದ್ರಬಾಳೆ ನೋಡಿದ್ದೆ. ಕೆಂಪುಬಾಳೆ ಹಣ್ಣು ನೋಡಿದ್ದು ಅದೆ ಮೊದಲು. . ತುಸು ದಪ್ಪ ಮತ್ತು ನಸು ಸುವಾಸನೆ. ಅಷ್ಠೇನೂ ಸಿಹಿಯಿಲ್ಲ.ಬೆಲೆ ಸ್ವಲ್ಪ ಹೆಚ್ಚೆ. . ಒಂದೆ ಸಂತೋಷದ ಸಂಗತಿ ಎಂದರೆ ಈವರೆಗೆ ಎಲ್ಲಿ ನೋಡಿದರೂ ಕಣ್ಣು ಹರಿಯುವ ತನಕ ಕರಿ ನೆಲ. ಹಸಿರಿನ ಸುಳಿವೆ ಇರಲಿಲ್ಲ.ಆದರೆ  ಇಲ್ಲಿ ತುಸು ನೀರಾಸರೆ ಅದೂ ಭಾವಿಯಿಂದ ಇದೆ., ಅದಕ್ಕೆ ಅದು ಕೆಂಪುಬಾಳೆ ಬೆಳೆಗೆಹೆಸರುವಾಸಿ.
ಕಾಲೇಜು ಎಲ್ಲಿ ? ಎಂದು ಕೇಳಿದಾಗ ಹೆದ್ದಾರಿಯಲ್ಲಿಯೆ ಊರಾಚೆಇರುವ ಕಲ್ಲಿನ ಕಟ್ಟಡವನ್ನು ತೋರಿಸಿದರು. ಅದು ಟಿಸಿಎಚ್‌  ಕಲೇಜು. ಅಲ್ಲಿನವರಗೆ ಕಾಲೇಜು ಎಂದರೆ ಅದೆ.   ಕಾರಣ ಅಲ್ಲಿ ಪ್ರಾಥಮಿಕ ಶಿಕ್ಕರು ಮನೆಗೊಬ್ಬರು. ಪದವಿ ಪೂರ್ವಕಾಲೇಜು ಹೈಸ್ಕೂಲು ಎಂದೆ ಪರಿಚಿತ.ಅದು ಊರಿಗೆ ಬರುವ ಮುಂಚೆಯೆ ಇದ್ದಿತು. ಭವ್ಯ ವಾಗಿತ್ತು.  ಒಳಗೆ ಹೋಗಿ ನೋಡಲು ಯಾರೂ ಇರಲಿಲ್ಲ. ಊರಲ್ಲಿ ಹೋಗಿ ವಿಚಾರಿಸೋಣ ಎಂದು ಹೊರಟೆವು.ದಸರೆ ರಜೆ. .ಮುಖ್ಯರಸ್ತೆಯಿಂದ  ಅರ್ಧ ಕಿಲೋ ಮೀಟರ್‌ನಡೆದರೆ  ಎದುರಿಗೆ ಒಂದು ಬೆಟ್ಟ ಅದರ ಸುತ್ತಲೂ ಸಣ್ಣ ದೊಡ್ಡ ಮನೆಗಳು.  ವಿಚಾರಿಸುತ್ತಾ ಊರ ಒಳಗೆ ನಡೆದಾಗ ಸ್ಥಳೀಯ ಶಿಕ್ಷಕರೊಬ್ಬರ ಮನೆ ತೋರಿದರು. ಹಾದಿಯುದ್ದಕ್ಕೂ ಹೊಸ ಮಾಸ್ತರ ಬಂದಾರ ಎಂದು ಮಿಕಿಮಿಕಿ ನೋಡುವವರೆ  ನಾಲ್ಕು ನೂರು  ಮೈಲು ದೂರದ ಊರು. ನೋಡಿಕೊಂಡು ಹೋಗಲೆಂದು ಜತೆಗೆ ಶರ್ಮ ಹಾಗೂ  ವೀರಪ್ಪ ಎಂಬ ಗೆಳೆಯರೂ ಜತೆಗೆ  ಬಂದಿದ್ದರು. ನಾವು ಅಲ್ಲಿನ ರೆಡ್ಡಿ ಮಾಸ್ತರ್ಮನೆಗೆ ಹೋದೆವು. ಅವರು ಸ್ಥಳಿಯರಾದ್ದರಿಂದ ಅವರೆ ರಜೆಯಲ್ಲಿ ಪ್ರಭಾರೆ ಯಲ್ಲಿ ಇದ್ದರು..ಮನೆ ದೊಡ್ಡದು.. ಹೆಬ್ಬಾಗಿಲು ದಾಟಿದೊಡನೆ ವಿಶಾಲವಾದ ಅಂಗಳ. ಅಲ್ಲಿ ನಾಲಕ್ಕೆಂಟು ದನಗಳು ಅವುಗಳಿಗೆ ನೀರು ಕುಡಿಯಲು ಕಲಗಚ್ಚು ಅದಕ್ಕೆ ಹೊಂದಿ ಕೊಂಡಂತೆ ಬಾಗಿಲು ಅಲ್ಲಿ ಮತ್ತೆ ದನಗಳು ಅದನ್ನು ಅಂಗಳದ ಮೂರು ಕಡೆ ಸಾಲಾಗಿ ಕೋಣೆಗಳು. ಮುಂದೆರ ನಾಲಕ್ಕು ಅಡಿ ಕಟ್ಟೆ ಅದಕ್ಕೆ ತಗಡಿನ ಛಾವಣಿ.. ಹಳೆಯ ಕಾಲದ ಮನೆಗಳೆಲ್ಲ ವಾಡೆಯ  ರೀತಿಯಲ್ಲಿವೆ.  ಹೊರಗಿನವರಿಗೆ ಏನೂ ಕಾಣದ ಮತ್ತು ಸುಲಭ ವಾಗಿ ಒಳಬಾರದ ಎತ್ತರದ ಗೋಡೆಗಳಿ ಆವರಣ.. ಕೋಟೆಯ ಬಾಗಿಲನಂತಿರುವ ತಲಬಾಗಿಲು. ನಿಜಾಮರ ಆಡಳಿತದ ಫಲಶೃತಿಯೆ ಇದಕ್ಕೆ ಕಾರಣ
ರೆಡ್ಡಿ ಸರಿ ಸುಮಾರು ನನ್ನ ವಯಸ್ಸಿನವರೆ.ಹೋದ ಕೋಡಲೆ ಕನಾತ ಹಾಸಿಕೂಡ್ರಿಸಿದರು.
ಈಗ ಕಾಲೇಜು ಬಂದ ಅದರಿ ಸರ,. ಸಾಹೇಬರು ಕಲಬುರ್ಗಿನಾಗ ಹಾರಿ ,ನೀವು ಸೂಟಿ ಮುಗದಮೇಲೆ ಬಂದರೂ ಆತರಿ ಎಂದರು.
ನಮಸ್ಕಾರ ಹೇಳಿ ಹೊರಡಲು ಎದ್ದೆವು.
ಅದೆಂಗ ಆಗತದರೀ ಸರ,  ಜರಾ ದಮ್ಮ ಹಿಡೀರಿ, . ಮೊದಲು ಕೈಕಾಲುತೊಳೆದುಕೊಳ್ಳಿ ಎಂದರು
ಇಲ್ಲ ನಾವು ಕಲಬುರ್ಗಿಗೆ ಹೋಗುತ್ತೇವೆ, ಎಂದೆವು.
ಅದೇನ್ರೀ ಸರ, ನೀವು ಅಷ್ಟು ದೂರದಿಂದ ಬಂದು ಹಾಗ ಹೋಗೋದ, ನ್ಯಾರಿ ಮುಗಿಸಿ ಕೊಂಡ ಹೋಗ್ರೀ , ಎಂದು ಪಡಶಾಲೆಯಲ್ಲಿ  ಒತ್ತಾಯ ಮಾಡಿ ಕೂಡ್ರಿಸಿದರು.,
ಅಷ್ಟರಲ್ಲೆ ಪಟಪಟ ರೊಟ್ಟಿ ಬಡಿಯುವ ಶಬ್ದ ಕೇಳಿಸಿತು. ಹತ್ತೆ ಮಿನಿಟಿನಾಗ ಕೈಗೆ ಗಂಗಾಳ ಬಂತು. ಬಿಸಿ ಬಿಸಿ ಬಿಳಿ ಜೋಳದ ರೊಟ್ಟಿ, ಖಾರ ಬ್ಯಾಳಿ,ಸೇಂಗಾಪುಡಿ , ಮೇಲೆ ಗಜಗದ ಗಾತ್ರದ ಬೆಣ್ಣಿ ಮುದ್ದೆ.
ಬೇಡ ಬೇಡ ಎನ್ನುತ್ತಲೆ  ತಲಾ ಮೂರು ಹಂಚಿನ ಮೇಲಿನಿಂದ  ಬರುವ  ಬಿಸಿ ಬಿಸಿ ರೊಟ್ಟಿ ತಿಂದೆವು..
.ಬೇಡ ಬೇಡವೆಂದರೂ ಒತ್ತಾಯಮಾಡಿ ಹಾಕಿದ ಗಟ್ಟಿ  ಮೊಸರು ಅನ್ನ  ಉಂಡು  ಡರ್‌ ಎಂದು ಡೇಗಿದೆವು.
ಕಣ್ಣು ಕಾಣದ ದೇಶಕ್ಕೆ ಹಾಕಿರುವರಲ್ಲ ಎಂಬ ಶಂಕೆ ಮಾಯವಾಯಿತು.
ಜೀವನ ರೆಡ್ಡಿ ಮಾಸ್ತರ್‌ ಅವರ ಹೆಸರಿಗೆ ತಕ್ಕಂತೆ ಇರುವ ಅವರ  ಜೀವನ ಪ್ರೀತಿಗೆ ಮನಸು ಮಾರು ಹೋಯಿತು.
ನನ್ನ ಗೆಳೆಯರಿಬ್ಬರೂ ಫುಲ್‌ಖುಷ್‌.  ಬಿಡಪ್ಪಾ ನಮ್ಮಿಂದ ದೂರವಾದರೂ ಸುಖವಾಗಿ ಇರಬಹುದು. ಒಳ್ಳೆಯ ಜನ. ಹೊಸ ಜಾಗವಾದರೂ ಹಸನಾದ ಪ್ರದೇಶ. ಎಂದುತೃಪ್ತಿ ವ್ಯಕ್ತ ಪಡಿಸಿದರು.
.ಎಲ್ಲ ಕೆಲಸ ಹೂ ವೆತ್ತಿದಂತೆ ಆದುದರಿಂದ ಹಗುರ ಮನಸ್ಸಿನಿಂದ ಹೊರಟೆವು. ಉರಿಬಿಸಿಲ ಕರಿಮಣ್ಣಿನ ಆ ಪ್ರದೇಶದಲ್ಲಿನ  ಜನರ ಆತಿಥ್ಯಕ್ಕೆ ನಾನು ಮೊದಲ ಭೇಟಿಯಲ್ಲೆ ಮಾರು ಹೋದೆ.ಒಂದುಕ್ಷಣ ಮೊದಲ ಸಲ ಮಲೆ ನಾಡಿಗೆ ಕೊಟ್ಟ ಭೇಟಿ ನೆನಪಾಯಿತು. ಇಲ್ಲಿ ನಯ ನಾಜೂಕು ಕಡಿಮೆ. ಹೆಚ್ಚಿನ ನಾಗರೀಕ  ಸೌಲಭ್ಯವಿಲ್ಲದ ಊರು. ಅವರಲ್ಲಿನ ಮಾನವೀಯತೆ ಮನ ಗೆದ್ದಿತು.
ರಜೆ ಮುಗಿಸದ ಮೇಲೆ ಕಾಲೇಜಿಗೆ ಬಂದು ವರದಿಮಾಡಿಕೊಂಡೆ. ಬಹಳ ಹಳೆಯ ಕಾಲೇಜು. ಸುಸಜ್ಜಿತ ಕಟ್ಟಡ.ಗುಲ್ಬರ್ಗ ಜಿಲ್ಲೆಯ ವಿಶೇಷತೆ ಎಂದರೆ ಅಲ್ಲಿ ಎಲ್ಲೂ ಕಟ್ಟಡದ ಕೊರತೆ ಇಲ್ಲ. ಅಲ್ಲಿನವರೆ ಮುಖ್ಯ ಮಂತ್ರಿಗಳಾಗಿದ್ದ ಪರಿಣಾಮ. ಅಲ್ಲಿ ಲವಕುಶರೆಂದೆ ಹೆಸರಾದ ಖರ್ಗೆಮತ್ತು  ಧರ್ಮ ಸಿಂಗ್‌ ಸತತ ಮಂತ್ರಿಗಳಾಗಿರುವುದರಿಂದ ಕಾಮಗಾರಿ ಕೆಲಸ ಆಗಿತ್ತು.ಕಣ್ಣಿಗೆ ಕಾಣವ ತನಕ ಕರಿ ನೆಲದ ಮೇಲೆ ಗೆರೆ ಹೊಡೆದಂತಹ ರಸ್ತೆಗಳು. ಆದರೂ  ಶಿಕ್ಷಕರ ಕೊರತೆ ಬಹಳ.ಮತ್ತು ಶೈಕ್ಷಣಿಕವಾಗಿ ಬಹಳ ಹಿಂದುಳಿದ ಪ್ರದೇಶ. ಉಪನ್ಯಾಸಕರಾದ ಮಸ್ಕಿಯ ಮಲ್ಲಣ್ಣ, ಬಿಜಾಪುರದ ಹಿರೆ ಗೌಡರ, ಮಹಾರಾಷ್ಟ್ರದ ಮಾರುತಿ ಧಾನೆ, ಉಪನ್ಯಾಸಕರು ಶಿವಮೊಗ್ಗದ ವರು ಪ್ರಾಂಶುಪಾಲರು.ಬಹುತೇಕ ಎಲ್ಲರೂ ಹೊರಗಿನವರೆ. ಗೆಳೆಯರ ಕೋಣೆಯಲ್ಲಿ ತಂಗಿದೆ. ಊಟಕ್ಕೆ ಒಂದೆ ಒಂದು ಖಾನಾವಳಿ. ಕುಂಬಾರಣ್ಣನ ಗುಡಿಸಲ ಹೋಟೆಲಿನಲ್ಲೆ ನಮ್ಮೆಲ್ಲರ ಊಟ .ಈ ವರೆಗೆ ನನಗೆ ಮನೆ ಯಿಂದ  ಹೊರಗೆ ಊಟ ಮಾಡಿ ಅಭ್ಯಾಸ ಇರಲಿಲ್ಲ.ಈಗ ಆಪದ್ದರ್ಮವೆಂದು   ತಟ್ಟಿ ಹೋಟೇಲ್‌ನಲ್ಲಿ ಊಟ. .
ಅಲ್ಲಿನ ಕನ್ನಡದ ಪರಿಚಯ  ಮನೆ ಹುಡುಕಲುಹೋದಾಗ ಆಯಿತು. ಎರಡು ಖೊಲ್ಲಿ ಮಕಾನ ಅದರಿ .ಆಜೂ ಬಾಜೂದರ  ಖೂನಾ ಆದಮ್ಯಾಲ ಚೊಲೋಆಗತದ. . ಖಟ್ಲೆ ತರಲಿಕ್ಕೆ ಆರಾಮ. , ಎಂದಾಗ ಇದೇನಪ್ಪ ಮನೆ ಹುಡುಕಲು ಬಂದರೆ ಖೂನಿ, ಕಟ್ಲೆ  ಎನ್ನುವರು, ಎಂದು ಗಾಬರಿಯಾಯಿತು.  ನೀವು ಬರೋದ್ರಾಗೆ ಸುಣ್ಣ ಕಾರಣಿ ಮಾಡಸ್ತೀವಿ. ಎಂದರು ಸಣ್ಣ ಬಳಿಸುವುದು ನಮಗೆ ಗೊತ್ತು. ಈ ಕಾರಣಿ ಎಂದರೇನು ಎಂಬುದು ತಿಳಿಯಲಿಲ್ಲ.
ಹೋದ ಒಂದೆ ವಾರದಲ್ಲಿ ಮನೆ ಸಿಕ್ಕಿತು. ಅಲ್ಲಿನ ಕುಲಕರ್ಣಿಯವರದೆ ಮನೆ. ಎರಡು ಕೋಣೆಗಳು ಗಚ್ಚಿನವು. ಮುಂದೆ ತಗಡಿನ ಮಾಳಿಗೆ. ಅವರು ತುಂಬ ಗಟ್ಟಿಕುಳ. ಎಲ್ಲರೂ ಸುಶಿಕ್ಷಿತರು ಮತ್ತು ಒಳ್ಳೆಯ ನೌಕರಿಯಲ್ಲಿದ್ದರು.ಅಲ್ಲದೆ ಮನೆ ಮುಖ್ಯ ರಸ್ತೆಯಲ್ಲಿಯೆ ಇತ್ತು. ಅಲ್ಲಿನ ವಿಶೇಷ ವೆಂದರೆ ಮುಖ್ಯ ರಸ್ತೆ ಈಗಿನ ವರ್ತುಲರಸ್ತೆ ಯಂತೆ. ಊರ ಮಧ್ಯದಲ್ಲಿ ಒಂದು ಚಿಕ್ಕ ಬೆಟ್ಟ ಅದರ ಸುತ್ತೂ ರಸ್ತೆ ಬಹುಶಃ ಒಂದುಅರ್ಧ ಕಿಲೋ ಮೀಟರ್‌ ಉದ್ದವಿರಬಹುದು. ಅದರ ಆಚೀಚೆ ಮನೆಗಳು ಮತ್ತು ಅದರಲ್ಲಿಯೆ ಅಂಗಡಿ ಮುಂಗಟ್ಟು. ಅದೆಮುಖ್ಯ ವಾಣಿಜ್ಯ ಕೇಂದ್ರ. ಅಷ್ಟೆ ಅಲ್ಲ ವಾರಕೊಮ್ಮೆ ಆಗುವ ಸಂತೆಯೂ ಸಹಾ ಅಲ್ಲಿಯೇ.ಅಲ್ಲಿ ನಿತ್ಯ ತರಕಾರಿ ಸಿಕ್ಕದು.  ಏನಿದ್ದರೂ ವಾರದ ಸಂತೆಯಲ್ಲಿಯೇ ಕೊಂಡಿಟ್ಟಿರಬೇಕು.ನನಗೆ ಅಚ್ಚರಿಯಾದ ಸಂಗತಿ ಎಂದರೆ ಅಲ್ಲಿ ಸಂತೆಗ ಬರುತಿದ್ದ ಒಂಟೆಗಳು. ಬೀದರಿನ ಕೆಲಭಾಗದಲ್ಲಿ ಒಂಟೆಯೆ  ಸಾಮಾನು ಸಾಗಣಿಕೆಗೆ ಸಾಧನ .. ಸರ್ಕಸ್ಸಿನಲ್ಲಿ ಮಾತ್ರ ಒಂಟೆ ನೋಡಿದ್ದ ನಮಗೆ ಅಚ್ಚರಿಯೋ ಅಚ್ಚರಿ. ಸಂತೆಯಲ್ಲಿ ಕಾಳು ಕಡಿ, ಬೆಣ್ಣೆ ತರಕಾರಿ ಬಟ್ಟೆ ಬರೆ ಎಲ್ಲ ಮಾರಲು ಸಿಗುತಿತ್ತು. ಒಂದೆರಡು ಕಡೆ ಗೋಣೀ ಚೀಲಹಾಸಿ ಅವುಗಳ ಮೇಲೆ ರಾಸಿ ರಾಸಿ ಕಂದು ಬಣ್ಣದ ಎಲೆಗಳನ್ನು ಹಾಕಿ ಮಾರುತ್ತಿರುವುದು ಗಮನಿಸಿದೆ. ಅದನ್ನು ಪಾವು ಸೇರು ಆಧಾ ಸೇರು ಲೆಕ್ಕದಲ್ಲಿ ಕೊಳ್ಳುವರು.ಜೀವನ ರೆಡ್ಡಿಯವರನ್ನೂ ನಾವೂ ಅದನ್ನು ತೆಗೆದುಕೊಳ್ಳೋಣ ಎಂದಾಗ, ಅವರು ಜೋರಾಗಿ ನಕ್ಕರು. ಚಾ ಕಾಪಿ ಕುಡಿಯದ ನೀವು ಅದನ್ನೇನು ಮಾಡುವಿರಿ ಎಂದರು. ನಾನು ಹುಬ್ಬು ಏರಿಸಿದೆ.
ಅದುತಂಬಾಕ. ಎಲೆ ಅಡಿಕೆ ಹಾಕುವವರು ಅದನ್ನು ಇಲ್ಲಿ ಧಾರಾಳವಾಗಿ ಬಳಸುವರು. ಹೆಂಗಸರು ಕಡ್ಡಿ ಪುಡಿ ತಿನ್ನುವರು ಎಂದು ವಿವರಣೆ ಕೊಟ್ಟಾಗ ನನ್ನ ಅಜ್ಞಾನಕ್ಕೆ ನಾಚಿಕೆಯಾಯಿತು.ನಾನು ಹಳ್ಳಿಯ ಹಿನ್ನೆಲೆಯಿಂದ ಬಂದವನೆ ಆದರೂ ಮೊಳ ಉದ್ದ ತಂಬಾಕಿನ ಎಲೆಗಳನ್ನು ನೋಡಿದ್ದು ಇದೆ ಮೊದಲು. ಅದಕ್ಕೆ ಕಾಣುತ್ತದೆ ಇಲ್ಲಿ  ಬಸ್‌ ನಿಲ್ದಾಣದಲ್ಲಿ ಓಕಳಿ ಆಡಿದಂತೆ ಕೆಂಪು ಕಲೆಗಳು. ಅವು ತಾಂಬೂಲ ತಿಂದ ಉಗುಳಿದುದರ  ಕಲೆಗಳು ಮೊದಮೊದಲು ಸಂತೆಯಲ್ಲಿನ ದೀಡ, ಅಡೀಚ ಸವಾ , ಪಾವು ಚಟಾಕು ವೀಸ,ಎಂದರೆ ಎನೆಂದೇ ತಿಳಿಯುತ್ತಿರಲಿಲ್ಲ
ಅಲ್ಲಿನ ಇನ್ನೊಂದು ವೈಶಿಷ್ಟ್ಯವೆಂದರೆ ಮನೆಯಂತಿರುವ ಕಟ್ಟಡದಲ್ಲಿ  ಶಿವ ದೇವಾಲಯ ಮತ್ತು ಗುಡಿಯಂತಿರುವ ಕಟ್ಟಡದಲ್ಲಿ ಮೇಲೆ ಹಸಿರು ನಿಶಾನೆ.ರಜಾಕಾರರ ಹಾವಳಿಯನಂತರ ಅಲ್ಲಿ ಕೋಮು ಗಲಭೆ ಯಾಗಿಯೆ ಇಲ್ಲ.ಅಲ್ಪ ಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲೆಇದ್ದರೂ ಸಾಮರಸ್ಯಕ್ಕೆ ಕುಂದಿಲ್ಲ.
ಅಲ್ಲಿ ತಲೆಯ ಮೇಲೆ ಟೊಪ್ಪಿಗೆ ಇಲ್ಲದವರೆಂದರೆ ಮೈಸೂರು ಕಡೆ ಮಂದಿ ಮಾತ್ರ. ಎಲ್ಲರ ತಲೆಗಳ ಮೇಲೂ ಬಹುತೇಕ ಬಡವ ಬಲ್ಲಿದ ನೆಂಬ ಬೇಧವಿಲ್ಲದೆ ಗಾಂಧಿ ಟೊಪ್ಪಿಗೆ ರಾರಾಜಿಸುತಿದ್ದವು ಅಲ್ಲಿಲ್ಲಿ ವಿಭಿನ್ನವಾದ ಟೋಪಿಗಳು ಇದ್ದವು. ಸುಶಿಕ್ಷತರನ್ನು ಬಿಟ್ಟರೆ ಉಳಿದವರು ಬಿಳಿ ಪೈಜಾಮಾ , ತುಂಬುತೋಳಿನ ಅಂಗಿ ಧಾರಿಗಳು. ಜಾತಿ ಭೇಧವಿಲ್ಲದ ಹೊಕ್ಕು ಬಳಕೆ..  ಅಬ್ದುಲ್ಅಣ್ಣ, ಕರೀಂ ಕಾಕಾ ಮಾಬೂ ಮಾಮ, ಬೀಯಮ್ಮ, ಬೂಬಕ್ಕ, ರೆಡ್ಡಿ ಮಾಮ,ಗೌಡಜ್ಜ , ಲೂಥರಣ್ಣ   ಎಂದು ಸಂಬಂಧ ಹಚ್ಚಿ ಆತ್ಮೀಯ ಸಂಬೋಧನೆ. ಇಲ್ಲವಾದರೆ ಅವರ ಮನೆತನದ ಹೆಸರಾದ ಗೌಡ್ರು, ಪಾಟೀಲ, ಮಾಲಿ ಪಾಟೀಲ್. ಬಿರಾದಾರ , ಕುಲಕರ್ಣಿ ಬಳಕೆ. , ವಿದ್ಯಾವಂತರಾದರೆ ಎಲ್ಲರೂ ಸಾಹೇಬರೆ. ಪಾಟೀಲ್‌ಸಾಬ್‌ ,ರಾವ್‌ಸಾಬ್. ಆಚಾರ್‌ಸಾಬ್‌  ಮೊದಲಾಗಿ. ಕಾಲೇಜು ಬಂದ ಮೇಲೆ ಹುಡುಗರ ಕ್ರಾಪು ಮತ್ತು ಪ್ಯಾಂಟು ಕಾಣುವಂತಾಯಿತಂತೆ . ಅಲ್ಲಿಯ ತನಕ ಶಾಲೆಯಲ್ಲೂ ಟೊಪ್ಪಿಗೆ ಕಡ್ಡಾಯ. ಇನ್ನು ಹೆಂಗಸರೂ ಅಷ್ಟೆ. ಎಲ್ಲರದೂ ತಲೆಯ ಮೇಲೆ ಸೆರಗು.ಕೆಲವಿದ್ಯಾವಂತರು ಮಾತ್ರ ಅದಕ್ಕೆ ಅಪವಾದ. ಹಳೆಯ ತಲೆ ಮಾರಿನವರೆಲ್ಲರಿಗೂ ಹೈದ್ರಾಬಾದಿನೊಡನೆ ಹೆಚ್ಚು ಒಡನಾಟ.ಉನ್ನತ ಶಿಕ್ಷಣ ಅಲ್ಲಿಯೆ. ಅದರಿಂದಾಗಿಯೆ ವೀರೆಂದ್ರ ಪಾಟೀಲ, ಮಲ್ಲಿಕಾರ್ಜುನ ಖರ್ಗೆ ,ಧರಮ್‌ಸಿಂಗ್‌ ಅವರ ಉರ್ದು ಭಾಷಣ ನಿಂತು ಕೇಳುವಷ್ಟು ಮಧುರ.ಜನಸಾಮಾನ್ಯರಿಗೂ ಉರ್ದು ಮಾತು ನೀರು ಕುಡಿದಷ್ಟು ಸಲೀಸು. ವ್ಯಾಪಾರ ವ್ಯವಹಾರಕ್ಕೆ  ಹೈದ್ರಾಬಾದು ಆದರೆ ರೋಗ ರುಜಿನಕ್ಕೆ ಷೊಲ್ಲಾಪುರ ಮತ್ತು ಮೀರಜ ಆಸ್ಪತ್ರೆಗಳು. ಯಾತ್ರೆ ಎಂದರೆ ಕೊಲ್ಲಾಪುರದ ಮಹಾಲಕ್ಷ್ಮಿ  ಪಂಡರಾಪುರದ ವಿಠೋಬ . ಅನೇಕರ ಪಾಲಿಗೆ ರಾಜಧಾನಿಯಾದ ಬೆಂಗಳೂರು ಪರಕೀಯ ಪ್ರದೇಶ.. ನಾನು ಯೋಚನೆ ಮಾಡಿದಾಗ ಹೊಳೆಯಿತು ಅದಕ್ಕೆ ಕಾರಣ ಅಲ್ಲಿರುವ ರಣರಣ  ಬಿಸಲು. ಅದರಿಂದ ಅವರು ಉಡುಪು ಅದಕ್ಕೆ ಅನುಗುಣ ವಾಗಿಯೆ ಇತ್ತು
ಇನ್ನು ಅಲ್ಲಿನ ಸಂಬೋಧನೆ ನನಗೆ ಮಜಾ ಕೊಡುತಿತ್ತು  . ಅಲ್ಲಿನ ಎಲ್ಲ ಗಂಡಸರೂ ಅಣ್ಣೋರು , ಎಲ್ಲ ಹೆಂಗಸರೂ ಅಕ್ಕೋರು.
ಮನೆಯವರು ಬಾಯೇರು.  ಬಹು ತೇಕ  ಹೆಣ್ಣು ಮಕ್ಕಳದು ಮದುವೆಯಾದ ಮೇಲೆ . ಬಾಯಿ ಜೋರು ಆಗುವುದರಿಂದ  ಬಾಯೇರು ಎನ್ನುವರು ಎಂದು ನಾವು ಹಾಸ್ಯ ಮಾಡುತ್ತಿದ್ದೆವು.
ಹೋದ ಹೊಸದರಲ್ಲಿ ನಮ್ಮ ಜವಾನನ್ನೂ ಕಾಸೀಮ್‌ ಎಂದುಶಿಕ್ಷಕರೊಬ್ಬರು ಕೂಗಿದರು.. ಅವನು ಇದ್ದಲಿಂದಲೆ “ಹೋರೀ”  ಎಂದ
 ನನಗೆ ಇಲ್ಲಿಯಾಕೆ  ಹೋರಿ ಬಂತು  ಎಂದುಕೊಂಡೆ.  ನಂತರ ತಿಳಿಯಿತು ಅಲ್ಲಿ ಯಾರನ್ನಾದರೂ ಕರೆದರೆ ಗೌರವ ಪೂರ್ಣವಾಗಿ . ಓ ಎಂದು ಹೇಳದೆ ಮರ್ಯಾದೆಯಿಂದ ಓರಿ ಎನ್ನವರು , ಅದೆ ಹೋರಿ ಯಾಗಿತ್ತು..
 ಒಂದು ದಿನ ನಮ್ಮ ಕಾಸೀಂ ಬಂದು , ಸರ, ಪಾರುಗೋಳು ಖೋಲ್ಯಾಗ ದಾಂಧಲೆ ನಡಸ್ಯಾವ  ತಾಬಡ ತೋಬಡ ಬರ್ರಿ ,ಸಾಹೇಬರು ಕೂಗಾಕ ಹತ್ಯಾರ  ಎಂದಾಗ , ನನಗೆ ತಲೆ ಬುಡ ತಿಳಿಯಲಿಲ್ಲ. ನಂತರ ಅಲ್ಲಿಯವರೊಬ್ಬರು ತಿಳಿಸಿದರು.. ತರಗತಿಯಲ್ಲಿ ಹುಡುಗರು ಗಲಾಟೆ ಮಾಡುತ್ತಿರುವರು ಪ್ರಿನ್ಸಿಪಾಲರು ಕರೆಯುತ್ತಿರುವುರು.ಎಂದು.
ಇಲ್ಲಿ ಹುಡುಗರು ಪಾರುಗೋಳು , ಹುಡುಗಿಯರಿಗೆ ಪಾರಿ ಎನ್ನುವರು. ಪೋರ ಮತ್ತು ಪೋರಿಯ ಶಬ್ದಗಳ ಗ್ರಾಮ್ಯವಾಗಿ ಪಾರ ,ಪಾರಿ ಆಗಿವೆ.
ಒಂದುಸಲ ನನ್ನ ಹೆಂಡತಿಗೆ ,ಅಕ್ಕೋರೆ  “ ಸಂಜಿಮುಂದ ತಟ್ಟಿ ಮುಂದ ಮಾಡ್ರಿ ಇಚಾಬತ್ ಬರ್ತಾವ ಎಂದರೆ  “,ನನ್ನ ಹೆಂಡತಿ ಪಿಳಿಪಿಳಿ ನೋಡುತ್ತಾ ನಿಂತಿದ್ದಳು.
ಹೋದ ಹೊಸದರಲ್ಲಿ ನೆರೆ ಮನೆಯವರು, ಅಕ್ಕೋರೆ ರಜಗಿಲ್ಲು ಬಳಸೋ ಮುಂದ ಮದುವಿ ಮಾಡಬೇಕರಿ ಎಂದರೆ , ರಜಗಿಲ್ಲು ಯಾರು ಗಂಡೋ,  ಹೆಣ್ಣೋ ? ಅದಕ್ಕೆ ಸಂಗಾತಿ ಹುಡುಕಿ ಮದುವೆ ಮಾಡುವುದು ಎಂದರೆ ಹುಡುಗಾಟದ ಮಾತೆ  ? ಎಲ್ಲ ಅಯೋ ಮಯವೆನಿಸಿತು .
ನಂತರ ಇನ್ನೊಬ್ಬರಿಂದ ತಿಳಿಯಿತು. ರಜಗಿಲ್ಲು ಎಂದರೆ ಕಸಬರಿಕೆ ಹೊಸ ಬಾರಿಗೆಯ ಹಂಚಿ ಕಡ್ಡಿಗಳ  ಚುಚ್ಚುವ ತುದಿಗಳನ್ನು ತುಸುವೆ ಸುಡುವುದಕ್ಕೆ ಅವರು ಮದವಿ ಮಾಡುವುದು ಎನ್ನುವರು..
ಬಾಜೂ ಮನೆಗೆ ಹೋದಾಗ ಕಲ್ಲಿ ಯಾಕ ನಿಂತೀರಿ ಕಿಲ್ಲಿ ಕೂಡ  ಬರ್ರಿ ,ಎಂದಾಗ ಕಲ್ಲಿನಂತೆ ನಿಂತಳು ನನ್ನ ಮಡದಿ.ಕಲಬುರ್ಗಿಯ ಭಾಷೆಯ ಸೊಗಡು ಅವಳಿಗೆ ತಿಳಿಯಲೆ ಇಲ್ಲ.  ಇಲ್ಲಿ ಎಂಬುದಕ್ಕೆ ಅವರು  ಕಿಲ್ಲಿ ಮತ್ತು ಅಲ್ಲಿ ಎನ್ನಲು ಕಲ್ಲಿ ಎನ್ನುವರು
ಕನ್ನಡವನ್ನೆ ಮಾತನಾಡಿದರೂ  ಅನೇಕ ಸಲ ನಾವು ಕಕ್ಕಾವಿಕ್ಕಿಯಾಗಲು ಅವರು  ಬಳಸುತಿದ್ದ ಪ್ರಾದೇಶಿಕ  ಭಾಷೆ. ಜತೆಗೆ ಮರಾಠಿ ಮತ್ತು ಹಿಂದಿ ಪದಗಳ ಬಳಕೆ ಕಾರಣ ವಾಗುತಿದ್ದವು.ನೃಪ ತುಂಗನ ನಾಡಿನ ಕನ್ನಡದ ಪರಿಚಯ ಕಲಬುರ್ಗಿಯಲ್ಲಿ ನಮಗಾಯಿತು.  ಜತೆಗೆ ಹೈದ್ರಾಬಾದ್‌  ಕರ್ನಾಟಕ ಪ್ರದೇಶದ ಶೈಕ್ಷಣಿಕ  ಪರಿಸ್ಥಿತಿಯ ಪರಿಚಯವೂ ಆಗ ಹತ್ತಿತು.


ನಮಸ್ಕಾರ ನನಗಲ್ಲ !



ಹುಡುಗನಾಗಿದ್ದಾಗ ಹಳ್ಳಿಯಿಂದ ಐದು ಮೈಲು ದೂರದ  ಶಾಲೆಗೆನಡೆದು  ಹೋಗಿ ಬರುವುದೆ ವಾಯು ವಿಹಾರವಾಗಿತ್ತು. ಈ ಗಾಳಿ ಸಂಚಾರವು ಜೀವನದುದ್ದಕ್ಕೂ ಬಲವಾದ ಗೀಳಾಯಿತು. ಒಂಟಿಯಾಗಿರುವಾಗ ಹೊರಗೆ  ತಿರುಗುವನು, ಜಂಟಿಯಾದಮೇಲೆ ಕೋಣೆ ಶಂಕರನಾಗುವನು ಎಂದುಕೊಂಡು ಮನೆಯಲ್ಲಿ. ಸುಮ್ಮನಿದ್ದರು ಮದುವೆಯಾದ ಮೇಲೆ ಇಬ್ಬರೂ ಹೋಗ ತೊಡಗಿದೆವು. ನಾನು ಉಪನ್ಯಾಸಕನಾಗಿ ಹೋದ ಎಲ್ಲ ಕಡೆ ನಮ್ಮಿಬ್ಬರ ಓಡಾಟ ಜನರ ಕಣ್ಣುಕುಕ್ಕುತಿತ್ತು . ಬಳ್ಳಾರಿ ಜಲ್ಲೆಯ ಕಾಲೇಜೊಂದಕ್ಕೆ ವರ್ಗ ವಾದ ಮೆಲೂ ಅಭ್ಯಾಸ ಮುಂದುವರಿಯಿತು. ಮನೆಯೂ ಕಾಲೇಜಿಗೆ ಹತ್ತಿರ. ಕಾಲೇಜು ಊರ ಹೊರಗೆ.ಹಾಗಾಗಿ ಏನೆ ಸಾಮಾನು ಬೇಕಾದರೂ ಇಬ್ಬರೂ ಜೊತೆಯಾಗೆ ಹೋಗಿತರುತಿದ್ದವು. ನಮ್ಮ ಪಾಡಿಗೆ ನಾವು ಹೋಗಿ ಬರುತಿದ್ದೆವು  ಯಾವಾಗಲಾದರೂ ಒಮ್ಮೆ ಶಿಷ್ಯರು ಸಿಕ್ಕರೆ ನಮಸ್ಕಾರ ದೊರೆಯುತಿತ್ತು ಬಹುತೇಕ ವಿದ್ಯಾರ್ಥಿಗಳು  ಹಳ್ಳಿಯವರು . ಹಾಗಾಗಿ ನಮಸ್ಕಾರದ  ಚಮತ್ಕಾರ ಅವರಿಗೆ ಒಗ್ಗಿರಲಿಲ್ಲ.
 ಅಲ್ಲಿಗೆ ಹೋಗಿ  ಒಂದು ವರ್ಷದ ಮೇಲೆ. ನನ್ನ ಮಡದಿಗೆ ಬಹಳ ಅಚ್ಚರಿಕಾದಿತ್ತು.. ಊರಿನ ಬೀದಿಯಲ್ಲಿ ಹೋಗುವಾಗ  ನಮಸ್ಕಾರದ ಪ್ರಮಾಣ ಏಕದಂ ಹೆಚ್ಚಾಯಿತು. ಅದೂ  ಜತೆಗೆ  ನಿಂತು ಮಾತು ಕಥೆ ಬೇರೆ!. .
ಇದೇನು ಒಮ್ಮಿಂದೊಮ್ಮೆಲೆ  ಜನಪ್ರಿಯರಾಗಿರುವರಿ. ಹಾದಿಯುದ್ದಕ್ಕೂ ನಮಸ್ಕಾರಗಳು, ಎಂದು ಕಿಚಾಯಿಸಿದಳು.
ಈ ನಮಸ್ಕಾರ ನನಗಲ್ಲ. ಎಂದು ನಗುತ್ತಾ ಉತ್ತರಿಸಿದೆ.
ನಿಮಗಲ್ಲದಿದ್ದರೆ ,  ನನಗೆ ಹೇಳುವರೆ.? ಜತೆಗೆ ಉಭಯ ಕುಶಲೋಪರಿ  ಬೇರೆ, ಎಂದು ಕುಟುಕಿದಳು
ಇಲ್ಲ ಆ  ನಮಸ್ಕಾರ  ನನಗಲ್ಲ,  ಅದು ಸಲ್ಲ ಬೇಕಾದುದು ಸಕ್ಕರೆಗೆ !! , ಎಂದಾಗ ಅವಳು ಕಣ್ಣು ಕಣ್ಣು  ಬಿಟ್ಟಳು.
ಕಳೆದ ಶತಮಾನದ ಎಪ್ಪತ್ತರ ದಶಕದ ಮಾತು. ಆಗ ಸಕ್ಕರೆ ಬಹು ಜನರ ಪಾಲಿಗೆ ಕಹಿ.ಪೂರ್ತಿ ಸರ್ಕಾರಿ ನಿಯಂತ್ರಣ. ತಿಂಗಳಿಗೊಮ್ಮೆ ಸಹಕಾರ ಸಂಘಗಳ ಮೂಲಕ ಮೂರು- ನಾಲಕ್ಕು  ಕೆಜಿ ಮಾತ್ರ ಹಂಚುವರು.. ಸಹಕಾರ ಸಂಘದಲ್ಲಿ ಸಾರ್ವನಿಕರ ಸರತಿಯಲ್ಲಿ ನಿಂತು ಸಕ್ಕರೆ ತರಬೇಕು.  ಸಕ್ಕರೆ ಯಾವಾಗ ಬರುವುದೋ ಯಾರಿಗೂ ಗೊತ್ತಿಲ್ಲ. ಕೊಡುವ ಸಮಯವಂತೂ ದೇವರಿಗೇ ಗೊತ್ತು. ಬಕ ಪಕ್ಷಿಯಂತೆ ಕಾದು ತರಬೇಕಿತ್ತು ಅಕಸ್ಮಾತ್ ಕೊಡುವ ಸಮಯದಲ್ಲಿ ಹೋಗದಿದ್ದರೆ ಸ್ಟಾಕ್‌ಮುಗಿಯಿತು , ಎಂದು ಕೈಯಾಡಿಸುವರು. ಕಾಳ ಸಂತೆಯಲ್ಲಿ ಸಕ್ಕರೆ ಕೊಂಡು ಮಾಡಿದ ಕಾಫಿ ಬಹು ಕಹಿ ಎನಿಸುತಿತ್ತು ಅದಲ್ಲದೆ ಈ ರೀತಿ ಅಂಡಲೆದು ಸಕ್ಕರೆ ಪಡೆಯುವುದು ಸರ್ಕಾರಿ ನೌಕರರ ಮರ್ಯಾದೆಗೆ ಕುಂದು ಎನಿಸಿತು . ಹೇಗಿದ್ದರೂ ಸರ್ಕಾರಿ ನೌಕರರ ಸಂಘ ವಿತ್ತು. ಅದರ ಮೂಲಕ ಸರ್ಕಾರಿ ನೌಕರರಿಗೆ ಏಕೆ ಸಕ್ಕರೆ ವಿತರಿಸಬಾರದು ಎಂಬ ಯೋಚನೆ ಬಂತು. ಹೆಚ್ಚಿನ ಸಂಖ್ಯೆಯಲ್ಲಿದ್ದ ಸರ್ಕಾರಿ ನೌಕರರೆಂದರೆ ಶಿಕ್ಷಕರು ಮತ್ತು ಪೋಲಿಸರು. ಅದರಲ್ಲೂ ನಮ್ಮ ಕಾಲೇಜಿನಲ್ಲಿ ಮೂವತ್ತಕ್ಕೂ ಹೆಚ್ಚು ಜನ ಅದರಲ್ಲಿ ೧೦ ಜನ ಪತ್ರಾಂಕಿತ ಅಧಿಕಾರಿಗಳು, ನಾವೆ ಈ ವಿಷಯದಲ್ಲಿ  ಒಂದು ಸಭೆ ಕರೆದೆವು. ಅಲ್ಲಿ ವಿವಿಧ ಇಲಾಖೆಗಳಿಂದ ಆಯ್ದ ಒಂಬತ್ತು ಪ್ರತಿ ನಿಧಿಗಳ ಸಮಿತಿ ರಚನೆಯಾಯಿತು, ಕಾರ್ಯದರ್ಶಿಯಾಗಿ ಆಯ್ಕೆ ಮಾಡಿ ಈ ಹೊಸ ಹೊಣೆ ನನಗೆ ವಹಿಸಿದರು. ನನಗೂ ಇನ್ನೂ ಹುಮ್ಮಸ್ಸು. ಜತೆಗೆ ಗೆಳೆಯರ ಒತ್ತಾಸೆ.ಸರಿ ಗುಂಪಾಗಿ ತಹಶಿಲ್ದಾರರನ್ನು ಭೇಟಿಯಾಗಿ ವಿಷಯ ನಿವೇದನೆ ಮಾಡಿದೆವು ಸುಮಾರು ಎರಡು ನೂರಕ್ಕು ಹೆಚ್ಚಿನ ಸರ್ಕಾರಿನೌಕರರಿದ್ದಾರೆ. ಅವರ ಹಿತ ದೃಷ್ಟಿಯಿಂದ ಸರ್ಕಾರಿನಿಯಂತ್ರಣದ ವಸ್ತುಗಳ ವಿತರಣೆಯನ್ನು ಸಂಘಕ್ಕೆ ವಹಿಸಲು ಕೋರಿದೆವು.ಹೇಗೂ ಸರ್ಕಾರಿ ನೌಕರರ ಕ್ಲಬ್‌ ಕಟ್ಟಡ ತಾಲೂಕು  ಆಫೀಸಿನ ಆವರಣದಲ್ಲೆ ಇದ್ದಿತು. ಅದರ ಮುಂಭಾಗದಲ್ಲಿ ದಿನಾಸಂಜೆ ಕಾಲಕ್ಷೇಪಕ್ಕಾಗಿ ಕ್ಲಬ್ಬಿನ ಚಟುವಟಿಕೆ .ಚೆಸ್‌, ಷಟಲ್‌ಕಾಕ್‌  ಮತ್ತು ಕೇರಂ ಹೆಸರಿಗೆ ಮಾತ್ರ. . ನಡೆಯುತ್ತಿದ್ದುದು ೧೩ ಪುಟದ ಪುಸ್ತಕದ ಪಠನೆ. ಎಲ್ಲಾ ಇಲಾಖೆಯವರೂ ಅದರಲ್ಲಿ ಭಾಗಿ ಹಾಗಾಗಿ ಸಂಜೆ ಐದರಿಂದ ಒಂತ್ತರವರೆಗೆ  ಅದು ಜನ ಭರಿತ.ಅದರ ಹಿಂಭಾಗದಲ್ಲಿದ್ದ ಎರಡು ಚಿಕ್ಕಕೋಣೆಗಳನ್ನು ಸಕ್ಕರೆವಿತರಣೆ ಗೆ ಬಳಸಬಹುದೆಂದು ತೀರ್ಮಾನಿಸಲಾಯಿತು
ತಹಶಿಲ್ದಾರರು ಈ ವ್ಯವಸ್ಥೆಗೆ ಒಪ್ಪಿದರು. ಸರಿ ಸುಮಾರು ೮-೧೦  ಚೀಲ ಸಕ್ಕರೆಯನ್ನು ಸಂಘದ ಹೆಸರಿಗೆ ಅಲಾಟಮೆಂಟ್‌ ಕೊಡುವರು. ಅದನ್ನು ಹತ್ತಿರದ ಹೋಬಳಿಯ ಎಪಿಎಂಸಿ ಯಿಂದ ತಂದು ಹಂಚ ಬೇಕು. ನಾವಿರುವುದು ತಾಲೂಕು ಕೇಂದ್ರವಾದರೂ ಹತ್ತಿರದ ಹೋಬಳಿ ದೊಡ್ಡದಾಗಿತ್ತು ಮತ್ತು ಅಲ್ಲಿಯೆ  ಸಕ್ಕರೆ ತರಬೇಕಿತ್ತು. ಅಂದರೆ ಲಾರಿಯಲ್ಲಿ ಸಾಗಣಿಕೆ ಮಾಡಿ ತರಬೇಕಿತ್ತು.
ಮೊದಲ ಸಲಕ್ಕೆ ಒಂದು ಸಮಸ್ಯೆ ಧುತ್ತೆಂದು ಎದುರಾಯಿತು. ಎಂಟು  ಕ್ವಿಂಟಲ್‌ ಸಕ್ಕರೆಗೆ ಅನುಮತಿ ಚೀಟಿ ಬಂದಿತು ಆದರೆ  ಸಂಘದಲ್ಲಿ ಹಣವೆ ಇಲ್ಲ. ಸುಮಾರು ನಾಲಕ್ಕು ಸಾವಿರ ರೂಪಾಯಿ ಬೇಕು. ಆಗ ನನ್ನ ಸಂಬಳ ಮೂರು ನೂರನ್ನೂ ದಾಟಿರಲಿಲ್ಲ. ಬಹುತೇಕರು ಕುಚೇಲನ ಸಂಬಂಧಿಗಳೆ.  ಅಳೆದೂ ಸುರಿದು ಕೊನೆಗೆ ವಾರದ ಮಟ್ಟಿಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲಪಡೆದು ಮಾಲು ತುರುವುದು ನಂತರ  ಸಕ್ಕರೆ ಮಾರಿದ ಮೇಲೆ ಹಣ ಸಂದಾಯ ಮಾಡಲು ವ್ಯವಸ್ಥೆಯಾಯಿತು.ನಾವೆಲ್ಲ ಹೋಗುತಿದ್ದ ಹೋಟೇಲ್‌ ಮಾಲಕರು ಹಣ ನೀಡಲು ಒಪ್ಪಿದರು
ಮೂಲ ಬೆಲೆಯ ಮೇಲೆ ಕೆಜಿಗೆ ನಾಲ್ಕಾಣೆ ಹೆಚ್ಚುವರಿಯಾಗಿ ದರ ನಿಗದಿ ಮಾಡಿದರೆ ಒಂದು ಚೀಲಕ್ಕೆ ೨೫ ರುಪಾಯಿ ಉಳಿಯುವುದು ಅದರಲ್ಲಿ ಲಾರಿ ಬಾಡಿಗೆ ಮತ್ತು ಹಮಾಲಿ  ಖರ್ಚು ಆಗುವುದು ಎನಿಸಿತು.
ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಶರ್ಮ ಮತ್ತು ಸೆಟ್ಟರು ಸಂಜೆ ಮೂರುದಿನ ಮೂರುತಾಸು ಉಚಿತ ಸೇವೆಗೆ ಮುಂದೆ ಬಂದರು.
ಮೊದಲ ಅಲಾಟ್‌ಮೆಂಟ್‌ ಬಂದಾಗ ಸಮಸ್ಯೆಯ ಆಳದ ಅರಿವಾಯಿತು. ೨೫  ಕಿಲೋ ಮೀಟರ್‌ ದೂರದ ದಿಂದ ಸಕ್ಕರೆ ಸಾಗಿಸಿ ತರಬೇಕು . ಹೋಗುವರು ಯಾರು ಅರ್ಧ ದಿನವಾದರೂ ಬೇಕು. ಕೆಲಸದ ಗತಿ!  ರಜೆ ಹಾಕಲೇ ಬೇಕಾಯಿತು..ಅಲ್ಲಿ ಹೋದ ಮೇಲೆ ಸಕ್ಕರೆ ಪಡೆದೆವು. ಸಾಗಣಿಕೆ? ಒಂಬತ್ತು ಚೀಲಕ್ಕೆ ಯಾವ ಲಾರಿ ಬರುವುದು. ನಂತರ ವಿಚಾರಿಸಿದಾಗ ಅಲ್ಲಿಂದ ನಮ್ಮಲ್ಲಿಗೆ ಮಾಲು ತರುವ ಲಾರಿಗಳಿಗೆ ಕಾದು ಅದರಲ್ಲಿ ತಂದರೆ ತುಸು ಸೋವಿ ಬೀಳುವುದು ಗೊತ್ತಾಯಿತು.ಕೃಷಿ ಮಾರು ಕಟ್ಟೆಯ ಗುದಾಮದಿಂದ ಹೊರತರಲು ಹಮಾಲಿ, ಅಲ್ಲಿಂದ ಲಾರಿಗೆ ಏರಿಸಲು ನಂತರ ಲಾರಿಯಿಂದ ನಮ್ಮ ಜಾಗದಲ್ಲಿ ಇಳಿಸಲು ಮಜೂರಿ  ತೆರ ಬೇಕಾಯಿತು.ಚೀಲಕ್ಕೆ ಎರಡು ರೂಪಾಯಿ ಅಲ್ಲಿಯೆ ಆರು ರೂಪಾಯಿ ಛಟ್‌. ಜತೆಗೆ ಲಾರಿ ಬಾಡಿಗೆ ಬೇರೆ. ಹೋಗಿ ಬರಲು ಬಸ್‌ ಛಾರ್ಜು ಊಟ ತಿಂಡಿ ವೆಚ್ಚ. ಚೀಲಕ್ಕೆ ಹದಿನೈದು ರೂಪಾಯಿ ಹೋಯಿತು
ಸಕ್ಕರೆ ಬಂದ ಮಾರನೆ ದಿನ  ಮುಂಜಾನೆಯೇ ಎಲ್ಲ ಕಚೇರಿಗಳಿಗೆ ಮೂರುದಿನಗಳ ಕಾಲ ಸಂಜೆ ಆರರಿಂದ ಎಂಟರವರೆಗೆ ಸಕ್ಕರೆ ಹಂಚುವುದಾಗಿ ಸುತ್ತೋಲೆ ಹೋಯಿತು.
ಸಂಜೆ ಮೂವರೂ ಕುಳಿತೆವು . ಹೇಗಿದ್ದರೂ ಎಲ್ಲ ಕಚೇರಿಗಳಿಂದ ಬಂದ ಸಿಬ್ಬಂದಿಯ ಪಟ್ಟಿ ನಮ್ಮಲ್ಲಿತ್ತು ಅದನ್ನು ನೋಡಿ ಒಬ್ಬರು ಹಣ ತೆಗೆದುಕೊಂಡು ಕಿಟಕಿಯ ಮೂಲಕ  ಅವರಿಗೆ ಚೀಟಿ ಕೊಡುವರು. ಇನ್ನೊಬ್ಬರು ಬಾಗಿಲಲ್ಲೆ ಚೀಟಿ ಪಡೆದು ಸಕ್ಕರೆ ತೂಗಿ ಕೊಡುವರು.. ನಮಗೆಲ್ಲರಿಗೂ ಮೊದಲ ಮಗು ಹುಟ್ಟಿದಾಗ ಸಕ್ಕರೆ ಹಂಚಿದಷ್ಟೆ ಖುಷಿಯಾಯಿತು ಮೊದಲ ದಿನವೆ ನಾಲಕ್ಕು ಚೀಲ ಖಾಲಿಯಾಯಿತು. . ಲೆಕ್ಕ ಹಾಕಿದಾಗ ನಮಗೆ ೧೦ ಕೆಜಿ ಹಣ ಕಡಿಮೆ ಬಂದಿತ್ತು ಅಂದರೆ ತೂಕದಲ್ಲಿ ಹೆಚ್ಚು ಕಡಿಮೆ ಯಾಗಿತ್ತು
ಮುಂದಿನ ಎರಡು ದಿನ ಎಚ್ಚರಿಕೆಯಿಂದ ತೂಗಿದರು. ಆದರೂ ಚೀಲಕ್ಕೆ ಒಂದು ಒಂದೂವರೆ ಕೆಜಿ ಸಕ್ಕರೆ ಕೊರತೆ ಬಂದೇ ಬರುತಿತ್ತು
ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಜೊತೆಗೆ ಇಪ್ಪತ್ತು ಕೆಜಿ ಸಕ್ಕರೆ ಮಿಕ್ಕಿದ ಸಕ್ಕರೆ ಸೇರಿಸಿದರೆ. ಅಂತೂ ಹಾಕಿದ್ದ ಹಣ ಹಿಂದೆ ಬಂತು
 ನಾಲಕ್ಕನೆ ದಿನ ಹೋಟೇಲ್‌ ಮಾಲಕನಿಗೆ ಅವರ ಹಣ ಹಿಂತಿರುಗಿಸಿದೆವು.
ಅಂತೂ ಇಂತೂ ನಮ್ಮಸರ್ಕಾರಿ ನೌಕರರಿಗೆ ಸೊಸೈಟಿಯ ಮುಂದೆ ಸರತಿಯಲ್ಲಿನಿಂತು ಕಾಯುವುದುರಿಂದ ಮುಕ್ತಿ ದೊರೆಯಿತು.ಮುಂದಿನ ತಿಂಗಳೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆವು. ಅಲಾಟ್‌ ಮೆಂಟ್‌ ಪತ್ರ ಪಡೆಯುವುದು. ಅದನ್ನು ಹಿಡಿದು ಹೋಗಿ ಸಕ್ಕರೆ ಚೀಲಗಳನ್ನು ಸಾಗಿಸಿ ತರುವುದು ನಂತರ ಎಲ್ಲ ಕಚೇರಿಗಳಿಗೂ ಸುತ್ತೋಲೆ  ತೋರಿಸುವ ಕೆಲಸಕ್ಕೆ ಒಬ್ಬ ಸಹಾಯಕ ಅತ್ಯಗತ್ಯವೆನೆನಿಸಿತು.ನೂರು ರೂಪಾಯಿ ಅದಕ್ಕೆ ಬೇಕಾಗುವುದು. ಕೊನೆಗೆ ಯೋಚನೆ ಮಾಡಿ ಬಡ ವಿದ್ಯಾರ್ಥಿಯೊಬ್ಬನ ಸಹಾಯ ಪಡೆದು ಅವನಿಗೆ  ಹಣ ಕೊಡಲು ತೀರ್ಮಾನಿಸಿದೆವು.
 ಮುಂದಿನ ತಿಂಗಳು ಯಥಾರೀತಿ ಹೋಟೆಲ್‌ಮಾಲಕರ ಹತ್ತಿರ ಹಣ ಪಡೆದೆವು. ಈಸಲ ಅವರು ತಮಗೆ ಇಪ್ಪತ್ತೈದು ಕೆಜಿ ಸಕ್ಕರೆ ಕೊಡಲು ವಿನಂತಿಸಿದರು.ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡೆವು. ಅವರಿಗೆ ಸಕ್ಕರೆ ಕೊಟ್ಟರೆ ನಮ್ಮವರಿಗೆ ಕಡಿಮೆಯಾಗಬಹುದು. ಅಕಸ್ಮಾತ್‌ ಉಳಿದರೂ ಅದನ್ನು ಕೊಟ್ಟರೆ ಮಾರಿಕೊಂಡರು ಎಂಬ ಅಪವಾದ.ಕೊನೆಗೆ ಹಣದ ರೂಪದಲ್ಲಿ ಬಡ್ಡಿ ಕೊಟ್ಟರೂ ಸರಿ ನೌಕರಲ್ಲದವರಿಗೆ ಸಕ್ಕರೆ ಕೊಡಬಾರದು ಎಂದು ಸಮಿತಿ  ತೀರ್ಮಾನಿಸಿತು.
ಹೀಗೆ ಮೂರುತಿಂಗಳು ಸಕ್ಕರೆ ನೀಡುವಷ್ಟರಲ್ಲಿ ಪರಿಚಿತರು ಹೆಚ್ಚಿದರು..  ಏನಾದರೂ ಕಾರಣ ಹೇಳಿ ಹೆಚ್ಚು ಸಕ್ಕರೆ  ಕೇಳುವರು. ಮಿಕ್ಕಿದರೆ ಮೊದಲು  ಬಂದವರಿಗೆ ಕೊಡುತ್ತಿದ್ದೆವು.ಕಾರಣ ನಮಗೆ ನಗದು ಹಣ ಬೇಕಿತ್ತು ಆದರೆ ಇದರಿಂದ ಅಸಮಧಾನ ಹೊಗೆಯಾಡ ತೊಡಗಿತು. ನಾಲಕ್ಕು ಸಲ ಹೆಚ್ಚಿಗೆ ಪಡೆದಿದ್ದರೂ ಒಂದು ಸಲ ಕೊಡದಿದ್ದರೆ ಮುಖ ಗಂಟಾಗುತಿತ್ತು.ಜತೆಗೆ ಸಕ್ಕರೆ ಕೊರತೆ ಬೇರೆ. ಸಾಗಣಿಕೆ ಮಾಡುವಾಗಲೆ ಲಾರಿಯಲ್ಲೆ ಗುತ್ತಿ ಹಾಕಿಸಕ್ಕರೆ ಸೋರಿಸುವರೆಂಬ  ಮಾಹಿತಿ ಬಂತು. ಅದು ಹಮಾಲಿಗಳ ಕೆಲಸ. ಅನ್ನುವ ಹಾಗಿಲ್ಲ. ಅನುಭವಿಸುವ ಹಾಗಿಲ್ಲ.ಅನಿವಾರ್ಯವಾಗಿ  ಹೆಚ್ಚುವರಿ ಕೊಡುವುದನ್ನು ನಿಲ್ಲಿಸಲಾಯಿತು.   ಉಳಿದುದನ್ನು ಮುಂದಿನ ತಿಂಗಳು ಸಮನಾಗಿ ಹಂಚಲು ಮೊದಲು ಮಾಡಿದೆವು   ಇದರಿಂದ ಸಮಿತಿ ಸದಸ್ಯರ ಗೊಣ ಗಾಟ ಶುರುವಾಯಿತು.ಅವರ ಶಿಫಾರಸ್ಸಿನಮೇಲೆ ಐದು ಹತ್ತು ಕೆಜಿ ಕೊಡಿಸುವುದಕ್ಕೆ ಕತ್ತರಿ ಬಿತ್ತು.
ನೂರಾರು ಮನೆಗಳಲ್ಲಿ ಸಕ್ಕರೆ ದೊರೆಯುವಂತಾದುದು ಸಂತೋಷ ತಂದಿತು.ಇನ್ನೊಂದು ಬೆಳವಣಿಗೆಯೂ  ತೃಪ್ತಿ ತಂದಿತು.ಆಗ  ಬರಗಾಲ . ಧಾನ್ಯದ ಕೊರತೆ ತೀವ್ರವಾಗಿತ್ತು. ಸರ್ಕಾರ ಕೆಂಪು ಜೋಳವನ್ನು ಬಡ ಬಗ್ಗರ ಸಲುವಾಗಿ ಕಡಿತದ ದರದಲ್ಲಿ ಹಂಚಲು ಯೋಜನೆ ಹಾಕಿತು.ಪಿಎಲ್‌ ೪೮೦ ಯೋಜನೆಯ ಅಡಿಯಲ್ಲಿ ಅಮೇರಿಕಾದಿಂದ ಮಿಲೋ ಬಂದಿತು  ಧಾನ್ಯದ ಕೊರತೆ ಇರಲಿಲ್ಲ. ಆದರೆ ಹಂಚಿಕೆಯದೆ ಸಮಸ್ಯೆ. ಬರ ಪರಿಸ್ಥಿತಿ ತೀವ್ರವಾಗಿರುವುದರಿಂದ ಬಡ ಜನರಿಗೆ ರಿಯಾಯತಿ ದರದಲ್ಲಿ  ಕಾಳು ಮತ್ತು ಸೀರೆ  ಹಂಚ ಬೇಕಿತ್ತು.   ಕೆಂಪು ಜೋಳ  ಮಾರುಕಟ್ಟೆಯಲ್ಲಿಗಿಂತ ಅರ್ಧಕ್ಕೂಕಡಿಮೆ ಬೆಲೆಯಲ್ಲಿ.. ಮತ್ತು ಸೀರೆ ಬರಿ ಹತ್ತುರೂಪಾಯಿ ಚೌಕಳಿವಿನ್ಯಾಸ.. ಮೂರು ನಾಲಕ್ಕು ಬಣ್ಣದ. ಗಟ್ಟಿ ಮುಟ್ಟಾದ ಕಾಟನ್‌ ಸೀರೆಗಳು. ಇಂದಿರಾಗಾಂಧಿ ಸೀರೆ ಎಂದೆ ಹೆಸರಾಗಿದ್ದವು. ತಹಸಿಲ್ದಾರರು ಸಭೆ ಕರೆದು ಸಹಕರಿಸಲು ಕೋರಿದರು.ನಾವೂ ಒಪ್ಪಿದೆವು. ವಾರಕ್ಕೆ  ನಾಲಕ್ಕು ಕ್ವಿಂಟಾಲ್‌ ಮಿಲೋ ಮತ್ತು ೨೦ ಸೀರೆ  ಹಂಚಲು ನಿಗದಿಯಾಯಿತು..ನಿತ್ಯ ಅವನ್ನೂ ಹಂಚಲು ನಮ್ಮಲ್ಲಿ ಸಿಬ್ಬಂದಿ ಇಲ್ಲ. ಅದಕ್ಕೆ ವಾರದ ಸಂತೆಯ ದಿನ ಸಂತೆ ಮೈದಾನದಲ್ಲಿ  ನಮ್ಮ ಹುಡುಗನ ಸಹಾಯದಿಂದ ಮಾರಾಟ ಮಾಡಲು ನಿರ್ಧರಿಸಿದೆವು.ಜತೆಗೆ ಒಬ್ಬ ಕೆಲಸಗಾರನನ್ನೂ ನೇಮಿಸಿಕೊಂಡೆವು ಮಿಲೋ ಮಾರಾಟ ಸಬ್ಸಿಡಿ ದರದಲ್ಲಿ. ಯಾವುದೆ ಲಾಭ  ಪಡೆಯದೆ ಮಾರಿದ್ದರಿಂದ ಸಹಜವಾಗಿ ಜನ ಮುಕುರಿದರು..   ಸೀರೆಗಳು ಅಷ್ಟೆ ಬಿಸಿ ರೊಟ್ಟಿಯಂತೆ ಖರ್ಚಾದವು ನನ್ನ ಹೆಂಡತಿಗೂ ಎರಡು ಸೀರೆ ತಂದುಕೊಟ್ಟೆ. ಒಬ್ಬರಿಗೆ ಗರಿಷ್ಟ ಐದು ಕೆಜಿಕಾಳು ಒಂದೆ ಸೀರೆ ಎಂದು  ನಿಗದಿಯಾಗಿತ್ತು.. ಹತ್ತು  ಗಂಟೆಗೆ ಮಾರಾಟ ಮೊದಲಾಯಿತು. ೧೨ ಗಂಟೆಯ ಹೊತ್ತಿಗೆ  ಚೀಲ ಝಾಡಿಸ ಬೇಕಾಯಿತು. ನಾನು ಅರ್ಧ ದಿನ ರಜೆ ಹಾಕಿ ಪ್ರಾಂಶುಪಾಲರ ಅನುಮತಿ ಪಡೆದು ಸಂತೆಯಲ್ಲಿಯೆ ನಿಂತೆ. ಕಾಳಿಗಾಗಿ ಕಿತ್ತಾಡುವ ಜನರನ್ನು ಕಂಡು ಕಳವಳವಾಯಿತು. ಹಳ್ಳಿಯ ಜನ ಸಂತೆಗ ಬಂದವರು ಚೀಲವಿಲ್ಲ ಎಂದು  ಸೀರೆಯ ಸೆರಗಿನಲ್ಲಿ , ಗಂಡಸರು ಟವಲಿನಲ್ಲಿ ೩-೪ ಕೆಜಿ ಕೆಂಪುಜೋಳ ಹಾಕಿಸಿ ಕೊಂಡು ಹೋಗುವುದು ಕಂಡ ಕರುಳು ಕಿತ್ತು ಬರುತಿತ್ತು . ನನ್ನ ಈ ನಡೆ ಕೆಲವರ ನಗೆಗೆ ಈಡಾಯಿತು.ನನಗೆ ನಾಚಿಕೆಯ ಕೆಲಸ  ಅನಿಸಲಿಲ್ಲ. ನನಗೆ ಕೈಲಾದಷ್ಟು ಬಡವರಿಗೆ ಸಹಾಯಮಾಡಿದ . ತೃಪ್ತಿ ದಕ್ಕಿತು.  ಸುಮಾರು ಎರಡು ತಿಂಗಳು ಸಂತೆಯಲ್ಲಿ ಸೀರೆ ಮತ್ತು ಮಿಲೋ ಮಾರಾಟ  ಸಾಗಿತು. ಸಕ್ಕರೆಯ ಹಂಚಿಕೆ ಕೆಲಸ  ಒಂದುವರೆ ವರ್ಷದ ಮೇಲೆ ನಡೆಯಿತು. ಅದರ ಜೊತೆ ಅಸಮಧಾನವೂ ಹೆಚ್ಚ ತೊಡಗಿತು. ಹಣಕಾಸಿನ ಬಗ್ಗೆ  ದೂರು ನೀಡುವ ಹಾಗಿರಲಿಲ್ಲ. ಕಾರಣ ನಮ್ಮಲ್ಲಿ ಹಣವೆ ಇರಲಿಲ್ಲ. ಕಾಳ ಸಂತೆಯಲ್ಲಿ ಸಕ್ಕರೆ ಮಾರುತ್ತಿರಲಿಲ್ಲ. ಸರ್ವರೂ ಸಮಾನ ಎಂದು ಪರಿಗಣಿಸಿದ್ದ ನಾನು ಕೆಲವರು ಹೆಚ್ಚು ಸಮಾನ ಎಂಬ ವಿವೇಚನೆ ಹೊಂದಿರಲಿಲ್ಲ. ಒಂದು ರೀತಿಯ ಏಕಮುಖ ರುದ್ರಾಕ್ಷಿ ತರಹ ನನ್ನ ನಡೆ.. ಒಳ್ಳೆಯ ಕೆಲಸ ಮಾಡುತ್ತಿರುವೆ ಎಂಬ ಹೆಮ್ಮೆ ಬೇರೆ. ಪ್ರಾಮಾಣಿಕರು ಯಾರಿಗೂ ಅಂಜ ಬೇಕಿಲ್ಲ ಎಂಬ ಹುಂಬತನ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರೀತಿ , ಸಂಘದಲ್ಲಿ ಸದಸ್ಯರ ವಿಶ್ವಾಸ ಇದೆ.  ಇನ್ನು ಏನು ಬೇಕು ಎಂದುಕೊಂಡಿದ್ದೆ.ಸಾರ್ವಜನಿಕ ರಂಗದಲ್ಲಿ ಪದಾಧಿಕಾರಿಗಳಿಗೆ ವ್ಯವಹಾರಿಕತೆ ಇರಬೇಕು ಎಂಬ ಪರಿಜ್ಞಾನ ಆಗ ಇರಲಿಲ್ಲ. ಮುಂದೆಯೂ ಬರಲಿಲ್ಲ. ಜನರ ವಿಶ್ವಾಸ ಹೆಚ್ಚತೊಡಗಿತು.ನೌಕರ ಸಂಘಟನೆ ಬಲವಾಯಿತು. ವೇತನ ಆಯೋಗದ ಬೇಡಿಕೆ ಇಟ್ಟು ಮಾಡಿದ ಚಳುವಳಿ ನಮ್ಮಲ್ಲೂ ಯಶಗಳಿಸಿತು.ಅದನ್ನೆ ನನ್ನ  ಜನಪ್ರಿಯತೆ  ಎಂದುಕೊಂಡು ಕರುಬಿದವರು ಹಲವರು.ನಮ್ಮ ಹೈಸ್ಕೂಲು ವಿಭಾಗದಲ್ಲಿ ಒಬ್ಬ ಶಿಕ್ಷಕರಿಗೆ ರೂಲ್‌೩೨ ಮೇಲೆ ಇಂಗ್ಲಿಷ್‌ ಉಪನ್ಯಾಸಕರೆಂದು ಬಡ್ತಿಯ ಮೇಲೆ ಗುಲ್ಬರ್ಗ ಜಿಲ್ಲೆಗೆ ವರ್ಗವಾಯಿತು.ನನ್ನಬಗ್ಗೆ ಅಸಮಧಾನವಿದ್ದವರು ನನ್ನ ಜಾಗಕ್ಕೆ ಬರಲು ಅವರನ್ನು  ಪುಸಲಾಯಿಸಿದರು. ಹಿಂದೆ ಸಕ್ಕರೆ ಹಂಚುತಿದ್ದ ಸಹಕಾರಿ ಸಂಘಗಳ ಧುರೀಣರೂ ತಮಗಾದ ನಷ್ಟಕ್ಕೆ ಕುದಿಯುತಿದ್ದರು. ಅವರೂ ಕೈ ಜೋಡಿಸಿದರು. ಇವರ ಹಣ ಮತ್ತು ಅವರ ಪ್ರಭಾವ ಜೊತೆಗೂಡಿದವು.. ಈ ವಿಷಯ ನಮ್ಮನೌಕರ ಸಂಘದ  ಜಿಲ್ಲಾಧ್ಯಕ್ಷರ ಗಮನಕ್ಕೆ ಬಂತು.  ಸರ್ಕಾರಿ ನೌಕರರ  ಸಂಘದ ಪದಾಧಿಕಾರಿಗಳನ್ನು ಮೂರುವರ್ಷ ವರ್ಗ ಮಾಡಬಾರದೆಂಬ ನಿಯಮವಿದೆ.. ಅದನ್ನು ಎನ್‌ಜಿಒ  ರಾಜ್ಯ ಅಧ್ಯಕ್ಷರಾದ ಕೇಶವ ಮೂರ್ತಿಯವರು   ಇಲಾಖೆಯ ಗಮನಕ್ಕೆ ತಂದರು.. ಆದರೆ  ಆ  ಮನವಿ ಪತ್ರದ ಮೇಲೆ ನಾನು ಭಾರ ಇಡಲಿಲ್ಲ. ಅದು  ಗಾಳಿಗೆ ಹೋಯಿತು. ಹಣದ ಮುಂದೆ ನಿಯಮ ನಿಲ್ಲಲಿಲ್ಲ. ನನ್ನ ಗೆಳೆಯ  ವರ್ಗಾವಣೆ ಆದೇಶ ರಾತ್ರಾನುರಾತ್ರಿ  ತಂದು ದಸರೆಯ ರಜೆ ಪ್ರಾರಂಭ ವಾಗುವ ಕೊನೆಯದಿನ ಬೆಳಗ್ಗೆಯೆ ಹಾಜರಾದ. ನನಗೆ ತಕ್ಷಣ ಬಿಡುಗಡೆ ಮಾಡಿದರು. ವಿದ್ಯಾರ್ಥಿಗಳು ಮುಷ್ಕರ ಹೂಡಿದರು ಆದರೆ ಮಾರನೆ ದಿನದಿಂದ ೧೫ ದಿನ ದಸರೆ ರಜೆ., ಸರಕಾರಿ ನೌಕರರು ಸಾಂಕೇತಿಕವಾಗಿ ಪ್ರತಿಭಟಿಸಿದರು.ಅದೆಲ್ಲ ನನಗಂತೂ ಅನಗತ್ಯ ಎನಿಸಿತು .ಸ್ವಂತ ಊರು ಬಿಟ್ಟು ಬಂದ ಮೇಲೆ ಎಲ್ಲಿದ್ದರೆ ಅದೆ ನಮ್ಮ ಊರು ಎಂಬ ತತ್ವ ನನ್ನದು . ಕೊನೆಯ ಬಾರಿಗೆ ಎಲ್ಲರಿಗೂ ಸಕ್ಕರೆ ಹಂಚಿ ಗುಲ್ಬರ್ಗಕ್ಕೆ ಹೋಗಿ ವರದಿ ಮಾಡಿಕೊಂಡೆ.  ಆ ಸಲ ಸಕ್ಕರೆ ಅನೇಕರಿಗೆ ಅಷ್ಟು ಸಿಹಿ ಅನಿಸಲಿಲ್ಲ. ಆದರೆ ನಾನು ಸಕ್ಕರೆಗಿಂತಲೂ ಸಿಹಿಯಾದ ನೆನಪು ಹೊತ್ತು ಹೊಸ ಊರಿಗೆ ಹೊರಟೆ.ಹೊಸ ಜಾಗದಲ್ಲಿ ಹಲವಾರು ವರ್ಷ ನನ್ನ ಹೆಂಡತಿ ಇಂದಿರಾಗಾಂಧಿ ಸೀರೆ ಉಟ್ಟಾಗಲೆಲ್ಲ ಹಳೆಯ ನೆನಪು ಬರುತಿತ್ತು. ಆ ಸೀರೆಗಳು ಐದಾರು ವರ್ಷ  ಬಾಳಿಕೆ ಬಂದವು ನಂತರವೂ  ಕೌದಿ ಹೊಲೆಯಲು ಬಳಕೆಯಾದವು.


ಶಿಕ್ಷಣವೆಂಬ ಮಲ್ಲಿಗೆ ಶಿಕ್ಷಣವೆಂಬ ಹಿಟ್ಟು

http://kendasampige.com/images/trans.gif
http://kendasampige.com/images/trans.gif
ನರಸಿಂಹರಾಜ ಪುರದಲ್ಲಿ ವರದಿ ಮಾಡಿಕೊಂಡ ತಿಂಗಳೊಪ್ಪತ್ತಿನಲ್ಲೆ ಮನೆ ಮಾಡಿದೆ. ಬಹುತೇಕರು ಪರಕೀಯ ವಾತಾವರಣದೊಳಗೆ ಹೆಂಡತಿ ಮಕ್ಕಳು ಕಷ್ಟಪಡುವುದನ್ನು ಸಹಿಸಲಾರರು. ತಾವೊಬ್ಬರೆ ಹೋಗಿ ತಿಂಗಳಿಗೆ ಒಂದೆರಡು ಸಲ ರಜಾದಲ್ಲಿ ಮನೆಗೆ ಭೇಟಿ ನೀಡುವರು. ಸಾಧ್ಯವಾದಷ್ಟು ಬೇಗ ಹತ್ತಿರದ ಸ್ಥಳಕ್ಕೆ ವರ್ಗಾವಣೆ ಮಾಡಿಕೊಳ್ಳುವರು. ಆದರೆ ನಾನು ಕುಟುಂಬ ವತ್ಸಲ. ಮನೆ ಹಕ್ಕಿ. ಇತರೆ ಹವ್ಯಾಸಗಳಿಲ್ಲ. ಕೆಲಸ ಮುಗಿಸಿ ಮನೆಗೆ ಬಂದಾಗ ಹೆಂಡತಿ ನಗುತ್ತಾ ಬಾಗಿಲು ತೆರೆದರೆ ಆಯಾಸ ಮಟಾ ಮಾಯ. ಕಾಲೇಜಿಗೆ ಹೋಗುವಾಗ ಬಾಗಿಲತನಕ ಬಂದು best of luck ಹೇಳಿದರೆ ಸಾಕು ಆನೆಯ ಬಲ ಬಂದಂತೆ. ಆದರೆ ಮನೆಯ ನೆನಪು ಮಾತ್ರ ಮರಳಿ ಬಂದು ಹೆಂಡತಿಯ ಮುಖ ಕಂಡಾಗಲೆ! ಅದರಿಂದ ನನ್ನದು ಗುಡಿ ಗುಂಟೆ ಜೋಗೇರ ಸಂಸಾರ. ಎಲ್ಲಿಗೆ ಹೋಗಲಿ ಮಡದಿ ಮಕ್ಕಳು ಜೊತೆಗೆ ಇರಬೇಕು. ನನ್ನ ಎಲ್ಲ ಮಕ್ಕಳ ಶಿಕ್ಷಣವೂ ಸರ್ಕಾರಿ ಶಾಲೆಗಳಲ್ಲೆ. ನನ್ನ ಓದುವ ಹವ್ಯಾಸ ಮತ್ತು ವಾಯು ಸಂಚಾರ ಗಾಳಿ ಅವರಿಗೂ ತಗುಲಿತು. ಇದರಿಂದ ಮಕ್ಕಳು ದೇಶಸುತ್ತಿ, ಕೋಶ ಓದಿ ಸಾಕಷ್ಟು ಕಲಿತರು.
ಒಂದು ರೀತಿಯಲ್ಲಿ ನಾನು ಅದೃಷ್ಟಶಾಲಿ. ಚಿಕ್ಕಂದಿನಲ್ಲಿ ನನಗೆ ಮದುವೆಯಾಗಿ ಮಕ್ಕಳಾಗುವ ತನಕ  ಮನೆಯ ಹೊಣೆ ಅಪ್ಪನದು. ಸಂಬಳ ತಂದು ಕೈಗೆ ಹಾಕಿದರೆ ಮುಗಿಯಿತು. ನನಗೆ ಬೇಕಾದಾಗ ಬೇಕಾದಷ್ಟು ಹಣ ಪಡೆಯುತಿದ್ದೆ. ಎಷ್ಟೋ ಸಲ ಅವರ ಸಡಿಲ ಕೈನಿಂದಾಗಿ ಅಗತ್ಯವಿದ್ದಾಗ ಹಣವೆ ಇರುತ್ತಿರಲಿಲ್ಲ. ಆ ಕ್ಷಣಕ್ಕೆ ತುಸು ರೇಗಾಡಿದರೂ ಮತ್ತೆ ಮೊದಲಿನಂತೆ ಆಗುತಿತ್ತು. ಹನ್ನೆರಡು ಜನರಲ್ಲಿ ಉಳಿದವರು ಇಬ್ಬರು ತಮ್ಮಂದಿರು ಇಬ್ಬರು ತಂಗಿಯರು. ನನಗೂ ನನ್ನ ಕೊನೆ ತಮ್ಮನಿಗೂ ಇಪ್ಪತ್ತು ವರ್ಷಗಳ ವ್ಯತ್ಯಾಸ. ಅವರೆಲ್ಲರ ಓದು ಬರಹ ಯೋಗಕ್ಷೇಮದ ಹೊಣೆ ನನ್ನದೆ. ಜತೆಗೆ ತಾಯಿಲ್ಲದ ನಮ್ಮ ಅಕ್ಕನ ಮಗನೂ ನಮ್ಮಲ್ಲಿಯೆ ಇದ್ದ. ಇನ್ನು ಶಿಷ್ಯ ಬಳಗವಂತೂ ಸದಾ ಜೊತೆಗೆ ಇರುತಿದ್ದರು. ಸ್ವಂತ ಊರಿನಿಂದ ದೂರದ ಊರಿಗೆ ಹೋದಾಗ ನನ್ನ ತಮ್ಮಂದಿರ ಸಹಾಯದಿಂದ ಮನೆ ವಾರ್ತೆಯನ್ನು ಹೆಂಡತಿಯೆ ಸಾಗಿಸುತ್ತಿದ್ದಳು. ನಂತರ ಮಕ್ಕಳು ದೊಡ್ಡವರಾದಾಗ ಅವರು ಸಹಾಯ ಮಾಡುತಿದ್ದರು. ಹಾಗಾಗಿ ನಾನು ಅಕ್ಕಿಬೇಳೆ ಬೆಲೆ ಬಗ್ಗೆ ತಲೆ ಕೆಡಸಿಕೊಂಡವನೆ ಅಲ್ಲ. ಇದರಿಂದ ನನಗೆ ಮನೆಯ ಕಾಷ್ಟ ವ್ಯಸನದ ಬಿಸಿ ತಾಕಲೆ ಇಲ್ಲ. ಪಾಠ ಪ್ರವಚನ ಕೆಲಸದಲ್ಲೆ ಪೂರ್ತಿ ಮಗ್ನ.
ಹೊಸ ಊರಿಗೆ ನನ್ನ ಜೊತೆ ಮಲ್ಲಿಕಾರ್ಜುನ ಎಂಬ ವಿದ್ಯಾರ್ಥಿ ಬಂದ. ಜಗ್ಗಲಿ ಮಲ್ಲಪ್ಪ ನಮ್ಮ ಅಪ್ಪನಿಗೆ ಬೇಕಾದ ರೈತನೊಬ್ಬನ ಮಗ. ಓದಿ ಬ್ಯಾಂಕಿನಲ್ಲಿ ಕೆಲಸ ಮಾಡಲಿ ಎಂದು ಅವನ ಹಂಬಲ. ಊರಲ್ಲಿರುವ ತನಕ ಅವನ ವಾಸ ನಮ್ಮಲ್ಲೆ. ಊಟಕ್ಕೆ ಮಾತ್ರ ಮನೆಗೆ ಹೋಗುತಿದ್ದ. ಆದರೆ ನನಗೆ ಬಡ್ತಿ ಬಂತು ಓದಿದರೆ ಬ್ಯಾಂಕು, ಫೇಲಾದರೆ ಬಾರುಕೋಲು ಎಂದು ಹೇಳಿ ನನ್ನ ಜೊತೆಗೆ ಕಳುಹಿಸಿದ್ದ. ಅದೇನೋ ಕೊನೆತನಕ ನಾನು ಎಲ್ಲಿಗೇ ಹೋಗಲಿ ಒಂದಲ್ಲ ಒಂದು ಬಾಲಂಗೋಚಿ ಇದ್ದೆ ಇರುತಿತ್ತು. ಕುರುಬರ ಹೇಮಪ್ಪ, ಕೊರಚರ ತಿಮ್ಮಪ್ಪ, ನಾಯಕರ ಹುಲುಗಪ್ಪ, ಲಚಿನಕೇರಿ ಸಿದ್ದರಾಮ, ಅಂಗಡಿ ವಿಜಯ್, ಜತೆಗೆ ನನ್ನ ಹೆಂಡತಿಯ ಸೋದರರ ಮಕ್ಕಳು ಹಲವು ಹಂತದಲ್ಲಿ ವರ್ಷಗಳ ವರೆಗೆ ಕುಟುಂಬದ ಭಾಗವಾಗಿದ್ದರು. ನಮ್ಮ ಮನೆ ಒಂದು ಕಿರು ಗುರುಕುಲ. ಅವರಲ್ಲಿ ಕೆಲವರು ತಮ್ಮ ವೆಚ್ಚವನ್ನೂ ಭರಿಸುತಿದ್ದರು.
ಇಲ್ಲಿ ಎಲ್ಲ ನಾಡ ಹಂಚಿನ ಮನೆಗಳು. ಮಳೆಗಾಲ ಒಂದು ರೀತಿಯಾದರೆ ಚಳಿಗಾಲದಲ್ಲಂತೂ ಬಾಗಿಲ ಸಂದಿಯಿಂದ ಚಾಕುವಿನಂತೆ ಚುಚ್ಚುವ ಚಳಿ. ಅದಕ್ಕೆ ಅವಕ್ಕೆ ಎರಡು ಪದರ ಕಾಗದ ಅಂಟಿಸುವರು. ಅಲ್ಲಿ ಎಲ್ಲರ ಮನೆಯಲ್ಲೂ ಒಲೆಯ ಮೇಲೆ ಬಿಸಿಬಿಸಿ ಕಾಫಿ ಡಿಕಾಷನ್‌ ಇರಲೇಬೇಕು. ಆದರೆ ನಾವಂತೂ ಆ ಚಳಿಯಲ್ಲೂ ಕಾಫಿ ಕುಡಿವ ಅಭ್ಯಾಸ ಕಲಿಯಲಿಲ್ಲ.
ಮಳೆಯಷ್ಟೆ ಪುಷ್ಕಳ ಅಲ್ಲಿನ ಕಟ್ಟಿಗೆ. ಎಲ್ಲಿ ನೋಡಿದರೂ ಮುಗಿಲೆತ್ತರದ ಮರಗಳು. ಹತ್ತು ರಾಪಾಯಿ ಕೊಟ್ಟರೆ ಗಾಡಿ ಕಟ್ಟಿಗೆ. ಅಲ್ಲಿರುವ ಸಾಮಿಲ್ಲಿನಲ್ಲಿ ನಾಟಾಗಳು ರಾಸಿ ರಾಸಿ. ಅವುಗಳ ದಪ್ಪ ತೊಗಟೆಗಳು ಉಚಿತ. ಮಲ್ಲಿಕಾರ್ಜುನ ಅವನ್ನು ತಾನೆ ತಂದು ಚಿಕ್ಕ ಕೊಡಲಿಯೊಂದರಿಂದ ಕಡಿದು ಉರುವಲು ಒದಗಿಸುತಿದ್ದ. ಅಲ್ಲಿ ಹಾವುಗಳ ಹರಿದಾಟ ಬಹಳ ನಮಗೆ ಗಾಬರಿ. ನಮ್ಮಲ್ಲಿ ಹಾವು ಕಂಡರೆ ಗುಲ್ಲೆ ಗುಲ್ಲು. ಅದನ್ನು ಕೊಲ್ಲುವ ತನಕ ಯಾರಿಗೂ ನೆಮ್ಮದಿಯೆ ಇಲ್ಲ. `ಕಲ್ಲುನಾಗರ ಕಂಡರೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾಎಂದು ಬಸವಣ್ಣನವರ ವಚನವೆ ಇದೆ. ಇಲ್ಲಿ ಹಾಗಲ್ಲ. ಅವುಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಒಂದು ಸಲವಂತೂ ನಮ್ಮ ಪಕ್ಕದ ಮನೆಯವರು ಹಾವೊಂದನ್ನು ಉದ್ದನೆಯ ಕೋಲು ಹಿಡಿದು ನಾಗಪ್ಪಾ ಹೋಗು ಎಂದು ದೂರ ತಳ್ಳುತ್ತಾ ಇರುವುದು ನೋಡಿ ನಂಬಲೆ ಆಗಲಿಲ್ಲ. ಬಹುಶಃ ಹಾವುಗಳು ಹೊಟ್ಟೆ ತುಂಬಿ ಜಡವಾಗಿದ್ದವೋ ಇಲ್ಲವೆ ಪೊರೆ ಬಂದುದರಿಂದ ಚುರುಕಾಗಿರಲಿಲ್ಲವೋ ತಿಳಿಯದು. ಚಳಿಪ್ರದೇಶದಲ್ಲಿ ಹಾವುಗಳು ವಿಷಪೂರಿತವಲ್ಲ, ಅವು ಹೆಚ್ಚಾಗಿ ಕಚ್ಚುವುದೂ ಇಲ್ಲ ಎಂದು ನಂತರ ಗೊತ್ತಾಯಿತು. ಆದರೆ ಹಾವು ಕಚ್ಚಿ ಸತ್ತ ಸುದ್ದಿಯನ್ನಂತೂ ನಾನು ಅಲ್ಲಿ ಕೇಳಲೆ ಇಲ್ಲ. ಪರಿಸರ ಸಮತೋಲನದಲ್ಲಿ ಹಾವುಗಳ ಪಾತ್ರ ಹಿರಿದು. ಅದು ಜೈವಿಕ ಕೀಟ ನಿಯಂತ್ರಕ. ಬೆಕ್ಕನ್ನು ಕೊಂದರೆ ಪಾಪ ಸುತ್ತಿಕೊಳ್ಳುವುದು ಎಂಬ ನಂಬಿಕೆಯೂ ಇಲಿ ಹೆಗ್ಗಣ ಮೊದಲಾದ ಕೀಟ ಭಾಧೆಗಳನ್ನು ತಡೆಯುವ ಜೈವಿಕ ಕೀಟ ನಿಯಂತ್ರಣದ ಒಂದು ವಿಧಾನ. ನಮ್ಮಲ್ಲಿ ಕೋತಿ ಸಾಕ್ಷಾತ್‌ ಭಗವಂತ. ಅವುಗಳ ಕಾಟ ಹೆಚ್ಚಾದರೆ ಹಿಡಿದು ಕಾಡಿಗೆ ಬಿಡುವರೆ ವಿನಹ ಕೊಲ್ಲುವುದಿಲ್ಲ. ಹಸುವಿನಲ್ಲಿ ಮೂವತ್ತು ಮೂರುಕೋಟಿ ದೇವತೆಗಳಿರುವರು ಎಂಬ ನಂಬಿಕೆಗೂ ಉತ್ಥಾನ ದ್ವಾದಶಿಯಂದು ನೆಲ್ಲಿ ಗಿಡದ ಪೂಜೆ, ದಸರೆಯಲ್ಲಿ ಬನ್ನಿ ಗಿಡದ ಪೂಜೆ, ಅಶ್ವತ್ಥ ಕಟ್ಟೆ, ನಾಗರ ಬನ, ದೇವರ ಕಾಡುಗಳ ಹಿಂದೆ ಪರಿಸರಪ್ರಜ್ಞೆ ಕೆಲಸ ಮಾಡಿರುವಂತೆ ಕಾಣುತ್ತದೆ. ಇದೂ ದೈವಭೀತಿ ಹುಟ್ಟಿಸಿ ಅರಣ್ಯನಾಶ ತಡೆಯುವ ಪ್ರಯತ್ನ.
ಅಲ್ಲಿ ಕಾಡು ಎಷ್ಟು ದಟ್ಟವಾಗಿತ್ತೆಂದರೆ ಕಡಿಯಲು ಕೂಲಿಗಳದೆ ಅಭಾವ. ಅದಕ್ಕೆಂದೆ ಕೇರಳದಿಂದ ಕಾರ್ಮಿಕರು ಬರುತಿದ್ದರು. ಅದರಲ್ಲೂ ಮಾಪಿಳ್ಳೆಗಳು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರೆ ಅಧಿಕ. ಅದರಿಂದ ನಮ್ಮ ಕಾಲೇಜಿನಲ್ಲೂ ಇಬ್ಬರು ಮೂವರು ವರ್ಗೀಸ್‌, ಜೋಸೆಫ್, ಮ್ಯಾಥ್ಯೂ ಹೆಸರಿನವರು ಇರುತಿದ್ದರು. ಸ್ಥಳೀಯರಾದ ಗೌಡರು ಕೃಷಿಕರು. ಎರಡು ಸಮುದಾಯದ ನಡುವೆ ಸದಾ ದುಸು ಮುಸು. ಕಾಲೇಜಿನಲ್ಲೂ ಅದರ ನೆರಳು ಕಾಣತಿತ್ತು
ದಿನವೂ ವಾಯು ವಿಹಾರಕ್ಕೆ ಹೋದಾಗ ಮನೆಯೊಂದರ ಮುಂದೆ ಹಾದು ಹೋಗುವಾಗ ಸುವಾಸನೆ ಸೂಸುತಿತ್ತು. ಅದು ಅಲ್ಲಿನ ಸ್ಥಳೀಯ ನಾಯಕರೊಬ್ಬರ ಮನೆ. ದೇವರ ಪೂಜೆಗೆ ಗಂಧ ತೇಯಲು ಗಂಧದ ಚಕ್ಕೆ ನೋಡಿದ್ದ ನನಗೆ ಅವರ ಮನೆಯ ಕಿಟಕಿ ಚೌಕಟ್ಟು ಬಾಗಿಲು, ಮಂಚ ಕುರ್ಚಿಗಳೆಲ್ಲವೂ ಶುದ್ಧ ಶ್ರೀಗಂಧದೆಂದು ಕೇಳಿ ಬಹಳ ಅಚ್ಚರಿಯಾಯಿತು. ಒಂದು ಬಾರಿ ಗುಡಿಸಲ ಪಕ್ಕದಲ್ಲಿ ಹೋಗುತ್ತಿರುವಾಗಲೂ ಗಂಧದ ವಾಸನೆ ಮೂಗಿನ ಸೆಲೆ ಒಡೆಯುವಷ್ಟು ಬಂದಿತು. ಇಣುಕಿ ನೋಡಿದಾಗ ಒಲೆಯಲ್ಲಿ ಹಸಿರೆಲೆ ತುಂಬಿದ ರೆಂಬೆ ಧಗಧಗನೆ ಉರಿಯುತಿತ್ತು. ಅದರಿಂದ ಹೊಗೆ ಬರುತಿತ್ತು. ನಂತರ ತಿಳಿಯಿತು ಗಂಧದ ಕೊಂಬೆ ರೆಂಬೆಗಳು ಹಸಿಯಿದ್ದಾಗಲೂ ಅದರಲ್ಲಿನ ಎಣ್ಣೆಯ ಅಂಶದಿಂದಾಗಿ ಚೆನ್ನಾಗಿ ಹತ್ತಿ ಉರಿಯುವವು. ಈ ರೀತಿಯಾಗಿ ಬಡವ ಬಲ್ಲಿದರಿಬ್ಬರೂ ಎಗ್ಗಿಲ್ಲದೆ ಅರಣ್ಯ ಸಂಪತ್ತನ್ನು ದುರ್ಬಳಕೆ ಮಾಡಿಕೊಳ್ಳುತಿದ್ದರು. ಇನ್ನು ಸಾಗುವಾನಿ ಮತ್ತು ಬೀಟೆ ಮರಗಳ ಮಾರಣಹೋಮ ಸತತ ಸಾಗಿತ್ತು. ಇತ್ತೀಚೆಗೆ ಹೋದಾಗ ಅಲ್ಲಿನ ದಟ್ಟ ಅರಣ್ಯದ ಬದಲು ಕಾಂಕ್ರೀಟ್‌ ಕಾಡು ಎದ್ದಿದೆ. ಅನೇಕ ವರ್ಷಗಳ ಕಾಡು ಕಡಿತದ ಪರಿಣಾಮ, ಈಗ ಮಲೆನಾಡಿನಲ್ಲೆ ಜಲಕ್ಷಾಮ.
ಪಿಯುಸಿ ತರಗತಿಗೆ ತುಸು ಅಳುಕಿನಿಂದಲೆ ಹೊರಟೆ. ಕಾಲೇಜಿಗೆ ಪಾಠ ಮಾಡಿದ ಅನುಭವ ಇರಲಿಲ್ಲ. ತರಗತಿಗೆ ಹೋದ ಕೂಡಲೆ ಬೋರ್ಡಿನ ಮೇಲೆ ನನ್ನದೇ ವ್ಯಂಗ್ಯ ಚಿತ್ರ ಕಂಡಿತು. ಕ್ಷಣ ಹೊತ್ತು ಅಪ್ರತಿಭನಾದೆ. ಏನೂ ಪ್ರತಿಕ್ರಿಯೆ ವ್ಯಕ್ತಪಡಿಸದೆ ಹಾಜರಿ ಹಾಕಿದೆ. ನಂತರ ಡಸ್ಟರ್‌ ಹಿಡಿದು ಬೋರ್ಡಿನ ಕಡೆ ನಡೆದೆ. ಅಲ್ಲಿ ತುಸು ನಿಂತು ತರಗತಿಯ ಕಡೆ ತಿರುಗಿ ನನಗೆ ಈ ಚಿತ್ರ ಅಳಿಸಲು ಮನಸ್ಸು ಬರುತ್ತಿಲ್ಲ. ತುಂಬ ಚೆನ್ನಾಗಿದೆ. ಬಹುತೇಕ ನನ್ನನ್ನೆ ಹೋಲುತ್ತದೆ. ಇದನ್ನು ಬರೆದ ಪ್ರತಿಭಾವಂತ ಯಾರು ಎಂದೆ. ನನ್ನ ಈ ಪ್ರತಿಕ್ರಿಯೆಯಿಂದ ಅವರು ದಂಗಾದರು.
ಸಾಮಾನ್ಯ ಶಿಕ್ಷಣ ಎಲ್ಲರಿಗೂ ಸಿಗುವುದು ಆದರೆ ಕಲೆ ಕೆಲವರಿಗೆ ಮಾತ್ರ ಒಲಿಯುವುದು. ನಮ್ಮಲ್ಲಿ ಒಬ್ಬ ಕಲಾವಿದ ಇರುವುದು ಹೆಮ್ಮೆಯ ವಿಷಯ ಯಾರು ಅವರು ಎಂದೆ. ಹಿಂದಿನ ಬೆಂಚಿನಿಂದ ಒಬ್ಬ ಎದ್ದುನಿಂತ. ಅವನ ಹೆಸರು ವರ್ಗೀಸ್‌.
ಇದಲ್ಲದೆ ಬೇರೆ ಏನಾದರೂ ಚಿತ್ರಗಳನ್ನು ರಚಿಸಿರುವೆಯಾ ಕೇಳಿದೆ. ಅವನು ತಲೆಯಾಡಿಸಿದ. ಹಾಗಿದ್ದರೆ ಅವನ್ನು ನಂತರ ತಂದು ತೋರಿಸು ಎಂದೆ.
ಮಾರನೆ ದಿನ ಅವನು ಹತ್ತಾರು ಚಿತ್ರಗಳನ್ನು ತಂದು ತೋರಿಸಿದ. ರೇಖಾಚಿತ್ರಗಳು ಚೆನ್ನಾಗಿದ್ದವು. ವರ್ಣ ಸಂಯೋಜನೆ ಕೈ ಕುದರಬೇಕಿತ್ತು. ಅವನಿಗೆ ಆಸಕ್ತಿ ಇದ್ದರೆ ಚಿತ್ರಕಲಾ ಶಾಲೆ ಸೇರಲು ತಿಳಿಸಿದೆ. ಇಲ್ಲವೆ ಆಚಾರ್ಯ ಅವರ ABC ಅಂಚೆ ತೆರಪಿನ ಶಿಕ್ಷಣ ಪಡೆಯಬಹುದು ಎಂದು ಸಲಹೆ ನೀಡಿದೆ. ಅವನೂ ಅವನ ಜತೆ ಬಂದ ಇನ್ನೊಬ್ಬನೂ ಅದರಿಂದ ಉತ್ತೇಜಿತರಾದರು. ನಂತರ ತರಗತಿಯಲ್ಲಿ ಗೊಂದಲವಾಗಲೆ ಇಲ್ಲ.
ಗ್ರಾಮಾಂತರ ವಿದ್ಯಾರ್ಥಿಗಳಿಗೆ ಆಂಗ್ಲಭಾಷೆ ಕಲಿಕೆ ಕಬ್ಬಿಣದ ಕಡಲೆ. ಒಬ್ಬ ಹೈಸ್ಕೂಲು ವಿದ್ಯಾರ್ಥಿ ಕೇಳಿದ. `Fragile ಪದದ ಉಚ್ಛಾರಣೆ ಫ್ರಾಜೈಲ್‌ಎಂದು ಏಕೆ ಅನ್ನಬೇಕು? ಫ್ರಾಗೈಲ್‌ ಏಕೆ ಅನ್ನಬಾರದು? ಇಂಗ್ಲಿಷ್‌ನಲ್ಲಿ ಬರೆಯುವುದು ಒಂದು ಮತ್ತು ಓದುವುದು ಮತ್ತೊಂದು. Put ಪುಟ್‌ ಆದರೆ But ಬಟ್‌ ಏಕೆ? ಇದಕ್ಕೆ ವೈಜ್ಞಾನಿಕ ವಿವರಣೆ ಕೊಡುವುದು ಸರಳವಲ್ಲ. ವಿಶೇಷವಾಗಿ C ಮತ್ತು J ಅಕ್ಷರಗಳ ಬಳಕೆ ಬಹಳ ಸಂದಿಗ್ದ. ಸಿ ಬಳಸಿದರೆ ಸ ಮತ್ತು ಕ ಎರಡೂ ವ್ಯಂಜನಗಳು ಬರುವವು. ಜೆ ಬಳಸಿದರೆ ಗ ಮತ್ತು ಜ ವ್ಯಂಜನಗಳು ಬರುತ್ತವೆ. ಅದು ಹೇಗೆ? ಎಂದು ಹಳ್ಳಿಯ ಮಕ್ಕಳಿಗೆ ತಿಳಿಸಿ ಹೇಳುವುದು ಅಷ್ಟು ಸಲೀಸಲ್ಲ. ಇನ್ನು ಕೆಲವು ಅಕ್ಷರಗಳು silent ಆಗುವವು. ಅನೇಕರು ವಿದ್ಯಾವಂತರೂ ಕೂಡಾ Psychology ಯನ್ನು ಪಿಸ್ಕಾಲಜಿ ಎನ್ನುವುದನ್ನು ಕೇಳಿರುವೆ. ಇದಕ್ಕೆ ಇರುವ ಏಕೈಕ ಪರಿಹಾರ ಆ ಭಾಷೆಯ ಸತತ ಬಳಕೆ. ಓದು, ಬರಹ, ಮಾತು ಮತ್ತು ಆಲಿಸುವ ಅವಕಾಶ.
ಅನೇಕರು ಇಂಗ್ಲಿಷ್‌ ಪಾಠವನ್ನೂ ಭಾಷಾಂತರ ಪದ್ಧತಿ ಬಳಸಿ ಮಾಡುವರು. ಕನ್ನಡದಲ್ಲಿ ಹೇಳಿದರೆ ಮಕ್ಕಳಿಗೆ ಅರ್ಥವಾಗುವುದು ಎಂಬ ಮಾತು ನಿಜ. ಆದರೆ ಬಳಸಲು ಬರುವುದೆ ಎಂದಾಗ ಮಹಾ ಮೌನ. ಹಿಂದುಳಿದ ಜಿಲ್ಲೆಗಳ, ಹಳ್ಳಿಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತರಗತಿಯ ಹೊರಗೆ ಇಂಗ್ಲಿಷ್‌ ಕೇಳುವ ಮತ್ತು ಓದುವ ಸೌಲಭ್ಯವಿಲ್ಲ ಮಾತನಾಡುವ ಅವಕಾಶ ಮೊದಲೆ ಇಲ್ಲ. ವಿಪರ್ಯಾಸ ಎಂದರೆ ಕನ್ನಡ, ಹಿಂದಿ, ಗಣಿತ, ಶಿಕ್ಷಕರಿಗೆ ಅವರ ವಿಷಯದಲ್ಲಿ ಪದವಿ ಮತ್ತು ತರಬೇತಿ ಕಡ್ಡಾಯ ಆದರೆ ಇಂಗ್ಲಿಷ್‌ ಪಾಠ ಯಾರಾದರೂ ಮಾಡಬಹುದು. ಪರಿಣಾಮ ಹೇಗೆ ಮಾಡಿದರೂ ನಡೆಯುವುದು. ಉರು ಹಚ್ಚಿ ಪರೀಕ್ಷೆಯಲ್ಲಿ ಬರೆದು ಪಾಸಾದವರು ಆಂಗ್ಲ ಮಾಧ್ಯಮಕ್ಕೆ ಬಂದಾಗ ತ್ರಿಶಂಕುಗಳು. ಎಳವೆಯಲ್ಲೆ ಮಕ್ಕಳ ಕಿವಿಯ ಮೇಲೆ ಇಂಗ್ಲಿಷ್‌ ಭಾಷೆ ಬೀಳುತಿದ್ದರೆ ಮತ್ತು ಹೆಚ್ಚುವರಿಯಾಗಿ ಓದಲು ಅವಕಾಶ ದೊರೆತರೆ ಬರಹ ಮತ್ತು ಮಾತು ಸುಧಾರಿಸುತ್ತವೆ.
ಕನ್ನಡ ಅಭಿಮಾನದಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಮತ್ತು ಪ್ರಾಥಮಿಕ ಹಂತದಲ್ಲಿ ಕಲಿಸುವುದಕ್ಕೆ ವಿರೋಧವಿದೆ. ಇದರ ನೇರ ಪರಿಣಾಮ ಬಡ ಮತ್ತು ಹಳ್ಳಿಯ ಮಕ್ಕಳ ಮೇಲೆ. ಸಿರಿವಂತ ಮತ್ತು ಸುಶಿಕ್ಷಿತರ ಮಕ್ಕಳು ಕಿಂಡರ್‌ ಗಾರ್ಡನ್‌ ಹಂತದಿಂದಲೆ ಲಕ್ಷಗಟ್ಟಲೆ ಶುಲ್ಕ ನೀಡಿ ಖಾಸಗಿ ಶಾಲೆಗಳಲ್ಲಿ ಕಲಿತು ನವಬ್ರಾಹ್ಮಣರಾಗುವರು. ಜಾಗತೀಕರಣದಿಂದ ಅವಕಾಶಗಳನ್ನೆಲ್ಲ ಭಾಷೆ ಬಲ್ಲವರೆ ಬಾಚಿಕೊಳ್ಳುವರು. ಸಮಾಜ ಇದರಿಂದ ಇಂಗ್ಲಿಷ್‌ ಬಲ್ಲವರು ಮತ್ತು ಬಾರದವರು ಎಂದು ಎರಡು ಸೀಳಾಗಿದೆ. ಕನ್ನಡ ಮಾತ್ರ ಕಲಿತವರು ದೈಹಿಕ ಕೆಲಸಗಳಿಗೆ ಮಾತ್ರ ಲಾಯಕ್ಕು ಎಂಬ ವಾತಾವರಣವಿದೆ. ಹಳ್ಳಿಗರು ಪಡೆದ ಪದವಿ ಅಲಂಕಾರಕ್ಕೆ ಮಾತ್ರ ಉದ್ಯೋಗಾವಕಾಶ ಕಡಿಮೆ.
ಮಂಡ್ಯ, ಕೋಲಾರ, ಗುಲ್ಬರ್ಗ, ಬೀದರ್‌ ಗಳಲ್ಲಿ ಅದರಲ್ಲೂ ಎಲ್ಲ ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯ. ಪಠ್ಯಕ್ರಮ ರೂಪಿಸುವಾಗ ಒಂದು ನಿರ್ದಿಷ್ಟ ಪೂರ್ವ ಜ್ಞಾನದ ಆಧಾರದ ಮೇಲೆ ಮುಂದಿನ ಕಲಿಕೆಯ ಪ್ರಮಾಣ ನಿರ್ಧರಿಸುವರು. ಆದರೆ ಬಹುತೇಕ ಮಕ್ಕಳಿಗೆ ಪೂರ್ವ ಜ್ಞಾನದ ಕೊರತೆ. ಅವರಿಗೆ ಕಲಿಸುವುದು ನೀರಿಳಿಯದ ಗಂಟಲಲ್ಲಿ ಕಡಬು ತುರುಕಿದಂತೆ. ಈವಿಷಯವನ್ನು ಕುರಿತು ಅನೇಕ ಇಂಗ್ಲಿಷ್‌ ಬೋಧನಾ ಶಿಬಿರಗಳಲ್ಲಿ ಪರಿಣಿತರನ್ನು ಕೇಳಿದಾಗ ಮೌನವೆ ಅವರ ಉತ್ತರ. ಸೇವಾಂತರ್ಗತ ತರಬೇತಿ ಶಿಬಿರಗಳಲ್ಲಿ  `What does the man from Mandya say?’ ಎಂದು ವಿಚಾರಿಸುವ ಮಟ್ಟಿಗೆ ನಾನು ಈ ಪ್ರಶ್ನೆ ಚರ್ಚಿಸಿರುವೆ. ಫಲಿತಾಂಶ ಮಾತ್ರ ನಿಲುಕದ ನಕ್ಷತ್ರ. ಕನ್ನಡ ಮಾಧ್ಯಮದಲ್ಲಿ ಓದಿ ಉನ್ನತ ಮಟ್ಟಕ್ಕೆ ಏರಿದವರೂ ಇದ್ದಾರೆ. ಅವರ ಸಂಖ್ಯೆ ಕಡಿಮೆ. ಅದಕ್ಕೆ ಅವರ ವಿಶೇಷ ಪರಿಶ್ರಮ, ಬದ್ದತೆ ಇರುವ ಶಿಕ್ಷಕರು ಮತ್ತು ಕೌಟುಂಬಿಕ ಹಿನ್ನಲೆ ಕಾರಣ. ಆದರೆ ಎಲ್ಲರಿಗೂ ಅವು ಲಭ್ಯವಿಲ್ಲ. ಭಾಷೆ ಭಾವನಾತ್ಮಕ ವಿಷಯವಾಗದೆ ವಾಸ್ತವಾಂಶಗಳ ನೆಲಗಟ್ಟಿನ ಮೇಲೆ ನಿಂತಾಗ ಮಾತ್ರ ಶಿಕ್ಷಣ ಸಾರ್ಥಕವಾಗುವುದು. `ನ ಹಿ ಜ್ಞಾನೇನ ಸದೃಶ್ಯಂಎಂಬ ನುಡಿ  ಸತ್ಯ. ಆದರೆ ಶಿಕ್ಷಣ ಜುಟ್ಟಿಗೆ ಮಲ್ಲಿಗೆ ಮುಡಿಸಿದರೆ ಸಾಲದು ಹೊಟ್ಟೆಗೆ ಹಿಟ್ಟೂ ಕೊಡಬೇಕು.
ಸರ್ಕಾರಿ ಶಾಲೆಗಳಲ್ಲಿ ಪ್ರತಿಭೆಯ ಆಧಾರದ ಮೇಲೆಯೆ ಶಿಕ್ಷಕರ ಆಯ್ಕೆ. ಅವರಿಗೆ ಕೈತುಂಬ ಸಂಬಳವೂ ಇದೆ. ಆದರೂ ಫಲಿತಾಂಶ ಶೋಚನೀಯ ಮತ್ತು ವಿದ್ಯಾರ್ಥಿಗಳ ಸಂಖ್ಯೆ ಇಳಿಯುತ್ತಲೆ ಇದೆ. ಶುಲ್ಕವೂ ಅತಿ ಕಡಿಮೆ. ಆದರೆ ಶಾಲೆಗಳು ಒಂದೊಂದೆ ಬಾಗಿಲು ಹಾಕುತ್ತಿರುವುದು ಇಂದಿಗೂ ಚಿದಂಬರ ರಹಸ್ಯ. ಸಮಸ್ಯೆಯ ಪರಿಹಾರಕ್ಕೆ ನಿವೃತ್ತನಾಗುವರೆಗೂ ನಡೆಸಿದ ಪ್ರಯತ್ನ ಇನ್ನೂ ಫಲ ಕಾಣಬೇಕಿದೆ. ಇಂದು ಶಿಕ್ಷಣ ಸೇವಾಕ್ಷೇತ್ರವಾಗಿ ಉಳಿದಿಲ್ಲ, ಬೃಹತ್‌ ಉದ್ಯಮವಾಗಿದೆ.
ನಮ್ಮ ಕಾಲೇಜಿನಲ್ಲಿ ಮಕ್ಕಳು ಬಹು ಚುರುಕು. ಹಸ್ತಪ್ರತಿ ಪತ್ರಿಕೆ ಹೊರತಂದರು. ತ್ಯಾಗಿ ಎಂಬ  ನಾಟಕ ಕಲಿಸಿದೆ. ಅದರಲ್ಲಿ ಅಮೋಘವಾಗಿ ನಟಿಸಿದ ಪುರುಷೋತ್ತಮ ಎಂಬ ವಿದ್ಯಾರ್ಥಿ ಮುಂದೆ ಸಿನೆಮಾರಂಗದಲ್ಲಿ ಮಿಂಚಿದ. ನಾನು ಕ್ರಮೇಣ ಹೊಸ ವಾತಾವರಣಕ್ಕೆ ಹೊಂದಿಕೊಂಡೆ. ಆದರೆ ಮನೆಯವರಿಗೆ ಹವಾಗುಣ ಹಿಡಿಸಲಿಲ್ಲ. ಹಸಿರು ಕಾಮಣಿಯಾಗಿ ಉಟ್ಟ ಬಟ್ಟೆಯೂ ಹಳದಿ ಕಾಣುತಿತ್ತು. ಸೂಕ್ತ ವೈದ್ಯಕೀಯ ಸೌಲಭ್ಯದ ಕೊರತೆ. ಎರಡೆ ವರ್ಷದಲ್ಲಿ ಬಯಲುಸೀಮೆಗೆ ವರ್ಗ ಮಾಡಿಸಿ ಕೊಂಡೆ. ಈಗಲೂ ಅಲ್ಲಿನ ದಟ್ಟ ಕಾಡು, ಹಿನ್ನೀರು, ಆಗುಂಬೆ, ಶೃಂಗೇರಿ, ಮಂಡಗದ್ದೆ ಪಕ್ಷಿಧಾಮಗಳು ಆಗಾಗ ನನ್ನ ಮನದಲ್ಲಿ ಮೂಡಿ ಮುದ ಕೊಡುತ್ತವೆ.
( ಮುಂದುವರಿಯುವುದು)


ಬಿರು ಬಿಸಿಲಿನಿಂದ ಕೊರೆವ ಚಳಿ ನಾಡಿಗೆ ಮುಂಬಡ್ತಿ


http://kendasampige.com/images/trans.gif
http://kendasampige.com/images/trans.gif
ಧಾರವಾಡದಿಂದ ಎಂಎ ಪರೀಕ್ಷೆ ಮುಗಿಸಿ ಬಂದು ಒಂದು ತಿಂಗಳೂ ಆಗಿರಲಿಲ್ಲ. ಜೂನ್‌ ಮೊದಲ ವಾರದಲ್ಲೆ ಫಲಿತಾಂಶ ಪತ್ರಿಕೆಯಲ್ಲಿ ಬಂದಿತು. ಆತುರದಿಂದ ನನ್ನ ನಂಬರು ಹುಡಕಿದೆ. ಪಾಸಾದವರ ಪಟ್ಟಿಯಲ್ಲಿ ಇಲ್ಲವೆ ಇಲ್ಲ. ಆಘಾತವಾದಂತಾಯಿತು. ಕಷ್ಟಪಟ್ಟು ಓದಿದ್ದು ನೀರಿನಲ್ಲಿ ಹೋಮ ಮಾಡಿದಂತಾಯಿತು. ಇಂಗ್ಲಿಷ್‌ನಲ್ಲೆ ಕನಸು ಬೀಳುವಷ್ಟರಮಟ್ಟಿಗೆ ಮನಸ್ಸಿಗೆ ಹಚ್ಚಿಕೊಂಡಿದ್ದೆ. ಎಲ್ಲ ವ್ಯರ್ಥವಾಯಿತು. ಅರ್ಧ ದಿನ ರಜೆ ಹಾಕಿ ಮನೆಗ ಹೋದೆ. ಹೆಂಡತಿಗೆ ಅಚ್ಚರಿ ಎಂದೂ ಬಾರದವರು ಬಂದರಲ್ಲ ಎಂದು. ಕೋಣೆಗೆ ಹೋಗಿ ಮುಸುಗಿಟ್ಟು ಮಲಗಿದೆ. ಏನಾಯಿತು ಎಂದು ಗಾಬರಿಯಿಂದ ಕೇಳಿದಳು, ವಿಷಯ ತಿಳಿಸಿದೆ. ಅವಳೂ ಮೊದಲು ನಂಬಲಿಲ್ಲ. ಕೊನೆಗೆ ಹೋದರೆ ಹೋಗಲಿ ಬಿಡಿ, ಹೇಗಿದ್ದರೂ ನೀವು ಕನ್ನಡ ಚೆನ್ನಾಗಿ ಓದಿಕೊಂಡಿರುವಿರಿ ಕನ್ನಡ ಎಂಎ ಮಾಡಿ ಎಂದು ಪರಿಪರಿಯಿಂದ ಸಂತೈಸಿದಳು. ಮಾರನೆ ದಿನ ಕನ್ನಡ ಎಂಎ ಕಟ್ಟಬೇಕೆಂದು ನಿರ್ಧರಿಸಿ ಶಾಲೆಗೆ ಹೋದೆ. ಆ ದಿನದ ಪೇಪರ್‌ ನೋಡಿದರೆ ಇಂಗ್ಲಿಷ್‌ ಎಂಎ ಫಲಿತಾಂಶ ಎಂದು ಚಿಕ್ಕ ಕಾಲಂ ಇತ್ತು. ನೋಡಿದರೆ ನನ್ನದೊಂದೆ ರಿಜಿಸ್ಟರ್‌ಬನಂಬರ್‌ ಇದೆ. ನಾನು ಮೂರು ಇಂಗ್ಲಿಷ್‌ ಮತ್ತು ಒಂದು ಕನ್ನಡ ಪೇಪರ್‌ ತೆಗೆದುಕೊಂಡಿದ್ದರಿಂದ ಪ್ರತ್ಯೇಕವಾಗಿ ಈ ದಿನ ಫಲಿತಾಂಶ ಬಂದಿತ್ತು. ನನಗೆ ಸಂತೋಷ ತಡೆಯಲಾಗಲಿಲ್ಲ. ಮತ್ತೆ ಅರ್ಧದಿನ ರಜೆ ಹಾಕಿ ಮನೆಗೆ ದೌಡಾಯಿಸಿದೆ. ಇದೇನು ಮತ್ತೆ ಬಂದಿರಿ ಎಂದಳು.
ನಿನ್ನೆ ಬೇಸರವನ್ನು ಬೀರಿದ್ದೆ. ಇಂದು ಸಂತಸವನ್ನು ಹಂಚುವೆ ಎಂದು ವಿಷಯ ತಿಳಿಸಿದೆ. ಅವಳಿಗೂ ಸ್ವರ್ಗ ಮೂರೆ ಗೇಣು. ನನಗೆ ಗೊತ್ತಿತ್ತು ನೀವು ಫೇಲಾಗುವುದು ಸಾಧ್ಯವಿಲ್ಲ, ಎಂದು ಮೊಗ ಅರಳಿಸಿದಳು. ಮತ್ತೆ ಸಂಭ್ರಮಾಚರಣೆಯಲ್ಲೆ ಸಂಜೆಯಾದುದು ಗೊತ್ತಾಗಲೆ ಇಲ್ಲ.
ನನ್ನ ಅದೃಷ್ಟಕ್ಕೆ ಅದೇ ವರ್ಷ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರೌಢಶಾಲೆಗಳನ್ನು ಸರ್ಕಾರ ತೆಗೆದುಕೊಂಡಿತ್ತು. ನಮ್ಮ ಜಿಲ್ಲೆಯವರೆ ಆದ ಎನ್‌.ಎಮ್.ಕೆ. ಸೋಗಿ ಶಿಕ್ಷಣಮಂತ್ರಿ. ಅವರು ಶಿಕ್ಷಕರನ್ನು ಸ್ಥಳೀಯ ನಾಯಕರ ಹಿಡಿತದಿಂದ ಬಿಡುಗಡೆ ಮಾಡಲು ದಿಟ್ಟ ನಿರ್ಧಾರ ತೆಗೆದುಕೊಂಡು ಎಲ್ಲ ಮುನ್ಸಿಪಲ್‌ ಮತ್ತು ತಾಲೂಕ್ ಬೋರ್ಡು ಶಾಲೆಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡಿದ್ದರು. ಆದರೂ ನಮ್ಮ ತಾಲೂಕು ಬೋರ್ಡಿನವರು ಇದ್ದ ಒಂದೆ ಪದವಿಪೂರ್ವ ಕಾಲೇಜನ್ನು ಸರಕಾರಕ್ಕೆ ವಹಿಸಿದ್ದರೂ, ಸೇವೆಯಲ್ಲಿ ಇದ್ದ ನನ್ನ ಅರ್ಹತೆಯನ್ನು ಕಡೆಗಣಿಸಿ ಹೊರಗಿನವರೊಬ್ಬರನ್ನು ಇಂಗ್ಲಿಷ್‌ ಉಪನ್ಯಾಕರನ್ನಾಗಿ ನೇಮಿಸಿದ್ದರು. ವಿಧಿ ಇಲ್ಲದೆ ನಾನು ಇಲಾಖೆಯ ನಿದೇರ್ಶಕರಿಗೆ ನನಗಾದ ಅನ್ಯಾಯ ಸರಿಪಡಿಸದಿದ್ದರೆ ನ್ಯಾಯಾಲಯಕ್ಕೆ ಹೋಗುವುದಾಗಿ ನಿವೇದನೆ ಸಲ್ಲಿಸಿದೆ. ಒಂದೆ ವಾರದಲ್ಲಿ ನನಗೆ ಚಿಕ್ಕಮಗಳೂರು ಜಿಲ್ಲೆಯ ಕಾಲೇಜೊಂದಕ್ಕೆ ಉಪನ್ಯಾಸಕನಾಗಿ ಬಡ್ತಿ ನೀಡಿ ವರ್ಗಾವಣೆಯಾಗಿತ್ತು. ಆದರೆ ಹುದ್ದೆ ಮಾತ್ರ ಉಪನ್ಯಾಸಕ ಎಂದು ವೇತನ ಮತ್ತು ಶ್ರೇಣಿ ಈಗ ಇರುವುದೆ.
ಆಗಿನ ಕಾಲದಲ್ಲಿ ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕುವರು ಎಂಬ ಪ್ರತೀತಿ ಇತ್ತು. ಅದು ಮಲೆನಾಡ ಮೂಲೆ. ನಾನು ನ್ಯಾಯಾಲಯಕ್ಕೆ ಹೋಗುವೆ ಎಂದುದರಿಂದ ಅಲ್ಲಿಗೆ ಹಾಕಿದ್ದಾರೆ ಎಂದು ಕೆಲವರ ವಿಶ್ಲೇಷಣೆ. ನಮ್ಮ ಹೆಡ್‌ಮಾಸ್ಟರ್‌ ಅಂತೂ ಬಿಲ್‌ಕುಲ್‌ ಹೋಗಬೇಡಿ ಎಂದರು. ಅಲ್ಲಿಯೂ ಇಲ್ಲಿಯ ಸಂಬಳ ಮತ್ತೆ ಇಲ್ಲಿ ಸಂಬಳಕ್ಕಿಂತ ಹೆಚ್ಚು ಖಾಸಗಿ ಪಾಠದ ಆದಾಯ. ಮೇಲಾಗಿ ಸ್ವಂತ ಮನೆಯ ವಾಸ. ಕೊಪ್ಪದ ಹತ್ತಿರ ಎಂದರೆ ಮಲೆನಾಡ ಕೊಂಪೆ ಖಂಡಿತ ಬೇಡ ಎಂದರು. ಅವರ ಮಾತೂ ಸತ್ಯವಾಗಿತ್ತು. ಉಪನ್ಯಾಸಕನ ವೇತನ ನೀಡಿದರೂ ಅದು ನನ್ನ ಈಗಿನ ಆದಾಯಕ್ಕಿಂತ ಕಡಿಮೆಯೇ ಆಗುತಿತ್ತು.
ನಾನೂ ಬಹಳ ಯೋಚಿಸಿದೆ. ಕೆಲವರ ಸಲಹೆ ಕೇಳಿದೆ. ನನಗೆ ಉಪನ್ಯಾಸಕನ ವೇತನ ನೀಡುವುದು ಖಚಿತ. ಅಲ್ಲದೆ ಇದು ಪತ್ರಾಂಕಿತ ಅಧಿಕಾರಿಯಯ ಶ್ರೇಣಿ. ಹೆಡ್‌ಮಾಸ್ಟರ್‌ ಗಿಂತ ತುಸು ಹೆಚ್ಚು. ಜತೆಗೆ ಕೆಲಸದ ಹೊರೆಯೂ ಕಡಿಮೆ. ಸಾಮಾಜಿಕ ಅಂತಸ್ತು ಉನ್ನತ. ಒಂದೆ ಅನಾನುಕೂಲವೆಂದರೆ ಸ್ವಂತ ಊರು ಬಿಟ್ಟು ಹೋಗಬೇಕು. ಜತೆಗೆ ರಾಜ್ಯಾದ್ಯಂತ ವರ್ಗಾವಣೆ. ನಿಜ ಮನೆಪಾಠದ ಆದಾಯ ಚೆನ್ನಾಗಿತ್ತು. ಆದರೆ ಅದಕ್ಕೆ ಬೆಳಗೂ ಬೈಗೂ ಮೈಬಗ್ಗಿಸಿ ದುಡಿಯಲೇಬೇಕು. ಅದು ಹೇಳಿಕೇಳಿ ನಾಯಿ ತಲೆಯ ಮೇಲಿನ ಬುತ್ತಿ. ನಾನೆ ಬಿಡಬಹುದು. ಇಲ್ಲವೆ ಇಲಾಖೆಯವರೆ ತಡೆಯಬಹುದು. ಹೋಗುವುದೆ ಸರಿ ಎಂದುಕೊಂಡೆ. ನನಗೆ ಸೇರಲು ೧೫ ದಿನ ಗಡುವು ಇತ್ತು. ಆಗಲೆ ಗಣೇಶ ಚೌತಿ ಬಂದಿತ್ತು. ಹಬ್ಬ ಎಂದು ಉಳಿದರೆ ಕೊನೆ ದಿನಾಂಕ ಮುಗಿಯುತಿತ್ತು. ನಮ್ಮ ಅಮ್ಮ ಕೆಲವು ವಿಷಯದಲ್ಲಿ ನ್ಯಾಯನಿಷ್ಠುರಿ. ಹಬ್ಬ ಪ್ರತಿವರ್ಷ ಬರುತ್ತದೆ. ಆದರೆ ಅವಕಾಶ ಮತ್ತೆ ಬಾರದು. ಆದ್ದರಿಂದ ಹಿಂದು ಮುಂದು ನೋಡದೆ ಹೊರಡು ಅಂದಳು. ಸೂಟ್‌ಕೇಸ್‌, ಹೋಲ್ಡಾಲು, ಸೊಳ್ಳೆಪರದೆ ಸಮೇತ ಹೊರಟೆ.
ಬೆಳಂಬೆಳಗ್ಗೆ ಬಿಟ್ಟರೆ ಶಿವಮೊಗ್ಗಕ್ಕೆ ಹೋಗಿ ಬಸ್ಸು ಬದಲಿಸಿ ಆ ಊರು ತಲುಪುದಾಗ ಸಂಜೆ ಐದೂವರೆ. ಅದು ಭದ್ರಾ ಜಲಾಶಯದ ಹಿನ್ನೀರಿನ ದಡದಲ್ಲಿದ್ದ ಗ್ರಾಮ. ತಾಲೂಕು ಕೇಂದ್ರ ಆದರೂ ಚಿಕ್ಕದೆ. ಕಿಲೋಮೀಟರ್‌ ಉದ್ದದ ಒಂದೆ ನೇರ ಬೀದಿ ಅದರ ಅಕ್ಕ ಪಕ್ಕದಲ್ಲೆ ಮನೆಗಳು. ವಸತಿ ಗೃಹಗಳೂ ಇಲ್ಲ. ಐಬಿ ಊರ ಹೊರಗೆ. ಸುಮಾರು ದೂರ. ಕಾಲೇಜು ಹತ್ತಿರದಲ್ಲೆ ಇತ್ತು. ಹಳೆಯ ಕಾಲೇಜು. ದೊಡ್ಡದಾಗಿಯೆ ಇತ್ತು. ಆಗಲೆ ಎಲ್ಲ ಹೊರಟಾಗಿತ್ತು. ಜವಾನ ಕಸ ಗುಡಿಸುತಿದ್ದ. ಅಲ್ಲಿ ನನ್ನ ಸಾಮಾನು ಇಟ್ಟು ಪ್ರಿನ್ಸಿಪಾಲರ ಮನೆ ವಿಚಾರಿಸಿಕೊಂಡು ಅವರನ್ನು ಕಾಣಲು ಹೋದೆ. ಅವರ ದರ್ಶನವಾಗಲಿಲ್ಲ. ಮಾರನೆ ದಿನ ಹತ್ತು ಗಂಟೆಗೆ ಕಾಲೇಜಿನಲ್ಲಿ ಕಾಣಬಹುದೆಂದು ತಿಳಿಸಲಾಯಿತು. ನನಗೆ ಮನಸ್ಸು ಪಿಚ್ಚೆಂದಿತು. ಕಾಲೇಜಿಗೆ ಬಂದಾಗ ಜವಾನ ಸ್ಟಾಫ್‌ ರೂಂ ಬಾಗಿಲು ತೆರೆದು ಕೊಟ್ಟ. ಅಲ್ಲೆ ಠಿಕಾಣಿ ಹೂಡಿದೆ. ನವಂಬರ್‌ ತಿಂಗಳು ಬೇಗ ಕತ್ತಲಾಯಿತು. ಸುತ್ತಲೂ ದಟ್ಟ ಕಾಡು. ಝೀ ಎಂದು ಸದ್ದು ಮಾಡುವ ಜೀರುಂಡೆಗಳು. ಒಂದುಕ್ಷಣ ಮನ ಅಳುಕಿತು. ಗುರ್ತು ಇಲ್ಲ, ಪರಿಚಯವಿಲ್ಲ. ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟಂತೆ ಆಗಿದೆ. ಜನಸಂಚಾರವೂ ಇಲ್ಲ. ನೀರಲ್ಲಿ ಬಿದ್ದಾಗಿದೆ. ಈಜಲೇಬೇಕು. ಊರಿನಿಂದ ತಂದ ಬುತ್ತಿ ಹೇಗಿದ್ದರೂ ಇತ್ತು. ಅದನ್ನು ಬಿಚ್ಚಿ ಚಪಾತಿ ತಿಂದೆ. ದೊಡ್ಡ ಮೇಜಿನ ಮೇಲೆ ಹಾಸಿಗೆ ಹಾಕಿ ಪರದೆಯನ್ನೂ ಕಟ್ಟಿಕೊಂಡೆ ಮಲೆನಾಡಿನ ಸೊಳ್ಳೆಗಳ ಬಗ್ಗೆ ಮೊದಲೆ ಮಾಹಿತಿ ಇತ್ತು. ಮಲೇರಿಯಾ ಆದರೆ ಮುಗಿಯಿತು ತಿಂಗಳುಗಟ್ಟಲೆ ಜ್ವರ. ಹೊಟ್ಟೆಯಲ್ಲಿ ಗಡ್ಡೆಯಾದರಂತೂ ಮುಗಿಯಿತು. ಅದಕ್ಕೆ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೆ. ಫುಲ್‌ತೋಳು ಸ್ವೆಟರ್‌ ತಲೆಗೆ ಮಫ್ಲರ್‌ ಸುತ್ತಿ ಮಲಗಲು ಸಿದ್ಧನಾದಾಗ ಯಾರೋ ಇಬ್ಬರು ಮೂವರು ಬಂದರು. ಅವರು ಕಾಲೇಜಿನ ನೌಕರರು.
ಬಯಲುಸೀಮೆಯಿಂದ ಇಂಗ್ಲಿಷ್‌ ಉಪನ್ಯಾಸಕ ಬರುವನೆಂಬ ವಿಷಯ ಅವರಿಗೆ ತಿಳಿದಿತ್ತು. ನಾನು ಬಂದ ಸುದ್ದಿ ಮುಟ್ಟಿದಾಗ ನೋಡಲು ಬಂದಿದ್ದರು. ನಾನು ನೆಮ್ಮದಿಯಾಗಿ ಮಲಗಲು ಸಿದ್ಧನಾಗಿರುವುದು ಅವರಿಗೆ ತುಸು ಅಚ್ಚರಿ ತಂದಿತು. ಅದೂ ಇದೂ ಮಾತನಾಡಿ ಬ್ರಹ್ಮಚಾರಿಗಳು ಸೇರಿ ಒಂದು ಮನೆ ಮಾಡಿಕೊಂಡಿರುವುದಾಗಿಯೂ ಅಲ್ಲಿಗೆ ಬರಬಹುದೆಂದು ತಿಳಿಸಿದರು. ಹೇಗಿದ್ದರೂ ಹಾಸಿಗೆ ಹಾಸಿಯಾಗಿತ್ತು. ಮಾರನೆ ದಿನ ಬರುವೆನೆಂದು ತಿಳಿಸಿ ಅವರ ಕಾಳಜಿಗೆ ವಂದಿಸಿದೆ. ಇದೆ ಮೊದಲ ಬಾರಿಗೆ ನಾನು ಮನೆ ಬಿಟ್ಟು ಹೊರ ಬಂದಿರುವುದು. ಅದೂ ಕಾಡ ನಡುವೆ ಇರುವ ಊರಿಗೆ. ಆಗಲೆ ಒಂಟಿತನದ ಅಸಹಾಯಕತೆ ಅರಿವಿಗೆ ಬಂದಿತು. ಈ ಅನುಭವದಿಂದ ಮುಂದೆ ನಾನು ಪ್ರಿನ್ಸಿಪಾಲನಾದಾಗ ಯಾರೆ ಹೊಸಬರು ಬರುವರೆಂದು ಗೊತ್ತಾದ ಕೂಡಲೆ ಅವರು ನೆಮ್ಮದಿಯಾಗಿ ನೆಲಸಲು ವ್ಯವಸ್ಥೆ ಮಾಡುತಿದ್ದೆ.
ಬೆಳಗಾದ ಮೇಲೆ ಅಲ್ಲಿನ ಹಸಿರು ಮುರಿಯುವ ಸಸ್ಯರಾಶಿ ನೋಡಿ ದಂಗಾದೆ. ಬೇವು, ಹುಣಿಸೆ ಮತ್ತು ಜಾಲಿಮರ ಮಾತ್ರ ನೋಡಿದ್ದ ನನಗೆ ಎಲ್ಲ ಕಡೆ ತಲೆಎತ್ತಿ ನೋಡಿದರೂ ತುದಿಕಾಣದ ಮರಗಳು ಕಣ್ಣಿಗೆ ಹಬ್ಬವೆನಿಸಿದವು. ಮಾರನೆ ದಿನ ಪ್ರಾರ್ಥನೆಯಲ್ಲಿ ನನ್ನ ಪರಿಚಯ ಮಾಡಿಕೊಡಲಾಯಿತು. ಪ್ರಾಂಶುಪಾಲರು ಹಿರಿಯರು. ಅವರದೂ ಇಂಗ್ಲಿಷ್‌ ಎಂಎ. ಶಿಸ್ತಿನ ಶಿಪಾಯಿ. ಹೆಚ್ಚು ಮಾತು ಇಲ್ಲ. ಅಲ್ಲಿನ ಸಿಬ್ಬಂದಿಗೆ ಅವರೊಡನೆ ಮುಖವಿಟ್ಟು ಮಾತನಾಡಲೂ ಹಿಂಜರಿಕೆ. ಏನೆ ಮಾತಿದ್ದರೂ ಗುಮಾಸ್ತರ ಮೂಲಕ. ಮೊದಲ ದಿನವೆ ನನಗೆ ವೇಳಾಪಟ್ಟಿ ನೀಡಿದರು. ಅವರ ಎಲ್ಲ ತರಗತಿಗಳನ್ನೂ ನನಗೆ ವಹಿಸಲಾಗಿತ್ತು. ನಾನು ಅವರನ್ನು ಭೇಟಿ ಮಾಡಿ, ನಾನು ಹೊಸಬ ಮಾರ್ಗದರ್ಶನ ನೀಡಿ ಎಂದು ಕೋರಿದೆ. ನೀವು ಸ್ನಾತಕೋತ್ತರ ಪದವೀಧರರು. ಇಲಾಖೆ ನಿಮ್ಮನ್ನು ಇಂಗ್ಲಿಷ್‌ ಉಪನ್ಯಾಸಕರೆಂದು ನೇಮಿಸಿದೆ, ಕಾರ್ಯ ನಿರ್ವಹಿಸಿ ಎಂದರು. ಕೆಲವು ದಿನ ತಮ್ಮ ಪಾಠವನ್ನು ಗಮನಿಸುವೆ, ಅನುಮತಿ ಕೊಡಿ ಎಂದೆ. ಅದು ಅಗತ್ಯವಿಲ್ಲ. ಒಬ್ಬರು ಮಾಡಿದಂತೆ ಇನ್ನೊಬ್ಬರು ಪಾಠ ಮಾಡಬೇಕಿಲ್ಲ. ನಿಮ್ಮದೆ ಶೈಲಿ ರೂಢಿಸಿಕೊಳ್ಳಿ ಎಂದರು. ಆಗ ನನಗೆ ತುಸು ಮುಜುಗರವಾದರೂ ಅವರ ನಿಲುವು ಸರಿಯಾದದ್ದು ಎಂದು ಸಾವಧಾನವಾಗಿ ಅರಿವಿಗೆ ಬಂದಿತು. ಹೊಸದಾಗಿ ನಡೆಯುವವರು ಕೈಗೋಲಿನ ಆಸರೆ ಬಯಸಬಾರದು ಎದ್ದೂ ಬಿದ್ದೂ ಸ್ವತಃ ನಡೆಯಲು ಕಲಿಯಲೆ ಬೇಕು.
ಹೊಸ ವಾತಾವರಣ ಸಾವಕಾಶವಾಗಿ ಹೊಂದಿಕೆಯಾಗತೊಡಗಿತು. ಅದು ಸಂಯುಕ್ತ ಪದವಿ ಪೂರ್ವಕಾಲೇಜು. ಎಂಟು ನೂರುಕ್ಕೂ ಮಿಕ್ಕಿ ಮಕ್ಕಳು. ಪಿಯುಸಿಯಲ್ಲೆ ಇನ್ನೂರಕ್ಕೂ ಹೆಚ್ಚು ಹತ್ತಾರು ಉಪನ್ಯಾಸಕರು ಮತ್ತು ಇಪ್ಪತ್ತಕ್ಕೂ ಹೆಚ್ಚು ಶಿಕ್ಷಕರು ಇದ್ದರು. ಅಲ್ಲಿನ ಒಂದು ವಿಶೇಷ ಗಮನಿಸಿದೆ. ಅಲ್ಲಿ ಯಾರನ್ನೂ ಹೆಸರು ಹಿಡಿದು ಕರೆಯುವ ಪದ್ಧತಿ ಇಲ್ಲ. ಬರಿ ಇನಷಿಯಲ್‌ಗಳೆ ರಾಮರಾವ್- ಆರ್‌ಆರ್‌ ಆದರೆ, ಕೆ. ಲಕ್ಷ್ಮಿದೇವಿ- ಕೆ.ಎಲ್‌. ನನಗಂತೂ ಅವರನ್ನು ಗುರುತಿಸಲು ತಿಂಗಳುಗಳೇ ಬೇಕಾಯಿತು. ನನ್ನ ಗಮನ ಸೆಳೆದದ್ದು ಕಾರಿಡಾರ್‌ ನಲ್ಲಿ ಕಂಬಕ್ಕೆ ಉದ್ದಕ್ಕೆ ಬಿಗಿದಿದ್ದ ಕೋಲುಗಳು ಮತ್ತು ಅವುಗಳಿಗೆ ನೇತು ಹಾಕಿದ್ದ ಛತ್ರಿಗಳು. ನಮ್ಮಲ್ಲಿ ಕೊಡೆ ಎಂದರೆ ಬಹು ಅಪರೂಪದ್ದು. ಆದರೆ ಇಲ್ಲ ಪ್ರತಿಯೊಬ್ಬರೂ ಛತ್ರ ಪತಿಗಳೆ. ಹುಡುಗಿಯರೂ ಬಣ್ಣ ಬಣ್ಣದ ಛತ್ರಧಾರಿಗಳೆ. ಅಷ್ಟೆ ಅಲ್ಲ, ಒಂದು ಕೋಣೆಯಲ್ಲಿ ಅಗ್ಗಿಷ್ಟಕ ಇರುವುದು ಕಂಡಿತು. ಅಲ್ಲಿ ಚಳಿಗಾಲದಲ್ಲಿ ಬೆಂಕಿಹಾಕಿ ಕಾಯಿಸಿಕೊಳ್ಳಲು ಅನುವು ಮಾಡಿರುವರು. ನಮ್ಮಲ್ಲಿ ಮನೆಗೊಂದು ಕೊಡೆ ಇರುವದೂ ಅನುಮಾನ. ಆದರೆ ಅಲ್ಲಿ ತಲೆಗೊಂದು ಕೊಡೆ. ಕಾರಣ ಅಲ್ಲಿನ ದಟ್ಟ ಮಳೆ ಜೂನ್‌ ಏಳರಂದು ಶುರುವಾದದ್ದು ನವಂಬರ್‌ ಕೊನೆಯವರೆಗೆ ತೆರಪಿಲ್ಲದೆ ಬರುವುದು. ಅದಕ್ಕೆಂದೆ ಮೃಗಶಿರಾ ನಕ್ಷತ್ರ ಬಂದಾಗ ದೊಡ್ಡಹಬ್ಬ. ವಿಶೇಷವಾಗಿ ಮುರ್ಗಿ ಹಬ್ಬವೆಂದೆ ಹೆಸರುವಾಸಿ. ರೈತರು ಅಂದು ಕೋಳಿ ಕೊಯ್ಯುವುದರಿಂದ ಮುರುಗಿ ಹಬ್ಬ ಎಂಬ ಹೆಸರು ಬಂದಿದೆ ಎಂದು ಮೊದಮೊದಲಲ್ಲಿ ಅಂದುಕೊಂಡಿದ್ದೆ.
ಅಲ್ಲಿನ ಉಪನ್ಯಾಸಕರ ಉಡುಪು ನೋಡಿ ನಾನು ದಂಗಾದೆ. ಎಲ್ಲರೂ ಸೂಟು ಬೂಟುಧಾರಿಗಳೆ. ಕೋಟು ಹಾಕದಿದ್ದರೆ ಇನಸರ್ಟ್ ಮಾಡಿ ಟೈ ಕಟ್ಟಿ ಥಳ ಥಳ ಹೊಳೆವ ಬೂಟು ಧರಿಸಿ ಬರುವರು. ಪ್ಯಾಂಟು ಬುಷ್‌ ಷರ್ಟ್ ಹಾಕಿದ್ದ ನನ್ನನ್ನು ನೋಡಿ ಅವರಿಗೆ ತುಸು ಹೇವರಿಕೆ. ಹುದ್ದೆಯ ಘನತೆಗೆ ತಕ್ಕಂತೆ ಉಡುಪಿರಬೇಕೆಂದು ಅಲ್ಲಿನ ಅಲಿಖಿತ ನಿಯಮ. ನನಗೆ ಅದನ್ನು ಸೂಚ್ಯವಾಗಿ ತಿಳಿಸಿದರು. ನಾನು ಪ್ರಾಂಶುಪಾಲರು ಅಡ್ಡ ಪಂಚೆ ಅರ್ಧ ತೋಳಿನ ಅಂಗಿ ಧರಿಸಿ ಬರುವರಲ್ಲ, ಅದು ಹೇಗೆ ಎಂದು ಪಶ್ನಿಸಿದಾಗ ಗಾಬರಿಯಾದರು. ಅವರ ಪ್ರಕಾರ ಸಂಸ್ಥೆಯ ಮುಖ್ಯಸ್ಥರು ಪ್ರಶ್ನಾತೀತರು. ಮುಕ್ತ ವಾತಾವರಣದಿಂದ ಬಂದಿದ್ದ ನನಗೆ ಆ ಸೂಕ್ಷ್ಮ ಅರ್ಥವೆ ಆಗಲಿಲ್ಲ. ಶಿಕ್ಷಕರ ಸಭೆಯಲ್ಲೂ ಬಿಗುವಿನ ವಾತಾವರಣ ಎದ್ದು ಕಾಣುತಿತ್ತು. ಅಲ್ಲಿ ಎಲ್ಲ ಏಕಮುಖ. ಅವರು ಹೇಳುವುದು. ಉಳಿದವರು ಕೇಳುವದು. ನಾನು ಹೋಗಿ ಎರಡು ತಿಂಗಳಾದರೂ ವೇತನವಾಗಿರಲಿಲ್ಲ. ಅದನ್ನು ನಾನು ಸಭೆಯಲ್ಲಿ ಆ ವಿಷಯ ಕೇಳಿದಾಗ ಎಲ್ಲರಿಗೂ ಅಚ್ಚರಿ. ಹೊಸದಾಗಿ ಬಂದವ ಪ್ರಿನ್ಸಿಪಾಲರನ್ನೆ ಪ್ರಶ್ನಿಸುವನಲ್ಲ ಎಂದು. ಇನ್ನೊಂದು ಸಲ ನಾನು ಏನೋ ವಿವರಣೆ ಕೇಳಿದಾಗ ಪ್ರಾಂಶುಪಾಲರು, ಗಂಭೀರವಾಗಿ ಇಷ್ಟೆಲ್ಲ ಮಾತನಾಡುವ ನೀವು ಎಂತಹ ಕೆಲಸ ಮಾಡಿರುವಿರಿ ಗೊತ್ತೆ ಎಂದು ಕೇಳಿದರು. ಎಲ್ಲರೂ ಕುತೂಹಲದಿಂದ ಕಣ್ಣುಕಣ್ಣು ಬಿಟ್ಟರು. ನೀವು ರಸೀದಿಗೆ ಸಹಿ ಮಾಡದೆ ಕೊಟ್ಟಿರುವಿರಿ ಎಂದರು. ಅಲ್ಲಿ ಶಾಲಾ ಶುಲ್ಕವನ್ನು ತಿಂಗಳ ನಿಗದಿಯಾದ ದಿನಾಂಕದಂದು ಮೊದಲ ಅವಧಿಗೆ ಹೋದವರು ವಿದ್ಯಾರ್ಥಿಗಳಿಂದ ಹಣ ಪಡೆದು ಅವರಿಗೆ ರಸೀತಿ ನೀಡಿ ಹಣದ ಲೆಕ್ಕವನ್ನು ಕಚೇರಿಗೆ ಕೊಡಬೇಕಿತ್ತು. ನನಗೂ ಒಂದು ತರಗತಿ ವಹಿಸಿದ್ದರು. ಅದು ನನಗೆ ಹೊಸ ಕೆಲಸ. ನಾನು ಗಡಿಬಿಡಿಯಲ್ಲಿ ಕೆಲ ಮಕ್ಕಳಿಗೆ ಕೊಟ್ಟ ರಸೀತಿಗೆ ಸಹಿ ಮಾಡಿರಲಿಲ್ಲ. ನಾನು ಎದ್ದುನಿಂತು ಹೇಳಿದೆ. ಈ ಕೆಲಸ ನನಗೆ ಹೊಸತು. ಗೊತ್ತಿಲ್ಲದೆ ಇರುವುದರಿಂದ ಕಣ್‌ತಪ್ಪಿನಿಂದ ದೋಷವಾಗಿರಬಹುದು. ನಾನು ವಸೂಲಿಯಾದ ಹಣವನ್ನು ತಿಂದುಹಾಕಿಲ್ಲ. ಅದನ್ನು ತಿಳಿಸಿ ಹೇಳುವದು ಕಚೇರಿಯವರ ಕರ್ತವ್ಯ. ಅದನ್ನೆ ದೊಡ್ಡ ಅಪರಾಧವೆಂದು ಬಿಂಬಿಸಿದರೆ ಹೇಗೆ ಎಂದೆ.
ಎಲ್ಲರೂ ಗರಬಡಿದವರಂತೆ ಕೂತರು. ಅಷ್ಟರಲ್ಲೆ ಒಬ್ಬರು, `ಏನು ಎಚ್‌ಎಸ್‌ಆರ್ ತುಸುವೂ ಭಯ ಭೀತಿ ಇಲ್ಲದೆ ಪ್ರಾಂಶುಪಾಲರೆದುರೇ ಹೀಗೆ ಮಾತನಾಡುವುದೇ?’ ಎಂದು ಸೇರಿಸಿದರು.
ನಾನು `ಏನು ಸ್ವಾಮಿ ಪ್ರಾಂಶುಪಾಲರೇನು, ಹುಲಿಯೇ, ಕರಡಿಯೇ ಭಯಪಡಲು?’ ಎಂದೆ. ಎಲ್ಲ ಕಡೆ ಮೌನ ಆವರಿಸಿತು.
ಕಾಲೇಜು ಮೊದಲು ತಾಲೂಕು ಬೋರ್ಡಿನದು. ಅಲ್ಲಿರುವವರೆಲ್ಲ ಸ್ಥಳೀಯರೆ ಹೆಚ್ಚು. ಹತ್ತಾರು ವರ್ಷದಿಂದ ಮನೆ ಜಮೀನು ಮಾಡಿಕೊಂಡು ಅಲ್ಲೆ ತಳ ಊರಿದ್ದಾರೆ. ಈಗ ಸರ್ಕಾರಕ್ಕೆ ಸೇರಿದ್ದರಿಂದ ಎಲ್ಲಿ ವರ್ಗ ಮಾಡಿಸುವರೋ ಎಂಬ ಭಯ. ಅದಕ್ಕೆ ಅಷ್ಟು ತಗ್ಗಿ ಬಗ್ಗಿ ನಡೆಯುವರು. ನಾನೋ ನಮ್ಮ ಊರು ಬಿಟ್ಟು ನಾನೂರು ಮೈಲು ದೂರ ಬಂದಿರುವೆ. ಮೊದಲಿನಿಂದ ಅರಸರ ಅಂಕೆ, ದೆವ್ವದ ಕಾಟ ಅರಿಯದ ಅಲಕ್‌ನಿರಂಜನ್‌ ಎಂಬ ಪ್ರವೃತ್ತಿಯವ. ನನ್ನ ಕರ್ತವ್ಯ ಪ್ರಾಮಾಣಿಕವಾಗಿ ಮಾಡಿದರೆ ಮುಗಿಯಿತು ಎಂದುಕೊಂಡವ. ಹೀಗಾಗಿ ನನ್ನ ನೇರ ನಡೆ, ದಿಟ್ಟ ನುಡಿ ಕೆಲವೆ ದಿನಗಳಲ್ಲಿ ಹಲವರ ಅಭಿಮಾನ ಗಳಿಸಿಕೊಟ್ಟಿತು. ಶಿಕ್ಷಕರ ಸಭೆಯಲ್ಲಿ ಅರ್ಥಪೂರ್ಣ ಸಂವಹನ ಸಾಧ್ಯವಾಯಿತು. ಅಂತೂ ಬಿರು ಬಿಸುಲಿನ ಬಳ್ಳಾರಿ ಜಿಲ್ಲೆಯ ನಾನು ಕೊರೆವ ಚಳಿಯ, ಜಡಿ ಮಳೆಯ ಮಲೆನಾಡ ಮಡಿಲಲ್ಲಿ ನೆಲೆಗೊಂಡೆ.


ಧಾರವಾಡದಲ್ಲಿ ದಮ್ಮು ಹಿಡಿದು ಓದಿದ್ದು


http://kendasampige.com/images/trans.gif
ಬಿಎಡ್‌ ಫಲಿತಾಂಶ ಬಂದು ಹತ್ತು ದಿನ ಆಗಿರಬಹುದು. ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪತ್ರ ಬಂದಿತು. ನನಗೆ ಬಿಎಡ್‌ನಲ್ಲಿ Rank ಬಂದಿರುವುದರಿಂದ ಯುನಿವರ್ಸಿಟಿ ಶಿಕ್ಷಣ ಕಾಲೇಜಿನಲ್ಲಿ ಎಂಎಡ್‌ ಕೋರ್ಸಿಗೆ ವಿದ್ಯಾರ್ಥಿವೇತನ ನೀಡಿ ನಿಯುಕ್ತಿಯಾಗಿತ್ತು. ಖರ್ಚುವೆಚ್ಚ ಎಲ್ಲ ಸರ್ಕಾರದ್ದೆ. ಬಹಳ ಖುಷಿಯಾಯಿತು. ಧಾರವಾಡಕ್ಕೆ ಹೋಗಿ ಕಾಲೇಜಿನಲ್ಲಿ ವಿಚಾರಿಸಿದೆ. ಕಾಲೇಜು ಶುಲ್ಕ ಹಾಸ್ಟೆಲ್‌ ವೆಚ್ಚ ಜತೆಗೆ ಕೈಗೆ ತುಸು ಹಣವೂ ಸಿಗುತಿತ್ತು. ಒಂಬತ್ತು ತಿಂಗಳು ಧಾರವಾಡದಲ್ಲೆ ಇರಬೇಕಿತ್ತು. ಇಲಾಖೆಯಲ್ಲಿ ವಿಚಾರಿಸಿದಾಗ ಹೈಸ್ಕೂಲು ಶಿಕ್ಷಕರಿಗೆ ಬಿಎಡ್‌ ಪದವಿ ಅಗತ್ಯ ಆದರೆ ಎಂಎಡ್‌ ಬೇಕಿಲ್ಲ. ಆದ್ದರಿಂದ ರಜೆ ನೀಡಲಾಗುವುದಿಲ್ಲ. ಬೇಕೆಂದರೆ ವೇತನ ರಹಿತ ರಜೆ ಪಡೆದು ಹೋಗಬಹುದು, ಎಂದರು. ಆದರೆ ಬರುವ ಸಂಬಳ ಬಿಟ್ಟು ಹೋಗುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅದಲ್ಲದೆ ಹೊಸದಾಗಿ ಮದುವೆಯಾಗಿತ್ತು. ಈಗಾಗಲೆ ಒಂದು ವರ್ಷ ಬಿ.ಎಡ್‌ಗಾಗಿ ಬಳ್ಳಾರಿಗೆ ಹೋಗಿ ವಿರಹದ ಬೇಗೆ ಅನುಭವಿಸಿದ್ದೆ. ಆದ್ದರಿಂದ ಈ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಹಿರಿಯರೊಬ್ಬರು ಎಂ.ಎಡ್‌ ಮಾಡಿದರೆ ಅಂತಹ ಅವಕಾಶವೇನೂ ಇಲ್ಲ. ಎಂಎ ಮಾಡಿದರೆ ಎರಡು ವಾರ್ಷಿಕ ಬಡ್ತಿ ಕೊಡುವರು ಎಂದರು. ಅದೂ ಪಾಠ ಮಾಡುವ ವಿಷಯದಲ್ಲೆ ಸ್ನಾತಕೋತ್ತರ ಪದವಿ ಪಡೆಯಬೇಕಿತ್ತು. ನಾನು ವಿಜ್ಞಾನದ ಪದವೀಧರ. ಬಾಹ್ಯವಾಗಿ ಎಂಎಸ್ಸಿ ಮಾಡುವ ಅವಕಾಶ ಆಗಿನ್ನೂ ಇರಲಿಲ್ಲ. ಅದಕ್ಕೆಂದೆ ಇಂಗ್ಲಿಷ್‌ ಎಂಎ ಆಯ್ದುಕೊಂಡೆ. ಕರ್ನಾಟಕ ವಿಶ್ವ ವಿದ್ಯಾಲಯದ ಪ್ರಸ್ಪೆಕ್ಟಸ್‌ ನೋಡಿದಾಗ ಪಠ್ಯ ವಿಷಯಗಳು ಬಹುತೇಕ ನಾನು ಓದಿದ ಪುಸ್ತಕಗಳೆ ಆಗಿದ್ದವು. ಒಂದು ರೀತಿಯಲ್ಲಿ ಧೈರ್ಯ ಬಂದಿತು. ನಂತರ ಗೊತ್ತಾಯಿತು. ಆ ಕಾಲದಲ್ಲಿ ಇಂಗ್ಲಿಷ್‌ ಸ್ನಾತಕೋತ್ತರ ಪದವೀಧರರ ಕೊರತೆ ಬಹಳ ಇತ್ತು. ನಮ್ಮ ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಎಲ್ಲ ಇಂಗ್ಲಿಷ್‌ ಪ್ರಾಧ್ಯಾಪಕರೂ ಕೇರಳದವರೆ. ಇನ್ನು ಪದವಿ ಪೂರ್ವ ಕಾಲೇಜುಗಳಲ್ಲಂತೂ ಖಾಲಿಖಾಲಿ. ಒಳ್ಳೆಯ ಅವಕಾಶವಿದೆ ಎಂದು ಅನೇಕರು ಇಂಗ್ಲಿಷ್‌ ಎಂಎ ಮಾಡಲು ನೋಂದಾವಣಿ ಮಾಡಿಸಿದ್ದರು.
ನಮ್ಮ ಸುತ್ತಮುತ್ತಲಿನವರೆ ನಾಲಕ್ಕು ಜನರಿದ್ದೆವು. ಅವರು ಪ್ರತಿವಾರ ಬಳ್ಳಾರಿಗೆ ಹೋಗಿ ಅಲ್ಲಿ ಪ್ರೊ. ಶೇಷಾದ್ರಿ ಅವರಿಂದ ಮಾರ್ಗದರ್ಶನ ಪಡೆಯುತಿದ್ದರು. ಶೇಷಾದ್ರಿಯವರು ಹಿಂದುಳಿದ ಬಡ ಕುಟುಂಬದವರು. ಪದವಿಯಾದೊಡನೆ ಕರ್ನಾಟಕ ವಿದ್ಯುತ್‌ ಮಂಡಲಿಯಲ್ಲಿ ಉದ್ಯೋಗಿಯಾದರೂ. ಅವರು ಬಹಳ ಪರಿಶ್ರಮಿ. ಬಾಹ್ಯವಾಗಿಯೆ ಇಂಗ್ಲಿಷ್‌ ಎಂಎ ಮಾಡಿಕೊಂಡರು. ನಂತರ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದರು. ಅವರು ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಕಾರಣ ಜನಜೀವನಕ್ಕೆ ಹಣಕಾಸು ಹತ್ತಿರವಾದ ವಿಷಯ. ಅವರ ತರಗತಿ ಎಂದರೆ ಗ್ರಾಮೀಣ ಅಭಿವೃದ್ಧಿಯ ಮುನ್ನೋಟವಾಗಿರುತಿತ್ತು. ಅವರು ಉತ್ತಮ ಶಿಕ್ಷಕರೆಂದು ಹೆಸರುವಾಸಿ. ಅವರ ಸಾಮಾಜಿಕ ಕಳಿಕಳಿ ಮೆಚ್ಚುವಂತಹದು. ತಾವು ಹೇಗೆ ಉನ್ನತ ಶಿಕ್ಷಣ ಪಡೆಯಲು ಕಷ್ಟಪಟ್ಟರು ಎಂಬದು ಅವರ ನೆನಪಲ್ಲಿ ಅಚ್ಚಳಿಯದೆ ಉಳಿದಿತ್ತು. ಅದಕ್ಕೆಂದೆ ಯಾರೆ ಇಂಗ್ಲಿಷ್ ಎಂಎ ಮಾಡಲು ಮುಂದಾದರೆ ಅವರಿಗೆ ಉಚಿತ ಮಾರ್ಗದರ್ಶನ ಮಾಡುವರು. ಬಳ್ಳಾರಿಯ ಅವರ ಮನೆಯಲ್ಲಿ ರಜಾ ದಿನಗಳಂದು ಈ ರೀತಿಯ ಶಿಕ್ಷಣಾಸಕ್ತರು ಸೇರುತಿದ್ದರು. ನಾನೂ ಅವರ ಜತೆ ಒಂದಾದೆ. ಸುಮಾರು ೧೯ ಜನರಿದ್ದೆವು, ಅದರಲ್ಲಿ ಶಿಕ್ಷಕರು ಅರ್ಧ ಜನರಾದರೆ ಉಳಿದವರು ಅದೆ ಪದವಿ ಮುಗಿಸಿದವರು. ಅವರಿಗೆ ಇಂಗ್ಲಿಷ್ ಪ್ರಧಾನ ವಿಷಯವಾಗಿರದೆ ಇರುವುದರಿಂದ ಎಂಎಗೆ ನೇರ ಪ್ರವೇಶ ಸಿಗುತ್ತಿರಲಿಲ್ಲ. ಅದಕ್ಕೆ ಖಾಸಗಿಯಾಗಿ ಅಭ್ಯಾಸ ಮಾಡಲು ಬರುತ್ತಿದ್ದರು.
ಅವರು ಪ್ರಚಂಡ ವಾಗ್ಮಿ. ಜೋಗದ ಜಲಪಾತದಂತೆ ಅವರ ವಾಗ್ಝರಿ. ಜತೆಗೆ ವಿಚಾರವಾದಿ. ಕಂದಾಚಾರ ಮೂಢನಂಬಿಕೆಗಳ ವಿರೋಧಿ. ಯುವಜನರಲ್ಲಿ ಅವರು ಮಾತು ಬೆಲ್ಲದ ಅಚ್ಚು. ಅವರ ಪ್ರಭಾವ ಜಿಲ್ಲೆಯಲ್ಲಿ ಬಹಳವಾಗಿತ್ತು. ಯಾವುದೆ ಸಮಾರಂಭಕ್ಕೂ ಅವರು ಕಳಶ ಪ್ರಾಯ. ಅವರು ನಿತ್ಯ ವಿದ್ಯಾರ್ಥಿ. ನಮಗೆಲ್ಲ ಮಾರ್ಗದರ್ಶನ ನೀಡಲು ಅಧ್ಯಯನ ಮಾಡಿ ಸತತ ನಾಲಕ್ಕು ತಾಸು ಪಾಠ ಮಾಡುತಿದ್ದರು. ಅವರ ತರಗತಿಗಳನ್ನು ತಪ್ಪಿಸಿಕೊಂಡರೆ ಏನೋ ಕಳೆದುಕೊಂಡ ಅನುಭವ. ನಾವು ಕೆಲವರು ನಲವತ್ತು-ಐವತ್ತು ಮೈಲು ದೂರದಿಂದ ಅವರ ಪಾಠ ಕೇಳಲು ಹೋಗುತ್ತಲಿದ್ದೆವು. ಕಾರಣ ಇಂಗ್ಲಿಷ್ ಮತ್ತು ಅರ್ಥಶಾಸ್ತ್ರ ಎರಡೂ ವಿಷಯಗಳಲ್ಲೂ ನಿಷ್ಣಾತರು. ಸ್ನಾತಕೋತ್ತರ ಪದವಿ ಪಡೆಯುವುದು ಆ ಕಾಲದಲ್ಲಿ ಬಹಳ ಕಠಿಣವಾಗಿತ್ತು. ಪ್ರಥಮ ದರ್ಜೆ ಬಂದರೆ Rank ಬಂದಂತೆ. ಎಷ್ಟೋ ಸಲ ಬರಿ ದ್ವಿತೀಯ ದರ್ಜೆ ಬಂದರೂ ಸಾಕಿತ್ತು ಆದರೆ ಬಹಳ ಜನರಿಗೆ ಅದೂ ಬರುತ್ತಿರಲಿಲ್ಲ. ವಿಶೇಷವಾಗಿ ಪದವಿ ಪೂರ್ವಕಾಲೇಜುಗಳಲ್ಲಿ ಪಾಸಾದವರು ಸಿಕ್ಕರೂ ಸಾಕು ಎನ್ನುವ ಪರಿಸ್ಥಿತಿ ಇತ್ತು.
ಅವರ ಪ್ರಖರ ಬುದ್ಧಿಶಕ್ತಿ ಮತ್ತು ಮರಳು ಮಾಡುವ ಭಾಷಣ ಕಲೆಯ ಕೀರ್ತಿ ವಿಧಾನ ಸೌಧದವರೆಗೂ ಹರಡಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಶ್ರೀ ಗುಂಡೂರಾಯರು ಸಮಾರಂಭ ಒಂದರಲ್ಲಿ ಇವರ ವಾಗ್ವೈಖರಿಗೆ ಮನ ಸೋತರು. ತಮ್ಮ ಪತ್ರಿಕಾ ಸಲಹೆಗಾರರಾಗಿ ವಿಶೇಷ ಅಧಿಕಾರಿಯ ಹುದ್ದೆಯಲ್ಲಿ ಕೆಲಸ ಮಾಡಲು ವಿನಂತಿಸಿದರು. ಇವರು ಹಿಂದು ಮುಂದು ನೋಡಿದರು. ಆದರೆ ಆತ್ಮೀಯರು ಸುವರ್ಣಾವಕಾಶ ಕೈ ಬೀಸಿ ಕರೆದಿದೆ ಬಿಡಬಾರದು ಎಂದು ಒಪ್ಪಿಕೊಳ್ಳಲು ಒತ್ತಾಯ ಮಾಡಿದರು. ಕಾಲೇಜಿನ ವ್ಯವಸ್ಥಾಪಕ ವರ್ಗಕ್ಕೂ ಸಂತೋಷ. ನಮ್ಮವರೊಬ್ಬರು ಅಧಿಕಾರ ಕೇಂದ್ರದ ಹತ್ತಿರವಾಗುವರಲ್ಲ ಎಂದು. ಈ ಕಾಲದಲ್ಲೂ ಯೋಗ್ಯರಿಗೆ ಬೆಲೆ ಬಂತಲ್ಲ ಎಂದು ಅವರ ಅಭಿಮಾನಿಗಳು ಸಂಭ್ರಮಿಸಿದರು. ಆದರೆ ಆ ಸಂತೋಷ ಮೂರೆ ತಿಂಗಳಲ್ಲಿ ಮಣ್ಣು ಪಾಲಾಯಿತು. ಅಲ್ಲಿನ ವಾತಾವರಣ ಅವರಿಗೆ ಉಸಿರುಕಟ್ಟಿಸಿತು. ವ್ಯವಸ್ಥೆಯ ಭಾಗವಾಗಿ ಅವರು ಬೆಳೆಯುವ ಮಾತು ದೂರ ಉಳಿಯಿತು, ಅದನ್ನು ನೋಡಿಕೊಂಡು ಸುಮ್ಮನೆ ಸಹಿಸುವ ತಾಳ್ಮೆಯೂ ಅವರಿಗೆ ಇರಲಿಲ್ಲ. ರಾಜಿನಾಮೆ ಸಲ್ಲಿಸಿ ಪುನಃ ಬಳ್ಳಾರಿಗೆ ಬಂದಿಳಿದರು. ಅವರಿಗೆ ಮುಖ್ಯಮಂತ್ರಿಗಳ ಕಚೇರಿ ಮುಳ್ಳ ಹಾಸಿಗೆಯಾಗಿತ್ತು. ಬಹುತೇಕರು ಕನಸಲ್ಲೂ ಕಾಣದ ಅವಕಾಶವನ್ನು ಕೈಯಾರೆ ದೂಡಿ ಮತ್ತೆ ಪಾಠಮಾಡಲು ಕಾಲೇಜಿಗೆ ಬಂದಾಗ ಎಲ್ಲರಿಗೂ ಆಶ್ಚರ್ಯ. ವ್ಯವಹಾರ ಜ್ಞಾನವಿಲ್ಲದವ ಎಂದು ಹೀಗಳೆದವರು ಹಲವರು. ಆದರೆ ಅವರ ಅಭಿಮಾನಿಗಳ ದೃಷ್ಟಿಯಲ್ಲಿ ಅವರ ಔನ್ನತ್ಯ ಇನ್ನೂ ಹೆಚ್ಚಾಯಿತು. ಅವರು ಹೇಳಿದ್ದು ನನಗೆ ಆರೋಗ್ಯ ಸರಿ ಇರಲಿಲ್ಲ ಅದಕ್ಕೆ ಬಂದೆ ಎಂದು. ಆದರೆ ನಿಜವಾದ ಕಾರಣ ಬೇರೆಯೆ ಇದ್ದಿತು. ಯಥಾರೀತಿ ಆಸಕ್ತರಿಗೆ ಮಾರ್ಗದರ್ಶನ ಮತ್ತು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ ಸುಧಾರಣೆಗೆ ಕೈ ಜೋಡಿಸುವ ಕೆಲಸ ಮುಂದುವರಿಸಿದರು. ಬಳ್ಳಾರಿ ಜಿಲ್ಲೆಯ ಬುದ್ಧಿಜೀವಿಗಳಲ್ಲಿ ಅವರದು ಎತ್ತರದ ಸ್ಥಾನ. ಬಹುಶಃ ಅವರ ನಡೆ ಒಂದು ರೀತಿಯಲ್ಲಿ ಅನೇಕ ಯುವ ಜನರಿಗೆ ವರವಾಯಿತು. ಅವರಿಂದ ಸ್ಪೂರ್ತಿ ಪಡೆದು ಜೀವನದಲ್ಲಿ ಅನೇಕರು ಮುಂದೆ ಬಂದರು. ಕಲಿಯುವ ತುಡಿತ ಮತ್ತು ಕಲಿಸುವ ಮಿಡಿತ ಮೇಳೈಸಿದಾಗಲೆ ಉತ್ತಮ ಶಿಕ್ಷಕ ಒಡಮೂಡುವನು. ಅವರು ಅದಕ್ಕೆ ವೃತ್ತಿ ಜೀವನದಲ್ಲಿ ನನಗೆ ದಾರಿದೀಪವಾದರು.
ಅವರಲ್ಲಿಗೆ ವಾರವಾರವೂ ಹೋಗಿ ಬರುತ್ತಿದ್ದೆ. ನಂತರ ಜನವರಿಯಲ್ಲಿ ಎರಡು ತಿಂಗಳು ರಜೆ ಹಾಕಿ ಧಾರವಾಡಕ್ಕೆ ಹೋಗಿ ನೆಲಸಿದೆ. ಮೂರು ತಿಂಗಳು ವ್ರತ. ಕಡ್ಡಾಯ ಬ್ರಹ್ಮಚರ್ಯ. ಮನೆಯವರಿಗೂ ಪತ್ರವನ್ನು ಬರೆಯದಂತೆ ತಾಕೀತು ಮಾಡಿದ್ದೆ. ಮನಸ್ಸಿನ ಏಕಾಗ್ರತೆಗೆ ಭಂಗ ಬರಬಾರದೆಂದು ಎಲ್ಲ ಮುಂಜಾಗ್ರತೆ. ಅಲ್ಲಿ ಇಂಗ್ಲಿಷ್‌ ವಿಭಾಗದ ಕೆಲ ವಿದ್ಯಾರ್ಥಿಗಳು ಪರಿಚಯವಾದರು. ಅವರ ಸಹಾಯದಿಂದ ತರಗತಿಯಲ್ಲಿ ನಡೆಯುವ ಪಾಠಗಳ ವಿವರ ತಿಳಿಯಿತು. ಅಲ್ಲಿಯೂ ಒಳಗುಟ್ಟು ಇದೆ. ಪಠ್ಯಕ್ರಮದ ವ್ಯಾಪ್ತಿ ದೊಡ್ಡದು. ತರಗತಿಯಲ್ಲಿ ಎಲ್ಲವನ್ನೂ ಮಾಡಿಮುಗಿಸಲು ಆಗದ ಮಾತು. ಅವರು ಮುಖ್ಯವಾದವುಗಳಿಗೆ ಹೆಚ್ಚು ಒತ್ತು ಕೊಡುವರು. ಅದನ್ನು ಗಮನಿಸಿದರೆ ಸಾಕು. ಪರೀಕ್ಷೆಯಲ್ಲಿ ಅವು ಬಂದೆ ಬರುತ್ತಿದ್ದವು. ಆಗ ಪಾಠ ಮಾಡದೆ ಇರುವುದು ಬಂದಿದೆ ಎಂಬ ದೂರಿಗೆ ಅವಕಾಶವೂ ಇರುತ್ತಿರಲಿಲ್ಲ. ಅನೇಕ ಸಲ ಅವರು ಕೊಟ್ಟ ನೋಟ್ಸನ್ನು ಯಥಾರೀತಿ ಇಳಿಸಿದರೂ ಸಾಕಿತ್ತು  ಪಾಸಿಗೆ ದೋಖಾ ಇರಲಿಲ್ಲ. ಇಂಗ್ಲಿಷ್‌ ಡಿಪಾರ್ಟಮೆಂಟಿನಲ್ಲಿ ಪ್ರೊ.ನಾಯಕ್, ಪ್ರೊ. ಶಂಕರ ಮೊಕಾಶಿ ಮತ್ತು ಇನ್ನೊಬ್ಬ ಮೇಡಂ ಇದ್ದ ನೆನಪು. ಅನುಮತಿ ಪಡೆದು ಒಂದೆರಡು ತರಗತಿಗೂ ಹಾಜರಾಗಿದ್ದೆ. ಚಂಪಾ ಅದೇ ತಾನೆ ವಿದೇಶಕ್ಕೆ ತೆರಳಿದ್ದರು. ಚಂಪಾ, ಗಿರಡ್ಡಿ ಮತ್ತು ಪಟ್ಟಣಶೆಟ್ಟರು ಸೇರಿ ಹೊರ ತರುತಿದ್ದ ಸಂಕ್ರಮಣ ಪತ್ರಿಕೆ  ಜನಮನ ಸೆಳೆದಿತ್ತು. ದೇವೇಂದ್ರ ದೇಸಾಯಿ ಎಂಬ ಗೆಳೆಯನ ಜೊತೆಗೆ ಪಟ್ಟಣಶೆಟ್ಟಿಯವರ ಮನೆಗೆ ಹೋಗಿದ್ದ ನೆನಪು. ಅವನ ಜೊತೆಯಲ್ಲಿದ್ದಾಗಲೆ ಇಂಗ್ಲಿಷ್‌ ಎಂಎ ಓದುತಿದ್ದ  ಗುರುಪ್ರಸಾದ್‌  ಸಿಕ್ಕಿದ್ದರು. ಜಯಂತ ಕಾಯ್ಕಿಣಿ ಎಂಎಸ್‌ಸಿ ಮಾಡುತಿದ್ದರು. ಅವರ ಹಾಸ್ಟೆಲ್‌ಗೂ ಭೇಟಿ ನೀಡಿದ್ದೆ. ನಂತರ ಹಳ್ಳಿ ಸೇರಿ ಎಲ್ಲರ ಸಂಪರ್ಕ ಕಡಿಯಿತು.
ಆ ಸಮಯದಲ್ಲಿ ನಾನು ಧಾರವಾಡದ ಮಿಶನ್‌ ಕಾಂಪೌಂಡಿನಲ್ಲಿ ನನ್ನ ವಾಸ. ಅಲ್ಲಿ ಎಲ್ಲರೂ ಕ್ರಿಶ್ಚಿಯನ್ನರೆ. ಬಹುತೇಕರು ಮನೆಯ ಆವರಣದಲ್ಲೆ ನಾಲಕ್ಕಾರು ಕೋಣೆಗಳನ್ನು ಕಟ್ಟಿಸಿ ವಿದ್ಯಾರ್ಥಿಗಳಿಗೆ ಬಾಡಿಗೆ ಕೊಡುವರು. ಧಾರವಾಡ ವಿದ್ಯಾನಗರಿ. ಬಾಡಿಗೆಯಿಂದ ನಿಗದಿತ ಆದಾಯ ಖಚಿತವಾಗಿತ್ತು. ಅವರ ಒಂದು ವಿಶೇಷ ಗುಣವೆಂದರೆ ಉದಾರತೆ ಮತ್ತು ಮುಕ್ತತೆ. ಮನೆಯಿಂದ ದೂರವಿರುವ ವಿದ್ಯಾರ್ಥಿಗಳ ಬಗ್ಗೆ ತುಸು ಕಾಳಜಿಯನ್ನೂ ತೋರುತಿದ್ದರು ಯಾವುದಾದರೂ ಸಮಾರಂಭವಾದರೆ ಕರೆ ಬರುತಿತ್ತು. ಹೋಟಲಿನ ಊಟ, ಸ್ವಯಂ ಪಾಕಿಗಳಿಗೆ ಸಂತೋಷವೋ ಸಂತೋಷ. ಅಲ್ಲಿರುವಾಗ ನಮ್ಮ ಆವರಣದಲ್ಲೆ ಮದುವೆಯೊಂದಾಯಿತು. ಮಧ್ಯಾಹ್ನ ಚರ್ಚಿನಲ್ಲಿ ಮದುವೆ. ಸಂಜೆ ಮನೆಯಲ್ಲಿ ಕಾರ್ಯಕ್ರಮ. ಅಲ್ಲಿ ಹಿಂದೂ ಸಂಪ್ರದಾಯದಂತೆ ಕೆಲ ಆಚರಣೆಗಳು ನಡೆದವು. ನವ ದಂಪತಿಗಳ ಹೆಗಲ ಮೇಲೆ ನೊಗವನ್ನು ಸಾಂಕೇತಿಕವಾಗಿ ಇಟ್ಟದ್ದು ನೋಡಿ ಅಚ್ಚರಿಯಾಯಿತು. ಜತೆಗೆ ಬಂದವರೆಲ್ಲ ಅವರಿಗೆ ಹಾಲೆರೆದರು. ಅವರು ಮತಾಂತರವಾಗಿ ದಶಕಗಳೆ ಕಳೆದಿದ್ದರೂ ಹಿಂದಿನ ಅನೇಕ ಸಂಪ್ರದಾಯ ಪಾಲಿಸುವುದು ನೋಡಿ ಅಚ್ಚರಿಯಾಯಿತು. ನಂತರ ಗೊತ್ತಾಯಿತು. ಮದುವೆಯಲ್ಲೂ ಸಹಾ ಹಿರಿಯರು ತಮ್ಮವರಿಗೆ ಆದ್ಯತೆ ಕೊಡುವರು. ಅಂದರೆ ಬ್ರಾಹ್ಮಣ ಕ್ರಿಶ್ಚಿಯನ್‌, ಲಿಂಗಾಯಿತ ಕ್ರಿಶ್ಚಿಯನ್ ಇತ್ಯಾದಿ. ಸಾಧ್ಯವಾದಷ್ಟೂ ದಲಿತ ಕ್ರಿಶ್ಚಿಯನ್‌ರೊಡನೆ ಕೊಟ್ಟು ಕೊಳ್ಳುವುದು ಇರಲಿಲ್ಲ. ಹೊಕ್ಕು ಬಳಕೆ ಕಡಿಮೆ. ಅದನ್ನು ನೋಡಿದ ಮೇಲೆ ಅನ್ನಿಸಿತು ಹಳೆಯ ವಾಸನೆ ಹೋಗಲು ಬಹಳ ಸಮಯ ಬೇಕು. ಈಗ ಬಹುತೇಕ ಎಲ್ಲರೂ ಸುಧಾರಿಸಿರುವರು. ಮದುವೆಗೆ ಇರುವುದು ಎರಡೆ ಜಾತಿ. ಗಂಡು ಹೆಣ್ಣು ಆಗಿದ್ದರೆ ಸಾಕು, ಅವರಿಬ್ಬರೂ ಮದುವೆ ಆಗಬಹುದು. ವಿದೇಶಗಳಲ್ಲಿ ಇನ್ನೂ ಒಂದು ಹೆಜ್ಜೆ ಮುಂದು. ಗಂಡು, ಹೆಣ್ಣು ಎಂಬ ತಾರತಮ್ಯವೂ ಇಲ್ಲ. ಯಾರನ್ನಾದರೂ ಕಾನೂನು ಪ್ರಕಾರ ಮದುವೆಯಾಗಬಹುದು. ಮಾನವರಾಗಿದ್ದರೆ ಸರಿ. ಐವತ್ತೆ ವರ್ಷದಲ್ಲಿ ಎಂತಹ ಬದಲಾವಣೆ!
ನನಗೆ ಕೇರಳದ ವಿದ್ಯಾರ್ಥಿಗಳಿಂದ ತುಂಬ ಸಹಾಯವಾಯಿತು. ಅವರೆಲ್ಲರೂ ಪಾದ್ರಿಗಳು. ಸ್ನಾತಕೋತ್ತರ ಪದವಿಗಾಗಿ ಇಲ್ಲಿ ಬಂದಿದ್ದರು. ಬಹಳ ಶಿಸ್ತಿನ ಜನ. ಒಂದು ದೊಡ್ಡ ಮನೆ ಮಾಡಿ ಹತ್ತಾರು ಜನ ಒಟ್ಟಿಗೆ ಇದ್ದರು. ಅದು ಹೇಗೋ ಅವರ ಪರಿಚಯವಾಯಿತು. ಶಿಕ್ಷಕನಾಗಿದ್ದುಕೊಂಡು, ನವ ವಿವಾಹಿತನಾದರೂ ಹೆಚ್ಚಿನ ಜ್ಞಾನಸಾಧನೆಗಾಗಿ ಓದುತ್ತಿರುವುದು ಅವರಿಗೆ ಮೆಚ್ಚಿಗೆಯಾಯಿತು. ಅವರು ತರಗತಿಯಲ್ಲಿನ ಪಾಠ ಪ್ರವಚನಗಳ ಎಲ್ಲ ಮಾಹಿತಿಗಳನ್ನೂ ಎಗ್ಗಿಲ್ಲದೆ ನೀಡಿದರು. ಹಾಗಾಗಿ ನನಗೆ ಪರೀಕ್ಷೆ ಎದುರಿಸುವುದು ಸರಳವಾಯಿತು.
ಅಲ್ಲಿ ನನ್ನ ಜೊತೆ ಹೊಸಪೇಟೆಯ ಇನ್ನೊಬ್ಬ ಶಿಕ್ಷರೂ ಇದ್ದರು. ನನಗಿಂತ ಹತ್ತಾರು ವರ್ಷ ದೊಡ್ಡವರು ಆಗಲೆ ಇತಿಹಾಸದಲ್ಲಿ ಎಂಎ ಮಾಡಿದ್ದರು. ಅವರ ಛಲ ಒಂದೆ. ಹೇಗಾದರೂ ಇಂಗ್ಲಿಷ್‌ ನಲ್ಲೂ ಕನಿಷ್ಠ ದ್ವಿತೀಯದರ್ಜೆಯಲ್ಲಿ ಪಾಸಾಗುವುದು. ಹಗಲುರಾತ್ರಿ ನಿದ್ದೆಗೆಟ್ಟು ಓದುತ್ತಿದ್ದರು, ಫ್ಲಾಸ್ಕನಲ್ಲಿ ಸದಾ ಬಿಸಿ ಬಿಸಿ ಚಹಾ ಜತೆಗೆ ಕೈನಲ್ಲಿ ಹೊಗೆಯಾಡುವ ಬೀಡಿ. ಅತಿಯಾಗಿ ಕಣ್ಣೊತ್ತರಿಸಿದರೆ ನಿದ್ರೆ ಬಾರದಂತೆ ಮಾತ್ರೆ. ರಾತ್ರಿ ೧೧ಕ್ಕೆ ನಾನು ನಿದ್ದೆ ಹೋಗುತ್ತಿದ್ದೆ. ಆಗಲೂ ಅವರು ಎದ್ದಿರುವರು. ಬೆಳಗಿನ ಜಾವ ಕಣ್ಣು ಬಿಟ್ಟಾಗಲೂ ಅವರ  ಬೀಡಿಯ ಬೆಂಕಿ ಕಾಣುವುದು. ನನಗಂತೂ ಅಷ್ಟು ಕಷ್ಟಪಟ್ಟು ಸಾಧಿಸುವುದು ಏನು ಎಂದು ತಿಳಿಯಲೆ ಇಲ್ಲ. ಪರೀಕ್ಷೆ ದಿನ ಬೆಳಗ್ಗೆ ೧೦ ಗಂಟೆಗೆ ಹೋಗಬೇಕಿತ್ತು. ಬೇಗನೆ ಎದ್ದು ಸ್ನಾನ ಮುಗಿಸಿ ಉಪಹಾರಕ್ಕೆಂದು ಹೋಟೇಲಿಗೆ ಹೊರಟೆವು. ಅವರು ಹಾದಿಯಲ್ಲೆ ಓಲಾಡ ತೊಡಗಿದರು. ಹೇಗೋ ಕೈ ಹಿಡಿದು ಕರೆದೊಯ್ದೆವು. ನಮ್ಮನ್ನು ನೋಡಿದವರು, ಬೆಳಗ್ಗೆ ಎದ್ದೊಡನೆ ಫುಲ್‌ ಎಣ್ಣೆ ಹೊಡೆದಿದ್ದಾನೆ, ಎಂದು ಆಡಿಕೊಳ್ಳುವುದು ಕೇಳಿಸಿತು. ಆದರೆ ಪಾಪ ಇವರು ರಾತ್ರಿ ಇಡಿ ನಿದ್ದಗೆಟ್ಟು ಓದಿರುವುದು ನಮಗೆ ಗೊತ್ತು. ಹಾಗೂ ಹೀಗೂ ಪರೀಕ್ಷಾ ಕೋಣೆಗೆ ಕರೆದೊಯ್ದೆವು. ಇನ್ನೇನು ಪ್ರಶ್ನೆ ಪತ್ರಿಕೆ ಹಂಚಬೇಕು. ಅವರು ಡೆಸ್ಕಿಗೆ ತಲೆ ಇಟ್ಟವರು ಹಾಗೆ ನಿದ್ದೆಗೆ ಜಾರಿದರು. ಎಚ್ಚರವೇ ಆಗಲಿಲ್ಲ. ಕೋಣೆಯ ಮೇಲ್ವಿಚಾರಕರಿಗೆ ಅಚ್ಚರಿ. ಇದ್ದ ವಿಷಯ ತಿಳಿಸಿದೆವು ಅವರೂ ಸುಮ್ಮನಾದರು. ಪರೀಕ್ಷೆ ಮುಗಿದ ಮೇಲೂ ಇನ್ನೂ ಅವರಿಗೆ ಮಂಪರು. ಅವರನ್ನು ರೂಂಗೆ ಕರೆತರುವುದರಲ್ಲಿ ಕುರಿಕೋಣ ಬಿದ್ದು ಹೋಯಿತು. ಒಂದುವರ್ಷ ಅವರು ಹಗಲುರಾತ್ರಿ ನಿದ್ದೆಗೆಟ್ಟು ಓದಿದ್ದು ನೀರಲ್ಲಿ ಹೋಮ ಮಾಡಿದಂತಾಯಿತು. ಅತಿಯಾದರೆ ಗತಿ ಗೇಡು ಎಂಬ ಮಾತು ನಿಜವಾಯಿತು ಅವರ ವಿಷಯದಲ್ಲಿ. ಮುಂದಿನ ವರ್ಷ ಅವರು ತಮ್ಮ ಹಠ ಸಾಧಿಸಿದರು. ನಂತರ ಖಾಸಗಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರೂ ಆಗಿ ಒಳ್ಳೆಯ ಹೆಸರು ಮಾಡಿದರು.
ಧಾರವಾಡದಲ್ಲಿ ಎರಡು ವರ್ಷ ಈ ರೀತಿ ದಮ್ಮು ಹಿಡಿದು ಓದಿದ್ದು ಫಲ ನೀಡಿತು. ಪರೀಕ್ಷೆಗೆ ನಮ್ಮ ಜಿಲ್ಲೆಯಿಂದ ಕೂತಿದ್ದ ಹತ್ತೊಂಬತ್ತು ಜನರಲ್ಲಿ ಪಾಸಾದವನು ನಾನೊಬ್ಬನೆ. ಆದರೂ ಖಾಸಗಿಯಾಗಿ ಅಧ್ಯಯನ ಮಾಡುವುದರ ದೌರ್ಬಲ್ಯ ನನಗೆ ತಿಳಿಯಿತು “No college, no knowledge“ ಎಂಬ ಮಾತು ಚಾಲತಿಯಲ್ಲಿದೆ. ಹಳ್ಳಿಯಿಂದ ಬಂದ ನನನ್ನ ಗೆಳೆಯನೊಬ್ಬ ಬಹಳ ಪ್ರತಿಭಾನ್ವಿತ, ರಾಜ್ಯಶಾಸ್ತ್ರ ಎಂಎ ಮಾಡುತಿದ್ದ. ಅವನು ಪೇಪರ್‌ ಮಂಡಿಸುವಾಗ china ಎಂಬುದನ್ನು ಚೈನಾ ಎನ್ನುವ ಬದಲು ಚೀನಾ ಎಂದು ಪದೇ ಪದೇ  ಅಂದಾಗ ಎಲ್ಲರೂ ಘೊಳ್ಳನೆ ನಕ್ಕಿದ್ದರು. ಆದರೆ ಆ ವರ್ಷ ಅವನೆ Rank ಗಿಟ್ಟಿಸಿದ. ಹಳ್ಳಿಗಾಡಿನಿಂದ ಬಂದವರಿಗೆ ಉಚ್ಛಾರಣೆಯ ಸಮಸ್ಯೆ ಸಹಜ. ಸಾಹಿತ್ಯದ ಆಳ ಅಗಲಗಳ ಅರಿವಿದ್ದರೂ, ಬರಹದ ಮೇಲೆ ಪ್ರಭುತ್ವ ಸಾಧಿಸಿದರೂ ಮೋಡಿ ಮಾಡುವ ಮಾತುಗಾರಿಕೆ ಕಲಿಯಲು ಸತತ ಸಂವಹನ ಅಗತ್ಯ.

ಇಬ್ಬರು ಅಧ್ಯಾಪಕರ ಕುರಿತು

http://kendasampige.com/images/trans.gif
http://kendasampige.com/images/trans.gif
ಬಳ್ಳಾರಿ ಜಿಲ್ಲೆಯ ಕಾಲೇಜು ಒಂದರಲ್ಲಿ ಧಾರ್ಮಿಕ ಆಚರಣೆ ಮತ್ತು ಸಾಮಾಜಿಕ ನಡವಳಿಕೆಗಳ ನಡುವಿನ ತಾಕಲಾಟದಿಂದ ಆಗುವ ವಿಚಿತ್ರ ಘಟನೆಯೊಂದು ಅನುಭವಕ್ಕೆ ಬಂದಿತು. ಅಲ್ಲಿನ ಪ್ರಾಂಶುಪಾಲರು ತುಂಬ ಸಜ್ಜನರು. ಧರ್ಮಭೀರು. ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು. ಆದರೆ ನಮಾಜಿಗೆಂದು ಕಾಲೇಜು ಸಮಯದಲ್ಲಿ ಹೊರಗೆ ಹೋಗುತ್ತಿರಲಿಲ್ಲ. ಮನೆಯಲ್ಲಿ ನಿತ್ಯ ನಮಾಜು ತಪ್ಪಿಸುತ್ತಿರಲಿಲ್ಲ. ವಿಶೇಷ ದಿನಗಳಲ್ಲಿ ತಮ್ಮ ಚೇಂಬರ್‌ನಲ್ಲಿ ಜಮಖಾನ ಹಾಕಿ ತಲೆಗೆ ಕರವಸ್ತ್ರ ಕಟ್ಟಿ ಮಂಡಿಯೂರುತಿದ್ದರು. ನಮಗೆ ಮೊದ ಮೊದಲು ಅದು ಅತಿ ಎನಿಸಿದರೂ ಅವರ ಶ್ರದ್ಧೆ ಮತ್ತು ಕರ್ತವ್ಯಪರತೆ ಮೆಚ್ಚುಗೆಯಾಯಿತು. ಅವರು ಬಂದ ಹೊಸತರಲ್ಲಿ ಕೆಲ ವಿದ್ಯಾರ್ಥಿಗಳು ಪ್ರತಿ ಶುಕ್ರವಾರ ಮಧ್ಯಾಹ್ನ ನಮಾಜಿಗೆ ಹೋಗಲು ಅವಕಾಶ ಕೊಡಲು ಬೇಡಿಕೆ ಸಲ್ಲಿಸಿದಾಗ, ಈವರೆಗೆ ಹೋಗದೆ ಇದ್ದವರು ಈಗ ಏಕದಂ ಅವಕಾಶ ಕೇಳುತ್ತಿರುವ ಕಾರಣ ಅವರಿಗೆ ವಿದಿತವಾಯಿತು. ದಿನವೂ ಎಷ್ಟುಸಲ ನಮಾಜು ಮಾಡುವಿರಿ ಎಂದು ಮಕ್ಕಳನ್ನು ವಿಚಾರಿಸಿದರು. ಮಕ್ಕಳು ಮೂಕರಾಗಿ ನಿಂತರು. ಬಹುತೇಕ ಯಾರೂ ಮಾಡುತ್ತಿರಲಿಲ್ಲ. ಅವರಿಗೆ ಪಾಠ ತಪ್ಪಿದರ ತೊಂದರೆಯಾಗುವುದೆಂದು ತಿಳಿಹೇಳಿ ನಯವಾಗಿ ರಿಯಾಯತಿ ನೀಡಲು ನಿರಾಕರಿಸಿದರು. ಅದಕ್ಕೆ ಇಲಾಖೆಯಲ್ಲಿ ಅವಕಾಶವಿದ್ದರೂ ವಿದ್ಯಾರ್ಥಿಗಳ ಹಿತದೃಷ್ಟಿ ಅವರಿಗೆ ಮುಖ್ಯವಾಗಿತ್ತು. ಅವರು ಬಹಳ ಸ್ವಚ್ಛ ಕನ್ನಡ ಮಾತನಾಡುತಿದ್ದರು, ಹಿಂದೂ ಧರ್ಮ ಕುರಿತಾಗಿ ನಮ್ಮ ಸಂಸ್ಕೃತ ಶಿಕ್ಷಕರೊಂದಿಗೆ ನಿರರ್ಗಳವಾಗಿ ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳನ್ನು ಚರ್ಚಿಸುವರು. ಅವರು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಪಿಯುಸಿ ಮಕ್ಕಳಿಗೆ ಇತಿಹಾಸವನ್ನು ರಸವತ್ತಾಗಿ ಬೋಧನೆ ಮಾಡುವರು. ಯಾವುದೆ ಬೇಧವಿಲ್ಲದೆ ಎಲ್ಲರೊಂದಿಗೆ ಬೆರೆಯುವರು. ಉಗಾದಿ, ಮಹಾರ್ನವಮಿ ಬಂದರಂತೂ ಎಲ್ಲರ ಸಂಭ್ರಮದಲ್ಲಿ ಭಾಗಿಯಾಗುವರು. ಕರೆದವರ ಮನೆಗೆ ಹೋಗಿ ಖುಷಿಯಾಗಿ ಬೆರೆಯುವರು. ಹೀಗಾಗಿ ಅವರು ಸಹೋದ್ಯೋಗಿಗಳಲ್ಲಿ ಬಹು ಜನಪ್ರಿಯರಾಗಿದ್ದರು. ಅವರ ಹಬ್ಬಗಳಲ್ಲಂತೂ ಎಲ್ಲರಿಗೂ ಆಮಂತ್ರಣ.
ಅವರಂತೆ ಸಂಸ್ಕೃತ ಶಿಕ್ಷಕರೂ ಧಾರ್ಮಿಕ ಶ್ರದ್ಧಾಳು. ಸದಾ ಪಂಚೆ, ಪೂರ್ಣ ತೋಳಿನ ಅಂಗಿ. ತಲೆಯ ಮೇಲೆ ಟೋಪಿ. ಅದರ ಒಳಗಿಂದ ಇಣುಕಿನೋಡುವ ಜುಟ್ಟು. ವಾರತಿಥಿ ನೋಡಿ ಕ್ಷೌರ ಮಾಡಿಸುವರು. ಅದರಿಂದ ಬಹುತೇಕ ಅಕ್ಕಿ ಎಳ್ಳು ಬೆರೆಸಿದಂತಹ ಅರೆ ಬರೆ ಬೆಳೆದ ಗಡ್ಡ. ಅವರದೂ ಎರಡು ಹೊತ್ತು ಸಂಧ್ಯಾವಂದನೆ. ಹೊರಗೆ ಏನನ್ನೂ ಸೇವಿಸುತ್ತಿರಲಿಲ್ಲ. ಮನೆಯಲ್ಲಿ ಉಂಡ ಊಟ ಕುಡಿದ ನೀರು. ಮೌಲ್ಯಮಾಪನಕ್ಕೆ ಹೋದಾಗಲೂ ಯಾವುದೋ ಮಠದಲ್ಲಿ ವಸತಿ ಮತ್ತು ಊಟ. ಆದರೆ ಕೆಲಸದಲ್ಲಿ ಮಾತ್ರ ಇನ್ನಿಲ್ಲದ ಶ್ರದ್ಧೆ. ಯಾವುದೆ ಹೊಣೆ ನೀಡಿದರೂ ನಿರ್ವಂಚನೆಯಿಂದ ಕಾರ್ಯ ನಿರ್ವಹಣೆ. ಅದಕ್ಕೆ ಪ್ರಾಂಶುಪಾರಿಗೆ ಅವರ ಮೇಲೆ ಪ್ರೀತಿ. ಅವರು ಮನೆಗೆ ಬೇರೆಯವರನ್ನು ಕರೆಯುತ್ತಿರಲಿಲ್ಲ. ಆದರೆ ಅವರ ಮನೆಯಲ್ಲಿ ವಿಶೇಷವಾದಾಗ ಆತ್ಮೀಯರಿಗೆ ಅದರಲ್ಲೂ ಪ್ರಿನ್ಸಿಪಾಲರಿಗೆ ತಿಂಡಿಯ ಸರಬರಾಜು. ಗೋಕುಲಾಷ್ಟಮಿಯಂದು ಚಕ್ಕುಲಿ, ಕೋಡುಬಳೆ ತೆಂಗೊಳಲು ಬರುತಿತ್ತು. ನಾಗರ ಪಂಚಮಿಯಾದರೆ ತಂಬಿಟ್ಟು ಖಾತ್ರಿ. ಅವರಿಗೂ ಪ್ರಾಂಶುಪಾಲರಿಗೂ ಗಳಸ್ಯ ಗಂಠಸ್ಯ.
ಅವರಿಬ್ಬರನ್ನು ನಾವು ಉತ್ತರ ಧೃವ ಮತ್ತು ದಕ್ಷಿಣ ಧೃವ ಎಂದು ಕರೆಯುತ್ತಿದ್ದೆವು. ಅವರೂ ಪ್ರಾಂಶುಪಾಲರ ಮನೆಗೆ ಕರೆ ಬಂದಾಗ ನಮ್ಮ ಜತೆ ಸೇರುತಿದ್ದರು. ಅದರಲ್ಲೂ ರಂಜಾನ್‌ ತಿಂಗಳಲ್ಲಿ ಅವರದು ರೋಜಾ. ಕಟ್ಟುಪವಾಸ. ಸಂಜೆ ಊಟ. ಉಪನ್ಯಾಸಕರೆಲ್ಲರಿಗೂ ಆಮಂತ್ರಣ. ಅವರು ಊಟ ತಿಂಡಿ ಮಾಡದಿದ್ದರೂ ‌ಒಣ ಫಲಗಳಾದ ದ್ರಾಕ್ಷಿ, ಗೋಡಂಬಿ, ಪಿಸ್ತಾ ಬದಾಮುಗಳನ್ನು ತಿನ್ನುವರು. ಇನ್ನು ಆ ಕಾಲದಲ್ಲಿ ದೊರೆಯುವ ಹಣ್ಣುಹಂಪಲಂತೂ ಇದ್ದೆ ಇರುತಿದ್ದವು. ಪ್ರಾಂಶುಪಾಲರೂ ಅವರಿಗೆ ಏನನ್ನೂ ತಿನ್ನಲು ಕುಡಿಯಲು ಒತ್ತಾಯ ಮಾಡುತ್ತಿರಲಿಲ್ಲ. ನಾವೆಲ್ಲ ಚಿತ್ರಮಯವಾಗಿರುವ ಗೇಣೆತ್ತರ ಲೋಟಗಳಲ್ಲಿ ಸುರುಕುಂಬ ಸುರಿದಿದ್ದೇ ಸುರಿದದ್ದು. ಮೊದಲು ನಮಗೆ ಅದೇನು ಎಂದು ಅನುಮಾನ ಕಾಡಿದರೂ ಅದು ನಮ್ಮ ಶ್ಯಾವಿಗೆ ಪಾಯಸದ ಇನ್ನೊಂದು ರೂಪ ಎಂದು ರುಚಿ ನೋಡಿದ ಮೇಲೆ ಗೊತ್ತಾಯಿತು. ಇನ್ನು ಅದರ ಜತೆ ಚುಂಗೈ. ಅದು ಒಂದು ರೀತಿಯ ತುಪ್ಪದಲ್ಲಿ ಮಾಡಿದ ಡಿಜೈನ್‌ ಚಪಾತಿ. ಅದರ ಮೇಲೆ ಬೀಸಿದ ಸಕ್ಕರೆ ಮತ್ತು ತುಪ್ಪ ಹಾಕಿಕೊಂಡು ತಿನ್ನಬೇಕು. ನಮ್ಮ ಮನೆಯಲ್ಲಿ ಬಂದು ಅದರ ವರ್ಣನೆ ಮಾಡಿದ ಮೇಲೆ ನಮ್ಮ ಮನೆಯಾಕೆಗೂ ಕುತೂಹಲ ಕಾಡಿತು. ಅವಳೆ ಪ್ರಿನ್ಸಿಪಾಲರ ಮನೆಗೆ ಹೋಗಿ ವಿಚಾರಿಸಿದಳು. ಪ್ರಿನ್ಸಿಪಾಲರ ಹೆಂಡತಿಗೆ ಬಹಳ ಸಂತೋಷವಾಯಿತು. ನಮ್ಮ ಚಪಾತಿಯಂತೆಯೆ ಗೋದಿ ಹಿಟ್ಟಿನಿಂದ ಮಾಡುವುದು. ಆದರೆ ಅದನ್ನು ಬಳಪದ ಕಲ್ಲಿನ ವಿವಿಧ ವಿನ್ಯಾಸ ಹೊಂದಿದ ಹಂಚಿನ ಮೇಲೆ ಮಾಡಿರುವರು. ಹಿಟ್ಟನ್ನು ಅದರ ಮೇಲೆ ಲಟ್ಟಿಸಿದಾಗ ಹಾಳೆಯ ಮೇಲೆ ಚಿತ್ತಾರ ಮೂಡುವುದು. ಎಂದು ಪಾಕ ವಿಧಾನವನ್ನು ಹೇಳಿಕೊಟ್ಟರು. ಅಷ್ಟೆ ಅಲ್ಲ ಕೆಲವು ಸಮಯದ ನಂತರ ಬಳಪದ ಕಲ್ಲಿನ ಚುಂಗೈ ಮಣೆಯನ್ನು ಕಾಣಿಕೆಯಾಗೂ ನೀಡಿದರು.
ಅವರ ಧಾರ್ಮಿಕ ನಿಷ್ಠೆ ಮಾತ್ರ ಮೆಚ್ಚುವಂತಹದು. ಆಚರಣೆಯಲ್ಲಿ ತುಸುವೂ ವಿನಾಯತಿ ಇಲ್ಲ. ರೋಜಾ ಇರುವಾಗ ತಿನ್ನುವ ಮಾತು ಹಾಗಿರಲಿ, ನೀರನ್ನೂ ಕುಡಿಯುವುದಿಲ್ಲ. ಉಗಳನ್ನೂ ನುಂಗದ ನಿಯಮಪರತೆ ಅವರದು. ಆದರೆ ಕಾಲೇಜಿನ ಕೆಲಸದಲ್ಲಿ ಯಾವುದೆ ಹೊಂದಾಣಿಕೆ ಮಾಡಿಕೊಳ್ಳದೆ ನಗು ನಗುತ್ತಾ ಇರುತಿದ್ದರು. ಆದರೆ ರಂಜಾನ್‌ ಸಮಯದಲ್ಲಿ ಯಾವುದೆ ಸಂತೋಷ ಕೂಟವಾದರೂ ಬಂದು ಕೂಡುತಿದ್ದರೆ ಹೊರತು ಏನನ್ನೂ ತಿನ್ನುತ್ತಿರಲಿಲ್ಲ.
ನಮ್ಮ ಕಾಲೇಜಿನಲ್ಲಿ ಗಣಪತಿ ಉತ್ಸವವನ್ನು ಬಹಳ ವಿಜೃಂಭಣೆಯಿಂದ ಪ್ರತಿವರ್ಷವೂ ಆಚರಿಸುವ ಪದ್ದತಿ. ಮಕ್ಕಳೆ ಚಂದಾಹಾಕಿ ಪೂಜೆ ಮಾಡುವರು. ಆದಿನ ಪೂಜೆಯ ನಂತರ ತೀರ್ಥ ಮತ್ತು ಪ್ರಸಾದ ವಿತರಣೆಯಾಗುತಿತ್ತು. ಮೂರುದಿನದ ನಂತರ ಗಣಪತಿ ವಿಸರ್ಜನೆ. ಎಲ್ಲರಿಗೂ ಉಪಹಾರ.
ಪ್ರಿನ್ಸಿಪಾಲರು ತಾವು ರೋಜಾ ಇರುವುದರಿಂದ ಏನನ್ನೂ ಸೇವಿಸುವುದಿಲ್ಲ. ಸೂರ್ಯ ಮುಳಗುವ ತನಕ ಬಾಯಲ್ಲಿ ನೀರನ್ನೂ ಹಾಕದೆ ಇರುವುದು ತಮ್ಮ ವ್ರತ ಎಂದು ಮೊದಲೆ ತಿಳಿಸಿದ್ದರು. ಆದರೆ ನೀವೆಲ್ಲ ಏನೇನು ಮಾಡಬೇಕೊ ಎಲ್ಲವನ್ನೂ ಸಂಪ್ರದಾಯ ಬದ್ದವಾಗಿ ಮಾಡಿ ನಾನು ಬರಿದೆ ಭಾಗವಹಿಸುವೆ ಎಂದು ಆಶ್ವಾಸನೆ ನೀಡಿದರು. ವಿದ್ಯಾರ್ಥಿಗಳು ಖುಷಿಯಿಂದ ಹಣ ಸಂಗ್ರಹಿಸಿದರು. ನಮ್ಮ ಕ್ರಾಫ್ಟ ಮಾಸ್ಟರ್‌ ಮಾರ್ಗದರ್ಶನದಲ್ಲಿ ತಳಿರು ತೋರಣ ಕಟ್ಟಿದರು ಮತ್ತು ಬಣ್ಣದ ಕಾಗದದಿಂದ ಅಲಂಕೃತ ಮಂಟಪ ಸಿದ್ಧವಾಯಿತು. ಪೂಜೆಗೆ ಮಂತ್ರ ಹೇಳಲು ಹೇಗೂ ಸಂಸ್ಕೃತ ಮಾಷ್ಟ್ರು ಇದ್ದೆ ಇದ್ದರು. ಅವರು ಶಾಸ್ತ್ರಬದ್ಧವಾಗಿ ಮಂತ್ರಸಹಿತ ಗಣೇಶನ ಪೂಜೆಯನ್ನು ಸಾಂಗವಾಗಿ ಮಾಡಿಸಿದರು. ಅವರದೂ ಕಟ್ಟಾಧಾರ್ಮಿಕ ಆಚರಣೆ ಮನೆಯ ಹೊರಗೆ ಏನೂ ತಿನ್ನುತ್ತಿರಲಿಲ್ಲ. ಕೊನೆಗೆ ನೀರನ್ನೂ ಕುಡಿಯರು. ಅವರು ನಮ್ಮೊಡನೆ ಶಾಲೆಯಲ್ಲಿ ಊಟ ತಿಂಡಿ ತಿನ್ನುತ್ತಿರಲಿಲ್ಲ. ಆದರೆ ಸಮಾರಂಭದಲ್ಲಿ ಆಸಕ್ತಿಯಿಂದ ಭಾಗವಹಿಸುವರು. ಗಣಪತಿ ಪೂಜಾದಿವೂ ಅಷ್ಟೆ. ಅವರು ತಿಂಡಿತೀರ್ಥ ತೆಗೆದುಕೊಳ್ಳುತ್ತಿರಲಿಲ್ಲ ಆದರೆ ಹಣ್ಣು ಮತ್ತು ತೆಂಗಿನ ಕಾಯಿಹೋಳುನ್ನು ಪ್ರಸಾದವೆಂದು ಮನೆಗೆ ಒಯ್ಯುತಿದ್ದರು ಅದೇ ರೀತಿ ಪ್ರಾಂಶುಪಾಲರಿಗೂ ನಾವು ಅವರಿಗೆ ಪ್ರಸಾದವೆಂದು ಕಾಯಿ ಹಣ್ಣು ನೀಡುವುದಾಗಿಯೂ ಅವರು ಅದನ್ನು ಸ್ವೀಕರಿಸಬೇಕೆಂದು ಕೋರಿದೆವು. ಅವರು ಪ್ರಸಾದವನ್ನು ಸಂತೋಷವಾಗಿ ಮನೆಗೆ ತೆಗೆದುಕೊಂಡು ಹೋಗಿ ರಾತ್ರಿ ಉಪವಾಸ ಮುಗಿದ ಮೇಲೆ ಖಂಡಿತವಾಗಿ ಸಂಸಾರ ಸಮೇತ ಹಣ್ಣುಗಳನ್ನು ತಿನ್ನುವುದಾಗಿ ತಿಳಿಸಿದರು. ನಮಗೆಲ್ಲರಿಗೂ ಬಹಳ ಸಂತೋಷವಾಯಿತು. ಗಣೇಶ ಚತುರ್ಥಿಯ ದಿನ ಬೆಳಗ್ಗೆ ಒಂಬತ್ತಕ್ಕೆ ಹಾಜರಾಗಿದ್ದರು. ಮಕ್ಕಳು, ಸಿಬ್ಬಂದಿಯವರೂ ಸೇರಿದರು.
ಅಂದು ಹುಡುಗಿಯರ ಸಡಗರ ಹೇಳತೀರದು ಎಲ್ಲರೂ ಹೊಸ ಬಟ್ಟೆ, ರೆಷ್ಮೆ ಸೀರೆ ಧರಿಸಿ ಯಾರೋ ಹೊರಗಿನ ಮಹಿಳೆಯರು ಬಂದಿರುವರು ಎಂದು ತಿರುಗಿ ನೋಡುವಷ್ಟು ಅಲಂಕಾರ ಮಾಡಿಕೊಂಡು ಬಂದಿದ್ದರು.. ಆಚಾರ್ಯರು ಮಂತ್ರ ಹೇಳುತಿದ್ದರು ಹುಡುಗನೊಬ್ಬ ಪೂಜೆ ಮಾಡಿದ. ಪೂಜೆ ಪ್ರಾರಂಭಿಸಿದರು ಪೂಜೆ ಪ್ರಾರಂಭವಾಯಿತು. ಎಲ್ಲರೂ ಹೂವು ಮಂತ್ರಾಕ್ಷತೆ ಹಾಕಿದರು.ನಂತರ ಮಂಗಳಾರತಿ ಬಂದಿತು. ಪೂಜೆ ಮಾಡಿದ ಹುಡುಗನಿಗೆ ಖುಷಿಯೋ ಖುಷಿ. ಮಂಗಳಾರತಿ ತಟ್ಟೆಯಲ್ಲಿ ದಕ್ಷಿಣೆ ಅವನದು. ನಮ್ಮ ಪ್ರಾಂಶುಪಾಲರೂ ಐದು ರೂಪಾಯಿ ದಕ್ಷಿಣೆ ಹಾಕಿದರು. ನಂತರ ಅವನು ಎಲ್ಲರಿಗೂ ತೀರ್ಥ ಕೊಡಲು ಶುರು ಮಾಡಿದ. ಮೊದಲ ಗೌರವ ಕಾಲೇಜು ಮುಖ್ಯಸ್ಥರದು. ಅವನು ಬಂದ ಕೂಡಲೆ ಅವರೂ ಎದ್ದುನಿಂತು ಎಲ್ಲರಂತೆ ಕೈ ಒಡ್ಡಿದರು. ಅವನು ತೀರ್ಥ ನೀಡಿದ. ಅವರು ಭಕ್ತಿಯಿಂದ ಎರಡೂ ಕಣ್ಣಿಗೆ ಒತ್ತಿಕೊಂಡು ಕುಡಿದರು. ಹುಡುಗನು ನಾಲಕ್ಕಾರು ಮಂದಿ ಉಪನ್ಯಾಸಕರಿಗೆ ನೀಡಿದ. ಸಂಸ್ಕೃತ ಶಿಕ್ಷಕರು ತಾವೆ ಪೂಜೆ ಮಾಡಿಸಿದರೂ ತೀರ್ಥ ತೆಗೆದುಕೊಳ್ಳಲಿಲ್ಲ. ಆ ಹುಡುಗ ಎಲ್ಲರಿಗೂ ತೀರ್ಥ ಕೊಡುತ್ತಾ ಮುಂದೆ ಸಾಗಿದ ಪ್ರಾಂಶುಪಾಲರು ಧಡಕ್ಕನೆ ಎದ್ದು ಬಾಗಿಲ ಕಡೆ ಧಾವಿಸಿದರು. ಅವರು ಬೆಚ್ಚಿ ಬಿದ್ದು ಹೊರಗೆ ಧಾವಿಸಿದ್ದು ಕಂಡು ನಮಗೆ ಗಾಬರಿಯಾಯಿತು. ಹೊರಗೆ ಬಂದು ನೋಡಿದರೆ ಗಿಡದ ಬುಡದಲ್ಲಿ ಅವರು ವಾಂತಿ ಮಾಡಿಕೊಳ್ಳುತಿದ್ದಾರೆ. ಥೂ ಥೂ ಎಂದು ಒಂದೆ ಸಮನೆ ಉಗುಳುತಿದ್ದಾರೆ. ನಮಗೆ ಏನೂ ತೋಚಲಿಲ್ಲ. ಗಂಟಲಿಗೆ ಕೈ ಹಾಕಿ ವಾಂತಿ ಮಾಡಿಕೊಳ್ಳುತ್ತಿರುವರು. ಬಹುಶಃ ಜಲಮಾಲಿನ್ಯದಿಂದ ತೊಂದರೆಯಾಗಿದೆತೀರ್ಥದ ದೋಷದಿಂದ ಅವರಿಗೆ ಹೀಗೆ ವಾಂತಿಯಾಗಿದೆ ಎಂದು ಕೊಂಡೆವು. ಆದರೆ ತೀರ್ಥ ಕುಡಿದಿದ್ದ ಇತರರಿಗೆ ಏನೂ ಆಗಿಲ್ಲ. ಎಲ್ಲ ಸರಿಯಾಗೆ ಇದ್ದಾರೆ.
ಪ್ರಾಂಶುಪಾಲರಿಗೆ ಏನೋ ತೊಂದರೆ ಯಾಗಿರುವುದು ಖಚಿತವಾಯಿತು. ಅವರ ವಾಕರಿಕೆ ಮುಂದುವರೆದೇ ಇತ್ತು. ವೈದ್ಯರ ಹತ್ತಿರ ಹೋಗುವುದು ಒಳ್ಳೆಯದು ಇಲ್ಲವಾದರೆ ಅವರನ್ನೆ ಕರಸಿದರೂ ಸರಿ, ಎನಿಸಿತು. ಎಂದು ಜವಾನನ್ನು ಕರೆದು ತಕ್ಕಣ ಹತ್ತಿರದಲ್ಲೆ ಮನೆ ಇದ್ದ ವೈದ್ಯರನ್ನು ಕರೆತರಲು ಹೇಳಿದೆವು.. ಆದರೆ ಅವರು ಕೈ ಸನ್ನೆ ಬಾಯಿ ಸನ್ನೆ ಮಾಡಿ ಬೇಡ, ಬೇಡ  ಎಂದು ಸೂಚಿಸಿದರು. ನಾವು ಸುತ್ತ ಮುತ್ತ ನೋಡಿದೆವು. ನೂರಾರು ಜನ ತೀರ್ಥ ಕುಡಿದಿದ್ದರೂ ಯಾರಿಗೂ  ಏನೂ ಆಗಿರಲಿಲ್ಲ. ಎಲ್ಲರೂ ಧನ್ಯತಾ ಭಾವದಿಂದ ನೆಮ್ಮದಿಯಾಗಿದ್ದರು. ಆದ್ದರಿಂದ ಅಂತಹ ಅಪಾಯವಿಲ್ಲ ಎನಿಸಿತು. ಹತ್ತು ನಿಮಿಷದ ತರುವಾಯ ಸಾಹೇಬರು ಸಹಜ ಸ್ಥಿತಿಗೆ ಬಂದರು. ಆಮೇಲೆ ತಿಳಿಯಿತು. ಅವರು ರೊಜಾದಲ್ಲಿದ್ದಾರೆ. ಏನನ್ನೂ ಸೇವಿಸಬಾರದು. ಆದರೆ ಅದನ್ನು ಮರೆತು ಪೂಜೆಯ ನಂತರ ತೀರ್ಥವನ್ನು ಎಲ್ಲರಂತೆ ಕುಡಿದಿದ್ದಾರೆ. ನಂತರ ನೆನಪಾಗಿದೆ. ತಾವು ರಂಜಾನ್‌ ಉಪವಾಸ ವ್ರತದಲ್ಲಿರುವುದು. ಕಟ್ಟಾ ಧಾರ್ಮಿಕರಾದ ಅವರು ಸಹಜವಾಗಿ ಗಾಬರಿಯಾಗಿರುವರು. ಅದಕ್ಕೆ ತಕ್ಷಣ ಸೇವಿಸಿದ್ದನ್ನೆಲ್ಲ ಹೊರ ಹಾಕಲು ಪ್ರಯತ್ನಿಸಿದ್ದಾರೆ. ಅದು ನಮಗೆ ಆತಂಕ ಉಂಟು ಮಾಡಿದೆ. ಅವರ ಸಂಪ್ರದಾಯದ ಪ್ರಕಾರ ಉಗಳನ್ನೂ ನುಂಗಬಾರದು. ಆದರೆ ಅವರು ಒಂದು ಚಮಚ ನೀರನ್ನೆ ಕುಡಿದಿರುವರು. ಅವರು ಅಂದು ಸಂಜೆಯ ತನಕ ಉಗುಳುವುದನ್ನು ಮುಂದುವರಿಸಿದ್ದರು. ನಮಗೆ ಅವರ ಧಾರ್ಮಿಕ ಭಾವನೆ ಮತ್ತು ಆಚರಣೆಯಲ್ಲಿನ ಶ್ರದ್ಧೆ ಕಂಡು ಸೋಜಿಗವಾಯಿತು. ಅವರ ನಿಷ್ಠೆಗೆ ಸಲಾಂ ಎಂದೆವು ಎಂದೆವು. ಸಮಾಜದಲ್ಲಿ ಎಲ್ಲ ಆಚರಣೆಗಳನ್ನೂ ಡಂಭಾಚಾರಕ್ಕೆ, ತೋರಿಕೆಗೆ ಮಾಡುವ ಜನರೆ ಹೆಚ್ಚು. ಮೂರ್ತಿ ಪೂಜೆ ಅವರ ನಂಬಿಕೆಗೆ ವಿರುದ್ಧವಾದರೂ ತಾವೂ ಭಾಗವಹಿಸಿ ತಮ್ಮ ವೃತ್ತಿ ಧರ್ಮ ಮತ್ತು ಸಾಮಾಜಿಕ ಹೊಣೆಯನ್ನು ನಿರ್ವಹಿಸಿರುವುರ ಜತೆಗೆ ತಮ್ಮ ವೈಯುಕ್ತಿಕ ಆಚರಣೆಯನ್ನೂ ಪಾಲಿಸಿರುವರು. ಈ ಅವರ ಪರಧರ್ಮ ಸಹಿಷ್ಣುತೆ ನಮ್ಮೆಲ್ಲರ ಮೆಚ್ಚಿಗೆಗೆ ಪಾತ್ರವಾಯಿತು. ಅದೆ ತಾನೆ ನಮ್ಮ ಭಾರತದ ಐಕ್ಯತೆಯನ್ನು, ಜ್ಯಾತ್ಯಾತೀತತೆಯನ್ನು ಕಾಪಾಡುತ್ತಿರುವ ಮಂತ್ರ.
(ಮುಂದುವರಿಯುವುದು)


Monday, August 20, 2012

ಶಿಸ್ತು ಮೂಡಿಸುವ ಸುಸ್ತಿನ ಕೆಲಸ

                                                                           ಶಿಸ್ತು ಮೂಡಿಸುವ ಸುಸ್ತಿನ ಕೆಲಸ 
ಶಿಕ್ಷಣ ಎಂದರೆ ಮಕ್ಕಳಲ್ಲಿ ಶಿಸ್ತು ಮೂಡಿಸುವುದು ಎಂದೆ ಹಲವರು ದೃಢವಾಗಿ ನಂಬಿರುವರು. ಕಲಿಯುವುದು ಬಿಡುವುದು ನಂತರದ ಮಾತು ತರಗತಿಯಲ್ಲಿ ತೆಪ್ಪಗೆ ಕುಳಿತರೆ ಅರ್ಧ ಕಲಿತಂತೆ ಎನ್ನುವವರೂ ಇಲ್ಲದಿಲ್ಲ. ಬೆತ್ತ ಬೀಸಿಯೋ, ಬಾಯಿ ಜೋರಿನಿಂದಲೋ ತರಗತಿಯಲ್ಲಿ ತೆಪ್ಪಗೆ ಕುಳಿತಿರುವಂತೆ ಮಾಡುತ್ತಾರೆ. ಆದರೆ ಕಲಿಕೆಯ ಮಟ್ಟ ಸುಧಾರಿಸಿದೆಯೋ ಎಂದು ಕೇಳಿದರೆ ಬಾಯಿ ಬಂದಾಗುತ್ತದೆ. ಮಕ್ಕಳಲ್ಲಿ ಶಿಸ್ತು ಮೂಡಿಸುವುದು ಬಹಳ ಸುಸ್ತಿನ ಕೆಲಸ. ಅವರು ಹಕ್ಕಿಗಳ ತರಹ. ಗಟ್ಟಿಯಾಗಿ ಹಿಡಿದರೆ ಉಸಿರುಗಟ್ಟುತ್ತದೆ, ಸಡಿಲವಾದರೆ ಹಾರಿ ಹೋಗುತ್ತದೆ. ಶಿಸ್ತಿನ ವ್ಯಾಖ್ಯೆ ಕಾಲದಿಂದ ಕಾಲಕ್ಕೆ, ತಾಣದಿಂದ ತಾಣಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಅನುಭವದ ಹಿನ್ನೆಲೆಯಲ್ಲಿ ಹಲವು ಘಟನೆಗಳನ್ನು ಗಮನಿಸಿದಾಗ ಒಂದು ಸ್ಥೂಲ ಕಲ್ಪನೆ ಮೂಡುತ್ತದೆ.
ಮೊದಲನೆಯದಾಗಿ ಗುರುಗಳು ತರಗತಿಗೆ ಬರುವಾಗ ವಿದ್ಯಾಥಿಗಳು ಎದ್ದು ನಿಲ್ಲುವುದು ಪದ್ಧತಿ. ಅದು ಎಲ್ಲ ಕಡೆ ಚಾಲತಿಯಲ್ಲಿದೆ. ಅಷ್ಟೆ ಏಕೆ ಕೆಲವು ಸಭೆ  ಸಮಾರಂಭಗಳಲ್ಲಿ ಮುಖ್ಯ ಅತಿಥಿಗಳು ಬಂದಾಗ ಸಭಿಕರು ಎದ್ದುನಿಂತು ಗೌರವ ಸೂಚಿಸುವ ವಾಡಿಕೆ ಇದೆ.
ಆದರೆ ಈ ಸಂಪ್ರದಾಯ ಉನ್ನತ ತರಗತಿಗೆ ಹೋದಂತೆಲ್ಲ ಕಡಿಮೆಯಾಗುತ್ತಾ ಹೋಗುವುದು. ಕೆಲವರಂತೂ ಕಾಟಾಚಾರಕ್ಕೆ ಎದ್ದಂತೆ ಮಾಡಿ ಹಾಗೆ ಕುಳಿತೆ ಇರುವರು. ಅದಕ್ಕೆ ಒಬ್ಬರು ಜಾಣತನದಿಂದ ಒಂದು ಬದಲಾವಣೆ ತಂದರು, ನಾನು ಬಂದಾಗ ಎದ್ದು ನಿಲ್ಲುವುದು ನಿಮ್ಮಸೌಜನ್ಯ. ಅದಕ್ಕೆ ನಾನು ನಿಮಗೆ ದಯಮಾಡಿ ಕುಳಿತುಕೊಳ್ಳಿ ಎಂದು ಹೇಳಲೆಬೇಕು. ನಂತರ ನೀವು ಕುಳಿತುಕೊಳ್ಳಬಹುದು, ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಬಂದ ತಕ್ಷಣ ಹೇಳದೆ ಅರ್ಧನಿಮಿಷ ತಡೆದು `Please sit down’ ಎನ್ನುವರು.. ಆಗ ಯಾರು ನಿಂತಿಲ್ಲ ಎಂದು ಗಮನಕ್ಕೆ ಬರುವುದು. ಆಗ ನಿಂತಿರುವವರು ಕುಳಿತುಕೊಳ್ಳಿ ಮತ್ತು ಕುಳಿತಿರುವವರು ನಿಂತುಕೊಳ್ಳಿ ಎಂದು ಹೇಳಿದಾಗ ಅರೆ ಮನಸ್ಸಿನವರ ಬಣ್ಣ ಬಯಲಾಗಿ ಮುಂದಿನ ತರಗತಿಯಿಂದ ಸಮಸ್ಯೆ ತನ್ನಿಂದ ತಾನೆ ಇಲ್ಲವಾಯಿತು.
ತರಗತಿಯಲ್ಲಿ ಇನ್ನೊಂದು ಸಮಸ್ಯೆ ಎಂದರೆ ಮೊದಲ ಅವಧಿಯಲ್ಲಿ ಶಿಕ್ಷಕರು ಬಂದ ಮೇಲೆ ಒಬ್ಬೊಬ್ಬರೆ ತಡವಾಗಿ ಬರುವರು. ಮತ್ತು ಕೊನೆ ಅವಧಿಯಲ್ಲಿ ಪಾಠ ಮುಗಿಯುತ್ತಿದ್ದಂತೆಯೆ ದುಬಕ್ಕನೆ ಎದ್ದುಹೊರಡುವ ತಯಾರಿ ನಡೆಸುವರು. ಬಾಗಿಲ ಹತ್ತಿರ ಕುಳಿತವರಂತೂ ಎಲ್ಲರಿಗಿಂತಲೂ ಮೊದಲೆ ಹಾರಗ್ಗಾಲಿನಲ್ಲಿ ಹೊರಗೆ ಹೆಜ್ಜೆ ಹಾಕುವರು.
ನಾನು ಮೊದಲು ಇದನ್ನು ಗಮನಿಸಿದೆ. ೫-೧೦ ನಿಮಿಷ ತಡವಾಗಿ ಬಂದವರನ್ನು ತರಗತಿಯೊಳಗೆ ಬಿಡಲಾಗುತಿತ್ತು. ಅವರಿಂದ ಮಾನೀಟರ್‌ ಒಂದಾಣೆ ದಂಡ ವಸೂಲು ಮಾಡಿ ವಾರಕೊಮ್ಮೆ ಲೆಕ್ಕ ಒಪ್ಪಿಸುವನು. ಆ ಹಣವನ್ನು ತರಗತಿಯ ಸಾಮೂಹಿಕ ಅಗತ್ಯಕ್ಕಾಗೆ ಬಳಸಲು ಯೋಜಿಸಲಾಯಿತು. ಹಣ ಕೊಡಬೇಕಾಗುವುದಲ್ಲ ಎಂದು ಬಹುತೇಕರು ಸಮಯದೊಳಗೆ ಬರುತಿದ್ದರು. ವಾರಕ್ಕೆ ಒಂದು ರೂಪಾಯಿ ದಂಡದ ಹಣ ಆದರೆ ಹೆಚ್ಚು. ಎರಡುವಾರದ ನಂತರ ಒಮ್ಮೆ ಮಾನಿಟರ್‌ ಹತ್ತು ರೂಪಾಯಿಗೂ ಮಿಕ್ಕಿ ಹಣದ ಲೆಕ್ಕ ಕೊಟ್ಟ. ಇದೇಕೆ ಹೀಗಾಯಿತು ಎಂದು ಅಚ್ಚರಿ. ವಿಚಾರಿಸಿದಾಗ ಒಂದಿಬ್ಬರು ತಡವಾಗಿ ಬರುವುದನ್ನೆ ಹವ್ಯಾಸವಾಗಿ ಮಾಡಿಕೊಂಡು ಮುಂಗಡವಾಗಿ ಐದೈದು ರೂಪಾಯಿ ನೀಡಿದ್ದರಂತೆ. ಇಬ್ಬರು ತಡವಾದಾಗಲೆಲ್ಲ ತಮ್ಮ ಲೆಕ್ಕದಲ್ಲಿ ಹಿಡಿದುಕೊಳ್ಳಲು ತಿಳಿಸಿದ್ದರು. ಅಂದರೆ ಹಣ ನೀಡಿದರೆ ಶಿಸ್ತಿನ ಸಂಕೋಲೆ ಕಡಿಯಬಹುದು ಎಂಬ ಎಣಿಕೆ ಅವರದು. ಇದನ್ನು ಗಮನಿಸಿ ಆ ದಂಡ ವಸೂಲಿಯನ್ನೆ ಕೈ ಬಿಡಲಾಯಿತು. ನಂತರ ತುಸು ಯೋಚನೆ ಮಾಡಿ ಹೇಳಿದೆ. ಪ್ರತಿ ತರಗತಿಯಲ್ಲೂ ವಿದ್ಯಾರ್ಥಿಗಳು ತರಗತಿಗೆ ಶಿಕ್ಷಕರು ಬಂದನಂತರ ಬರುವ ಹಾಗಿಲ್ಲ ಮತ್ತು ಅವಧಿ ಮುಗಿದ ಮೇಲೆ ಶಿಕ್ಷಕರಿಗಿಂತ ಮುಂಚೆ ಹೊರ ಹೋಗುವ ಹಾಗಿಲ್ಲ, ಮತ್ತು ಅದನ್ನು ಬಿಗಿಯಾಗಿ ಆಚರಣೆಗೆ ತರಲಾಯಿತು.
ಇದರಿಂದ ಮೊದ ಮೊದಲು ಕೆಲ ಮಕ್ಕಳು ತರಗತಿಯ ಹೊರಗೆ ನಿಲ್ಲಬೇಕಾಗಿಬಂದರೂ ನಂತರ ಸಮಯಕ್ಕೆ ಸರಿಯಾಗಿ ತರಗತಿಯಲ್ಲಿ ಹಾಜರಾದರು. ನನ್ನ ತರಗತಿಯಲ್ಲಿ ಕೊನೆ ಅವಧಿಯಲ್ಲಿ ಕೊನೆ ಗಂಟೆಯಾದ ಮೇಲೆ ಅಕಸ್ಮಾತ್‌ ಯಾರಾದರೂ ಹೋಗಲು ಎದ್ದು ನಿಂತರೆ ನಾನು ಏನೂ ಮಾತನಾಡದೆ ಸುಮ್ಮನೆ ಕುರ್ಚಿಯಲ್ಲಿ ಕುಳಿತು ಬಿಡುತಿದ್ದೆ. ಬೇಕೆಂದೆ ಎರಡು ನಿಮಿಷ ತಡ ಮಾಡಿ ಹೊರ ಹೋಗುವೆ. ಬೇಗ ಹೋಗಬೇಕೆಂಬ ಅವರ ಆತುರದಿಂದ ಎಲ್ಲರಿಗೂ ಇನ್ನಷ್ಟು ತಡವಾಗುವುದು. ಅವರಿಗೆ ನಾಚಿಕೆಯಾಗಿ ತಮ್ಮ ಆತುರಕ್ಕೆ ಕಡಿವಾಣ ಹಾಕಿಕೊಳ್ಳುವರು.
ಆಗ ಎದುರಾದ ಇನ್ನೊಂದು ಸಮಸ್ಯೆ ಎಂದರೆ ಗೃಹ ಪಾಠ ಕುರಿತದ್ದು. ಗೃಹ ಪಾಠ ಕೊಟ್ಟಾಗ ಅರ್ಧಕ್ಕಿಂತ ಹೆಚ್ಚು ಜನ ಮಾಡುತ್ತಲೆ ಇರಲಿಲ್ಲ. ಮಾಡಿದವರಲ್ಲೂ ಹಲವು ದೋಷಗಳಿರುತಿದ್ದವು. ಐವತ್ತು ಮಕ್ಕಳ ಪುಸ್ತಕ ನೋಡುವುದು, ಮಾಡದೆ ಇರದವರ ಮೇಲೆ ಕ್ರಮ ತೆಗೆದುಕೊಳ್ಳುವುದರಲ್ಲಿ ಅರ್ಧ ಸಮಯ ಆಗಿ ಹೋಗುತಿತ್ತು. ಅದರಲ್ಲೂ ಕೆಲ ವಿದ್ಯಾರ್ಥಿಗಳು ಪಾಠ ಅರ್ಥವಾಗಿಲ್ಲ, ಲೆಕ್ಕ ಮಾಡಲು ಬರಲಿಲ್ಲ ಎಂದಾಗ ಅವರನ್ನು ಶಿಕ್ಷಿಸುವುದು ಸರಿಯಲ್ಲ  ಎನಿಸುವುದು. ಮೇಲಾಗಿ ಅವರಿಗೆ ಮನೆಯಲ್ಲಿ ಹೇಳಿಕೊಡುವವರು ಯಾರೂ ಇರಲಿಲ್ಲ. ತಂದೆ ತಾಯಿಗಳಿಗೆ ಆಗದು. ಬಹುತೇಕರು ಹಳ್ಳಿಯ ಜನ. ಶಿಕ್ಷಣ ಅವರ ಪಾಲಿಗೆ ಗಗನ ಕುಸುಮ. ಪ್ರತಿಯೊಬ್ಬರರಿಗೂ ತಿದ್ದುತ್ತಾ ಹೋದರೆ ಜಾಣ ಮಕ್ಕಳಿಗೆ ಬೇಸರ. ಮಾಡಬೇಕಾದ ಪಾಠ ಪ್ರವಚನ ನಿಗದಿತ ಸಮಯದಲ್ಲಿ ಮುಗಿಸಲಾಗದು. ಹಾಗೆಂದು ಗೃಹಪಾಠ ಕೈ ಬಿಡುವ ಹಾಗಿಲ್ಲ. ಅವರಿಗೆ ಮನದಟ್ಟಾಗಲು ಪುನರಾವರ್ತನೆ ಅಗತ್ಯ. ಅದಕ್ಕಾಗಿ ಒಂದು ಉಪಾಯ ಹೊಳೆಯಿತು. ಅನೇಕ ಸಲ ಶಿಕ್ಷಕರನ್ನು ಕೇಳಲು ಮಕ್ಕಳಿಗೆ ಹಿಂಜರಿಕೆ ಮತ್ತು ಭಯ. ಅದೆ ತಮ್ಮ ಗೆಳೆಯನನ್ನು ಕೇಳಲು ಸಂಕೋಚವಿರದು. ಅದಕ್ಕೆ ಜಾಣ ವಿದ್ಯಾರ್ಥಿಗಳನ್ನು ಆಯ್ದು ಅವರ  ನಾಯಕತ್ವದಲ್ಲಿ ಐದು ಜನರ ತಂಡ ರಚಿಸಲಾಯಿತು. ತಂಡದ ಸದಸ್ಯರು ಗೃಹಪಾಠ ಮಾಡಿ ನಾಯಕನಿಗೆ ಕೊಡಬೇಕು ಅನುಮಾವಿದ್ದರೆ ಅವನ ಸಲಹೆ ಸಹಾಯ ಪಡೆಯಬಹುದು. ಅವನು ಅವರ ಎಲ್ಲರ ಗೃಹಪಾಠ ಪರಿಶೀಲನೆ ಮಾಡುವನು. ಆ ನಾಯಕರ ಗೃಹಪಾಠದ ಪುಸ್ತಕವನ್ನು ಮೊದಲೆ ತಿದ್ದಲಾಗುತಿತ್ತು. ಜತೆಗೆ ಅವರ ತಂಡದಲ್ಲಿನ ಒಂದು ಪುಸ್ತಕವನ್ನು ಅನಾಮತ್ತಾಗಿ ಆರಿಸಿ ನೋಡಲಾಗುತಿತ್ತು. ಇದರಿಂದ ಅವರೂ ನಿರ್ಲಕ್ಷ್ಯ ಮಾಡಲು ಆಗುತ್ತಿರಲಿಲ್ಲ.
ಹುಡುಗಿಯರದೆ ಪ್ರತ್ಯೇಕ ತಂಡವಿರುತಿತ್ತು. ತಮ್ಮ ತಂಡದಲ್ಲಿ ಯಾರಾದರೂ ಲೆಕ್ಕ ಮಾಡದೆ ಇದ್ದರೆ ತಿಳಿಸಬೇಕಿತ್ತು. ಅವರ ಮೇಲೆ ಕ್ರಮ ಜರುಗುತಿತ್ತು. ಮೊದಮೊದಲು ಜಾಣ ಮಕ್ಕಳು ಹೆಚ್ಚಿನ ಹೊರೆ ಎಂದು ಗೊಣಗಿದರೂ ಅದರಿಂದ ದೊರೆಯುವ ಪ್ರತಿಷ್ಠೆ ಅವರಿಗೆ ಖುಷಿ ಕೊಟ್ಟಿತು. ಜತೆಗೆ ನಾಲಕ್ಕು ಜನರ ಮೇಲ್ವಿಚಾರಣೆ ಮಾಡುವುದರಿಂದ ಅವರಿಗೂ ಪಾಠ ಮನದಟ್ಟಾಗುವುದು. ಇದರ ಪರಿಣಾಮವಾಗಿ ಬಹುತೇಕರು ಸುಧಾರಿಸಿದರು, ಮತ್ತು ಎಲ್ಲ ತಂಡದ ನಾಯಕರೂ ಮೊದಲಿಗಿಂತ ೮-೧೦ ಅಂಕಗಳನ್ನು ಹೆಚ್ಚು ಪಡೆದರು.
ಪಾಠ ಮಾಡುವಾಗ ತರಗತಿಯಲ್ಲಿ ಕೆಲವು ಶಿಕ್ಷಕರು ಇದ್ದಾಗ ಪಿನ್‌ಡ್ರಾಪ್‌ ನಿಶಬ್ದವಾದರೆ ಇನ್ನು ಹಲವು ಶಿಕ್ಷಕರ ತರಗತಿಗಳಲ್ಲಿ ಡ್ರಮ್‌ ಡ್ರಾಪ್‌ ಶಬ್ದ. ಅದೇ ತರಗತಿ ಅದೇ ಮಕ್ಕಳು. ಕಾರಣ ದೋಷ ಖಂಡಿತ ಮಕ್ಕಳದ್ದಲ್ಲ. ಶಿಕ್ಷಕರು ತರಗತಿಗೆ ಪೂರ್ಣ ತಯಾರಿಯಿಂದ ಹೋದರೆ ಯಾವುದೆ ಗಲಾಟೆಗೆ ಅವಕಾಶವಿಲ್ಲ. ಅನೇಕರು ಉಡಾಫೆಯಿಂದ ತರಗತಿಗೆ ಹೋಗುವರು. ಸಹಜವಾಗಿ ವಿಷಯಾಂತರವಾಗುವುದು. ಮಕ್ಕಳು ನಗುವರು. ಸಲಿಗೆ ಬೆಳೆಯುವುದು. ಅದರ ದುರುಪಯೋಗವೂ ಆಗುವುದು. ಬೋಧನೆ ಮಾಡುವಾಗ ಗಲಾಟೆ ಮಾಡಿದರೆ ಶಿಕ್ಷಕ ತುಸು ಹೊತ್ತು ಪಾಠ ನಿಲ್ಲಿಸಿ ದಿಟ್ಟಿಸಿ ನೋಡಿದರೆ ಸಾಕು. ತರಗತಿ ನಿಯಂತ್ರಣಕ್ಕೆ ಬರುವುದು `ನಲಿ ಮತ್ತು ಕಲಿಉತ್ತಮ ಪಾಠವಿಧಾನ. ಆದರೆ ಬರಿ ನಲಿಯುವುದೇ ಆದರೆ ಕಲಿಕೆ ಕಾಲು ಕಸವಾಗುವುದು. ಹಾಗೆಂದು ಮೋರೆ ಸಿಂಡರಿಸಿಕೊಂಡು ಹುಬ್ಬು ಗಂಟು ಹಾಕಿಕೊಂಡು ಗುರ್‌ ಎನ್ನುತ್ತಾ ಇದ್ದರೂ ವಿದ್ಯಾರ್ಥಿಗಳ ಕಲಿಕೆಗೆ ಉತ್ತೇಜನ ಸಿಗುವುದಿಲ್ಲ. ಇನ್ನು ಕೆಲವರು ಊದುವ ಶಂಖ ಊದಿದರಾಯಿತು ಮಾದೇವನ ಪೂಜೆ ಆದರೆಷ್ಟು ಬಿಟ್ಟರೆಷ್ಟು ಎಂಬ ಮನೋಭಾವದವರು. ಆಗ ಆ ಬೋಧನೆ ಬರಿ ಕಂಠಶೋಷಣೆ. ಶಿಕ್ಷಕರಿಗೆ ಎಷ್ಟು ತಿಳಿದಿದೆ ಎಂಬುದಕ್ಕಿಂತ ಹೇಗೆ, ತಿಳಿಸುವರು ಅತಿ ಮುಖ್ಯ. ಇನ್ನೊಂದು ಮುಖ್ಯ ಅಂಶವೆಂದರೆ ಮಕ್ಕಳ ಮನಸ್ಸು. ಮೇಣದ ಮುದ್ದೆ. ಅವರು ಅನುಕರಣೆಯಿಂದ ಕಲಿಯವರು. ಆದ್ದರಿಂದಲೆ ಶಿಕ್ಷಕರು ಉತ್ತಮ ಮಾದರಿ ಹಾಕಿಕೊಡಬೇಕು.
ವಿದ್ಯಾರ್ಥಿಗಳು ತಪ್ಪುಮಾಡಿದರೆ ತಿದ್ದುವುದಕ್ಕೆ ಯಾವುದೆ ಸಿದ್ಧ ವಿಧಾನವಿಲ್ಲ. ಮೊದಲು ಅವರ ತಪ್ಪಿನ ಅರಿವು ಅವರಲ್ಲಿ ಮೂಡಿಸಬೇಕಾಗುವುದು. ಅರಿತೋ ಅರಿಯದೆಯೋ ತಪ್ಪು ಮಾಡಿದರೆ ದೋಷಕ್ಕೆ ದಂಡನೆಯಾಗಬೇಕೆ ವಿನಃ ದೋಷಿಗೆ ಅಲ್ಲ. ಸಹ ಶಿಕ್ಷಣವಿರುವ ಶಾಲೆಯಲ್ಲಿ ಸಹಜವಾಗಿ ಗಂಡು ಹುಡುಗರು ತಮ್ಮ ಹಿರಿಮೆ ಮೆರೆಯಲು ನೋಡುತ್ತಾರೆ. ಯಾರೆ ಆಗಲಿ ಶಿಕ್ಷಕರು ವಿದ್ಯಾರ್ಥಿನಿಗೆ ಹೆಚ್ಚಿನ ಆದ್ಯತೆ ಕೊಟ್ಟರೆ ಹುಡುಗರ ಮನದಲ್ಲಿ ಅಸೂಯೆಯ ಕಿಡಿ ಮೂಡುವುದು. ಅದು ಬೇರೆ ರೂಪವನ್ನೆ ಪಡೆಯಬಹುದು, ಗುಸು ಗುಸು ಪಿಸಿಪಿಸಿಗೆ ಕಾರಣವಾಗುವುದು. ಯಾವಾಗಾದರೊಮ್ಮೆ ಹುಡುಗಿಯರನ್ನು ಲಘುವಾಗಿ ಟೀಕಿಸಿದರೆ ಹುಡುಗರಿಗಾಗುವ ಸಂತೋಷವನ್ನು ನೋಡಿಯೇ ತಿಳಿಯಬೇಕು. ಆದರೆ ಅದು ಸದಭಿರುಚಿಯ, ಸಾರ್ವತ್ರಿಕ ಅಭಿಪ್ರಾಯವಾಗಿರುವುದು  ಅಗತ್ಯ. ಅಂದಾಗ ಎಲ್ಲರೂ ನಗುನಗುತ್ತಾ ಸ್ವೀಕರಿಸುವರು.
ಅದರಿಂದ ಶಿಕ್ಷಕನು ದಂಡಿಸುವಾಗಲೂ ನಗು ನಗುತ್ತಾ ಇದ್ದರೆ, ವಿದ್ಯಾರ್ಥಿಯ ಆತ್ಮಗೌರವಕ್ಕೆ ಧಕ್ಕೆ ತಾರದಿದ್ದರೆ ಯಾವುದೆ ಸಮಸ್ಯೆ ಬರುವುದಿಲ್ಲ. ಮಾಡಿದ ತಪ್ಪನ್ನು ತೋರಿಸಿದಾಗ ತಲೆಬಾಗುವುದು ಖಂಡಿತ. ಅದರ ಅನುಭವ ನನಗಾಯಿತು. ಒಂದು ದಿನ ಅದೇಕೋ ನನಗೆ ಶಾಲೆಗೆ ಬರುವುದು ತುಸು ತಡವಾಯಿತು. ಎಷ್ಟೆ ಜೋರಾಗಿ ಸೈಕಲ್ಲು ತುಳಿದರೂ ಬರುವಷ್ಟರಲ್ಲಿ ಪ್ರಾರ್ಥನೆ ಮುಗಿದು ಹೋಗಿತ್ತು. ಆಫೀಸು ರೂಮಿನಲ್ಲಿ ಏರಿದ ದನಿಯಲ್ಲಿ ಚರ್ಚೆ. ಹೆಡ್‌ ಮಾಸ್ಟರ್‌ ಯಾಕೋ ಕೋಪದಿಂದ ಕೆಂಪಾಗಿದ್ದರು. ನಮ್ಮ ದೈಹಿಕ ಶಿಕ್ಷಕರು ಕೈಕೈ ಹಿಚುಕಿಕೊಳ್ಳುತ್ತಾ ನೀಂತಿದ್ದರು. ನಮ್ಮ ಹೆಡ್‌ಮಾಸ್ಟರ್‌ ಹಳೆ ಮೈಸೂರು ಕಡೆಯವರು. ಬಹಳ ಮೆದು. ಆದರೆ ಇಂದು ವೀರಭದ್ರಾವತಾರ ತಾಳಿರುವರು.
ಕಾರಣ ತಿಳಿಯಿತು. ಪ್ರಾರ್ಥನೆ ಸಮಯದಲ್ಲಿ ಸಮವಸ್ತ್ರ ಹಾಕಿಕೊಂಡು ಬಾರದವರನ್ನು ಬೇರೆ ನಿಲ್ಲಿಸಿ ನಂತರ ಲಘುವಾದ ಶಿಕ್ಷೆಕೊಡುವುದು ವಾಡಿಕೆ. ಅಂದು ಪ್ರಾರ್ಥನೆ ನಡೆಸಿಕೊಡಬೇಕಾದ ಶಾಲಾ ವಿದ್ಯಾರ್ಥಿ ನಾಯಕನೆ ಸಮವಸ್ತ್ರ ಧರಿಸಿರಲಿಲ್ಲ. ಅದನ್ನು ಗಮನಿಸಿದ ಹೆಡ್‌ ಮಾಸ್ಟರು ಅವನನ್ನು ಎಲ್ಲರ ಹಿಂದೆ ಹೋಗಿ ನಿಲ್ಲುವಂತೆ ಗದರಿದರು.
ಪ್ರಾರ್ಥನೆಯಾದ ಮೇಲೆ ಎಲ್ಲರ ಎದುರಲ್ಲೆ `ಲೀಡರನೆ ಹೀಗಾದರೆ ಉಳಿದವರ ಗತಿ ಏನು. ನಿನಗೆ ಚೆನ್ನಾಗಿ ಬುದ್ಧಿ ಕಲಿಸುವೆಎಂದು ಜವಾನನಿಗೆ ಬೆತ್ತ ತರಲು ತಿಳಿಸಿದರು. ಅವನು ತಪ್ಪಾಯಿತು ಎನ್ನುತಿದ್ದರೂ ನೂರಾರು ಮಕ್ಕಳ ಎದುರೆ ಎರಡು ಏಟು ಬಾರಿಸಿಯೆ ಬಿಟ್ಟರು.
ಪ್ರತಿ ಸಲ ದೈಹಿಕ ಶಿಕ್ಷಕರು ಪ್ರಾರ್ಥನೆ ಮುಗಿದ ಮೇಲೆ ಒಂದೋ ಎರಡೋ ಏಟುಕೊಟ್ಟು ತರಗತಿಗೆ ಕಳುಹಿಸುವರು. ಸಾಧಾರಣವಾಗಿ ಮಕ್ಕಳು ತಪ್ಪಾಯಿತು, ಬಟ್ಟೆ ಒಗೆದಿರಲಿಲ್ಲ, ಹೀಗೆ ಏನೋ ಕಾರಣ ಹೇಳುವುದು ವಾಡಿಕೆ. ಇರುವುದನ್ನೆ ಹಾಕಿಕೊಂಡು ಬಾ ಎಂದು ಮನೆಗೆ ಕಳುಹಿಸುವುದೂ ಇತ್ತು. ಆದರೆ ಎಸ್‌ಪಿಎಲ್‌ ತುಸು ಸೊಕ್ಕಿನಿಂದಲೆ ನಿಂತಿರುವ. ಏಕೆ ಸಮವಸ್ತ್ರ ಹಾಕಿಕೊಂಡಿಲ್ಲ ಎಂದರೆ ಉತ್ತರಿಸುವ ಗೋಜಿಗೆ ಹೋಗಿಲ್ಲ. ಎಲ್ಲರೆದರು ಅದರಲ್ಲೂ ಹುಡುಗಿಯರ ಎದುರು ಅವಮಾನವಾಯಿತು ಎಂದು ಅವನ ಅಸಮಾಧಾನ. ಅವನು ಉತ್ತರ ಕೊಡದೆ ಇರುವುದು ಹೆಡ್‌ಮಾಸ್ಟರಿಗೆ ಕೋಪ ತರಿಸಿದೆ. ಇವನ ಸೊಕ್ಕು ಮುರಿಯಬೇಕು. ತರಗತಿಗೆ ಸೇರಿಸಬೇಡಿ ಹೊರಹಾಕಿ ಎಂದು ಗುಡುಗಿದ್ದಾರೆ. 
ನೀನೇನು ಹೊರ ಹಾಕುವುದು ನಾನೆ ಹೋಗುವೆ, ಎಂದು ಮರು ನುಡಿದಿರುವನು. ಇದರಿಂದ ಅವರಿಗೆ ರೇಗಿದೆ.
ನೋಡಿ ಮಾಸ್ಟ್ರೆ ಅವನಿಗೆ ಪರಿಜ್ಞಾನವೆ ಇಲ್ಲ ಏಕವಚನದಲ್ಲಿ ಮಾತನಾಡುತ್ತಾನೆ, ಶಾಲೆಯಿಂದ ಸಸ್ಪೆಂಡು ಮಾಡುವೆ ಎಂದು ಗದರಿರುವರು. ಅವನೂ ರೇಗಿ ನನ್ನನ್ನು ಸಸ್ಪೆಂಡು ಮಾಡುವೆಯಾ, ಮಾಡು, ನಿನ್ನ ಶಾಲೆ ಯಾರಿಗೆ ಬೇಕು, ಹೊರಗೆ ಬಾ ನೋಡಿಕೊಳ್ಳುವೆ ಎಂದು ಗುಡುಗಿ ಕಾಂಪೌಂಡಿನ ಹೊರಗೆ ಗೇಟಿನ ಹತ್ತಿರ ವಟಗುಡುತ್ತಾ ನಿಂತಿದ್ದಾನೆ.
ಎಲ್ಲರೂ ಐದು ಹತ್ತು ನಿಮಿಷಗಳಲ್ಲಿ ನಡೆದ ಘಟನೆಗಳಿಂದ ಕಂಗಾಲಾಗಿದ್ದಾರೆ. ಹೆಡ್‌ ಮಾಸ್ಟರ್‌ ಗುಮಾಸ್ತರಿಗೆ ಅವನನ್ನು ಶಾಲೆಯಿಂದ ಅಮಾನತ್ತು ಮಾಡಿದ ನೋಟೀಸು ಬರೆಯಲು ಆದೇಶಿಸಿರುವರು. ಅದೆ ಸಮಯದಲ್ಲಿ ನಾನು ಒಳ ಹೋದೆ. ವಿಷಯ ತಿಳಿಯಿತು. ಅವನು ಶಾಲಾ ವಿದ್ಯಾರ್ಥಿ ನಾಯಕ. ಅಂತಹ ಜಾಣ ವಿದ್ಯಾರ್ಥಿಯಲ್ಲ. ಆದರೆ ಉತ್ತಮ ಕ್ರೀಡಾಪಟು ತುಸು ದುಡುಕ ಸ್ವಭಾವ. ಆದರೆ ಕೆಡುಕನಲ್ಲ. ನಮ್ಮ ದೈಹಿಕ ಶಿಕ್ಷಕರಿಗೆ ಪಟ್ಟದ ಶಿಷ್ಯ.
ನಾನು ಹೇಳಿದೆ, `ಸಾರ್‌, ಈ ಘಟನೆಯನ್ನು ಇನ್ನೂ ದೊಡ್ಡದು ಮಾಡುವುದು ಬೇಡ. ಅವನನ್ನು ಅಮಾನತ್ತಿನಲ್ಲಿಟ್ಟರೆ ವೈಮನಸ್ಸು ಇನ್ನೂ ಹೆಚ್ಚುವುದು. ಇದೊಂದು ಸಲ ಕ್ಷಮಿಸಿ ಬಿಡಿಎಂದು ವಿನಂತಿ ಮಾಡಿಕೊಂಡೆ.
`ಅವನು ತಪ್ಪಾಯಿತು ಎಂದು ಹೇಳಿದರೆ ತಾನೆ ಕ್ಷಮಿಸುವುದು. ಅವನ ಗುಂಡಾಗಿರಿಗೆ ಹೆದರಬೇಕೆ? ಆದದ್ದಾಗಲಿ ಇಂತಹ ಕೆಟ್ಟ ಹುಳುಗಳನ್ನು ಹೊರಗೆ ಹಾಕಬೇಕು.
`ಏನೋ ಅಚಾತುರ್ಯವಾಗಿದೆ. ಅವನು ತಪ್ಪಾಯಿತು ಎಂದು ಹೇಳಿದರೆ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ನೀವು ಭರವಸೆ ನೀಡಿದರೆ ನಾನು ಅವನ ಜೊತೆ ಮಾತನಾಡುವೆ. ಸಣ್ಣ ವಿಷಯಕ್ಕೆ ಬೀದಿ ಜಗಳವಾಗುವುದು ಬೇಡ.'
`ಡ್ರಿಲ್‌ ಮಾಸ್ಟರ್‌ ಇದ್ದರು, ಅವರನ್ನೆ ಕೇಳಿ, ಅವನ ಮಾತು ಮತ್ತು ವರ್ತನೆ ಹೇಗಿತ್ತು ಅಂತ. ಅವನು ಕೈ ನೋಡಿಕೊಳ್ಳೂವೆ, ಹೊರಗೆ ಬನ್ನಿ ಎಂದು ಧಮಕಿ ಹಾಕುತ್ತಿರುವನು, ರಸ್ತೆಯಲ್ಲಿ ನಿಂತು ಕೂಗಾಡುತ್ತಿರುವನು' ಎಂದರು.
`ಸಾರ್‌, ಖಂಡಿತವಾಗಿಯೂ ಅವನು ನಿಮ್ಮ ಕಾಲು ಹಿಡಿದು ಕ್ಷಮೆ ಕೇಳುವಂತೆ ಮಾಡುವೆ. ನೀವು ದಯಮಾಡಿ ಕ್ಷಮಿಸಿರಿ' ಎಂದೆ.
`ನಿಮಗೆಲ್ಲೋ ಭ್ರಮೆ, ಆದರೂ ಒಂದು ಅವಕಾಶ ಕೊಡುವೆ ಪ್ರಯತ್ನಿಸಿ' ಎಂದರು.
ಹೊರಗೆ ಬಂದು `ಏನಪ್ಪಾ ಇದು ನಿನ್ನ ಪ್ರತಾಪ?' ಎಂದು ಪ್ರಶ್ನಿಸಿದೆ.
`ನೋಡಿ ಸಾರ್‌, ನನಗೆ ಹೊರ ಹಾಕುವರಂತೆ, ಯೂನಿಫಾರಂ ಹಾಕಿಲ್ಲ ಎಂದು ಬಾಯಿಗೆ ಬಂದಂತೆ ಬೈದರು. ಅದೂ ಹುಡುಗಿಯರ ಎದುರಲ್ಲಿ. ಇಂಥ ಶಾಲೆ ಯಾರಿಗೆ ಬೇಕು' ಎಂದ.
`ದೊಡ್ಡವರ ಒಂದು ಮಾತು ಅಂದರೆ ಸಹಿಸಬೇಕು.'
`ಸಾರ್‌, ಅದೆ ಮಾತನ್ನು ನಗುತ್ತಾ ಹೇಳಿದ್ದರೆ, ಸುಮ್ಮನಿರುತಿದ್ದೆ. ನೀವು ಎಷ್ಟುಸಲ ಹೊಡೆದಿಲ್ಲ. ನಾನು ಎದುರು ಮಾತನಾಡಿರುವೆನಾ? ಕೊನೆಗೆ ನಮ್ಮ ಡ್ರಿಲ್‌ ಮಾಸ್ಟರ್ ಆದರೂ ನನ್ನ ಪರವಾಗಿ ಒಂದು ಮಾತನಾಡಲಿಲ್ಲ.'
`ಅದೆಲ್ಲ ಸರಿ. ಈಗ ನಾನು ಖಾತ್ರಿ ಕೊಟ್ಟಿರುವೆ. ನೀನು ಕೆಟ್ಟ ಹುಡುಗನಲ್ಲ. ದುಡುಕಿ ಮಾತನಾಡಿರುವೆ, ಇನ್ನೊಮ್ಮೆ ಹೀಗೆ ಮಾಡುವುದಿಲ್ಲ' ಎಂದು.
`ಹೌದು ಸಾರ್‌ ಕೋಪದಲ್ಲಿ ಹಾಗೆ, ಅಂದೆ.'
 
`ಈಗ ಬಂದು ತಪ್ಪಾಯಿತು ಎಂದು ಹೇಳು ಎಲ್ಲ ಸರಿಯಾಗುವುದು' ಎಂದೆ.
ಅವನು ಹಿಂದೆ ಮುಂದೆ ನೋಡಿದ.
`ಈಗ ನನ್ನ ಮಾತು ಉಳಿಸುವೆಯೋ ಇಲ್ಲವೋ ಅಷ್ಟು ಹೇಳು. ನಿನ್ನ ಪರವಾಗಿ ಮಾತನಾಡಿರುವೆ. ಬಂದು ಗುರುಗಳ ಕಾಲಿಗೆ ಬಿದ್ದು  ಕ್ಷಮಿಸಲು ಕೇಳು' ಎಂದೆ. 
`ಆಯ್ತು ನಿಮ್ಮ ಮಾತಿಗೆ ಕಟ್ಟುಬಿದ್ದು ಕ್ಷಮೆ ಕೇಳುವೆ' ಎಂದ.
ಶಾಲೆಯೊಳಗೆ ಬಂದು ಸೀದಾ ಹೆಡ್‌ ಮಾಸ್ಟರ್‌ ಕಾಲಿಗೆ ಬಿದ್ದ. ಅವರು ದೊಡ್ಡ ಮನಸ್ಸು ಮಾಡಿ ಸುಮ್ಮನಾದರು, ಕೈ ನೋಡಿಕೊಳ್ಳುವೆ ಎಂದವನು ಕಾಲು ಹಿಡಿದ.
ಒಂದು ಒಳ್ಳೆಯ ಮಾತು ಆಗಬಹುದಾದ ಅನಾಹುತ ತಪ್ಪಿಸಿತು.